27 ಏಪ್ರಿಲ್ 2022

ಆಧುನಿಕ ಸೊಸೆ.


 



ಆಧುನಿಕ ಸೊಸೆ.


ಹೊಸ ಸಂಸಾರ ಹಾಲು ಉಕ್ಕಿದಂತೆ ಉಕ್ಕಿ ಹರಿಯಬೇಕು ಸೊಸೆಗೆ ಅತ್ತೆ ಸಲಹೆ ನೀಡಿದರು.  ದಿನಕ್ಕೆರಡು ಲೀಟರ್ ಹಾಲು ಉಕ್ಕಿಸುತ್ತಾ  ಉಕ್ಕಿ ಹರಿದ ಮೇಲೆ ಉಳಿದ ಹಾಲಿನಲ್ಲಿ ಟೀ ಮಾಡಿಕೊಂಡು ಕುಡಿದು ಎರಡು ತಿಂಗಳಿಗೇ ಸ್ಟವ್ ಕಮರಿ  ವಾಸನೆ ಹೊಡೆದದ್ದಕ್ಕೆ ಹೊಸ ಸ್ಟವ್ ಖರೀದಿಸಿದ್ದಾಳೆ.ಏಕೆಂದರೆ ಇವಳು ಆಧುನಿಕ ಸೊಸೆ.


ಹೊಸ  ಕೆಲಸ ಕಲಿತುಕೋ ಎಂಬ ಅತ್ತೆಯ ಮಾತಿಗೆ ಬೆಲೆ ಕೊಟ್ಟು ನಿತ್ಯ 5 ಗಂಟೆಗಳು ಧಾರಾವಾಹಿ ನೋಡುತ್ತಾ ಅದರಲ್ಲಿ ಬರುವ ಸೊಸೆಯ ತರಹ ಕೆಲಸ ಮಾಡಲು ಕಲಿಯುತ್ತಿದ್ದಾಳೆ.ಇವಳೇ ಹೊಸ ಸೊಸೆ.


ಅತ್ತೆ ಅವರ  ಮಗನ ಆರೋಗ್ಯದ ಬಗ್ಗೆ ಎಚ್ಚರ ವಹಿಸಲು ಸೊಸೆಗೆ ಹೇಳಿದರು  .ಆರೋಗ್ಯದ ದೃಷ್ಟಿಯಿಂದ ನಿತ್ಯ ಒಂದು ಸಲ ಮಾತ್ರ ಗಂಡನಿಗೆ ಊಟ  ನೀಡುತ್ತಿದ್ದಾಳೆ.ಇವಳೇ ಅಧುನಿಕ ಸೊಸೆ.


ಗಂಡನಿಗೆ ಕಷ್ಟ ಕೊಡಬಾರದು ಎಂಬ ಸಮಾಜದ ಮಾತು ನೆನಪಾಗಿ ಬೆಳಗ್ಗೆ ಮಾತ್ರ ಅಡುಗೆ ಗಂಡನಿಂದ  ಮಾಡಿಸುತ್ತಿದ್ದಾಳೆ ಕಾರಣ ಇವಳು ಆಧುನಿಕ ಸೊಸೆ.


ಉಳಿತಾಯ ಮಾಡು ಎಂಬ ಮಾವನವರ  ಮಾತಿನಿಂದ ವಾರಕ್ಕೆ ಒಂದು ಹೊಸ ಡ್ರೆಸ್ ಮಾತ್ರ ಕೊಳ್ಳುತ್ತಿದ್ದಾಳೆ.  ಎರಡು ಸಿನಿಮಾಗಳನ್ನು ಮಾತ್ರ ನೋಡುತ್ತಿದ್ದಾಳೆ. ಅದಕ್ಕೆ ಅವಳಿಗೆ ಹೇಳುವುದು ಅಧುನಿಕ ಸೊಸೆ.


ಪತಿಯೇ ಪ್ರತ್ಯಕ್ಷ ದೇವರು ಎಂದು ಅವಳ ಅಮ್ಮ ಹೇಳಿದ್ದು ನೆನಪಾಗಿ,  ವೈಕುಂಠ ಏಕಾದಶಿಯಂದು ಪತಿಯ ಪೂಜೆ ಮಾಡಿ ಮುಖಕ್ಕೆ ಮಂಗಳಾರತಿ ಎತ್ತಿ,ಅವನ ಕಾಲುಗಳ ಮೇಲೆ ತೆಂಗಿನಕಾಯಿ ಹೊಡೆದಳು  ಪಾಪ ಕಾಲಿನ ಬೆರಳು ಜಜ್ಜಿಹೋಗಿ ರಕ್ತ ಬಂದು,ಕಟ್ಟನ್ನೂ ಕಟ್ಟಿದ್ದಾಳೆ  ಶೀಘ್ರದಲ್ಲೇ ಗುಣಮುಖವಾದರೆ 

ತಿರುಪತಿಗೆ ಬರುವೆ ಎಂದು ಹರಕೆ 

ಹೊತ್ತಿದ್ದಾಳೆ.ಇವಳೇ ಆಧುನಿಕ ಸೊಸೆ.


(ಇದು ಎಲ್ಲಾ ಆಧುನಿಕ ಸೊಸೆಯಂದಿರಿಗೆ ಅನ್ವಯವಾಗುವುದಿಲ್ಲ ಹಾಗೇನಾದರೂ ಆದರೆ ಅದು ಕಾಕಾತಾಳೀಯ ಅಷ್ಟೇ)


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

25 ಏಪ್ರಿಲ್ 2022

ಏಕಗ್ರಾಹಿ. ಹನಿಗವನ.


 


ಏಕಗ್ರಾಹಿ.


ನೊಗ ಹೊತ್ತ ಬಸವನಿಗಿಂತ

ನಗಹೊತ್ತ ಬಸಣ್ಣಿ ಕಂಡರೆ 

ಅವಳು  ನೋಡುತ್ತಲೇ

ನಿಂತು ಬಿಡುವಳು 

ಮುಚ್ಚದಂತೆ ತೆರೆದ ಬಾಯಿ |

ಆಶ್ಚರ್ಯವೇನಿಲ್ಲ ಬಿಡಿ

ಪಾಪ ಅವಳು ನಗ ,ನಾಣ್ಯ

ಕಂಡರೆ ಆಗಿಬಿಡುವಳು ಏಕಗ್ರಾಹಿ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


23 ಏಪ್ರಿಲ್ 2022

ನೀವು ನೀವಾಗಿ .ಶಿಶುಗೀತೆ


 *ನೀವು ನೀವಾಗಿ*

 ಶಿಶುಗೀತೆ


ಒಂದು  ಕಾಡಿನಲಿ ಕೋಳಿಯು

ಬೆಟ್ಟವು ಉಭಯ ಕುಶಲ

ಮಾತಾಡಿದವು .


ಕೋಳಿಯು ಬೆಟ್ಟಕೆ 

ಬೇಸರದಿ  ಹೇಳಿತು 

ನೀನು  ಎತ್ತರ ನಾನೇಕೆ

ಕುಳ್ಳ ಎಂದು ಕರುಬಿತು.


ಬೇಡ ನೀನು ನೀನಾಗಿರು

ಎಂಬ  ಬೆಟ್ಟದ ಸಲಹೆ 

ಕೋಳಿಗೆ ರುಚಿಸಲಿಲ್ಲ

ಕಾಳು ಕಡಿ‌ತಿಂದು 

ಬೆಟ್ಟದೆತ್ತಕೇರುವ ಪ್ರಯತ್ನ

ನಿಲ್ಲಿಸಲಿಲ್ಲ .


ಶಕ್ತಿ ಪಡೆದು ಹಂತ ಹಂತದಿ

ಮರವನೇರಿ ಬೆಟ್ಟದ ಸಮಕ್ಕೆ 

ಏರಲು ಎತ್ತರದ ಕೊಂಬೆ ತಲುಪಿತು .

ನಾನೂ ಎತ್ತರದಲ್ಲಿರುವೆ 

ಎಂದು ಸಂತಸದಿ ಬೀಗಿತು.


ಬೇಟೆಗಾರ ಎತ್ತರದಲ್ಲಿರುವ ಕೋಳಿ

ನೋಡಿ ಕೋವಿಯಿಂದ ಕೊಂದ 

ಬೆಟ್ಟ ಮರುಗಿ ಜಗಕೆ ಸಾರಿತು 

ನೀವು ನೀವಾಗಿ ಅದೇ ಆನಂದ .


ಸಿಹಿಜೀವಿ

*ಸಿ.ಜಿ.ವೆಂಕಟೇಶ್ವರ*

ತುಮಕೂರು





22 ಏಪ್ರಿಲ್ 2022

ಬಾಳೆ ಎಲೆ ಊಟ.


 



ಬಾಲ್ಯದಲ್ಲಿ ನಾವು ಊಟ ಮಾಡುವಾಗ ಮನೆಯಲ್ಲಿ ಮಾತ್ರ  ಗಂಗಳದಲ್ಲಿ ( ತಟ್ಟೆ) ಊಟ ಮಾಡುತ್ತಿದ್ದೆವು .ಹೊಲ ಮತ್ತು ತೋಟಗಳಿಗೆ ಹೋದರೆ .ಹೊಲದಲ್ಲಿ ಸಿಗುವ ಅಳ್ಳ ಎಲೆ(ಔಡಲ) ,ಮುತ್ತುಗದ ಎಲೆ, ಅಥವಾ ಬಾಳೆ ಎಲೆಗಳಲ್ಲೇ ನಮ್ಮ ಊಟ. ಬಾಡೂಟವಾದರೆ ಅಡಿಕೆ ಪಟ್ಟೆಯೇ ಆಗಬೇಕಿತ್ತು. ಈ ಮೇಲಿನ ಅಷ್ಟೂ ನೈಸರ್ಗಿಕ ಊಟದ ಪರಿಕರಗಳು ನಮ್ಮ ಪರಿಸರಕ್ಕೆ ಪೂರಕವಾಗಿ ಮಾಲಿನ್ಯ ರಹಿತವಾಗಿ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದ್ದವು. 

