15 ಮಾರ್ಚ್ 2020

ನಮ್ಮ ‌ರೈತ

*ನಮ್ಮ ರೈತ*

 ಕಾಲಕೆ ಮಳೆಯು ಬಂದರೆ
ರೈತರ ಬಾಳಲಿ ಪನ್ನೀರು
ಸಕಾಲವಿಲ್ಲದೆ ಅಕಾಲ ಸುರಿದರೆ
ತಪ್ಪದು ಎಂದಿಗೂ ಕಣ್ಣೀರು.

ಬೆನ್ನೆಲುಬಾದ ರೈತನ ಬಾಳಿಗೆ
ಕೋಟಲೆಗಳು ನೂರಾರು
ಬೇಸರಗೊಂಡು ಕಾಯಕ ನಿಲ್ಲಿಸೆ
ಜಗಕೆ ಅನ್ನವ ನೀಡುವರಾರು?

ದಲ್ಲಾಳಿಗಳ ದಳ್ಳುರಿಯಲ್ಲಿ
ಬೆಂದಿಹ ನಮ್ಮಯ ಅನ್ನದಾತ
ಬೆಳೆದ ಬೆಳೆಗೆ ಬೆಲೆಯಿಲ್ಲ
ಬಾಳುವುದೇಗೆ ನಮ್ಮ ರೈತ.

ಸಾಲದಿ ಹುಟ್ಟಿ ಸಾಲದಿ ಬೆಳೆದ
ಒಕ್ಕಲ ಮಕ್ಕಳ ಕಥೆ ನೋಡಿ
ಗೌರವದಿಂದ ಬಾಳಲು ಅವನಿಗೆ
ಅವಕಾಶಗಳನ್ನು ನೀಡಿ.

*ಸಿ.ಜಿ ವೆಂಕಟೇಶ್ವರ*




14 ಮಾರ್ಚ್ 2020

ಬಾ ಗೆಳೆಯ

*ಬಾ ಗೆಳೆಯ*

ರಜೆಯು ಬಂದಿದೆ
ಮಜವನು ಮಾಡುವ
ಈಗಲೆ ಬಾರೋ ಓ ಗೆಳೆಯ.

ಪರೀಕ್ಷೆ ಇಲ್ಲದೆ
ಪಾಸು ಆದೆವು
ಸಂಭ್ರಮ ಪಡುವ ಬಾ ಗೆಳೆಯ

ಪೆನ್ನು ಪುಸ್ತಕ
ಎತ್ತಿ ಇಟ್ಟು
ಆಟವ ಆಡೋಣ ಬಾ ಗೆಳೆಯ

ಚಿನ್ನಿ ದಾಂಡು
ಚೆಂಡು ದಾಂಡು
ಹಿಡಿದು ಆಡೋಣ ಬಾ ಗೆಳೆಯ.

ಹಗ್ಗದ ರೈಲು
ಕಟ್ಟಿಗೆ ಬಸ್ಸು
ಏರಿ ಸಾಗೋಣ ಬಾ ಗೆಳೆಯ.

ಆಟದ ನೆನಪಲಿ
ಶಾಲೆಗೆ ಪುನಃ
ನಲಿಯುತಾ ಹೋಗೋಣ ಬಾ ಗೆಳೆಯ.

*ಸಿ ಜಿ ವೆಂಕಟೇಶ್ವರ*
*ತುಮಕೂರು*



ಎಲ್ಲಿರುವೆ ಮಳೆರಾಯ

*ಎಲ್ಲಿರುವೆ ಮಳೆರಾಯ*
ಕವನ

ಎಲ್ಲಿರುವೆ ಮಳೆರಾಯ
ಬಂದು ಬಿಡು ಮನೆಕಾಯ

ಜನ ಜಾನುವಾರುಗಳು
ಬಳಲಿ ಬೆಂಡಾಗಿಹರು
ತೊಳಲಾಟದಲಿ ನೀನು
ಬರಲೆಂದು‌ ಕಾದಿಹರು.

ಭೂತಾಯಿ ಬಿರಿದಿಹಳು
ನಿನ್ನಾಗಮನಕೆ ಕಾದಿಹಳು
ಎಂದು ಬರುವೆ ಎಂದು
ಇಂದೇ ನಮಗೆ ಹೇಳು.

ನೀನು‌ ಇಲ್ಲದೆ ನಮಗೆ
ಬಾಳುವೆಯೆ ಇಲ್ಲ
ಬರದೆ ಸತಾಯಿಸುವುದು
ನಿನಗೆ ತರವಲ್ಲ.

ನೀನು ಬಾರದಿರೆ ಭುವಿಗೆ
ಬದುಕು ಭಾರವಾಗುವುದು.
ನೀ ಬಂದರೆ ಧರೆಗೆ
ಬರವೆ ಬಾರದು.

*ಸಿ ಜಿ‌ ವೆಂಕಟೇಶ್ವರ*
ತುಮಕೂರು