22 ಆಗಸ್ಟ್ 2023

ಕೂಲಿಯಿಂದ M B B S ಗೆ.....


 


ಕೂಲಿಯಿಂದ ಎಂ ಬಿ ಬಿ ಎಸ್ ಗೆ ...

ಬಹುತೇಕ ಎಲ್ಲಾ ಪೋಷಕರ ಆಸೆ ತಮ್ಮ ಮಕ್ಕಳನ್ನು ಡಾಕ್ಟರ್ ಅಥವಾ ಇಂಜಿನಿಯರಿಂಗ್ ಮಾಡಬೇಕು ಎಂಬುದು. ಇದಕ್ಕೆ ತಯಾರಿ ಮಾಡಲು ಐದನೇ ತರಗತಿಯಿಂದ ನೀಟ್ ಜೆ ಇ ಇ ಪರೀಕ್ಷೆಯ ಕೋಚಿಂಗ್ ಇರುವ ಶಾಲೆಗಳಿಗೆ ಲಕ್ಷಾಂತರ ಹಣ ಸುರಿದು ದಾಖಲು ಮಾಡುವರು. ಅಪ್ಪಿತಪ್ಪಿ ಮೊದಲ ಪ್ರಯತ್ನದಲ್ಲಿ ನೀಟ್ ಸಕ್ಸಸ್ ಆಗದಿದ್ದರೆ ಮತ್ತೊಂದಷ್ಟು ಲಕ್ಷ ಕಟ್ಟಿ ಲಾಂಗ್ ಟರ್ಮ್ ದಂಡಯಾತ್ರೆ ಶುರುಮಾಡುತ್ತಾರೆ.ಆಗಲೂ ಸೀಟ್ ಸಿಗದಿದ್ದರೆ ಬಾರಿ ಕುಳಗಳು ಕೋಟಿ ಸುರಿದು ಪ್ರೈವೇಟ್ ಎಂ ಬಿ ಬಿ ಎಸ್ ಕಾಲೇಜಗಳಲ್ಲಿ ದಾಖಲು ಮಾಡಿಯೇ ಬಿಡುತ್ತಾರೆ.ಒಟ್ಟಿನಲ್ಲಿ ನಮ್ಮ ಮಗ ಅಥವಾ ಮಗಳು ಡಾಕ್ಟರ್ ಆಗಲೇಬೇಕು ಎಂಬುದು ಪೋಷಕರ ದೃಢವಾದ ನಿರ್ಧಾರ! ಇನ್ನೂ ಕೆಲವರು ತಮ್ಮ ಮಕ್ಕಳನ್ನು ವಿದೇಶಗಳಿಗೆ ಕಳಿಸಿ ಡಾಕ್ಟರ್ ಮಾಡುವುದೂ ಉಂಟು.
ಇದು ಉಳ್ಳವರ ಕಥೆಯಾದರೆ ಬಡ ಮತ್ತು ಮದ್ಯಮ ವರ್ಗದ ಪೋಷಕರು ಎಟುಕದ ದ್ರಾಕ್ಷಿ ಉಳಿ ಎಂಬಂತೆ ಪಿ ಯು ಸಿ ನಂತರ ಇತರ ಕೋರ್ಸ್ ಸೇರುತ್ತಾರೆ.
ಆದರೆ ಇಲ್ಲೊಬ್ಬ ಯುವಕ ಬಡ ಕುಟುಂಬದಲ್ಲಿ ಜನಿಸಿ ,ಕೂಲಿ ಮಾಡುತ್ತಾ, ಸಂಸಾರ ನಿಭಾಯಿಸುತ್ತಾ  ತನ್ನ ಬಲವಾದ ಇಚ್ಚಾಶಕ್ತಿ ಮತ್ತು ಬದಲಾಗದ ಗುರಿಯನ್ನು ಸಾಧಿಸಲು ತನ್ನ 33 ನೇ ವಯಸ್ಸಿನಲ್ಲಿ M B B S ಸೀಟ್ ಪಡೆದು ಈ ವರ್ಷ ಕಾಲೇಜಿಗೆ ಸೇರಿದ್ದಾನೆ ಮತ್ತು ಡಾಕ್ಟರ್ ಆಗಲು ನಾಲ್ಕೂವರೆ ಹೆಜ್ಜೆ ಮಾತ್ರ ಬಾಕಿ..
12 ನೇ ತರಗತಿ ಮುಗಿದ ಮೇಲೆ 15 ವರ್ಷ ಕೂಲಿ ಕಾರ್ಮಿಕನಾಗಿ ದುಡಿದು  ನಂತರ ಎಂ ಬಿ ಬಿ ಎಸ್ ಸೀಟು ಪಡೆದ ಒಡಿಶಾದ ಕೃಷ್ಣ ಚಂದ ಅಟಕಾ ರವರ ಸಾಧನೆ ಯುವಕರಿಗೆ ಖಂಡಿತವಾಗಿಯೂ ಪ್ರೇರಣಾದಾಯಕ . 
ಅವರ ಸಾಧನೆಯ ಪಥವನ್ನು ಅವರ ಬಾಯಲ್ಲೇ ಕೇಳೋಣ ಬನ್ನಿ. 

