26 ನವೆಂಬರ್ 2022

ಕಾಲ ಎನ್ನುವ ಮದ್ದು.

 



*ಕಾಲ ಎನ್ನುವ ಮದ್ದು..*


ಎಷ್ಟೇ ಕಷ್ಟ ಕೋಟಲೆಗಳಿದ್ದರೂ,

ಬಿದ್ದರೂ   ದೃತಿಗೆಡದೇ 

ನಡೆಯುತಿರಬೇಕು ಎದ್ದು|

ಎಲ್ಲರ ಸಕಲ ಸಮಸ್ಯೆಗಳ

ಪರಿಹರಿಸುವುದು ಕಾಲ

ಎನ್ನುವ ಮದ್ದು ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


24 ನವೆಂಬರ್ 2022

ಬಾಲಾಜಿಯ ದರ್ಶನ ಮಾಡೋಣ ಬನ್ನಿ ...

 


ಬಾಲಾಜಿಯ ದರ್ಶನ ಮಾಡೋಣ ಬನ್ನಿ.


ಆಗಾಗ್ಗೆ ಕೇಳಿಸುವ ಮಕ್ಕಳ ಅಳುವಿನ ಸದ್ದು, ಕೆಲವೊಮ್ಮೆ ಸಂತಸದಿಂದ ಕುಣಿದಾಡುವ ಶಿಶುಗಳ ಕಲರವ, ಒಂದೆಡೆ ಹಿಂದಿಮಾತುಗಳು ಕಿವಿಯಮೇಲೆ ಬೀಳುತ್ತಿದ್ದರೆ ಪಕ್ಕದಲ್ಲೇ ತಮಿಳು ಭಾಷೆಯ ಸದ್ದು, ತೆಲುಗು ಭಾಷೆ ಸ್ವಲ್ಪ ಹೆಚ್ಚೇ ಎನ್ನುವಂತೆ ಕೇಳುತ್ತಿದ್ದರೆ.ಕ್ಷೀಣವಾಗಿ ಅಲ್ಲೊಂದು ಇಲ್ಲೊಂದು ಕನ್ನಡ ಪದಗಳು ಕೇಳುತ್ತಿದ್ದವು. 

ಇದು ಇತ್ತೀಚಿನ ತಿರುಮಲದ ಶ್ರೀವೆಂಕಟೇಶ್ವರ ಸ್ವಾಮಿಯ ವೈಕುಂಠ  ಕ್ಯೂ  ಕಾಂಪ್ಲೆಕ್ಸ್ ನಲ್ಲಿರುವ ಸರ್ವ ದರ್ಶನ ಕಂಪಾರ್ಟ್ ಮೆಂಟ್ ನ ಚಿತ್ರಣ...  

ವೆಂಕಟೇಶ್ವರ ಎಂಬ ಹೆಸರಿನ ನಾನು ವರ್ಷಕ್ಕೊಮ್ಮೆ ಬಾಲಾಜಿಯ ದರ್ಶನ ಮಾಡದಿದ್ದರೆ ಏನೋ ಕಳೆದುಕೊಂಡ ಅನುಭವ .ಕೋವಿಡ್ ಕಾರಣದಿಂದ ಕಳೆದೆರಡು ವರ್ಷಗಳಲ್ಲಿ ಸ್ವಾಮಿಯ ದರ್ಶನ ಭಾಗ್ಯದಿಂದ ವಂಚಿತನಾದ ನಾನು ಕಳೆದ ವಾರ ಬಸ್ ಏರಿ ತಿರುಮಲೆಗೆ ಹೊರಟೇಬಿಟ್ಟೆ.ತಿರುಪತಿಯಿಂದ ತಿರುಮಲಾಗೆ ಟಿ ಟಿ ಡಿ ಬಸ್ ನಲ್ಲಿ ಪಯಣ ಆರಂಭವಾದಾಗ ನಿಧಾನವಾಗಿ ಮೋಡ ಕವಿದ ವಾತಾವರಣ ಆಗಾಗ್ಗೆ ಬೀಳುವ ತುಂತುರು ಮಳೆ, ಬಸ್ ಮೇಲೇರಿದಂತೆಲ್ಲಾ  ತಿರುಪತಿಯ ಕಾಂಕ್ರೀಟ್ ಕಾಡು ಮಾಯವಾಗಿ  ಶೇಶಾಚಲಂ ಕಾನನದ ವೈಭವ ನಮ್ಮ ಮನವನ್ನು ಮುದಗೊಳಿಸಿತು .

ತಿರುಮಲ ಬೆಟ್ಟ ತಲುಪಿ ಸ್ನಾನ ಮಾಡಿ. ಮೊದಲಿಗೆ ವರಹಾಸ್ವಾಮಿಯ ದರ್ಶನ ಪಡೆದು ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ  ಸರ್ವ ದರ್ಶನ ಸಾಲಿನಲ್ಲಿ ನಿಂತಾಗ ಎಷ್ಟು ಹೊತ್ತಿಗೆ ದರ್ಶನವಾಗುತ್ತದೆ ಎಂಬ ನಿರ್ದಿಷ್ಟವಾದ ಸಮಯದ ಅರಿವಿಲ್ಲದಿದ್ದರೂ  ಸ್ವಾಮಿಯ ದರ್ಶನವಾಗೇ ಆಗುತ್ತದೆ ಎಂಬ ಅದಮ್ಯ ವಿಶ್ವಾಸ ನಮ್ಮದು. 





