20 ನವೆಂಬರ್ 2019

ಗಜಲ್ ೬೦ (ಸಾಲುವುದಿಲ್ಲ)


*ಗಜಲ್*

ಭೂರಮೆಯ ಸೊಬಗು ನೋಡಲು ಕಣ್ಣುಗಳು ಸಾಲವುದಿಲ್ಲ
ಪ್ರಕೃತಿ ಸಿರಿಯ ಬಣ್ಣಿಸಲು ಪದಗಳು ಸಾಲುವುದಿಲ್ಲ.

ಪರಿಸರದಲಿದೆ ಸಂಗೀತ ಹಕ್ಕಿಗಳ ಕಲರವ ದುಂಬಿಗಳ ಝೇಂಕಾರ .
ಸಿಡಿಲು ಮಳೆ ಗುಡುಗಿನಲೂ ಸಾಮಗಾನ ಕೇಳಲು ಕಿವಿಗಳು ಸಾಲುವುದಿಲ್ಲ.


ತರುಲತೆಗಳು ಖಗಮೃಗಗಳು ಕಾನನದ ಸೊಬಗಿನ ಮೂಲ
ನದನದಿ ಝರಿ ತೊರೆಗಳ ಅಂದ ಹೊಗಳಲು ರೂಪಕಗಳು ಸಾಲುವುದಿಲ್ಲ

ಮಲ್ಲೆ ಮಲ್ಲಿಗೆ ಜಾಜಿ ಕೇದಗೆ ಸಂಪಿಗೆಯ ಸುವಾಸನೆ ಬಲು ಚೆಂದ
ವರ್ಷಕಾಲದ ಮಣ್ಣವಾಸನೆಯ ಕಂಪು ಹೊಗಳಲು ಕವನಗಳು ಸಾಲುವುದಿಲ್ಲ.

ಈ ಜಗವು ಆನಂದಮಯವಾಗಲು ಸಿಹಿಜೀವಿಗಳ ಕೊಡುಗೆ ಅಪಾರ
ಪರಿಸರವ  ಬಳಸಿ ಉಳಿಸಿ ಬೆಳೆಸಲು ಸಣ್ಣ ಪ್ರಯತ್ನಗಳು ಸಾಲುವುದಿಲ್ಲ.

*ಸಿ ಜಿ ವೆಂಕಟೇಶ್ವರ*

15 ನವೆಂಬರ್ 2019

ಗಜಲ್ ೫೯(ಕನಕದಾಸರು)

*ಗಜಲ್59*

*ಕನಕದಾಸರ  ಜಯಂತಿಯ‌ ಶುಭಾಶಯಗಳು*

ಧನಕನಕ ತೃಣಸಮಾನರೆಂದು ತೋರಿಸಿದವರು ಕನಕದಾಸರು.
ಕೊನೆತನಕ ಹರಿಚರಣ ಬಿಡಬೇಡವೆಂದು ಬೋಧಿಸಿದವರು ಕನಕದಾಸರು.


ಅಹಂ ನಿಂದ ಒಡೆಯುತ್ತಿವೆ ಮನೆ ಮನಗಳು .
ನಾನು ಹೋದರೆ ಸ್ವರ್ಗಸುಖವೆಂಬ ಸತ್ಯ  ದರ್ಶನ ಮಾಡಿಸಿದವರು ಕನಕದಾಸರು.

ಮಂದಿರ ಮಸೀದಿಗಳಲಿಮಾತ್ರ ಭಗವಂತನಿರುವ ಎಂಬ ಮೂಢರು
ನಿಷ್ಕಲ್ಮಷ  ನಿಜಭಕ್ತಿಯಿಂದ ಕೃಷ್ಣನ ದರ್ಶನ ಪಡೆದವರು ಕನಕದಾಸರು.

ಪಾಶ್ಚಿಮಾತ್ಯರ ಆಹಾರಪದ್ದತಿಯ ಅನುಕರಿಸಿ ಕಾಯ ರೋಗಗಳ ಗೂಡು.
ರಾಮಧಾನ್ಯದ ಮಹತ್ವವನು ಲೋಕಕೆ
ಎತ್ತಿತೋರಿದವರು ಕನಕದಾಸರು.


ಸಂಕಟ ಬಂದಾಗ ದೇವರ ನೆನವವರು ಎಲ್ಲೆಡೆ.
ಸದಾ ಹರಿಭಕ್ತರಾಗಿ ವೆಂಕಟೇಶ್ವರನ ಭಜಿಸಿದವರು ಕನಕದಾಸರು.