ನಾನು ಒಡಿಶಾದ  ಬುಡಕಟ್ಟಿನ ಯುವಕ    ರಾಯಗಡ ಜಿಲ್ಲೆಯ ಬಿಸ್ಸಂಕಟಕ ಬ್ಲಾಕ್ನ  ಥುಪಾಡಿ ಎಂಬುದು ನಮ್ಮ ಗ್ರಾಮ. ನಮ್ಮ ತಂದೆಗೆ ನಾವು
ಐದು ಮಕ್ಕಳು.  ಒಂದು ಎಕರೆ ಮಾತ್ರ  ಅನುತ್ಪಾದಕ ಕೃಷಿ ಭೂಮಿಯಿದೆ.ಜೀವನಕ್ಕೆ ಕೂಲಿಯೇ ಆಧಾರವಾಗಿತ್ತು. ಕಷ್ಟಕರ ಜೀವನದ ನಡುವೆಯೂ  2006 ರಲ್ಲಿ 58% ಗಳಿಸುವ ಮೂಲಕ  ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣನಾದೆ.
ನಾನು ಪಿ ಯು ಸಿ ಪಾಸ್ ಆಗಿ ಡಾಕ್ಟರ್ ಓದಲು ಆಸೆ ಇತ್ತು ಆದರೆ ಮನೆಯಲ್ಲಿ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿತ್ತು.
ನನ್ನ ಹೆತ್ತವರು ಜೀವನ ನಿರ್ವಹಣೆಗೆ ಹೆಣಗಾಡುತ್ತಿದ್ದ ಸಮಯದಲ್ಲಿ, ನನ್ನ ಆದ್ಯತೆ ಓದು ಆಗಿರಲಿಲ್ಲ.  ನನ್ನ ಮೂವರು ಕಿರಿಯ ಸಹೋದರರು ಕೂಡಾ ಸಂಸಾರ ನಿಭಾಯಿಸಲು ಕೆಲಸ ಮಾಡಲು ಪ್ರಾರಂಭಿಸಿದರು ಒಬ್ಬ ಮೇಸ್ತ್ರಿಯಾಗಿ , ಮತ್ತೊಬ್ಬ ಮೋಟಾರ್ ಮೆಕ್ಯಾನಿಕ್ ಆಗಿ   ಮತ್ತು ಮೂರನೆಯವನು   ಕೃಷಿಭೂಮಿಯಲ್ಲಿ  ಕೂಲಿಯಾಗಿ, ಕೆಲಸ ಮಾಡುತ್ತಿದ್ದ.
ಆದರೂ ಮನೆಯ ಖರ್ಚು ವೆಚ್ಚ ಹೆಚ್ಚಾಗುತ್ತಲೇ ಇತ್ತು. ಇದನ್ನು ಮನಗಂಡು  ಬಿ.ಎಸ್ಸಿಗೆ ಪ್ರವೇಶ ಪಡೆದರೂ, ಅರ್ಧದಲ್ಲೇ ಓದು ನಿಲ್ಲಿಸಿ
ಮನೆಗೆ ಹಿಂತಿರುಗಿದೆ. ಗದ್ದೆಯಲ್ಲಿ ದಿನವಿಡೀ  ಕಷ್ಟಪಟ್ಟು ದುಡಿಯುತ್ತಿದ್ದೆ.ಆದರೆ ನನಗೆ ಸಿಗುತ್ತಿದ್ದ ದಿನಗೂಲಿ  ಕೇವಲ  100ರೂಪಾಯಿ!  ಯಾರೋ ಕೇರಳದಲ್ಲಿ ಉತ್ತಮ ಕೂಲಿ ನೀಡುವರು ಎಂದು ಕೇಳಿ ಕೇರಳಕ್ಕೆ ವಲಸೆ ಬಂದೆ.
 ಪೆರುಂಬವೂರಿನಲ್ಲಿ ಮೊದಲ ಕೆಲವು ತಿಂಗಳುಗಳು ನನಗೆ ಕೆಲಸಕ್ಕೆ ತಕ್ಕ ಕೂಲಿ ಸಿಗಲೇ ಇಲ್ಲ. ಮತ್ತೆ ನನ್ನ ಅಲೆಮಾರಿ ದಿನಚರಿ ಮುಂದುವರೆಯಿತು.ಕೊಟ್ಟಾಯಂನಲ್ಲಿರುವ ಬೆಂಕಿಕಡ್ಡಿ ತಯಾರಿಕಾ ಘಟಕದಲ್ಲಿ  ಕೆಲಸಕ್ಕೆ ಸೇರಿದೆ
ಅಲ್ಲಿಯೂ ನಾನು ಹಣಕ್ಕಾಗಿ ಹೆಣಗಾಡಿದೆ.
2014 ರಲ್ಲಿ ತೌಪಾಡಿಗೆ ಹಿಂದಿರುಗಿದೆ ಅಲ್ಲಿಯೇ   ಕೃಷಿ ಕಾರ್ಮಿಕನಾಗಿ ಕೆಲಸ ಮಾಡಿದೆ. ಇದೇ ವೇಳೆಯಲ್ಲಿ ನನ್ನ ಜೀವನದಲ್ಲಿ ಮತ್ತೊಂದು ತಿರುವು ಕಂಡಿತು. ನನ್ನ ಮನೆಯವರು ನನಗೆ ಮದುವೆ ಮಾಡಲು ನಿಶ್ಚಯಿಸಿ, ಹೆಣ್ಣು ಗೊತ್ತುಪಡಿಸಿದರು. ಮದುವೆಯ ಹೆಣ್ಣು ಮಿಟ್ಟುಲ  ಒಪ್ಪಿದರೂ ಅವರ ತಂದೆ ಬಡತನದ ಕುಟುಂಬಕ್ಕೆ ಮಗಳ ಕೊಡಲು ಒಪ್ಪಲಿಲ್ಲ. ಕೊನೆಗೆ ಮಿಟ್ಟುಲ ಳ  ಹಠಕ್ಕೆ ಮಣಿದು ಅವರ ತಂದೆ ನನಗೆ ಮಗಳ ನೀಡಿ ಮದುವೆ ಮಾಡಿದರು. ನಮಗೀಗ ಒಬ್ಬ  ಮಗಳು ಮತ್ತು ಬ್ಬ ಮಗನಿದ್ದಾನೆ.
ನಾನು ಕೃಷಿ ಕೂಲಿಯಾಗಿ ಕೆಲಸ ಮಾಡುವಾಗ  ನನ್ನ ಪ್ರಾಥಮಿಕ ಶಾಲಾ ಶಿಕ್ಷಕರ ಪ್ರೋತ್ಸಾಹದ ಮಾತುಗಳು ನನ್ನ ಕಿವಿಯಲ್ಲಿ ರಿಂಗಣಿಸುತ್ತಲೇ ಇದ್ದವು. ಡಾಕ್ಟರ್ ಆಗುವ ನನ್ನ ಬಯಕೆ ತೀವ್ರವಾಯಿತು.  2021 ರಲ್ಲಿ  ನಾನು ತರಬೇತಿ ಕೋರ್ಸ್ಗೆ ಸೇರಿಕೊಂಡೆ ಮತ್ತು ನೀಟ್   ಪರೀಕ್ಷೆಗೆ ತಯಾರಿಗಾಗಿ ಬರ್ಹಾಂಪುರದಿಂದ  ಪುಸ್ತಕಗಳನ್ನು ಖರೀದಿಸಿ ಓದಲು  ಪ್ರಾರಂಭಿಸಿದೆ ಕೂಲಿ ಮಾಡುತ್ತಲೇ ಓದುತ್ತಾ 2022 ರಲ್ಲಿ ನೀಟ್ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದರೂ   ಹಣದ ಕೊರತೆಯಿಂದ ಕೌನ್ಸೆಲಿಂಗ್ ಗೆ  ಹೋಗಲಾಗಲಿಲ್ಲ. 2023 ರಲ್ಲಿ   ಮತ್ತೊಮ್ಮೆ NEET  ಪರೀಕ್ಷೆ ಬರೆದೆ. 7,18,996 ರ ಅಖಿಲ ಭಾರತ ಶ್ರೇಣಿಯನ್ನು ಮತ್ತು 3,902 ರ ರಾಜ್ಯ ಶ್ರೇಣಿಯನ್ನು ಪಡೆದೆ.
ಮತ್ತೆ ಅವಕಾಶ ಕೈತಪ್ಪಿ ಹೋಗಬಾರದು ಎಂದು ನಿರ್ಧರಿಸಿ ನಮ್ಮ ಗ್ರಾಮದ ಲೇವಾದೇವಿದಾರರೊಬ್ಬರ ಬಳಿ ಪ್ರವೇಶ ಶುಲ್ಕವಾಗಿ ₹37,950 ಸಾಲ ಪಡೆಯಲು ಮುಂದಾದೆ. ಆಶ್ಚರ್ಯಕರ ಸಂಗತಿಯೆಂದರೆ, ಸಾಲಗಾರನು ತಾನು ಬಡ್ಡಿಯನ್ನು ವಿಧಿಸುವುದಿಲ್ಲ ಎಂದು ಹೇಳಿದರು.
ಈ ಬಾರಿ ಕುಟುಂಬ ಸದಸ್ಯರು ನನ್ನ ಬೆಂಬಲಕ್ಕೆ ನಿಂತಿದ್ದಾರೆ.
ಕಲಹಂಡಿಯ  ಸಾಹಿದ್ ರೆಂಡೋ ಮಜ್ಜಿ ವೈದ್ಯಕೀಯ ಕಾಲೇಜಿನಲ್ಲಿ M B B S  ಗೆ  ದಾಖಲಾಗಿರುವೆ. ನಮ್ಮ ಊರಿನಲ್ಲಿ ಅನಾರೋಗ್ಯದ ಪರಿಣಾಮವಾಗಿ ಹತ್ತಿರದಲ್ಲಿ ಯಾವುದೇ ಡಾಕ್ಟರ್ ಮತ್ತು  ಆಸ್ಪತ್ರೆ  ಇಲ್ಲದೆ ಹಲವಾರು ಜೀವಗಳು ಬಲಿಯಾಗಿವೆ.ನಾನು ಡಾಕ್ಟರ್ ಆಗಿ ನಮ್ಮ ಊರು ನಮ್ಮ ನಾಡಿನಲ್ಲಿ ಸೇವೆ ಮಾಡುವೆ.
ಎಂದು ಕೃಷ್ಣ ಚಂದ ಅಟಕಾ ರವರು  ಆತ್ಮವಿಶ್ವಾಸದಿಂದ ಹೇಳುವಾಗ ನಂಬಿಕೆ ,ಶ್ರದ್ದೆ,ಛಲವನ್ನು ಮೈಗೂಡಿಸಿಕೊಂಡು ಗುರಿಯೆಡೆಗೆ ಸಾಗುವವರಿಗೆ ಯಾವುದೂ ಅಸಾಧ್ಯವಲ್ಲ ಎಂಬುದು ಮನವರಿಕೆಯಾಗುತ್ತದೆ.ಕೃಷ್ಣ ಚಂದ ಅಟಕಾರವರು ಡಾಕ್ಟರ್ ಆಗಿ ಜನಸೇವೆಯಲ್ಲಿ ತೊಡಗಲಿ ಎಂದು ನಾವೆಲ್ಲರೂ ಹಾರೈಸೋಣ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529

