29 ಏಪ್ರಿಲ್ 2025

ಶುಭವಾಗಲಿಸೂರ್ಯಾವಂಶಿ,ನಿನ್ನ ಭವಿಷ್ಯ ವೈಭವವಾಗಿರಲಿ.


ಶುಭವಾಗಲಿಸೂರ್ಯಾವಂಶಿ,ನಿನ್ನ ಭವಿಷ್ಯ ವೈಭವವಾಗಿರಲಿ.


ಕಳೆದೆರಡು ದಿನಗಳಿಂದ ಎಲ್ಲರ ಬಾಯಲ್ಲಿ ನಲಿದಾಡುವ ಹೆಸರೇ ವೈಭವ್ ಸೂರ್ಯವಂಶಿ.

ಯಾರು ಈ ವೈಭವ್ ಸೂರ್ಯ ವಂಶಿ?

14 ವರ್ಷದ ಹುಡಗನೊಬ್ಬನನ್ನು ರಾಜಸ್ಥಾನ್ ರಾಯಲ್ಸ್  ಕೋಟಿ ಕೊಟ್ಟು ಐ ಪಿ ಎಲ್ ಆಟಗಾರನಾಗಿ ಕೊಂಡಾಗಲೇ ಬಹುತೇಕರು ಹುಬ್ಬೇರಿಸಿ ನೋಡಿದ್ದರು. ಚೊಚ್ಚಲ ಐಪಿಎಲ್ ನಲ್ಲಿ  ಎದುರಿಸಿದ ಮೊದಲ ಎಸೆತವನ್ನು ಸಿಕ್ಸ್ ಹೊಡೆದಾಗ ಜನ ಬೆರಗು ಗಣ್ಣಿನಿಂದ ನೋಡಿದ್ದರು.ಬೆಂಗಳೂರಿನ ವಿರುದ್ಧದ ಆಟದಲ್ಲಿ ಗಮನ ಸೆಳೆದಿದ್ದ ಸೂರ್ಯವಂಶಿಯ ವೈಭವವು  ಪೂರ್ಣ ಪ್ರಮಾಣದಲ್ಲಿ ಪ್ರಜ್ವಲಿಸಿದ್ದು ಗುಜರಾತ್ ವಿರುದ್ಧದ ಪಂದ್ಯದಲ್ಲಿ.ವೇಗದ ಅರ್ಧ ಶತಕ, ವೇಗದ ಶತಕ ಬಾರಿಸಿ ತಂಡವನ್ನೂ ಗೆಲ್ಲಿಸಿ ತಾನೂ ಗೆದ್ದು ತನ್ನ ಗುರು ಗ್ರೇಟ್ ವಾಲ್ ದ್ರಾವಿಡ್ ಚರಣಗಳಿಗೆ ವಿನಮ್ರವಾಗಿ ವಂದಿಸಿ ಮುಗ್ಧ ನಗೆ ಬೀರಿದ ಹುಡುಗನ ಬಗ್ಗೆ ಖಂಡಿತವಾಗಿಯೂ ಹೆಮ್ಮೆಯಾಗುತ್ತದೆ.


ಮಾರ್ಚ್ 27 ತಾರೀಖಿನಂದು 2011ರಲ್ಲಿ ಬಿಹಾರದ ಸಮಷ್ಟಿಪುರದ ತಾಜ್‌ಪುರದಲ್ಲಿ ಜನಿಸಿದ ವೈಭವ್ ಸೂರ್ಯವಂಶಿ  ಚಿಕ್ಕ ವಯಸ್ಸಿನಲ್ಲಿಯೇ ಗಮನಾರ್ಹ ಸಾಧನೆಗಳಿಗೆ ಹೆಸರುವಾಸಿಯಾದ ಭಾರತೀಯ ಕ್ರಿಕೆಟಿಗ. ಎಡಗೈ ಬ್ಯಾಟ್ಸ್‌ಮನ್ ಮತ್ತು ನಿಧಾನಗತಿಯ ಎಡಗೈ ಸಾಂಪ್ರದಾಯಿಕ ಬೌಲರ್ ಆಗಿರುವ ಈ ಬಾಲಕ ಈಗ  ದೇಶೀಯ ಕ್ರಿಕೆಟ್‌ನಲ್ಲಿ ಬಿಹಾರ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್  ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿದ್ದಾನೆ. 

