31 ಜನವರಿ 2023

ಚಾಟ್ ಜಿ ಪಿ ಟಿ ಮತ್ತು ಶಿಕ್ಷಣ...

 


ಚಾಟ್ ಜಿ ಪಿ ಟಿ ಮತ್ತು ಶಿಕ್ಷಣ ವ್ಯವಸ್ಥೆ...


ಮೊನ್ನೆ ಒಬ್ಬರು ಪೋಷಕರು ಪೋನ್ ಮಾಡಿ ಸಾರ್ ನನ್ನ ಮಗ ಯಾವಾಗಲೂ ಮೊಬೈಲ್ ಫೋನ್ ನೋಡ್ತಾನೆ ಅವನಿಗೆ ಸ್ವಲ್ಪ ಬುದ್ದಿ ಹೇಳಿ ಎಂದಾಗ ಅವರ ಮಗನ ಮಾತಾಡಿಸಿದಾಗ ಸಾರ್ ನಾನು ಪಾಠಕ್ಕೆ ಸಂಬಂಧಿಸಿದಂತೆ ಗೂಗಲ್ ನಲ್ಲಿ ನೋಡಿ ತಿಳಿಯುತ್ತಿದ್ದೆ ಎಂದ.

ಅವನಿಗೆ ಗೂಗಲ್ ನೋಡಲೇಬೇಡ ಎಂದು ಹೇಳುವ ಸ್ಥಿತಿಯಲ್ಲಿ ಇಂದು ನಾವಿಲ್ಲ ಗೂಗಲ್ ನಮ್ಮ ಜೀವನದ ಅವಿಭಾಜ್ಯ ಅಂಗವೇನೋ ಎಂಬ ಭಾವನೆ ಬಂದು ಬಿಟ್ಟಿದೆ. ಆ ಹುಡುಗನಿಗೆ ಗೂಗಲ್ ಬಳಕೆ ಕಡಿಮೆ ಮಾಡಿ ಪುಸ್ತಕ ,ಪತ್ರಿಕೆಗಳಲ್ಲಿ ವಿಷಯ ಸಂಗ್ರಹಿಸಲು ಸಲಹೆ ನೀಡಿ ಪೋನ್ ಕಟ್ ಮಾಡಿದೆ .


ಈ ಗೂಗಲ್ ನಿಂದ ಇನ್ನೂ ಏನೇನು ಅನುಕೂಲ ಮತ್ತು ಅನಾನುಕೂಲ ಇವೆ ಎಂದು ಯೋಚಿಸುವಾಗ ಜಗತ್ತಿನಲ್ಲಿ ಇಂದು ಬಹುಚರ್ಚೆಯ ಚಾಟ್ ಜಿ ಪಿ ಟಿ ನೆನಪಾಯಿತು.

ಗೂಗಲ್ ಗೆ ಟಕ್ಕರ್ ನೀಡುವ ಈ ಕೃತಕ ಬುದ್ದಿ ಮತ್ತೆಯ ತಾಣವು ನಾವು ಕೇಳಿದ ಮಾಹಿತಿಯನ್ನು ನೇರವಾಗಿ ನೀಡುತ್ತದೆ.ಒಮ್ಮೆ ವೆಬ್ ಸೈಟ್ ಗೆ ಹೋಗಿ ನೊಂದಾಯಿಸಿದರೆ ನಿಮಗೆ ಬೇಕಾದ ಮಾಹಿತಿಯನ್ನು ಕೇಳಲು ಟೈಪ್ ಮಾಡಿದರೆ ಅದು ಉತ್ತರ ಬರೆಯುತ್ತಾ ಸಾಗುತ್ತದೆ.


ಚಾಟ್ ಜಿ ಪಿ ಟಿ    ನವೆಂಬರ್ 2022 ರಲ್ಲಿ ಓಪನ್‌‍ಎಐ ನಿಂದ ಪ್ರಾರಂಭಿಸಲಾದ ಚಾಟ್‌ಬಾಟ್ ಆಗಿದೆ. ಇದು ಓಪನ್‌‍ಎಐ ನ  ಕುಟುಂಬದ ದೊಡ್ಡ ಭಾಷಾ ಮಾದರಿಗಳ ಮೇಲೆ ನಿರ್ಮಿಸಲ್ಪಟ್ಟಿದೆ. ಮೇಲ್ವಿಚಾರಣೆಯ ಮತ್ತು ಬಲವರ್ಧನೆಯ ಕಲಿಕೆಯ ತಂತ್ರಗಳೆರಡರ ಜೊತೆಗೆ ಉತ್ತಮವಾಗಿ ಟ್ಯೂನ್ ಮಾಡಲಾಗಿದೆ. 


