04 ಆಗಸ್ಟ್ 2021

ನಾವೂ ಬಾಹ್ಯಾಕಾಶ ಪ್ರವಾಸ ಮಾಡಬಹುದು


 


ನಾವೂ ಬಾಹ್ಯಾಕಾಶ ಪ್ರವಾಸ ಮಾಡಬಹುದು.


ಒಂದು ಕಾಲದಲ್ಲಿ ಕಾಲ್ನಡಿಗೆಯಲ್ಲಿ ಪ್ರಯಾಣ ಕೈಗೊಳ್ಳುತ್ತಿದ್ದ ಮಾನವ ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆ ಆವಿಷ್ಕಾರಗಳ ಬಲದಿಂದ ಬಸ್ಸು,ರೈಲು, ಕಾರು ,ವಿಮಾನ ,ಹಡಗು ಹೀಗೆ ವಿವಿಧ ಸಾರಿಗೆ ಮಾದ್ಯಮಗಳ ಮೂಲಕ ಪಯಣ ಆರಂಭಿಸಿದ .


ಕೇವಲ ಸಂಶೋಧನಾ ದೃಷ್ಟಿಯಿಂದ ಬಾಹ್ಯಾಕಾಶ ಯಾನ ಮಾಡುತ್ತಿದ್ದ ಸರ್ಕಾರಗಳು ಮಾತ್ರ ಅಷ್ಟು ದುಬಾರಿಯಾದ ಹಣ ತೊಡಗಿಸಿ ಬಾಹ್ಯಾಕಾಶ ಯಾನ ಆರಂಬಿಸಿದವು. ಜೊತೆಗೆ ಹಲವಾರು ಉಪಗ್ರಹಗಳನ್ನು , ಉಡಾವಣೆ ಮಾಡಿದವು . ಮೊದಲ ಬಾರಿಗೆ ರಷ್ಯಾ ಸ್ಪುಟ್ನಿಕ್ ಎಂಬ ಕೃತಕ ಉಪಗ್ರಹ ಉಡಾವಣೆ ಮಾಡಿದಾಗ ಇಡೀ ಜಗತ್ತೇ ಬೆರಗುಗಣ್ಣಿನಿಂದ ನೋಡಿತ್ತು. ಈಗ ಉಪಗ್ರಹಗಳ ಉಡಾವಣೆ ಮಕ್ಕಳಾಟದಷ್ಟೇ ಸಾಮಾನ್ಯವಾಗಿದೆ .


1975 ರಲ್ಲಿ ಆರ್ಯಭಟ ಎಂಬ ಕೃತಕ ಉಪಗ್ರಹ ಉಡಾವಣೆ ಮಾಡಿದ ಭಾರತ ಇಂದು ಒಮ್ಮೆಲೇ ನೂರಕ್ಕೂ ಹೆಚ್ಚು ಉಪಗ್ರಹಗಳ ಉಡಾವಣೆ ಮಾಡುವ ಶಕ್ತಿ ಹೊಂದಿದೆ.


ಸರ್ಕಾರಗಳು ಮಾತ್ರ ಬಾಹ್ಯಾಕಾಶ ಯಾನ ಮಾಡುವ ಸಂಪ್ರದಾಯ ಕಡಿಮೆಯಾಗಿ ಸಂಶೋಧನೆಯಲ್ಲಿ ಖಾಸಗಿಯವರಿಗೆ ಅವಕಾಶವನ್ನು ನೀಡಿದಾಗ ವರ್ಜಿನ್ ಕಂಪನಿಯು ಮೊದಲಿಗೆ  ಯಶಸ್ವಿಯಾಗಿ ಬಾಹ್ಯಾಕಾಶ ಯಾನ ಪೂರೈಸಿ ಬಾಹ್ಯಾಕಾಶ ಪ್ರವಾಸಕ್ಕೆ ಮುನ್ನುಡಿ ಬರೆಯಿತು ಇದರಲ್ಲಿ ಆ ಕಂಪನಿಯು ಸಿ ಇ‌.ಒ . ರಿಚರ್ಡ್ ಬ್ರಾನ್ಸನ್ ಶ್ರಮ ಮೆಚ್ಚುವಂತದು ಜೊತೆಗೆ ಮೊದಲ ಬಾರಿ ತನ್ನ ಕಂಪನಿಯಿಂದ ಆಯೋಜನೆ ಮಾಡಿದ ಬಾಹ್ಯಾಕಾಶ ಪ್ರವಾಸಕ್ಕೆ ಖುದ್ದಾಗಿ ತಾನೆ ಹೋಗಿದ್ದು ಇಲ್ಲಿ ಉಲ್ಲೇಖನೀಯ.


ಇದರಿಂದ ಪ್ರೇರಿತನಾದ ಜೆಪ್ ಬಿಜೋಸ್ ಸಹ ಯಶಸ್ವಿಯಾಗಿ ಒಂದು ಬಾಹ್ಯಾಕಾಶ ಪ್ರವಾಸ ಆಯೋಜನೆ ಮಾಡಿದರು.ಇದು ಬಾಹ್ಯಾಕಾಶ ಪ್ರವಾಸ ಯುಗಕ್ಕೆ ಮುನ್ನುಡಿ. ವಿಶೇಷವೆಂದರೆ ಈ ಪ್ರವಾಸ ದುಬಾರಿ ಮತ್ತು ಸಿರಿವಂತರಿಗೆ ಮಾತ್ರ ಸಾದ್ಯವಾಗುತ್ತಿದೆ ಎಂಬುದು ಜನಸಾಮಾನ್ಯರಿಗೆ ಬೇಸರದ ಸಂಗತಿಯಾಗಿದೆ.


