22 ಮಾರ್ಚ್ 2018

ಗಜ಼ಲ್ ೩೨ (ಕೊನೆಯಿಲ್ಲ)


*ಗಜ಼ಲ್ ೩೨*
ಬ್ರಹ್ಮಾಂಡವನೆ ಕೊಟ್ಟರೂ ಆಸೆಗಳ ಕೂಪಕೆ ಕೊನೆಯಿಲ್ಲ
ಬ್ರಹ್ಮ ಬಂದರೂ ಮಾನವರ ಕಚ್ಚಾಟಕೆ ಕೊನೆಯಿಲ್ಲ

ಸೂರ್ಯ ಚಂದ್ರ ತಾರೆಗಳ ಅನಂತ ವಿಶ್ವ ನಮ್ಮ ಅನುಕೂಲಕಿವೆ
ಅಪರಿಮಿತವಾದ ಬೇಡಿಕೆಗಳ ಮೋಹಕೆ ಕೊನೆಯಿಲ್ಲ

ನಾನು ನನ್ನದು ನನ್ನಿಂದಲೇ ಎಂದು ಅಹಂಕಾರದಿ ಮೆರೆವರು
ಸ್ವಾರ್ಥ ಲೋಭ  ಮೋಹ ಮದಗಳ ಜಾಲಕೆ ಕೊನೆಯಿಲ್ಲ

ನಿಸರ್ಗಕೆ ವಿರುದ್ದವಾದ ಜೀವನ ಆಚರಣೆಗಳು ಅವ್ಯಾಹತ
ಭೂಕಂಪ ಸುನಾಮಿ ಜ್ವಾಲಾಮುಖಿ ಪ್ರಕೃತಿ ವಿನಾಶಕೆ ಕೊನೆಯಿಲ್ಲ

ಮತೀಯತೆ ಪ್ರಾಂತೀಯತೆಯ ಬಡಿದಾಟ ನಿಲ್ಲುತ್ತಿಲ್ಲ
ಸೀಜೀವಿಯ ವದುಧೈವಕುಟುಂಬಕಂ ಆಶಯಕೆ ಕೊನೆಯಿಲ್ಲ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

21 ಮಾರ್ಚ್ 2018

ದಯವಿಟ್ಟು ಓಟು ಕೊಡಿ (ಕವನ) ಇಂದು ವಿಶ್ವ ಕವನ ದಿನ ಅದರ ನೆನಪಿಗಾಗಿ ಈ ಕವನ

ದಯವಿಟ್ಟು ಓಟು ಕೊಡಿ

ಸದನದಲಿ ನಿದ್ದೆ ಮಾಡುವೆವು
ಎಚ್ಚರಾದಾಗ ಗದ್ದಲವೆಬ್ಬಿಸುವೆವು
ಮಸೂದೆಗಳ ಹರಿದು ಹಾಕುವೆವು
ದಯವಿಟ್ಟು ನಮಗೆ ಓಟು ಕೊಡಿ

ನಿಮ್ಮ ಚಿಂತೆ ಮಾಡುವುದಿಲ್ಲ
ನಮ್ಮ ಚಿಂತೆ ನಿಮಗೆ ಬೇಡ
ನಾವಿರುವುದೇ ನಮಗಾಗಿ
ದಯವಿಟ್ಟು ನಮಗೆ ಓಟು ಕೊಡಿ

ನಿಮ್ಮ ಒಗ್ಗಟ್ಟು ನಾವು ಸಹಿಸುವುದಿಲ್ಲ.
ಒಡೆದು ಆಳುವುದ  ನಾವು ಬಲ್ಲೆವಲ್ಲ
ನೀವು ಬಡಿದಾಡಿದರೆ ಲಾಭ ನಮಗೆ
ದಯವಿಟ್ಟು ನಮಗೆ ಓಟು ಕೊಡಿ

ಗೆದ್ದ ಮೇಲೆ ನಿಮ್ಮ ಸುದ್ದಿಗೆ ಬರುವುದಿಲ್ಲ
ಗದ್ದುಗೆಯನು ಬಿಡುವುದೇ ಇಲ್ಲ
ದೋಚುವ ಕಾಯಕ ಮರೆಯುವುದಿಲ್ಲ
ದಯವಿಟ್ಟು ನಮಗೆ ಓಟು ಕೊಡಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

20 ಮಾರ್ಚ್ 2018

ಗಜ಼ಲ್ ೩೧ (ಕಳೆದುಕೊಂಡೆ ) ( ನನ್ನ ಬ್ಲಾಗ್ ನ ಮುನ್ನೂರನೇ300 ಪೋಸ್ಟ್ ಸಂಭ್ರಮ )