ಈಗಲೂ ನಾವು ನಮ್ಮ ಹಳ್ಳಿಗೆ ಹೋದರೆ ಬಾಳೆ ಎಲೆಯ ಊಟವೇ ಆಗಬೇಕು. ನಮ್ಮ ಮಕ್ಕಳೂ ಸಹ ಬಾಳೆ ಎಲೆ ಊಟಕ್ಕೆ ಅಡಿಕ್ಟ್ ಆಗಿರುವರು. " ದೊಡ್ಡಪ್ಪ ತೋಟದಲ್ಲಿ ಬಾಳೆ ಎಲೆ ತೊಗೊಂಡ್ ಬಾ ಊಟಕ್ಕೆ " ಎಂದು ನನ್ನ ಅಣ್ಣನಿಗೆ  ಪ್ರೀತಿಯಿಂದಲೇ ಆರ್ಡರ್ ಮಾಡುತ್ತಾರೆ .

ನಮ್ಮಣ್ಣನೂ ಸಹ ನಾವೂ ಊರಲ್ಲಿ ಇರುವವರೆಗೂ ನಮಗೆ ಬಾಳೆ ಎಲೆಯ ಊಟಕ್ಕೆ ಸರ್ವ ತಯಾರಿ ಮಾಡಿರುತ್ತಾರೆ.


ಬಾಳೆಲೆಯ ಊಟ ಮಾಡಿದರೆ ಆಗುವ ಪ್ರಯೋಜನಗಳು ಒಂದೆರಡಲ್ಲ 

ಬಾಳೆ ಎಲೆಗಳಲ್ಲಿ ಇರುವ ಪಾಲಿಫಿನಾಲ್ಸ್ ಎಂಬ ಆಂಟಿ-ಆಕ್ಸಿಡೆಂಟ್‌ಗಳು, ದೇಹದಲ್ಲಿ ಇರುವ ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪೋಷಕಾಂಶಗಳು ಆಹಾರ ಪದಾರ್ಥಗಳಲ್ಲಿ ಸುಲಭವಾಗಿ ಕಂಡುಬರುತ್ತವೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ಆಹಾರದಲ್ಲಿರುವ ಬ್ಯಾಕ್ಟೀರಿಯಾವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆ ಮೂಲಕ ಬಾಳೆ ಎಲೆ ಊಟ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಬಾಳೆ ಎಲೆಗಳು ಮೇಣದ ತೆಳುವಾದ ಪದರವನ್ನು ಹೊಂದಿದ್ದು, ಅದು ವಿಭಿನ್ನ ರುಚಿಯನ್ನು ಹೊಂದಿರುತ್ತದೆ. ಬಾಳೆ ಎಲೆಯ ಮೇಲೆ ಬಿಸಿ ಆಹಾರವನ್ನು ನೀಡಿದಾಗ, ಮೇಣ ಕರಗಿ ಆಹಾರದೊಂದಿಗೆ ಬೆರೆಯುತ್ತದೆ. ಇದು ಆಹಾರದ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಇಂದಿನ ಕಾಲದಲ್ಲಿ ಪರಿಸರ ಮಾಲಿನ್ಯವು ಒಂದು ದೊಡ್ಡ ಸಮಸ್ಯೆಯಾಗಿದೆ. ಸಾಮಾನ್ಯವಾಗಿ ಪ್ಲಾಸ್ಟಿಕ್ ಅಥವಾ ಸ್ಟೈರೊಫೊಮ್ ಫಲಕಗಳನ್ನು ಪಾರ್ಟಿಯಲ್ಲಿ ಬಳಸಲಾಗುತ್ತದೆ. ತಿಂದ ನಂತರ ಈ ತಟ್ಟೆಗಳು ಕೊಳೆಯುವುದು ಕಷ್ಟ. ಬದಲಾಗಿ ನೀವು ಬಾಳೆ ಎಲೆಗಳನ್ನು ಬಳಸಬಹುದು. ಬಾಳೆ ಎಲೆಗಳಲ್ಲಿ ಹೆಚ್ಚು ಬಡಿಸಲು ಜಾಗ ಇರುತ್ತದೆ. ಇದರ ಹೊರತಾಗಿ, ಬಾಳೆ ಎಲೆಯನ್ನು ಸ್ವಚ್ಛಗೊಳಿಸಲು ಹೆಚ್ಚು ನೀರಿನ ಅಗತ್ಯವಿಲ್ಲ. ಇದು ಅತ್ಯಂತ ನೈರ್ಮಲ್ಯವಾಗಿದೆ.

ಬಾಳೆ ಎಲೆಗಳು ಯಾವುದೇ ರೀತಿಯ ರಾಸಾಯನಿಕವನ್ನು ಹೊಂದಿರುವುದಿಲ್ಲ. ಪ್ಲಾಸ್ಟಿಕ್ ತಟ್ಟೆಯಲ್ಲಿ ಆಹಾರವನ್ನು ಪೂರೈಸುವ ಮೂಲಕ, ಕರಗಿದ ಪ್ಲಾಸ್ಟಿಕ್‌ನ ಭಾಗವು ನಮ್ಮ ಹೊಟ್ಟೆಗೆ ಹೋಗಬಹುದು. ಅದು ಕ್ಯಾನ್ಸರ್ ಮತ್ತು ಇತರ ರೋಗಗಳಿಗೆ ಕಾರಣವಾಗಬಹುದು. ಇಂತಹ ಪರಿಸ್ಥಿತಿಯಲ್ಲಿ, ಬಾಳೆ ಎಲೆಗಳ ಮೇಲೆ ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.


ಅದ್ದರಿಂದ ಪರಿಸರಕ್ಕೆ ಪೂರಕವಾದ ಬಾಳೆ ಎಲೆ ಊಟಕ್ಕೆ ಎಲ್ಲರೂ ಪ್ರಥಮ ಪ್ರಾಶಸ್ತ್ಯ ನೀಡೋಣ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


19 ಏಪ್ರಿಲ್ 2022

ನಾನು ಮತ್ತು ಸೌದೆ


 


*ನಾನು ಮತ್ತು ಸೌದೆ. 


ನಮ್ಮ ಬಾಲ್ಯದಲ್ಲಿ ಅಡಿಗೆ ಮಾಡಲು ಉರುವಲು ಎಂದರೆ ಬಹುತೇಕ ಕಾಡನ್ನು ಮತ್ತು ಕಟ್ಟಿಗೆಯನ್ನು ಅವಲಂಬಿಸಿದ್ದೆವು. ಸೌದೆ ಒಲೆಗಳು ಪ್ರತಿಯೊಂದು ಮನೆಯಲ್ಲೂ ಇದ್ದವು. ಸೌದೆ ತರವುದು, ಗಂಡು ಹೆಣ್ಣು ಎಂಬ ಭೇದವಿರದೇ ಎಲ್ಲರೂ ಮಾಡುತ್ತಿದ್ದ ಕಾಯಕವಾಗಿತ್ತು. ದಿನದ ಸೌದೆಯ ಅಗತ್ಯಕ್ಕಿಂತ ಹೆಚ್ಚಿನ ಸೌದೆ ತಂದು ಮಳೆಗಾಲಕ್ಕೆ ಸೌದೆಯನ್ನು ಸಂಗ್ರಹ ಮಾಡುವುದೂ ಸಾಮಾನ್ಯವಾಗಿತ್ತು. ಹೊಲೆಯನ್ನು ಮೊದಲು ಹಚ್ಚಲು ಅಡಿಕೆ ಗರಿ, ತೊಗರಿ ಗಿಡಗಳ ಒಣಗಿದ ಸೌದೆಯನ್ನು ಸಾಮಾನ್ಯವಾಗಿ ಬಳಸುತ್ತಿದ್ದರು. ಕ್ರಮೇಣವಾಗಿ ಒಲೆ ಉರಿದಂತೆ ಗಟ್ಟಿ ಸೌದೆಗಳಾದ ತಂಗಟೆ ಸೌದೆ, ಬಂದ್ರೆ ಸೌದೆ, ಲಂಟಾನ್ ಸೌದೆ ಇತ್ಯಾದಿಗಳು ಬಳಕೆಯಾಗುತ್ತಿದ್ದವು. ಕೆಲವೊಮ್ಮೆ ಗೆಳೆಯರ ಜೊತೆಯಲ್ಲಿ ನಾನೂ ಸೌದೆತರಲು ಹೊರಡುತ್ತಿದ್ದೆ .ಮೊದಲಿಗೆ ಊರಿನ ಸುತ್ತಮುತ್ತಲಿನ ಹೊಲಗಳಲ್ಲಿ ಒಣಗಿದ ಅಳ್ಳ ಮರಗಳು( ಔಡಲ), ತೊಗರಿ ಗಿಡಗಳು, ಲಂಟಾನ್ ಗಿಡಗಳನ್ನು ತಂದು ಮನೆಯ ಮುಂದೆ ಹಾಕಿದ ನಾವು ಸುಮಾರು ಐದಾರು ಕಿಲೋಮೀಟರ್ ದೂರದ ಗುಡ್ಡದ ಕಡೆಗೆ ನೋಟ ಬೀರುತ್ತಿದ್ದೆವು .ಕಾಲ್ನಡಿಗೆಯಲ್ಲಿ ಅಷ್ಟು ದೂರ ಸಾಗಿ ಕಾಡಿನಲ್ಲಿ ಅಲ್ಲಲ್ಲಿ ಒಣಗಿ ಬಿದ್ದ ಬಂದ್ರೆ, ತಂಗಟೆ ಮುಂತಾದ ಗಿಡಗಳನ್ನು ಸಂಗ್ರಹಿಸಿ ,ಕಾಲ ಕಾಲಕ್ಕೆ ಸಿಗುವ ಕಾಡಿನ ಹಣ್ಣುಗಳಾದ ಬಿಕ್ಕೇಕಾಯಿ, ದ್ಯಾದಾರೆ ಹಣ್ಣು, ಗೇರು ಹಣ್ಣು, ಲಂಟಾನ್ ಹಣ್ಣು, ಕಾರೆ ಹಣ್ಣು,ಮುಂತಾದ ಹಣ್ಣುಗಳನ್ನು ತಿನ್ನುತ್ತಿದ್ದೆವು.ಕೆಲವೊಮ್ಮೆ ಎಡವಟ್ಟಾಗಿ ಗೇರು ಹಣ್ಣ ತಿಂದ ನಮ್ಮ ಗೆಳೆಯರಿಗೆ ಮೈಯೆಲ್ಲಾ ತುರಿಕೆ ಉಂಟಾಗಿ ಅಳುತ್ತಾ ಮನೆ ಕಡೆಗೆ ನಡೆದ ಉದಾಹರಣೆಗಳಿವೆ.