20 ಆಗಸ್ಟ್ 2023

ಸಿಹಿಜೀವಿಯ ಹನಿಗಳು...

 


ಸಿಹಿಜೀವಿಯ ಹನಿಗಳು 


ಕವನವಾಸ....


ಹದಿನಾಲ್ಕು ವರ್ಷ ಪಾಂಡವರು

ಕಾಡಿನಲ್ಲಿ ಮಾಡಿದರು ವನವಾಸ|

ಕವಿತೆಗಳೊಂದಿಗೆ  ಕವಿ ಹದಿನಾಲ್ಕು ವರ್ಷ ಕಳೆದ ಅದು ಕವನವಾಸ||


ನೆನೆದವರ ಮನದಲ್ಲಿ...


ನಾವು ಮನಸಿನಲ್ಲಿ ಅಂದುಕೊಂಡವರು ಮುಂದೆ ಬಂದರೆ 

ನೆನೆದವರ ಮನದಲ್ಲಿ ||

ಮಳೆಯಲ್ಲಿ ನೆನೆಯುವವರ ಮನದಲ್ಲಿ ನಾವು ಇದ್ದರೆ  ಅದೂ ಕೂಡಾ ನೆನೆದವರ ಮನದಲ್ಲಿ|| 


ಸಿಹಿಜೀವಿ ವೆಂಕಟೇಶ್ವರ

ತುಮಕೂರು

19 ಆಗಸ್ಟ್ 2023

ಶ್ರಾವಣ ಮತ್ತು ಸಣ್ಣಪ್ಪ...

 


ಶ್ರಾವಣ ಮತ್ತು ಸಣ್ಣಪ್ಪ...


