21 ನವೆಂಬರ್ 2023

ಪ್ರಾಮಾಣಿಕತೆ ಗೆ ಯಶಸ್ಸು ಖಚಿತ.

 



ಪ್ರಾಮಾಣಿಕತೆ ಗೆ ಯಶಸ್ಸು ಖಚಿತ.

ಚಕ್ರವರ್ತಿಯೊಬ್ಬರಿಗೆ ಸ್ವಂತ ಮಕ್ಕಳಿರಲಿಲ್ಲ.ಮುಂದಿನ ಚಕ್ರವರ್ತಿಯಾಗಿ ಯಾರನ್ನು ಮಾಡಬೇಕೆಂಬುದೇ ಅವರ ಚಿಂತೆ!ಅವರೊಮ್ಮೆ ಸಾಮ್ರಾಜ್ಯದ ಗಣ್ಯರನ್ನೆಲ್ಲ ತಂತಮ್ಮ ಮಕ್ಕಳನ್ನು ಕರೆದುಕೊಂಡು ಅರಮನೆಗೆ ಬರಬೇಕೆಂದು ಆಹ್ವಾನಿಸಿದರು. ಅಂದು ಗಣ್ಯಾತಿಗಣ್ಯರೆಲ್ಲ ಅರಮನೆಗೆ ತಂತಮ್ಮ ಮಕ್ಕಳನ್ನು ಕರೆದುಕೊಂಡು ಬಂದಿದ್ದರು. ಚಕ್ರವರ್ತಿಯವರ ಅಂಗರಕ್ಷಕನೂ ತನ್ನ ಮಗನನ್ನು ಕರೆದುಕೊಂಡು ಬಂದಿದ್ದ.ಚಕ್ರವರ್ತಿಯವರು ನಾನೀಗ ಮುದುಕ ಆಗುತ್ತಿದ್ದೇನೆ.ನನಗೆ ಮಕ್ಕಳಿಲ್ಲ.ನಿಮ್ಮೆಲ್ಲರ ಮಕ್ಕಳಲ್ಲಿ ಒಬ್ಬರನ್ನು ಮುಂದಿನ ಚಕ್ರವರ್ತಿಯಾಗಿ ನೇಮಿಸಬೇಕೆಂದಿದ್ದೇನೆ. ಅದಕ್ಕಾಗಿ ಪರೀಕ್ಷೆಯೊಂದನ್ನು ಏರ್ಪಡಿಸು  ತ್ತಿದ್ದೇನೆ.ಎಲ್ಲ ಮಕ್ಕಳಿಗೆ ಒಂದೊಂದು ಹೂವಿನ ಬೀಜವನ್ನು ಕೊಡುತ್ತೇನೆ. ಮಕ್ಕಳು ತಂತಮ್ಮ ಮನೆಯಲ್ಲಿ ಬಿತ್ತಲಿ. ಅದರಿಂದ ಹುಟ್ಟುವ ಗಿಡವನ್ನು ಮುಂದಿನ ವರ್ಷದ ಮೊದಲನೆಯ ದಿನದಂದು ಅರಮನೆಗೆ ತರಲಿ.ಯಾರ ಗಿಡ ಅತ್ಯುತ್ತಮವಾಗಿರುತ್ತದೋ ಅಂತಹ ಮಗು ಮುಂದಿನ ಚಕ್ರವರ್ತಿಯಾಗುತ್ತಾನೆ ಎಂದು ಘೋಷಿಸಿದರು. ಅಲ್ಲಿದ್ದವರೆಲ್ಲರಿಗೂ ತಮ್ಮ ಮಗನೇ ಮುಂದಿನ ಚಕ್ರವರ್ತಿ ಯಾಕಾಗಬಾರದು ಎನ್ನುವಾಸೆ!ಎಲ್ಲರೂ ನಾಮುಂದು-ತಾಮುಂದು ಎಂದು ಬೀಜಗಳನ್ನು ಪಡೆದು ಕೊಂಡು ಹೋದರು.

