04 ಮಾರ್ಚ್ 2019

ನೀರು (ಕವನ)

       *ನೀರು*

ಎಲ್ಲೆಡೆ ಘೋಷಣೆ
ಮನೆಗೊಂದು ಮರ
ಊರಿಗೊಂದು ವನ.
ಬರೀ ಘೋಷಣೆ ಅಲ್ಲ
ಇದು ಜಾರಿಗೆ ಬಂದಿದೆ
ಕಾಡಿನ ಒಂದು ಮರ
ಕಡಿದರೆ ಮೂರು ನೆಟ್ಟರು.

ಮರಳು ಗಣಿಗಾರಿಕೆ
ಸಂಪೂರ್ಣ ಸ್ತಬ್ಧ
ಸಕಾಲಕ್ಕೆ ಮಳೆ ಬಂದು
ಕೆರೆ ಕಟ್ಟೆ ತುಂಬಿವೆ
ಒರತೆ ತೋಡಿದರೆ
ಕುಡಿವ ನೀರು ಲಬ್ಯ

ಸಸ್ಯ ಪ್ರಾಣಿ ಸಂಕುಲಗಳು
ಸಮೃದ್ಧಿಯಿಂದ ಜೀವಿಸುತ್ತಿವೆ
ಜೀವಿಗಳಿಗೆ ಜಲ ಅಪಾರವಾಗಿದೆ
ಅಕ್ಷರಶಃ ಜೀವಜಲ

ರಾಜ್ಯಗಳು ನೀರಿಗಾಗಿ
ಕಚ್ಚಾಡುತ್ತಿಲ್ಲ ಬಡಿದಾಡುತ್ತಿಲ್ಲ
ಎಲ್ಲರೂ ಸಮರಸದಿಂದ ಸಹಬಾಳ್ವೆ
ಮಾಡುತ್ತಿದ್ದಾರೆ .
ಎಷ್ಟೋ ದೇಶಗಳ ಜಲವಿವಾದಗಳು
ಬಗೆಹರಿದಿವೆ.
ವಿಶ್ವ ಶಾಂತಿಗೆ ಮುನ್ನುಡಿ
ಬರೆದಿದೆ.
ಇದರ ಫಲಶೃತಿ ಜಗದಾನಂದ .

ರೀ ಕುಡಿಯಾಕೆ ನೀರಿಲ್ಲ
ಎದ್ದೇಳ್ರಿ ಎಂದು ನನ್ನವಳು
ಕೂಗಿದಾಗ ಎದ್ದು ಖಾಲಿ
ಬಿಂದಿಗೆ ತೆಗೆದುಕೊಂಡು
ಮೂರು ಕಿಲೋಮೀಟರ್
ದೂರಕ್ಕೆ ಹೋಗಿ
ನೀರು ತರಲು ಅಣಿಯಾದೆ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*




ಶಿವ ಶಿವ ಎನ್ನೋಣ (ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು)

   *ಶಿವ ಶಿವ ಎನ್ನೋಣ*

ಶಿವ ಶಿವ ಎನ್ನೋಣ
ಹರ ಹರ ಎನ್ನೋಣ

ಅಣ್ಣಾಮಲೆಯಲಿ ನೆಲೆಸಿರುವ
ಅರುಣಾಚಲೇಶ್ವರಗೆ
ಶಿವ ಶಿವ ಎನ್ನೋಣ

ಗೋಕರ್ಣದಲಿ‌ ಹರಸುತಿಹ
ಗೋಕರ್ಣೇಶ್ವರಗೆ
ಹರ ಹರ ಎನ್ನೋಣ

ಧರ್ಮಸ್ಥಳದಲಿ ನೆಲೆಸಿರುವ
ಮಜುನಾಥ ಸ್ವಾಮಿಗೆ
ಶಿವ ಶಿವ ಎನ್ನೋಣ

ವಾರಣಾಸಿಯಲಿ ನಿಂತಿರುವ
ಕಾಶಿವಿಶ್ವೇಶ್ವರನಿಗೆ
ಹರ ಹರ ಎನ್ನೋಣ

ಶ್ರೀಶೈಲದ ನೆಲೆಸಿರುವ
ಮಲ್ಲಿನಾಥ ಸ್ವಾಮಿಗೆ
ಶಿವ ಶಿವ ಎನ್ನೋಣ

ಕಠ್ಮಂಡುವಲಿ‌ ನಿಂತಿರುವ
ಪಶುಪತಿನಾಥಗೆ
ಹರ ಹರ ಎನ್ನೋಣ



*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*











21 ಫೆಬ್ರವರಿ 2019

ಅವ್ವ (ವಿಶ್ವ ಮಾತೃಭಾಷೆ ದಿನದ ಪ್ರಯುಕ್ತ)