*ಗಜ಼ಲ್೩೧*

ಬನ್ನಪಡುತ ಈ ಕ್ಷುದ್ರ ಜೀವನದಿ ಸಂತಸವ ಕಳೆದುಕೊಂಡೆ
ಬೆಳೆದು ಬಲಿತು ದೊಡ್ಡವನಾಗಿ ಬಾಲ್ಯವ  ಕಳೆದುಕೊಂಡೆ

ಮತ್ಸರ ಸುಲಿಗೆ  ಕಾಲೆಳವ ಗುಣ ಸಾಮಾನ್ಯ ಎಲ್ಲೆಡೆ
ಎಲ್ಲ ಒಂದೇ  ಎನುವ ಮುಗ್ದ ಮಗುವಿನ ಮನವ ಕಳೆದುಕೊಂಡೆ

ಆಟಗಳೆಂದರೆ ಜೂಜು ಮೋಜು ಮೋಸ ವಂಚನೆಗಳ ಜಾಲ
ಗೆಳೆಯರ ಜೊತೆಗೂಡಿದ ಆಟ ಪಾಟವ ಕಳೆದುಕೊಂಡೆ

ಬಾಯಲ್ಲಿ ಬೆಣ್ಣೆ ಬಗಲಲ್ಲಿ ದೊಣ್ಣೆಯ ಜನರ ಜಗವಿದು
ನುಡಿದಂತೆ ನಡೆದ ಒಳ್ಳೆಯ ಮಾನವಕುಲವ  ಕಳೆದುಕೊಂಡೆ

ಐಶ್ವರ್ಯ ಸೌಂದರ್ಯಕೆ ಪ್ರಥಮ ಪ್ರಾಶಸ್ತ್ಯ ಎಲ್ಲೆಡೆ
ಸೀಜೀವಿಯ ಮುತ್ತಿನಂತಹ ಕಾಲವ ಕಳೆದುಕೊಂಡೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

19 ಮಾರ್ಚ್ 2018

ಸಂಕರಣ (ಹನಿಗವನ)

ಹನಿಗವನ
*ಸಂಕರಣ*

ಬಣ್ಣದ ಹಣ್ಣುಗಳು ತೋರಣ
ಇದಕೆ ಕಾರಣ ತಳಿ   ಸಂಕರಣ
ನನ್ನ ಬೆಳೆ ನೋಡಲು ಸೊಗಸು
ಬೇಕಿದ್ದರೆ ನೀ ಈಗಲೆ  ಖರೀದಿಸು
ಸಮಯವೆ ನನ್ನ ದೇವರು ನೋಡು
ಬೆಳೆದಿಹ ಬೆಳೆಗಳ ನೀ ಕಾಪಾಡು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

*ಜೀವನ ಬಹಳ ಬೇಜಾರು ಅಲ್ಲ ಸಂಭ್ರಮ*(ಸಂಗ್ರಹ ಲೇಖನ)

*ಜೀವನ ಬಹಳ ಬೇಜಾರು ಅಲ್ಲ ಸಂಭ್ರಮ*(ಸಂಗ್ರಹ ಲೇಖನ)

ಜೀವನ “ಬಹಳ ಬೇಜಾರು” ಅನ್ನುವವರು ಬುದ್ಧನ ಈ 19 ವಿಷಯಗಳನ್ನು ತಲೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು .

1. ಒಳ್ಳೆಯವರಾಗಿರಿ ಆದರೆ ಅದನ್ನು ಸಾಬೀತುಪಡಿಸವಲ್ಲಿಯೇ ನಿಮ್ಮ ಜೀವನವನ್ನು ಮತ್ತು ಸಮಯವನ್ನು ವ್ಯರ್ಥ ಮಾಡಬೇಡಿ.

2. ನೀವೇ ನಿಮ್ಮ ಜೀವನದ ಚಾಲಕರು ಆ ಚಾಲನೆಯ ಅಧಿಕಾರವನ್ನು ಮತ್ತು ಆ ಸ್ಥಳವನ್ನು ಬೇರೆಯವರು ಕದಿಯಲು ಅವಕಾಶ ಮಾಡಿಕೊಡಬೇಡಿ.

3. ಯಾವತ್ತೂ ಬೇರೆಯವರಲ್ಲಿ ಕ್ಷಮೆ ಕೇಳಬೇಡಿ. ಯಾಕೆಂದರೆ ಅವರು ನಿಮ್ಮ ಮಾತನ್ನು ತಪ್ಪು ಅರ್ಥ ಮಾಡಿಕೊಂಡರೆ ನೀವ್ಯಾಕೆ ಕ್ಷಮೆ ಕೇಳಬೇಕು.