 ಜನವರಿ 2024 ರಲ್ಲಿ ಮುಂಬೈ ವಿರುದ್ಧ ಬಿಹಾರ ಪರ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ ಈ ಪೋರನ ವಯಸ್ಸು  12 ವರ್ಷ ಮತ್ತು 284 ದಿನಗಳು!

 ಬಿಹಾರ ಪರ ಪಾದಾರ್ಪಣೆ ಮಾಡಿದ ಎರಡನೇ ಕಿರಿಯ ಆಟಗಾರ ಮತ್ತು ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ನಾಲ್ಕನೇ ಕಿರಿಯ ಭಾರತೀಯ ಎಂಬ ಮನ್ನಣೆಯನ್ನು ಪಡೆದ.

 ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕಿರಿಯ ಆಟಗಾರನಾದ ಈ ಬಾಲಕ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಪರ ಪಾದಾರ್ಪಣೆ ಮಾಡಿದ.  ತಮ್ಮ ತಂಡ ಎರಡು ರನ್‌ಗಳ ಸೋಲಿನ ಹೊರತಾಗಿಯೂ ಅವನ 20 ಎಸೆತಗಳಲ್ಲಿ ಮೊದಲ ಎಸೆತದಲ್ಲಿ ಸಿಕ್ಸರ್ ಸೇರಿದಂತೆ 34 ರನ್ ಗಳಿಸಿದ್ದು  ಮೆಚ್ಚುಗೆಗೆ ಅರ್ಹ.

 

ಸೂರ್ಯವಂಶಿ ಒಂಬತ್ತನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದ. ಆರಂಭದಲ್ಲಿ ಅವರ ತಂದೆ ರೈತ ಮತ್ತು ಅರೆಕಾಲಿಕ ಪತ್ರಕರ್ತ ಸಂಜೀವ್ ಅವರಿಂದ ತರಬೇತಿ ಪಡೆದು ನಂತರ  ಸಮಸ್ತಿಪುರದಲ್ಲಿ ಕ್ರಿಕೆಟ್ ಅಕಾಡೆಮಿಯನ್ನು ಸೇರಿದ. ಬಳಿಕ   ಮಾಜಿ ರಣಜಿ ಆಟಗಾರ ಮನೀಶ್ ಓಜಾ ಅವರ ಅಡಿಯಲ್ಲಿ ತರಬೇತಿ ಪಡೆದ. ಅವನ  ಪ್ರತಿಭೆ ಬೆಳಕಿಗೆ ಬಂದದ್ದು ವಿನೂ ಮಂಕಡ್ ಟ್ರೋಫಿಯಲ್ಲಿ! ಆ ಪಂದ್ಯದಲ್ಲಿ  ಅವನ 12 ನೇ ವಯಸ್ಸಿನಲ್ಲಿ ಐದು ಪಂದ್ಯಗಳಲ್ಲಿ  400 ರನ್ ಗಳಿಸಿ ಎಲ್ಲರ ಗಮನ ಸೆಳೆದ. ದೇಶೀಯ ಪಂದ್ಯಾವಳಿಗಳಲ್ಲಿ ಮತ್ತು ನಾಗ್ಪುರದಲ್ಲಿ ರಾಜಸ್ಥಾನ್ ರಾಯಲ್ಸ್‌ನ ಟ್ರಯಲ್ಸ್‌ನಲ್ಲಿ ಉತ್ತಮ ಪ್ರದರ್ಶನಗಳನ್ನು ನೀಡಿದ. ಅಲ್ಲಿ  ಎಂಟು ಸಿಕ್ಸರ್‌ಗಳು ಮತ್ತು ನಾಲ್ಕು ಬೌಂಡರಿಗಳನ್ನು ಹೊಡೆದು ಐಪಿಎಲ್ ಸೆಲೆಕ್ಟರ್  ಗಮನ ಸೆಳೆದ.