ಶ್ರಾವಣ ಪದವೇ ಒಂದು ಸಂಭ್ರಮ. ಬೇಂದ್ರೆ ಅಜ್ಜ ಹೇಳಿದಂತೆ ಶ್ರಾವಣ ಬರೀ ನಾಡಿಗೆ ಬರದೇ ಕಾಡಿಗೆ ಸಕಲ ಜೀವಿಗಳಿಗೆ ಹೊಸ ಚೈತನ್ಯ ಮೂಡಿಸುತ್ತದೆ. ಶ್ರಾವಣವೆಂದರೆ ಹೊಲ ಗದ್ದೆಗಳು ಹಸಿರೊದ್ದು ನಲಿವ ಕಾಲ. ಹಬ್ಬಹರಿದಿನಗಳ ಶ್ರದ್ಧಾ ಭಕ್ತಿಯ ಆಚರಣೆಗಳ ಕಾಲ. ನಾಡಿನ ಬಹುತೇಕ ಕಡೆ ಶ್ರಾವಣ ಶನಿವಾರ ಮತ್ತು ಸೋಮವಾರಗಳನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಕೆಲವೆಡೆ ಧಾರ್ಮಿಕ ಪುರಾಣಗಳನ್ನು ಶ್ರದ್ಧಾ ಭಕ್ತಿಯಿಂದ ಪಾರಾಯಣ ಮಾಡುವರು ಜೊತೆಗೆ ಕೆಲ ವ್ರತಗಳನ್ನು ಆಚರಿಸುವರು.ಅದರಲ್ಲಿ ಪ್ರಮುಖವಾದ ವ್ರತವೆಂದರೆ ವರಮಹಾಲಕ್ಷಿ ವ್ರತ. ಮೊದಲು ಕೆಲವೇ ಜನರು ಆಚರಿಸುತ್ತಿದ್ದ ವರಮಹಾಲಕ್ಷ್ಮಿ ಹಬ್ಬ ಇಂದು ಹಳ್ಳಿಗಳಿಗೂ ವ್ಯಾಪಿಸಿ ಸಾಂಸ್ಕೃತಿಕ ಬದಲಾವಣೆ ಮತ್ತು ಸಾಮಾಜಿಕ ಬದಲಾವಣೆಗೂ ಸಾಕ್ಷಿಯಾಗಿದೆ. ಶ್ರಾವಣ ಮಾಸವು ನನ್ನ ಬಾಲ್ಯವನ್ನು  ಬಹು ಸಂತಸಗೊಳಿಸಿದೆ ಅದಕ್ಕೆ ಶ್ರವಣಕ್ಕೆ ಧನ್ಯವಾದಗಳನ್ನು ಹೇಳಲೇಬೇಕು. ನಮ್ಮ ಬಾಲ್ಯದ ದಿನಗಳಲ್ಲಿ ನಮ್ಮ ಊರ ಸುತ್ತ ಮುತ್ತಲಿನ ಊರುಗಳಲ್ಲಿ ಶನಿವಾರಗಳಂದು ಶನಿಮಹಾತ್ಮೆ ಓದುವ ಮತ್ತು ಓದಿಸುವ ಕಾರ್ಯ ಸಾಮಾನ್ಯವಾಗಿತ್ತು ಆಗ ಶನಿಮಹಾತ್ಮೆ ಕಥೆ ಓದಲು ಎಲ್ಲರಿಗೂ ಬರುತ್ತಿರಲಿಲ್ಲ ಕಾರಣವೆಂದರೆ ಆ ಪುಸ್ತಕದಲ್ಲಿ ಬರುವ ,ಜಂಪೆ ತ್ರಿಹುಡಿ, ಆದಿತಾಳ ಮುಂತಾದ ಸಂಗೀತ ತಾಳ ಲಯಬದ್ಧವಾಗಿ ಓದಬೇಕಿತ್ತು. ಇದರಿಂದಾಗಿ  ಸಾಮಾನ್ಯವಾಗಿ ಓದಲು ಬರುವ ಎಲ್ಲರಿಗೂ ಸುಲಭವಾಗಿ ಶನಿಮಹಾತ್ಮೆ ಓದಲಾಗುತ್ತಿರಲಿಲ್ಲ. ನಮ್ಮ ಬೀದಿಯಲ್ಲಿ ನಮ್ಮ ಮನೆಯ ಪಕ್ಕದಲ್ಲೇ ವಾಸವಿದ್ದ ಸಣ್ಣಪ್ಪ ಶನಿಮಹಾತ್ಮೆ ಓದಲು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬಹಳ ಪ್ರಸಿದ್ಧರು. ಕೃಷ ದೇಹದ ಸಣ್ಣಪ್ಪ ನವರು ಅರವತ್ತು ದಾಟಿದ್ದರೂ ಅವರ  ಕಂಚಿನ ಕಂಠ ಇತರ ಬೀದಿಗೂ ಕೇಳಿಸುತ್ತಿತ್ತು. ಅವರು ಶನಿಮಹಾತ್ಮೆ ಓದಲು ನಮ್ಮ ಊರು ಮತ್ತು  ಬೇರೆ ಹಳ್ಳಿಗಳಿಗೆ ಹೊರಟರೆ ನನಗೆ ಖುಷಿಯೋ ಖುಷಿ ಯಾಕಂದರೆ ಮರುದಿನ ನನಗೆ ಮತ್ತು ಅವರ ಮಗ ಹಾಗೂ ನನ್ನ ಗೆಳೆಯ ಸೀನನಿಗೆ ಸಣ್ಣಪ್ಪರವರು ದೇವರ ಪ್ರಸಾದ ನೀಡುತ್ತಿದ್ದ  ತಂಬಿಟ್ಟು, ಮಂಡಕ್ಕಿ, ಬಾಳೆಹಣ್ಣು ಇತಹಣ್ಣುಗಳು ! ನಾವಿಬ್ಬರು ಬಾಲಕರು ಆ ಎಲ್ಲಾ ತಿನಿಸುಗಳನ್ನು ತಿಂದು ಮಿಕ್ಕಿದರೆ ಉಳಿದ ನಮ್ಮ ಸ್ನೇಹಿತರಿಗೆ ಕೊಡುತ್ತಿದ್ದೆವು.ಮುಂದಿನ ಶನಿವಾರ ಕಳೆದು ಭಾನುವಾರಕ್ಕೆ ಕಾಯುತ್ತಿದ್ದೆವು. ಹೆಂಡತಿ ತೀರಿಕೊಂಡ ಮೇಲೆ ಸಣ್ಣಪ್ಪನವರು  ಮಗನಿಗೆ ತಾಯಿಯ ಪ್ರೀತಿ ಕಡಿಮೆಯಾಗದಂತೆ  ಸಾಕುತ್ತಿದ್ದರು.  ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದ  ಅವರೇ ತಮ್ಮ ಮಗನಿಗೆ ಊಟ ಮಾಡಿ ಬಡಿಸುತ್ತಿದ್ದರು. ಈಗ ಸಣ್ಣಪ್ಪನವರು ಇಲ್ಲ.ಅವರ ಮಗ ಸೀನ ಇದ್ದಾನೆ  ಮೊನ್ನೆ ಊರಿಗೆ ಹೋದಾಗ ಅವನನ್ನು ಮಾತಾಡಿಸಿ ಬಂದೆ.ಅವರ ಮನೆಯಲ್ಲಿ ಸಣ್ಣಪ್ಪ ನೆನಪಾದರು. ಶ್ರಾವಣ ಮಾಸ ಬಂದಾಗಲೆಲ್ಲ ಇಂತಹ ಸಾರ್ಥಕ ಹಿರಿಯ ಜೀವಿಗಳ ನೆನಪಾಗುತ್ತದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು.