ಅಂದಿನಿಂದ ಎಲ್ಲರ ಬಾಯಲ್ಲೂ ಇದೇ  ಮಾತು.ನಮ್ಮ ಮನೆಯಲ್ಲಿ ಬೀಜ ಸಸಿಯಾಗಿದೆ, ಗಿಡವಾಗಿದೆ,ಗಿಡದಲ್ಲೊಂದು ಕಾಯಾಗಿದೆ,ಹೂ ಬಿಟ್ಟಿದೆ ಎಂದೆಲ್ಲ ಹೇಳಿ ಕೊಳ್ಳುತ್ತಿದ್ದರು. ಆದರೆ ಚಕ್ರವರ್ತಿಗಳ ಅಂಗರಕ್ಷಕನ ಮನೆಯಲ್ಲಿ ನಿರಾಸೆ ತುಂಬಿತ್ತು.ಆತನ ಮಗ ಬಿತ್ತಿದ ಬೀಜ ಸಸಿಯಾಗಲೇ  ಇಲ್ಲ!ಇಂದು ಸಸಿಯೊಡೆದೀತು, ನಾಳೆ ಸಸಿಯೊಡೆದೀತು ಎಂಬ ನಿರೀಕ್ಷೆಯಲ್ಲಿದ್ದರೂ,ವರ್ಷ ಕಳೆಯುತ್ತಾ ಬಂದರೂ  ಕುಂಡ ಖಾಲಿಯಾಗೇ  ಇತ್ತು!

ಆ ದಿನ ಬಂದೇ ಬಿಟ್ಟಿತು! ವರ್ಷದಾರಂಭದ ದಿನ ಅರಮನೆಯಲ್ಲಿ ತಾಯ್ತಂದೆಯರ-ಮಕ್ಕಳ  ದೊಡ್ಡ ಗುಂಪೇ ಸೇರಿತ್ತು. ಎಲ್ಲರ ಕೈಯಲ್ಲೂ ಸುಂದರವಾದ ಹೂ-ಹಣ್ಣುಗಳ ಗಿಡಗಳು!ಸಂಭ್ರಮವೋ ಸಂಭ್ರಮ! ಚಕ್ರವರ್ತಿಗಳು ಬಂದರು. ಎಲ್ಲರ ಗಿಡಗಳನ್ನು ನೋಡುತ್ತಾ ಶಹಬಾಷ್! ವಾರೆವ್ಹಾ!ಎಂದೆಲ್ಲ ಹೇಳುತ್ತಾ ಮುಂದೆ ಮುಂದೆ ಸಾಗಿದರು. ಒಂದನ್ನೂ   ಆಯ್ಕೆಮಾಡಲಿಲ್ಲ . ಕೊನೆಯ ಮೂಲೆಯಲ್ಲಿ ಜೋಲುಮುಖದೊಂದಿಗೆ ಅಂಗರಕ್ಷಕನ ಮಗ ನಿಂತಿದ್ದ. ಆತನ ಕೈಯಲ್ಲಿ ಖಾಲಿ ಕುಂಡ!ಚಕ್ರವರ್ತಿಗಳು ಏನಾಯಿತು ಎಂದು ಕೇಳಿದರು.ಆತ ಮಹಾಪ್ರಭು!ತಾವು ಕೊಟ್ಟಿದ್ದ ಬೀಜವನ್ನು ಬಿತ್ತಿದೆ,ಬಹಳ ಜತನ ಮಾಡಿದೆ.ಆದರೆ ಅದು ಸಸಿಯೊಡೆಯಲೇ ಇಲ್ಲ.ಖಾಲಿ ಕುಂಡವನ್ನೇ ತಂದಿದ್ದೇನೆ ಎನ್ನುತ್ತಾ ಬಿಕ್ಕಳಿಸಿ ಅಳತೊಡಗಿದ.ಚಕ್ರವರ್ತಿಗಳು ಆತನಿಗೆ ಸಮಾಧಾನ ಹೇಳಿದರು.ಆತನೇ ಮುಂದಿನ ಚಕ್ರವರ್ತಿಯೆಂದು ಘೋಷಿಸಿಬಿಟ್ಟರು.

