13 ಸೆಪ್ಟೆಂಬರ್ 2018

ವಿನಾಯಕ ನಮ್ಮ ಕಾಪಾಡು( ಕವನ) ನನ್ನ ಬ್ಲಾಗ್ ನ 400 ನೇ ಪೋಸ್ಟ್ ಓದಿ ಪ್ರೋತ್ಸಾಹ ನೀಡುತ್ತಿರುವ ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು


                           

                *ವಿನಾಯಕ ನಮ್ಮ ಕಾಪಾಡು*

*ವಿ* ಘ್ನ ವಿನಾಯಕ ಕಾಪಾಡು ನಮ್ಮನು
*ವಿ* ನಯದಿ ಬಾಗುವೆವು  ನಮ್ಮನರಸು
*ವಿ* ಧ ವಿಧ ಪೂಜೆ ಮಾಡುವೆವು
*ವಿ* ಜಯವ ನೀಡುತ  ರಕ್ಷಿಸು


*ನಾ* ನಾ ಹೆಸರಿನ ದೇವನು ನೀನು
*ನಾ* ಮವ ಭಜಿಸುವೆವು  ಕಾಪಾಡು
*ನಾ* ವಿಕ ನಾಗು ನಮ್ಮ ಬಾಳಿಗೆ
*ನಾ* ಡಿಗೆ ಒಳಿತು ನೀ ಮಾಡು


*ಯ* ತಿಗಳ ಪ್ರೀತಿಯ ಸ್ವಾಮಿಯೆ
*ಯ* ಶಸ್ಸನ್ನು ನೀಡಿ ಹಾರೈಸು
*ಯ* ಜಮಾನ ನಮಗೆ ನೀನಾಗು
*ಯ* ತ್ನ ಮಾಡುವೆವು ಆಶೀರ್ವದಿಸು


*ಕ* ವಿಜನ ವಂದಿತ  ಗಜವದನ
*ಕ* ಷ್ಟಗಳನ್ನು ನೀ ದೂಡು
*ಕ* ತ್ತಲು ನೀಗಿ ಬೆಳಕನು ನೀಡಿ
*ಕ* ರಿಮುಖ ನಮ್ಮನು  ಕಾಪಾಡು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

*ಸರ್ವರಿಗೂ  ಗಣೇಶ ಚತುರ್ಥಿಯ ಶುಭಾಶಯಗಳು🙏🙏🙏*

12 ಸೆಪ್ಟೆಂಬರ್ 2018

ಗಜ಼ಲ್45 (ಯಾರಿಗೂ ಬೇಕಿಲ್ಲ)

             *ಗಜ಼ಲ್45*


ಪರಹಿತ ಚಿಂತನೆ ಮಾಡುವುದು  ಯಾರಿಗೂ ಬೇಕಿಲ್ಲ
ಆತ್ಮಸಾಕ್ಷಾತ್ಕಾರವೆಂಬ ವಿಸ್ಮಯ ಕಾಣುವುದು ಯಾರಿಗೂ ಬೇಕಿಲ್ಲ

ಕತ್ತಲಲಿ ನಮ್ಮ ನೆರಳು‌ ಕೂಡ ಕಾಣದು ಗಾಡಂಧಕಾರದಲಿರುವರು
ಬೆಳಕ ಕಾಣುವ ದಾರಿ ಹುಡುಕುವುದು   ಯಾರಿಗೂ ಬೇಕಿಲ್ಲ

ಅರಿಷಡ್ವರ್ಗದ ಬಂಧನದಲಿಹೆವು  ನಾವು
ಜ್ಞಾನ. ಕರ್ಮ ಭಕ್ತಿ ಮಾರ್ಗದಿ ನಡೆಯುವುದು  ಯಾರಿಗೂ ಬೇಕಿಲ್ಲ

