19 ಡಿಸೆಂಬರ್ 2023

ಅಹಂಕಾರ...

 ಅಹಂಕಾರ.

ಸುಂದರ ಶಿಲೆಯಾಗಿ ಕೆತ್ತಬಹುದು ಕಲ್ಲನ್ನು ಇಲ್ಲದಿದ್ದರೂ ಯಾವುದೇ ಆಕಾರ|

ಬದಲಿಸಲಾಗುವುದೇ ಇಲ್ಲ

ಮನುಷ್ಯರಲ್ಲಿ ತುಂಬಿಕೊಂಡರೆ ಅಹಂಕಾರ||

18 ಡಿಸೆಂಬರ್ 2023

ಚಿತ್ತಾರ...


 ಓ ನಲ್ಲೆ..  ಮನೆಯ ಬಣ್ಣ ಮಾಸಿರಬಹುದು ಕೊಂಚ|

ಚಿತ್ತಾರ ಬಿಡಿಸುವೆನು ತನು,ಮನದಲಿ ಹಿಡಿದು ಕುಂಚ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

15 ಡಿಸೆಂಬರ್ 2023

ಹೊಣೆ ಯಾರು...?



 


ಯಾರು ಹೊಣೆ...

ಅವನ  ತಂದೆ ಸರ್ಕಾರಿ ನೌಕರಿಯಲ್ಲಿದ್ದರು.ಅವರ ಅಕಾಲಿಕ ಮರಣದಿಂದ ಆ ಹುಡುಗನ ಅಕ್ಕನಿಗೆ ಅನುಕಂಪದ ಸರ್ಕಾರಿ ನೌಕರಿ ದೊರೆಯಿತು. ನೌಕರಿಯ ಬಲದಿಂದ ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮವಾಯಿತು. ಹೋಗಿ ಬರುವ ಪಯಣ
ಸುಮಾರು 100 ಕಿಲೋಮೀಟರ್ ಆದರೂ ಕೆಲಸ ಸಿಕ್ಕ ಖುಷಿಯಲ್ಲಿ ಅದೇನು ಅಷ್ಟು ತೊಂದರೆ ಎನಿಸಲಿಲ್ಲ.  ತನ್ನ ಹಳ್ಳಿಯಿಂದ ನಗರಕ್ಕೆ, ಪುನಃ ನಗರದಿಂದ ಮತ್ತೊಂದು ನಗರಕ್ಕೆ ಕೆಲಸ ಮಾಡಲು ಹೋಗಿ ಬರಬೇಕಾಗಿತ್ತು. ಆರಂಭದಲ್ಲಿ ಇದು ಕಷ್ಟವಾದರೂ ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೆ ಅಷ್ಟೇ ಸಾಕು ಎಂದು ಬರು ಬರುತ್ತಾ ಕಷ್ಟದ ಜೀವನಕ್ಕೆ ಹೊಂದಿಕೊಂಡಿದ್ದಳು. ದೂರದ ಪ್ರಯಾಣವಾದ್ದರಿಂದ ಬಸ್ ಗಳು ಸಕಾಲದಲ್ಲಿ ಸಿಗದೆ ಕೆಲವೊಮ್ಮೆ ನಗರಕ್ಕೆ ತಲುಪುವುದೇ ರಾತ್ರಿ ಒಂಭತ್ತರ ಮೇಲಾಗುತ್ತಿತ್ತು.ಅಲ್ಲಿಂದ ಹಳ್ಳಿಯ ಮನೆ ಸೇರಲು ಮತ್ತೆ ಕಾಲು ಗಂಟೆ ಬೇಕಾಗುತ್ತಿತ್ತು.