ಅಲ್ಲಿದ್ದವರೆಲ್ಲ ಇದೆಂತಹ ಅನ್ಯಾಯ ?ಸುಂದರವಾದ ಗಿಡಗಳನ್ನು ಬೆಳೆದಿರುವ ಮಕ್ಕಳನ್ನು ಬಿಟ್ಟು ಖಾಲಿ ಕುಂಡದ ಹುಡುಗನನ್ನು ಚಕ್ರವರ್ತಿಯಾಗಿ ಘೋಷಿಸುವುದೇ?ಎಂದು ಗದ್ದಲವೆಬ್ಬಿಸಿದಾಗ,ಚಕ್ರವರ್ತಿಯವರು ಏರುದನಿಯಲ್ಲಿ ನಾನು ಅಂದು ಎಲ್ಲರಿಗೂ  ಕೊಟ್ಟಿದ್ದು ಬೇಯಿಸಿದ ಬೀಜಗಳನ್ನು!ಅವು ಸಸಿಯೊಡೆಯಲು ಸಾಧ್ಯವೇ ಇಲ್ಲ.ನೀವೆಲ್ಲಾ ಬೀಜವನ್ನು ಬಿತ್ತಿರುವಿರಿ,ಅದು ಸಸಿಯೊಡೆಯದಿದ್ದಾಗ ಮತ್ಯಾವುದೋ ಸಸಿಯನ್ನು ಬೆಳೆಸಿ ಇಲ್ಲಿಗೆ ತಂದಿದ್ದೀರಿ. ಆದರೆ ಈ ಬಾಲಕ ಪ್ರಾಮಾಣಿಕವಾಗಿ ಇಲ್ಲಿಗೆ ಬಂದಿದ್ದಾನೆ.ನನಗೆ ನಂಬಿಕಸ್ಥ ವ್ಯಕ್ತಿ ಬೇಕಾಗಿದ್ದುದರಿಂದ ನಾನು ಈತನನ್ನೇ ಆಯ್ಕೆ ಮಾಡುತ್ತಿದ್ದೇನೆ.ನೀವೆಲ್ಲ ಆತ್ಮಸಾಕ್ಷಿಯಾಗಿ ನಿಜವನ್ನೇ ಹೇಳಿ.ನೀವು ತಂದಿರುವ ಗಿಡಗಳು ನಾನು ಕೊಟ್ಟ ಬೀಜದ್ದೇ ?ಎಂದಾಗ ಎಲ್ಲರು ತಲೆತಗ್ಗಿಸಿದರು.

ಇಂದಿನ ಜಗದಲ್ಲೂ ಪ್ರಾಮಾಣಿಕತೆ ಕಡಿಮೆಯಾಗಿ ಅಪ್ರಮಾಣಿಕರು ವಿಜೃಂಭಿಸುವುದನ್ನು ಕಾಣಬಹುದು. ಆದರೆ ಅದು ಕ್ಷಣಿಕ.
ಪ್ರಾಮಾಣಿಕತೆಗೆ ಎಂದಿದ್ದರೂ  ಜಯವಿದ್ದೇ ಇರುತ್ತದೆ.ಸತ್ಯವಾಗಿ ನಡೆಯೋಣ ನಿಧಾನವಾದರೂ ಜಯ ನಮ್ಮದೆ.