ಚಾಟ್‌ಜಿಪಿಟಿ ಅನ್ನು ನವೆಂಬರ್ 30 2022 ರಂದು ಮೂಲ ಮಾದರಿಯಾಗಿ ಪ್ರಾರಂಭಿಸಲಾಯಿತು.  ಅಂದರೆ ಅದಕ್ಕೆ ಕೇವಲ ಮೂರು ತಿಂಗಳ ಪ್ರಾಯ!  ಅದರ  ಕಾರ್ಯ ವಿಧಾನದಿಂದ ಜಗತ್ತಿನಲ್ಲಿ ಮನೆಮಾತಾಗಿದೆ.ಎಲ್ಲರ ಮನ ಗೆದ್ದು  ಗೂಗಲ್ ನಂತಹ ದೈತ್ಯ ಕಂಪನಿಯೇ ಚಿಂತಿಸುವಂತೆ ಮಾಡಿದೆ. 

ನಮಗೆ ಬೇಕಾದ ಮಾಹಿತಿಯನ್ನು ಕೇವಲ ಕರ್ಸರ್ ಬ್ಲಿಂಕ್ ಮಾಡುತ್ತಲೇ ನೀಡುವ ಈ ಚಾಟ್ ಬಾಟ್ ಮೊದಲೇ ಫೀಡ್ ಮಾಡಿದ ಮಾಹಿತಿಯನ್ನು ನಮಗೆ ಸಂಸ್ಕರಿಸಿ ಕೊಡುತ್ತದೆ. ಇದು ಕೆಲವೊಮ್ಮೆ ನಿಖರತೆಯ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.



ಬರವಣಿಗೆಯ ವಿಷಯದಲ್ಲಿ ಸದ್ಯಕ್ಕೆ ಪರೀಕ್ಷೆಯಲ್ಲಿ ಅಚ್ಚುಕಟ್ಟಾಗಿ ಪುಟ ತುಂಬಿಸುವ ಚಾಲಾಕಿಗಳ ಹಂತದಲ್ಲಿದೆ ಈ Chat GPT, ಆದರೆ, ಪುಟ ತುಂಬಿಸಿರುವುದರಲ್ಲಿ ಸತ್ವವೇನಾದರೂ ಇದೆಯೇ ಎಂದು ಹುಡುಕಿದರೆ ಸಂಪೂರ್ಣವಾಗಿ ಹೌದು ಎಂದು ಹೇಳಲಾಗುವುದಿಲ್ಲ.ಇದು ಚಾಟ್ ಜಿ ಪಿ ಟಿ ಯ ಮಿತಿಯೂ ಹೌದು ಎಂದರೆ ತಪ್ಪಾಗಲಾರದು. 


ಇದು ನೂರಾರು ಪದಗಳನ್ನು ಚಕಚಕನೆ ಬರೆದುಕೊಡಬಹುದು. ಆದರೆ, ಸತ್ವದ ವಿಚಾರದಲ್ಲಿ ಚಾಟ್  GPT ವಿಶ್ವಾಸ ಗಳಿಸಿಕೊಳ್ಳುವುದು ಅಷ್ಟು ಸುಲಭವಿಲ್ಲ.  

ಇದು ಹೇಗೆ ಕಾರ್ಯನಿರ್ವಹಣೆ ಮಾಡುತ್ತದೆ ಎಂದು 

ಪರೀಕ್ಷೆ ಮಾಡಲು  

ನಾನು ಬೋಧನೆ ಮಾಡುವ ಸಮಾಜ ವಿಜ್ಞಾನ ವಿಷಯದ ಸುಭಾಷ್ ಚಂದ್ರ ಬೋಸ್ ಬಗ್ಗೆ ಕೇಳಿದಾಗ ಈ ಜಿ ಪಿ.ಟಿ  ತನ್ನ ಕರ್ಸರ್ ಬ್ಲಿಂಕ್ ಬ್ಲಿಂಕಿಸಿ ಶೇಕಡಾ ಐವತ್ತು ಸರಿ ಉತ್ತರ ನೀಡಿತು . 

 ಇದರ ಕಂಟೆಂಟ್ ಅನ್ನು ಕಣ್ಣು ಮುಚ್ಚಿಕೊಂಡು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್' (NLP) ಇನ್ನೂ ಅ ಹಂತ ತಲುಪಿಲ್ಲ.

ಮನುಷ್ಯ ಭಾಷೆಯನ್ನು ಯಂತ್ರಗಳಿಗೆ ಸಹಜವಾಗಿ ಅರ್ಥ ಮಾಡಿಸುವ ಪ್ರಕ್ರಿಯೆ ಈ NLP. ಧ್ವನಿ ಅಥವಾ ಬರಹದ ಮೂಲಕ ನೀಡುವ ಕಮಾಂಡ್ ಅನ್ನು ಯಂತ್ರಗಳು ಮನುಷ್ಯರಂತೆಯೇ ಅರ್ಥ ಮಾಡಿಕೊಳ್ಳಲು ಈ ಪ್ರಕ್ರಿಯೆ ನೆರವಾಗುತ್ತದೆ. ಚಾಟ್  GPTಯಲ್ಲಿ ಇದರ ಮುಂದುವರಿದ ತಂತ್ರಜ್ಞಾನ ಬಳಕೆಯಾಗುತ್ತಿದೆ. ಇದೇ ಕಾರಣಕ್ಕೆ ನಾವು ಕೊಡುವ ಕಮಾಂಡ್ ಅನ್ನು ಅದು ಕ್ಷಣಮಾತ್ರದಲ್ಲೇ ಬರೆದು ಮುಗಿಸುತ್ತದೆ. ಯಾವುದೇ ಭಾಷೆಯಿಂದ ಇನ್ಯಾವುದೇ ಭಾಷೆಗೆ ಬರಹವನ್ನು ಭಾಷಾಂತರಿಸುವ, ಧ್ವನಿಯ ಮೂಲಕ ನೀಡುವ ಕಮಾಂಡ್ಗಳಿಗೆ ಪ್ರತಿಕ್ರಿಯಿಸುವ ಹಾಗೂ ಬರಹವನ್ನು ಸಂಸ್ಕರಿಸಿ ಸಂಕ್ಷಿಪ್ತಗೊಳಿಸುವ AIನ ಕೆಲಸವನ್ನು NLP ಸುಲಭವಾಗಿಸುತ್ತದೆ. ಮಾಹಿತಿ ಸಂಗ್ರಹ ಮತ್ತು ಬರಹದ ಸಂಸ್ಕರಣೆ ಎರಡೂ ಕೆಲಸಗಳು ಚಾಟ್  GPTಯ ಮೂಲಕ ಅಗುತ್ತಿರುವುದರಿಂದ ಇದರ ಕೆಲಸ ಅಚ್ಚರಿಯ ಹಾಗೆ ಕಾಣುತ್ತಿದೆಯಷ್ಟೆ.


ಶಿಕ್ಷಣ ತಜ್ಞರ ಅತಂಕವೇನು... 


ಕರೋನಾ ಪೂರ್ವ ಹಾಗೂ ಕರೋನೋತ್ತರ ಅವದಿಯಲ್ಲಿ 

ರಾಷ್ಟ್ರೀಯ ಸರ್ವೇಗಳು ಹೊರ ಹಾಕಿದ ಮಾಹಿತಿಯ ಆಧಾರದ ಮೇಲೆ ದೇಶದ ಬಹುತೇಕ ಮಕ್ಕಳು  ಓದು ಬರಹ ಮತ್ತು ಲೆಕ್ಕಾಚಾರ (F L N )  ದಲ್ಲಿ ಹಿಂದುಳಿದಿದೆ  . ಇಂತಹ ವಿದ್ಯಾರ್ಥಿಗಳು ಶಿಕ್ಷಕರು ನೀಡಿದ ಭಾಷೆಗೆ ಸಂಬಂಧಿಸಿದ ಗೃಹಪಾಠಗಳನ್ನು ಮಾಡಿಕೊಡಲು ಜಿ ಪಿ ಟಿ ಮೊರೆ ಹೋದರೆ ಅದು  ಕ್ಷಣಗಳಲ್ಲಿ ಮಾಡಿಕೊಡುತ್ತದೆ. ಲೆಕ್ಕಗಳನ್ನು ಹಂತ ಹಂತವಾಗಿ ಮಾಡಿ ತೋರಿಸುತ್ತದೆ ಅದನ್ನು ನಕಲು ಮಾಡಿ ಶಾಲೆಗೆ ತಂದರೆ ಶಿಕ್ಷಕರು ಅದನ್ನು ನೋಡಿ ಮಗು F L N ಸಾಧಿಸಿದೆ ಎಂಬ ತೀರ್ಮಾನಕ್ಕೆ ಬರಬಹುದು.