ಸರತಿಯ ಸಾಲು ಗೋವಿಂದ ನಾಮ ಸಂಕೀರ್ತನೆ ಮಾಡುತ್ತ  ಕ್ರಮೇಣ ಮುಂದೆ ಸಾಗಿ ಇಂದು ಕಂಪಾರ್ಟ್ ಮೆಂಟ್ ತಲುಪಿತು. ಅಲ್ಲಿಯ ಚಿತ್ರಣ ಅದೊಂದು ಭಾರತದ ಪ್ರತಿಬಿಂಬ ಎಂಬಂತೆ ಕಂಡಿತು.ಅಲ್ಲಿ ಬಡವರಿದ್ದರು ಧನಿಕರು, ಕಪ್ಪನೆಯ, ಕೆಂಪನೆಯ ಎಣ್ಣೆಗೆಂಪು ಬಣ್ಣದ,ಗಂಡು ಹೆಣ್ಣು, ವಿವಿಧ ಭಾಷೆಯ, ವಿವಿಧ ಸಂಸ್ಕೃತಿಗಳ ಜನ ಸೇರಿದ್ದರು ವಿಭಿನ್ನವಾದ ನೆಲ ಮೂಲ, ಸಂಸ್ಕೃತಿಯಾದರೂ   ,ಗಡಿ,ನೀರು, ಜಾತಿ ಭಾಷೆಗಳ ವಿಚಾರಕ್ಕೆ ಕಿತ್ತಾಡುವವರೆಲ್ಲರ  ಬಾಯಲ್ಲಿ ಗೋವಿಂದ ನಾಮಾವಳಿ ಪ್ರತಿಧ್ವನಿಸುತ್ತಿತ್ತು !ಆ ಮಟ್ಟಿಗೆ ಬಾಲಾಜಿ      ನಮ್ಮನ್ನೆಲ್ಲಾ ಏಕತೆಯ ಮಂತ್ರ ಪಠಿಸುವ ಬುದ್ದಿ ಕರುಣಿಸಿದ್ದ .





ಬಾಲಾಜಿಯ ದರ್ಶನ ಸಮಯದಲ್ಲಿ ನಾವೆಲ್ಲರೂ ಮೊಬೈಲ್ ಮತ್ತು ನಮ್ಮ ಎಲ್ಲಾ ಎಲೆಕ್ಟ್ರಾನಿಕ್ ಡಿವೈಸ್ ಗಳಿಂದ ದೂರವಿರುವ ಕಾರಣ ಉಚಿತವಾದ ಮೊಬೈಲ್ ಡಿ ಅಡಿಕ್ಷನ್ ಆದ ಅನುಭವ ಆ ಸಮಯದಲ್ಲಿ ಕಿವಿಯ ಮೇಲೆ ಬೀಳುವ ಗೋವಿಂದ ನಾಮಾವಳಿ ನಮಗೆ ಬೇರೇನೂ ಬೇಡ  ಎಂಬ ಭಾವನೆ ತರಿಸುವುದು ಸುಳ್ಳಲ್ಲ.

 

ಕಂಪಾರ್ಟ್ ಮೆಂಟ್ ನಲ್ಲಿ ಟಿ ಟಿ ಡಿ ಯವರು ಆಗಾಗ್ಗೆ ಅನ್ನ ಪ್ರಸಾದ ನೀಡುವರು. ಅಲ್ಲೇ ಜಲಪ್ರಸಾದ ಲಭ್ಯ ಉಳಿದಂತೆ ನಿತ್ಯ ಕರ್ಮಕ್ಕೂ ಸ್ಥಳಾವಕಾಶವನ್ನು ಕಲ್ಪಿಸಿದ್ದಾರೆ. ದೊಡ್ಡ ಪರದೆಯ ಮೇಲೆ ಸ್ವಾಮಿಯ ವಿವಿಧ ಸೇವೆಗಳನ್ನು ಕಣ್ತುಂಬಿಸಿಕೊಳ್ಳುವ ಭಾಗ್ಯ. ಇನ್ನೇನು ಬೇಕು ನಮಗೆ ಅದಕ್ಕೆ ಹಿರಿಯರು ಆ ಜಾಗಕ್ಕೆ ವೈಕುಂಠ ಕ್ಯೂ ಕಾಂಪ್ಲೆಕ್ಸ್ ಎಂಬ ನಾಮಕರಣ ಮಾಡಿರುವುದು! 


ಸುಮಾರು ಹದಿನೇಳು ಗಂಟೆಗಳ ಭಕ್ತಿ ಪೂರ್ವಕ ಕಾಯುವಿಕೆಯ ಫಲವಾಗಿ ಸ್ವಾಮಿಯ ದಿವ್ಯ ಸ್ವರೂಪವನ್ನು ಕಣ್ತುಂಬಿಸಿಕೊಂಡು ಹೊರಬರುವಾಗ ಒಂದು ಅವ್ಯಕ್ತವಾದ ಸಂತಸ ಮನೆ ಮಾಡಿ ಧನ್ಯತಾ ಭಾವ ಮೂಡುತ್ತದೆ. ನಂತರದ ಕ್ಷಣದಲ್ಲಿ ನಮ್ಮ ಮನದಲ್ಲಿ ಮತ್ತದೇ ಪ್ರಶ್ನೆ ಮತ್ತೆ ಸ್ವಾಮಿಯ ದರ್ಶನ ಯಾವಾಗ? 