ಸಾಲ ಮಾಡಿಯಾದರೂ ತುಪ್ಪ ತಿನ್ನಲು ಸಿದ್ದ
ಹಿಂದೆ ಮಾಡಿದ ಕರ್ಮಗಳ ಲೆಕ್ಕಹಾಕುವುದು  ಯಾರಿಗೂ ಬೇಕಿಲ್ಲ

ಪರರು ಅಧಮರು ಅನೀತಿವಂತರು ಕೆಟ್ಟವರು
ತನ್ನ ತಟ್ಟೆಯಲಿ ಸತ್ತು‌ ಬಿದ್ದಿಹ ಹೆಗ್ಗಣ ಎತ್ತಿಹಾಕುವುದು ಯಾರಿಗೂ ಬೇಕಿಲ್ಲ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

10 ಸೆಪ್ಟೆಂಬರ್ 2018

ಬಂದ್ ಮಾಡಿ (ಕವನ)



        *ಬಂದ್ ಮಾಡಿ*

ಮಾತೆತ್ತಿದರೆ ಬಂದ್ ಎಂದು
ಬೊಬ್ಬೆ ಹೊಡೆವ ಬಂದಾಸುರರೆ
ಬಂದ್ ನಿಂದ ಬನ್ನಪಡುವ
ನಮ್ಮ ಬಂಧುಗಳ ಪಾಡು
ನೋಡಿರುವಿರಾ ?

ದಿನಗೂಲಿ ಮಾಡಿ ತುತ್ತಿನ  ಚೀಲ
ತುಂಬಿಸಿಕೊಳ್ಳುವ ಸಾವಿರಾರು
ಬಾಂಧವರಿಗೆ ಅನ್ನ ನೀಡುವವರಾರು?

ಭವ್ಯ ಭಾರತದ ಭಾವಿ
ಪ್ರಜೆಗಳು ಕಲಿಯಲು ನಿಮಿಷವೂ
ಅಮೂಲ್ಯವಾದ ಸಂಪತ್ತು
ವಾರಕ್ಕೊಮ್ಮೆ ತಿಂಗಳಿಗೊಮ್ಮೆ
ಶಾಲಾಕಾಲೇಜು ಮುಚ್ಚಿದರೆ
ಮಾನವ ಸಂಪನ್ಮೂಲಕ್ಕಾದ
ನಷ್ಟ ತುಂಬಿ ಕೊಡುವಿರಾ ?

ಸಣ್ಣಪುಟ್ಟ ವ್ಯಾಪಾರ ಮಾಡಿ
ಹೊಟ್ಟೆ ಹೊರೆವ ಅಂದಂದಿನ
ಸಂಪಾದನೆಯಿಂದ ಜೀವನ
ಇಲ್ಲಿದಿರೆ ತಣ್ಣೀರು ಬಟ್ಟೆ ಗತಿ
ಇವರಿಗೆ ಭದ್ರತೆ ನೀಡುವವರಾರು ?

ದಿಕ್ಕಾರವಿರಲಿ ನಿಮ್ಮ ಬಂದ್ ಗಳಿಗೆ

ಬಂದ್ ಮಾಡುಬೇಕಿರುವುದು
ನಗರ ರಾಜ್ಯ ದೇಶಗಳನಲ್ಲ
ಸಾವಿನ ಮನೆಯಲಿ ಗಳ ಇರಿವ
ಗೋಸುಂಬೆ ಮನಗಳನು ಬಂದ್ ಮಾಡಿ
ಸ್ವಾರ್ಥಕಾಗಿ ಅಮಾಯಕರ ಎತ್ತಿ ಕಟ್ಟಿ
ತಮ್ಮ ಬೇಳೆ ಬೇಯಿಸಿಕೊಳ್ಳವ
ರಾಜಕಾರಣಿಗಳನ್ನು ಬಂದ್ ಮಾಡಿ
ಜಾತಿ‌ಧರ್ಮದ ಹೆಸರಲಿ ವಿಷಬೀಜ
ಬಿತ್ತುವ ದುಷ್ಟ ಯೋಚನೆಗಳ ಬಂದ್ ಮಾಡಿ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*




