09 ಮೇ 2022

ನನ್ನ ಪರಿಚಯ.ಅಗ್ರಹಾರ ಪ್ರಶಾಂತ್ ರವರಿಂದ


 


ಪರಿಚಯ ಶುದ್ಧ ಸಾಹಿತ್ಯ ಬಳಗ

ದಿನಾಂಕ ೦೯/೦೫/೨೦೨೨ ಸೋಮವಾರ

*ನಾವು - ನಮ್ಮವರು* ಪರಿಚಯ ಮಾಲಿಕೆ ೧

ಬಹುಮುಖ ಪ್ರತಿಭೆ - ಸಿ ಜಿ ವೆಂಕಟೇಶ್ವರ್

ನಾವು ಇಂದಿನ ಶುಭ ಸೋಮವಾರದಂದು *ನಾವು - ನಮ್ಮವರು* ಮಾಲಿಕೆಯಲ್ಲಿ  *ಸಿಹಿಜೀವಿ* ಯೆಂದೇ ಮನೆಮಾತಾಗಿರುವ ಬಹುಮುಖ ಪ್ರತಿಭೆಯ ಶಿಕ್ಷಕರೂ, ಕವಿಗಳೂ ಮತ್ತು ಕಲಾವಿದರಾಗಿರುವ ಸಿ ಜಿ ವೆಂಕಟೇಶ್ವರ್ ರವರನ್ನು ಪರಿಚಯ ಮಾಡಿಕೊಡುತ್ತಿದ್ದೇವೆ.
   *ಆಡು ಮುಟ್ಟದ ಸೊಪ್ಪಿಲ್ಲ, ಹಾಗೆಯೇ ಸಿಹಿ ಜೀವಿಯಿರದ ಕ್ಷೇತ್ರವಿಲ್ಲ ಎಂಬ ನುಡಿಗೆ ಸರಿಹೊಂದುವಂತಿರುವ ಶ್ರೀಯುತರು ಕೀರ್ತಿಶೇಷ ಗೋವಿಂದಪ್ಪ ಮತ್ತು ಶ್ರೀದೇವಮ್ಮರವರ ಸುಪುತ್ರರಾಗಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚೌಡಗೊಂಡನಹಳ್ಳಿಯಲ್ಲಿ ಜನಿಸಿದರು. ಇವರ ವಿದ್ಯಾಭ್ಯಾಸವು ಚೌಡಗೊಂಡನಹಳ್ಳಿ, ಉಪ್ಪರಿಗೇನಹಳ್ಳಿ, ಯರಬಳ್ಳಿ, ಹಿರಿಯೂರು, ಮೈಸೂರುಗಳಲ್ಲಿ ನಡೆಯಿತು. ರಾಜ್ಯಶಾಸ್ತ್ರದಲ್ಲಿ ಮತ್ತು ಅರ್ಥಶಾಸ್ತ್ರದಲ್ಲಿ ಎಂ ಎ ಪದವಿಯನ್ನು ಪಡೆದಿರುವ ಶ್ರೀಯುತರು ಕಥೆ, ಗಜಲ್, ಹನಿಗವನ, ಶಾಯರಿ, ಪರ್ದ್ ಬರೆಯುವುದನ್ನೇ ಮುಖ್ಯ ಹವ್ಯಾಸವಾಗಿ ಬೆಳಿಸಿಕೊಂಡು ಸುಮಾರು ಹತ್ತಕ್ಕೂ ಅಧಿಕ ಕವನ ಮತ್ತು ಲೇಖನಗಳನ್ನು ಒಳಗೊಂಡ ಪುಸ್ತಕಗಳು ಲೋಕಾರ್ಪಣೆಯಾಗಿರುವುದು ತುಂಬಾ ಸಂತೋಷಕರವಾದ ವಿಚಾರವಾಗಿದೆ. ಶ್ರೀಯುತರ ಲೇಖನಗಳು  ನಾಡಿನ ಎಲ್ಲಾ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಪೌರಾಣಿಕ ನಾಟಕಗಳಲ್ಲಿ ಅಭಿನಯಿಸುವ ಆಸಕ್ತಿಯನ್ನು ಹೊಂದಿರುವ ಇವರು ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿರುತ್ತಾರೆ. ಜೊತೆಗೆ ವೃತ್ತಿಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಮಾಜವಿಜ್ಞಾನ ಶಿಕ್ಷಕರ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಾ ಪರಿಸರಕ್ಕೆ ಸಂಬಂಧಿಸಿದಂತೆ ರಾಷ್ಟ್ರಮಟ್ಟದ ಕಾರ್ಯಾಗಾರಗಳಲ್ಲಿ ಪಾಲ್ಗೊಂಡಿದ್ದಾರೆ. ಸಿಹಿಜೀವಿಯವರು ಎಲ್ಲದಕ್ಕಿಂತ ಹೆಚ್ಚಾಗಿ ಹವ್ಯಾಸಿ ಹಾಡುಗಾರ ಮಾತ್ರವಲ್ಲ, ಉತ್ತಮ ಛಾಯಾಚಿತ್ರಗಾರ ಮತ್ತು ಬ್ಲಾಗ್ ಸಹ ಆಗಿರುವುದು ಹೆಮ್ಮೆಯ ವಿಚಾರವಾಗಿದೆ. ಇವರ ಬ್ಲಾಗ್ ನ್ನು ಜಗತ್ತಿನಾದ್ಯಂತ ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಜನರು ಓದುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ.
        ಶ್ರೀಯುತರ *ಸಾಲು ದೀಪಾವಳಿ, ಸಿಹಿಜೀವಿಯ ಗಜಲ್, ಶಾಲಾ ಪ್ರಬಂಧ ಮತ್ತು ಪತ್ರ ಲೇಖನ, ನನ್ನಮ್ಮ ನಮ್ಮೂರಿನ ಫ್ಲಾರೆನ್ಸ ನೈಟಿಂಗೇಲ್ ಲಲಿತ ಪ್ರಬಂಧ, ರಂಗಣ್ಣನ ಗುಡಿಸಲು ಇವಿಷ್ಟು ಕೃತಿಗಳು ಲೋಕಾರ್ಪಣೆ ಗೊಂಡು ಓದುಗರ ಕೈ ಸೇರಿ ಪ್ರಶಂಸೆಗೆ ಪಾತ್ರವಾಗಿವೆ.
    ಇನ್ನು ಹೊರಬರಲು ಕಾಯ್ದು ಕುಳಿತಿರುವ ಕೃತಿಗಳೆಂದರೆ *ಉದಕದೊಳಗಿನ ಕಿಚ್ಚು*, *ಶಿಕ್ಷಣವೇ ಶಕ್ತಿ* , *ವಿದ್ಯಾರ್ಥಿಗಳಿಗಾಗಿ* *ಸಿಹಿಜೀವಿಯ ಹನಿಗಳು*, *ಬಹುಮುಖ*
   ಸಿ. ಜಿ. ವೆಂ ರವರು *ತಾಲ್ಲೂಕು ಮಟ್ಟದ ಕವಿಗೋಷ್ಠಿ,*, ಕವಿಬಳಗ, ಹನಿ ಹನಿ ಇಬ್ಬನಿ ಬಳಗ, ಸಾಧನಕೇರಿ ಬಳಗ, ಸಾಹಿತ್ಯ ಬಳಗ ಚಿಂತಾಮಣಿ, ಮುಂತಾದವರು ಆಯೋಜಿಸಿದ್ದ  *ರಾಜ್ಯ ಮಟ್ಟದ ಕವಿಗೋಷ್ಠಿ*, ತಾಲ್ಲೂಕು ಸಾಹಿತ್ಯ ಪರಿಷತ್ ಗೌರಿಬಿದನೂರು ಮುಂತಾದ ಕವಿಗೋಷ್ಠಿಯಲ್ಲಿ ಭಾಗವಹಿಸಿ ತಮ್ಮ ಕವನಗಳನ್ನು ವಾಚಿಸಿ ಅಪಾರ ಜನಮನ್ನಣೆಯನ್ನು ಗಳಿಸಿಕೊಂಡಿದ್ದಾರೆ.
     ಈ ಸಾಧಕರಿಗೆ ರಾಜ್ಯ ಮಟ್ಟದ *ಕಾವ್ಯ ಚಿಂತಾಮಣಿ*, ಜಿಲ್ಲಾ ಮಟ್ಟದ *ಅತ್ಯುತ್ತಮ ಶಿಕ್ಷಕ ಪ್ರಶಸ್ತಿ*, ಕೇಂದ್ರ ಸಾಹಿತ್ಯ ವೇದಿಕೆಯಿಂದ ರಾಜ್ಯ ಮಟ್ಟದ ಸಂಘಟನಾ ಚತುರ*, ರೋಟರಿ ಕ್ಲಬ್ ನಿಂದ ನೇಷನ್ ಬಿಲ್ಡರ್*  ಪ್ರಶಸ್ತಿ ಮುಂತಾದವು ಸಂದಿವೆ.