ಕೆಲವು ದಿನ ಡ್ಯೂಟಿಯಿಂದ ರಾತ್ರಿ  ಲೇಟಾಗಿ ಬಂದರೆ ನಗರದಿಂದ ಅಕ್ಕನ ಕರೆತರಲು ಹತ್ತನೇ ತರಗತಿಯಲ್ಲಿ ಓದುವ ತಮ್ಮ ಪಕ್ಕದ ಮನೆಯ ಗೆಳೆಯ ನನ್ನು ಕರೆದುಕೊಂಡು ತನಗೆ ಪರಿಚಿತವಾಗಿರುವ ಅಂಕಲ್ ನಿಂದ  ಬೈಕ್ ಕೇಳಿ ಪಡೆದು ನಗರದಿಂದ ಹಳ್ಳಿಗೆ ಕರೆ ತರುತ್ತಿದ್ದ. ರಾತ್ರಿ ಹತ್ತರ ನಂತರ ಬರುವ ಮಗಳ ಸ್ಥಿತಿಯನ್ನು ನೋಡಿ " ಅಲ್ಲೇ ಟೌನ್ ನಲ್ಲಿ ಒಂದು ರೂಮೋ ಪಿ ಜಿ ನೋ ಮಾಡ್ಕಂಡಿರಮ್ಮ ರಾತ್ರಿ ಹೊತ್ತು ಇಂಗ್ ಬಂದ್ರೆ ಎಂಗಮ್ಮ" ಎಂದು ತಾಯಿ ಸಲಹೆ ನೀಡಿದ್ದರು. ಮಗಳು ಇದನ್ನು ನಯವಾಗಿಯೇ ನಿರಾಕರಿಸಿದ್ದಳು.
ತಂದೆಯ ಅನುಪಸ್ಥಿತಿಯಲ್ಲಿ ತಾಯಿ,  ಮಗಳು, ಮಗ ಸಂತೋಷವಾಗಿ ಜೀವನ ಸಾಗಿಸುತ್ತಿದ್ದರು. ಅದ್ಯಾರ ಕೆಟ್ಟ ದೃಷ್ಟಿ ಬಿತ್ತೋ ಏನೋ..
ಅಂದು ರಾತ್ರಿ ಒಂಭತ್ತು ಗಂಟೆಗೆ ಅಕ್ಕ ಪೋನ್ ಮಾಡಿದರು.ತಮ್ಮನು  ಪಕ್ಕದ ಮನೆಯ ಅಂಕಲ್ ನಿಂದ  ಬೈಕ್ ಪಡೆದು ತನ್ನ ಗೆಳೆಯನ ಜೊತೆಯಲ್ಲಿ ನಗರದ ಕಡೆ ಸ್ವಲ್ಪ ಜೋರಾಗಿಯೇ ಎಕ್ಸಲೇಟರ್  ಒತ್ತಿದ. 
ಅತ್ತ ಅಕ್ಕ ಕಾಯುತ್ತಿದ್ದರು.ಈ ಮಧ್ಯ ರಾತ್ರಿ ಹತ್ತರ ಸಮಯದಲ್ಲಿ ಒಂಟಿ ಯುವತಿ ನಿಂತಿರುವುದನ್ನು ಕಂಡ ಪುಂಡರ ಗುಂಪು ಚುಡಾಯಿಸಲಾರಂಭಿಸಿದೆ.ಯುವತಿ ಅಲ್ಲಿಂದ ನಿಧಾನವಾಗಿ ಮುಂದೆ ಚಲಿಸಿದ್ದಾಳೆ. ಗಾಬರಿಯಿಂದ ತಮ್ಮನಿಗೆ ಮತ್ತೆ ಕರೆ ಮಾಡಿದಳು.