 ಬಾಯಾರಿಕೆ ಆದಾಗ ಅಲ್ಲೇ  ಗುಂಡಿಯಲ್ಲಿ ನಿಂತಿದ್ದ ನೀರು ಕುಡಿದು ಸೌದೆ ಹೊರೆಹೊತ್ತು ಮನೆ ಕಡೆ ಸಾಗುತ್ತಿದ್ದೆವು. ಐದಾರು ಕಿಲೋಮೀಟರ್ ದೂರ ಸಾಗಲು ಉದ್ದನೆಯ ಹೊರೆ ಕಟ್ಟಿ ತಲೆಯ ಮೇಲೆ ಎರಡು ಮೂರು ಬಟ್ಟೆಗಳ ಸಿಂಬೆ ಮಾಡಿಕೊಂಡು ಸೌದೆ ಹೊರೆ ಹೊತ್ತು ಊರ ಕಡೆ ಸಾಗುವಾಗ ಮಾರ್ಗ ಮಧ್ಯದಲ್ಲಿ ಒಮ್ಮೆ ಹೊರೆ ಕೆಳಗಿಳಿಸಿ ,ಸುಧಾರಿಸಿಕೊಂಡು ಮತ್ತೆ ಊರ ಕಡೆ ಪಯಣ ಬೆಳೆಸಿ ಮನೆಯ ಮುಂದೆ ಸೌದೆ ಹೊರೆ ತಂದು ದೊಪ್ ಎಂದ ಹಾಕಿದಾಗ ಅಮ್ಮ ಹೆಮ್ಮೆಯಿಂದ ನನ್ನ ಕಡೆ ಮೆಚ್ಚುಗೆ ಸೂಚಿಸಿ ಕುಡಿಯಲು ನೀರು ಕೊಟ್ಟು ತಿನ್ನಲು ಸಜ್ಜೆರೊಟ್ಟಿ ಹಾಗೂ ಚಿನಕುರುಳಿ ನೀಡುತ್ತಿದ್ದರು.ಆಗ ಕಾಡು ಸುತ್ತಿದ ದಣಿವೆಲ್ಲಾ ಒಂದೇ ಕ್ಷಣದಲ್ಲಿ ಮಾಯವಾಗುತ್ತಿತ್ತು.


ಊರಿನಲ್ಲಿ ಮದುವೆ ಮತ್ತಿತರ ಶುಭ ಸಮಾರಂಭಗಳು ಜರುಗಿದರೆ ಐದಾರು ಎತ್ತಿನ ಗಾಡಿಗಳಲ್ಲಿ ಜನರು ಕಾಡಿಗೆ ಹೋಗಿ ಸೌದೆ ತರುತ್ತಿದ್ದೆವು.ಆಗ ಹತ್ತು ಕಿಲೋಮೀಟರ್ ಗೂ ದೂರದ ಕಾಡಿಗೆ ಹೋಗಿ ಒಣಗಿದ  ದಪ್ಪ ಸೌದೆ ಗಳನ್ನು ಗಾಡಿಯಲ್ಲಿ ತರುತ್ತಿದ್ದೆವು.ಆಗ ನಮ್ಮದು ಎತ್ತಿನ ಗಾಡಿ ಇರಲಿಲ್ಲ ಒಮ್ಮೆ ಅಮಲ್ದಾರರ ಮನೆಯ ಮದುವೆಗೆ ಸೌದೆ ತರಲು ಹೋದಾಗ ನಾನೂ ಅವರ ಜೊತೆಯಲ್ಲಿ ಹೋಗಿ ಒಂದು ಹೊರೆ ಗಟ್ಟಿ  ಸೌದೆ ತಂದಿದ್ದೆ. ಇದನ್ನು ಗಮನಿಸಿದ ನಮ್ಮ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದ ತಿಪ್ಪೇಸ್ವಾಮಿ ಮೆಷ್ಟ್ರು "ಏ... ವೆಂಕಟೇಶ ಅಡಿಗೆ ಮಾಡಾಕೆ ನಿಮ್ಮ ಮನೆ ಸೌದೆ ಕೊಡೊ "  ಅಂದರು .ಕಾಡು ಅಲೆದು ಕಷ್ಟ ಪಟ್ಟು ಸೌದೆ ತಂದದ್ದು ನೆನಪಾಗಿ ಇಲ್ಲ ಸಾ ...ಸೌದೆ ಕೊಡಲ್ಲ ಅಂದೆ.ನಮ್ಮ ಮೇಷ್ಟ್ರಿಗೆ ಪಿತ್ತ ನೆತ್ತಿಗೇರಿ ನನಗೇ ಇಲ್ಲ ಎನ್ನುತ್ತೀಯಾ ಎಂದು ಚೆನ್ನಾಗಿ ಬಾರಿಸುತ್ತಾ " ನೀನು ಹೆಂಗೆ ಪಾಸಾಗ್ತಿಯ ನೋಡ್ತೀನಿ "ಎಂದು ಎಗರಾಡಿದರು.   ಅಲ್ಲಲ್ಲಿ ಬಾಸುಂಡೆ ಬಂದಿದ್ದವುಗಳನ್ನು ನೋಡಿಕೊಳ್ಳುತ್ತಾ ,  ಅಳುತ್ತಾ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಅಮ್ಮನ ಬಳಿ ನಮ್ಮ ಮೇಷ್ಟ್ರು ವಿರುದ್ದ ದೂರು ನೀಡಿದೆ.ಅಮ್ಮಾ ನನ್ನ ಸಮಾಧಾನ ಮಾಡಿ ಮೇಷ್ಟ್ರ ಹತ್ತಿರ ಯಾಕೆ ನಿನ್ನ ಹೊಡೆದರು ಅಂತ ಕೇಳ್ತೀನಿ. ಮನೆಗೆ ನಡಿ ಅಂದರು.ಅಮ್ಮ ಮೇಷ್ಟ್ರನ್ನು ಬೈಯುತ್ತಾರೆ ಎಂದು ಮನೆಗೆ ಹಿಂತಿರುಗಿದೆ. ಒಂದು ವಾರ ಕಳೆದರೂ ಅಮ್ಮ ಮೇಷ್ಟ್ರ ಬಳಿ ಬೈಯುವುದಿರಲಿ ಕನಿಷ್ಟ ಪಕ್ಷ ಯಾಕೆ ಹೊಡಿದಿರಿ ಎಂದು ಕೇಳಲಿಲ್ಲ.ಸಿಟ್ಟಿನಿಂದ ಅಮ್ಮನ ಕೇಳಿದೆ ಯಾಕಮ್ಮ ಮೇಷ್ಟ್ರು ನ ಬೈಯಲಿಲ್ಲ ಅಂದು ಕೇಳಿದೆ."ಇದ್ಯೆ ಕೊಡ ಮೇಷ್ಟ್ರು ,ನಾಕ್ ಏಟ್ ಹಾಕಿದ್ರೆ ಆಶೀರ್ವಾದ ಇದ್ದಂಗೆ  ಹೋಗ್ಲಿ ಬಿಡು" ಅಂದಿದ್ದರು . ಈಗ ಆ ಮೇಷ್ಟ್ರ ಆಶೀರ್ವಾದ ಮತ್ತು ಅಮ್ಮನ ಹಾರೈಕೆಯಿಂದ ನಾನು ಮೇಷ್ಟ್ರು ಆಗಿರುವೆ.ನಮ್ಮ ಮೇಷ್ಟ್ರು ಸ್ವರ್ಗವಾಸಿಗಳಾಗಿರುವರು.