ಈ ಬಾರಿ ತಿರುಪತಿಗೆ ಹೋದಾಗ ನಾನು ಗಮನಿಸಿದ ಮತ್ತೊಂದು ಒಳ್ಳೆಯ ಅಂಶ ಏಕ ಬಳಕೆಯ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ! ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್ ಬದಲಿಗೆ  ಒಂದು ಲೀಟರ್ ಗಾಜಿನ ಬಾಟಲ್ ಗಳಲ್ಲಿ ನೀರಿನ ಮಾರಾಟ ಮಾಡುವುದು ಕಂಡು ಬಂತು. ದರ ಸ್ವಲ್ಪ ಹೆಚ್ಚಾದರೂ ಪರಿಸರ ಕಾಳಜಿಯ ಸರ್ವರೂ ಇದಕ್ಕೆ ಒಗ್ಗಿಕೊಳ್ಳಲೇ ಬೇಕಿದೆ. ನಾನೂ ಕೂಡಾ ಪುನಃ ಉಪಯೋಗಿಸಬಹುದಾದ  ಗಾಜಿನ ಬಾಟಲ್ ನಲ್ಲಿ ನೀರು ಖರೀದಿಸಿ ಕುಡಿದೆ.

ಲಾಡು ಖರೀದಿಸಲು ಮೊದಲ ಪ್ಲಾಸ್ಟಿಕ್ ಚೀಲದ ಬದಲಿಗೆ ಪರಿಸರ ಸ್ನೇಹಿ ಚೀಲಗಳ ವಿತರಣೆ ಗಮನ ಸೆಳೆಯಿತು. ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ 

ಈ ಬಾರಿ ಬಾಲಾಜಿಯ ದರ್ಶನಕ್ಕೆ ತೆರಳಿದ ನಮ್ಮದು  ಬರೀ ತೀರ್ಥ ಯಾತ್ರೆ ಅನಿಸಲ್ಲ ಬದಲಿಗೆ ಅದೊಂದು ಸಮಾಜೋ ಆರ್ಥಿಕ ಮಹತ್ವದ ಪಯಣವಾಗಿತ್ತು, ಏಕತೆಯ ಯಾತ್ರೆಯಾಗಿತ್ತು.ಪರಿಸರ ಜಾಗೃತಿಯ ಸಮಾವೇಶವಾಗಿತ್ತು. ಮೊಬೈಲ್ ಮುಂತಾದ ಗಾಡ್ಜೆಟ್ ಅತಿಯಾದ ಬಳಕೆ ವಿರುದ್ಧದ ಜಾಗೃತಿ ಮೂಡಿಸುವ ಕೇಂದ್ರದ ದರ್ಶನ ವಾದಂತಾಗಿತ್ತು. ಆತ್ಮೀಯರೆ ಬನ್ನಿ ನೀವು ಸಹ 

ಪ್ರಪಂಚದ ಶ್ರೀಮಂತ ದೇವ, ಅನಾಥ ರಕ್ಷಕ ಬಾಲಾಜಿಯ ದರ್ಶನ ಮಾಡೋಣ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


18 ನವೆಂಬರ್ 2022

ಕಂಬನಿ ಖಾಲಿ...

 #ಕಂಬನಿ_ಖಾಲಿಯಾಗಿದೆ 


ನೀ ಬೆನ್ನಿಗೆ ಚೂರಿ ಹಾಕಿದರೂ

ಅದು ಹೃದಯಕ್ಕೆ ತಾಗಿದೆ |

ಖಂಡಿತವಾಗಿಯೂ ಅಳುವುದಿಲ್ಲ

ನೀ ಮಾಡಿದ ಮೋಸಕ್ಕೆ

ಏಕೆಂದರೆ ಕಂಬನಿ ಖಾಲಿಯಾಗಿದೆ ||


#ಸಿಹಿಜೀವಿ 

ಕಾಂತಾರ ಮತ್ತು ಕಾಡೊಂದಿತ್ತಲ್ಲ...

 

ಕಾಂತಾರ ಮತ್ತು ಕಾಡೊಂದಿತ್ತಲ್ಲ...

ಪ್ರಾದೇಶಿಕ ಸಿನಿಮಾ ಎಂದುಕೊಂಡದ್ದು ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಾ ತನ್ನ ನಾಗಾಲೋಟ ಮುಂದುವರೆಸಿರುವ ಚಿತ್ರ ಕಾಂತಾರ... ಚಿತ್ರದಲ್ಲಿ ಅಂತಾದ್ದೇನಿದೆ? ಎಂದು ಅಚ್ಚರಿ ಪಟ್ಟ ಜನಕ್ಕೆ ಚಿತ್ರ  ನೋಡಿದಾಗ ಇದು ನಮ್ಮ ಜೀವನಕ್ಕೆ ಸಂಬಂಧಿಸಿದ ಚಿತ್ರ. ಕಾಡಿನ ಜೊತೆಗಿನ ಸಹ ಜೀವನಕ್ಕೆ ಸಂಬಂಧಿಸಿದ ಚಿತ್ರ ಎಂಬುದು ಅರ್ಥವಾಗಿತ್ತು. ಅದಕ್ಕೆ ಜನ ಮತ್ತೆ ಮತ್ತೆ ಆ ಸಿನಿಮಾ ನೋಡುತ್ತಿದ್ದಾರೆ. ಸಾಹಿತ್ಯ ಮತ್ತು ಸಿನಿಮಾಗಳು ನಮ್ಮ ಜೀವನದ ಪ್ರತಿಬಿಂಬಗಳು.ಸಾಹಿತ್ಯ ಓದುವಾಗ ಮತ್ತು ಸಿನಿಮಾ ನೋಡುವಾಗ ನಮ್ಮ ಜೀವನದಲ್ಲೂ ಅಂತಹ ಘಟನೆಗಳು ಸಂಭವಿಸಿದ್ದರೆ ಅಥವಾ ಅನುಭವಕ್ಕೆ ಬಂದಿದ್ದರೆ ನಮಗೆ ಆ ಕೃತಿ ಹೆಚ್ಚು ಆಪ್ತವಾಗುತ್ತದೆ...
ಮೊನ್ನೆ ಲೇಖಕರಾದ  ಶಶಿಧರ ವಿಶ್ವಾಮಿತ್ರ ರವರ "ಕಾಡೊಂದಿತ್ತಲ್ಲ" ಎಂಬ ಕೃತಿಯನ್ನು ಓದಿದೆ. ಕಾಂತಾರ ಸಿನಿಮಾ ನೋಡಿದ ಕೆಲವೇ ದಿನಗಳಲ್ಲಿ ಓದಿದ್ದರಿಂದ ಈ ಕೃತಿಯು ಹೆಚ್ಚು ಇಷ್ಟವಾಯಿತು.ಈ ಪುಸ್ತಕದಲ್ಲಿ ಉಲ್ಲೇಖಿಸಿರುವ  ಕಾಡಿನ ಮರಗಳು ,ಪ್ರಾಣಿಗಳು, ಸಸ್ಯ ಸಂಕುಲ ಮುಂತಾದ ಹೆಸರುಗಳನ್ನು ಬಹುತೇಕ ನಗರದಲ್ಲಿ ಹುಟ್ಟಿ ಬೆಳೆದ ಮಕ್ಕಳು ಕೇಳೆ ಇಲ್ಲವೇನೋ ಎಂಬುದು ನನ್ನ ಅನಿಸಿಕೆ. ಕಾಡು ಮತ್ತು ನಾಡಿನ ಸಂಬಂಧ, ಕಾಡು ಮತ್ತು ವನ್ಯಜೀವಿಗಳ ಸಹಜೀವನ ಹಿಂದಿಗಿಂತ ಇಂದು ಹೆಚ್ಚು ಪ್ರಸ್ತುತ.