14 ಆಗಸ್ಟ್ 2023

ಪೇಡಾ..

 



ಹಂಚಿಬಿಡು ಪೇಡಾ .


ಕೋಗಿಲೆಯು ಕಪ್ಪಾದರೂ ನೋಡಾ

ಸದಾ ಹಾಡುವುದು ಸುಂದರ ಹಾಡ|

ಕೊರತೆ ನೆನದು ಕೊರಗುವುದು ಬೇಡ

ಇರುವುದ ನೆನೆದು ಹಂಚಿಬಿಡು ಪೇಡ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು 


13 ಆಗಸ್ಟ್ 2023

ಆಗಸ್ಟ್ ಮಾಸದ ನೆನಪುಗಳು... ಭಾಗ _12 ನರಗುಂದದ ಬಾಬಾ ಸಾಹೇಬ್


 

ಆಗಸ್ಟ್ ಮಾಸದ ನೆನಪುಗಳು...

ಭಾಗ _12

ನರಗುಂದದ  ಬಾಬಾ ಸಾಹೇಬ್

ಬಾಬಾ ಸಾಹೇಬ್ ಎಂದರೆ ತಟ್ಟನೆ ನಮ್ಮ ನೆನೆಪಿಗೆ ಬರುವುದು ಡಾ.ಬಿ ಆರ್ ಅಂಬೇಡ್ಕರ್. ನಮ್ಮ ನಾಡಿನ ರಾಜವಂಶದ ಕುಡಿಯೊಂದು ಅದೇ ಹೆಸರಿನಿಂದ ಪ್ರಖ್ಯಾತಿ ಪಡೆದು ಬ್ರಿಟಿಷರ ದುರಾಡಳಿತದ ವಿರುದ್ಧ ತೊಡೆ ತಟ್ಟಿ ನಿಂತು ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ಜನರನ್ನು ಹೋರಾಡಲು ಪ್ರೇರಣೆ ನೀಡಿದ ಧೀರನೇ ನರಗುಂದ ಬಾಬಾ ಸಾಹೇಬ್.

ಭಾಸ್ಕರ್ ರಾವ್ ಭಾವೆ ಹುಟ್ಟುತ್ತಲೇ ಐಶಾರಾಮಿ ಜೀವನದಲ್ಲಿ ಕಳೆದರೂ ಕ್ರಮೇಣ ಜನಾನುರಾಗಿಯಾಗಿ ಬಾಬಾ ಸಾಹೇಬ್ ಎಂದು ಕರೆಯಲ್ಪಟ್ಟರು.
ತಂದೆ ದಾದಾಜಿಯ ಆಡಳಿತ ಕಾಲದಲ್ಲಿ ಸಂಸ್ಥಾನ ಸಾಲದಲ್ಲಿ ಮುಳುಗಿಹೋಗಿತ್ತು. ಬಾಬಾ ಸಾಹೇಬ ಪಟ್ಟವೇರಿದ ತಕ್ಷಣ ಸಂಸ್ಥಾನದ ಚಿತ್ರಣವೇ ಬದಲಾಗಲಾರಂಭಿಸಿತು.  ಆಡಳಿತವನ್ನು ಪುನರ್‍ವ್ಯವಸ್ಥೆಗೊಳಿಸಿ ದಕ್ಷತೆಯಿಂದ ಆಳತೊಡಗಿದ. ಸಂಸ್ಥಾನದ ಸಾಲದ ಹೊರೆ ಕಡಿಮೆಮಾಡಿ ಪ್ರಜೆಗಳ ಪ್ರೀತ್ಯಾದರ ಗಳಿಸಿದ.
ದುರದೃಷ್ಟವಶಾತ್ ಬಾಬಾಸಾಹೇಬನಿಗಿದ್ದ ಒಬ್ಬನೇ ಮಗ ತೀರಿಕೊಂಡು ಸಂಸ್ಥಾನ ಉತ್ತರಾಧಿಕಾರಿಯಿಲ್ಲದ  ಪರಿಸ್ಥಿತಿಯೊದಗಿತು. ಆಗ ಬಾಬಾ ಸಾಹೇಬ 1846 ರಲ್ಲಿ ಕಂಪನಿ ಸರ್ಕಾರಕ್ಕೆ ಪತ್ರ ಬರೆದು  ದತ್ತು ಸ್ವೀಕಾರಕ್ಕೆ ಅನುಮತಿ ಕೋರಿದ. ಈ ಪ್ರಶ್ನೆ ಇನಾಮ್ ಕಮಿಷನರ್ ಮ್ಯಾನ್ಸನ್ ಎಂಬುವನ ಪರಿಶೀಲನೆಗೆ ಬಂತು. ಮ್ಯಾನ್ಸನ್ ಸಂಸ್ಥಾನದ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿಯಲ್ಲಿದೆ ಎಂಬ ನೆಪ ಒಡ್ಡಿ ದತ್ತಕ ಸ್ವೀಕಾರಕ್ಕೆ ಅನುಮತಿ ನಿರಾಕರಿಸಿದ. ಇದರಿಂದ ರೋಷಗೊಂಡ ಬಾಬಾಸಾಹೇಬ ಮ್ಯಾನ್‍ಸನ್ನನ ಮೇಲೂ ಬ್ರಿಟಿಷರ ಮೇಲೂ ಸೇಡು ತೀರಿಸಿಕೊಳ್ಳಬಯಸಿದ. 