ಈಗ ಇಡೀ ಜಗದ ಕ್ರಿಕೆಟ್ ಅಭಿಮಾನಿಗಳ ಕಣ್ಮಣಿ ಆಗಿರುವ ಈ ಪ್ರತಿಭಾವಂತ ಬಾಲಕನ ಪ್ರತಿಭೆ ಜನರ ಅತಿಯಾದ ನಿರೀಕ್ಷೆಯ ಭಾರದಿಂದ ನಲುಗದಿರಲಿ ಎಂಬುದೇ ನನ್ನ ಆಶಯ. ಶುಭವಾಗಲಿ ಸೂರ್ಯಾವಂಶಿ.ನಿನ್ನ ಭವಿಷ್ಯ ವೈಭವವಾಗಿರಲಿ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು



 

ಕುಣಿಯೋಣ ಬಾರಾ...ವಿಶ್ವ ನೃತ್ಯ ದಿನ .


 ಇಂದು ನೃತ್ಯ ದಿನ. #danceday 


 2019 ರಲ್ಲಿ #hyderabad  ನ #ramojifilmcity  ನಲ್ಲಿ ಗೆಳೆಯರೊಂದಿಗೆ ಖುಷಿಯಿಂದ ಕುಣಿದ ಚಿತ್ರಗಳು ನಿಮಗಾಗಿ..

ನಾನು ಬಾಲ್ಯದಲ್ಲಿ "ಕಾಣದಂತೆ ಮಾಯವಾದನು" ಹಾಡಿಗೆ  ಬಹಳ ಸಲ ನನ್ನ ಸಹಪಾಟಿಗಳ ಮುಂದೆ ಕುಣಿದಿರುವೆ.ಇದಕ್ಕೆ ನಮ್ಮ TNT ಮಾಸ್ಟರ್ ಪ್ರೋತ್ಸಾಹ ಬಹಳ ಇತ್ತು. ಟಿ ಸಿ ಹೆಚ್ ಓದುವಾಗ "ತು ಚೀಸ್ ಬಡಿ ಹೈ ಮಸ್ತ್ ಮಸ್ತ್" ಹಾಗೂ " ಮಾರಿ ಕಣ್ಣು ಹೋರಿ ಮ್ಯಾಗೆ" ಹಾಡಿಗೆ ಸಮಾರಂಭದಲ್ಲಿ   ಕುಣಿದಿದ್ದೆ. ಬಿ ಎಡ್ ಓದುವಾಗ ಮೈಸೂರಿನಲ್ಲಿ "ಸಂದೇಸ್ ಆತೇ ಹೈ" ಹಾಡಿಗೆ ಗೆಳೆಯರೊಂದಿಗೆ ನರ್ತನ ಮಾಡಿದ್ದೆ. ಭಾರತ ಪಾಕ್ ಗಡಿಯ ವಾಘಾ ಬಾರ್ಡರ್ ನಲ್ಲಿ ದೇಶಭಕ್ತಿ ಉಕ್ಕಿ ಕುಣಿದೆ.   ನಮ್ಮ ಊರಿನ ಚೌಡಮ್ಮ ಜಾತ್ರೆಯಲ್ಲಿ ಡಿ ಜೆ ಸದ್ದಿಗೆ ಊರ ಗೆಳೆಯರ ನಡುವೆ ಹೆಜ್ಜೆ ಹಾಕಿದ್ದೆ.ಚಿಕ್ಕಮಗಳೂರಿನ ಝರಿ ರೆಸಾರ್ಟ್ ನಲ್ಲಿ ಫೈರ್ ಕ್ಯಾಂಪ್ ನಲ್ಲಿ  ಸಹೋದ್ಯೋಗಿಗಳ ಜೊತೆಯಲ್ಲಿ  ಸ್ವಲ್ಪ ಹೆಚ್ಚಾಗೇ ಕುಣಿದಿದ್ದೆ.ಇವು ನನ್ನ ಕುಣಿತದ ಹೈಲೈಟ್ಸ್ .

ವಿಶ್ವ ನೃತ್ಯ ದಿನದ ನೆಪವಾಗಿ ಇವೆಲ್ಲವೂ ನೆನಪಾದವು.

ಈ ದಿನ ನಿಮ್ಮ ಜೀವನದ ಮರೆಯಲಾಗದ ಕುಣಿತವನ್ನು ಹಂಚಿಕೊಳ್ಳಬಹುದು.