ಕರೆ ಸ್ವೀಕರಿಸಿದ ತಮ್ಮ ಗಾಡಿಯ ಎಕ್ಸಲೇಟರ್ ಮತ್ತೂ ಒತ್ತಿದ.  ಸ್ಪೀಡೋಮೀಟರ್ ಮುಳ್ಳು ಏರುತ್ತಾ ಬೈಕ್ ಮುಂದೆ ಚಲಿಸಿತು.ಆಗಲೇ ಅವಘಡ ಸಂಭವಿಸಿದ್ದು! ಕ್ಷಣಾರ್ಧದಲ್ಲಿ   ಅತಿ ವೇಗವಾಗಿ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಬಾಲಕರು ಆರು ಅಡಿ ಜಿಗಿದು ದೂರದಲ್ಲಿ ಬಿದ್ದರು. ರಸ್ತೆ ಅಕ್ಕ ಪಕ್ಕದ ಜನರು ಸೇರಿ ಮಕ್ಕಳ ಎತ್ತಿದ್ದರು.ಅಷ್ಟರಲ್ಲಾಗಲೇ ಇಬ್ಬರ ಪ್ರಾಣಪಕ್ಷಿ ಹಾರಿತ್ತು. ಕಾರಿನ ಚಾಲಕನೂ ಗಾಯಗೊಂಡು ಆಸ್ಪತ್ರೆ ಸೇರಿದ.ಸ್ಥಳಕ್ಕೆ ಬಂದ ಪೋಲಿಸರು ಮಹಜರು ಮಾಡಿ ಬೈಕ್ ಮಾಲೀಕನನ್ನು ಪತ್ತೆ ಹಚ್ಚಿ ಅಪ್ರಾಪ್ತ ಬಾಲಕರಿಗೆ ಬೈಕ್ ಕೊಟ್ಟ ಅರೋಪದ ಮೇಲೆ ಬಂದಿಸಲಾಯಿತು. 
ಸ್ಥಳದಲ್ಲಿದ್ದ ಜನ ಆ ಬಾಲಕರ ಸ್ಥಿತಿಯನ್ನು ಕಂಡು ಮರುಗುತ್ತಿದ್ದರು.ಕೆಲವರು ಅದು ಕಾರ್ ನ ಚಾಲಕನ  ಅಜಾಗರೂಕತೆಯಿಂದ ಆದ ಅವಘಡ ಎಂದರೆ ಕೆಲವರು ಅಪ್ರಾಪ್ತ ಮಕ್ಕಳು ಬೈಕ್ ಯಾಕೆ ಓಡಿಸಬೇಕಿತ್ತು? ಎಂದು ಮಾತನಾಡುವ ವೇಳೆಯಲ್ಲಿ ಸ್ಥಳಕ್ಕೆ ಬಂದ ಸಹೋದರಿ ಈ ದುರ್ಘಟನೆಗೆ ನಾನೇ ಕಾರಣವೆಂದು ಗೋಳಾಡತೊಡಗಿದಳು.ಅಂಬುಲೆನ್ಸ್ ಶಬ್ದ ದೂರದಲ್ಲಿ ಕೇಳುತ್ತಿತ್ತು... ಪಾಪ  ಈ ಹುಡುಗ್ರ ಸಾವಿಗೆ ಯಾರ್ ಹೊಣೆ ಎಂದು ಪ್ರಶ್ನಿಸುತ್ತಿರುವಾಗ ಮೂಲೆಯಲ್ಲಿ ಬೆಡ್ ಶೀಟ್ ಹೊದ್ದು ನಿಂತ ವಯೋವೃದ್ದರು ಹಣೆ ಬರಹಕ್ಕೆ ಯಾರು ಹೊಣೆನಪ್ಪ? ಎಂದಾಗ ನೀರವ ಮೌನ ಆವರಿಸಿತು..

