10 ಏಪ್ರಿಲ್ 2020

ಮನಸ್ಸು ಮಾಡು (ಭಾವಗೀತೆ)

*ಮನಸ್ಸು ಮಾಡು*

ಚಿಂತಿಪೆ ಏಕೆ ಓ ಗೆಳೆಯ
ಬೆಳಗಬೇಕು ನೀ ಧರೆಯ
ಏಳು ಎದ್ದೇಳು ನಿಲ್ಲದಿರು
ಕೈಲಾಗದವನೆಂದು ಕೊರಗದಿರು.

ಮನಸ್ಸು ಮಾಡು ನೀ ಗೆಳೆಯ
ತೆಗೆದಿಡು ಮನದ ಕೊಳೆಯ
ನಿನ್ನಲಿದೆ ಅಪಾರ ಶಕುತಿ
ಕಾಪಾಡುವಳು ಆ ಪಾರ್ವತಿ.

ಹಿಂದಡಿ‌ ಇಡದಿರು‌ ಎಂದು
ನುಗ್ಗುತಿರು ಜಗ ನಿನ್ನದೆಂದು
ಧೈರ್ಯವಂತರಿಗಿದೆ ದಾರಿ
ಶುರು ಮಾಡು ಮುಟ್ಟುವೆ ಗುರಿ.

ನೀನಾಗು ಒಂದು ಜೀವನದಿ
ಸಮರಸವಿರಲಿ ಜೀವನದಿ
ಅಶಕ್ತರ ಸಹಾಯಕೆ ಸನಿಹವಾಗು
ಮೂಕಪ್ರಾಣಿಗಳ ಸಂರಕ್ಷಕನಾಗು.

*ಸಿ ಜಿ ವೆಂಕಟೇಶ್ವರ*
*ತುಮಕೂರು*






09 ಏಪ್ರಿಲ್ 2020

ಬದುಕಬೇಕು (ಕವನ)

*ಬದುಕಬೇಕು*

ಬದುಕಬೇಕು ನೀನು ಬದುಕಬೇಕು
ಇತರರಿಗೆ ದಾರಿ ದೀಪವಾಗಬೇಕು
ಪ್ರತಿಕ್ಷಣವು ಜೀವಿಸುತಲಿರಬೇಕು
ಶಿವಮೆಚ್ಚಿ ಅಹುದಹುದು ಎನ್ನಬೇಕು.

ಅವರಿವರ ತೆಗೆಳಿಕೆಗೆ ಕಿವಿಗೊಡಬೇಡ
ಸರಿದಾರಿಯಲಿ ನಡೆವುದ ಮರೆಯಬೇಡ
ಅನವರತ ನಡೆ ಗುರಿ ಮುಟ್ಟುವೆ ನೋಡ
ನೀ ಹಾಡು ನಿನ್ನೆದೆಯ ಗೆಲುವ ಹಾಡ.

ಜೀವನವಿದು ಮೂರು ದಿನದ ಬಾಳು
ಇರುವುದು ಬಾಳಲ್ಲಿ  ಏಳು ಬೀಳು
ನಿನ್ನಂತೆ ಇತರರ ಬಾಳು ಕೇಳು
ಸಕಲ ಚರಾಚರದೊಂದಿಗೆ ಬಾಳು.

ಸೋತೆನೆಂದು ಮೂಲೆಯಲಿ ಕೂರದಿರು
ಗೆಲುವು ಸಿಗದು‌ ಎಂದು ಕೊರಗದಿರು
ನಿನ್ನ ದಾರಿಗೆ ನೀನಾಗು‌ ಗುರು
ಸನ್ಮಾನಿಸುವರು ಗೆದ್ದಾಗ ಜನರು.

ಕಾಯಕದಿ ಕೈಲಾಸವನು ಕಂಡರೆ
ಜನರಲ್ಲಿ‌ ಜನಾರ್ದನನು ಕಂಡರೆ
ಹಂಚಿ‌ ತಿನ್ನುವ ಗುಣವ ನೀ ಕಲಿತರೆ
ನಂದನವಾಗುವುದು ಈ ಧರೆ.