#sihijeeviVenkateshwara 

#dance Dance + india Dancer Mani Gbd #dancechallenge #dancereels #dancers #dancelife #dancing #dancelover #dancevideo #dancedancedance #dabceday #dancestudio #danceschool

28 ಏಪ್ರಿಲ್ 2025

ಕೇಸರಿ ಟೋಪಿ...ಹನಿಗವನ




 ಮೊದಲೇ ಸುಮ್ಮನಿರಲ್ಲ ನಾವು  ಕೋಹ್ಲಿ 

ಅಭಿಮಾನಿಗಳು ಈಗ ಇನ್ನೂ ಹೆಚ್ಚು 

ಮಾಡ್ತೇವೆ  ಸದ್ದು|

ಕಾರಣ   ಅತಿ ಹೆಚ್ಚು ರನ್ ಹೊಡೆದದ್ದಕ್ಕೆ 

ಸಿಕ್ಕಿದೆಯಲ್ಲ ನಮ್ಮ ಕಿಂಗ್ ಗೆ 

ಟೋಪಿ (purple cap)ನೇರಳೆ ಬಣ್ಣದ್ದು|

ತೃಪ್ತಿಕರವಾದ ಜೀವನ ನಮ್ಮದಾಗಲಿ..

 

ತೃಪ್ತಿಕರವಾದ ಜೀವನ ನಮ್ಮದಾಗಲಿ..


ಮಾನವನ ಗುಣವೇ ಹಾಗೆ.ಇಷ್ಟು ಇದ್ದರೆ ಮತ್ತಷ್ಟು ಬೇಕು.ಮತ್ತಷ್ಟು ಬಂದರೆ ಮಗದೊಷ್ಟು ಬೇಕು ಎಂಬ ಮಹಾದಾಸೆ ಬೆಳೆಯುತ್ತಲೇ ಇರುತ್ತದೆ. ಇರುವುದಲ್ಲೇ ತೃಪ್ತಿಯಿಂದ ಜೀವಿಸುವವರು ಬಲು ವಿರಳ.ಅತಿಯಾಸೆಯಿಂದ ಅತಿಯಾಗಿ ಪಡೆಯಲು ಹೋಗಿ ಪೀಕಲಾಟಕ್ಕೆ ಸಿಲುಕುವವರನ್ನು ಎಲ್ಲೆಡೆ ಕಾಣುತ್ತೇವೆ. ಅಂತದೇ ವ್ಯಕ್ತಿಯ ಕಥೆ ಓದಿ. ಭಕ್ತನೊಬ್ಬ ಭಗವಂತನನ್ನು ಪ್ರಾರ್ಥಿಸಿ "ತನಗೆ ಬೇಕಾದುದೆಲ್ಲವನ್ನು ತಾನು ಕೇಳಿದ ಒಡನೆ ದೊರಕಬೇಕು ಮತ್ತು ನಾನು ಹೇಳಿದ ಕೆಲಸಗಳು ತಾನು ಹೇಳಿದ ತಕ್ಷಣ ಜರುಗಬೇಕು ಹಾಗೆ ನಡೆಸಿ ಕೊಡುವ ಒಬ್ಬನನ್ನು ನನಗೆ ವರವಾಗಿ ಕರುಣಿಸು"ಎಂದು ಬೇಡಿದ.ಭಗವಂತ ಹೇಳಿದ "ನೋಡು ಆಲೋಚನೆ ಮಾಡು ನಾನು ನಿನಗೆ ವರವನ್ನು ಕೊಡುವೆ ಅದರ ಫಲಾ ಫಲಗಳನ್ನು ನೀನು ಅನುಭವಿಸುವುದಕ್ಕೆ ತಯಾರಿದ್ದರೆ ನಿನಗೆ ನಾನು ವರವನ್ನು ಕೊಡುತ್ತೇನೆ". ಭಕ್ತನು ಬಹಳ ಸಂತೋಷದಿಂದ ಆಗಲಿ ಎಂದ. ಭಗವಂತನು ಅವನ ಜೊತೆಗೆ ಒಂದು ಭೂತವನ್ನು ಕಳುಹಿಸಿದನು.