ಮೊನ್ನೆ ಊರಿಗೆ ಹೋದಾಗ ನಮ್ಮ ಅತ್ತಿಗೆ ಅಡಿಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಖಾಲಿಯಾಗಿದೆ ಅಂದಾಗ ಅಮ್ಮ ಪ್ರೀತಿಯಿಂದ "ಹೋಗಪ್ಪ ಗುಡ್ಡುಕ್ ಹೋಗಿ ಸೌದೆ ಕಡ್ಕಂಬಾ" ಎಂದು ನಗುತ್ತಾ ಹೇಳಿ ,ಆ ಕಾಲದಲ್ಲಿ ಸೌದೆ ತರಲು ನಾವು ಪಟ್ಟ ಪಾಡುಗಳನ್ನು ನನ್ನ ಮಕ್ಕಳಿಗೆ ವಿವರವಾಗಿ ಹೇಳಿದರು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

ಸಿಂಹಧ್ವನಿ ೧೯/೪/೨೨


 

ಕಾರಣ .ಹನಿಗವನ


 



*ಕಾರಣ*


ಸನ್ಯಾಸಿಯಾದನು 

ಮದುವೆಯಾದ 

ಕಾರಣ ಬಯಕೆ|

ಮದುವೆಯಾದವನು

ಸನ್ಯಾಸಿಯಾದ 

ಕಾರಣ ಭಯಕ್ಕೆ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ.

18 ಏಪ್ರಿಲ್ 2022

ಮರೆತು ಹೋದ ರಾಜಧಾನಿ ಮಣ್ಣೆ.


 


ಕ್ಯಾತ್ಸಂದ್ರ ದ ಪ್ರಖ್ಯಾತ ಪವಿತ್ರ ಇಡ್ಲಿ ಹೋಟೆಲ್ ನಲ್ಲಿ ಇಡ್ಲಿ ವಡೆ ತಿನ್ನುವಾಗ ಆ ರಷ್ ನೋಡಿಯೇ ಗೊತ್ತಾಯಿತು ಅದರ ಪ್ರಖ್ಯಾತಿ .ಎಣಿಸಿದ್ದಕ್ಕಿಂತ ರುಚಿ ಕಡಿಮೆಯೇನಿರಲಿಲ್ಲ ನನಗಂತೂ ಇಡ್ಲಿಗಿಂತ  ವಡೆ ಬಹಳ ಹಿಡಿಸಿತು . ಪ್ರಕಾಶಕರು ಹಾಗೂ ಲೇಖಕರಾದ  ಎಂ .ವಿ.   ಶಂಕರಾನಂದ ರವರ ಜೊತೆಗೂಡಿ  ಬೈಕ್ ನಲ್ಲಿ ರಾಷ್ಟ್ರೀಯ ಹೆದ್ದಾರಿಗುಂಟ ಬೆಂಗಳೂರಿನ ಕಡೆ ನಮ್ಮ ಪಯಣ ಆರಂಬಿಸಿದೆವು. ಬೇಸಿಗೆ ರಜೆಯಲ್ಲಿ ನಮ್ಮ ಸುತ್ತಮುತ್ತಲಿನ ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಪರಂಪರೆಯ ತಾಣಗಳ ನೋಡುವ ನಮ್ಮ ಅಭಿಯಾನದ ಭಾಗವಾಗಿ  ನಮ್ಮ ನಾಡನ್ನಾಳಿದ ಗಂಗರ ರಾಜಧಾನಿಗಳಲ್ಲಿ ಒಂದಾದ "ಮಣ್ಣೆ " ನೋಡಲು ಹೊರಟಿದ್ದೆವು. ಮಾರ್ಗಮಧ್ಯದಲ್ಲಿ ಬಲಕ್ಕೆ ನೋಡಿದೆ ನಿಜಗಲ್ ಬೆಟ್ಟ ಕಂಡಿತು " ನನ್ನ ನೋಡಲು ಯಾವಾಗ ಬರುವಿರಿ? ಎಂದು ಕೇಳಿದಂತಿತ್ತು. ಖಂಡಿತವಾಗಿಯೂ ಬರುವೆ ಎಂದು ಮನದಲ್ಲೇ ಹೇಳಿ  ನಮ್ಮ ಬೈಕ್ ಪಯಣ ಮಂದುವರೆಸಿದೆವು. ಡಾಬಾಸ್ ಪೇಟೆಯಿಂದ ಎಡಕ್ಕೆ ತಿರುಗಿ ಏಳು  ಕಿಲೋಮೀಟರ್ ಸಾಗಿ ಎಡಕ್ಕೆ ತಿರುಗಿ ಕೆರೆಯ ಏರಿಯ ಮೇಲೆ    ಒಂದು ಕಿಲೋಮೀಟರ್ ಕ್ರಮಿಸಿದಾಗ ನಮಗೆ ಗಂಗರ ರಾಜಧಾನಿ ಮಣ್ಣೆಗೆ ಸ್ವಾಗತ ಎಂಬ ಕಮಾನು ಕಂಡಿತು .ಆಗ ನಮಗೆ ಬಹಳ ಸಂತಸವಾಯಿತು.ಅದೊಂದೆ ಸಂತಸದ ಸಂಗತಿ ಮಿಕ್ಕಿದ್ದೆಲ್ಲಾ ಬೇಸರದ ಸಂಗತಿಯೇ!




ಸ್ವಾಗತ ಕಮಾನು ದಾಟಿ ಮುಂದೆ ಸಾಗಿದ ನಾವು ಹೊಲದಿಂದ ತಲೆಯ ಮೇಲೆ ಹುಲ್ಲು ಹೊತ್ತು ತರುವ ಮಹಿಳೆಯರ ಬಳಿ ಈ ಊರಿನ ಸ್ಮಾರಕಗಳ ಬಗ್ಗೆ ಕೇಳಿದಾಗ "ಸ್ಮಾರಕ ಗೀರಕ ಇಲ್ಲ ಸಾ.. ಆ ತೋಟದ ಕಡೆ ಸೂಳೆ ಮನೆ ,ಇನ್ನೊಂದು ಮನೆ ಐತೆ ಹೋಗ್ರಿ "ಅಂದರು.

ಅವರು ಕೈತೋರಿದ ಕಡೆ ಸಾಗಿದೆವು.

ಪಾಳುಬಿದ್ದ ಕಲ್ಲಿನ ರಚನೆಗಳು ನಮ್ಮ ಸ್ವಾಗತಿಸಿದವು .ಅಲ್ಲಲ್ಲಿ ಮದ್ಯದ ಬಾಟಲ್ ಗಳು ಸಿಗರೇಟ್ ಪ್ಯಾಕ್ ಗಳು , ಬಿದ್ದಿದ್ದನ್ನು ನೋಡಿದ ಮೇಲೆ ಊರವರು ಈ ಸ್ಮಾರಕಗಳನ್ನು ಯಾಕೆ ಸೂಳೆ ಗುಡಿ ಎಂದು ಕರೆಯುತ್ತಾರೆ ಎಂದು ನನಗೆ ಮನವರಿಕೆಯಾಯಿತು.

 


ಪಶ್ಚಿಮ ಗಂಗಾ ರಾಜವಂಶದ ಹಿಂದಿನ ರಾಜಧಾನಿ ನೆಲಮಂಗಲದ ಮನ್ನೆಯ  ಭಾರತೀಯ ಪುರಾತತ್ವ ಇಲಾಖೆಯು  ತಕ್ಷಣ ಗಮನ  ಹರಿಸ ಬೇಕು.  ಒಂದು ಕಾಲದಲ್ಲಿ ಸುಂದರವಾದ ರಚನೆಗಳನ್ನು ಹೊಂದಿದ್ದ ಮನ್ನೆ   ಈಗ ಬರೀ  ಅವಶೇಷಗಳ ತಾಣವಾಗಿರುವುದು ಬೇಸರದ ಸಂಗತಿ. ಅಲ್ಲಿರುವ ಪುರಾತನ ಅವಶೇಷಗಳ ರೂಪದ ದೇವಾಲಯಗಳಲ್ಲಿ   ಒಂದು ಸೋಮೇಶ್ವರ ದೇವಾಲಯ.  ಈ ದೇವಾಲಯವನ್ನು ಕ್ರಿ.ಶ.9-10ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.  ಈಗ ಈ ಸುಂದರವಾದ ದೇವಾಲಯವು ಪಾಳುಬಿದ್ದಿದೆ.  ಅತ್ಯಂತ ಸುಂದರವಾದ ಬೃಹತ್  ಗಾತ್ರದ ದ್ವಾರಪಾಲಕರು  ಪ್ರವೇಶದ್ವಾರದಲ್ಲಿ   ನಮ್ಮನ್ನು ಸ್ವಾಗತಿಸುತ್ತಾರೆ.  ಪುರಾತನ ದೇವಾಲಯ ಮತ್ತು ಗಂಗರ ವಿಶಿಷ್ಟವಾದ ಅಲಂಕಾರಿಕ ಕಂಬದ ಕೆತ್ತನೆಗಳೊಂದಿಗೆ ಮಂಟಪದ ಭವ್ಯವಾದ ಪ್ರಭಾವವನ್ನು ನೀಡುತ್ತದೆ.  ಎರಡೂ ಬದಿಯಲ್ಲಿರುವ ಕಿಟಕಿ ಫಲಕವು ಅದರ ಸೌಂದರ್ಯದ ಪರಿಮಾಣವನ್ನು ಹೇಳುತ್ತದೆ.  ಅಲ್ಲಿ ಅನೇಕ ಇತರ ರಚನೆಗಳು ಉಳಿವಿಗಾಗಿ ಹೋರಾಡುತ್ತಿವೆ.  ಈ ದೇವಾಲಯ ಮತ್ತು ಗ್ರಾಮದ ಇತರ ದೇವಾಲಯಗಳ ಅಧ್ಯಯನವು ಶಾಸನಗಳೊಂದಿಗೆ ಇಂದಿನ ಅಗತ್ಯವಾಗಿದೆ.  