ಸಿಹಿಜೀವಿ ವೆಂಕಟೇಶ್ವರ
ತುಮಕೂರು

ಮದ್ಯ ಪ್ರಿಯರ ಮನವಿ

 


ಮದ್ಯ ಪ್ರಿಯರ ಮನವಿ


ನಮಗೂ ಮರ್ಯಾದೆ ಕೊಡಿ

ಕುಡಿಯುಬಹದು ನಾವು

ಬ್ರಾಂದಿ ,ವಿಸ್ಕಿ ,ಬೀರು|

ಕುಡುಕರೆಂದು ಅವಮಾನಿಸಬೇಡಿ

ಗೌರವದಿ ಹೇಳಿ ಮದ್ಯಪ್ರಿಯರು||


ನಮ್ಮ ಘೋಷವಾಕ್ಯ ನಿತ್ಯ ದುಡಿ,

ಸ್ವಲ್ಪ ಕುಡಿ, ಸತ್ಯ ನುಡಿ|

ಬೈಯಬೇಡಿ ನಮ್ಮನ್ನು ಕುಡಿದಾಗ

ಸ್ವಲ್ಪ ಅಲ್ಲಾಡಬಹುದು ಬಾಡಿ ||


ನಮಗೋಸ್ಕಕರ ಸ್ಥಾಪಿಸಿ ಬಿಡಿ

ಮದ್ಯಪ್ರಿಯರ ಕಲ್ಯಾಣ ನಿಧಿ|

ಇರಲಿ ಒಂದು ಅಂಬುಲೆನ್ಸ್

ನಮಗಾಗಿ ಬಾರ್ ಬದಿ ||


ಸರ್ಕಾರದ ಆದಾಯದಲ್ಲಿ ನಮ್ಮದೂ ಪಾಲಿದೆ ಅದು ಹೆಮ್ಮೆ|

ನಮ್ಮ ಬೇಡಿಕೆಗಳನ್ನು ಪರಿಶೀಲಿಸಿ

ನಮ್ಮ ಕಡೆ ಕೃಪೆ ತೋರಿ ಒಮ್ಮೆ||


(ಮದ್ಯಪಾನ ಆರೋಗ್ಯಕ್ಕೆ ಹಾನಿಕರ)


ಸಿಹಿಜೀವಿ ವೆಂಕಟೇಶ್ವರ

ತುಮಕೂರು


12 ಡಿಸೆಂಬರ್ 2023

ಕುದುರೆಗೊಂದು ದಿನ


 


ಕುದುರೆಗೊಂದು ದಿನ 


ಆಕರ್ಷಕವಾಗಿ ಕಾಣುವ ಹಲವು ಪ್ರಾಣಿಗಳಲ್ಲಿ ಕುದುರೆಯೂ ಒಂದು. ಮಹಾರಾಜರು ಕುದುರೆ ಏರಿ ಹೊರಟರೆ ಆ ಗತ್ತೇ ಬೇರೆ. ಸೈನಿಕರ ,ಸಾರಿಗೆಯ ಬಹು ಮುಖ್ಯ ಪ್ರಾಣಿಯಾಗಿದ್ದ   ಕುದುರೆ ಅಶ್ವ ಮೇಧಯಾಗಕ್ಕೂ ಸಿದ್ದ ವಾಗಿದ್ದನ್ನ  ಕಂಡಿದ್ದೇವೆ.ಇಂತಹ ಬಹುಪಯೋಗಿ ಕುದುರೆ ಈಗ    ರೇಸ್  ಓಡುವ ಕುದುರೆಯಾಗಿ ಜೂಜಿಗೆ ಸೀಮಿತವಾಗಿದೆ.

ಅಶ್ವ ,ವಾಜಿ ,ತುರುಗ, ಎಂಬಿತ್ಯಾದಿ ನಾಮಗಳಿಂದ ಪರಿಚಿತವಾದ ಕುದುರೆಗೂ ವಿಶ್ವ ಸಂಸ್ಥೆ ಒಂದು ದಿನ ನಿಗದಿ ಮಾಡಿ ಪ್ರತಿ ವರ್ಷವೂ ಆಚರಿಸಲು ಅನುವು ಮಾಡಿಕೊಟ್ಟಿದೆ. ಪ್ರತಿವರ್ಷ ಡಿಸೆಂಬರ್ 13 ರಂದು ರಾಷ್ಟ್ರೀಯ ಕುದುರೆ ದಿನವಾಗಿ ಆಚರಿಸಲಾಗುತ್ತದೆ.