ಲಾರೆನ್ಸ್ ಫಾರೆಸ್ಟ್ ಎಂಬ ಶಾರ್ಪ್ ಶೂಟರ್ ಆಫ್ರಿಕಾದ ಮಳೆ ಕಾಡಿನಲ್ಲಿ  ಸಾವಿರಾರು ಆನೆಗಳನ್ನು ತನ್ನ ಕೋವಿಯಿಂದ ಕೊಂದ ಕಟುಕ . ಭಾರತದಲ್ಲಿ ಬ್ರಿಟಿಷರ ಪರವಾಗಿ ಅರಣ್ಯ ಪ್ರದೇಶದಲ್ಲಿ ಅಧ್ಯಯನ ಮಾಡುವಾಗ ಕರಡಿಯಿಂದ ದಾಳಿಗೊಳಗಾಗಿ ಸಾವು ಬದುಕಿನ ಮಧ್ಯ ಹೋರಾಟ ಮಾಡುವಾಗ ಸಿದ್ದನ ರೂಪದ ದೈವಮಾನವ ಬಂದು ಅವನ ರಕ್ತಸ್ರಾವ ನಿಲ್ಲಿಸಿ ಜೀವದಾನ ಮಾಡಿದ .ಅಂದಿನಿಂದ ಲಾರೆನ್ಸ್ ಎಂದೂ ಬೇಟೆಯಾಡುವುದಿರಲಿ ಒಂದು ಇರುವೆಯನ್ನು ಸಹ ನೋಯಿಸದ ಮನಸ್ಸಿನ ವ್ಯಕ್ತಿಯಾಗಿ ಬದಲಾಗಿ ತನ್ನ ಜೀವನವನ್ನು ವನ್ಯ ಪ್ರಾಣಿಗಳ ಸಂರಕ್ಷಣೆಗೆ ಮುಡಿಪಿಟ್ಟರು.
ಈ ಪುಸ್ತಕದ ಈ ಎರಡೂ ಪಾತ್ರಗಳು ನಮಗೆ ಕಾಂತಾರವನ್ನು ನೆನಪು ಮಾಡುತ್ತವೆ. ಕಟುಕ ಲಾರೆನ್ಸ್ ಬದಲಾದ ರೀತಿಯನ್ನು ನೋಡಿ ಕಾಂತರಾದ ಶಿವ ನೆನಪಾಗುತ್ತಾನೆ. ಕಾಡನ್ನು ಮತ್ತು ಜೀವಿಗಳನ್ನು  ಕಾಯುವ ಶಕ್ತಿಯೊಂದಿದೆ ಎಂಬುದನ್ನು ಪಂಜುರ್ಲಿ ಕಾಂತಾರದಲ್ಲಿ ಪ್ರತಿನಿಧಿಸಿದರೆ ಪ್ರಸ್ತುತ ಕಾಡೊಂದಿತ್ತಲ್ಲ ಕೃತಿಯಲ್ಲಿ ಆ ಪಾತ್ರವನ್ನು ಸಿದ್ದ ಮತ್ತು ಅವನ ಐದು ಜನ ಸಿದ್ದಪುರುಷರನ್ನು ಕಾಣಬಹುದು.

ಸಾಮಾನ್ಯ ಅರಣ್ಯ ದ ಗಾರ್ಡ್ ಆಗಿದ್ದ ಕೃಷ್ಣಪ್ಪ ಲಾರೆನ್ಸ್ ಮತ್ತು ಬರ್ಕ್ ರವರಿಂದ ಪ್ರಭಾವಿತರಾಗಿ ರಾಜ್ಯದ ಅರಣ್ಯ ಇಲಾಖೆಯ ಉನ್ನತವಾದ ಹುದ್ದೆಯಾದ ಮಹಾ ಅರಣ್ಯ ಪಾಲಕ ಹುದ್ದೆಗೆ ಏರಿ ಕಾಡ ರಕ್ಷಣೆಗೆ ಪಣ ತೊಟ್ಟ ರೀತಿಯನ್ನು ನೋಡಿದಾಗ ಕಾಂತಾರದ ಕಿಶೋರ್ ಪಾತ್ರ ನೆನಪಾಗುತ್ತದೆ.