 


 “ಮನ್ನೆಯಲ್ಲಿ  ಕೆರೆಯ ಬಳಿ ಗಂಗರ ಕಾಲದ ಸುಂದರ ಸಪ್ತಮಾತೃಕೆಯ ಪ್ರತಿಮೆಗಳಿವೆ .  ಹದಿನೇಳು ಕಂಬಗಳಿದ್ದು, ರಚನೆಯು ಕೆಡವಲ್ಪಟ್ಟ, ನಾಶವಾದ ಅಥವಾ ಪಾಳುಬಿದ್ದ ಸ್ಥಿತಿಯಲ್ಲಿದೆ.  ಪ್ರತಿಯೊಂದು ಕಂಬವೂ ಸಂಶೋಧನೆಗೆ ಯೋಗ್ಯವಾಗಿದೆ.  ಮತ್ತೊಂದು ದೇವಾಲಯದ  ಅವಶೇಷದ ಕಡೆ ಸಾಗಿದ ನಾವು   ಛಾವಣಿಯು ಪದ್ಮಾವತಿ ದೇವತೆ ಮತ್ತು ಇತರ ತೀರ್ಥಂಕರರ ಕೆತ್ತನೆಗಳನ್ನು ಗಮನಿಸಿದೆವು.  ಪದ್ಮಾವತಿ ಮತ್ತು ಅಂಬಿಕಾ ದೇವತೆಗಳು ಜೈನ ಧರ್ಮದ ದೇವತೆಗಳಾಗಿರುವುದರಿಂದ ಇದು ಪ್ರಮುಖ ಚಿಹ್ನೆಯಾಗಿದೆ.  ಆದರೆ ಈಗ ಅದು ಕೆಟ್ಟ ಸ್ಥಿತಿಯಲ್ಲಿದೆ.


ಒಂದು ಸುಂದರ ಐತಿಹಾಸಿಕ ಸ್ಥಳ ನೋಡಿದ ಸಂತಸ ಹಾಗೂ ಅದರ ಸರಿಯಾದ ನಿರ್ವಹಣೆ ಇಲ್ಲದ ಬಗ್ಗೆ ಬೇಸರದಿಂದ ಕೆರೆಯ ಏರಿಯ ಮೇಲೆ ಬರುವಾಗ ಓರ್ವ ತರುಣ ಮರದ ಕೆಳೆಗೆ ಕುಳಿತು ಓದುವುದು ಕಂಡು ನಮ್ಮ ಬೈಕ್ ನಿಲ್ಲಿಸಿ ಅವನೊಂದಿಗೆ ಮಾತುಕತೆ ಆರಂಭಿಸಿದೆವು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡುತ್ತಿದ್ದ ಆ ಯುವಕನನ್ನು ಈ ಸ್ತಳದ ಬಗ್ಗೆ ಮಾಹಿತಿಯನ್ನು ಕೇಳಿದಾಗ ಅವನು ನೀಡಿದ ಮಾಹಿತಿಯನ್ನು ಕೇಳಿ  ಸ್ವಲ್ಪ ಸಮಾಧಾನವಾಯಿತು .ನಮ್ಮ ನಾಡಿನ ಇತಿಹಾಸ ಕೆಲವರಿಗಾದರೂ ಕೆಲ ಮಟ್ಟಿಗೆ ತಿಳಿದಿದೆ ಎಂದು ಆ ಯುವಕನ ಬಗ್ಗೆ ಮೆಚ್ಚುಗೆ ಉಂಟಾಯಿತು. ಯುವಕನ ಮಾತಿನಲ್ಲೇ ಹೇಳುವುದಾದರೆ...



"  ಪಶ್ಚಿಮ ಗಂಗಾ ರಾಜವಂಶವು ಕ್ರಿ.ಶ. 350 ರಿಂದ ಕ್ರಿ.ಶ. ಹತ್ತನೇ ಶತಮಾನದ ಅಂತ್ಯದವರೆಗೆ ದಕ್ಷಿಣ ಕರ್ನಾಟಕದ ದೊಡ್ಡ ಭಾಗಗಳನ್ನು ಆಳಿತು.

 4 ನೇ ಶತಮಾನದ ಮೊದಲು ಗಂಗಾ ಕುಲದ ಮೂಲವು ದಂತಕಥೆಗಳು ಮತ್ತು ಪುರಾಣಗಳಲ್ಲಿ ಮುಚ್ಚಿಹೋಗಿದೆ.  ಅವರ ಇತಿಹಾಸದ ಬಗ್ಗೆ ಸ್ಪಷ್ಟತೆಯು ಕನ್ನಡದಲ್ಲಿ ಚಾವುಂಡರಾಯ ಪುರಾಣ ಮತ್ತು ಪ್ರಾಕೃತದಲ್ಲಿ ಲೋಕವಿಭಾಗದಂತಹ ಸಮಕಾಲೀನ ಬರಹಗಳಿಂದ ಮತ್ತು ಮೈಸೂರು, ಬೆಂಗಳೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಮತ್ತು ಅನಂತಪುರ ಜಿಲ್ಲೆಯಲ್ಲಿ (ಈಗ ಸೀಮಾಂಧ್ರ ರಾಜ್ಯದಲ್ಲಿ) ಉತ್ಖನನಗೊಂಡ ಹಲವಾರು ಶಾಸನಗಳಿಂದ ಬರುತ್ತದೆ.

 ಪಾಶ್ಚಿಮಾತ್ಯ ಗಂಗರು ಈ ಪ್ರದೇಶದಲ್ಲಿ ತಮ್ಮ ಸುದೀರ್ಘ ಆಳ್ವಿಕೆಯಲ್ಲಿ ರಾಜಕೀಯ, ಸಂಸ್ಕೃತಿ ಮತ್ತು ಸಾಹಿತ್ಯದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು, ಕೆಲವೊಮ್ಮೆ ಸ್ವತಂತ್ರ ರಾಜರಾಗಿ ಮತ್ತು ಇತರ ಸಮಯದಲ್ಲಿ ಅವರ ದೊಡ್ಡ ನೆರೆಹೊರೆಯವರ ಅಧೀನರಾಗಿ, ಬಾದಾಮಿ ಚಾಲುಕ್ಯರು ಮತ್ತು ನಂತರ ಮಾನ್ಯಖೇಟದ ರಾಷ್ಟ್ರಕೂಟರು.  ಕನ್ನಡ ಮತ್ತು ಸಂಸ್ಕೃತದಲ್ಲಿ ಸಾಹಿತ್ಯಕ್ಕೆ ಅವರ ಪ್ರೋತ್ಸಾಹ, ಗೋಮಟೇಶ್ವರನ ಪ್ರಸಿದ್ಧ ಏಕಶಿಲೆ ಸೇರಿದಂತೆ ವಾಸ್ತುಶಿಲ್ಪದಲ್ಲಿನ ಅವರ ಸಾಧನೆಗಳು, ದಕ್ಷಿಣ ಕರ್ನಾಟಕದ ಅವರ ಹಿಂದೂ ದೇವಾಲಯಗಳು ಮತ್ತು ಶ್ರವಣಬೆಳಗೊಳ ಮತ್ತು ಕಂಬದಹಳ್ಳಿಯ ಅವರ ಜೈನ ಬಸದಿಗಳು ಈ ಪ್ರದೇಶಕ್ಕೆ ಅವರು ನೀಡಿದ ಶ್ರೀಮಂತ ಕೊಡುಗೆಗೆ ಸಾಕ್ಷಿಯಾಗಿದೆ"


ಆ ಯುವಕನ ಮಾತು ಕೇಳಿದಾಗ, ನಾನು ಪದವಿಯಲ್ಲಿ ಪಾಲಾಕ್ಷ ರವರು ಬರೆದ ಕರ್ನಾಟಕದ ಇತಿಹಾಸ ಹಾಗೂ

ನಾಡಿನ ಹಿರಿಯ ಸಾಹಿತಿ ವಿದ್ಯಾವಾಚಸ್ಪತಿ ಕವಿತಾ ಕೃಷ್ಣ ರವರ ಮನ್ನೆಯ ಬಗ್ಗೆ  ಬರೆದ ಪುಸ್ತಕ ಓದಿದ ಅಂಶಗಳು ನೆನಪಿಗೆ ಬಂದವು .


ಆ ಯುವಕನ ಐತಿಹಾಸಿಕ ಜ್ಞಾನದ ಬಗ್ಗೆ ಮೆಚ್ಚುಗೆ ಸೂಚಿಸಿ ತುಮಕೂರಿನ ಕಡೆಗೆ ನಾವು ಹಿಮ್ಮುಖವಾಗಿ ಪಯಣ ಆರಂಭಿಸಿದಾಗ ಆ ಯುವಕನ ರೂಪದಲ್ಲಿ ಒಂದು ಬೆಳ್ಳಿಯ ಗೆರೆ ಗೋಚರಿಸಿತು. ಇನ್ನು ಮುಂದಾದರೂ ಐತಿಹಾಸಿಕ ಪ್ರಜ್ಞೆಬೆಳೆಸಿಕೊಳ್ಳೋಣ . ನಮ್ಮ ಪಾರಂಪರಿಕ ತಾಣಗಳ ರಕ್ಷಣೆಗೆ  ಪಣ ತೊಡೋಣ .