ಸಿಹಿಜೀವಿ ವೆಂಕಟೇಶ್ವರ.
ಶಿಕ್ಷಕರು
ತುಮಕೂರು
9900925529

16 ನವೆಂಬರ್ 2023

ಕಪ್ ನಮ್ದೇ

 



ಕಪ್ ನಮ್ದೇ 


ಈ ಬಾರಿ ವಿಶ್ವ ಕಪ್ 

ನಮ್ಮದೇ |

ಹತ್ತು ಗೆದ್ದೋರಿಗೆ ಇನ್ನೊಂದು

ದೊಡ್ಡದೇ?|


*ಸಿಹಿಜೀವಿ ವೆಂಕಟೇಶ್ವರ*

ತುಮಕೂರು

14 ನವೆಂಬರ್ 2023

ಪ್ರಜಾಪತಿ...

 


ಪ್ರಜಾಪತಿ


ಜನ ಸೇವಕನಾಗಬೇಕು ಛತ್ರಪತಿ

ಶತ್ರುಗಳ ಎದುರಿಸಲು ಬೇಕು ಛಾತಿ

ಕೈಗೊಳ್ಳಬೇಕು  ಕಲ್ಯಾಣ ಕ್ರಾಂತಿ 

ಅಂತಹ ನಾಯಕನಾಗುವ ಪ್ರಜಾಪತಿ 


ಸಿಹಿಜೀವಿ ವೆಂಕಟೇಶ್ವರ

ತುಮಕೂರು


ದೇವರೊಂದಿಗೆ ಮಾತುಕಥೆ...

 


ದೇವರೊಂದಿಗೆ ವಾಗ್ವಾದ..

ದೇವರು ಪ್ರತ್ಯಕ್ಷನಾಗುವುದೇ ವಿರಳವಾದ ಸಂಧರ್ಭದಲ್ಲಿ ಒಬ್ಬನಿಗೆ ದೇವರು ಪ್ರತ್ಯಕ್ಷನಾದಾಗ ವರ ಕೇಳುವ ಬದಲಿಗೆ ಅವನು ದೇವರ ಮುಂದೆ ದೇವರು ಅವನಿಗೆ ಕೆಡುಕನ್ನೇ ಮಾಡಿದ ಬಗ್ಗೆ ಇಷ್ಟುದ್ದ ಪಟ್ಟಿ ನೀಡುತ್ತಾ ತನ್ನ ಆಕ್ಷೇಪಣೆ ಸಲ್ಲಿಸಿದ.  "ಬೆಳಗ್ಗೆ ಬೇಗ ಎಚ್ಚರವಾಗಲಿಲ್ಲ. ಕಾರುಸ್ಟಾರ್ಟ್ ಆಗಲು ಬಹಳ ತಡವಾಯಿತು. ಮಧ್ಯಾಹ್ನದ ಊಟದ ಡಬ್ಬಿ ಬದಲಾಗಿ, ತೊಂದರೆಯಾಯಿತು. ಸಂಜೆ ಮೊಬೈಲ್ ಕಾಲ್ ರಿಸೀವ್ ಮಾಡುತ್ತಿದ್ದಂತೆ ಹ್ಯಾಂಗ್ ಆಗಿ, ಡೆಡ್ ಆಯಿತು. ಮನೆಗೆ ಬಂದು ಕಾಲು ನೋವು ಪರಿಹರಿಸಿಕೊಳ್ಳಲು ಫುಟ್ ಮಸಾಜರ್ ನಲ್ಲಿ ಕಾಲಿಡುತ್ತಿದ್ದಂತೆ ಅದು ಕೆಟ್ಟು ನಿಂತಿತು. ಇಂದಿನ ಎಲ್ಲ ಕೆಲಸಗಳಲ್ಲೂ ವಿಘ್ನ ಹಾಗೂ ಆತಂಕಗಳು ಕಾಡಿದವು ಏಕೆ ? ಇದೇ ಏನು ನಿನ್ನ ಪೂಜೆ ಮಾಡಿದ್ದಕ್ಕೆ ಜಪ ತಪ ಮಾಡಿದ್ದಕ್ಕಾಗಿ ನೀನು ನನಗೆ ಕೊಡುವ ಬಹುಮಾನ?" ಎಂದು ಒಂದೇ ಸಮನೆ ಬಡಬಡಾಯಿಸಿದ. ಶಾಂತ ಚಿತ್ತದಿಂದ ಆಲಿಸಿದ ದೇವರು ನಗುತ್ತಾ ಉತ್ತರ ನೀಡಿದ.