ಇನ್ನು ಸನ್ಮಾನದ ವಿಚಾರಕ್ಕೆ ಬಂದರಂತೂ ಅಪಾರ ಸಂಖ್ಯೆಯ ಗೌರವ ಸನ್ಮಾನಗಳು ಶ್ರೀಯುತರನ್ನು ಅರಸಿ ಬಂದಿವೆ, ಪ್ರಮುಖವಾದವುಗಳೆಂದರೆ *ಬಿ ಎಂ ಕೆ ಸಿ ಕಬ್ಬಡಿ ಕ್ಲಬ್* ಗೌರೀಬಿದನೂರು, *ಸಾಹಿತ್ಯ ಪರಿಷತ್* ಗೌರಿಬಿದನೂರು, *ಲಯನ್ಸ್ ಕ್ಲಬ್* ಗೌರಿಬಿದನೂರು, *ಶಾರದಾ ದೇವಿ ರಾಮಕೃಷ್ಣ ಶಾಲೆ* ಗೌರಿಬಿದನೂರು, *ಬಿಜಿಎಸ್ ಶಾಲೆ ಅಲೀಪುರ*, *ಪಾಂಚಜನ್ಯ ಟ್ರಸ್ಟ್ ಗೌರಿಬಿದನೂರು*, ಸಿದ್ಧ ಗಂಗಾ ಮಠಾಧೀಶರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಯವರಿಂದ ಶ್ರೀಯುತರ ಸಾಧನೆಗೆ ಗೌರವ ಸನ್ಮಾನಗಳು ಸಂದಿವೆ ಎಂದು ಹೇಳಲು ತುಂಬಾ ಹೆಮ್ಮೆ ಎನಿಸುತ್ತದೆ.
     ಶ್ರೀಯುತರ ಶೈಕ್ಷಣಿಕ ಸಾಧನೆಯ ಕಡೆಗೆ ಗಮನ ಹರಿಸಿದಾಗ  ಮೇಲೆ ತಿಳಿಸಿದಂತೆ ಸಮಾಜ ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳಾಗಿ, ದೀಕ್ಷಾ ಪೋರ್ಟಲ್ ನಲ್ಲಿ ೨೧ ಡಿಜಿಟಲ್ ಸಂಪನ್ಮೂಲ ರಚಿಸಿದ್ದಾರೆ. ಇದು ದೇಶದಾದ್ಯಂತ ಮಕ್ಕಳಿಗೆ ತುಂಬಾ ಉಪಯುಕ್ತವಾಗಿದೆ‌. ಶಾಲೆಯಲ್ಲಿ ಕಂಪ್ಯೂಟರ್ ಪ್ರೊಜೆಕ್ಟರ್ ಆಧಾರಿತ ಕಲಿಕೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ.
  ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಚಿಕ್ಕ ಚಿಕ್ಕ ವೀಡಿಯೋಗಳನ್ನು ಮಾಡಿ ಮಕ್ಕಳಿಗೆ ಹಂಚಿ ಕಲಿಕೆ ನಿರಂತರವಾಗಿ ನಡೆಯುವತ್ತ ಕಾಳಜಿ ವಹಿಸಿರುತ್ತಾರೆ.
ಇದೆಲ್ಲಕಿಂತ ಹೆಚ್ಚಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಇರುವ ಸಂದೇಹಗಳನ್ನು  ನಿವಾರಿಸಲು  ಜಿಲ್ಲಾ ಹಂತದ ಕಾರ್ಯಕ್ರಮಗಳನ್ನು ಏರ್ಪಡಿಸಿ ಯಶಸ್ವಿಯಾಗಿರುತ್ತಾರೆ. ಅದಕ್ಕಾಗಿ ಸಿ ಜಿ ವೆಂ ರವರಿಗೆ ಹೃನ್ಮನದ ಅಭಿನಂದನೆಗಳು. ಜೊತೆಗೆ ದೂರದರ್ಶನದ ನೇರಪ್ರಸಾರದಲ್ಲಿ ಭಾಗವಹಿಸಿ ಮಾರ್ಗದರ್ಶನ ಮಾಡಿದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ.
     ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳಲ್ಲಿ ಹುದುಗಿರುವ ಅದಮ್ಯ ಪ್ರತಿಭೆಗಳನ್ನು ಹೆಕ್ಕಿ ಹೊರತರುವ ನಿಟ್ಟಿನಲ್ಲಿ ಮತ್ತು ಸೃಜನಶೀಲತೆಯನ್ನು ಪ್ರೋತ್ಸಾಹಿಸುವ ಸಲುವಾಗಿ ತಮ್ಮ ಶಾಲೆಯಲ್ಲಿ *ಭಿತ್ತಿ ಪತ್ರಿಕೆ*ಯನ್ನು ಪ್ರಾರಂಭಿಸಿ ಮಕ್ಕಳಿಂದಲೇ *ಕಥೆ, ಕವನ, ಹನಿಗವನ* ಬರೆಯಿಸಿ ತಿದ್ದಿ ಪ್ರೇರೇಪಿಸುವ ಮಹತ್ಕಾರ್ಯ ಮಾಡುತ್ತಾ ಬರುತ್ತಿದ್ದಾರೆ.