ಅಂದ ಹಾಗೆ ಇಂದು "ವಿಶ್ವ ಪರಂಪರೆಯ ದಿನ "(18-4-2022)

ಎಲ್ಲರಿಗೂ ವಿಶ್ವ ಪರಂಪರೆಯ ದಿನದ  ಶುಭಕಾಮನೆಗಳು.


ಈ ಸ್ಥಳಕ್ಕೆ ತಲುಪುವುದು ಹೇಗೆ?

ಮಣ್ಣೆ (MANNE) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಹೋಬಳಿಯಲ್ಲಿನ ಒಂದು ಊರು. ಇದು ಗಂಗರ ರಾಜಧಾನಿಯಾಗಿತ್ತು.ಡಾಬಸ್ ಪೇಟೆ ಇಂದ ದೊಡ್ಡಬಳ್ಳಾಪುರಕ್ಕೆ ಹೋಗುವ ರಸ್ತೆಯಲ್ಲಿ ಡಾಬಸ್ ಪೇಟೆ ಇಂದ ಸುಮಾರು ೮ ಕಿ.ಮೀ ಗಳಷ್ಟು ಕ್ರಮಿಸಿದರೆ ಮುದ್ದಲಿಂಗನ ಹಳ್ಳಿ ಎಂಬಲ್ಲಿ ರಸ್ತೆಗೆ ಅಡ್ಡಲಾಗಿ ರೈಲು ಹಳಿ ಹಾದುಹೋಗುತ್ತದೆ. ಅಲ್ಲಿಂದ ಎಡಕ್ಕೆ ತಿರುಗಿದರೆ ಮಣ್ಣೆ ಕೆರೆ, ಅದರ ಏರಿಯ ಮೇಲೆ ೧.೫ ಕಿ.ಮೀ ಸಾಗಿದರೆ  ಮನ್ನೆ ಸಿಗುತ್ತದೆ.

ಬೆಂಗಳೂರು ಮತ್ತು ತುಮಕೂರು ಕಡೆಯಿಂದ ರೈಲಿನಲ್ಲಿಯೂ ಬರಬಹುದು.


ಆಗಬೇಕಾದ್ದು ಏನು?


ಮುಖ್ಯ ರಸ್ತೆಯಿಂದ   ಐತಿಹಾಸಿಕ ಸ್ಥಳದ ಬಗ್ಗೆ ನಾಮಫಲಕ ಅಳವಡಿಸಬೇಕಿದೆ.ವಿವಿಧ ಸ್ಮಾರಕಗಳ ಬಳಿ ಅವುಗಳ ಮಾಹಿತಿ ಫಲಕ ಅಳವಡಿಸಬೇಕಿದೆ.ಸ್ಮಾರಕಗಳ ಸುತ್ತ ರಕ್ಷಣಾ ಬೇಲಿ ನಿರ್ಮಾಣ ಮಾಡಬೇಕಿದೆ. ಪ್ರವಾಸಿಗರಿಗೆ ಬೇಕಾದ ಮೂಲಭೂತವಾದ ಸೌಕರ್ಯಗಳನ್ನು ಒದಗಿಸಬೇಕಿದೆ.


#ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

17 ಏಪ್ರಿಲ್ 2022

ಹಾಸನ ವಾಣಿ ೧೭/೪/೨೨


 

ಸಿಂಹ ಧ್ವನಿ ೧೭/೪/೨೨


 

ಪ್ರಜಾ ಪ್ರಗತಿ.೧೭/೪/೨೨


 

16 ಏಪ್ರಿಲ್ 2022

ಅನ್ಯಲೋಕದ ಪತ್ರ...ಲೇಖನ

 


ಅನ್ಯಲೋಕದ ಪತ್ರ.. 


ಭುವಿಯ ಸಕಲ ಜನರಿಗೆ ಅನ್ಯಲೋಕದ ಜೀವಿಯ ನಮನಗಳು.....


ನಾವು ಇಲ್ಲಿ ಸರ್ವಜೀವಿಗಳು ಕ್ಷೇಮ ಮತ್ತು ಸಂತೋಷದಿಂದ ಇದ್ದೇವೆ. ನಿಮ್ಮ ಕ್ಷೇಮ ಸಂತೋಷದ ಬಗ್ಗೆ ನಮಗೆ ತಿಳಿದೇ ಇದೆ .ನಾವು ಅನ್ಯಲೋಕದಲ್ಲಿ ಇದ್ದರೂ ನಿಮ್ಮನ್ನು ಗಮನಿಸುತ್ತಲೇ ಇದ್ದೇವೆ. ತೋರಿಕೆಗೆ ಮಾತ್ರ ನೀವು ಸಂತಸ ಕ್ಷೇಮದಿಂದಿರುವಿರಿ ,ಆಂತರಿಕವಾಗಿ ನೀವು ಬಹುತೇಕರು ನೆಮ್ಮದಿಯಿಂದಿಲ್ಲ ಎಂದು ನಮಗೆ ತಿಳಿದಿದೆ.ಆದರೂ ನೆಮ್ಮದಿಯ ಜೀವನ ನಡೆಸುವವರಂತೆ ಪೋಸು ಕೊಡುತ್ತಾ ಮಹಾನ್ ನಟರಂತೆ ನಟಿಸುತ್ತಿರುವಿರಿ.


ವಸುದೈವ ಕುಟುಂಬಕಂ ಎನ್ನುವಿರಿ, ಸರ್ವೇ ಜನಾಃ ಸುಖಿನೋಭವಂತು ಎನ್ನುವಿರಿ, ನಿಮ್ಮ ನೆರೆಹೊರೆಯವರನ್ನು ನಿಮ್ಮಂತೆ ಪ್ರೀತಿಸಿ ಎನ್ನುವಿರಿ    ಆದರೆ ಧರ್ಮ,ಜಾತಿ, ಪಂಗಡದ ಹೆಸರಲ್ಲಿ ದಿನವೂ ಕಚ್ಚಾಡಿ ಬಡಿದಾಡುವಿರಿ ಇದೇನು ವಿಪರ್ಯಾಸ! 


ವಿಜ್ಞಾನದ ಅಭಿವೃದ್ದಿಯಿಂದ ಜಗವೇ ಹಳ್ಳಿಯಾಗಿದೆ ಎನ್ನುವಿರಿ. ಗಡಿಗಳ ಗೆರೆ ಕೊರೆದುಕೊಂಡು ಗಡಿಗಾಗಿ ಸಮರ ಸಾರುತಿರುವಿರಿ ಇದ್ಯಾವ ತರ್ಕ?


ಅಭಿವೃದ್ದಿಯ ಹೆಸರಲ್ಲಿ ನಮ್ಮ  ಸಹೋದರಿ ವಸುಂಧರೆಯ  ಒಡಲಿಗೆ ಕೈಇಟ್ಟು ಅವಳ ಶೋಷಣೆ ಮಾಡುತ್ತಿರುವಿರಿ. ಭುವಿಯಲ್ಲಿ ಮಾಲಿನ್ಯದ್ದೇ ಕಾರುಬಾರು.ನಿಮ್ಮ ಸ್ವಾರ್ಥಕ್ಕೆ ಇತರೆ ಜೀವಿಗಳಿಗೆ ಬದುಕದ ಸ್ಥಿತಿ ನಿರ್ಮಾಣವಾಗಿದೆ.ನಿಮಗೂ ಅದರ ಬಿಸಿ ತಾಗಿ, ಅತಿಯಾದ ಮಳೆ, ಬರಗಾಲ, ಭೂಕಂಪ, ಸುನಾಮಿ, ಮುಂತಾದವುಗಳು ವಿನಾಶದ ಸೂಚನೆ ನೀಡಿದರೂ ಬುದ್ದಿ ಕಲಿತಿಲ್ಲ.


ಎಲ್ಲಾ ದೇಶಗಳಲ್ಲೂ ಕಾಲ ಕಾಲಕ್ಕೆ ನಿಮ್ಮ ದುಷ್ಟ ಬುದ್ದಿಗೆ ತಿಳುವಳಿಕೆ ನೀಡಲು ಬಂದ ಮಹಾನ್ ವ್ಯಕ್ತಿಗಳ ಮಾತಿಗೆ ನೀವು ಕಿವಿಯಾಗಲೇ ಇಲ್ಲ. ಬದಲಿಗೆ ಅವರನ್ನೇ ಅವಹೇಳನ ಮಾಡುವ ಕೀಳು ಮಟ್ಟಕ್ಕೆ ಇಳಿದಿರಿ.


ನಿಮಗಿನ್ನೂ ಬುದ್ದಿ ಬರಲೇ ಇಲ್ಲ .ಹಿಂಸೆ,ಕಚ್ಚಾಟ ಯುದ್ಧದಿಂದ ಯಾರಿಗೂ ನೆಮ್ಮದಿಯಿಲ್ಲ ಎಂದು ತಿಳಿದಿದ್ದರೂ ಸಣ್ಣ ಪುಟ್ಟ ಯುದ್ದಗಳಿಂದಿಡಿದು ಎರಡು ವಿಶ್ವ ಮಹಾಸಮರ ನಡೆದು ಅಪಾರ ಸಾವು ನೋವುಗಳೊಂದಿಗೆ ನಷ್ಟ ಅನುಭವಿಸಿದರೂ ಮತ್ತೆ ಕಾಲು ಕೆರೆದು ಜಗಳವಾಡಿ ಯುದ್ದಕ್ಕೆ ನಿಂತಿರುವಿರಲ್ಲ ನಿಮಗೆ ಏನು ಹೇಳಬೇಕು?