ಹಾಗಾದರೆ ಜನಸಾಮಾನ್ಯರಾದ ನಮಗೆ ಈ ಬಾಹ್ಯಾಕಾಶ ಪ್ರವಾಸ ಗಗನ ಕುಸುಮವೆ? ಖಂಡಿತವಾಗಿಯೂ ಇಲ್ಲ ನಮಗೆ ತಿಳಿದ ಮಟ್ಟಿಗೆ ಯಾವುದೇ ಹೊಸ ಸಂಶೋಧನೆ ಉಪಕರಣ ಬಂದಾಗ ಬೆಲೆ ಸಾಮಾನ್ಯವಾಗಿ ಹೆಚ್ಚಾಗಿ ಕಂಡುಬರುತ್ತದೆ , ಕ್ರಮೇಣವಾಗಿ ಆ ರಂಗಗಳಲ್ಲಿ ಸಂಶೋಧನೆ, ಪೈಪೊಟಿ ಇವುಗಳ ಪರಿಣಾಮವಾಗಿ ಬೆಲೆ ಕಡಿಮೆಯಾಗಿರುವುದು ನಮಗೆ ತಿಳಿದಿದೆ ಇದಕ್ಕೆ ಉದಾಹರಣೆ ಒಂದು ಕಾಲದಲ್ಲಿ ಸಿರಿವಂತರಿಗೆ ಸೀಮಿತವಾದ ವಿಮಾನಯಾನ ಇಂದು ಐನೂರು, ಸಾವಿರ ರೂಗಳ ಟಿಕೆಟ್ ಕೊಂಡು ದೇಶೀಯವಾಗಿ ವಿಮಾನ ಯಾನ ಕೈಗೊಳ್ಳಬಹುದು .ಇದಕ್ಕೆ ನಮ್ಮ ಕ್ಯಾಪ್ಟನ್ ಗೋಪಿನಾಥ್ ರವರಂತಹ ಸಹೃದಯಿ ಉದ್ಯಮಿಗಳ ಶ್ರಮ ಕೂಡಾ ಕಾರಣ ಎಂಬುದು ಸ್ಮರಣೀಯ.


ಇದೇ ಆಶಾವಾದದಿಂದ ನಾವು ಒಂದು ದಿನ ಬಾಹ್ಯಾಕಾಶ ಪ್ರವಾಸ ಮಾಡುವ ಕನಸು ಕಾಣೋಣ , ಕಂಡ ಕನಸನ್ನು ನನಸಾಗಿಸಿಕೊಳ್ಳೋಣ  ಬಾಹ್ಯಾಕಾಶದಲ್ಲಿ ನಿಂತು ಭೂತಾಯಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳೋಣ .





ಸಿಹಿಜೀವಿ

ಸಿ ಜಿ ವೆಂಕಟೇಶ್ವರ



03 ಆಗಸ್ಟ್ 2021

ಮಿಂಚು ಹುಳ .ಹನಿ


 *ಮಿಂಚುಹುಳ*


ಸಿರಿವಂತರ ನೋಡಿ

ಕೊರಗಬೇಡ 

ಕೀಳರಿಮೆ ಪಡಬೇಡ

ನಾನು ಬಡವ

ಅವನು ಶ್ರೀಮಂತ

ದೊಡ್ಡಕುಳ|

ಕಗ್ಗತ್ತಲೆಯಲ್ಲಿ

ಬೆಳಕ ನೀಡುವುದಿಲ್ಲವೆ

ಮಿಂಚು ಹುಳ?||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಆತ್ಮದ ಬೆಳಕು . ಹನಿ


 


ಆತ್ಮದ ಬೆಳಕು


ಭೌತಿಕ ಅಭಿವೃದ್ಧಿಯೇ

ನಿಜವಾದ ಬೆಳವಣಿಗೆ

ಎಂದು ಬೀಗಿದ್ದು ಸಾಕು|

ಇನ್ನಾದರೂ ನಾವು

ಜಾಗೃತಗೊಳಿಸಬೇಕಿದೆ

ಆತ್ಮದ ಬೆಳಕು||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

31 ಜುಲೈ 2021

ಮೊಮ್ಮೊಗಳ ಬಂಧನ


 


ಮೊಮ್ಮಗಳ ಬಂಧನ 


ನಮ್ಮ ಇಚ್ಛೆಗೆ ವಿರುದ್ಧವಾಗಿ ಪ್ರೇಮ ವಿವಾಹವಾದ ಮಗಳು ಹಲವಾರು ಬಾರಿ ತವರು ಮನೆಗೆ ಬಂದಾಗ " ನೀನು ನಮ್ಮ ಪಾಲಿಗೆ ಎಂದೋ ಸತ್ತಿರುವೆ ತೊಲಗು" ಎಂದು ಅವಮಾನ ಮಾಡಿದ್ದರು ಹೆತ್ತವರು.

ಕರುಳಿನ ಸಂಬಂಧ ಕಡಿಯಾಲಾಗದು ಎಂದುಕೊಂಡು ತಾಯಿಯು ಗಂಡನ ಕಣ್ತಪ್ಪಿಸಿ ಮಗಳ ಮನೆಗೆ ಬಂದರು , ಅಂಗಳದಲ್ಲಿ ಆಡುತ್ತಿದ್ದ ಮೊಮ್ಮಗಳ ಕಂಡು ಬರಸೆಳೆದಪ್ಪಿ ಮುದ್ದಾಡಿದರು, ಹೊಸಲಿನ ಬಳಿ ನಿಂತಿದ್ದ ತಾಯಿಯ ಕಣ್ಣಲ್ಲಿ ತನಗರಿವಿಲ್ಲದೇ ನಾಲ್ಕು ಹನಿ ಉದುರಿದವು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


*ಇಂದಿನ ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*31/7/21