20 ಜೂನ್ 2026

**ಕಾಯಕವೇ ಕೈಲಾಸವೆಂದು ನಂಬಿದ 'ಜಂಗಮ ಶಿಕ್ಷಕ': ಎಂ. ಶಿವಕುಮಾರ್ ಚಿಕ್ಕಬೆಳ್ಳಾವಿ**

 




ಸರಳ ಸಜ್ಜನಿಕೆಯ ಸಹೃದಯಿಯಾಗಿ, ನಿಷ್ಠಾವಂತ ಶಿಕ್ಷಕರಾಗಿ, ಸಮಾಜ ಸೇವಕರಾಗಿ ಹಾಗೂ ತುಮಕೂರು ತಾಲೂಕಿನ ಸಾಂಸ್ಕೃತಿಕ-ಸಾಹಿತ್ಯಕ ರಾಯಭಾರಿಯಾಗಿ ನಮ್ಮೆಲ್ಲರೊಡನೆ ಬೆರೆತಿರುವ ಆತ್ಮೀಯ ಮಿತ್ರರಾದ ಶ್ರೀ ಎಂ. ಶಿವಕುಮಾರ್ ಚಿಕ್ಕಬೆಳ್ಳಾವಿ ಅವರ ಬದುಕು ಒಂದು ತೆರೆದ ಪುಸ್ತಕ. ಕೇವಲ ಅಕ್ಷರ ಕಲಿಸುವ ಮೇಷ್ಟ್ರಾಗಿ ಮಾತ್ರ ಉಳಿಯದೆ, ಸಮಾಜಮುಖಿ ಚಿಂತನೆಗಳ ಮೂಲಕ 'ಜಂಗಮ ಶಿಕ್ಷಕ'ರೆಂದೇ ನಾಡಿನಲ್ಲಿ ಗುರುತಿಸಿಕೊಂಡಿರುವ ಅವರು ೬೮ನೇ ವಸಂತಕ್ಕೆ ಕಾಲಿಡುತ್ತಿರುವ ಈ ಸುಸಂದರ್ಭದಲ್ಲಿ, ಅವರ ಆದರ್ಶಮಯ ಬದುಕಿನ ಸಾಧನೆಗಳನ್ನು ಮೆಲುಕು ಹಾಕುವುದು ನನ್ನಂತಹ ಒಡನಾಡಿಗಳಿಗೆ ಹೆಮ್ಮೆಯ ಸಂಗತಿ.

೧೯೫೭ರ ಡಿಸೆಂಬರ್ ೨೦ರಂದು ತುಮಕೂರು ತಾಲೂಕಿನ ಬೆಳ್ಳಾವಿ ಹೋಬಳಿಯ ಚಿಕ್ಕಬೆಳ್ಳಾವಿ ಗ್ರಾಮದಲ್ಲಿ ಶ್ರೀ ಮುರುಡಪ್ಪ ಮತ್ತು ಶ್ರೀಮತಿ ದೇವಮ್ಮ ದಂಪತಿಯ ಪುತ್ರನಾಗಿ ಜನಿಸಿದ ಶಿವಕುಮಾರ್, ಬಾಲ್ಯದಿಂದಲೇ ಹಳ್ಳಿಯ ಮಣ್ಣಿನ ಗುಣವಾದ ಕಾಯಕನಿಷ್ಠೆಯನ್ನು ಮೈಗೂಡಿಸಿಕೊಂಡವರು. ಬಿ.ಎ., ಬಿ.ಇಡಿ., ಡಿ.ಇಡಿ., ಮತ್ತು ಕನ್ನಡದಲ್ಲಿ ಎಂ.ಎ. ಸ್ನಾತಕೋತ್ತರ ಪದವಿಗಳನ್ನು ಪಡೆದ ಇವರು, ಶಿಕ್ಷಣವನ್ನೇ ತಮ್ಮ ಉಸಿರಾಗಿಸಿಕೊಂಡರು. ೧೯೮೬ರಲ್ಲಿ ಖಾಸಗಿ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿ, ೧೯೯೦ರಲ್ಲಿ ಹೆಬ್ಬೂರು ಹೋಬಳಿಯ ಲಿಂಗಾಪುರ ಕಿರಿಯ ಪ್ರಾಥಮಿಕ ಶಾಲೆಯ ಸರ್ಕಾರಿ ಶಿಕ್ಷಕರಾಗಿ ಸೇವೆಗೆ ಸೇರಿದರು. ಅಲ್ಲಿ ಅವರು ಕೇವಲ ಶಾಲಾ ಮಕ್ಕಳಿಗಷ್ಟೇ ಅಲ್ಲ, ಇಡೀ ಗ್ರಾಮಕ್ಕೆ ಅಕ್ಷರ ಜ್ಞಾನ ಉಣಬಡಿಸಿದರು. ೧೯೯೩ರ ಸಾಕ್ಷರತಾ ಆಂದೋಲನದಲ್ಲಿ ಆರು ತಿಂಗಳ ಕಾಲ ಅದೇ ಗ್ರಾಮದಲ್ಲಿ ವಾಸ್ತವ್ಯ ಹೂಡಿ, ರಾತ್ರಿ ವೇಳೆಯಲ್ಲಿ ವಯಸ್ಕರಿಗೆ ಪಾಠ ಮಾಡಿ ಲಿಂಗಾಪುರವನ್ನು 'ತುಮಕೂರು ತಾಲೂಕಿನ ಪ್ರಪ್ರಥಮ ಸಂಪೂರ್ಣ ಸಾಕ್ಷರತಾ ಗ್ರಾಮ'ವನ್ನಾಗಿ ಮಾಡಿದ ಅವರ ಛಲ ಮತ್ತು ಸೇವಾಮನೋಭಾವ ನಿಜಕ್ಕೂ ಅನನ್ಯ. ಈ ಸಾಧನೆಗಾಗಿ ಅವರು ಜಿಲ್ಲಾಡಳಿತದಿಂದ ಪುರಸ್ಕೃತರಾದರು.

ಶಿವಕುಮಾರ್ ಅವರ ಬದುಕಿನಲ್ಲಿ ಸಾಹಿತ್ಯ ಮತ್ತು ಸಂಘಟನೆ ಎರಡು ಕಣ್ಣುಗಳಿದ್ದಂತೆ. ಬೆಳ್ಳಾವಿ ಹೋಬಳಿ ಕಸಾಪ ಅಧ್ಯಕ್ಷರಾಗಿ, ತದನಂತರ ತುಮಕೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಅವರು ಮಾಡಿರುವ ಸೇವೆ ಅಪಾರ. ಅನೇಕ ತಾಲೂಕು, ಹೋಬಳಿ ಹಾಗೂ ನಗರ ಸಮ್ಮೇಳನಗಳನ್ನು ಅತ್ಯಂತ ಯಶಸ್ವಿಯಾಗಿ ಸಂಘಟಿಸಿ, 'ಶಾಲೆಗೊಂದು ಸಾಹಿತ್ಯ ದೀವಿಗೆ'ಯಂತಹ ವಿನೂತನ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಜನತೆಯನ್ನು ಕನ್ನಡ ಸಾಹಿತ್ಯದತ್ತ ಸೆಳೆದಿದ್ದಾರೆ. ಸ್ವತಃ ಉತ್ತಮ ಬರಹಗಾರರಾಗಿರುವ ಅವರು 'ಅಕ್ಷರ ಚಿಗುರು', 'ಆಧುನಿಕ ವಚನಗಳು', 'ವರದಕ್ಷಿಣೆ', 'ದುಷ್ಟಟಗಳ ಜೋಳಿಗೆ'ಯಂತಹ ಕೃತಿಗಳನ್ನು ನೀಡಿದ್ದಲ್ಲದೆ, 'ಬೆಳ್ಕಾಮೆ', 'ಕಲ್ಪಗಂಗಾ', 'ಕಲ್ಪನಿಧಿ' ಮುಂತಾದ ಮೌಲ್ಯಯುತ ಸ್ಮರಣ ಸಂಚಿಕೆಗಳ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕೇವಲ ಸಾಹಿತ್ಯವಷ್ಟೇ ಅಲ್ಲ, ಯೌವನದಲ್ಲಿ ಪೌರಾಣಿಕ ನಾಟಕಗಳಲ್ಲಿ ನಟಿಸಿ ರಂಗಭೂಮಿಗೆ ಹಾಗೂ ರಾಜ್ಯಮಟ್ಟದ ಖೋ-ಖೋ ಕ್ರೀಡಾಪಟುವಾಗಿ ಕ್ರೀಡಾಕ್ಷೇತ್ರಕ್ಕೂ ತಮ್ಮ ಕೊಡುಗೆ ನೀಡಿದ್ದಾರೆ.

ಇವೆಲ್ಲಕ್ಕಿಂತ ಮಿಗಿಲಾಗಿ ನನ್ನ ಮನಸ್ಸನ್ನು ತಟ್ಟುವ ಅವರ ಶ್ರೇಷ್ಠ ಗುಣವೆಂದರೆ ಅವರ 'ದಾಸೋಹ' ಪ್ರಜ್ಞೆ. ತುಮಕೂರಿನ ಸಿದ್ದಗಂಗಾ ಮಠದ ಪರಮಪೂಜ್ಯ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಆದರ್ಶಗಳನ್ನು ಚಾಚೂತಪ್ಪದೆ ಪಾಲಿಸುತ್ತಿರುವ ಅವರು, ೧೯೭೫ರಿಂದಲೇ ತಮ್ಮ ಮನೆಯಲ್ಲಿ ಅನೇಕ ಬಡ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿ, ಅನ್ನ ಮತ್ತು ಅಕ್ಷರ ಕೊಡಿಸುತ್ತಾ ಬಂದಿದ್ದಾರೆ. ಅವರ ಧರ್ಮಪತ್ನಿಯವರ ಸಂಪೂರ್ಣ ಬೆಂಬಲದೊಂದಿಗೆ ತುಮಕೂರಿನ ಶಾಂತಿನಗರದಲ್ಲಿರುವ ಅವರ 'ಶರಣ ಕುಟೀರ'ವು ಇಂದಿಗೂ ತ್ರಿವಿಧ ದಾಸೋಹದ ಪವಿತ್ರ ತಾಣವಾಗಿರುವುದು ನಮ್ಮ ಸಮಾಜಕ್ಕೆ ದೊಡ್ಡ ಮಾದರಿ.