 4. ನಾವು ಒಂಟಿಯಾಗಿ ಇದ್ದರೆ ಅದರ ಅರ್ಥ ನಾವು ಒಂಟಿಯಾಗಿದ್ದೇವೆ ಎಂದು ಅಲ್ಲ. ಅದರ ಅರ್ಥ ನಾವು ಒಬ್ಬರೇ ಎಲ್ಲಾ ವಿಷಯಗಳನ್ನು ಎದುರಿಸುವ ಸಾಮರ್ಥ್ಯ ನಮಗಿದೆ ಎಂದು.

5. ಎಲ್ಲೇ ಆಗಲಿ ನೀವು ಒಂದೇ ತರದ ವ್ಯಕ್ತಿತ್ವವನ್ನು ಕಾಪಾಡಿಕೊಂಡು ಒಂದೇ ತರನಾದ ವ್ಯಕ್ತಿಯಾಗಿರಿ. ಅದು ನಿಮ್ಮ ಸ್ವಂತ ವಿಷಯದಲ್ಲಾಗಲಿ, ಸಾರ್ವಜನಿಕವಾಗಿಯಾಗಲಿ ಅಥವಾ ಖಾಸಗಿಯಾಗಲಿ.

 6. ಹಣ ಮನುಷ್ಯರ ಜೀವನದ ಒಂದು ಅತೀ ಕೆಟ್ಟ ಸಂಶೋಧನೆ. ಆದರೆ ಅದು ನಂಬಿಕೆಗೆ ಮನುಷ್ಯನು ಅರ್ಹನೋ ಆಲ್ಲವೋ ಎಂಬುದನ್ನು ಮತ್ತು ಮನುಷ್ಯನ ಸ್ವಭಾವವನ್ನು ಪರೀಕ್ಷೆ ಮಾಡುತ್ತದೆ.

7. ಈ ಜಗತ್ತಿನ ತುಂಬೆಲ್ಲಾ ಅಧಿಕವಾಗಿ ರಾಕ್ಷಸರೇ ಇರುವುದು. ಆದರೆ ಸ್ನೇಹಿತರಂತೆ ಮುಖವಾಡವನ್ನು ಹಾಕಿಕೊಂಡಿದ್ದಾರೆ ಅಷ್ಟೇ.

8. ನಿಮ್ಮ ಮಕ್ಕಳನ್ನು ಶ್ರೀಮಂತರನ್ನಾಗಿ ಮಾಡಿಸಲು ಶಿಕ್ಷಣ ಕೊಡಿಸಬೇಡಿ. ಅದರ ಬದಲು ಜೀವನದಲ್ಲಿ ಹೇಗೆ ಖುಷಿಯಾಗಿರುವುದು ಎಂದು ಹೇಳಿಕೊಡಿ. ಆಗ ಅವರು ಬೆಳೆದು ದೊಡ್ಡವರಾದಾಗ ವಸ್ತುಗಳ ಮಹತ್ವ ತಿಳಿಯುತ್ತಾರೆ ಬರೀ ಅದರ ಬೆಲೆಯನಲ್ಲ.

9. ನೀವು ಎಷ್ಟು ಕಡಿಮೆ ಕೆಟ್ಟ ವ್ಯಕ್ತಿಗಳಿಗೆ ಸ್ಪಂದಿಸದೇ ಇರುತ್ತೀರೋ, ಜೀವನದಲ್ಲಿ ಅಷ್ಟು ನೆಮ್ಮದಿಯಿಂದ ಇರುತ್ತೀರಿ.

10. ಬಲಹೀನ ವ್ಯಕ್ತಿಗಳು ಪ್ರತೀಕಾರವನ್ನು ತೆಗೆದುಕೊಳ್ಳುತ್ತಾರೆ. ಬಲವಾದ ವ್ಯಕ್ತಿಗಳು ಕ್ಷಮಿಸಿಬಿಡುತ್ತಾರೆ, ಬುದ್ದಿವಂತ ವ್ಯಕ್ತಿಗಳು ನಿರ್ಲಕ್ಷಿಸುತ್ತಾರೆ.

11. ನೀವು ಸಂತೋಷದಿಂದ ಇರಬೇಕಾದರೆ, ಹಿಂದೆ ನಿಮ್ಮ ಜೀವನದಲ್ಲಿ ಆದ ಘಟನೆಗಳನ್ನು ನೆನೆಸಿಕೊಂಡು ಕೊರಗಬೇಡಿ. ಮುಂದಿನ ಜೀವನದ ಬಗ್ಗೆ ಯೋಚನೆ ಮಾಡಿ ತಲೆ ಕೆಡಿಸಿಕೊಳ್ಳಬೇಡಿ. ಈಗಿರುವ ಜೀವನದ ಬಗ್ಗೆ ಸಂಪೂರ್ಣವಾಗಿ ಹೇಗಿರಬೇಕೆಂದು ಯೋಚಿಸಿ.