ನಮ್ಮ ಲೋಕದಿಂದ ನಿಮ್ಮ ಲೋಕಕ್ಕೆ ದಂಡೆತ್ತಿ ಬಂದು ನಿಮ್ಮನ್ನು ನಾವೇ ಆಳ್ವಿಕೆ ಮಾಡೋಣ ಎಂದು ನಾವು ಕೆಲವೊಮ್ಮೆ ಆಲೋಚಿಸಿದ್ದೂ ಉಂಟು .ಆದರೆ ನಮ್ಮ ಪೂರ್ವಜರು ನೀಡಿದ ಸಂಸ್ಕಾರದ ಪರಿಣಾಮವಾಗಿ ನಾವು ಹಾಗೆ ಮಾಡುವುದಿಲ್ಲ.  ಆದರೂ ನಿಮ್ಮ ಮೇಲೆ ನಾವು ಕಣ್ಣಿಟ್ಟು ನಿಮ್ಮ. ನಡೆನುಡಿಗಳನ್ನು ಗಮನಿಸುತ್ತಿಹೆವು.ನೀವು ಬದಲಾಗದಿದ್ದರೆ  ಯುದ್ಧ, ಪ್ರಕೃತಿ ವಿನಾಶ ಮುಂತಾದವುಗಳಿಂದ ನೀವೆಲ್ಲರೂ ಖಂಡಿತವಾಗಿಯೂ  ನಾಶವಾಗುತ್ತೀರಿ ಆಗ ನಮ್ಮ ಲೋಕದಿಂದ ಬಂದು ಭುವಿಯಲ್ಲಿ ನಮ್ಮ ಅಸ್ತಿತ್ವದೊಂದಿಗೆ ನಂದನವನ ಮಾಡುವೆವು. ಆಗ ನೋಡಿ ಭುವಿಯ ಜೀವನ ಹೇಗಿರುತ್ತದೆ ಎಂದು.ಓ ...ನೀವೆಲ್ಲಿ ರುವಿರಿ ನಾವು ಬರುವ ಮೊದಲೇ ನೀವು ಅಂದುಕೊಂಡ ಸ್ವರ್ಗ ಅಥವಾ ನರಕದಲ್ಲಿ ಇರುತ್ತೀರಿ ಅಲ್ಲವೆ?


ಈ ಪತ್ರ ಓದಿದ ಮೇಲಾದರೂ ಮನುಜರೇ ನೀವು ಬದಲಾಗಿ, ಇತರರನ್ನು ಬದಲಾಯಿಸಿ, ಇತರೆ ಜೀವಿಗಳಿಗೂ ಈ ಧರೆಯಲ್ಲಿ ಜೀವಿಸಲು ಅವಕಾಶ ನೀಡಿ, ಅನವಶ್ಯಕವಾಗಿ ಕಚ್ಚಾಡಬೇಡಿರಿ. ಕೆಲ ಮಹಾತ್ಮರು ನೀಡಿದ  ಉತ್ತಮ   ಸಂದೇಶಗಳನ್ನು ಪಾಲಿಸಿ .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.


15 ಏಪ್ರಿಲ್ 2022

ನಮಗಾಗಿ ಪ್ರಾರ್ಥಿಸೋಣ.


 ಮೂರನೇ ವಿಶ್ವ ಮಹಾಯುದ್ದ ಆದರೆ ಅದರ ಪರಿಣಾಮ ಊಹಿಸಲೂ ಅಸಾಧ್ಯ .ಆದರೂ ಕೆಲ ತಜ್ಞರು ಅದರ ಪರಿಣಾಮಗಳನ್ನು ಅಂದಾಜು ಮಾಡಿದ್ದಾರೆ. ಪ್ರಪಂಚದ ಬಹುತೇಕ ರಾಷ್ಟ್ರಗಳು ಮಾರಕವಾದ ಜೈವಿಕ ಅಸ್ತ್ರಗಳು, ರಸಾಯನಿಕ ಅಸ್ತ್ರಗಳು ಸೇರಿದಂತೆ ಸುಮಾರು ಆರು ಸಾವಿರಕ್ಕೂ ಹೆಚ್ಚು ಅಣು ಬಾಂಬ್ ಗಳನ್ನು ಗುಡ್ಡೆ ಹಾಕಿಕೊಂಡಿವೆ. ಒಂದು ಅಣು ಬಾಂಬ್ ಗೆ ಕೋಟಿಗೂ ಹೆಚ್ಚು ಬಲಿ ಪಡೆಯುವ ಶಕ್ತಿ ಇದೆ ಎಂಬುದು ಹಿರೋಷಿಮಾ ನಾಗಸಾಕಿಯಿಂದ ಸಾಬೀತಾಗಿದೆ. ಈಗ ನೀವೆ ಲೆಕ್ಕ ಹಾಕಿ ಸಾವಿರಾರು  ಬಾಂಬ್ ಗೆ ಎಷ್ಟು ದೇಶ ಎಷ್ಟು ಜ‌ನ ಉಳಿಯಬಹುದು? ತಜ್ಞರ ಮತ್ತೊಂದು ಅಂದಾಜಿನ ಪ್ರಕಾರ ಈಗಿರುವ ಎಲ್ಲಾ ಅಸ್ತ್ರಗಳ ಬಳಸಿದರೆ ಇಡೀ ವಿಶ್ವವನ್ನು ಐದು ಬಾರಿ ಸುಟ್ಟ ಬೂದಿ ಮಾಡಬಹುದಂತೆ ! ಯುದ್ಧ ಎಂದು ಎಗರಾಡುವ ಪುಟಿನ್ ,ಕಿಮ್ ಮತ್ತು ನಮ್ಮ ದೇಶದ ನೆರೆಹೊರೆಯ ಸಮಯಸಾಧಕರಿಗೆ ದೇವರೇ ಒಳ್ಳೆಯ ಬುದ್ದಿ ಕೊಡು ಎಂಬುದನ್ನು ಮಾತ್ರ ನಾವು ಕೋರಬಹುದು ಅಷ್ಟೇ.

ಸಿಹಿಜೀವಿ

ಸಿ ಜಿ ವೆಂಕಟೇಶ್ವರ

14 ಏಪ್ರಿಲ್ 2022

ಮರ ಮತ್ತು ಬೀಜ .


 


*ಮರ ಮತ್ತು ಬೀಜ*


ಒಳ್ಳೆಯ ಕೆಲಸ ಮಾಡಲು

ನಿಶ್ಚಯ ಮಾಡಿದರೆ ,ಯಾರೇನೇ 

ಅಂದರೂ ದೃಢವಾಗಿ ನಿಂತುಬಿಡು

ಅಲುಗಾಡದೆ  ಮರದಂತೆ|

ಇತರರ ಒಳಿತಿಗಾಗಿ 

ಬೀಳಬೇಕಾಗಿ ಬಂದರೆ 

ಬಿದ್ದು ಮಣ್ಣಲ್ಲಿ ಮತ್ತೆ 

ಮೊಳಕೆಯೊಡೆದುಬಿಡು ಬೀಜದಂತೆ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


09 ಏಪ್ರಿಲ್ 2022

ವರ್ಣಲೋಕ .


 ಅಜ್ಞಾನ, ಅಂಧಕಾರದಿ

ಬಾಳುತಲಿದ್ದರೆ
ನಿನ್ನ ಆವರಿಸುವುದು ಕತ್ತಲ ಕೂಪ |
ಜ್ಞಾನವ ಪಡೆಯುತ
ಒಳಗಣ್ಣ ತೆರೆದು ನೋಡು
ನಿನಗಾಗ ಕಾಣುವುದು ವರ್ಣಲೋಕ||


ಸಿಹಿಜೀವಿ

08 ಏಪ್ರಿಲ್ 2022

ಶಿವಾನಂದ ಶಿ‌ವಾಚಾರ್ಯ ಸ್ವಾಮೀಜಿ.


 ಶಿವಾನಂದ ಶಿವಾಚಾರ್ಯ ಸ್ವಾಮೀಜಿ.


ನಮನ ನಿಮಗೆ   ಹಿರೇಮಠದ ಶಿವಾನಂದ ಶಿವಾಚಾರ್ಯ 

ಜನರಲಿ ಜನಾರ್ಧನನ ಕಂಡ

ಕಲ್ಪತರು ನಾಡಿನ ಯತಿವರ್ಯ.


ಮಹಿಳೆಯರಿಗೆ ರುದ್ರಾಧ್ಯಯನ ವೇದಾಧ್ಯಯನ ಮಾಡಿಸಿದ ಸ್ವಾಮೀಜಿ

ವಯೋವೃದ್ದರಿಗೆ ಕಾಶಿ.ಕೇದಾರ ದರ್ಶನ ಮಾಡಿಸಿದ ಗುರೂಜಿ.


ಜನರ ಧಾರ್ಮಿಕ ಮತ್ತು ನೈತಿಕ ಗುಣಗಳ ಬೆಳೆಸಿದಿರಿ

ವಿದೇಶಗಳಲ್ಲಿ ಭಾರತದ ಕೀರ್ತಿ ಪತಾಕೆಯನು ಹಾರಿಸಿದಿರಿ.


ಮತಕುಲ ತ್ಯಜಿಸಿರಿ ಮನುಕುಲ ಬೆಳೆಸಿರೆಂದ ದಾರ್ಶನಿಕ

ಸ್ವಾಮೀಜಿಗಳ ನಡೆ ನುಡಿ

ನಮಗೆಲ್ಲರಿಗೂ ಪ್ರೇರಕ.


'ಪಿತೃಭಕ್ತ'ರಾಗಿ, ಬರೀ 'ಪಿತ್ರಾರ್ಜಿತ'ದ ಭಕ್ತರಾಗಬೇಡಿ ಎಂದ ಧೀಮಂತ.