ರಾಷ್ಟ್ರೀಯ ಬಸವದಳ ಮತ್ತು ಶರಣ ಸಾಹಿತ್ಯ ಪರಿಷತ್ತಿನಲ್ಲಿ ಸಕ್ರಿಯರಾಗಿ ಶರಣರ ವಚನ ಸಂದೇಶಗಳನ್ನು ಮನೆ-ಮನೆಗೆ ತಲುಪಿಸುತ್ತಿರುವ ಈ 'ನುಡಿ ಸೇವಕ'ನಿಗೆ 'ಜಿಲ್ಲಾ ಉತ್ತಮ ಶಿಕ್ಷಕ', 'ಜನ ಮೆಚ್ಚಿದ ಶಿಕ್ಷಕ', 'ಆದರ್ಶ ಶರಣ ದಂಪತಿಗಳು', 'ಬಸವ ಸೇವಾ ಪ್ರಶಸ್ತಿ' ಹಾಗೂ 'ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ'ಗಳು ಅರಸಿ ಬಂದಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ. ಅರವತ್ತೆಂಟರ ಹರೆಯದಲ್ಲೂ ಸಮಾಜಮುಖಿ ಚಿಂತಕನಾಗಿ, ಯುವಕರಂತೆ ಕ್ರಿಯಾಶೀಲರಾಗಿರುವ ನಮ್ಮೆಲ್ಲರ ಪ್ರೀತಿಯ ಶಿವಕುಮಾರ್ ಚಿಕ್ಕಬೆಳ್ಳಾವಿ ಅವರಿಗೆ ಆಯುರಾರೋಗ್ಯ, ಸುಖ-ಶಾಂತಿ ಸದಾ ಲಭಿಸಲಿ, ಅವರ ಈ ಸಮಾಜಸೇವೆ ಹೀಗೆಯೇ ನಿರಂತರವಾಗಿ ಸಾಗಲಿ ಎಂದು ತುಂಬು ಹೃದಯದಿಂದ ಹಾರೈಸುತ್ತೇನೆ.