“ಉತ್ತರ ಪ್ರದೇಶದ ಜಿಮ್ ಕಾರ್ಬೆಟ್ಟಿನ ಹುಲಿಗಳ ಗತಿ ಅಧೋಗತಿಯಾಗಿದೆ. ಇದಕ್ಕೆ ಕಾರಣಗಳಲ್ಲಿ ಮುಖ್ಯವಾದವು ಯಾವುವು ಎಂದರೆ, ಉತ್ತರ ಪ್ರದೇಶದ ಆಡಳಿತ ಸರಿಯಿಲ್ಲ. ಸರ್ಕಾರವೂ ಗಟ್ಟಿಯಿಲ್ಲ. ಜನರ ದುರಾಗ್ರಹ ಹೆಚ್ಚು ಎಂದೆಲ್ಲ ಎಲ್ಲರಿಗೂ ಗೊತ್ತಿರುವುದನ್ನೇ ಪಟ್ಟಿಮಾಡಿ ಹೇಳಬಹುದು. ಆದರೆ ಈ ಮಹನೀಯರ ಕರ್ನಾಟಕ ರಾಜ್ಯದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿದೆ. ಸ್ವಲ್ಪ ವರ್ಷಗಳ ಕೆಳಗೆ ಅಲ್ಲಿಯ ಬಂಡೀಪುರ ನಾಗರಹೊಳೆ ಮುತ್ತತ್ತಿ ಮುಂತಾದ ರಕ್ಷಿತಾರಣ್ಯಗಳ ಸುತ್ತ ಇರುವ ಗಿಡಜನ ಬಂಡೆದ್ದು ಕಾಡಿಗೇ ಕಿಚ್ಚು ಕೊಟ್ಟ ಮೇಲೆ 33 ಸಾವಿರ ಎಕರೆ ಕಾಡು ದಹಿಸಿಹೋಯಿತಂತಲ್ಲ, ಯಾಕೆ? ಈ ವಿಷಯಕ್ಕೆ ವಿಸ್ತಾರ ತನಿಖೆ ನಡೆದಿದೆಯೆ? ಇಲ್ಲಿ ಪ್ರಸ್ತಾಪಕ್ಕೆ ಬರುತ್ತದೆಯೇ? ಉಹು. ನೀವದನ್ನು ಇಂಥಲ್ಲಿಗೆ ಮಂಡಿಸುವ ವಿಷಯವೆಂದು ಸೇರಿಸಿರೋಲ್ಲ, ತನಿಖೆ ನಡೆಸಿದ ಮೇಲೆ ಫೈಲುಗಳನ್ನು ಗೋಪ್ಯವಾಗಿ ಮುಚ್ಚಿಟ್ಟಿರುತ್ತೀರ. ಯಾಕೆ ಗೊತ್ತೆ? ನಾನು ಹೇಳುತೀನಿ ಕೇಳಿ, ಅಭಯಾರಣ್ಯವೆಂಬೋ ಹೆಸರಲ್ಲಿ ಸ್ವಜನ ವಿರೋಧಿ, ಧನವಂತಪರ  ನಿಮ್ಮ ಧೋರಣೆ ಜನರನ್ನ ರೊಚ್ಚಿಗೇಳಿಸುತ್ತ,  ಪಂಚತಾರ ಹೋಟೆಲು? ವಿಹಾರ ಮಂದಿರ? ಇಂಥವಕ್ಕೆ ಪರವಾನಗಿ ಕೊಡುವ ಧೈರ್ಯವನ್ನ ಯಾಕೆ ಮಾಡಿದಿರಿ?... ಇದು ಅರಣ್ಯಪಾಲಕರಾದ ನಿಮಗೆ ಶೋಭೆ ತರುತ್ತಾ" ಎನ್ನುವ ಮಾತುಗಳು ಈ ಕೃತಿಯಲ್ಲಿ ಪರಿಸರ ಹೋರಾಟಗಾರ್ತಿ ನರ್ಮದಾ ವಿಪುಲೆ ರವರ  ಬಾಯಲ್ಲಿ ಲೇಖಕರು ವ್ಯಕ್ತ ಪಡಿಸಿದ  ಅಭಿಪ್ರಾಯಗಳು.. ಪರಿಸರ ಕಾಳಜಿಯ ಈ   ಮಾತುಗಳಲ್ಲಿ ರಾಜಕಾರಣಿಗಳು, ಉದ್ಯಮಿಗಳನ್ನು  ಅಪಹಾಸ್ಯ ಮಾಡುವ ರೀತಿಯನ್ನು ನೋಡಿದಾಗ ಸಮಾಜದಲ್ಲಿ ವನ,ಮತ್ತು ವನ್ಯಜೀವಿಗಳ ಉಳಿವಿಗೆ ಮಾಡುವ ಹೋರಾಟಗಳು ಸಂಪೂರ್ಣವಾಗಿ ಯಶಸ್ವಿಯಾಗದಿರಲು ಯಾರು ಕಾರಣ ಎಂಬ ಅರಿವಾಗುತ್ತದೆ.