*ಸಿ.ಜಿ ವೆಂಕಟೇಶ್ವರ*

01 ನವೆಂಬರ್ 2019

ಎಂದೆಂದೂ (ಹನಿ)

*ಎಂದೆಂದೂ*

ಇಂದು ನವೆಂಬರ್ ಒಂದು
ಕನ್ನಡ ಬಳಸಿ ಬೆಳೆಸಿ ಉಳಿಸೋಣ
ಇಂದು ,ಮುಂದು ಎಂದೆಂದೂ.

ಕನ್ನಡ ರಾಜ್ಯೋತ್ಸವದ ಶುಭಾಶಯಗಳು💐💐

*ಸಿ ಜಿ ವೆಂಕಟೇಶ್ವರ*

31 ಅಕ್ಟೋಬರ್ 2019

ವಾಲ್ಮೀಕಿ ಹನಿಗವನ

*ವಾಲ್ಮೀಕಿ*

ನಾನು‌ದುರ್ಬಲ
ನನ್ನಿಂದ ಆಗದು
ನನಗೇನೂ ಗೊತ್ತಿಲ್ಲ
ಎಂಬ ಕೀಳರಿಮೆ ಬಿಟ್ಟಾಕಿ.
ಶ್ರದ್ಧೆ, ಸ್ಪಷ್ಟವಾದ ಗುರಿ
 ಛಲ,ಮುಂತಾದ ಸದ್ಗುಣ
ರೂಢಿಸಿಕೊಂಡರೆ ನೀವೂ
ಆಗಬಹುದು ವಾಲ್ಮೀಕಿ.

*ವಾಲ್ಮೀಕಿ ಜಯಂತಿಯ ಶುಭಾಶಯಗಳು*

*ಸಿ ಜಿ ವೆಂಕಟೇಶ್ವರ*

ನಂದನ‌ವನ ಮಾಡೋಣ(ಕವನ)

*ನಂದನವನ ಮಾಡೋಣ*

ಭುವಿಯ ಒಡಲಿಗೆ ರಸಾಯನಿಕ
ಪದಾರ್ಥಗಳ ತುಂಬಿ
ಕಳಪೆ ಬೀಜ‌ಗೊಬ್ಬರ ನಂಬಿ
ಬಹುರಾಷ್ಟ್ರೀಯ ಕಂಪನಿಗಳ
ಜೇಬುಗಳ ತುಂಬಿ
ಭೂತಾಯಿಗೆ ನಂಜನಿಟ್ಟಿರುವೆವು.

ಜಲಮೂಲಗಳಿಗೆ ಕಾರ್ಖಾನೆಗಳ
ಮಲಿನ ನೀರನರಿಸಿ
ಶುದ್ದಜಲವ ಕುಲಗೆಡಿಸಿ
ಜಲಚರಗಳ ಕೊಲ್ಲಿಸಿ
ಗಾಂಗಾಮಾತೆಗೆ ದ್ರೋಹ ಮಾಡಿರುವೆವು

ಶುದ್ದಗಾಳಿಗೆ ಆ ಆಕ್ಸೈಡ್
ಈ ಆಕ್ಸೈಡ್ ಸೇರಿಸಿ
ವಾಯುಮಾಲಿನ್ಯವ ಏರಿಸಿ
ನಂಜುಕಾರಕಗಳ ಬಳಸಿ
ವಿಷಗಾಳಿಯ ಸೇವಿಸಿ
ಸಕಲಜೀವಿಗಳ ರೋಗಗ್ರಸ್ತ ಮಾಡಿಹೆವು.

ಮೂಲತಃ ಪ್ರಾಣಿಯಾದ ಮಾನವ
ವಿಷವುಂಡು ಆಗಿರುವ ದಾನವ
ತಾಯ ಎದೆಹಾಲು ಹಾಲಾಹಲ
ಎಲ್ಲೆಡೆಯೂ ಕೋಲಾಹಲ
ನಮ್ಮಳಿವಿಗೆ ನಾವೇ ತಪ್ಪೆಸಗುತಿಹೆವು.

ನೆಲ ಜಲ ಗಾಳಿ ಮನಗಳೆಲ್ಲ
ಮಲಿನವಾಗಿ ಒದ್ದಾಡುವಾಗ
ಆಶಾವಾದವೊಂದು ಗೋಚರಿಸುತಿಹುದು
ಭಗವಂತನ ಸಾಮೀಪ್ಯವಿದ್ಸರೆ
ಅಮೃತ ಸಿಗುವುದು.
ಒಳಿತು ಮಾಡಲು ಮನ ಸಿದ್ದವಾಗುವುದು
ಇಂದೇ ಭಗವಂತನ ನೆನೆದು
ಅಮೃತ ಪುತ್ರರಾಗೋಣ
ಜಗವ ನಂದನವನ
ಮಾಡೋಣ.

*ಸಿ ಜಿ ವೆಂಕಟೇಶ್ವರ*