**ಸಿಹಿಜೀವಿ ವೆಂಕಟೇಶ್ವರ**

ಶಿಕ್ಷಕರು ಹಾಗೂ ಸಾಹಿತಿಗಳು

ತುಮಕೂರು

9900925529

15 ಜೂನ್ 2026

ಪರಿಸರ ಸೇವೆಯಲ್ಲಿ ತೊಡಗಿದ ನಾಡಿಗ್ ಕುಟುಂಬ



 ಪರಿಸರ ಸೇವೆಯಲ್ಲಿ ತೊಡಗಿದ ನಾಡಿಗ್ ಕುಟುಂಬ: ಪ್ರಕೃತಿ ಸಂರಕ್ಷಣೆಯ ಅಪೂರ್ವ ಯಶೋಗಾಥೆ
ಇಂದಿನ ನಗರೀಕರಣ, ಜಾಗತಿಕ ತಾಪಮಾನ ಮತ್ತು ಮಾಲಿನ್ಯದ ಅಬ್ಬರಕ್ಕೆ ಸಿಲುಕಿ ಪ್ರಕೃತಿಯ ಸಮತೋಲನ ಸಂಪೂರ್ಣವಾಗಿ ಏರುಪೇರಾಗಿದೆ. ಕಾಂಕ್ರೀಟ್ ಕಾಡುಗಳ ಮಧ್ಯೆ ಹಕ್ಕಿಗಳ ಚಿಲಿಪಿಲಿ ಕಲರವ ಮಾಯವಾಗುತ್ತಿದೆ. ಇಂತಹ ಆತಂಕಕಾರಿ ದಿನಗಳಲ್ಲಿ, ಮುಂದಿನ ಪೀಳಿಗೆಗೆ ಸ್ವಾಸ್ಥ್ಯ ಪರಿಸರವನ್ನು ನೀಡಬೇಕಾದುದು ನಮ್ಮೆಲ್ಲರ ಜವಾಬ್ದಾರಿ ಎಂಬುದನ್ನು ಅರಿತು, ಯಾವುದೇ ಪ್ರಚಾರದ ಹಪಾಹಪಿಯಿಲ್ಲದೆ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಪರಿಸರ ಹಾಗೂ ಪಕ್ಷಿ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದೆ ತುಮಕೂರಿನ ಊರುಕೆರೆಯ 'ನಾಡಿಗ್ ಕುಟುಂಬ'. ಬರಹಗಾರರು ಹಾಗೂ ಪರಿಸರವಾದಿಗಳೂ ಆದ ಡಾ. ಪ್ರಕಾಶ್ ಕೆ. ನಾಡಿಗ್ ಮತ್ತು ಅವರ ಪುತ್ರ ಅಭಯ್ ಎಸ್. ನಾಡಿಗ್ ಅವರ ಪರಿಸರ ಪ್ರೇಮ ಇಡೀ ಸಮಾಜಕ್ಕೆ ಮಾದರಿಯಾಗಿದೆ.
ಬಾಲ್ಯದ ಪ್ರಕೃತಿ ಪ್ರೇಮ ಮತ್ತು ಗುಬ್ಬಚ್ಚಿ ಸಂರಕ್ಷಣೆಯ ಪ್ರೇರಣೆ
ಡಾ. ಪ್ರಕಾಶ್ ಕೆ. ನಾಡಿಗ್ ಅವರ ಬಾಲ್ಯ ಮಲೆನಾಡಿನ ಶಿವಮೊಗ್ಗದಲ್ಲಿ ಕಳೆಯಿತು. ಅಂದಿನಿಂದಲೇ ಪ್ರಕೃತಿ ಮತ್ತು ಹಕ್ಕಿಗಳನ್ನು ಅತ್ಯಂತ ಹತ್ತಿರದಿಂದ ನೋಡುತ್ತಾ ಬೆಳೆದ ಅವರಿಗೆ ಪರಿಸರದ ಮೇಲೆ ಅಪಾರ ಪ್ರೀತಿ ಇತ್ತು. ಕಾಲಕ್ರಮೇಣ ಅವರು ಉದ್ಯೋಗ ನಿಮಿತ್ತ ತುಮಕೂರಿನ ಊರುಕೆರೆಯಲ್ಲಿ ನೆಲೆಸಿದರು.
೨೦೧೦ ರ ಸುಮಾರಿಗೆ ನಮ್ಮ ಸುತ್ತಮುತ್ತಲಿನ ಗುಬ್ಬಚ್ಚಿಗಳ ಸಂತತಿ ತೀವ್ರವಾಗಿ ಕ್ಷೀಣಿಸುತ್ತಿರುವುದನ್ನು ಕಂಡು ಅವರು ತೀವ್ರ ಕಳವಳಗೊಂಡರು. ಈ ಸಂದರ್ಭದಲ್ಲಿ ಅವರಿಗೆ ನಾಸಿಕ್‌ನ ಖ್ಯಾತ 'ಸ್ಪ್ಯಾರೋ ಮ್ಯಾನ್' ಎಂದೇ ಪ್ರಸಿದ್ಧರಾದ ಮೊಹಮ್ಮದ್ ದಿಲಾವರ್ ಅವರ ಗುಬ್ಬಚ್ಚಿ ಸಂರಕ್ಷಣೆಯ ಕಾರ್ಯಗಳು ದೊಡ್ಡ ಪ್ರೇರಣೆ ನೀಡಿದವು. ಅಂದಿನಿಂದ ತಾವೂ ಕೂಡ ಗುಬ್ಬಚ್ಚಿ ಸಂತತಿಯನ್ನು ಉಳಿಸಲು ಪಣತೊಟ್ಟ ಪ್ರಕಾಶ್ ಅವರು, ತಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನೇ ಅದಕ್ಕಾಗಿ ಸಜ್ಜುಗೊಳಿಸಿದರು.
ಮನೆಯನ್ನೇ ಪಕ್ಷಿಧಾಮವಾಗಿಸಿದ ಅಪೂರ್ವ ಪ್ರಯತ್ನ
ಗುಬ್ಬಚ್ಚಿಗಳನ್ನು ಆಕರ್ಷಿಸಲು ಡಾ. ಪ್ರಕಾಶ್ ಅವರು ತಮ್ಮ ಮನೆಯ ಕಿಟಕಿಗಳ ಸಜ್ಜಾಗಳ ಕೆಳಗೆ, ವರಾಂಡದಲ್ಲಿ ಮತ್ತು ಮನೆಯ ಸುತ್ತಮುತ್ತ ಕೃತಕ ಗೂಡುಗಳನ್ನು ನಿರ್ಮಿಸಿದರು. ಆರಂಭದಲ್ಲಿ ರಟ್ಟಿನ ಡಬ್ಬಿಗಳಿಂದ ಸಣ್ಣ ರಂಧ್ರಗಳನ್ನು ಮಾಡಿ ಗೂಡುಗಳನ್ನು ಕಟ್ಟಿದ ಅವರು, ನಂತರ ಮರದ ಗೂಡುಗಳು ಹಾಗೂ ಮಣ್ಣಿನ ಗೂಡುಗಳನ್ನು ಅಳವಡಿಸಿದರು. ಆಹಾರವಾಗಿ ಸಿರಿಧಾನ್ಯಗಳು, ಅಕ್ಕಿ, ನವಣೆ ಹಾಗೂ ರಾಗಿ ಕಾಳುಗಳನ್ನು ನಿರಂತರವಾಗಿ ನೀಡಲಾರಂಭಿಸಿದರು.
ಇದರ ಪರಿಣಾಮವಾಗಿ, ಇಂದು ಅವರ ಮನೆಯ ಪರಿಸರ ಗುಬ್ಬಚ್ಚಿಗಳ ಪ್ರಮುಖ ಕೇಂದ್ರಸ್ಥಾನವಾಗಿದೆ. ಪ್ರಸ್ತುತ ಇವರ ಮನೆಯಲ್ಲಿ ಸುಮಾರು ೪೦ ಕ್ಕೂ ಹೆಚ್ಚು ಗುಬ್ಬಚ್ಚಿಗಳು ವಾಸಿಸುತ್ತಿದ್ದು, ನಿರಂತರವಾಗಿ ಮೊಟ್ಟೆಯಿಟ್ಟು ಮರಿ ಮಾಡುತ್ತಿವೆ. ಬೆಳಿಗ್ಗೆ ಮತ್ತು ಸಂಜೆ ನೂರಾರು ಗುಬ್ಬಚ್ಚಿಗಳ ಚಿಲಿಪಿಲಿ ಕಲರವದಿಂದ ಇಡೀ ಮನೆ ತುಂಬಿರುತ್ತದೆ. ಕೇವಲ ಗುಬ್ಬಚ್ಚಿಗಳಷ್ಟೇ ಅಲ್ಲದೆ ಮಡಿವಾಳ ಹಕ್ಕಿ, ಮೈನಾ, ಬುಲ್‌ಬುಲ್ ಸೇರಿದಂತೆ ವಿವಿಧ ಜಾತಿಯ ಪಿಕ್ಚಳಾರಗಳು (ಪಕ್ಷಿಗಳು) ಇಲ್ಲಿ ಗೂಡುಕಟ್ಟಿ ಆಶ್ರಯ ಪಡೆದಿದ್ದು, ಇಡೀ ಮನೆ ಒಂದು ಸಣ್ಣ ಪಕ್ಷಿಧಾಮದಂತೆ ಗೋಚರಿಸುತ್ತದೆ.
'ಗುಬ್ಬಚ್ಚಿ ಪರಿಸರ ಸಂಘ' ಮತ್ತು ಮಕ್ಕಳಲ್ಲಿ ಪರಿಸರ ಜಾಗೃತಿ
ತಂದೆಯ ಈ ಉದಾತ್ತ ಕಾರ್ಯವನ್ನು ನೋಡುತ್ತಾ ಬೆಳೆದ ಅವರ ಪುತ್ರ ಅಭಯ್, ಕೇವಲ ೧೪ ವರ್ಷದ ಪ್ರಾಯದಲ್ಲೇ **'ಗುಬ್ಬಚ್ಚಿ ಪರಿಸರ ಸಂಘ'**ವನ್ನು ಸ್ಥಾಪಿಸಿ ಅದರ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡನು. ಮಿಡ್ಲ್‌ಸ್ಕೂಲ್ ಮತ್ತು ಹೈಸ್ಕೂಲ್ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಈ ಸಂಘವನ್ನು ಮುನ್ನಡೆಸಲಾಗುತ್ತಿದೆ.
• ವಿಶೇಷ ದಿನಾಚರಣೆಗಳು: ವಿಶ್ವ ಪರಿಸರ ದಿನ, ವಿಶ್ವ ಗುಬ್ಬಚ್ಚಿ ದಿನ, ವಿಶ್ವ ಭೂಮಿ ದಿನ, ಓಜೋನ್ ದಿನಗಳಂದು ಮಕ್ಕಳಿಗಾಗಿ ಚಿತ್ರಕಲೆ, ಪ್ರಬಂಧ ಮತ್ತು ಕವನ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.
• ಮಾದರಿ ಬಹುಮಾನಗಳು: ಸ್ಪರ್ಧೆಗಳಲ್ಲಿ ಗೆದ್ದ ಮಕ್ಕಳಿಗೆ ಪ್ಲಾಸ್ಟಿಕ್ ಆಟಿಕೆಗಳ ಬದಲಿಗೆ ಹಕ್ಕಿಗಳಿಗೆ ಆಹಾರ ನೀಡುವ ಡಬ್ಬಿಗಳು, ಕೃತಕ ಹಕ್ಕಿಗೂಡುಗಳು ಮತ್ತು ಸಸಿಗಳನ್ನು ಬಹುಮಾನವಾಗಿ ನೀಡಲಾಗುತ್ತದೆ.
• ಕಾರ್ಯಾಗಾರಗಳು: ಬಳಸಿದ ತಂಪು ಪಾನೀಯಗಳ ಪ್ಲಾಸ್ಟಿಕ್ ಬಾಟಲಿಗಳು ಮತ್ತು ರಟ್ಟಿನ ಪೆಟ್ಟಿಗೆಗಳನ್ನು ಬಳಸಿ ಹಕ್ಕಿಗಳಿಗೆ 'ಫೀಡರ್' (ಆಹಾರದ ಡಬ್ಬಿ) ಮತ್ತು ಗೂಡುಗಳನ್ನು ಹೇಗೆ ತಯಾರಿಸಬೇಕು ಎಂಬ ಉಚಿತ ಕಾರ್ಯಾಗಾರಗಳನ್ನು ನಡೆಸಿ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ.
• ಬೀಜದುಂಡೆ (Seed Balls) ತಯಾರಿಕೆ: ಪ್ರತಿ ಬೇಸಿಗೆಯಲ್ಲಿ ಸಂಘದ ಮಕ್ಕಳು ಹೊಂಗೆ ಮರದಿಂದ ಉದುರುವ ಬೀಜಗಳನ್ನು ಸಂಗ್ರಹಿಸಿ, ಸಾವಿರಾರು ಬೀಜದುಂಡೆಗಳನ್ನು ತಯಾರಿಸುತ್ತಾರೆ. ಮಳೆಗಾಲದಲ್ಲಿ ಇವುಗಳನ್ನು ಸುತ್ತಮುತ್ತಲಿನ ಕಾಡು ಹಾಗೂ ಬೆಟ್ಟದ ಪ್ರದೇಶಗಳಲ್ಲಿ ಬಿತ್ತುವ ಮೂಲಕ ಹಸಿರೀಕರಣಕ್ಕೆ ಕೊಡುಗೆ ನೀಡುತ್ತಿದ್ದಾರೆ.
ಲಾಕ್‌ಡೌನ್ ಅವಧಿಯ ಸಾಧನೆ: 'ತಾರಸಿ ಮೇಲೆ ತರಹೇವಾರಿ ತರಕಾರಿ'
ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಜನರೆಲ್ಲಾ ಮನೆಯೊಳಗೆ ಕಾಲ ಕಳೆಯಲು ಪರದಾಡುತ್ತಿದ್ದಾಗ, ಪಿಯುಸಿ ವಿದ್ಯಾರ್ಥಿಯಾದ ಅಭಯ್ ವಿಭಿನ್ನವಾಗಿ ಆಲೋಚಿಸಿದನು. ಮಾರುಕಟ್ಟೆಯಲ್ಲಿ ತರಕಾರಿಗಳ ಅಭಾವ ಮತ್ತು ರಾಸಾಯನಿಕಯುಕ್ತ ಆಹಾರದ ಅಡ್ಡಪರಿಣಾಮಗಳನ್ನು ಅರಿತ ಆತ, ಮನೆಯ 23 \times 40 ಅಳತೆಯ ಮುಕ್ತ ತಾರಸಿಯ (Terrace) ಮೇಲೆ ಸಾವಯವ ತರಕಾರಿ ಬೆಳೆಯಲು ಮುಂದಾದನು.
• ಸಾವಯವ ಕೃಷಿ ಪದ್ಧತಿ: ಯಾವುದೇ ರಾಸಾಯನಿಕಗಳನ್ನು ಬಳಸದೆ, ಹಳೆಯ ಬಕೆಟ್‌ಗಳು, ಪ್ಲಾಸ್ಟಿಕ್ ಪಾಟ್‌ಗಳನ್ನು ಸಂಗ್ರಹಿಸಿ ಅದರಲ್ಲಿ ಫಲವತ್ತಾದ ಮಣ್ಣು ತುಂಬಿಸಿ ಕೃಷಿ ಆರಂಭಿಸಿದನು. ಮನೆಗೆ ಹತ್ತಿರವಿದ್ದ ಹಸು ಸಾಕುವವರಿಂದ ಸಗಣಿ ತಂದು, ಮನೆಯ ಹಸಿ ಕಸ ಮತ್ತು ನೆರೆಹೊರೆಯವರ ತರಕಾರಿ ತ್ಯಾಜ್ಯವನ್ನು ಬಳಸಿ ಸ್ವತಃ ಮನೆಯಲ್ಲೇ ಗುಂಡಿ ತೋಡಿ 'ಸಾವಯವ ಗೊಬ್ಬರ' (Compost) ತಯಾರಿಸಿಕೊಂಡನು.
• ಬೆಳೆದ ತರಕಾರಿ ಮತ್ತು ಔಷಧೀಯ ಸಸ್ಯಗಳು: ಟೊಮೇಟೊ, ಸೌತೆಕಾಯಿ, ಸೋರೆಕಾಯಿ, ಆಲೂಗಡ್ಡೆ, ಈರುಳ್ಳಿ, ಮೂಲಂಗಿ, ಹೂಕೋಸು, ಮೆಣಸಿನಕಾಯಿ, ವಿವಿಧ ಸೊಪ್ಪುಗಳು (ದಂಟು, ಹರಿವೆ, ಮೆಂತ್ಯ, ಕೊತ್ತಂಬರಿ, ಪುದೀನಾ, ಕರಿಬೇವು) ಸೇರಿದಂತೆ ನಿಂಬೆ, ದೊಡ್ಡಪತ್ರೆ, ರೋಸ್‌ಮೇರಿ, ರೋಗನಿರೋಧಕ ಶಕ್ತಿಯುಳ್ಳ ತುಳಸಿ ಮುಂತಾದ ಔಷಧೀಯ ಸಸ್ಯಗಳನ್ನು ಅತ್ಯಂತ ಯಶಸ್ವಿಯಾಗಿ ಬೆಳೆದಿದ್ದಾನೆ.
• ಫಲಿತಾಂಶ: ಇಂದು ಅಭಯ್ ತಾರಸಿ ತೋಟದಿಂದ ದಿನನಿತ್ಯದ ಅಡುಗೆಗೆ ಬೇಕಾಗುವ ತರಕಾರಿ ವೆಚ್ಚದಲ್ಲಿ ಅರ್ಧದಷ್ಟು ಹಣ ಉಳಿತಾಯವಾಗುತ್ತಿದ್ದು, ಸಂಪೂರ್ಣವಾಗಿ ರಾಸಾಯನಿಕ ಮುಕ್ತ, ಆರೋಗ್ಯಕರ ಆಹಾರವನ್ನು ಅವರ ಕುಟುಂಬ ಸೇವಿಸುತ್ತಿದೆ.
ಪರಿಸರ ಪ್ರೇಮಿ ಮತ್ತು ಸಮಾಜ ಸೇವಕ ಅಭಯ್
ಅಭಯ್ ಅವರ ಕಾರ್ಯ ಕೇವಲ ತಾರಸಿ ತೋಟ ಅಥವಾ ಹಕ್ಕಿಗಳಿಗೆ ಸೀಮಿತವಾಗಿಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ 'ನೇಚರ್ ಬಾಯ್ಸ್ ಮೈಸೂರು' ಎಂಬ ಖಾತೆಯ ಮೂಲಕ ೯೦೦೦ ಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ಈತ, ಪರಿಸರಾಸಕ್ತರಿಗೆ ಉಚಿತವಾಗಿ ತರಕಾರಿ ಮತ್ತು ಸೊಪ್ಪಿನ ಬೀಜಗಳನ್ನು ಕೊಡುವ ಮೂಲಕ ದೇಶದಾದ್ಯಂತ ಹಸಿರು ಹರಡುತ್ತಿದ್ದಾನೆ.
ಅಷ್ಟೇ ಅಲ್ಲದೆ, ಪ್ರತಿ ಭಾನುವಾರ ತಾರಸಿ ತೋಟದಲ್ಲಿ ಬೆಳೆದ ತರಕಾರಿಗಳನ್ನು ಬಳಸಿ ಮನೆಯಲ್ಲೇ ಅಡುಗೆ ತಯಾರಿಸಿ, ಬೀದಿಬದಿಯ ಭಿಕ್ಷುಕರು, ಪುಟ್ಟ ವ್ಯಾಪಾರಿಗಳು, ನಿರ್ಗತಿಕರು ಮತ್ತು ಅನಾಥರಿಗೆ ಭೋಜನ ಉಣಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾನೆ. ಪರಿಸರ ದಿನಾಚರಣೆಯಂದು ರಸ್ತೆಬದಿಯಲ್ಲಿ ಗಿಡ ನೆಡುವುದು ಮಾತ್ರವಲ್ಲದೆ, ನೆಟ್ಟ ಗಿಡಗಳಿಗೆ ಪ್ರತಿ ಭಾನುವಾರ ನೀರುಣಿಸುವ ಕಾಯಕವನ್ನೂ ಈತ ತನ್ನ ಸ್ನೇಹಿತರೊಂದಿಗೆ ಮಾಡುತ್ತಿದ್ದಾನೆ.
ಮರಗಳ ಸಂರಕ್ಷಣೆ ಮತ್ತು ಡಾ. ಪ್ರಕಾಶ್ ಅವರ ಕೊಡುಗೆ
ಡಾ. ಪ್ರಕಾಶ್ ಕೆ. ನಾಡಿಗ್ ಅವರು ಕೇವಲ ಹಕ್ಕಿಗಳಿಗಷ್ಟೇ ಅಲ್ಲದೆ ಮರಗಳ ಸಂರಕ್ಷಣೆಗೂ ಹೋರಾಡುತ್ತಿದ್ದಾರೆ. ಶಿವಮೊಗ್ಗ ಮತ್ತು ತುಮಕೂರಿನ ಊರುಕೆರೆಯಲ್ಲಿ ಇವರು ಸಾವಿರಕ್ಕೂ ಹೆಚ್ಚು ಮರಗಳನ್ನು ನೆಟ್ಟು ಬೆಳೆಸಿದ್ದಾರೆ. ಇವರು ಬೆಳೆಸಿರುವ ಮರಗಳಲ್ಲಿ ಶೇಕಡಾ ೮೦ ರಷ್ಟು ಹಕ್ಕಿಗಳಿಗೆ ಆಶ್ರಯ ನೀಡುವ 'ಹೊಂಗೆ ಮರಗಳೇ' ಆಗಿರುವುದು ಇವರ ಪರಿಸರ ಪ್ರಜ್ಞೆಗೆ ಸಾಕ್ಷಿ. ಯಾರಾದರೂ ಮರಗಳನ್ನು ಕಡಿಯುವುದು ಅಥವಾ ಪರಿಸರ ಮಾಲಿನ್ಯ ಮಾಡುವುದು ಕಂಡುಬಂದರೆ ತಕ್ಷಣ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿ ಕಾನೂನು ಕ್ರಮ ಜರುಗಿಸುವ ಧೀಮಂತ ವ್ಯಕ್ತಿತ್ವ ಇವರದ್ದಾಗಿದೆ. ಭದ್ರಾವತಿ ಆಕಾಶವಾಣಿಯಲ್ಲಿ ಪರಿಸರ ಜಾಗೃತಿಯ ಅನೇಕ ಯುವವಾಣಿ ಕಾರ್ಯಕ್ರಮಗಳನ್ನು ಇವರು ನೀಡಿದ್ದಾರೆ.
ಸಂದ ಪ್ರಶಸ್ತಿ ಮತ್ತು ಗೌರವಗಳು
ನಾಡಿಗ್ ಕುಟುಂಬದ ಈ ನಿಸ್ವಾರ್ಥ ಪರಿಸರ ಸೇವೆಯನ್ನು ಗುರುತಿಸಿ ರಾಜ್ಯದ ಹಲವು ಪ್ರತಿಷ್ಠಿತ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ:
1. ೨೦೧೮ ರಲ್ಲಿ ಪರಿಸರ ಮತ್ತು ಪ್ರಾಣಿ ಪಕ್ಷಿಗಳ ಮೇಲಿನ ಕಾಳಜಿಗೆ 'ಸಮರ್ಥ ಕನ್ನಡಿಗ ಪ್ರಶಸ್ತಿ'.
2. ೨೦೧೯ ರಲ್ಲಿ ಬೆಂಗಳೂರಿನ ವನ್ಯಜೀವಿ ಸಂಸ್ಥೆ ಮಿಡಿತ ಫೌಂಡೇಶನ್ ವತಿಯಿಂದ 'ರಾಜ್ಯ ಪರಿಸರ ರಕ್ಷಕ ಪ್ರಶಸ್ತಿ'.
3. ಇವುಗಳೊಂದಿಗೆ ಸ್ಥಳೀಯ ಹಲವಾರು ಸಂಘ-ಸಂಸ್ಥೆಗಳು ಡಾ. ಪ್ರಕಾಶ್ ಮತ್ತು ಅಭಯ್ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿವೆ.