    ಇಂತಹ ಸಾಧಕರು ನಮ್ಮ ಶುದ್ಧ ಸಾಹಿತ್ಯ ಬಳಗದಲ್ಲಿ ಇರುವುದು ನಮ್ಮೆಲ್ಲರಿಗೂ ತುಂಬಾ ಹೆಮ್ಮೆಯ ವಿಚಾರವಾಗಿದೆ. ಇಂತಹ ಮಹನೀಯರನ್ನು *ನಾವು- ನಮ್ಮವರು* ಮಾಲಿಕೆಯಲ್ಲಿ ಅವರ ಸಾಧನೆಯನ್ನು ಪರಿಚಯ ಮಾಡಿಕೊಡುತ್ತಿರುವುದು ನಮಗೆ ತುಂಬಾ ಸಂತೋಷಕರವಾದ ವಿಚಾರವಾಗಿದೆ. ಶ್ರೀಯುತರ ಸಾಧನೆ ಜಗದೆತ್ತರಕ್ಕೆ ಏರಿ ಹಲವಾರು ಪ್ರಶಸ್ತಿ, ಸನ್ಮಾನಗಳು ಸಂದಲಿ ಎಂಬ ಹಾರೈಕೆಯೊಂದಿಗೆ ಇಂದಿಗೆ ಮಾಲಿಕೆಗೆ  ವಿರಾಮ ಹಾಕುತ್ತಿದ್ದೇನೆ.