12. ನೀವು ನಿಮ್ಮ ಜೀವನದಲ್ಲಿ ಗಳಿಸುವ ಸಂತೋಷಕ್ಕೆ ನೀವೇ ಕಾರಣಕರ್ತರಾಗಬೇಕು. ಬೇರೆಯವರು ನಿಮ್ಮನ್ನು ಸಂತೋಷಪಡಿಸುತ್ತಾರೆ ಎಂದು ಅಂದುಕೊಂಡರೆ, ಅದು ಯಾವಾಗಲೂ ಕೊನೆಗೆ ನಿರಾಸೆಯಿಂದಲೇ ಕೊನೆಗೊಳ್ಳುತ್ತದೆ.

13. ನಾನು ಸತ್ಯವನ್ನು ಹೇಳುವವರನ್ನು ಗೌರವಿಸುತ್ತೇನೆ. ಸತ್ಯವು ಎಷ್ಟೇ ಕಠಿಣವಾಗಿದ್ದರೂ ಸರಿಯೇ.

14. ನೀವು ಜೀವನದಲ್ಲಿ ಗಿಣಿಯ ತರ ಇರಬೇಡಿ ಬದಲಿಗೆ ಹದ್ದುಗಳಾಗಿ ಇರಿ. ಗಿಣಿಯು ಅಧಿಕವಾಗಿ ಮಾತನಾಡುತ್ತದೆ. ಆದರೆ ಹದ್ದು ಶಾಂತವಾಗಿ ಇದ್ದು, ಅದಕ್ಕೆ ಆಕಾಶವನ್ನು ಮುಟ್ಟುವಂತಹ ಯೋಚನಾ ಶಕ್ತಿ ಇದೆ.

15. ಜೀವನದಲ್ಲಿ ಬದಲಾವಣೆಯನ್ನು ಕಾಲಕ್ಕೆ ತಕ್ಕಂತೆ ಮಾಡಿಕೊಳ್ಳಿ, ಹೆದರಿಕೊಳ್ಳಬೇಡಿ, ನೀವು ಯಾವುದೋ ಒಂದು ಒಳ್ಳೆಯದನ್ನು ಕಳೆದುಕೊಳ್ಳುತ್ತೀರ, ಆದರೆ ಏನೋ ಒಂದು ಉತ್ತಮವಾದುದನ್ನು ಪಡೆದುಕೊಳ್ಳುತ್ತೀರ.

16. ನಮ್ಮ ತೊಂದರೆಗಳ ಬಗ್ಗೆ ಮಾತನಾಡುವುದೇ ನಮ್ಮ ಅತೀ ದೊಡ್ಡ ತಪ್ಪು, ಹುಚ್ಚು ಚಟವಾಗಿದ್ದು , ಅಂತಹ ಅಭ್ಯಾಸವನ್ನು ಬಿಟ್ಟುಬಿಡಿ, ನಿಮ್ಮ ಸಂತೋಷ ಮತ್ತು ಖುಷಿಯ ಬಗ್ಗೆ ಮಾತನಾಡಿ.

17. ಯಾರ ಜೊತೆಗೂ ಯಾವತ್ತೂ ಕೂಡ ಅತಿಯಾದ ಬಾಂಧವ್ಯವನ್ನು ಇಟ್ಟುಕೊಳ್ಳಬೇಡಿ, ಯಾಕೆಂದರೆ ಆ ಅತಿಯಾದ ಬಾಂಧವ್ಯ ಅತಿಯಾದ ನಿರೀಕ್ಷೆಗಳನ್ನು ತಂದೊಡ್ಡಿ ಆ ನೀರಿಕ್ಷೆಗಳು ಸುಳ್ಳಾದಾಗ ನೋವಿನಿಂದ ಬಳಲುವಂತೆ ಮಾಡುತ್ತದೆ.

18. ಅಸಂಬದ್ಧತೆಗಿಂತ ಶಾಂತಿಯೇ ಮೇಲು.

19. ಅತಿಯಾದ ಯೋಚನೆಯೇ ನಮ್ಮ ಜೀವನದ ಸಂತೋಷವನ್ನು ಹಾಳುಮಾಡಿ ದುಃಖಪಡಲು ಅತೀ ದೊಡ್ಡ ಕಾರಣವಾಗುತ್ತದೆ.





One thought on “ಜೀವನ “ಬಹಳ ಬೇಜಾರು” ಅನ್ನುವವರು….ಬುದ್ಧನ ಈ 19 ವಿಷಯಗಳನ್ನು ತಲೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು...


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
ಕೃಪೆ: ವಾಟ್ಸಪ್