"ಬೆಳೆಯುವ ಸಿರಿ ಮೊಳಕೆಯಲ್ಲಿ" ಎಂಬ ಗಾದೆಯಂತೆ, ಇಂದಿನ ಯುವ ಪೀಳಿಗೆ ಮೊಬೈಲ್ ಮತ್ತು ಗೇಮ್ಸ್‌ಗಳಲ್ಲಿ ಮುಳುಗಿರುವಾಗ, ತುಮಕೂರಿನ ಯುವಕ ಅಭಯ್ ತನ್ನ ರಜಾ ಸಮಯವನ್ನು ತರಕಾರಿ ಕೃಷಿ ಮತ್ತು ಪಕ್ಷಿ ಸಂರಕ್ಷಣೆಗೆ ಮೀಸಲಿಟ್ಟಿರುವುದು ಪ್ರತಿಯೊಬ್ಬರಿಗೂ ಮಾದರಿ. ತಂದೆಯ ಮಾರ್ಗದರ್ಶನದಲ್ಲಿ ಇಡೀ ಕುಟುಂಬವೇ ಪ್ರಕೃತಿಯ ಸೇವಕ ರಂತೆ ಬದುಕುತ್ತಿರುವುದು ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಿರುವ ಪ್ರೇರಣೆಯಾಗಿದೆ. ಪ್ರಕೃತಿ ಮತ್ತು ಮಾನವನ ನಡುವಿನ ಈ ಅವಿನಾಭಾವ ಸಂಬಂಧ ಹೀಗೆಯೇ ಮುಂದುವರಿಯಲಿ. ಮುಂಬರುವ ದಿನಗಳಲ್ಲಿ ಇವರ ಪರಿಸರ ಕಾಳಜಿ ಮತ್ತಷ್ಟು ಜನರನ್ನು ತಲುಪಲಿ ಆ ಮೂಲಕ ನಮ್ಮ ಭೂಮಿ ಹಸಿರಾಗಲಿ ಎಂಬುದೇ ಎಲ್ಲರ ಆಶಯ.



ಸಿಹಿಜೀವಿ ವೆಂಕಟೇಶ್ವರ
ಸಾಹಿತಿಗಳು ಹಾಗೂ ಶಿಕ್ಷಕರು
ತುಮಕೂರು
9900925529





 

04 ಮೇ 2026

ಬಹುಮುಖ ಪ್ರತಿಭೆಯ ಕಲಾವಿದ‌ ಬಿ‌ ಎಸ್ ದೇಸಾಯಿ

 


ಬಹುಮುಖ ಪ್ರತಿಭೆಯ ಕಲಾವಿದ‌ ಬಿ‌ ಎಸ್ ದೇಸಾಯಿ




ನಮ್ಮ ನಾಡಿನ ಹಿರಿಯ ಕಲಾವಿದರು ಹಾಗೂ ಛಾಯಾಚಿತ್ರಗಾರರು ಆದ   ಬಿ ಎಸ್ ದೇಸಾಯಿ ರವರಿಗೆ   ಇತ್ತೀಚಿಗೆ ಕರ್ನಾಟಕ ಲಲಿತ ಕಲಾ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕಾರ ಹುಡುಕಿಕೊಂಡು ಬಂದಿದೆ.
ಸರಳ ಸಜ್ಜನ ಮೃದು ಭಾಷಿ  ಬಿ.ಎಸ್. ದೇಸಾಯಿಯವರು ಪ್ರಸ್ತುತ ಹಾಸನದಲ್ಲಿ ನೆಲೆಸಿರುವ ಸಮಕಾಲೀನ ದೃಶ್ಯ ಕಲಾವಿದ. ಮೂಲತಃ ವಿಜಯಪುರ ಜಿಲ್ಲೆಯ ತಾಳಿಕೋಟೆಯವರಾದ ಇವರು  ಚಿತ್ರಕಲೆಯ ಮೂಲಕ ತಮ್ಮ ಬದುಕಿನ ಅರ್ಥವನ್ನು ಕಂಡುಕೊಂಡಿದ್ದಾರೆ.  ಇವರ ಕಲಾ ಪಯಣವು ಪ್ರಕೃತಿಯ ಸೂಕ್ಷ್ಮ ಸಂವೇದನೆಗಳನ್ನು ವೈಯಕ್ತಿಕ ಹಾಗೂ ಸಾರ್ವತ್ರಿಕ ಭಾಷೆಯಾಗಿ ಬಣ್ಣಗಳು ಮತ್ತು ರೂಪಗಳ ಮೂಲಕ ಭಾಷಾಂತರಿಸುವ ದಾಖಲಾಗಿದೆ.