ನಾಳೆ ಮತ್ತೊಬ್ಬ ಸಾಧಕರ ವಿವರದೊಂದಿಗೆ ನಿಮ್ಮ ಮುಂದೆ ಬರುವೆ

ಇಂತಿ

ಅಗ್ರಹಾರಪ್ರಶಾಂತ್

06 ಮೇ 2022

ವಜ್ರದ ಹರಳು .


ವಜ್ರದ ಹರಳು .


ಕಳವಳಗೊಂಡು ತಲ್ಲಣಿಸಿತ್ತು

ಮನ ಸಿಗುವಳೋ ಅಥವಾ

ಸಿಗದಿರುವಳೋ ಅವಳು|

ಅದೇ ಮನ ಸಮಾಧಾನ

ಪಡಿಸಲು ನನ್ನ ಪ್ರಶ್ನೆ ಮಾಡಿತು

ಹೇಗೆ ಕಳೆದುಕೊಳ್ಳುವಳು 

ನಿನ್ನಂತಹ ವಜ್ರದ ಹರಳು||



ಸಿಹಿಜೀವಿ 

 

03 ಮೇ 2022

ಮೇಧಾಶಕ್ತಿ.ಹನಿಗವನ

 


ಮೇಧಾಶಕ್ತಿ

ಕೊರಗದಿರು ನಾ ಬಲಹೀನ
ನಾ ಬುದ್ದಿವಂತನಲ್ಲ ಎಂದು
ಅಂದುಕೊಳ್ಳದಿರು ನನಗಿಲ್ಲ ಯುಕ್ತಿ|
ಜ್ಞಾನವ ಪಡೆಯುತ,ಹಂಚುತಾ
ವಿವೇಕದಿ ಕಾಯಕ ಮಾಡುತಿರು
ನಿನಗರಿವಿಲ್ಲದೇ ನಿನ್ನಲಿ
ಉದಯಿಸುವುದು ಮೇಧಾಶಕ್ತಿ||