ಈ ಕೃತಿಯಲ್ಲಿ ನನ್ನ ಗಮನ ಸೆಳೆದ ಮತ್ತೊಂದು ಅಂಶ
ಮೆಡೋಸ್ ಎಂಬ  ರಾಜ್ಯದ ಒಂದು ಸಣ್ಣ ಹಳ್ಳಿಯ ಒಬ್ಬ ಮಹಿಳೆ ಒಂದು ಸಾವಿರ ಎಕರೆಯಲ್ಲಿ ಸ್ವಯಿಚ್ಛೆಯಿಂದ ಅರಣ್ಯ ಬೆಳೆಸಿ, ತಾನು ಸಾಯುವ ತನಕ ಕಾಪಿಟ್ಟು ತಾನಿದ್ದ ಮನೆಯ ಸಹಿತ ಪುರಸಭೆಗೆ ದಾನ ಮಾಡಿದ ಪ್ರಸಂಗ .ಇದನ್ನು ಓದುವಾಗ ನಮ್ಮ ಸಾಲು ಮರದ ತಿಮ್ಮಕ್ಕ ಕಣ್ಣ ಮುಂದೆ ಬಂದರು. ಇಂತಹ ನಿಸ್ವಾರ್ಥ ಜೀವಿಗಳು ನಮ್ಮ ನಡುವೆ ಇರುವುದೇ ನಮಗೆ ಹೆಮ್ಮೆ.

ಹೆಸರು ಹೇಳುವಂತೆ 'ಕಾಡೊಂದಿತ್ತಲ್ಲ' ಎನ್ನುವುದು ನೆಲ, ನಾಡು, ಭೂಮಿ ಎಂಬ ಮೂಲ ಪರಿಕಲ್ಪನೆಗಳ ಸುತ್ತ  ಇರುವ  ಗುಡ್ಡ, ಬೆಟ್ಟ, ಗುಟ್ಟೆ, ಕೊರಕಲು ಎಂಬುದರ ಮೇಲೆ ಬೀಳುವ ಬಿಸಿಲು, ಆಡುವ ಗಾಳಿ, ಹನಿಯುವ ಮಳೆಯ, ನೆಲದಡಿಯ ಸಾರವನ್ನುಂಡು, ಕಂಗೊಳಿಸುವ ಗೊಂಡಾರಣ್ಯ, ದಟ್ಟಾರಣ್ಯ, ಮಲೆನಾಡು, ಮರಕಾಡು, ಗಿಡಕಾಡು, ಕುರುಚಲು ಕಾಡು, ಹುಲ್ಲುಗಾವಲು, ಗೋಮಾಳ ಎಂಬಲ್ಲಿ ಬಗೆಬಗೆಯ ರೂಪ ಆಕಾರ ಬಣ್ಣಗಳಿಂದ ಮೈ ತಳೆದು ಬಂದು ಎಂದಿನದೋ ಚರಿತಾನುಕಥನವನ್ನು ಹಾಡಿನಲ್ಲಿ ಕುಣಿತದಲ್ಲಿ ಗಾಥೆಯಾಗಿಸಿದ ಪರಿ ಬಹಳ ಸುಂದರ .ಇದರ ಜೊತೆಗೆ
ಅಂದಿನ ಪರಿಸರದಲ್ಲಿ ಇದ್ದೂ ಇಲ್ಲದಂತಿರುವ ಕಾಡಾಡಿ ಸಿದ್ಧರು ಅಲೆದಾಡಿ ಬೈರಾಗಿಗಳು, ಕಾಡಾಡಿ ಗಿಡಜನರು, ನಾಡಾಡಿ ಹಳ್ಳಿಯ ಮುಗ್ಧರು, ಊರಾಡಿಗಳು ಇದ್ದರು.

ಹೆಚ್ಚುತ್ತಿರುವ ಜನಸಂಖ್ಯೆ,ಮಿತಿಮೀರಿದ  ಯಂತ್ರಗಳ ಸದ್ದಿನಲ್ಲಿ   ಏನಾಗುತ್ತಿದೆ. ಎಂತಾಗುತ್ತಿದೆ ಎಂಬುದೇ ತಿಳಿಯದಾಗಿದೆ.  ಈ ಕೃತಿಯಲ್ಲಿ ಕಾಡಿನ ತೋಳ, ಊರಾಡಿ ನಾಯಿ, ಅಲೆದಾಡಿ ಬೈರಾಗಿ ಮೈತಳೆದು ನೆರೆದು ಹಾಡುತ್ತವೆ. ಆಕಾಶಕ್ಕೆ ಮೂತಿ, ಮುಖವೆತ್ತಿ ಹತಾಶೆಯಿಂದ ರೋದಿಸುತ್ತವೆ.
ಈ ಅಳಲು ಆಳುವವರ   ದಿಕ್ಕೆಡಿಸುತ್ತ ಇರುವುದಿಷ್ಟೇ, ಇಷ್ಟೊರಳಗೆ ಹದವಾಗಿ ಪಾಕಗೊಂಡು ಬೆರೆತು ಬಾಳಿದರೆ ಉಳಿವುಂಟು ಎನ್ನುವ ಎಚ್ಚರ ಹೇಳುತ್ತವೆ.
ಓದುಗರನ್ನು ತಟ್ಟಿ ಎಬ್ಬಿಸುವ ಶಕ್ತಿ 'ಕಾಡೊಂದಿತ್ತಲ್ಲ' ಹಾಡ್ಕಥನಕ್ಕಿದೆ. ಇನ್ನೇಕೆ ತಡ ಕಾಂತಾರ ನೋಡಿದಂತೆ ಕಾಡೊಂದಿತ್ತಲ್ಲ ಕೃತಿ ಓದಿಬಿಡಿ ಅದು ಕಾಡದಿದ್ದರೆ ಕೇಳಿ....

ಪುಸ್ತಕ : ಕಾಡೊಂದಿತ್ತಲ್ಲ
ಲೇಖಕರು: ಶಶಿಧರ ವಿಶ್ವಾಮಿತ್ರ.
ಬೆಲೆ:130
ಪ್ರಕಾಶನ:  ಕಮಲಾ ಎಂಟರ್ ಪ್ರೈಸಸ್ ಬೆಂಗಳೂರು

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.