ಇವರ  ಚಿತ್ರಕಲೆಗೆ ಪ್ರಕೃತಿಯೇ (Nature) ಮೂಲ ಸ್ಫೂರ್ತಿ ಮತ್ತು ಕ್ಯಾನ್ವಾಸ್  ಭಾವನೆಗಳನ್ನು ವ್ಯಕ್ತಪಡಿಸುವ ವೇದಿಕೆಯಾಗಿದೆ.  ಹೆಚ್ಚಾಗಿ ಜಲವರ್ಣ (Watercolors) ಮತ್ತು ಪಾರದರ್ಶಕ ಮಾಧ್ಯಮವನ್ನು (Transparent media) ಬಳಸಿ ಚಿತ್ರಗಳನ್ನು ರಚಿಸಲು ಇಷ್ಟಪಡುವ ದೇಸಾಯಿಯವರು ಕೇವಲ ಪ್ರಕೃತಿಯನ್ನು ಯಥಾವತ್ತಾಗಿ ನಕಲು ಮಾಡುವುದಕ್ಕಿಂತ ಅದರ ಆತ್ಮವನ್ನು, ಶಾಂತಿಯನ್ನು  ಚಿತ್ರಗಳಲ್ಲಿ ತರಲು  ಸದಾ ಪ್ರಯತ್ನಿಸುತ್ತಾರೆ. ಇವರ  ವರ್ಣಚಿತ್ರಗಳು ಅಮೂರ್ತ (abstract) ರೂಪಗಳನ್ನು ಹೊಂದಿದ್ದು ಪ್ರಕೃತಿಯಲ್ಲಿನ ಬೆಳಕು, ದೂರದ ದೃಶ್ಯಗಳು, ಮರಗಳು ಮತ್ತು ನೈಸರ್ಗಿಕ ಸೌಂದರ್ಯದ ಆಳವಾದ ಭಾವನೆಗಳನ್ನು ಸೆರೆಹಿಡಿಯುತ್ತವೆ.
ಇವರ ಕಲಾ ಜೀವನದಲ್ಲಿ  ಅಪಾರ ಮೆಚ್ಚುಗೆ ತಂದುಕೊಟ್ಟ ಸರಣಿಯೆಂದರೆ 'ಯೋಗದರ್ಶನ' (Yogadarshana). ಇದು ಸಾಂಪ್ರದಾಯಿಕ ಭಾರತೀಯ ತತ್ವಶಾಸ್ತ್ರ ಮತ್ತು ಆಧುನಿಕ ದೃಶ್ಯ ಭಾಷೆಯ ನಡುವಿನ ಅಂತರವನ್ನು ಕಡಿಮೆ ಮಾಡುವ ಒಂದು ವಿಶಿಷ್ಟ ಪ್ರಯತ್ನವಾಗಿದೆ. ಯೋಗ, ಧ್ಯಾನ ಮತ್ತು ಪ್ರಕೃತಿಯೊಡನೆ ಒಂದಾಗುವ ಪ್ರಕ್ರಿಯೆ  ಕಲೆಯ ಅವಿಭಾಜ್ಯ ಅಂಗ. ಉದಾಹರಣೆಗೆ, ನೀರಿನ ಮೇಲೆ ಪದ್ಮಾಸನ ಹಾಕಿ ಧ್ಯಾನಿಸುವ ಮತ್ತು ಪ್ರಕೃತಿಯೊಂದಿಗೆ ತೇಲುವಂತಹ ಅನುಭವಗಳನ್ನು  ತಮ್ಮ ಕೃತಿಗಳಲ್ಲಿ ಅಳವಡಿಸಿಕೊಂಡಿದ್ದಾರೆ.







ಜಲವರ್ಣದ ಪಾರದರ್ಶಕ ಬಣ್ಣಗಳನ್ನು ಬಳಸಿ ಸೃಷ್ಠಿಸಿರುವ ಚಿತ್ರಗಳು ಹಾಗೂ ತೈಲವರ್ಣದ ಸುಮಾರು 650 ಕ್ಕೂ ಹೆಚ್ಚು ಕಲಾಕೃತಿಗಳು ಇವರ ಕಲಾಭಿವ್ಯಕ್ತಿಗೆ ಸಾಕ್ಷಿಯಾಗಿದೆ. ಉತ್ತಮ ಛಾಯಾಗ್ರಾಹಕರಾಗಿರುವ ದೇಸಾಯಿಯವರು ತಾವು ಭೇಟಿ ನೀಡಿದ್ದ ಜರ್ಮನಿ, ಹಾಲೆಂಡ್, ಬೆಲ್ಜಿಯಂ, ಪ್ಯಾರಿಸ್, ಸ್ವಿಜ್ಜರ್‍ಲ್ಯಾಂಡ್,  ಆಸ್ಟ್ರೀಯಾ  ಮುಂತಾದ  ದೇಶಗಳ ಅದ್ಭುತ ಛಾಯಾಚಿತ್ರಗಳನ್ನು ಸೆರೆಹಿಡಿದ್ದಾರೆ.
ಕೆಲವು ಚಿತ್ರಕಲಾ ಪ್ರದರ್ಶನ ಮತ್ತು ಕಾರ್ಯಗಾರದಲ್ಲಿ ಭಾಗವಹಿಸಿ ಪಡೆದ ಅನುಭವದೊಂದಿಗೆ  ಬೆಂಗಳೂರು, ಮಂಗಳೂರು, ಚೆನ್ನೈ, ಹೈದರಾಬಾದ್, ಪಾಂಡಿಚೆರಿ, ಮುಂಬೈ,ವಾರಣಾಸಿ  ಹಾಗೂ ದೆಹಲಿ  ಮುಂತಾದ ಕಡೆಗಳಲ್ಲಿ ತಮ್ಮ ಚಿತ್ರಕಲೆಯನ್ನು ಪ್ರದರ್ಶಿಸಿದ್ದಾರೆ.
ಇವರು ಕರ್ನಾಟಕ ಲಲಿತ ಕಲಾ ಅಕಾಡೆಮಿಯ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ ಇದರ  ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ತಮ್ಮ ಅವಧಿಯಲ್ಲಿ ಹಾಸನದಲ್ಲಿ ಅಕಾಡೆಮಿಯ ಹಲವು ಕಾರ್ಯಕ್ರಮ ಸಂಘಟಿಸಿ ನಗರದಲ್ಲಿ ಕಲಾ ಚಟುವಟಿಕೆಯಿಂದ ಕಲಾವಿದರಿಗೆ ಪ್ರೇರಣೆ ಹಾಗೂ ಸ್ಫೂರ್ತಿಯಾಗಿದ್ದಾರೆ. ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿ ನಗರದಲ್ಲಿ ಅನೇಕ ಹಿರಿಯ ಕಲಾವಿದರಿಂದ ಪ್ರಾತ್ಯಕ್ಷಿಕೆ ಕಾರ್ಯಕ್ರಮದ ರೂವಾರಿಯಾಗಿದ್ದಾರೆ. ಹಲವಾರು ಚಿತ್ರಕಲಾ ಚಟುವಟಿಕೆ ಪ್ರದರ್ಶನ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ.
ರಾಜ್ಯ ಹೊರ ರಾಜ್ಯ ಅಷ್ಟೇ ಅಲ್ಲ ಹೊರದೇಶಗಳಲ್ಲೂ ತಮ್ಮ ಕಲಾಕೃತಿಗಳೊಂದಿಗೆ ಪ್ರದರ್ಶನ ಮತ್ತು ಶಿಬಿರಗಳಲ್ಲಿ ಭಾಗವಹಿಸಿದ ಅನುಭವಿ. ಜಹಾಂಗೀರ್ ಆರ್ಟ್ ಗ್ಯಾಲರಿ ಮುಂಬಯಿ, ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿ, ಕರ್ನಾಟಕ ಚಿತ್ರಕಲಾ ಪರಿಷತ್‍ನ ಚಿತ್ರಸಂತೆ, ಅಲಂಕೃತ್ ಆರ್ಟ್ ಗ್ಯಾಲರಿ, ಹೈದ್ರಾಬಾದ್, ಅಲಿಯಾನ್ಸ್ ಫ್ರಾನ್ಸಿಸ್, ನವದೆಹಲಿ, ಆರೋಧನ ಗ್ಯಾಲರಿ, ಪಾಂಡಿಚೇರಿ, ದರ್ಬಾರ್ ಹಾಲ್ ಎರ್ನಾಕುಲಂ ಕೇರಳ, ಕ್ಯಾಮಲಿನ್ ಚಿತ್ರಕಲಾ ಪ್ರದರ್ಶನ, ಚಿನೈ, ರಾಷ್ಟ್ರೀಯ ಚಿತ್ರಕಲಾ ಶಿಬಿರ, ಮೌಂಟ್ ಅಬು, ರಾಜಸ್ಥಾನ, ವರ್ಣಯಾಗ ಗ್ಯಾಲರಿ ಮಸ್ಕತ್ ಹೀಗೆ ಇವರ ಭಾಗವಹಿಸುವಿಕೆಯ ಪಟ್ಟಿಯೇ ಸಾಕಷ್ಟು ಉದ್ದವಿದೆ. ಇವರ  ಮನೆ ಸಮೀಪವಿರುವ ಹುಣಸಿನಕೆರೆ ಪರಿಸರದಲ್ಲಿ 20 ಅಡಿ ಉದ್ದನೆಯ ಲ್ಯಾಂಡ್‍ಸ್ಕೇಪ್ ಚಿತ್ರ ರಚನೆ ಇಂಡಿಯಾ ಬುಕ್ ಆಪ್ ರೆಕಾರ್ಡ್‍ನಲ್ಲಿ ದಾಖಲಾಗಿದೆ. ಮಕ್ಕಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು   ಅತಿ ವೇಗದ ಅತಿದೊಡ್ಡ ವಿಶ್ವ ದಾಖಲೆಯ ವರ್ಣಚಿತ್ರವನ್ನು ಬರೆಸುವ ಮೂಲಕ ಕಲೆಯ ಮೂಲಕ ಪರಿಸರ ಜಾಗೃತಿ ಮೂಡಿಸುವ ದೇಸಾಯಿಯವರ ಕಾಯಕ ಜನಮೆಚ್ಚುಗೆ ಗಳಿಸಿತು.