ಭಕ್ತ " ಬೆಳಗ್ಗೆ ನಿನ್ನ ಜೀವಹರಣ ಮಾಡಲು ಮೃತ್ಯದೂತನೊಬ್ಬ ನಿನ್ನ ಹಾಸಿಗೆ ಬದಿಯಲ್ಲಿಕಾಯುತ್ತಿದ್ದ. ಅವನೊಂದಿಗೆ ಹೋರಾಡಿ ನಿಮ್ಮಜೀವ ಕಾಪಾಡಲು ದೇವದೂತನೊಬ್ಬನನ್ನು ಕಳುಹಿಸಿದ್ದೆ. ಇದು ನಿನಗೆ ಗೊತ್ತಾಗದಂತೆ ಹೆಚ್ಚು ಹೊತ್ತು ನಿದ್ದೆ ಮಾಡುವಂತೆ ಮಾಡಿದೆ.

ನೀನು ಸಂಚರಿಸುವ ದಾರಿಯಲ್ಲಿ ಕುಡಿದಮತ್ತಿನಲ್ಲಿ ಚಾಲಕನೊಬ್ಬ ಡ್ರೈವಿಂಗ್ ಮಾಡಿಕೊಂಡು ಬರುತ್ತಿದ್ದ, ಅವನಿಂದ ನಿನಗೆ ಅಪಘಾತವಾಗದಿರಲಿ ಎಂದು ನಿನ್ನ ಕಾರು ತಡವಾಗಿ ಸ್ಟಾರ್ಟ್ ಆಗುವಂತೆ ಮಾಡಿದೆ.

ನಿನಗೆ ಅಡುಗೆ ಮಾಡಿಕೊಡುತ್ತಿದ್ದ, ಬಾಣಸಿಗ ರೋಗಪೀಡಿತನಾಗಿದ್ದ. ಆತನ ರೋಗ ನಿನಗೆ ಹರಡದಂತೆ ಮಾಡಲು ನಿನ್ನ ಊಟದ ಡಬ್ಬ ಬದಲಿಸಿದೆ.

ಸಂಜೆ ನಿನ್ನ ಸ್ನೇಹಿತ ನಿನಗೆ ಕರೆ ಮಾಡಿ, ಸುಳ್ಳು ಸಾಕ್ಷಿ ಹೇಳಲು ಒಪ್ಪಿಸಲು ಬಯಸಿದ್ದ, ಅದಕ್ಕಾಗಿ ನಿನ್ನ ಮೊಬೈಲ್ ಹ್ಯಾಂಗ್ ಆಗುವಂತೆ ಮಾಡಿದೆ.

ನಿನ್ನ ಮನೆಯಲ್ಲಿದ್ದ ಫುಟ್ ಮಸಾಜರ್ನಲ್ಲಿ ನೀರು ಸೇರಿಕೊಂಡು ಶಾರ್ಟ್ ಆಗಿತ್ತು. ಅದು ಕಾರ್ಯ ನಿರ್ವಹಿಸಿದ್ದರೆ, ನಿನಗೆ ವಿದ್ಯುತ್ ಶಾಕ್ ತಗಲುವ ಸಾಧ್ಯತೆ ಇತ್ತು. ಅದಕ್ಕಾಗಿ ನಾನು, ಫುಟ್ ಮಸಾಜರ್ ಕಾರ್ಯನಿರ್ವಹಿಸದಂತೆ ನಿಷ್ಕ್ರಿಯೆಗೊಳಿಸಿದೆ ". ದೇವರ ಮಾತು ಕೇಳಿದ ಭಕ್ತನ ಕಣ್ಣಲ್ಲಿ ಪಶ್ಚಾತ್ತಾಪದ ನೀರಿತ್ತು.