ಆ ಕಾಲದಲ್ಲಿ ಲಾರ್ಡ್ ಡಾಲ್‍ಹೌಸಿಯ ದತ್ತು ಮಕ್ಕಳಿಗೆ ಹಕ್ಕಿಲ್ಲ ಕಾಯ್ದೆ  ಮತ್ತು ಅದರ ಹಿಂದೆಯೇ ಬಂದ ಇನಾಮ್ ಕಮಿಷನ್ನಿನ ಕಾರ್ಯ ಚಟುವಟಿಕೆಗಳೇ ಮೂಲ ಕಾರಣವಾಗಿ ಉತ್ತರ ಭಾರತಾದ್ಯಂತ ಮಹಾಕ್ರಾಂತಿ ಹತ್ತಿ ಉರಿಯುತ್ತಿತ್ತು. ಯಾವುದೇ ಹಕ್ಕು ಪತ್ರಗಳಿಲ್ಲದೆ ಹೋದರೆ ಅಥವಾ ಸಂಬಂಧಪಟ್ಟ ದಾಖಲೆಗಳು ಸ್ಪಷ್ಟವಾಗಿಲ್ಲವೆಂದು ಕಂಡುಬಂದರೆ ಅಂಥವರ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ಇನಾಮ್ ಕಮಿಷನ್ನಿಗೆ ಕೊಡಲಾಗಿತ್ತು. ದಕ್ಷಿಣ ಮರಾಠಾ ದೇಶವೊಂದರಲ್ಲೇ ಇನಾಮ್ ಕಮಿಷನ್ ಸುಮಾರು 35,000 ಜಮೀನ್ದಾರರ ಒಡೆತನ ಹಕ್ಕುಗಳನ್ನು ಪರಿಶೀಲಿಸಿ, 21,000 ಜಮೀನ್ದಾರರ ಸ್ವತ್ತನ್ನು ಸರ್ಕಾರಕ್ಕೆ ಸೇರಿಸಿಕೊಂಡಿತ್ತು. ಇದರಿಂದಾಗಿ ನಿಪ್ಪಾಣಿ, ಜಂಬೋಟಿ ಮುಂತಾದ ಕಡೆಯ ಜಮೀನ್ದಾರರು ಒಟ್ಟುಗೂಡಿ ಬಂಡಾಯವೆದ್ದರು ಬ್ರಿಟಿಷರ ವಿರುದ್ಧ ಎದ್ದು ನಿಂತರೆ ಇವರೆಲ್ಲರ ಸಹಾನುಭೂತಿ ಸಹಾಯ ತನಗೆ ದೊರಕುವುದೆಂದು ಬಾಬಾಸಾಹೇಬ ಭಾವಿಸಿದ. 

ಸಿಪಾಯಿ ದಂಗೆಯಲ್ಲಿ ಮುಖ್ಯಪಾತ್ರ ವಹಿಸಿದ್ದ ಪೇಶ್ವೆ ನಾನಾಸಾಹೇಬನೊಡನೆ ಇವನು ಪತ್ರವ್ಯವಹಾರ ನಡೆಸಿದ. ಅನಂತರ ಡಂಬಳದ ಮತ್ತು ಹಮ್ಮಿಗೆಯ ದೇಸಾಯಿಗಳೊಡನೆ ಮತ್ತು ಮುಂಡರಗಿ ಭೀಮರಾವ್ ಇವರೊಂದಿಗೆ ರಹಸ್ಯಸಮಾಲೋಚನೆ ನಡೆಸಿದ. ಕೊನೆಗೆ ಉತ್ತರ ಕರ್ನಾಟಕಾದ್ಯಂತ ಒಮ್ಮೆಲೆ ಬಂಡಾಯವೆದ್ದು ನರಗುಂದದವರು ಧಾರವಾಡ ಮತ್ತು ಅದರ ಪಶ್ಚಿಮ ಭಾಗವನ್ನೂ ಮುಂಡರಗಿ ಭೀಮರಾಯ ಕೊಪ್ಪಳವನ್ನೂ ವಶಪಡಿಸಿಕೊಳ್ಳಬೇಕೆಂಬ ನಿರ್ಣಯಕ್ಕೆ ಬರಲಾಯಿತು. ಈ ಮಧ್ಯೆ ಬ್ರಿಟಿಷರು ಶಸ್ತ್ರಾಸ್ತ್ರ ಕಾಯಿದೆಗೆ ಅನುಗುಣವಾಗಿ ಬಾಬಾಸಾಹೇಬ ತನ್ನ ಕೋಟೆಯಲ್ಲಿಟ್ಟಿದ್ದ ದೊಡ್ಡ ತೋಪುಗಳು ಮದ್ದುಗುಂಡು ಇತ್ಯಾದಿಗಳನ್ನು ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಆಜ್ಞೆ ಮಾಡಿದರು. ಆಗ ದಕ್ಷಿಣ ಮರಾಠಾ ದೇಶದ ರಾಜಕೀಯ ಪ್ರತಿನಿಧಿಯಾಗಿದ್ದವ ಮ್ಯಾನ್‍ಸನ್. ಅಂದಿನ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ಈ ಶಸ್ತ್ರಾಸ್ತ್ರಗಳು ಆಂಗ್ಲರ ವಿರೋಧಿಗಳಿಗೆ ದಕ್ಕುವಂತಾಗಬಾರದೆಂಬುದೇ ಬ್ರಿಟಿಷ್ ಸರ್ಕಾರದ ಆಶಯವೆಂದು ಹೇಳಿ, ನಂಬಿಸಿ ಬಾಬಾ ಸಾಹೇಬನಿಂದ ಶಸ್ತ್ರಾಸ್ತ್ರ ಒಪ್ಪಿಸುವ ಆಶ್ವಾಸನೆ ಪಡೆದ. ಬಾಬಾಸಾಹೇಬ ಅತಿಯಾದ ಮಳೆ ಸುರಿಯುತ್ತಿದೆಯೆಂಬ ನೆಪವೊಡ್ಡಿ ಮೂರು ತೋಪುಗಳನ್ನು ದುರ್ಗದಲ್ಲೇ ಉಳಿಸಿಕೊಂಡು ಉಳಿದೆಲ್ಲ ಸಾಮಗ್ರಿಗಳನ್ನೂ ಧಾರವಾಡದತ್ತ ಕಳುಹಿಸಿದ. ಜೊತೆಗೆ ಮಧ್ಯದಾರಿಯಲ್ಲಿ ಇವನೇ ಕಳುಹಿಸಿದ ಜನ ಸಾಗಣೆ ಸಿಬ್ಬಂದಿಯವರ ಮೇಲೆ ಬಿದ್ದು ಎಲ್ಲ ಶಸ್ತ್ರಾಸ್ತ್ರಗಳನ್ನು ದೋಚಿಕೊಂಡು ಬಂದರು.