ಇವರ ಕಲಾಕೃತಿಗಳು ಓಮೆನ್, ಕೆನಡಾ, ಅಮೇರಿಕಾ, ಸಿಂಗಪೂರ್, ಮಸ್ಕತ್, ಲಂಡನ್, ಬೆಲ್ಜಿಯಂ, ಫ್ರಾನ್ಸ್, ಸ್ವಿಡ್ಜರ್‍ಲ್ಯಾಂಡ್, ಜರ್ಮನಿ, ಆಸ್ಟ್ರೀಯಾ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮೌಂಟ್ ಅಬು ರಾಜಸ್ಥಾನ, ಬೆನಾನ್‍ಸ್ಮಿತ್ ಆರ್ಟ್ ಸೊಸೈಟಿ, ಬೆಳಗಾಂ ಸೇರಿದಂತೆ ಇನ್ನೂ ಹಲವಾರು ಖಾಸಗಿಯವರ ಸಂಗ್ರಹದಲ್ಲಿವೆ.
ನನ್ನ ಕಲೆಯ ಕುರಿತು ಕಲಾ ವಿಮರ್ಶಕರು ಆಡಿರುವ ಮಾತುಗಳು ನನ್ನೆಲ್ಲಾ ಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದು ಭಾವಿಸುವ ದೇಸಾಯಿಯವರು. ನವದೆಹಲಿಯ ಕಲಾ ವಿಮರ್ಶಕರಾದ ಪದ್ಮಶ್ರೀ ಕೇಶವ್ ಮಲಿಕ್ ಅವರು ದೇಸಾಯಿಯವರ ಕೃತಿಗಳನ್ನು "ಅವನ ಆತ್ಮದ ಭೂದೃಶ್ಯ" (landscape of his soul) ಎಂದು ಬಣ್ಣಿಸಿರುವುದನ್ನು ಮೆಲುಕು ಹಾಕುತ್ತಾರೆ. ಹಾಗೆಯೇ ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಸಿ.ಎಸ್. ಕೃಷ್ಣಶೆಟ್ಟಿ ಅವರು, "ದೇಸಾಯಿಯವರ ವರ್ಣಚಿತ್ರಗಳು ಕೇವಲ ದೃಶ್ಯ ಅನುಭವಗಳಲ್ಲ; ಅವು ಭಾವನಾತ್ಮಕ ಪ್ರಯಾಣಗಳು ಮತ್ತು ಅಮೂರ್ತ ರೂಪಗಳ ಮೂಲಕ ಆಳವಾದ ಭಾವನೆಗಳನ್ನು ಹುಟ್ಟುಹಾಕುವ ಅವರ ಸಾಮರ್ಥ್ಯ ಗಮನಾರ್ಹವಾದುದು" ಎಂದು ವಿಮರ್ಶಿಸಿದ್ದಾರೆ.
ಇವರ   ಈ ಸುದೀರ್ಘ ಕಲಾ ಪಯಣಕ್ಕೆ ಹಲವಾರು ಮನ್ನಣೆಗಳು ಸಿಕ್ಕಿವೆ; ೧೯೮೯ ರಲ್ಲಿ ಮೈಸೂರು ದಸರಾ ಕಲಾ ಪ್ರದರ್ಶನ ಪ್ರಶಸ್ತಿ, ೧೯೯೪ ರಲ್ಲಿ ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಮತ್ತು ೨೦೦೮ ರಲ್ಲಿ ಹಾಸನ   ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಪ್ರಸ್ತುತ ಲಲಿತಕಲಾ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿ   ಇವರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಇದರ ಜೊತೆಗೆ, ಹಾಸನದಲ್ಲಿ ಓರ್ವ ಕಲಾ ಶಿಕ್ಷಕನಾಗಿ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲೆಯ ಬಗ್ಗೆ ಒಲವು ಮೂಡಿಸುವ ಕೆಲಸವನ್ನೂ  ತೃಪ್ತಿಯಿಂದ ಮಾಡಿ ಇತ್ತೀಚೆಗೆ ನಿವೃತ್ತಿ ಹೊಂದಿದ್ದಾರೆ.
ಇವರ ಪಾಲಿಗೆ ಕಲೆ ಎಂಬುದು ಕೇವಲ ಬಣ್ಣಗಳ ಆಟವಲ್ಲ; ಅದು ಆತ್ಮ, ಪ್ರಕೃತಿ ಮತ್ತು ಧ್ಯಾನದ ನಡುವಿನ ಒಂದು ಸುಂದರ ಸಂವಾದ. ಈ ಪಯಣದಲ್ಲಿ ಸದಾ ಹೊಸತನ್ನು ಹುಡುಕುವ  ಕಲಾ ಸೇವೆ ನಿರಂತರವಾಗಿ ಸಾಗಲಿ ಎಂದು ನಾವು ಹಾರೈಸೋಣ..

ಸಿಹಿಜೀವಿ ವೆಂಕಟೇಶ್ವರ
ತುಮಕೂರು

28 ಏಪ್ರಿಲ್ 2026

ಮಾಪ್ಲಾಂಗ್ ದೇವರ ಕಾಡು.


 


ಮಾಪ್ಲಾಂಗ್ ದೇವರ ಕಾಡು.


ನಮ್ಮ ಕರ್ನಾಟಕದ ‌ಕೊಡುಗು ಮುಂತಾದ ಕಡೆಗಳಲ್ಲಿ ದೇವರ ಕಾಡು ಪರಿಕಲ್ಪನೆ ಇದೆ. ಇತ್ತೀಚಿನ ದಿನಗಳಲ್ಲಿ ‌ತೆರೆಕಂಡು ಯಶಸ್ವಿಯಾಗಿ ಪ್ರದರ್ಶನ ಕಂಡ ಕಾಂತಾರ ಸರಣಿಯ ಚಿತ್ರಗಳಲ್ಲಿ ಕೂಡಾ ದೈವದ ಹೆಸರಿನಲ್ಲಿ ಕಾಡಿನ ಸಂರಕ್ಷಣಾ ಸಂದೇಶಗಳನ್ನು ಕಾಣಬಹುದು. ಇಂತದೇ ಸಂದೇಶ ಸಾರುವ ದೇವರ ಕಾಡು ಮೇಘಾಲಯದಲ್ಲಿ ಇದೆ.  ಅದೇ ದೇವರ ಕಾಡು ಅಥವಾ ಮಾಪ್ಲಾಂಗ್ ಕಾಡು.

ಈಶಾನ್ಯ ಭಾರತದ ಪ್ರವಾಸ ಸಮಯದಲ್ಲಿ ‌ಮೇಘಾಲಯದ ಶಿಲ್ಲಾಂಗ್ ನಿಂದ ಹೊರಟು ಎಲಿಫೆಂಟ್ ಜಲಪಾತದ ಸೌಂದರ್ಯವನ್ನು ಸವಿದು ನಾವು ತಲುಪಿದ ತಾಣವೇ ಈ ದೇವರ ಕಾಡು.
ನಾವು ದೇವರ ಕಾಡು ತಲಪಿದಾಗ ಸೂರ್ಯ ದೇವ ನಿಧಾನವಾಗಿ ಬಾನದಾರಿಯಲ್ಲಿ ಜಾರಿದ್ದ.ಆದರೂ ದೇವರ ಕಾಡೊಳಗೆ ಹೆಜ್ಜೆ ಹಾಕುತ್ತಾ ಗೈಡ್ ಸಹಾಯದಿಂದ ಕಾಡನ್ನು ಅಲ್ಲಿನ ಸಂಪ್ರದಾಯ ಆಚರಣೆಗಳ ಬಗ್ಗೆ ಮಾಹಿತಿಯನ್ನು ಪಡೆದೆವು.

  ಶಿಲ್ಲಾಂಗ್‌ನಿಂದ ಸುಮಾರು ಇಪ್ಪತ್ತೈದು ಕಿಲೋಮೀಟರ್‌ಗಳ ದೂರದಲ್ಲಿರುವ ಮೇಘಾಲಯದ ಪೂರ್ವ ಖಾಸಿ ಬೆಟ್ಟಗಳ ಮಡಿಲಿನಲ್ಲಿರುವ  ಈ ಕಾಡಿನ ಪ್ರಕೃತಿಯ ಮೌನವು ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸುತ್ತದೆ. ಈ ನಾಡಿನ ಪ್ರತಿ ಕಲ್ಲಿಗೂ ಒಂದು ಕಥೆಯಿದೆ. ಸ್ಥಳೀಯ ಖಾಸಿ ಭಾಷೆಯಲ್ಲಿ 'ಮಾ'  ಎಂದರೆ ಕಲ್ಲು 'ಮಾಫ್ಲಾಂಗ್' ಎಂದರೆ 'ಹುಲ್ಲಿನ ಕಲ್ಲು' ಎಂದರ್ಥ. ಈ ಹಸಿರು ಹಾಸಿನ ಮೇಲೆ ತಲೆ ಎತ್ತಿ ನಿಂತಿರುವ ಏಕಶಿಲೆಗಳೇ  ಈ ಗ್ರಾಮಕ್ಕೆ ಆ ಹೆಸರನ್ನು ತಂದಿವೆ.
ಪ್ರವಾಸಿಗರು ಈ ತಾಣವನ್ನು ಪವಿತ್ರ ವನ ಅಥವಾ 'ಸೇಕ್ರೆಡ್ ಗ್ರೋವ್' ಎಂದು ಕರೆದರೆ  ಅಲ್ಲಿನ ಜನರು ಇದನ್ನು 'ಲಾ ಲಿಂಗ್ಡೋ'  ಎಂದು ಕರೆಯುತ್ತಾರೆ. ನೂರಾರು ವರ್ಷಗಳಿಂದ ಅಸ್ಪೃಶ್ಯವಾಗಿ ಉಳಿದಿರುವ ಈ ಕಾಡು ಕೇವಲ ಮರಗಿಡಗಳ ಗುಂಪಲ್ಲ, ಬದಲಿಗೆ ಖಾಸಿ ಜನರ ನಂಬಿಕೆಯ ಸಂಕೇತ. ಜೈಂತಿಯಾ ಮೂಲದ 'ಇಯಾಂಗ್‌ಬ್ಲಾ' ಎಂಬ ಪಂಗಡವು ಈ ವನವನ್ನು 'ಯು ಬಾಸಾ'  ಅಥವಾ 'ಯು ರಂಗ್‌ಕ್ಯೂ'   ಎಂಬ ರಕ್ಷಕ ಆತ್ಮದ ವಾಸಸ್ಥಾನವಾಗಿ ಪ್ರತಿಷ್ಠಾಪಿಸಿದೆ ಎಂದು ಇಲ್ಲಿನ ಜನಪದ ಕಥೆಗಳು ಹೇಳುತ್ತವೆ. ಈ ಪವಿತ್ರ ಕಾಡಿನಿಂದ ಒಂದು ಎಲೆಯನ್ನು ಅಥವಾ ರೆಂಬೆಯನ್ನು ಕಿತ್ತರೂ ಇಲ್ಲಿನ ಕಾವಲು ದೇವತೆಯು ಕೋಪಗೊಳ್ಳುತ್ತಾನೆ ಮತ್ತು ಶಿಕ್ಷಿಸುತ್ತಾನೆ ಎಂಬ ಗಾಢವಾದ ನಂಬಿಕೆ ಇಂದಿಗೂ ಜೀವಂತವಾಗಿದೆ.
ಈ ಹಸಿರು ಕಾನನದ ಪಕ್ಕದಲ್ಲೇ 'ಖಾಸಿ ಹೆರಿಟೇಜ್ ವಿಲೇಜ್' (Khasi heritage village) ಇದೆ. ಇದು ಖಾಸಿ ಸಂಸ್ಕೃತಿಯ ಕೇಂದ್ರಬಿಂದು ಎಂದು ಹೆಸರುವಾಸಿಯಾಗಿದೆ. ಆದರೆ ಸಮಯದ ಅಭಾವದಿಂದ ‌ನಾವು ಹಳ್ಳಿಗೆ ಹೋಗಲಾಗಲಿಲ್ಲ.






