05 ಮೇ 2020

ಕಾಪಾಡಿಕೊಳ್ಳಿರಿ ( ವಿಶ್ವ ಅಸ್ತಮಾ ದಿನದ ಪ್ರಯುಕ್ತ ಹನಿ)

*ಕಾಪಾಡಿಕೊಳ್ಳಿರಿ*

(ಇಂದು ವಿಶ್ವ ಅಸ್ತಮಾ ದಿನ)

ಧೂಳು ಗಾಳಿಯ ಸೇವಿಸದಿರಿ
ಧೂಮಲೀಲೆಗಳಿಂದ ದೂರವಿರಿ
ಬಾಳ ಪಯಣದಿ ಶ್ವಾಸಕೋಶಕೆ
ಮಹತ್ವ ನೀಡಿ ಕಾಪಾಡಿಕೊಳ್ಳಿರಿ
ಹೀಗಿದ್ದರೆ ಅಸ್ತಮಾ ನಿಮ್ಮ ಬಳಿ
ಎಂದೆಂದೂ ಸುಳಿಯದು ಕೇಳಿರಿ

*ಸಿ ಜಿ ವೆಂಕಟೇಶ್ವರ*

03 ಮೇ 2020

ಸಿಹಿಜೀವಿಯ ಹತ್ತು ಹನಿಗಳು ( ಇಂದು ವಿಶ್ವ ನಗುವಿನ ದಿನ)


*ಸಿಹಿಜೀವಿಯ ಹತ್ತು ಹನಿಗಳು*

( ಇಂದು ವಿಶ್ವ ನಗುವಿನ ದಿನ)

*೧*

*ಜಗಜಟ್ಟಿ*

ಅವನೊಬ್ಬ
ಅಸಾಧಾರಣ
ಜಗಜಟ್ಟಿ |
ಮರೆತೇಹೋಗಿದ್ದಾನೆ
ಪಟ್ಟುಗಳನ್ನು
ಲಾಕ್ಡೌನ್ ನಲ್ಲಿ
ರೊಟ್ಟಿಗಳನ್ನು
ತಟ್ಟಿ ತಟ್ಟಿ||

*೨*

*ಬೇಡಿಕೆ*

ಮಹಿಳಾಮಣಿಗಳ
ಒಂದೇ ಬೇಡಿಕೆ
ಮುಂದುವರೆಸಲೇಬೇಕು
ಲಾಕ್ಡೌನನ್ನ|
ಕಾರಣ ಇನ್ನೂ ಸರಿಯಾಗಿ
ತೊಳೆಯುತ್ತಿಲ್ಲ
ನಮ್ಮ ಪತಿಯರು
ತಟ್ಟೆ ಲೋಟಗಳನ್ನ||


*೩*

*ಸಾಮಾಜಿಕ ಅಂತರ*

ನನ್ನವಳಿಗೆ ಮುತ್ತಿಕ್ಕಲು
ಅವಳೆಡೆ ಹೋದೆ
ತೋರುತ ಅವಸರ|
ನಿರಾಸೆ ಮಾಡುತ
ನುಡಿದಳು ಇನ್ನೂ
ಮುಗಿದಿಲ್ಲ ಲಾಕ್ಡೌನ್
ಪಾಲಿಸಿ ನೀವು
ಸಾಮಾಜಿಕ ಅಂತರ||

*೪*

*ಕಾಟ*

ಉಚಿತವಾಗಿ ಸಿಗುವ
ನಂದಿನಿ ಗಾಗಿ( ಹಾಲು)
ಎಲ್ಲಡೆ ಕಿತ್ತಾಟ|
ಮನದಲೆ
ಅಂದುಕೊಂಡಳು
ಅಮುಲ್
ನಾನು ದುಬಾರಿ
ಸದ್ಯ ತಪ್ಪಿತು
ಜನರ ಕಾಟ||

*೫*

*ಗಾಯನ*

ನಾನೂ ಶುರು
ಮಾಡೇ ಬಿಟ್ಟೆ
ಪಾಶ್ಚಾತ್ಯ ಗಾಯನ|
ಮನೆ ಮುಂದೆ
ಸದ್ದಾಯಿತು
ಗೆಳೆಯನ ನೋಡಲು
ಬಂದಿತ್ತು ಶ್ವಾನ||

*೬*

*ಬೇಡಿಕೆ*

ಬಾವಿ ಅಳಿಯನಿಗೆ
ಮಾವ ಕೇಳಿದರು
ಏನಾದರೂ ಬೇಡಿಕೆಯಿದ್ದರೆ
ಕೇಳಿ ಸಂಕೋಚ ಇರಬಾರದು|
ಒಂದೇ ಬೇಡಿಕೆ ನನ್ನದು ಮಾವ
ಮುಂದೇನಾದರೂ ಲಾಕ್ಡೌನ್
ಆದರೆ ನಿಮ್ಮ ಮಗಳು
ನನ್ನಿಂದ ಪಾತ್ರೆ ತೊಳೆಸಬಾರದು||

*೭*

*ಮನವಿ*

ಪ್ರಿಯೆ ಬೇಡಿಕೊಳ್ಳುವೆ
ನಿನ್ನಲಿ ಕೈಜೋಡಿಸಿ|
ದಯವಿಟ್ಟು ಹೇಳದಿರು
ಎರಡನೇ ಬಾರಿ ಗುಡಿಸಿ||



*೮*


*ಚುರುಮುರಿ*

ಮಗಳು ಹಠ ಹಿಡಿದಳು
ಬೇಕೇ ಬೇಕು
ಗೋಬಿಮಂಚೂರಿ|
ಅದು ಚೀನಾದವರದು ಅಂದೆ
ಮಗಳಂದಳು
ಬಾಳ ಚೆಂದಾಗಿರುತ್ತೆ
ನಮ್ಮ ಚುರುಮುರಿ||