ಕಾರಣಾಂತರದಿಂದ ಮುಂಡರಗಿ ಭೀಮರಾವ್ ರಹಸ್ಯವಾಗಿ ನಿಗದಿಮಾಡಿದ್ದ ದಿನಕ್ಕೆ ಮೊದಲೇ ಬಂಡಾಯವೆದ್ದ. ಡಂಬಳದ ಖಜಾನೆಯನ್ನು ಲೂಟಿಮಾಡಿ ಕೊಪ್ಪಳ ದುರ್ಗವನ್ನಾಕ್ರಮಿಸಲು ಹೊರಟ. ಈ ವಿಷಯ ತಿಳಿದಾಕ್ಷಣ ಬಾಬಾ ಸಾಹೇಬ ತನ್ನ ಬಳಿಯಿದ್ದ ದೊಡ್ಡ ತೋಪುಗಳನ್ನು ದುರ್ಗದ ಮೇಲೆ ಸರಿಯಾದ ಸ್ಥಳಗಳಲ್ಲಿರಿಸಿ ಯುದ್ಧ ಸನ್ನದ್ಧನಾದ.
ನರಗುಂದದೊಡೆಯನ ಈ ಅಪಾಯಕಾರಿ ಕ್ರಮಗಳ ವಿಷಯ ಮ್ಯಾನ್ಸ್‍ನ್ ಕುರುಂದವಾಡದಲ್ಲಿ ತಿಳಿಯಿತು. ಏನಾದರೂ ಮಾಡಿ ಇವನು ದಂಗೆ ಏಳದಂತೆ, ಅದು ಸಾಧ್ಯವಾಗದಿದ್ದರೆ ರಾಮದುರ್ಗದ ಸಂಸ್ಥಾನದ ಒಡೆಯನಾಗಿದ್ದ ಇವನ ಮಲತಮ್ಮ ದಂಗೆಕೋರರಿಗೆ ಸಹಾಯ ನೀಡದಂತೆ  ಮಾಡಬೇಕೆಂಬ ಉದ್ದೇಶದಿಂದ ಮ್ಯಾನ್ಸನ್ ಮೇ 25 ರಂದು ಒಳದಾರಿ ಹಿಡಿದು ನರಗುಂದದ ಕಡೆಗೆ ಸಾಗಿದ. ಜೊತೆಯಲ್ಲಿ ದಕ್ಷಿಣ ಮರಾಠಾ ಅಶ್ವದಳದ 12 ಮಂದಿಯನ್ನು ಮಾತ್ರ ತನ್ನ ರಕ್ಷಣೆಗಾಗಿ ಕರೆದೊಯ್ದ. ಆದರೆ ಕರ್ನಲ್ ಮಾಲ್ಕಮ್  ರಾಮದುರ್ಗದಲ್ಲಿ ದಕ್ಷಿಣ ಮರಾಠಾ ಆಶ್ವದಳದೊಡನೆ ತನ್ನನ್ನು ಸಂಧಿಸಬೇಕೆಂದು ಆಜ್ಞಾಪಿಸಿದ. ದುರದೃಷ್ಟವಶಾತ್ ಈ ಆಜ್ಞೆ ತಲುಪುವಷ್ಟರಲ್ಲಿ ಕರ್ನಲ್ ಮಾಲ್ಕಮ್ 250 ಕುದುರೆ ಸವಾರರೊಡನೆ ಡಂಬಳದ ಖಜಾನೆ ಲೂಟಿಮಾಡಿದ ಬಂಡುಕೋರರೊಡನೆ ಹೋರಾಟಕ್ಕೆ ಸಿದ್ಧನಾಗಿ ನಿಂತಿದ್ದ. ಇದರಿಂದ ಮ್ಯಾನ್ಸನ್ ರಾಮದುರ್ಗವನ್ನು ತಲುಪಿದಾಗ ಅವನ ರಕ್ಷಣೆಗಾಗಿ ಮಾಲ್ಕಮ್ ಅಲ್ಲಿರಲಾಗಲಿಲ್ಲ. ರಾಮದುರ್ಗದ ಒಡೆಯನೇನೋ ಸ್ನೇಹಭಾವವನ್ನೇ ತೋರಿದ. ಬಾಬಾಸಾಹೇಬ ಬರೆದಿದ್ದ ಪತ್ರ ತೋರಿಸಿ ಅಲ್ಲಿಗೆ ಹೋಗಕೂಡದೆಂದು ಎಚ್ಚರಿಸಿದ. ಈ ಪತ್ರದಲ್ಲಿ ನರಗುಂದದೊಡೆಯ ಅಪಮಾನಕ್ಕಿಂತ ಮರಣವೇ ಲೇಸೆಂದು ರಾಮದುರ್ಗ ಸಹ ದಂಗೆಯಲ್ಲಿ ಪಾಲ್ಗೊಳ್ಳಬೇಕೆಂದೂ ಒತ್ತಿ ಹೇಳಿದ್ದ. ಧಾರವಾಡಕ್ಕೆ ಹೋಗಿ ಅಲ್ಲಿ ಮಾಲ್ಕಮನ ಪಡೆಯನ್ನು ಕೂಡಿಕೊಳ್ಳುವ ಉದ್ದೇಶದಿಂದ, ಎಷ್ಟು ಹೇಳಿದರೂ ಲಕ್ಷಿಸದೆ ಮ್ಯಾನ್ಸನ್ ಮೇ 29ರ ಮಧ್ಯಾಹ್ನ ರಾಮದುರ್ಗದಿಂದ ಹೊರಟ. ಹನ್ನೆರಡು ಮಂದಿ ಆಶ್ವೀಕರಲ್ಲದೆ ಅವನ ಜೊತೆ ಕೆಲವೇ ಪರಿಚಾರಕರಿದ್ದರು. ರಾಮದುರ್ಗದಿಂದ ಧಾರವಾಡದತ್ತ ಹೋಗುವ ದಾರಿ ನರಗುಂದದ ಸಮೀಪದಲ್ಲೇ ಹಾಯುತ್ತಿತ್ತು. ಹೀಗಾಗಿ ಮ್ಯಾನ್ಸನ್ನನ ಸಾಹಸ ಅಪಾಯದಿಂದ ಕೂಡಿತ್ತು. ರಾತ್ರಿಯಾಗುತ್ತಲೇ ಸುರೆಬಾನ ಎಂಬ ಹಳ್ಳಿಯಲ್ಲಿ ಇವನು ತಂಗಿದ.