ಭಕ್ತನಿಗೆ   ಖುಷಿಯೋ ಖುಷಿ. ಆ ಭೂತಕ್ಕೆ ನನಗೆ ಒಂದು ದೊಡ್ಡ ಅರಮನೆ ಬೇಕು ಎಂದಾಗ ಆ ಭೂತ ತಕ್ಷಣ ಅವನಿಗೆ ಒಂದು ಅರಮನೆಯನ್ನು ಕಟ್ಟಿಸಿತು. ನನಗೆ ಪಂಚ ಭಕ್ಷ ಪರಮಾನ್ನ ಬೇಕು ಅಂದಾಗ ಅದು ಅವನ ಮುಂದೆ ಬಂತು. ನನಗೆ ಮುತ್ತು, ವಜ್ರ ಬಂಗಾರ ಒಡವೆಗಳು ಬೇಕು ಅಂದಾಗ ಅವುಗಳೂ ಅವನ ಮುಂದೆ ಪ್ರತ್ಯಕ್ಷ ವಾದವು. ಆದರೆ ಆ ಭೂತ ಭಕ್ತನಿಗೆ ಒಂದಾದ ಮೇಲೆ ಒಂದು ಕೆಲಸ ಕೊಡು ಮತ್ತು ಕೊಡುತ್ತಲೇ ಇರಬೇಕು ನನಗೆ ಸುಮ್ಮನೆ ಇರಲು ಸಾಧ್ಯವಿಲ್ಲ ನೀನು ನನಗೆ ಒಂದಾದ ಮೇಲೆ ಒಂದು ಕೆಲಸ ಕೊಡುತ್ತಿರಲೇಬೇಕು ಎಂದಾಗ ಈ ಭಕ್ತನಿಗೆ ಏನು ಮಾಡುವುದೆಂದು ತಿಳಿಯಲಿಲ್ಲ. ಭಕ್ತನಿಗೆ ಬೇರೆ ಯಾವ ಕೆಲಸವೂ ಮಾಡಲು ಆ ಭೂತ ಬಿಡದೆ ನೀನು ನನಗೆ ಪುರುಸೊತ್ತಿಲ್ಲದೆ ಕೆಲಸ ಕೊಡುತ್ತಿರಬೇಕು ಇಲ್ಲದಿದ್ದರೆ ನಿನ್ನನ್ನೇ ನಾನು ತಿಂದು ಮುಗಿಸಿ ಬಿಡುವೆ ಎಂದು ಹೆದರಿಸಿತು. ಆ ಭಕ್ತ ಊಟ ಮಾಡುವುದಕ್ಕೂ  ಬೇರೆ ಏನು ಕೆಲಸ ಮಾಡುವುದಕ್ಕೂ ಈ ಭೂತ ಬಿಡಲಿಲ್ಲ. ಆಗ ಆ ಭಕ್ತನಿಗೆ ತಾನು ಅದು ಬೇಕು ಇದು ಬೇಕು ಎಂದು ಭಗವಂತನನ್ನು ಕೇಳಿದ್ದು ತನಗೆ ಕಷ್ಟ ವಾಯಿತು ಎಂದು ಮತ್ತೆ ಭಗವಂತನನ್ನು ಪ್ರಾರ್ಥಿಸಿದ. "ದಯವಿಟ್ಟು ಈ ಭೂತದಿಂದ ನನಗೆ ಬಿಡುಗಡೆ ಕೊಡಿಸು. ಈ ಭೂತಕ್ಕೆ ಕೆಲಸ ಹೇಳುವುದು ನನಗೆ ಅಸಾಧ್ಯ ನನಗೆ ಏನು ಬೇಡ ಈಗ ನನಗಿರುವುದೇ ಸಾಕು" ಎಂದನು. ಆಗ ಭಗವಂತ ಆ ಭೂತವನ್ನು ಕರೆದು "ನೋಡು ಅಲ್ಲಿ ನಿಂತಿರುವ ನಾಯಿಯ ಬಲವನ್ನು ನೆಟ್ಟಗೆ ಮಾಡು" ಎಂದು ಹೇಳಿ ಆ ಭಕ್ತನನ್ನ್ನುಭೂತದ ಕಷ್ಟದಿಂದ ಪಾರು ಮಾಡಿದನು.


ಭಗವಂತ ನಮಗೇನು ಬೇಕು ಎಂದು ಅರ್ಥಮಾಡಿಕೊಂಡು ಕೊಡಬೇದ್ದನ್ನು ಈಗಾಗಲೇ ಕೊಟ್ಟಿರುವನು. ಇದರ ಜೊತೆಗೆ ಬೆಲೆಕಟ್ಟಲಾಗದ ಅಮೂಲ್ಯವಾದ ಕಾಯ ನೀಡಿ ಸೂಕ್ತವಾದ ಕಾಯಕ ಮಾಡಲು ಹೇಳಿರುವನು. ಅದಕ್ಕೆ ನಾವು ಅವನಿಗೆ ಸದಾ ಕೃತಜ್ಞತೆಯಿಂದ ಇದ್ದು ಇರುವುದರಲ್ಲೇ ತೃಪ್ತಿಕರವಾಗಿ ಜೀವನ ಸಾಗಿಸುವ ಕಲೆಯನ್ನು ರೂಢಿಸಿಕೊಂಡು ಬಾಳಬೇಕು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು.   