ಮಾಫ್ಲಾಂಗ್ ಇತಿಹಾಸದ ಪುಟಗಳಲ್ಲೂ ತನ್ನ ಗುರುತು ಮೂಡಿಸಿದೆ. ಹತ್ತೊಂಬತ್ತನೇ ಶತಮಾನದ ಅಂತ್ಯದಲ್ಲಿ  ಇದು ವೇಲ್ಸ್‌ನ ಪ್ರೆಸ್‌ಬಿಟೇರಿಯನ್ ಚರ್ಚ್‌ನ ಮಿಷನರಿ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿತ್ತು. 1878ರಲ್ಲಿ ಡಾ. ಗ್ರಿಫಿತ್ ಗ್ರಿಫಿತ್ಸ್ ಎಂಬುವವರು ಇಲ್ಲಿ ಚಿಕಿತ್ಸಾಲಯವನ್ನು ಸ್ಥಾಪಿಸಿ ಸ್ಥಳೀಯರಿಗೆ ಸೇವೆ ಸಲ್ಲಿಸಿದ್ದರು. ಅವರೂ ಸೇರಿದಂತೆ ಅನೇಕ ಮಿಷನರಿಗಳು ಇದೇ ಮಣ್ಣಿನಲ್ಲಿ ಕೊನೆಯುಸಿರೆಳೆದಿದ್ದಾರೆ ಎಂಬುದು ಈ ಗ್ರಾಮದ ಐತಿಹಾಸಿಕ ಮಹತ್ವವನ್ನು ಸಾರುತ್ತದೆ.

ಈ   ಮಾಫ್ಲಾಂಗ್‌ನ ಪವಿತ್ರ ಕಾಡಿನಿಂದ ಸ್ಥಳೀಯರು ಹಾಗೂ ಪ್ರವಾಸಿಗರು  ಏನನ್ನೂ ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಒಂದು ಬೆಣಚುಕಲ್ಲು ಅಥವಾ ಒಣಗಿದ ಮರದ ರೆಂಬೆ,ಹಣ್ಣು ಎಲೆಗಳು ಹೀಗೆ ಯಾವುದೇ ವಸ್ತುಗಳನ್ನು ಕಾಡಿನಿಂದ ಹೊರಗೆ ತರುವುದಿಲ್ಲ.
ಪ್ರವಾಸಿಗರಿಗೆ ಇಲ್ಲಿ ಫುಲ್ ಟ್ರಕ್ ಮಾಡಲು ಅವಕಾಶ ನೀಡಲಾಗುತ್ತದೆ. ಅದು ಇಡೀ ಕಾಡಿನಲ್ಲಿ ಗೈಡ್ ಸಹಾಯದಿಂದ ವಾಕ್ ಮಾಡುವ ಅನುಭವ.ಸಂಜೆಯಾಗಿ ಕ್ರಮೇಣ ಕತ್ತಲಾವರಿಸಿದ್ದರಿಂದ
ನಾವು ಹಾಫ್  ಟ್ರಕ್ ಮಾಡಿ ಕಾಡಿನಲ್ಲಿ ಒಂದು ಸುತ್ತ ಹಾಕಿದಾಗ ಆ ಕಾಡು ಮಾನವನ  ನಿರ್ನಾಮ ಚಟುವಟಿಕೆಗಳಿಂದ ದೂರವಿರುವುದು ಕಂಡುಬಂದಿತು.

ನಮ್ಮ ಗೈಡ್ ಕೆರಿ  ಹಳೆಯ ಕಾಲದ ಖಾಸಿ ಜನಾಂಗದ ಮುಖಸ್ಥನ    ಪಟ್ಟಾಭಿಷೇಕ ಮತ್ತು ತ್ಯಾಗದ ಸ್ಥಳಗಳ ತೋರಿಸಿ ಮಾಹಿತಿ ನೀಡಿದರು.ಇಲ್ಲಿ ಖಾಸಿ ರಾಜರು  ನಾಯಕರು  ಅವರ ಸಭೆಗಳನ್ನು ಮಾಡುತ್ತಿದ್ದರು ಎಂಬ ಮಾಹಿತಿ ತಿಳಿಸಿದರು. ನಾವು ಆ ಕಾಡಿಗೆ ತರಳಿದಾಗ ಸಂಜೆ ಯಾಗಿದ್ದರಿಂದ ಬೇಗನೆ ಹಿಂತಿರುಗಬೇಕಾಯಿತು.ಮುಂದೆ ಸಮಯ ಸಿಕ್ಕರೆ ಆ ಕಾಡಿನಲ್ಲಿ ಪೂರ್ಣ ಟ್ರೆಕ್ಕಿಂಗ್ ಮಾಡುವಾಸೆಯುಂಟಾಯಿತು.ನಮ್ಮ ‌ಗೈಡ್  ಅಲ್ಲಲ್ಲಿ‌ ಇರುವ ರುದ್ರಾಕ್ಷಿ ಮರಗಳನ್ನು ತೋರಿಸಿ ಕೆಳಗೆ ಬಿದ್ದ ರುದ್ರಾಕ್ಷಿ ಗಳನ್ನು ಯಾರೂ ಮುಟ್ಟದಂತೆ  ನಮಗೆ ತಾಕೀತು ಮಾಡಿದ.


ಪವಿತ್ರ ವನದ ಕಗ್ಗತ್ತಲ ದಾರಿಯಲ್ಲಿ ನಡೆಯುವಾಗ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಅವಿನಾಭಾವ ಸಂಬಂಧದ ಅರಿವಾಗುತ್ತದೆ. ಮಾಫ್ಲಾಂಗ್ ಕೇವಲ ಪ್ರವಾಸಿ ತಾಣವಲ್ಲ, ಅದು ಆಧುನಿಕತೆಯ  ಸುಳಿಗೆ ಸಿಲುಕದ ಸಂಪ್ರದಾಯಗಳ ಜೀವಂತ ಪಾಠಶಾಲೆ. ಇಂತಹ  ಸಂಪ್ರದಾಯಗಳಿಂದಲಾದರೂ ನಮ್ಮ ಪ್ರಕೃತಿಯಲ್ಲಿ ಸಮತೋಲನ ‌ಉಂಟಾದರೆ. ಬಹಳಷ್ಟು ಪ್ರಾಕೃತಿಕ ವಿಕೋಪಗಳು ಕಡಿಮೆಯಾಗಿ.ನಮ್ಮ ಧರಣಿ ಸ್ವರ್ಗವಾಗುವುದರಲ್ಲಿ ಸಂದೇಹವಿಲ್ಲ.


ಇದೇ ಭಾವನೆಗಳನ್ನು ಹೊತ್ತು ಪವಿತ್ರ ಕಾಡಿನಿಂದ‌ ಹೊರಬಂದು ನಮ್ಮ ಬಸ್ ಹೊಕ್ಕು ಕುಳಿತೆವು.ಅರ್ಧ ಗಂಟೆಯ ದಾರಿ ಕ್ರಮಿಸಿ ಶಿಲಾಂಗ್ ತಲುಪಿದೆವು. ಶಿಲಾಂಗ್ ನಗರದ ಟ್ರಾಫಿಕ್ ಬೆಂಗಳೂರಿಗಿಂತ ಹೆಚ್ಚಾಗಿತ್ತು. ಶಿಲಾಂಗ್ ನಗರದಲ್ಲಿನ ಐದು ಕಿಲೋಮೀಟರ್ ದೂರದಲ್ಲಿನ ನಮ್ಮ ಲಾಡ್ಜ್ ತಲುಪಲು ಬರೋಬ್ಬರಿ ಒಂದು ಗಂಟೆಯಾಯಿತು ಎಂದರೆ ನೀವು ನಂಬಲ್ಲ. ಆಗ  ಮಾಪ್ಲಾಂಗ್ ಪವಿತ್ರ ಕಾಡು ಮತ್ತೆ ನೆನಪಾಯಿತು.

ಸಿಹಿಜೀವಿ ವೆಂಕಟೇಶ್ವರ
ತುಮಕೂರು





24 ಏಪ್ರಿಲ್ 2026

ಮೂವತ್ತನೇ ಹೆರಿಗೆಯ ಕಡೆ ಚಿತ್ತ!.


 ಮೂವತ್ತನೇ ಹೆರಿಗೆಯ ಕಡೆ ಚಿತ್ತ ..