ನಮ್ಮ ದೇಶದಲ್ಲಿ ಇದು ಈಗೀಗ ಚರ್ಚೆಯ ವಿಷಯವಾಗಿದೆ ಆದರೆ  ಅಮೆರಿಕದ ಕೆಲ ವಿಶ್ವವಿದ್ಯಾಲಯಗಳು ಚಾಟ್ ಜಿ ಪಿ ಟಿ ಯನ್ನು ನಿಷೇಧಿಸಿವೆ. ಭಾರತದ ಕೆಲ ಕಾಲೇಜುಗಳು ಸಹ ಇದೇ ಹಾದಿ ತುಳಿದಿವೆ. ಚಾಟ್ ಜಿ ಪಿ ಟಿ  ಹಾವಳಿ ನಿಯಂತ್ರಣ ಮಾಡಲು ಕಾಲೇಜುಗಳಲ್ಲಿ ಗೃಹಪಾಠ ನೀಡದೇ  ತಾವೇ ಹಾಳೆಗಳನ್ನು ನೀಡಿ ಉತ್ತರ ಬರೆಸಲು ಚಿಂತನೆ ಮಾಡುತ್ತಿದ್ದಾರೆ. 

ಮೌಲ್ಯಮಾಪನ ಪ್ರಕ್ರಿಯೆಯು ಮೇಲೂ ಇದು ದುಷ್ಪರಿಣಾಮ ಬೀರುವ ಆತಂಕವಿದೆ  .

ಈಗಾಗಲೇ ಎಷ್ಟೇ ಬಿಗಿ ಮಾಡಿದರೂ ಶಾಲಾ ಕಾಲೇಜುಗಳಿಂದ ಹಿಡಿದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಕಲು ಹಾವಳಿ ಪಿಡುಗಾಗಿ ಪರಿಣಮಿಸಿ ಅದು ಭ್ರಷ್ಟಾಚಾರಕ್ಕೆ ದಾರಿಯಾಗಿ  ಶಿಕ್ಷಣ ವ್ಯವಸ್ಥೆ ಮತ್ತು ಆಡಳಿತ ವ್ಯವಸ್ಥೆಗೆ ತಲೆನೋವಾಗಿ ಪರಿಣಮಿಸಿದೆ. ಈ ಜಿ ಪಿ ಟಿ ನಕಲು ಮಾಡಲು ವಿದ್ಯಾರ್ಥಿಗಳಿಗೆ ಉಚಿತವಾಗಿ ಸಿಕ್ಕಿ ಕೋತಿ ಕೈಯಲ್ಲಿ ಸಿಕ್ಕ ಗುಲಗಂಜಿಯಾಗುವುದೇನೋ ಎಂಬ ಅತಂಕ ಮೂಡುತ್ತದೆ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಶಿಕ್ಷಕರು

ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ

ತುಮಕೂರು

ವಿಸ್ಮಯ

 #ನೀನೊಂದು_ಅದ್ಭುತ_ವಿಸ್ಮಯ 



ನೀ ಸನಿಹವಿರೆ 

ಮಾಯುವುದು 

ಹೃದಯದ ಗಾಯ |

ಅದಕ್ಕೆ ಹೇಳುವುದು

ನೀನೊಂದುಅದ್ಭುತ ವಿಸ್ಮಯ ||


#ಸಿಹಿಜೀವಿಯ_ಹನಿ 

29 ಜನವರಿ 2023

ರೇನ್ ಬೋ...

 



ರೇನ್ ಬೋ ಸರಿ ಇಲ್ಲ...