26 ಏಪ್ರಿಲ್ 2025

ಇರುವುದೇ ವರವು.

 


ಇರುವುದೇ ವರವು.


ನಾವು ಇಲ್ಲಿ ಸಂಪತ್ತನ್ನು ಹುಡುಕುತ್ತಿದ್ದರೆ ಅನೇಕರು  ಆರೋಗ್ಯವನ್ನು ಹುಡುಕುತ್ತಿದ್ದಾರೆ.


ನಾವು ಇಲ್ಲಿ ಆರೋಗ್ಯವನ್ನು ಹುಡುಕುತ್ತಿದ್ದರೆ ಬಹುತೇಕರು ಮರಣ ಹೊಂದಿದ್ದಾರೆ.


ನಾವು ಅಧಿಕಾರವನ್ನು ಹುಡುಕುತ್ತಿದ್ದರೆ  ಕೆಲವರು ಅದನ್ನು ಪಡೆದುಕೊಂಡು  ಶಕ್ತಿಹೀನರಾಗಿದ್ದಾರೆ.


ನಾವು  ಫ್ಯಾನ್ಸಿ ಕಾರನ್ನು ಕೊಂಡು  ಓಡಿಸಲು ಬಯಸುತ್ತಿರುವಾಗ  ಅಲ್ಲಾರೋ  ಕಾರು ಅಪಘಾತದಲ್ಲಿ ಸಾಯುತ್ತಿದ್ದಾರೆ.


ನಾವು  ಭೂಮಿಯಿಂದ ಮೇಲಕ್ಕೆ ಹೊಸ ಮಹಲುಗಳನ್ನು ಕಟ್ಟುವಾಗ  ಕೆಲವರು  ಭೂಮಿಯ ಕೆಳಗೆ ಹೊಸ ಸಮಾಧಿಯನ್ನು ಅಗೆಯುತ್ತಿದ್ದಾರೆ.


ನಾವು  ಆಹಾರವನ್ನು ಕಸದ ಬುಟ್ಟಿಗೆ ಎಸೆದು ಪೋಲು ಮಾಡುವಾಗ ಬೇರೊಬ್ಬರು ತಿನ್ನಲು ಅಗಳು ಅನ್ನ  ಹುಡುಕುತ್ತಿದ್ದಾರೆ.


ನಾವು ನಮ್ಮ  ಸ್ಥಿತಿಯನ್ನು ಉತ್ತಮ ಪಡಿಸಲು ಭಗವಂತನನ್ನು ಕೇಳುವಾಗ  ಬೇರೊಬ್ಬರು ನಮ್ಮ ಸ್ಥಿತಿಗೆ ಬರಲು ಪ್ರಾರ್ಥಿಸುತ್ತಿದ್ದಾರೆ.


 ನಾವು   ಹೆರಿಗೆಯ ಆಚರಣೆ ಮಾಡುವಾಗ  ಅಲ್ಲಾರೋ ಮಸಣದಲ್ಲಿ  ಕಣ್ಣೀರಿಡುತ್ತಿದ್ದಾರೆ.


ನಾವು  ಸಹಜವಾಗಿ ಮೂತ್ರ ವಿಸರ್ಜಿಸುವಾಗ  ಅಥವಾ ನೀರು ಕುಡಿಯುವಾಗ  ಮತ್ತಾರೋ ಅದೇ ಉದ್ದೇಶಕ್ಕಾಗಿ ಪೈಪ್ ಬಳಸುತ್ತಿದ್ದಾರೆ.


ಇರುವುದೇ ವರವೆಂದು ಅರಿತು ಸಿಹಿಜೀವಿಗಳಾಗುವುದನ್ನು ಮರೆತು ಇಲ್ಲದಿರುವುದರ ಬಗ್ಗೆ ಕೊರಗಿ ಮರುಗುತ್ತಿದ್ದಾರೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು