15 ಏಪ್ರಿಲ್ 2022

ನಮಗಾಗಿ ಪ್ರಾರ್ಥಿಸೋಣ.


 ಮೂರನೇ ವಿಶ್ವ ಮಹಾಯುದ್ದ ಆದರೆ ಅದರ ಪರಿಣಾಮ ಊಹಿಸಲೂ ಅಸಾಧ್ಯ .ಆದರೂ ಕೆಲ ತಜ್ಞರು ಅದರ ಪರಿಣಾಮಗಳನ್ನು ಅಂದಾಜು ಮಾಡಿದ್ದಾರೆ. ಪ್ರಪಂಚದ ಬಹುತೇಕ ರಾಷ್ಟ್ರಗಳು ಮಾರಕವಾದ ಜೈವಿಕ ಅಸ್ತ್ರಗಳು, ರಸಾಯನಿಕ ಅಸ್ತ್ರಗಳು ಸೇರಿದಂತೆ ಸುಮಾರು ಆರು ಸಾವಿರಕ್ಕೂ ಹೆಚ್ಚು ಅಣು ಬಾಂಬ್ ಗಳನ್ನು ಗುಡ್ಡೆ ಹಾಕಿಕೊಂಡಿವೆ. ಒಂದು ಅಣು ಬಾಂಬ್ ಗೆ ಕೋಟಿಗೂ ಹೆಚ್ಚು ಬಲಿ ಪಡೆಯುವ ಶಕ್ತಿ ಇದೆ ಎಂಬುದು ಹಿರೋಷಿಮಾ ನಾಗಸಾಕಿಯಿಂದ ಸಾಬೀತಾಗಿದೆ. ಈಗ ನೀವೆ ಲೆಕ್ಕ ಹಾಕಿ ಸಾವಿರಾರು  ಬಾಂಬ್ ಗೆ ಎಷ್ಟು ದೇಶ ಎಷ್ಟು ಜ‌ನ ಉಳಿಯಬಹುದು? ತಜ್ಞರ ಮತ್ತೊಂದು ಅಂದಾಜಿನ ಪ್ರಕಾರ ಈಗಿರುವ ಎಲ್ಲಾ ಅಸ್ತ್ರಗಳ ಬಳಸಿದರೆ ಇಡೀ ವಿಶ್ವವನ್ನು ಐದು ಬಾರಿ ಸುಟ್ಟ ಬೂದಿ ಮಾಡಬಹುದಂತೆ ! ಯುದ್ಧ ಎಂದು ಎಗರಾಡುವ ಪುಟಿನ್ ,ಕಿಮ್ ಮತ್ತು ನಮ್ಮ ದೇಶದ ನೆರೆಹೊರೆಯ ಸಮಯಸಾಧಕರಿಗೆ ದೇವರೇ ಒಳ್ಳೆಯ ಬುದ್ದಿ ಕೊಡು ಎಂಬುದನ್ನು ಮಾತ್ರ ನಾವು ಕೋರಬಹುದು ಅಷ್ಟೇ.

ಸಿಹಿಜೀವಿ

ಸಿ ಜಿ ವೆಂಕಟೇಶ್ವರ

14 ಏಪ್ರಿಲ್ 2022

ಮರ ಮತ್ತು ಬೀಜ .


 


*ಮರ ಮತ್ತು ಬೀಜ*


ಒಳ್ಳೆಯ ಕೆಲಸ ಮಾಡಲು

ನಿಶ್ಚಯ ಮಾಡಿದರೆ ,ಯಾರೇನೇ 

ಅಂದರೂ ದೃಢವಾಗಿ ನಿಂತುಬಿಡು

ಅಲುಗಾಡದೆ  ಮರದಂತೆ|

ಇತರರ ಒಳಿತಿಗಾಗಿ 

ಬೀಳಬೇಕಾಗಿ ಬಂದರೆ 

ಬಿದ್ದು ಮಣ್ಣಲ್ಲಿ ಮತ್ತೆ 

ಮೊಳಕೆಯೊಡೆದುಬಿಡು ಬೀಜದಂತೆ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


09 ಏಪ್ರಿಲ್ 2022

ವರ್ಣಲೋಕ .


 ಅಜ್ಞಾನ, ಅಂಧಕಾರದಿ

ಬಾಳುತಲಿದ್ದರೆ
ನಿನ್ನ ಆವರಿಸುವುದು ಕತ್ತಲ ಕೂಪ |
ಜ್ಞಾನವ ಪಡೆಯುತ
ಒಳಗಣ್ಣ ತೆರೆದು ನೋಡು
ನಿನಗಾಗ ಕಾಣುವುದು ವರ್ಣಲೋಕ||


ಸಿಹಿಜೀವಿ

08 ಏಪ್ರಿಲ್ 2022

ಶಿವಾನಂದ ಶಿ‌ವಾಚಾರ್ಯ ಸ್ವಾಮೀಜಿ.


 ಶಿವಾನಂದ ಶಿವಾಚಾರ್ಯ ಸ್ವಾಮೀಜಿ.


ನಮನ ನಿಮಗೆ   ಹಿರೇಮಠದ ಶಿವಾನಂದ ಶಿವಾಚಾರ್ಯ 

ಜನರಲಿ ಜನಾರ್ಧನನ ಕಂಡ

ಕಲ್ಪತರು ನಾಡಿನ ಯತಿವರ್ಯ.


ಮಹಿಳೆಯರಿಗೆ ರುದ್ರಾಧ್ಯಯನ ವೇದಾಧ್ಯಯನ ಮಾಡಿಸಿದ ಸ್ವಾಮೀಜಿ

ವಯೋವೃದ್ದರಿಗೆ ಕಾಶಿ.ಕೇದಾರ ದರ್ಶನ ಮಾಡಿಸಿದ ಗುರೂಜಿ.


ಜನರ ಧಾರ್ಮಿಕ ಮತ್ತು ನೈತಿಕ ಗುಣಗಳ ಬೆಳೆಸಿದಿರಿ

ವಿದೇಶಗಳಲ್ಲಿ ಭಾರತದ ಕೀರ್ತಿ ಪತಾಕೆಯನು ಹಾರಿಸಿದಿರಿ.


ಮತಕುಲ ತ್ಯಜಿಸಿರಿ ಮನುಕುಲ ಬೆಳೆಸಿರೆಂದ ದಾರ್ಶನಿಕ

ಸ್ವಾಮೀಜಿಗಳ ನಡೆ ನುಡಿ

ನಮಗೆಲ್ಲರಿಗೂ ಪ್ರೇರಕ.


'ಪಿತೃಭಕ್ತ'ರಾಗಿ, ಬರೀ 'ಪಿತ್ರಾರ್ಜಿತ'ದ ಭಕ್ತರಾಗಬೇಡಿ ಎಂದ ಧೀಮಂತ.

ಸಕಲರು ನಮಿಪೆವು ನಿಮ್ಮಯ ಚರಣಕೆ  ಕರಗಳ ಜೋಡಿಸುತಾ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529.


03 ಏಪ್ರಿಲ್ 2022

ಸಿಹಿಜೀವಿಯ ಹಬ್ಬದ ದಿನಚರಿ .


 


ಸಿಹಿಜೀವಿಯ ಹಬ್ಬದ ದಿನಚರಿ


ಯುಗಾದಿಯ ಮರುದಿನ ಉಳಿದ ಕರಿಗಡುಬು ತಿಂದು ನೀರು ಎರೆಚುವ ಆಟ, ಉಯ್ಯಾಲೆ ಆಟ, ಮುಂತಾದ ಆಟಗಳನ್ನು ಆಡಿ ನಲಿವ ಜನರು .ಕೆಲವೆಡೆಗಳಲ್ಲಿ ಅಂದು ತಮ್ಮ ಗ್ರಾಮ ದೇವತೆಗಳು ದರ್ಶನ ಪಡೆದು ಹಿರಿಯರ ಕಾಲಿಗೆರಗಿ ಅವರ  ಆಶೀರ್ವಾದ ಪಡೆಯುವರು ಇಂದು ನಾವು ಕುಟುಂಬ ಸಮೇತ  ನಮ್ಮ ಗ್ರಾಮ ದೇವತೆ  ಚೌಡೇಶ್ವರಿ ತಾಯಿಯ ಆಶೀರ್ವಾದ ಪಡೆದೆವು .ನಂತರ ಹೊಳಲ್ಕೆರೆಯ ಇಂದಿರಾಗಾಂಧಿ ಶಾಲೆಯಲ್ಲಿ ಹತ್ತನೆಯ ತರಗತಿಯಲ್ಲಿ ವ್ಯಾಸಾಂಗ ಮಾಡುವ ನಮ್ಮ ಅಣ್ಣನ ಮಗಳಾದ ದೀಪಿಕಾ ಳನ್ನು ಭೇಟಿ ಮಾಡಿ ಮುಂದಿನ ಪರೀಕ್ಷೆಯನ್ನು ಚೆನ್ನಾಗಿ ಬರೆಯಲು ಹಾರೈಸಿ ಬರುವ ಮಾರ್ಗದಲ್ಲಿ ಬಾಲ್ಯದಲ್ಲಿ ನನ್ನ ಬೆಳೆಸಿದ  ಸಾರಂಬಿ ಅತ್ತೆಯನ್ನು ಮಾತನಾಡಿಸಿ,  ಕುಟುಂಬ ಸಮೇತವಾಗಿ ಹೊರಕೆರೆದೇವರ ಪುರದ ಲಕ್ಷ್ಮಿ ನರಸಿಂಹ ಸ್ವಾಮಿಯ ದರ್ಶನ ಪಡೆದು ಸಿಜಿ ಹಳ್ಳಿಗೆ ಹಿಂತಿರುಗಿ ಎಳನೀರು ಕುಡಿದು ಯರಬಳ್ಳಿ ತಲುಪಿ ಮಾರಮ್ಮನ ಆಶೀರ್ವಾದ ಪಡೆದು ನಂತರ ಶಿರಾ ತಾಲ್ಲೂಕಿನ ಭೂತರಾಯ ಸ್ವಾಮಿಯ ಜಾತ್ರೆಯಲ್ಲಿ ಪಾಲ್ಗೊಂಡು ದೇವರಿಗೆ ಕೈಮುಗಿದು ಕುಂಬಾರಹಳ್ಳಿ ತಲುಪಿದೆವು. .ಕೆಲ ಊರುಗಳಲ್ಲಿ ಹೊಸತೊಡಕು ಅಥವಾ ವರ್ಷದ ತೊಡಕು ಕಾರ್ಯಕ್ರಮದ ಅಂಗವಾಗಿ  ನಾನ್ ವೆಜ್ ಆಹಾರ ಸೇವನೆ ಮಾಡುವರು . ಕುಂಬಾರಹಳ್ಳಿಯ ನಮ್ಮ ಮಾವನ ಮಗಳು ಗಿರಿಜಾ ಮತ್ತು ಅವರ ಕುಟುಂಬದ ಆಹ್ವಾನದ ಮೇರೆಗೆ ನಮ್ಮ ಊಟ ಅವರ ಮನೆಯಲ್ಲಿ ಆಯಿತು. ಸಂಜೆ ಎಲ್ಲರ ಚಿತ್ತ ಪಶ್ಚಿಮಾಭಿಮುಖವಾಗಿ ಹರಿಯಿತು.ಸಂಜೆ  ಐದೂವರೆಯಿಂದ ಚಾಂದ್ರಮಾನ ಯುಗಾದಿಯ ಚಂದ್ರನ ದರ್ಶನಕ್ಕೆ ಜನ ಹಾತೊರೆಯುತ್ತಾರೆ. ಕಣ್ಣು ಚುರುಕಾದ ಯಾರಿಗಾದರೂ ಮೊದಲು ಕಂಡರೆ "ಆ... ಅಗ ನೋಡು...