ಕುದುರೆಗೆ, ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಮಹತ್ವವಿದೆ.  ಜಾನಪದರ ಬಾಯಲ್ಲಿ ಕುದುರೆ ನಲಿದಾಡಿದೆ.

ಕುದುರೆಯ ಹೆಸರಲ್ಲಿ ಕನ್ನಡದ ಹಲವಾರು ಹಾಡುಗಳು ಬಂದಿವೆ. "ಕುದುರೆ ಏರಿ ಸೂರ್ಯ ಬಂದವ್ನೆ...." ಎಂಬ ಲಾಲಿ ಹಾಡು ಚಿತ್ರದ ಹಾಡು ಈಗಲೂ ಕಿವಿಯಲ್ಲಿ ಗುಂಯ್ಗುಡುತ್ತದೆ. "ಕಾಡು ಕುದುರೆ ಓಡಿ ಬಂದಿತ್ತಾ...." ಎಂಬ ಹಾಡಿನಲ್ಲಿ ಶಿವಮೊಗ್ಗ ಸುಬ್ಬಣ್ಣ ರವರ ಧ್ವನಿಯು ಎಲ್ಲರನ್ನೂ ಆಕರ್ಷಿಸಿದ್ದು ಸುಳ್ಳಲ್ಲ. ಎಲ್ಲಾ ಆರ್ಕೆಸ್ಟ್ರಾಗಳಲ್ಲಿ ಈಗಲೂ ಅತಿ ಹೆಚ್ಚು ಬೇಡಿಕೆಯ ಹಾಡು ಅಣ್ಣಾವ್ರ "ಹೃದಯ ಸಮುದ್ರ ಕಲಕಿ ಹೊತ್ತಿದ ದ್ವೇಷದ ಬೆಂಕಿ..." ಅಶ್ವದೊಂದಿಗೆ ಚಿತ್ರಿತವಾದ ಈ ಹಾಡನ್ನು ಈಗ ನೋಡಿದರೂ  ರೋಮಾಂಚನವಾಗುತ್ತದೆ.

ಇನ್ನೂ "ಕುದುರೇನ ತಂದೀನಿ ಜೀನಾವಾ ಬಿಗಿದೀನಿ ಬರಬೇಕು ತಂಗಿ ಮದುವೇಗೆ" ಜಾನಪದ ಗೀತೆ ಯಾರು ಕೇಳಿಲ್ಲ ಹೇಳಿ?

ಇತ್ತೀಚಿನ ಶಿವಣ್ಣ ಅಭಿನಯದ ಕವಚ ಚಿತ್ರದ "ರೆಕ್ಕೆಯ ಕುದುರೆ ಏರಿ..." ಹಾಡು ಸುಮಧುರ.

ಹೀಗೆ ಕುದುರೆಯ ಮೇಲೆ ಬಂದಿರುವ ಹಾಡುಗಳು ಒಂದಕ್ಕಿಂತ ಒಂದು ಸುಮಧುರ ಮತ್ತು ಅರ್ಥಗರ್ಭಿತ. ಮುಂದೆಯೂ ನಾಟಕಗಳಲ್ಲಿ ಮತ್ತು ಸಿನಿಮಾದಲ್ಲಿ ಇನ್ನೂ ಹೆಚ್ಚಿನ ಕುದುರೆ ಹಾಡುಗಳ ನಿರೀಕ್ಷೆ ಮಾಡೋಣ...

ಎಲ್ಲರಿಗೂ ಅಂತರರಾಷ್ಟ್ರೀಯ ಕುದುರೆ ದಿನದ ಶುಭಾಶಯಗಳು..


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529