ಸಿಹಿಜೀವಿ
ಸಿ ಜಿ ವೆಂಕಟೇಶ್ವರ


02 ಮೇ 2022

ನಟರಾಜ .ಲೇಖನ


 *"ನಟರಾಜ "ಬಾಲ್ಯದ ನೆನಪಿನ ಲೇಖನ*


https://pratilipi.page.link/ThsAjAMtiN6HLYhp8


*ನಟರಾಜ*


ನಾನಾಗ  ನಮ್ಮೂರ  ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ. ನಮ್ಮ ಶಿಕ್ಷಕರು ಪ್ರತಿವಾರ ನಮ್ಮನ್ನು ಹೊರಸಂಚಾರ ಕರೆದುಕೊಂಡು ಹೋಗುತ್ತಿದ್ದರು. ಅಷ್ಟೇನೂ ದೂರವಲ್ಲದಿದ್ದರೂ ಕನಿಷ್ಠ ಮೂರ್ನಾಲ್ಕು ಕಿಲೋಮೀಟರ್ ಹೊರಸಂಚಾರ  ಕರೆದುಕೊಂಡು ಹೋಗಿ ಯಾವುದಾದರೊಂದು ಕೆರೆ ಅಥವಾ ತೋಟದಲ್ಲಿ ನಾವು ನಮ್ಮ ಮನೆಯಿಂದ ಕಟ್ಟಿಕೊಂಡು ಹೋದ ಬುತ್ತಿ ಅನ್ನ, ಚಿತ್ರನ್ನ, ಪಕೋಡ, ರೊಟ್ಟಿ ಹೀಗೆ ವಿವಿಧ ತಿಂಡಿಗಳನ್ನು  ಪರಸ್ಪರ ಹಂಚಿಕೊಂಡು ತಿಂದ ನಂತರ  ಎಲ್ಲಾ ಮಕ್ಕಳ ಚಿತ್ತ ನನ್ನ ಕಡೆ ಹರಿಯುತ್ತಿತ್ತು. ಅವರು"  ಸಾ ವೆಂಕಟೇಶ್ ಹತ್ರ ಡ್ಯಾನ್ಸ್ ಮಾಡ್ಸಿ ಸಾ... " ಅಂದಾಗ ಆ... ಬಾರಾ ವೆಂಕಟೇಶ ಡ್ಯಾನ್ಸ್ ಮಾಡು ನಮ್ಮ ಶಿಕ್ಷಕರು ಕರೆಯುತ್ತಿದ್ದರು. ನಾನು ಹೋಗಿ ಆಗ ಪ್ರಚಲಿತದಲ್ಲಿದ್ದ "ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು...." ಹಾಡನ್ನು ನಾನೇ ಹೇಳಿಕೊಂಡು ಕುಣಿಯತೊಡಗಿದೆ. ಎಲ್ಲಾ ನನ್ನ ಸಹಪಾಠಿಗಳು ಮತ್ತು ಶಿಕ್ಷಕರು ಚಪ್ಪಾಳೆ ತಟ್ಟಿ ಹುರಿದುಂಬಿಸಿ ಮತ್ತೊಮ್ಮೆ ಕುಣಿಯಲು ಹೇಳಿದರು .ಹೀಗೆ ಮೂರು ಬಾರಿ ಕುಣಿದ ಮೇಲೆ ಚೂರು ಚೂರು ತಿಂದ ವಿವಿಧ ಬಗೆಯ ತಿಂಡಿಗಳು ಯಾವಾಗಲೋ ಕರಗಿದ್ದವು. ನನ್ನ ಡ್ಯಾನ್ಸ್ ಆದ ಮೇಲೆ ಆನಂದ ಎಂಬ ನನ್ನ ಕ್ಲಾಸ್ ಮೇಟ್ ನನ್ನ ಕುಣಿಯಲು ಹೇಳಿದರು ಅವನು " ಒನ್ ಟೂ ತ್ರೀ ಪೋರ್ ಪಾನ್ ಪಟಾನ" ಎಂದು ಯಾರಿಗೂ ಅರ್ಥವಾಗದಿದ್ದರೂ ತೆಲುಗು ಹಾಡು ಹೇಳಿಕೊಂಡು ಕುಣಿಯುವಾಗ ನಾವೆಲ್ಲರೂ ಚಪ್ಪಾಳೆ ತಟ್ಟಿ ಅವನನ್ನು ಹುರಿದುಂಬಿಸಿ ಇನ್ನೂ ಕುಣಿಯುವಂತೆ ಮಾಡಿದೆವು. ಈ ರೀತಿಯಾಗಿ ಕುಣಿಯಲು ಆರಂಭ ಮಾಡಿದ  ನಮ್ಮನ್ನು ಶಾಲೆಯಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಮಾಡಿದರೂ ನಮ್ಮ ಡ್ಯಾನ್ಸ್ ಖಾಯಂ ಆಗಿರುತ್ತಿತ್ತು. ಒಂದು ರೀತಿಯಲ್ಲಿ ನಾವು ನಮ್ಮ ಶಾಲೆಯ  ಅಧಿಕೃತ ನಟ ರಾಜರಾಗಿ ಗುರ್ತಿಸಿಕೊಂಡಿದ್ದೆವು. 

ನಂತರ ನನ್ನ ವಿದ್ಯಾಭ್ಯಾಸ ಮುಂದುವರೆದು ಟಿ ಸಿ ಹೆಚ್ ಓದುವಾಗ ಹಿರಿಯೂರಿನಲ್ಲಿ " ತೂ ಚೀಜ್ ಬಡೀ ಹೈ....." ಹಾಡಿಗೆ ಡ್ಯಾನ್ಸ್ ಮಾಡಿದ್ದೆ. ಮೈಸೂರಿನಲ್ಲಿ ಬಿ ಎಡ್ ಓದುವಾಗ ಸಿ ಟಿ ಸಿ ಕ್ಯಾಂಪ್ ನಲ್ಲಿ " ಸಂದೇಶ್ ಆತೇ ಐ ..... ಎಂಬ ಹಾಡಿಗೆ  ಗೆಳೆಯರೊಂದಿಗೆ ಹೆಜ್ಜೆ ಹಾಕಿದ್ದೆ. 