*೯*

*ಗುಗ್ಗು*

ನೀನಗೆ ಸಂತಸವಾದರೆ
ನಗು
ಬೇಕಾದರೆ ಖುಷಿಯಿಂದ
ಗುನುಗು|
ಮುಖ ಗಂಟುಹಾಕಿಕೊಂಡು
ಅವರಿವರಿಂದ ಅನಿಸಿಕೊಳ್ಳದಿರು
ಗುಗ್ಗು||

*೧೦*

*ಗಾಂಧಿ ಮಾರ್ಗ*

ನನಗೂ ಆಸೆ
ಗಾಂಧಿ ಮಾರ್ಗದಲ್ಲಿ
(ಎಂ ಜಿ ರೋಡ್)
ನಡೆಯಲು|
ಏನು ಮಾಡಲಿ
ನನಗೆ ಬರುವುದಿಲ್ಲ
ಧಮ್ ಹೊಡೆಯಲು
ಮದ್ಯ ಕುಡಿಯಲು||


*ಸಿ ಜಿ ವೆಂಕಟೇಶ್ವರ*
*ತುಮಕೂರು*

ಹರಿತವಾಗಲಿ ಲೇಖನಿ ಇಂದು ವಿಶ್ವ ಪತ್ರಿಕೆಯ ಸ್ವಾತಂತ್ರ್ಯ ದಿನ

*ಹರಿತವಾಗಲಿ ಲೇಖನಿ*

ಹರಿತವಾಗಲಿ
ಲೇಖನಿ
ಒರೆಸಲಿ ಶೋಷಿತರ
ಕಂಬನಿ
ಮಾನವೀಯತೆಯು ತೊರೆಯಾಗಿ ಹರಿಯಲಿ
ಸೇರಿ ಹನಿ ಹನಿ
ಎಲ್ಲೆಡೆ ಅನುರಣಿಸಲಿ
ಸಮಾನತೆಯ ಧ್ವನಿ

*ಸಿ ಜಿ ವೆಂಕಟೇಶ್ವರ*

02 ಮೇ 2020

ಬರುವನೆ ದೀನಬಂಧು (ಕವನ)

*ಬರುವನೇ ದೀನಬಂಧು*

ಮನೆ ಎಲ್ಲಿದೆ ಮಠ ಎಲ್ಲಿದೆ ನಮಗೆ
ಕೊನೆ ಎಲ್ಲಿದೆ ನೆಲೆ ಎಲ್ಲಿದೆ  ಬಾಳಿಗೆ
ಮಾಸಿರುವ ಬಟ್ಟೆಗಳೇ ವಸ್ತ್ರಗಳು
ಕಾಣುತಿಲ್ಲ ಬಟ್ಟೆ ತೋರುವ ಹಸ್ತಗಳು.

ಮುಖ ಮೇಲೆ ಮಾಡಿ ಕುಳಿತ ಅಪ್ಪ
ಮಕ್ಕಳಿಗೆ ಚಿಂತೆ ನಮಗೇಕಿಲ್ಲ ತುಪ್ಪ
ಅಮ್ಮನಿಗೋ ಮಕ್ಕಳ ಭವಿಷ್ಯದ ಚಿಂತೆ
ಒಳಗೊಳಗೆ ದಹಿಸುತಿದೆ ನೋವಿನ ಚಿತೆ.

ಟಾಕುಟೀಕಾಗಿಹರು ಮಹಲಿನವರು
ನಾವೇಕೆ ಇಲ್ಲಹೆವು ಊರಿಲ್ಲದವರು
ಕಾರಲೇ ಹೋಗುವ ಆ ಮನೆಯ ಪಾಪ
ಕಾರಿರುಳಲಿಹೆವು ನಮಗೇಕೆ ಈ ಶಾಪ

ಪಾತ್ರೆ ಪಗಡಗಳು ತುಂಬುವುದು ಎಂದು
ಎಲ್ಲಿಹರು ನಮ್ಮ ಸಲಹುವ ಬಂಧು
ಕನಸುಗಳು ಬತ್ತಿಲ್ಲ ನಮಗೆ ಇಂದು
ಕಾಯುತಿಹೆವು ಬರುವನೇ ದೀನಬಂಧು

*ಸಿ ಜಿ ವೆಂಕಟೇಶ್ವರ*
*ತುಮಕೂರು*


01 ಮೇ 2020

ಸಿಹಿಜೀವಿಯ ಎರಡು ಹನಿಗಳು

ಹನಿಗಳು

*೧*

*ದೃಷ್ಟಿ*

ನೋಡುವ ದೃಷ್ಟಿ
ಸರಿಯಿದ್ದರೆ
ಎಲ್ಲಾ ಚೆಲುವು
ಒಲವಿನಿಂದ ಮಾಡಿದ
ಕಾರ್ಯಕೆ ಸದಾ ಗೆಲುವು.

*೨*

*ಕಾರಣ*

ಒಲವಿನ ಮಾತನಾಡುತ
ಸಲುಗೆಯಲಿ ಕೇಳಿದ
ನನ್ನ ಪ್ರೀತಿಸುವೆಯಾ
ಗೆಲುವಿನ ಸರದಾರ
ನಿನ್ನ ಪ್ರೀತಿಸದಿರಲು
ಕಾರಣ ತಿಳಿಸುವೆಯಾ?

*ಸಿ ಜಿ ವೆಂಕಟೇಶ್ವರ*