08 ನವೆಂಬರ್ 2022

ಪಕ್ಷಿಲೋಕ


 

ಪಕ್ಷಿಲೋಕ ...
*ಇಂದಿನ ಸಿಂಹ ಧ್ವನಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*

ಶನಿವಾರದ ಶಾಲಾ ಕರ್ತವ್ಯ ಮುಗಿಸಿಕೊಂಡು ಮನೆಗೆ ಹೊರಡುವಾಗ ಆತ್ಮೀಯರು ಮತ್ತು ಕಲಾವಿದರಾದ ಕೋಟೆ ಕುಮಾರ್ ರವರು ಸಿಹಿಜೀವಿ ನಿಮಗೊಂದು ಹೊಸ ಲೋಕ ತೋರಿಸುವೆ ಬನ್ನಿ ಎಂದರು. ಕುತೂಹಲದಿಂದ ಅವರನ್ನು ಹಿಂಬಾಲಿಸಿದೆ .ಬೈಕ್ ತುಮಕೂರಿನ ರವೀಂದ್ರ ಕಲಾನಿಕೇತನ ದ ಮುಂದೆ ನಿಂತಿತು.ಯಾವುದೋ ಕಲಾಕೃತಿಗಳನ್ನು ತೋರಿಸುವರು ಎಂಬ ನನ್ನ ಊಹೆ ಸುಳ್ಳಾಯಿತು. ಒಳಗೆ ಕಾಲಿಟ್ಟಾಗ ಅನಾವರಣಗೊಂಡಿದ್ದು "ಪಕ್ಷಿ ಲೋಕ "




ಚಿತ್ಕಲಾ ಫೌಂಡೇಷನ್  ಹಾಗೂ ರವೀಂದ್ರ ಕಲಾನಿಕೇತನ ಚಿತ್ರಕಲಾ
ಮಹಾವಿದ್ಯಾಲಯ, ಆರ್.ಟಿ.ನಗರ, ತುಮಕೂರು. ಇವರ ಸಹಯೋಗದಲ್ಲಿ
ಆಯೋಜಿಸಿರುವ ಛಾಯಾಚಿತ್ರ ಪ್ರದರ್ಶನ ನಮ್ಮ ಮನಸೆಳೆಯಿತು.
'ಪರಿಸರದ ಉಳಿವಿಗಾಗಿ ಪಕ್ಷಿಗಳ ಸಂರಕ್ಷಣೆ ಅತ್ಯಗತ್ಯ "ಎಂಬ ಮಹೋನ್ನತ ಗುರಿಯನ್ನು ಹೊಂದಿರುವ ಈ ಪ್ರದರ್ಶನ ಪರಿಸರದ ಕಾಳಜಿ ಮತ್ತು ಪಕ್ಷಿಗಳ ಸೌಂದರ್ಯ ಮತ್ತು ಅವುಗಳ ‌ಜೀವನಕ್ರಮದ ಬಗ್ಗೆ ನಮಗೆ ಉತ್ತಮ ಮಾಹಿತಿ ನೀಡುತ್ತದೆ.





ಹೆಮ್ಮಿಗೆ ಮೋಹನ್ ಹಾಗೂ ವಿ .ಎಸ್. ದೇಸಾಯಿ ರವರು ಜಂಟಿಯಾಗಿ ಈ  ಪಕ್ಷಿ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಿದ್ದಾರೆ.

ಹೆಮ್ಮಿಗೆ ಮೋಹನ್ ರವರು
ಹಾಸನ ಜಿಲ್ಲೆಯ ಮಲೆನಾಡಿನ ಊರು ಹೆಮ್ಮಿಗೆಯವರು.ಪಶ್ಚಿಮ ಘಟ್ಟದ ಸೆರಗಿನಂತಿರುವ ಹಮ್ಮಿಗೆಯ ಪರಿಸರ ಪಕೃತಿ ಸೌಂದರ್ಯ, ವೈವಿಧ್ಯತೆಯ  ಮರಗಳು , ಪ್ರಾಣಿ, ಪಕ್ಷಿ, ಕೀಟಗಳನ್ನು ಕ್ಯಾಮರಾದಲ್ಲಿ ಮೋಹನ್‌ ಅವರು ಹಿಡಿದಿಟ್ಟಿರುವುದೇ ವಿಶೇಷ. ಹಾಸನ ಜಿಲ್ಲಾ ಸಹಕಾರ ಬ್ಯಾಂಕ್, ಮಲೆನಾಡು ಅಭಿವೃದ್ಧಿ ಪಾಲಕರಾಗಿ  ಹಾಗೂ ರೆಡ್‌ ಕ್ರಾಸ್ ಸಂಸ್ಥೆಯ ಅದ್ಯಕ್ಷರಾಗಿ ಗೌರವ ವನ್ಯಜೀವಿ ಪರಿಪಾಲಕರಾಗಿ ಅತ್ಯುತ್ತಮ ಕೆಲಸ ನಿರ್ವಹಿಸುತ್ತಾ ಬಂದಿದ್ದಾರೆ.
ಅವರೊಂದಿಗೆ ಛಾಯಾಚಿತ್ರ ಪ್ರದರ್ಶನದಲ್ಲಿ ಗಮನ ಸೆಳೆಯುವ ಚಿತ್ರಗಳ ಕ್ಲಿಕ್ಕಿಸಿದವರು  ಬಿ ಎಸ್ ದೇಸಾಯಿ ರವರು.
ವಿಜಯಪುರ ಜಿಲ್ಲೆಯ ತಾಳಿಕೋಟೆ ಮೂಲದವರಾದ ಇವರು ಹಾಸನ ಜಿಲ್ಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ  ಚಿತ್ರಕಲಾವಿದರಾಗಿ, ಕಲೆ ಮತ್ತು ಸಾಂಸ್ಕೃತಿಕ ಸಂಘಟನಾಕಾರರಾಗಿ  ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಗುರುವಾಗಿ  ಸಮಾಜದಲ್ಲಿ ಸುಮಧುರ ಬಾಂಧವ್ಯದ ಬೆಸುಗೆಯಾಗಿ ಕ್ಯಾಮರಾದ ಮುಖಾಂತರ ಲಕ್ಷಾಂತರ ಪಕ್ಷಿಗಳ ಛಾಯಾಚಿತ್ರಗಳನ್ನು ತೆಗೆದಿದ್ದಾರೆ. ಮತ್ತು ಪ್ರದರ್ಶಿಸಿದ್ದಾರೆ.
ಈ ಇಬ್ಬರೂ ಕಲಾಕಾರರ ಕಲಾಕೃತಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬ.