ಇಷ್ಟರಲ್ಲಿ ಮ್ಯಾನ್ಸನ್ ರಾಮದುರ್ಗದಿಂದ ಕಳುಹಿಸಿದ್ದ ಪತ್ರ ಓದಿ ಕೋಪೋದ್ರಿಕ್ತನಾಗಿದ್ದ ಬಾಬಾಸಾಹೇಬ ಸುಮಾರು 700-800 ಕುದುರೆ ಮತ್ತು ಕಾಲ್ದಳದೊಂದಿಗೆ ರಾಮದುರ್ಗದತ್ತ ಬಂದು ಮ್ಯಾನ್ಸನ್ ಸುರೆಬಾನದಲ್ಲಿ ತಂಗಿರುವ ವಿಷಯ ತಿಳಿದು ಅತ್ತ ಧಾವಿಸಿದ. ಬಾಬಾಸಾಹೇಬನ ಸೈನಿಕರು ಮ್ಯಾನ್ಸನ್ನನ ತಲೆ ಕಡಿದು ಹಾಕಿದರು. ಕತ್ತಲಲ್ಲಿ ಕೇವಲ ಆರು ಮಂದಿ ಸೈನಿಕರು ತಪ್ಪಿಸಿಕೊಂಡರು. ದಕ್ಷಿಣ ಮಹಾರಾಷ್ಟ್ರರ ಅಶ್ವದಳದ ಅಧಿಕಾರಿಗಳಲ್ಲಿ ಶ್ರೇಷ್ಠ ಎನಿಸಿದ್ದ ಪೂರ್ಣಸಿಂಗನೂ ಕೊಲ್ಲಲ್ಪಟ್ಟ. ಮ್ಯಾನ್ಸನ್ನನ ರುಂಡವನ್ನು ನರಗುಂದ ಪಟ್ಟಣದ ದ್ವಾರವೊಂದಕ್ಕೆ ನೇತುಹಾಕಲಾಯಿತು.

ಮ್ಯಾನ್ಸನ್ನ ಬಳಿಯಿದ್ದ ಕಾಗದಪತ್ರಗಳ ಪರಿಶೀಲನೆ ನಡೆಸಿದಾಗ ತನ್ನ ಅನುಚರರೇ ಆದ ಕೃಷ್ಣಾಜಿಪಂತ ಜೋಶಿ ಮೊದಲಾದ ದ್ರೋಹಿಗಳ ಮೂಲಕ ತನ್ನ ಗುಪ್ತ ಕಾರ್ಯಾಗಾರಗಳೆಲ್ಲ ಬ್ರಿಟಿಷರಿಗೆ ಗೊತ್ತಿರುವ ವಿಷಯ ಗಮನಕ್ಕೆ ಬಂದು ಬಾಬಾ ಸಾಹೇಬನಿಗೆ ಗಾಬರಿಯಾಯಿತು. ಈ ದ್ರೋಹಿಗಳು ಮದ್ದಿನ ಮನೆಗೆ ಸಗಣಿ ತುಂಬಿದ್ದರು. ಎಷ್ಟಾದರೂ ಇವನು ಹೋರಾಟಕ್ಕೆ ಸಿದ್ಧನಾದ.
ಮ್ಯಾನ್ಸನ್ ಮತ್ತು ಇತರರಿಗೊದಗಿದ ಘೋರ ಮರಣ ವೃತ್ತಾಂತ ಧಾರವಾಡಕ್ಕೆ ಮಾರನೇ ದಿನ ತಲುಪಿತು. ಕೂಡಲೇ ಧಾರವಾಡದಿಂದ ಅಮರಗೋಳಕ್ಕೆ ಸಣ್ಣ ಪಡೆಯೊಂದನ್ನು ರವಾನಿಸಲಾಯಿತು. ಜೂನ್ 1ರಂದು ಕರ್ನಲ್ ಮಾಲ್ಕಮ್ ದಕ್ಷಿಣ ಮರಾಠಾ ಅಶ್ವದಳದ 150 ಮಂದಿ ದೇಶೀಯ ಪದಾತಿದಳದ 28ನೆಯ ರೆಜಿಮೆಂಟ್ ಮತ್ತು 74ನೆಯ ಪರ್ವತ ಪಡೆಯ ಎರಡು ತುಕಡಿಗಳೊಡನೆ ನರಗುಂದ ತಲುಪಿದ. ನಡೆದ ಹೋರಾಟದಲ್ಲಿ ಪಟ್ಟಣ ಬ್ರಿಟಿಷರ ವಶವಾಯಿತು. ಮಾರನೆಯ ದಿನ ಬ್ರಿಟಿಷರು ಕೋಟೆ ವಶಪಡಿಸಿಕೊಳ್ಳಲು ಹೊರಟರು. ಬಾಬಾಸಾಹೇಬನಿಗೆ ಹೋರಾಟ ಮುಂದುವರಿಸುವುದರಿಂದ ಪ್ರಯೋಜನವಿಲ್ಲವೆಂಬ ಅರಿವಾಯಿತು. ಅಂದು ರಾತ್ರಿಯೇ ಆರು ಮಂದಿ ಆಪ್ತರೊಡನೆ ದುರ್ಗ ತೊರೆದು ಹೋದ.

ಬೆಳಗಾವಿಯ ಪೊಲೀಸ್ ಸೂಪರಿಂಟೆಂಡೆಂಟ್ ಆಗಿದ್ದ ಫ್ರಾಂಕ್ ಸೌಟರ್ ಮಾರನೆಯ ದಿನ ಪಂಢರಾಪುರಕ್ಕೆ ತೆರಳುವ ಯಾತ್ರಾರ್ಥಿಗಳಂತೆ ವೇಷ ಧರಿಸಿದ್ದ ಬಾಬಾಸಾಹೇಬ ಮತ್ತು ಅವನ ಅನುಚರರನ್ನು ತೊರಗಲ್ ಕಾಡಿನಲ್ಲಿ ಸೆರೆಹಿಡಿದು ಬೆಳಗಾಂವಿಗೆ ತಂದ. ವಿಚಾರಣೆ ನಡೆಸಿ ಬಾಬಾಸಾಹೇಬನಿಗೆ ಮರಣದಂಡನೆ ವಿಧಿಸಲಾಯಿತು. 1858 ಜೂನ್ 12ರಂದು ಸಾವಿರಾರು ಮಂದಿಯ ಸಮ್ಮುಖದಲ್ಲಿ ಬೆಳಗಾಂವಿಯಲ್ಲಿ ಈ ವೀರನನ್ನು ನೇಣುಹಾಕಲಾಯಿತು.1858ರ  ಜೂನ್ 3ರಂದು ನರಗುಂದ ಸಂಸ್ಥಾನವನ್ನು ಬ್ರಿಟಿಷರು ತಮ್ಮ ಅಧಿಪತ್ಯಕ್ಕೆ ಒಳಪಡಿಸಿಕೊಂಡರು.  ಬಾಬಾ ಸಾಹೇಬ್ ಕ್ರಾಂತಿಯ ಕಿಚ್ಚು ನಾಡಿನಾದ್ಯಂತ ಹೊತ್ತಿತು. ಸಾವಿರಾರು ದೇಶಭಕ್ತರಿಗೆ ಅವರ ಜೀವನ ಪ್ರೇರಣೆಯಾಯಿತು.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529