07 ಸೆಪ್ಟೆಂಬರ್ 2018

ಹುಷಾರು (ಹನಿಗವನ)

                  *ಹುಷಾರು*


ಇಂದು
ಹೆಚ್ಚು ಕೆಲಸ ಮಾಡಬೇಡಿ
ಭಾರ ಎತ್ತ ಬೇಡಿ
ಮನಸಿಗೆ ಬೇಜಾರ ಮಾಡಿಕೋಬೇಡಿ
ಬೇಕಾದ್ದನ್ನು ತಿನ್ನಿ
ನಿಮ್ಮ ಬಯಕೆಗಳ
ಈಡೇರಿಸಿಕೊಳ್ಳಿ
ಸಾದ್ಯವಾದರೆ ವೈದ್ಯ ರಿಂದ
ಪರೀಕ್ಷಿಸಿಕೊಳ್ಳಿ
ಹುಷಾರು
ಏಕೆಂದರೆ ಇಂದು
ಒಂಭತ್ತನೆಯ ತಿಂಗಳ
ಒಂಭತ್ತನೆಯ ದಿನ



*ತೊಂಬತ್ತು*

ಇಂದು ದಿನಾಂಕ ಒಂಭತ್ತು
ತಿಂಗಳೂ ಒಂಭತ್ತು
ಭಾನುವಾರದ ರಜಾನೂ ಇತ್ತು
ಸಂಬಳಾನು ಇವತ್ತೇ ಆಗಿತ್ತು
ನೀನಿರಬೇಕಿತ್ತು
ಹಾಕಬಹುದಿತ್ತು
ಮೂವತ್ತು
ಅರವತ್ತು
ತೊಂಬತ್ತು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

ನನಗೇಕೆ ಈ ಶಿಕ್ಷೆ (ಕವನ)

          *ನನಗೇಕೆ ಈ ಶಿಕ್ಷೆ?*

ಒಂಟಿಯಾಗಿರುವವದು ಬೋರೆಂದು
ತುಂಟ ಚಟಪಡಿಸುತ್ತಿದ್ದನು
ಜಂಟಿಯಾಗಲು ಹಾತೊರೆಯುತ್ತಿದ್ದನು

ತುಂಟನೊಮ್ಮೆ ತುಂಟಿಯ ಕಂಡನು
ತುಂಟ ನಗೆಯ ಬೀರಿ ನೋಡಿದ
ತುಂಟಿ ಹಿಂದ ಓಡಾಡಿದ
ತಂಟೆ ತರಲೆ ಬಿಟ್ಟು ಸಭ್ಯನಾದ
ತುಂಟಿಯ ಮನ ಕರಗಿ
ಒಲ್ಲದ ಮನಸ್ಸಿನಿಂದ ಒಲವು
ತೋರಿದಳು
ಮದುವೆಯಾಗಲು ನಿರ್ಧಾರ ಮಾಡಿದರು.

ಅಂದು ಸುಪ್ರೀಂಕೋರ್ಟ್ ತೀರ್ಪನ್ನು
ತುಂಟಿ ಓದಿ ಜಿಗಿದಾಡಿ ಸಂತಸಗೊಂಡು
ತುಂಟನಿಗೆ ಕರೆಮಾಡಿ ಈಗಂದಳು
ನನಗೆ(gay) ಅವಳು ಬೇಕು
ಅವಳಿಗೆ(gay) ನಾನು ಬೇಕು
ನಮ್ಮಿಬ್ಬರಿಗೇ ಮದುವೆ ಸೂಕ್ತ
ಎಂದು ಪೋನ್ ಕುಕ್ಕಿದಳು
ತುಂಟ ಅರ್ಥವಾಗದೇ ನಾನು ಮಾಡಿದ
ತಪ್ಪೇನು? ನನಗೇ(gay)ಕೆ ಈ ಶಿಕ್ಷೆ? ಎಂದು
ಪರಿತಪಿಸುತ್ತಿದ್ದಾನೆ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*