ತುಮಕೂರು ಡಯಟ್ ನ ವೃತ್ತಿ ಶಿಕ್ಷಣ
ಉಪನ್ಯಾಸಕರಾದ ಟಿ ಶ್ರೀನಿವಾಸ ಮೂರ್ತಿ ರವರು  ನಮ್ಮ ಜೊತೆಯಲ್ಲಿ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿ ಹೀಗೆ ಅಭಿಪ್ರಾಯಪಟ್ಟಿದ್ದಾರೆ
"ಶ್ರೀಯುತ ದೇಸಾಯಿ ರವರ ಈ ವಿಶೇಷ ಛಾಯಾಗ್ರಾಹಕ ಹವ್ಯಾಸ ನಿಜವಾಗಲೂ ಎಲ್ಲರನ್ನು ಬೆರೆಗು ಮಾಡುವಂತದ್ದು.
ನಿಜವಾದ ಛಾಯಾಗ್ರಾಹಕ ವೃತ್ತಿಯವರು, ಛಾಯಾಗ್ರಹಣದ ಬಗ್ಗೆ ಆಸಕ್ತಿ ಇರುವಂತಹವರು, ಕಲಾವಿದರು ಮತ್ತು ನೋಡುವಂತ ಕಲಾ ಆಸಕ್ತಿಯುಳ್ಳವರು ಎಲ್ಲರಿಗೂ  ಬೆರಗಾಗುವಂತಹ ಹಾಗೂ ವಿವಿಧ ಆಯಾಮಗಳಲ್ಲಿ ಅದರಲ್ಲೂ ವಿಶೇಷವಾಗಿ ಪಕ್ಷಿಗಳ ಛಾಯಾಚಿತ್ರಗಳನ್ನು ಅವರ ಕ್ಯಾಮರಾದಲ್ಲಿ ಸೆರೆ ಹಿಡಿದಿರುವುದು ಅವರ ವಿಶೇಷ ಪ್ರಕೃತಿಯ ಆಸಕ್ತಿ ಎಂದರೆ ತಪ್ಪಾಗಲಾರದು ಸ್ನೇಹಿತರೆ. ಶ್ರೀಯುತ ಸಿ ಜಿ ವೆಂಕಟೇಶ್ವರ  ಅವರ ಅಭಿಪ್ರಾಯದಂತೆ ಎಲ್ಲರನ್ನು ಪ್ರಕೃತಿಯಲ್ಲಿ ತೇಲಾಡುವಂತೆ ಮಾಡಿರುವುದು ಅವರ ಕ್ಯಾಮೆರಾ  ಕೈಚಳಕನ            ಘಮ್ಮತ್ತು. ನಾವೆಲ್ಲರೂ ಹಾಗೂ  ನಮ್ಮ ಸ್ನೇಹಿತರು ಹಾಗೂ ಕುಟುಂಬದವರೆಲ್ಲರೂ ಬಂದು ನೋಡಬಹುದಾದ ಸುಂದರ ಛಾಯಾಚಿತ್ರಗಳ ಪ್ರದರ್ಶನ ಇದಾಗಿದೆ... ಶ್ರೀಯುತ ದೇಸಾಯಿ ರವರಿಗೆ  ಶುಭವಾಗಲಿ  ಎಲ್ಲರಿಗೂ ಪ್ರದರ್ಶನದ ಬಗ್ಗೆ ಮಾಹಿತಿಯನ್ನು ನೀಡಿ ನೋಡಲು ವೀಡಿಯೋ ಮೂಲಕ ಆಹ್ವಾನ ನೀಡುವ  ಕಲಾವಿದರಾದ  ಶ್ರೀ ಕೋಟೆ ಕುಮಾರ್ ರವರ ಪ್ರಯತ್ನ ಶ್ಲಾಘನೀಯ " ಎಂದರು..

ಆತ್ಮೀಯರೆ  ನೀವು ಸಹ  ಪಕ್ಷಿ ಲೋಕದಲ್ಲಿ ವಿಹರಿಸುವ ಮನಸ್ಸಾದರೆ
2022ರ ನವೆಂಬರ್ 02ರಿಂದ ನವೆಂಬರ್ 10ರವರೆಗೆ
ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 05 ರವರೆಗೆ ಹೋಗಿ ವೀಕ್ಷಿಸಲು ಅವಕಾಶವಿದೆ. ಇ‌ನ್ನೇಕೆ ತಡ ಹೊರಡಿ ಪಕ್ಷಿ ಲೋಕದಲ್ಲಿ ಒಂದು ಸುತ್ತು ಹಾಕಿ ಬನ್ನಿ...

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.