           *ಅವ್ವ*

ಎನಿತು ಇನಿದು
ನಮ್ಮ ಕನ್ನಡ.
ವ್ಯಾಮೋಹವೇಕೆ
ಅನ್ಯ ಭಾಷೆಗಳ ಮೇಲೆ?
ನಿಲ್ಲಸಿ ಸಾಕು ಕರೆದದ್ದು
ಮಮ್ಮಿ .
ಮಾಡಿದ್ದು ಸಾಕು
ಅಮ್ಮನನ್ನು ದೆವ್ಚ.
ಇನ್ನಾದರೂ
ಕರೆಯೋಣ ಪ್ರೀತಿಯಿಂದ
 ಅವ್ವ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

*ಇಂದು ವಿಶ್ವ ಮಾತೃಭಾಷೆ* ದಿನ ಅದರ ನೆನಪಲ್ಲಿ

15 ಫೆಬ್ರವರಿ 2019

ಜೈ ಭಾರತಾಂಭೆ ( ಹುತಾತ್ಮ ಯೋಧರಿಗೆ ನಮನ)

*ಜೈ ಭಾರತಾಂಬೆ*

ನರಿಬುದ್ದಿಯ ಉಗ್ರರೇ
ನಾಚಿಕೆಯಿಲ್ಲದ ನೀವು
ಮನುಷ್ಯರೇ?

ಎದುರು ನಿಲ್ಲಲು
ಅದುರುವ ನೀವು
ಬೆನ್ನಿಗೆ ಚೂರಿ ಹಾಕುವಿರಾ?
ಭಾರತೀಯರ ಕಿಚ್ಚು
ಜ್ವಾಲೆಯಾಗಿ ಉರಿದರೆ
ನೀವು ಉಳಿಯುವಿರಾ?

ಸಮರದಲಿ ಸೋತು
ಸುಣ್ಣವಾದ ಪಾಪಿಸ್ತಾನದ
ಪಾಪಿಗಳೇ, ರಕ್ತಪಿಪಾಸುಗಳೇ
ನಮ್ಮನು ಕೆಣಕಿದ್ದೀರಿ
ಮುಂದೆ ವಿಶ್ವ ಭೂಪಟದಲಿ
ನಿಮ್ಮ ದೇಶವನ್ನು ಹುಡುಕುತ್ತೀರಿ

ನಮ್ಮ ಯೋಧರ ಪ್ರಾಣಹರಣಮಾಡಿದ
ನಿಮ್ಮನು ಸುಮ್ಮನೆ ಬಿಡೆವು
ಶಾಂತವಾಗಿರುವುದು
ನಮ್ಮ ದೌರ್ಬಲ್ಯವಲ್ಲ
ಹುಲಿಯನ್ನು ಕೆಣಕಿದ
ನಿಮಗೆ ಉಳಿಗಾಲವಿಲ್ಲ
ದಿಟ್ಡತನದಿ ನಿಮ್ಮ ಹುಟ್ಟಡಗಿಸಿ
ಘರ್ಜಿಸುವೆವು ಜೈ ಭಾರತಾಂಬೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*






14 ಫೆಬ್ರವರಿ 2019

ಗಜ್ಹಲ್ ೫೨ (ನೆಮ್ಮದಿ)

*ಗಜ್ಹಲ್*


ಹೆಣ್ಣು ಹೊನ್ನು ಮಣ್ಣಿದೆ ಸಿಗಬಹುದೆ ನೆಮ್ಮದಿ
ಮಣ್ಣಾಗುವ ಮುನ್ನವಾದರೂ ಲಭಿಸುವುದೆ ನೆಮ್ಮದಿ

ಏಸು ದಿನ ನೀರಲಿದ್ದರೆ ಮೆದುವಾಗುವುದೆ ಕಲ್ಲು
ನದಿಗಳಲಿ ತೀರ್ಥ ಸ್ನಾನ ಮಾಡಿದರೆ ದೊರೆವುದೆ ನೆಮ್ಮದಿ

ಮನಃಪೂರ್ವಕವಾಗಿ ದಾನ ಧರ್ಮ ಮಾಡಲಿಲ್ಲ
ತೋರಿಕೆಯ ಸಹಾಯಹಸ್ತ ಚಾಚಿದರೆ ಸಿಗುವುದೆ ನೆಮ್ಮದಿ

ಮಾಡುವುದು ಅನಾಚಾರ ಮನೆಮುಂದೆ ವೃಂದಾವನ
ಒಳಗೊಂದು ಹೊರಗೊಂದು ಇದ್ದರೆ ಕಾಣಬಹುದೆ ನೆಮ್ಮದಿ

ಸಿಹಿಯೇ ಬೇಕು ಜೀವನದಿ ಸಿಹಿಜೀವಿಗೆ
ಕಹಿಯ ದಾರಿ ಸವೆಸದೇ ಪಡೆಯಬಹುದೆ ನೆಮ್ಮದಿ

*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*