ಅದಕ್ಕೆ ಹೇಳುವುದು ಆಗುವುದೆಲ್ಲ  ಒಳ್ಳೆಯದಕ್ಕೆ ಎಂದು.ಕೆಲವು ಬಾರಿ ನಾವಂದುಕೊಂಡಂತೆ ಆಗದಿದ್ದರೆ ಚಡಪಡಿಸುತ್ತೇವೆ. ಗುರಿ ಮುಟ್ಟಲಾಗದಿದ್ದರೆ ಖನ್ನತೆಗೆ ಜಾರುತ್ತೇವೆ. ಯಾವುದೇ ಒಂದು ನಮ್ಮ ಕೈ ತಪ್ಪಿದರೆ ನಮ್ಮ ಪ್ರಯತ್ನ ನಿರಂತರವಾಗಿದ್ದರೆ ಅದಕ್ಕಿಂತ ದೊಡ್ಡ ಕೊಡುಗೆ ನಮ್ಮದಾಗುವುದರಲ್ಲಿ ಸಂದೇಹವಿಲ್ಲ.

ಸಿಹಿಜೀವಿ ವೆಂಕಟೇಶ್ವರ
ಶಿಕ್ಷಕರು
ತುಮಕೂರು
9900925529

ಒಂದಾಗಿ ಬಾಳೋಣ .


 


ಒಂದಾಗಿ ಬಾಳೋಣ

ಒಮ್ಮೆ ಸ್ವರ್ಗಕ್ಕೆ ಯಾರು ಹೋಗಬಹುದು ಎಂಬ ಚರ್ಚೆ ಬಂದಾಗ ಕನಕದಾಸರು ಸೂಕ್ಷ್ಮವಾಗಿ "ನಾನು ಹೋದರೆ ಹೋದೇನು" ಎಂದಿದ್ದರು. ಹೌದು ನಾನು ಎಂಬ ಅಹಂ ನಿಂದ ಇಂದು ಏನೆಲ್ಲಾ ಅನಾವುತಗಳಾಗುತ್ತಿವೆ ಎಂಬುದು ನಮ್ಮ ಕಣ್ಣಮುಂದಿದೆ ಆದರೂ ನಾನತ್ವ ಬಿಡುತ್ತಿಲ್ಲ ವಿಶಾಲ ಮನೋಭಾವ ಬೆಳೆಯುತ್ತಿಲ್ಲ

ಒಂದು ದಿನ ಒಂದು ಮನೆಯ ಹಣತೆಯಲ್ಲಿ ಒಂದು ಚಿಕ್ಕ ಭಿನ್ನಾಭಿಪ್ರಾಯ ಶುರುವಾಯಿತು.
ಹಣತೆ "ನನ್ನಿಂದ ದೀಪ ಉರಿಯುತ್ತಿದೆ ಆ ಬೆಳಕು ನನ್ನದು ” ಎಂದು ಹೇಳಿತು.

ಇದನ್ನು ಕೇಳಿದ ಹಣತೆಯಲ್ಲಿದ್ದ ಎಣ್ಣೆ "ನಾನು ಆ ದೀಪಕ್ಕೆ ಜೀವಾಳ.ನಾನೇ ಇರದಿದ್ದರೆ ದೀಪವೂ ಇಲ್ಲ, ಬೆಳಕೂ ಇಲ್ಲ ಅದಕ್ಕಾಗಿ ಆ ಬೆಳಕು ನನಗೆ ಸೇರಿದ್ದು” ಎಂದಿತು. 

ಇದನ್ನು ಕೇಳಿದ ಬತ್ತಿ "ನಾನು ಉರಿಯುತ್ತಿರುವುದರಿಂದಲೇ ದೀಪ ಉರಿಯುತ್ತಿದೆ ಆದ್ದರಿಂದ ನ್ಯಾಯವಾಗಿ ಬೆಳಕು ನನ್ನದೇ" ಎಂದಿತು.