ಸಕಲರು ನಮಿಪೆವು ನಿಮ್ಮಯ ಚರಣಕೆ  ಕರಗಳ ಜೋಡಿಸುತಾ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529.


03 ಏಪ್ರಿಲ್ 2022

ಸಿಹಿಜೀವಿಯ ಹಬ್ಬದ ದಿನಚರಿ .


 


ಸಿಹಿಜೀವಿಯ ಹಬ್ಬದ ದಿನಚರಿ


ಯುಗಾದಿಯ ಮರುದಿನ ಉಳಿದ ಕರಿಗಡುಬು ತಿಂದು ನೀರು ಎರೆಚುವ ಆಟ, ಉಯ್ಯಾಲೆ ಆಟ, ಮುಂತಾದ ಆಟಗಳನ್ನು ಆಡಿ ನಲಿವ ಜನರು .ಕೆಲವೆಡೆಗಳಲ್ಲಿ ಅಂದು ತಮ್ಮ ಗ್ರಾಮ ದೇವತೆಗಳು ದರ್ಶನ ಪಡೆದು ಹಿರಿಯರ ಕಾಲಿಗೆರಗಿ ಅವರ  ಆಶೀರ್ವಾದ ಪಡೆಯುವರು ಇಂದು ನಾವು ಕುಟುಂಬ ಸಮೇತ  ನಮ್ಮ ಗ್ರಾಮ ದೇವತೆ  ಚೌಡೇಶ್ವರಿ ತಾಯಿಯ ಆಶೀರ್ವಾದ ಪಡೆದೆವು .ನಂತರ ಹೊಳಲ್ಕೆರೆಯ ಇಂದಿರಾಗಾಂಧಿ ಶಾಲೆಯಲ್ಲಿ ಹತ್ತನೆಯ ತರಗತಿಯಲ್ಲಿ ವ್ಯಾಸಾಂಗ ಮಾಡುವ ನಮ್ಮ ಅಣ್ಣನ ಮಗಳಾದ ದೀಪಿಕಾ ಳನ್ನು ಭೇಟಿ ಮಾಡಿ ಮುಂದಿನ ಪರೀಕ್ಷೆಯನ್ನು ಚೆನ್ನಾಗಿ ಬರೆಯಲು ಹಾರೈಸಿ ಬರುವ ಮಾರ್ಗದಲ್ಲಿ ಬಾಲ್ಯದಲ್ಲಿ ನನ್ನ ಬೆಳೆಸಿದ  ಸಾರಂಬಿ ಅತ್ತೆಯನ್ನು ಮಾತನಾಡಿಸಿ,  ಕುಟುಂಬ ಸಮೇತವಾಗಿ ಹೊರಕೆರೆದೇವರ ಪುರದ ಲಕ್ಷ್ಮಿ ನರಸಿಂಹ ಸ್ವಾಮಿಯ ದರ್ಶನ ಪಡೆದು ಸಿಜಿ ಹಳ್ಳಿಗೆ ಹಿಂತಿರುಗಿ ಎಳನೀರು ಕುಡಿದು ಯರಬಳ್ಳಿ ತಲುಪಿ ಮಾರಮ್ಮನ ಆಶೀರ್ವಾದ ಪಡೆದು ನಂತರ ಶಿರಾ ತಾಲ್ಲೂಕಿನ ಭೂತರಾಯ ಸ್ವಾಮಿಯ ಜಾತ್ರೆಯಲ್ಲಿ ಪಾಲ್ಗೊಂಡು ದೇವರಿಗೆ ಕೈಮುಗಿದು ಕುಂಬಾರಹಳ್ಳಿ ತಲುಪಿದೆವು. .ಕೆಲ ಊರುಗಳಲ್ಲಿ ಹೊಸತೊಡಕು ಅಥವಾ ವರ್ಷದ ತೊಡಕು ಕಾರ್ಯಕ್ರಮದ ಅಂಗವಾಗಿ  ನಾನ್ ವೆಜ್ ಆಹಾರ ಸೇವನೆ ಮಾಡುವರು . ಕುಂಬಾರಹಳ್ಳಿಯ ನಮ್ಮ ಮಾವನ ಮಗಳು ಗಿರಿಜಾ ಮತ್ತು ಅವರ ಕುಟುಂಬದ ಆಹ್ವಾನದ ಮೇರೆಗೆ ನಮ್ಮ ಊಟ ಅವರ ಮನೆಯಲ್ಲಿ ಆಯಿತು. ಸಂಜೆ ಎಲ್ಲರ ಚಿತ್ತ ಪಶ್ಚಿಮಾಭಿಮುಖವಾಗಿ ಹರಿಯಿತು.ಸಂಜೆ  ಐದೂವರೆಯಿಂದ ಚಾಂದ್ರಮಾನ ಯುಗಾದಿಯ ಚಂದ್ರನ ದರ್ಶನಕ್ಕೆ ಜನ ಹಾತೊರೆಯುತ್ತಾರೆ. ಕಣ್ಣು ಚುರುಕಾದ ಯಾರಿಗಾದರೂ ಮೊದಲು ಕಂಡರೆ "ಆ... ಅಗ ನೋಡು...ಆ ಕರೆಂಟಿನ ಕಂಬದ ನೀಟಿಗೆ ನೋಡು...." " ನನ್ ಕೈ ಪಕ್ಕ ನೋಡು.... " ಈ ತೆಂಗಿನ ಗಿಡದ ಮೇಲೆ ನೋಡು.....ಎಂದು  ಚಂದ್ರ ಕಾಣದವರಿಗೆ ದರ್ಶನ ಮಾಡಿಸಲು ಹರಸಾಹಸ ಮಾಡುವುದು ಪ್ರತಿಯೊಂದು ಹಳ್ಳಿಯಲ್ಲಿ ಕಂಡು ಬರುವ ಚಿತ್ರಣ. ಚಂದ್ರ ಕಂಡ ತಕ್ಷಣ ಭಕ್ತಿಯಿಂದ ಕೈಮುಗಿದು ಈ ವರ್ಷದ ಹಬ್ಬ ಈಗ ಅಧಿಕೃತವಾಗಿ ಮುಗಿಯಿತು ಎಂದು ಧನ್ಯತಾ ಭಾವ ಹೊಂದುತ್ತಾರೆ ನಮ್ಮ ಹಳ್ಳಿಯ ಜನ. ಚಂದ್ರನ ನೋಡಿ ವರ್ಷದ ಭವಿಷ್ಯ ನುಡಿವ ವಾಡಿಕೆ ಕೆಲ ಗ್ರಾಮಗಳಲ್ಲಿ ಇದೆ. ಸ್ವಲ್ಪ ಬಲಕ್ಕೆ ಚಂದ್ರ ವಾಲಿದರೆ ಒಂದು ರೀತಿ, ಎಡಕ್ಕೆ ವಾಲಿದರೆ ಮತ್ತೊಂದು ರೀತಿಯಲ್ಲಿ ಅರ್ಥಗಳನ್ನು ಬಿಡಿಸಿ ಹೇಳುವರು . ಅಂದ ಹಾಗೆ ನಾನು ಈ ವರ್ಷ ಚಂದ್ರನ ದರ್ಶನ ಮಾಡಿದ್ದು ತಾವರೆಕೆರೆಯಲ್ಲಿ .ಸಂಜೆ ಆರು ಮೂವತ್ತಕ್ಕೆ ಯಾವ ಕಡೆಯೂ ಬಾಗದ ನೇರವಾದ ಚಂದ್ರನ ದರ್ಶನವಾಯಿತು. ಈ ವರ್ಷದಲ್ಲಿ ಎಲ್ಲವೂ ಸಮಾನವಾಗಿರಲಿವೆ, ಒಳಿತಾಗಲಿದೆ ಶುಭಕೃತವಾಗಲಿದೆ ಎಂಬುದು ನನ್ನ ಅನಿಸಿಕೆ ... ಹತ್ತು ಗಂಟೆಗೆ ಕಾರಿನಲ್ಲಿ ಆರಂಭವಾದ ನಮ್ಮ ಹಬ್ಬದ ಪಯಣ ತುಮಕೂರಿಗೆ ಸೇರುವ ಮೂಲಕ ಮುಕ್ತಾಯವಾಯಿತು. ಕಾರಿನ ಕಿಲೋಮೀಟರ್ ಲೆಕ್ಕ ಇಂದು 275 ಕಿಲೋಮೀಟರ್ ಸಂಚಾರ ಮಾಡಿರುವಿರಿ ಎಂದು ಲೆಕ್ಕ ನೀಡಿತು...

ಇಂದು ಭೇಟಿ ಮಾಡಿದ ಜನರ ಅಭಿಮಾನ ,ಹಿರಿಯರ ಆಶೀರ್ವಾದ, ಪಡೆದ ಅನುಭವ, ಸಂಬಂಧಿಕರೊಂದಿಗೆ ಸಂವಾದ ,ಅನುಬಂಧ ಇವುಗಳು ಇನ್ನೂ ಲೆಕ್ಕಕ್ಕೆ ಸಿಗುತ್ತಿಲ್ಲ.....

ಮತ್ತೊಮ್ಮೆ ಸರ್ವರಿಗೂ ಶುಭಕೃತ ಚಾಂದ್ರಮಾನ ಉಗಾದಿಯ ಶುಭಾಶಯಗಳು....


ಸಿಹಿಜೀವಿ

ಸಿ ಜಿ ವೆಂಕಟೇಶ್ವರ