ಮೂರು ವರ್ಷಗಳ ಹಿಂದೆ ಕೀರ್ತಿಶೇಷ    ವಿದ್ಯಾ ವಾಚಸ್ಪತಿ ಕವಿತಾ ಕೃಷ್ಣ ರವರ ಮನೆಯಲ್ಲಿ ನನ್ನ ಅನುಭವ ಕಥನ "ಯಂಗ್ಟಿ" ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ನಮ್ಮ  ನಾಡಿನ  ಹಿರಿಯ ಲೇಖಕರಾದ ಜಿ ಕೆ ಕುಲಕರ್ಣಿರವರು  ಕವಿ ಅಥವಾ ಲೇಖಕರಿಗೆ ಪುಸ್ತಕ ಪ್ರಕಟಣೆ ಎಂಬುದು ಒಂದು ಹೆರಿಗೆ ಇದ್ದಂತೆ ನಾನು ನಾಲ್ಕು ಹೆರಿಗೆಗೆ ಸುಸ್ತಾಗಿರುವೆ ಸಿಹಿಜೀವಿಯವರು ಹನ್ನೆರಡು ಹೆರಿಗೆ ಸಂಭ್ರಮ ಪ್ರಶಂಸನಾರ್ಹ ಎಂದಿದ್ದರು. ಇತ್ತೀಚಿನ ವಿಶ್ವ ಪುಸ್ತಕ ದಿನದಂದು ಅದು ನೆನೆಪಾಯಿತು.
ನನ್ನ ಇದುವರೆಗೆ ಪ್ರಕಟವಾದ ಕೆಲ ಪುಸ್ತಕಗಳ ಬಗ್ಗೆ ನೆನಪಾಯಿತು.
  ನನ್ನ  ಸಾಹಿತ್ಯದ ಬಹುಪಾಲು ಮಕ್ಕಳು ಮತ್ತು ಶಿಕ್ಷಣದ ಸುತ್ತ ಸುಳಿಯುತ್ತದೆ.  ‘ಬಾರೋ ಬಾರೋ ಗುಬ್ಬಚ್ಚಿ’ ಎಂಬ ಶಿಶುಗೀತೆಗಳ ಸಂಕಲನವು 34 ಸರಳ ಶಿಶು  ಗೀತೆಗಳನ್ನು ಒಳಗೊಂಡಿದ್ದು, ಮಕ್ಕಳಲ್ಲಿ ಪ್ರಕೃತಿ ಪ್ರೇಮ, ಸ್ವಚ್ಛತೆ ಮತ್ತು ಶಾಲಾ ಶಿಕ್ಷಣದ ಬಗ್ಗೆ ಆಸಕ್ತಿ ಮೂಡಿಸುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆಯ ನಾನು   ಬರೆದ ‘ಶಿಕ್ಷಣವೇ ಶಕ್ತಿ’ ಕೃತಿಯು ಆನ್‌ಲೈನ್ ಶಿಕ್ಷಣ, 'ದೀಕ್ಷಾ ಆಪ್' ಮತ್ತು ಡಿಜಿಟಲ್ ಕಲಿಕೆಯ ಮಹತ್ವವನ್ನು ಸಾರುತ್ತದೆ. ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಪೂರಕವಾಗುವಂತೆ ‘ಸವಿ ಜ್ಞಾನ’, ‘ನಮ್ಮ ಇತಿಹಾಸ’ ಮತ್ತು ‘ಸಾಮಾನ್ಯ ಜ್ಞಾನ ಕ್ವಿಜ್’ ನಂತಹ ಪರಾಮರ್ಶನ ಗ್ರಂಥಗಳನ್ನು ರಚಿಸಿರುವೆ.
ಕಾದಂಬರಿ ಮತ್ತು ಕಥಾ ಸಂಕಲನಗಳ ಮೂಲಕ ಸಾಮಾಜಿಕ ಚಿತ್ರಣ ನೀಡುವ ಪ್ರಯತ್ನದ ಫಲವಾಗಿ  ನನ್ನ  ಚೊಚ್ಚಲ ಕಾದಂಬರಿ ‘ಉದಕದೊಳಗಿನ ಕಿಚ್ಚು’ ಗ್ರಾಮೀಣ ಬದುಕಿನ ವಾಸ್ತವತೆಗಳನ್ನು ತೆರೆದಿಡುತ್ತದೆ. ಈ ಕಾದಂಬರಿಯಲ್ಲಿ ಜೀತ ಪದ್ಧತಿಯ ನೋವು, ಹಳ್ಳಿಯ ಹಬ್ಬಗಳ ಸಡಗರ ಮತ್ತು ದಲಿತರ ದೇಗುಲ ಪ್ರವೇಶದಂತಹ ಗಂಭೀರ ಸಾಮಾಜಿಕ ವಿಚಾರಗಳನ್ನು ಮನೋಜ್ಞವಾಗಿ ಚಿತ್ರಿಸುವ ಪ್ರಯತ್ನ ಮಾಡಿರುವೆ. ನನ್ನ ‘ರಂಗಣ್ಣನ ಗುಡಿಸಲು’ ಕಥಾ ಸಂಕಲನವು ಹದಿಹರೆಯದ ಮನಸ್ಸಿನ ತಳಮಳಗಳು ಮತ್ತು ಮಾನವೀಯ ಸಂಬಂಧಗಳ ಮೌಲ್ಯವನ್ನು ಸಾರುವ ಕಥೆಗಳನ್ನು ಹೊಂದಿದೆ. ಅತಿ ಸಣ್ಣ ಕಥೆಗಳ ಪ್ರಕಾರದಲ್ಲಿ  ಬರೆದ ‘ಸಿಹಿಜೀವಿಯ ನ್ಯಾನೋ ಕಥೆಗಳು’ ಮನುಷ್ಯನ ಅಂತರಾತ್ಮವನ್ನು ಪ್ರಶ್ನಿಸುವ ಶಕ್ತಿಯನ್ನು ಹೊಂದಿವೆ.
 ಕವಿಯಾಗಿ ನನ್ನನ್ಬು ಗುರ್ತಿಸಿದ ಕೃತಿ  ‘ಸಾಲು ದೀಪಾವಳಿ’ ಕವನ ಸಂಕಲನ. ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟವಾದ ಗಜಲ್ ಪ್ರಕಾರವನ್ನು ಆರಿಸಿಕೊಂಡ ನಾನು, ‘ಸಿಹಿಜೀವಿಯ ಗಜಲ್’ ಮೂಲಕ ಭಕ್ತಿ, ಪ್ರೇಮ ಮತ್ತು ಸಾಮಾಜಿಕ ಚಿಂತನೆಗಳನ್ನು ವ್ಯಕ್ತಪಡಿಸುವ ಪ್ರಯತ್ನ ಮಾಡಿರುವೆ. ಕನಕದಾಸರ ತತ್ವಗಳನ್ನು ಮತ್ತು ಆಧುನಿಕ ಜೀವನದ ಸಂಘರ್ಷಗಳನ್ನು ಗಜಲ್‌ಗಳ ಮೂಲಕ ಚಿತ್ರಿಸಿರುವೆ.  ಅಲ್ಲದೆ, ಚುಟುಕು ಮತ್ತು ಹನಿಗವನಗಳ ಸಂಕಲನ ‘ಸಿಹಿಜೀವಿಯ ಹನಿಗಳು’ ಮೂಲಕ ಸಣ್ಣ ಸಾಲುಗಳಲ್ಲಿ ದೊಡ್ಡ ಅರ್ಥವನ್ನು ತುಂಬಿ ಹನಿಗವನ ರಚನೆ ಮಾಡಿರುವೆ.
ನಾನು ಕೇವಲ ಕಲ್ಪನಾ ಜಗತ್ತಿಗೆ ಸೀಮಿತವಾಗದೆ ನೈಜ ಜಗತ್ತಿನ ಇತಿಹಾಸ ಮತ್ತು ಪ್ರವಾಸದ ಬಗೆಗೂ ಆಸಕ್ತಿ ಹೊಂದಿದ . ‘ಐತಿಹಾಸಿಕ ತಾಣಗಳು’ ಮತ್ತು ‘ಕರ್ನಾಟಕದ 7 ಅದ್ಭುತಗಳು’ ಎಂಬ ಕೃತಿಗಳಲ್ಲಿ ಉಜ್ಜಯಿನಿ, ತಾಜ್ ಮಹಲ್, ಹಂಪಿ ಮತ್ತು ಮೈಸೂರು ಅರಮನೆಯಂತಹ ಪ್ರಮುಖ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡಿರುವೆ. ನನ್ನ ಪ್ರವಾಸ ಕಥನ ‘ಕ್ಯಾತಸಂದ್ರ ಟು ಕ್ಯಾತನಮಕ್ಕಿ’ ಪಶ್ಚಿಮ ಘಟ್ಟಗಳ ಸೌಂದರ್ಯ ಮತ್ತು ಚಾರಣದ ಅನುಭವವನ್ನು ಹಂಚಿಕೊಳ್ಳುತ್ತದೆ. ನನ್ನ 25ನೇ ಕೃತಿ ‘ವಿಶ್ವ ಭಾರತ’ ಪತ್ರಿಕಾ ಲೇಖನಗಳ ಸಂಕಲನವಾಗಿದ್ದು, ಭ್ರಷ್ಟಾಚಾರ, ಪರಿಸರ ಸಂರಕ್ಷಣೆ ಮತ್ತು ಜಾಗತಿಕ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುತ್ತದೆ.
ನವ ಪೀಳಿಗೆಗೆ ದೇಶದ ಮಹಾನ್ ಚೇತನಗಳಾದ ಮಹಾತ್ಮಾ ಗಾಂಧೀಜಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಗಳನ್ನು ತಲುಪಿಸಲು ಇವರು ‘ಗಾಂಧೀಜಿ ಮತ್ತು ಅಂಬೇಡ್ಕರ್ ನುಡಿಮುತ್ತುಗಳು’ ಕೃತಿಯನ್ನು ಸಿದ್ಧಪಡಿಸಿ ಪ್ರಕಟಿಸಿರುವೆ.
"ಸಿಹಿಜೀವಿ ಕಂಡ ಅಂಡಮಾನ್" ಕೃತಿಯಲ್ಲಿ ಅಂಡಮಾನ್ ನ ಪ್ರಕೃತಿ ಸೊಬಗು ಹಾಗೂ ಅಲ್ಲಿಯ ಜನಜೀವನ ಬಿಂಬಿಸುವ ಕಾರ್ಯ ಮಾಡಿರುವೆ ಜಿ ಕೆ ಕುಲಕರ್ಣಿ ರವರ ಭಾಷೆಯಲ್ಲಿ ಅದು ನನ್ನ ಇಪ್ಪತ್ತೊಂಬನೇ ಹೆರಿಗೆ  ಪ್ರಸ್ತುತ. ಭೂತಾನ್ ಪ್ರವಾಸದ ಅನುಭವವನ್ನು ಬರೆದು ಪ್ರಕಟಿಸುವ ಪ್ರಯತ್ನದಲ್ಲಿರುವೆ.ಇದು ನನ್ನ ಮೂವತ್ತನೇ ಹೆರಿಗೆ! ಗೆಳೆಯರು ಆತ್ಮೀಯರು,ಹಿತೈಷಿಗಳು ನಿಮ್ಮ ‌ಹೆರಿಗೆ ಮುಂದುವರೆಯಲಿ ಆಪರೇಶನ್ ಮಾಡಿಸಿಕೊಳ್ಳಬೇಡಿ.ಕುಟುಂಬ ಯೋಜನೆಯ ನಿಯಮಗಳು ನಿಮಗೆ ಬೇಡ ಎಂದಿದ್ದಾರೆ. ನೀವೇನಂತೀರಿ?

ಸಿಹಿಜೀವಿ ವೆಂಕಟೇಶ್ವರ
ತುಮಕೂರು