*ಸಿ ಜಿ‌ ವೆಂಕಟೇಶ್ವರ*
*ತುಮಕೂರು*

08 ಏಪ್ರಿಲ್ 2020

ಮನವಿ(ಹನುಮ ಜಯಂತಿಯ ಶುಭಾಶಯಗಳು)

ಮನವಿ

(ಇಂದು ಹನುಮ ಜಯಂತಿ)

ಇಂದು ನಿಮ್ಮ ‌ಜನಮದಿನ
ಮಾರುತಿ ತುಂಬಿಹನು ನನ್ನ ಮ‌ನ
ಕೊಡದಿದ್ದರೂ ಸರಿ ಧನ
ಹರಸು‌ ನೀಡಿ ಒಳ್ಳೆಯ ಗುಣ
ಆಗಲಿ ನನ್ನ ಜನ್ಮ ಪಾವನ

*ಸಿ ಜಿ ವೆಂಕಟೇಶ್ವರ*
*ತುಮಕೂರು*

07 ಏಪ್ರಿಲ್ 2020

ಸಿಹಿಜೀವಿಯ ಹನಿಗಳು ( ವಿಶ್ವ ಆರೋಗ್ಯ ದಿನದ ನೆನಪಿಗಾಗಿ)


*ಸಿಹಿಜೀವಿಯ ಹನಿಗಳು*

*೧*

*ಪರಲೋಕ ರವಾನೆ*

ಅಶುದ್ಧ ಗಾಳಿಯ ಸೇವನೆ 
ದೇಹವಾಗಿದೆ ರೋಗದ ಮನೆ
ಕಾಲನ ಮಹಾಚಿತಾವಣೆ 
ಶೀಘ್ರ ಪರಲೋಕಕೆ ರವಾನೆ 

*೨*

*ಜೀವಿಸು*

ಕಾಲ ಕಾಲಕೆ ದೇಹವ ದಂಡಿಸು
ಒಳ್ಳೆಯ ಗಾಳಿಯ ಸೇವಿಸು
ಒಳ್ಳೆಯ ಸ್ನೇಹಲೋಕ ಗಳಿಸು
ಆರೋಗ್ಯದಿಂದ ಜೀವಿಸು 

*೩*

*ಜೀವನ*

ಲೋಕದಲ್ಲಿರುವ ಬಹುಪಾಲು
ಗಾಳಿಗೋಪುರದಲಿ ವಿಹರಿಸುವ ಜನ
ಕಾಲನು ಬಂದು ಈ ದೇಹ ನನ್ನದು
ಎಂದಾಗ ಅರಿವರು ಇಷ್ಟೆ ಜೀವನ 

*ಸಿ .ಜಿ ವೆಂಕಟೇಶ್ವರ*
*ತುಮಕೂರು*


ತಣಿಸು ಬಾರೆ ( ಭಾವಗೀತೆ)

*ತಣಿಸು ಬಾರೆ*

ಎಂದು ಆಗಮಿಸುವೆ ಮನದ
ರತಿ ಈ ಮನ್ಮಥನ ಸೇರಲು
ಮುನ್ನ ನೀಡಿದ ಮಧುರ
ವಚನವನು ಉಳಿಸಲು

ದಿನ ಕಳೆದು ಪಕ್ಷ,ಮಾಸಗಳು
ಉರುಳಿದರೂ ಸುಳಿವಿಲ್ಲ
ನಿನ್ನಧರದ ಮಧುಪಾನದ
ಮಧುರ ಮಹೋತ್ಸವ ಮರೆತಿಲ್ಲ

ಬೆಳಗು ಬೈಗೆಂಬ ಪರಿವಿಲ್ಲ
ನಿನ್ನ ಆಗಮನಕೆ ಕಾದಿಹೆನು
ಜೇನಹೊಳೆಯಲಿ ತೇಲಿದ
ಮಾಸದ ನೆನಪಲಿ ಬದುಕಿಹೆನು

ನಿನ್ನ ಸಂಗವು ಪರಮಂಗಲ
ನೀಡು ಪ್ರೇಮದಾಲಿಂಗನ
ನೀನೇ ಅಮೃತ ನನ್ನ ಬಾಳಿಗೆ
ತಣಿಸು ಬಾರೆ ಮೈ ಮನ

*ಸಿ ಜಿ ವೆಂಕಟೇಶ್ವರ*
*ತುಮಕೂರು*