ಈ ಕಚ್ಚಾಟವನ್ನು ಸೂಕ್ಷ್ಮದಿಂದಲೇ ನೋಡುತಿದ್ದ ಗಾಳಿ "ನಾನು ಇಲ್ಲದೇ ದೀಪವು ಉರಿಯಲ್ಲ , ನಾನು ಹೆಚ್ಚಾದರೆ ದೀಪ ಆರಿಹೋಗುತ್ತದೆ ಆದ್ದರಿಂದ ಬೆಳಕು ನನ್ನದು” ಎಂದು ವಾದಿಸಿತು.

ನಾನು ನನ್ನಿಂದ ಎಂಬ ಕಚ್ಚಾಟದಲ್ಲಿ ಹಣತೆ ಒಡೆದು ಹೋಯಿತು. ಎಣ್ಣೆ ಹರಿದು ಹೋಯಿತು. ಬತ್ತಿಗೆ ಎಣ್ಣೆಯಿಲ್ಲದೆ ಕುಗ್ಗಿ ಹೋಯಿತು. ಗಾಳಿ ಜೋರಾಗಿ ಬೀಸಿ ಉರಿಯುತ್ತಿದ್ದ ದೀಪ ಆರಿಹೋಯಿತು !

ಎಲ್ಲವೂ ಒಟ್ಟಾಗಿ ಇರುತ್ತಿದ್ದರೆ ಆ ದೀಪದ ಭರವಸೆಯ ಬೆಳಕು ಎಲ್ಲರ ಪಾಲಾಗಿತ್ತು. "ಅಹಂ ಭಾವನೆಯಿಂದ ಅಂಧಕಾರವೇ ಹೊರತು ಬೆಳಕಿನ ಸಾನಿಧ್ಯವಿಲ್ಲ"
ಕುವೆಂಪುರವರು ಅದಕ್ಕೆ ಹೇಳಿದ್ದು "ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ" ಎಲ್ಲರೂ ಒಬ್ಬನಿಗಾಗಿ ಒಬ್ಬ ಎಲ್ಲರಿಗಾಗಿ ಎಂಬ ಸಹಕಾರ ತತ್ವ ಪಾಲಿಸುತ್ತಾ ಸಹಬಾಳ್ವೆ ಮಾಡಿದರೆ ಈ ಧರೆ ನಾಕವಾಗುವುದು.

ಹಮ್ಮಿನಿಂದ ಬ್ರಹ್ಮನೂ ಕೆಟ್ಟ ನಮ್ ಮನೇಲಿ ಒಬ್ಬ ಸುಮ್ ಸುಮ್ ನೆ ಕೆಟ್ಟ  ಎಂಬ ಗಾದೆಯಂತೆ ಇಂದು ಸಾಮರಸ್ಯದ ಕೊರತೆ ಕಾಡುತ್ತಿದೆ."ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಂ ನ ಕೋಟೆಯಲ್ಲಿ " ಎಂಬ ಕವಿವಾಣಿಯು ಇದನ್ನೇ ನೆನಪಿಸುತ್ತದೆ. "ಐದು ಬೆರಳು ಕೂಡಿದರೆ ಒಂದು ಮುಷ್ಟಿ, ಹಲವು ಮಂದಿ ಸೇರಿದರೆ ಈ ಸಮಷ್ಟಿ" ಆದ್ದರಿಂದ ಕತ್ತರಿಯಂತೆ ಹರಿಯುವ ಕಾರ್ಯ ಮಾಡದೇ ಸೂಜಿಯಂತೆ ಹೊಲಿಯುವ ಕೆಲಸ ಮಾಡುತ್ತಾ ಏಕತೆಯ ಮಂತ್ರ ಪಠಿಸುತ್ತಾ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ನೆನಯುತ್ತಾ ನಾವೆಲ್ಲರೂ ಒಂದಾಗಿ ಬಾಳೋಣ...

ಸಿಹಿಜೀವಿ ವೆಂಕಟೇಶ್ವರ
ತುಮಕೂರು