ನಾನು ವಿವರಣೆ ನೀಡಿದೆ 

ಕಾಮನ ಬಿಲ್ಲಿನಲ್ಲಿ ಇರೋ

ಬಣ್ಣ ಸೇರ್ಸಿ ಅಂದ್ರು ವಿಬ್ಗಯಾರ್ |

ನನ್ನವಳು ತಗಾದೆ ತೆಗೆದಳು 

ಸರಿ ಇಲ್ಲ ಕಣ್ರೀ ಈ ರೇನ್ ಬೋ

ಇದ್ರಲ್ಲಿ ಇಲ್ವೇ ಇಲ್ಲ ನನ್ನಿಷ್ಟದ ಕಲರ್ ಗಳಾದ ಗೋಲ್ಡ್, ಸಿಲ್ವರ್ ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.


27 ಜನವರಿ 2023

ಮನೋವೇಗ

 


ನೀ...ನನ್ನ ಬಳಿಯಿಲ್ಲದಿದ್ದರೆ

ತಿಳಿಯದ ಆವೇಗ |

ಆದರೂ ತಲುಪುವೆ ನಿನ್ನ

ಅದಕ್ಕೆ ಕಾರಣ ಮನೋವೇಗ||

21 ಜನವರಿ 2023

ಕರುವ್ಗಲ್ಲು...


 

ಪುಸ್ತಕ  ವಿಮರ್ಶೆ...
ಕುರುವ್ಗಲ್ಲು...

ಹಾಲ್ಪ್ ಸರ್ಕಲ್ ಕ್ಲಬ್  ಹೌಸ್ ಕಾರ್ಯಕ್ರಮದಲ್ಲಿ ಡಾ ಮಾರುತಿ ಎನ್ ಎನ್ ರವರ "ದ್ಯಾಮವ್ವನ ಮಗ" ಕಥೆ ಕೇಳಿ ಅವರ ಪರಿಚಯ ಮಾಡಿಕೊಂಡು ಕುರುವ್ಗಲ್ಲು ಪುಸ್ತಕ ತಂದು ಓದಿದೆ.

ಸಪ್ನಾ ಬುಕ್ ಹೌಸ್ ನವರು ಪ್ರಕಟಿಸಿದ ಕುರುವ್ಗಲ್ಲು ವಿಭಿನ್ನವಾದ ಶೀರ್ಷಿಕೆಯಿಂದ ಗಮನಸೆಳೆವ  ಕಥಾಸಂಕಲನ. ಈ ಪುಸ್ತಕವು ಓದುಗರನ್ನು ಸೆಳೆಯುವಲ್ಲಿ ಸಫಲವಾಗಿದೆ  ಎಂದು ಹೇಳಬಹುದು.ಇಲ್ಲಿ ಗ್ರಾಮೀಣ ಸಮಾಜದ ಚಿತ್ರಣವಿದೆ. ನಗರದ ಸಂಕೀರ್ಣವಾದ ಬದುಕಿನ ನೋಟವಿದೆ.  ಶತಮಾನಗಳಿಂದ ಅಳಿಯದೇ ಈಗಲೂ ಸಮಾಜದಲ್ಲಿ ಅಲ್ಲಲ್ಲಿ ಕಾಡುವ ಸಾಮಾಜಿಕ ಸಮಸ್ಯೆಗಳ  ಮೇಲೆ ಬೆಳಕು ಚೆಲ್ಲುವ ನೋವಿನ ಕಥೆಯಿದೆ.