ಇತ್ತೀಚಿಗೆ ರಾಷ್ಟ್ರ ಮಟ್ಟದ ಶೈಕ್ಷಣಿಕ ಸಮಾವೇಶದ ನಿಮಿತ್ತವಾಗಿ  ಹೈದರಾಬಾದ್ ಗೆ ಹೋದಾಗ ರಾಮೋಜಿ   ಪಿಲಂ ಸಿಟಿಯಲ್ಲಿ ಕೃತಕ ಮಳೆ ನೀರಿನಲ್ಲಿ ಎಲ್ಲಾ ಭಾಷೆಗಳ ಹಾಡಿಗೆ   ರೈನ್ ಡ್ಯಾನ್ಸ್ ಮಾಡಿದ್ದು ನೆನಪಾಯಿತು . ವಯಸ್ಸಿನ ನಿರ್ಬಂಧವಿಲ್ಲದೇ ತಮಗಿಷ್ಟ ಬಂದ ಹಾಗೆ ಕುಣಿದ ಆ ಕ್ಷಣಗಳು ನಮ್ಮ ಜೀವನದಿ ಮರೆಯಲಾರದ ಕ್ಷಣಗಳೆಂದು  ಹೇಳಬಹುದು.

ಆದರೂ ಬಾಲ್ಯದಲ್ಲಿ ಕುಣಿದ "ಕಾಣದಂತೆ ಮಾಯವಾದನು ... ಹಾಡು ನೆನೆದರೆ ಏನೋ ಒಂತರ ಸಂತಸ .ಮೊನ್ನೆ ಊರಿಗೆ ಹೋದಾಗ ಆನಂದ ಸಿಕ್ಕಿದ್ದ ಆ ಡ್ಯಾನ್ಸ್ ಜ್ಞಾಪಿಸಿದ ಮತ್ತೊಮ್ಮೆ ಆನಂದದಿಂದ ನಮ್ಮ ನೆನಪಿಗೆ ಜಾರಿ ಆನಂದಪಟ್ಟೆವು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

27 ಏಪ್ರಿಲ್ 2022

ಆಧುನಿಕ ಸೊಸೆ.


 



ಆಧುನಿಕ ಸೊಸೆ.


ಹೊಸ ಸಂಸಾರ ಹಾಲು ಉಕ್ಕಿದಂತೆ ಉಕ್ಕಿ ಹರಿಯಬೇಕು ಸೊಸೆಗೆ ಅತ್ತೆ ಸಲಹೆ ನೀಡಿದರು.  ದಿನಕ್ಕೆರಡು ಲೀಟರ್ ಹಾಲು ಉಕ್ಕಿಸುತ್ತಾ  ಉಕ್ಕಿ ಹರಿದ ಮೇಲೆ ಉಳಿದ ಹಾಲಿನಲ್ಲಿ ಟೀ ಮಾಡಿಕೊಂಡು ಕುಡಿದು ಎರಡು ತಿಂಗಳಿಗೇ ಸ್ಟವ್ ಕಮರಿ  ವಾಸನೆ ಹೊಡೆದದ್ದಕ್ಕೆ ಹೊಸ ಸ್ಟವ್ ಖರೀದಿಸಿದ್ದಾಳೆ.ಏಕೆಂದರೆ ಇವಳು ಆಧುನಿಕ ಸೊಸೆ.


ಹೊಸ  ಕೆಲಸ ಕಲಿತುಕೋ ಎಂಬ ಅತ್ತೆಯ ಮಾತಿಗೆ ಬೆಲೆ ಕೊಟ್ಟು ನಿತ್ಯ 5 ಗಂಟೆಗಳು ಧಾರಾವಾಹಿ ನೋಡುತ್ತಾ ಅದರಲ್ಲಿ ಬರುವ ಸೊಸೆಯ ತರಹ ಕೆಲಸ ಮಾಡಲು ಕಲಿಯುತ್ತಿದ್ದಾಳೆ.ಇವಳೇ ಹೊಸ ಸೊಸೆ.