ಆ ಕರೆಂಟಿನ ಕಂಬದ ನೀಟಿಗೆ ನೋಡು...." " ನನ್ ಕೈ ಪಕ್ಕ ನೋಡು.... " ಈ ತೆಂಗಿನ ಗಿಡದ ಮೇಲೆ ನೋಡು.....ಎಂದು  ಚಂದ್ರ ಕಾಣದವರಿಗೆ ದರ್ಶನ ಮಾಡಿಸಲು ಹರಸಾಹಸ ಮಾಡುವುದು ಪ್ರತಿಯೊಂದು ಹಳ್ಳಿಯಲ್ಲಿ ಕಂಡು ಬರುವ ಚಿತ್ರಣ. ಚಂದ್ರ ಕಂಡ ತಕ್ಷಣ ಭಕ್ತಿಯಿಂದ ಕೈಮುಗಿದು ಈ ವರ್ಷದ ಹಬ್ಬ ಈಗ ಅಧಿಕೃತವಾಗಿ ಮುಗಿಯಿತು ಎಂದು ಧನ್ಯತಾ ಭಾವ ಹೊಂದುತ್ತಾರೆ ನಮ್ಮ ಹಳ್ಳಿಯ ಜನ. ಚಂದ್ರನ ನೋಡಿ ವರ್ಷದ ಭವಿಷ್ಯ ನುಡಿವ ವಾಡಿಕೆ ಕೆಲ ಗ್ರಾಮಗಳಲ್ಲಿ ಇದೆ. ಸ್ವಲ್ಪ ಬಲಕ್ಕೆ ಚಂದ್ರ ವಾಲಿದರೆ ಒಂದು ರೀತಿ, ಎಡಕ್ಕೆ ವಾಲಿದರೆ ಮತ್ತೊಂದು ರೀತಿಯಲ್ಲಿ ಅರ್ಥಗಳನ್ನು ಬಿಡಿಸಿ ಹೇಳುವರು . ಅಂದ ಹಾಗೆ ನಾನು ಈ ವರ್ಷ ಚಂದ್ರನ ದರ್ಶನ ಮಾಡಿದ್ದು ತಾವರೆಕೆರೆಯಲ್ಲಿ .ಸಂಜೆ ಆರು ಮೂವತ್ತಕ್ಕೆ ಯಾವ ಕಡೆಯೂ ಬಾಗದ ನೇರವಾದ ಚಂದ್ರನ ದರ್ಶನವಾಯಿತು. ಈ ವರ್ಷದಲ್ಲಿ ಎಲ್ಲವೂ ಸಮಾನವಾಗಿರಲಿವೆ, ಒಳಿತಾಗಲಿದೆ ಶುಭಕೃತವಾಗಲಿದೆ ಎಂಬುದು ನನ್ನ ಅನಿಸಿಕೆ ... ಹತ್ತು ಗಂಟೆಗೆ ಕಾರಿನಲ್ಲಿ ಆರಂಭವಾದ ನಮ್ಮ ಹಬ್ಬದ ಪಯಣ ತುಮಕೂರಿಗೆ ಸೇರುವ ಮೂಲಕ ಮುಕ್ತಾಯವಾಯಿತು. ಕಾರಿನ ಕಿಲೋಮೀಟರ್ ಲೆಕ್ಕ ಇಂದು 275 ಕಿಲೋಮೀಟರ್ ಸಂಚಾರ ಮಾಡಿರುವಿರಿ ಎಂದು ಲೆಕ್ಕ ನೀಡಿತು...

ಇಂದು ಭೇಟಿ ಮಾಡಿದ ಜನರ ಅಭಿಮಾನ ,ಹಿರಿಯರ ಆಶೀರ್ವಾದ, ಪಡೆದ ಅನುಭವ, ಸಂಬಂಧಿಕರೊಂದಿಗೆ ಸಂವಾದ ,ಅನುಬಂಧ ಇವುಗಳು ಇನ್ನೂ ಲೆಕ್ಕಕ್ಕೆ ಸಿಗುತ್ತಿಲ್ಲ.....

ಮತ್ತೊಮ್ಮೆ ಸರ್ವರಿಗೂ ಶುಭಕೃತ ಚಾಂದ್ರಮಾನ ಉಗಾದಿಯ ಶುಭಾಶಯಗಳು....


ಸಿಹಿಜೀವಿ

ಸಿ ಜಿ ವೆಂಕಟೇಶ್ವರ