ಡಾ. ಮಾರುತಿ ಎನ್.ಎನ್ ರವರು ಹುಟ್ಟಿದ್ದು, ಬೆಳೆದಿದ್ದು ತುಮಕೂರು ಜಿಲ್ಲೆಯ, ಕೊರಟಗೆರೆ ತಾಲ್ಲೂಕಿನ ನೀಲಗೊಂಡನಹಳ್ಳಿಯಲ್ಲಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಹುಟ್ಟೂರಲ್ಲೇ ಮುಗಿಸಿ, ಪದವಿ ಪೂರ್ವ ಶಿಕ್ಷಣಕ್ಕೆಂದು ತುಮಕೂರು ನಗರಕ್ಕೆ ಬಂದವರು ಇಪ್ಪತ್ತೆರಡು ವರ್ಷಗಳಿಂದ ಇಲ್ಲಿ ನೆಲೆಸಿದ್ದಾರೆ. ಉನ್ನತ ಶಿಕ್ಷಣವನ್ನು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಪಡೆದ ಇವರು ರಸಾಯನಶಾಸ್ತ್ರದಲ್ಲಿ, ಮನೋವಿಜ್ಞಾನದಲ್ಲಿ, ಹಾಗೂ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಶಿಕ್ಷಣದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿರುವ ಇವರಿಗೆ ಗೌರವ ಡಾಕ್ಟರೇಟ್ ಪುರಸ್ಕಾರವೂ ಲಭಿಸಿದೆ. ಮನೋವಿಜ್ಞಾನದ ವಿಷಯದಲ್ಲಿ ಸಂಶೋಧನೆಯಲ್ಲೂ ತೊಡಗಿಕೊಡಿದ್ದಾರೆ.  ಪ್ರಸ್ತುತ ಪ್ರತಿಷ್ಠಿತ ಶ್ರೀ ಸಿದ್ದಾರ್ಥ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಹುಮುಖ ಪ್ರತಿಭೆಯ ಹೊಂದಿರುವ,
ಶೈಕ್ಷಣಿಕ ಮನೋವಿಜ್ಞಾನ ಮತ್ತು ಶೈಕ್ಷಣಿಕ ತಂತ್ರಶಾಸ್ತ್ರದಲ್ಲಿ ಹೆಚ್ಚಿನ ಒಲವಿರುವ ಇವರು ನೂರಾರು ವಿಚಾರ ಸಂಕಿರಣ, ಪುನಶ್ವೇತನ ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ. ತುಮಕೂರು ವಿಶ್ವವಿದ್ಯಾನಿಲಯದ ಪ್ರಶಿಕ್ಷಕರ ಸಂಘದ ಕಾರ್ಯದರ್ಶಿಯಾಗಿದ್ದಾಗ ಶ್ರೀಯುತರು ಅನೇಕ ಕಾರ್ಯಾಗಾರ ಮತ್ತು ವಿಚಾರಗೋಷ್ಠಿಗಳನ್ನು ಸಂಘಟಿಸಿರುತ್ತಾರೆ.

ಹೊಸದನ್ನು ಕಲಿಯಬೇಕು, ಇತರರಿಗೆ ಕಲಿಸಬೇಕು ಎಂಬ ಮಹದಾಸೆಯಿಂದ ಪ್ರತಿದಿನ ತುಡಿಯುವ ಇವರು ಯೂಟ್ಯೂಬ್ ಚಾನೆಲ್ ಮೂಲಕ ವಿಚಾರಧಾರೆಗಳನ್ನು ಕಲಿಕಾಸಕ್ತರಿಗೆ ಪಸರಿಸುತ್ತಿದ್ದಾರೆ.

ಇವರ  ಚೊಚ್ಚಲ ಕಥಾ ಸಂಕಲನ "ನಿಗೂಢ ನಿಶಾಚರಿಗಳು" ಓದುಗರಿಂದ ಮೆಚ್ಚುಗೆ ಪಡೆದ ಕೃತಿಯಾಗಿದೆ.
ಪ್ರಸ್ತುತ ಕಥಾ ಸಂಕಲನದಲ್ಲಿ ಒಟ್ಟು ಒಂಭತ್ತು ಕಥೆಗಳಿವೆ. ಎಲ್ಲಾ ಕಥೆಗಳು ಉತ್ತಮವಾಗಿವೆ

ಮೂರು ಅನುಮಾನ,ಹಳೇಪಾತ್ರೆ ರಾಮ್ಯಾ,ಒರಗು ಕಂಬದಲ್ಲೇ ಉಳಿದ ನಿಟ್ಟುಸಿರು, ಕರುವಲ್ಲು ಇವು ನನ್ನನ್ನು ಕಾಡಿದ  ಕಥೆಗಳು.
ಈ ಕೃತಿಗೆ ಇಜಯ ಖ್ಯಾತಿಯ ಪೂರ್ಣಿಮಾ ಮಾಳಗಿಮನಿ ರವರು ಮುನ್ನುಡಿ ಬರೆದಿದ್ದು ನಾಡೋಜ ಕಮಲಾ ಹಂಪನಾ ಬೆನ್ನುಡಿ ಬರೆದಿದ್ದಾರೆ.