ಅತ್ತೆ ಅವರ  ಮಗನ ಆರೋಗ್ಯದ ಬಗ್ಗೆ ಎಚ್ಚರ ವಹಿಸಲು ಸೊಸೆಗೆ ಹೇಳಿದರು  .ಆರೋಗ್ಯದ ದೃಷ್ಟಿಯಿಂದ ನಿತ್ಯ ಒಂದು ಸಲ ಮಾತ್ರ ಗಂಡನಿಗೆ ಊಟ  ನೀಡುತ್ತಿದ್ದಾಳೆ.ಇವಳೇ ಅಧುನಿಕ ಸೊಸೆ.


ಗಂಡನಿಗೆ ಕಷ್ಟ ಕೊಡಬಾರದು ಎಂಬ ಸಮಾಜದ ಮಾತು ನೆನಪಾಗಿ ಬೆಳಗ್ಗೆ ಮಾತ್ರ ಅಡುಗೆ ಗಂಡನಿಂದ  ಮಾಡಿಸುತ್ತಿದ್ದಾಳೆ ಕಾರಣ ಇವಳು ಆಧುನಿಕ ಸೊಸೆ.


ಉಳಿತಾಯ ಮಾಡು ಎಂಬ ಮಾವನವರ  ಮಾತಿನಿಂದ ವಾರಕ್ಕೆ ಒಂದು ಹೊಸ ಡ್ರೆಸ್ ಮಾತ್ರ ಕೊಳ್ಳುತ್ತಿದ್ದಾಳೆ.  ಎರಡು ಸಿನಿಮಾಗಳನ್ನು ಮಾತ್ರ ನೋಡುತ್ತಿದ್ದಾಳೆ. ಅದಕ್ಕೆ ಅವಳಿಗೆ ಹೇಳುವುದು ಅಧುನಿಕ ಸೊಸೆ.


ಪತಿಯೇ ಪ್ರತ್ಯಕ್ಷ ದೇವರು ಎಂದು ಅವಳ ಅಮ್ಮ ಹೇಳಿದ್ದು ನೆನಪಾಗಿ,  ವೈಕುಂಠ ಏಕಾದಶಿಯಂದು ಪತಿಯ ಪೂಜೆ ಮಾಡಿ ಮುಖಕ್ಕೆ ಮಂಗಳಾರತಿ ಎತ್ತಿ,ಅವನ ಕಾಲುಗಳ ಮೇಲೆ ತೆಂಗಿನಕಾಯಿ ಹೊಡೆದಳು  ಪಾಪ ಕಾಲಿನ ಬೆರಳು ಜಜ್ಜಿಹೋಗಿ ರಕ್ತ ಬಂದು,ಕಟ್ಟನ್ನೂ ಕಟ್ಟಿದ್ದಾಳೆ  ಶೀಘ್ರದಲ್ಲೇ ಗುಣಮುಖವಾದರೆ 

ತಿರುಪತಿಗೆ ಬರುವೆ ಎಂದು ಹರಕೆ 

ಹೊತ್ತಿದ್ದಾಳೆ.ಇವಳೇ ಆಧುನಿಕ ಸೊಸೆ.


(ಇದು ಎಲ್ಲಾ ಆಧುನಿಕ ಸೊಸೆಯಂದಿರಿಗೆ ಅನ್ವಯವಾಗುವುದಿಲ್ಲ ಹಾಗೇನಾದರೂ ಆದರೆ ಅದು ಕಾಕಾತಾಳೀಯ ಅಷ್ಟೇ)


ಸಿಹಿಜೀವಿ

ಸಿ ಜಿ ವೆಂಕಟೇಶ್ವರ