ಡಾ.ಮಾರುತಿ ರವರು ತಮ್ಮ ಕರುವ್ಗಲ್ಲು ಕಥಾ ಸಂಕಲನ ಓದುವಾಗ ಅದೇ ಮಾದರಿಯ  ನನ್ನ ಬಾಲ್ಯದ ಯರಬಳ್ಳಿಯಲ್ಲಿ ಕಂಡ  "ಬಿದ್ ಕಲ್ ರಂಗಪ್ಪ "ನ ನೆನಪಾಯಿತು.
ಈ ಕಥಾ ಸಂಕಲನದ ಪ್ರತಿಯೊಂದು ಕಥೆಯೂ ವಿಭಿನ್ನವಾಗಿ ಮೂಡಿ ಬಂದಿವೆ.
"ದ್ಯಾಮವ್ವನ ಮಗ" ಕಥೆಯನ್ನು ಓದಿದಾಗ ಇತ್ತೀಚಿಗೆ ಪತ್ರಿಕೆಯಲ್ಲಿ ದೇವದಾಸಿ ಪದ್ಧತಿ ಬಗ್ಗೆ ಓದಿದ ನೆನಪಾಯಿತು. ದೇವರ ಹೆಸರಿನಲ್ಲಿ ಶೋಷಣೆ ಮಾಡುವ, ಊರಿನ ಕಾಮುಕರ  ದೌರ್ಜನ್ಯಕ್ಕೊಳಗಾಗಿ, ಮುತ್ತು ಕಟ್ಟಿಸಿಕೊಳ್ಳುವ ಸಂಪ್ರದಾಯಕ್ಕೆ ಬಲಿಯಾಗುವ ದ್ಯಾಮವ್ವನ ನತದೃಷ್ಟ ಮಗನ ಕಥೆಯನ್ನು ಕಥೆಗಾರರು   ಚೆನ್ನಾಗಿ ಚಿತ್ರಿಸಿದ್ದಾರೆ .

ದಾಯಾದಿ ಮತ್ಸರವು  ಅನಾದಿ ಕಾಲದಿಂದಲೂ ಇದ್ದದ್ದೆ, ಅಧಿಕಾರಕ್ಕಾಗಿ, ಆಸ್ತಿಗಾಗಿ ಯಾವ ಮಟ್ಟಕ್ಕೆ ಬೇಕಾದ್ರೂ ಇಳಿಯಬಹುದೆನ್ನುವ ಕಟು ಸತ್ಯದ ಅನಾವರಣವನ್ನು "ಹೊಸ ಶಿಕಾರಿ" ಕಥೆಯಲ್ಲಿ  ಚಿತ್ರಿಸಿದ್ದಾರೆ.

ರೇಲ್ವೆ ಹಳಿಯ ಪಕ್ಕ ಸ್ಲಮ್ ನಲ್ಲಿ ವಾಸಿಸುವ, ತಮಿಳು ನಾಡಿನಿಂದ ವಲಸೆ ಬಂದ ಕಾರ್ಮಿಕರ ಹೃದಯಸ್ಪರ್ಶಿ ಕಥೆಯಾದ "ಚಿನ್ನ ತಂದವರು" ಕಥೆಯಲ್ಲಿ ಬಡ ಕೂಲಿ ಕಾರ್ಮಿಕರ ಜೀವನಕ್ಕೆ ಹೋರಾಟ ಮಾಡುವ ಪರಿ ಪೋಲೀಸ್ ವ್ಯವಸ್ಥೆಯ ಅಣಕ ಮುಂತಾದವುಗಳನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿದ್ದಾರೆ. ಅಲ್ಲಿಯ ಪಾತ್ರದಾರಿಗಳು ಚಿನ್ನ ತಂದರೆ? ನೀವು ಕಥಾ ಸಂಕಲನ ಓದಿಯೇ ತಿಳಿಯಬೇಕು.

"ಆನಂತ್ಯ"ಕಥೆಯಲ್ಲಿ  ಚರಂಡಿ  ಶುಚಿ ಮಾಡುವ ಕಾರ್ಮಿಕನ ಧಾರುಣ ಕಥೆಯನ್ನು ಕಟ್ಟಿ ಕೊಟ್ಟಿರುವ ಮಾರುತಿ ರವರು  ಸಮಾಜವನ್ನು ಸೂಕ್ಷ್ಮ ವಾಗಿ ಗಮನಿಸಿ ಅವರ ಬದುಕಿನ ಕಷ್ಟಗಳನ್ನು ನಮ್ಮ ಮುಂದೆ ಅನಾವರಣ ಮಾಡಿದ್ದಾರೆ.

''ಮೂರು ಅನುಮಾನ"  ಕಥೆಯ ಬಗ್ಗೆ ಹೇಳುವುದಾದರೆ... ಒಂದು ದೇಹ ಬಿದ್ದಿದೆ. ಅದು ಕೊಲೆಯೋ, ಆಕಸ್ಮಿಕ ಸಾವೋ, ಯಾಕೆ, ಹೇಗೆ, ಎಲ್ಲಿ? ಯಾವಾಗ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ  ಬೇಕಿದ್ದರೆ ನೀವೇ ಆ ಕಥೆಯನ್ನು ಓದಬೇಕಿದೆ. 

"ಹಳೇ ಪಾತ್ರೆ ರಾಮ್ಯ"ಕಥೆಯ ಬಗ್ಗೆ ಹೇಳುವುದಾದರೆ ರಾಮ್ಯ  ಸೈಕಲ್ ಮೇಲೆ ಪಾತ್ರೆಗಳ ಬುಟ್ಟಿಯನ್ನಿಟ್ಟುಕೊಂಡು ಊರೂರು ತಿರುಗುತ್ತ ಜೀವನ ಸಾಗಿಸುವ ನಿರುಪದ್ರವಿ ಅಲೆಮಾರಿ. ರಾಮ್ಯಾ ತನ್ನ ಅಣ್ಣ ಮತ್ತು ಅತ್ತಿಗೆಯರಿಗಾಗಿ ಪಡುವ ಕಷ್ಟ, ಮಾಡುವ ತ್ಯಾಗ, ಒಂಟಿಯಾಗೇ ಇರುತ್ತೇನೆಂದರೂ ಬಿಡದ. ಬಂಧು ಬಳಗದ ಒತ್ತಾಯಕ್ಕೆ ಮಣಿದು ಮದುವೆಯಾಗಿ, ಮಡದಿಯ ಅನೈತಿಕ ಸಂಬಂಧದಿಂದ ಅವನ ಜೀವನ  ಹೇಗೆ ಜೀವನ ಜಟಿಲವಾಗುತ್ತಲೇ ಹೋಗುವುದನ್ನು ಓದುವ ನಮಗೆ ರಾಮ್ಯಾನ ಬಗ್ಗೆ ಅನುಕಂಪ ಹುಟ್ಟದೇ ಇರದು.

"ಒರಗು ಕಂಬದಲ್ಲೇ ಉಳಿದ ನಿಟ್ಟುಸಿರು"  ಕಥೆಯಲ್ಲಿ  ಊರವರ ಚುಡಾಯಿಸುವುದರಿಂದ ನೊಂದು ಕೊಳ್ಳುತ್ತಿದ್ದ ಸೂರಣ್ಣ  ಕ್ರಮೇಣ  ತೃತೀಯ ಲಿಂಗಿಯಾಗಿ  ತೆರೆದುಕೊಳ್ಳುವ ಬಗೆ   ಮತ್ತು ತೃತೀಯ ಲಿಂಗಿಗಳ ತಳಮಳಗಳನ್ನು   ಉತ್ತಮವಾಗಿ ಚಿತ್ರಿಸಿದ್ದಾರೆ.

ಒಟ್ಟಾರೆ ಹೇಳುವುದಾದರೆ ವಿಭಿನ್ನ ಕಥಾ ವಸ್ತುಗಳಿಂದ ಕೂಡಿದ   ಮಾರುತಿ ರವರ ಈ ಕಥಾಸಂಕಲನ ಓದುಗರ ಮನಗೆಲ್ಲುತ್ತಲಿದೆ.ನೀವು ಒಮ್ಮೆ ಈ ಕಥೆಗಳನ್ನು ಓದಿಬಿಡಿ.
ಮಾರುತಿಯವರ ಬರಹ ಪಯಣ ಮುಂದುವರೆಯಲಿ ಅವರಿಂದ ಇನ್ನೂ ಹೆಚ್ಚಿನ ಕೃತಿಗಳು ಹೊರಬರಲಿ ಎಂದು ಹಾರೈಸುವೆ...

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.