12 ಮಾರ್ಚ್ 2018

ವರ (ಹನಿಗವನ)

ಹನಿಗವನ

*ವರ*

ಅವಳು  ಬೇಡಿದಳು
ದೇವರಲಿ ಒಂದು
ವರ
ಇಲ್ಲದೇ
ಸ್ವಯಂವರ
ಕರುಣಿಸಲು ಒಳ್ಳೆಯ
ವರ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಗಜ಼ಲ್ ೨೯ (ಬಲ್ಲೆಯಾ?) ಕವಿ ಬಳಗ ವಾಟ್ಸಪ್ ಗುಂಪಿನ ಸ್ಪರ್ಧೆಯ ಲ್ಲಿ ಗಮನಾರ್ಹ ಉಲ್ಲೇಖ ಪುರಸ್ಕೃತ ಗಜ಼ಲ್

ಗಜ಼ಲ್ ೨೮ (ಬಲ್ಲೆಯಾ?)

ಅವಳು ಎಂದರೆ ಪ್ರಕೃತಿಯ ಶಕ್ತಿಯೆಂದು ಬಲ್ಲೆಯಾ
ಆದಿ ಅಂತ್ಯದ  ನಿಯಾಮಕಳೆಂದು ಬಲ್ಲೆಯಾ

ಹೆತ್ತು ಹೊತ್ತು ತುತ್ತ ನೀಡಿ ಪೊರೆಯುವವಳು
ನಮ್ಮಲ್ಲಿರುವ ಸರ್ವ ಶಕ್ತಿಯ ಮೂಲವೆಂದು ಬಲ್ಲೆಯಾ

ಬ್ರಹ್ಮ ವಿಷ್ಣು ರುದ್ರರ ಮಾತೆಯಾಗಿಹಳು  ಅವಳು
ಸೃಷ್ಟಿ ಸ್ತಿತಿ ಲಯಗಳ ಕಾರಣಳಾದವಳೆಂದು ಬಲ್ಲೆಯಾ

ಗಾಳಿ ನೀರು ಮಣ್ಣಿನ ಕಣಗಳು ಅಂಶ ಅವಳು
ನಮ್ಮುಸಿರಿನ ಮೂಲ ಪ್ರಕೃತಿ ಮಾತೆಯೆಂದು ಬಲ್ಲೆಯಾ

ಜೋಡಿಯಿರದ ಬದುಕು ಇರುವುದುಂಟೆ ಜಗದಿ
ಸೀಜೀವಿಯ ಮನಗೆದ್ದ ನಲ್ಲೆ ಇವಳೆಂದು ಬಲ್ಲೆಯಾ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


11 ಮಾರ್ಚ್ 2018

ಪರಮಾತ್ಮನಲಿ ಮನಸಿಡು (ಆಧ್ಯಾತ್ಮಿಕ ಕವನ)

*ಪರಮಾತ್ಮನಲಿ ಮನಸಿಡು*

ಇನ್ನೆಷ್ಟು ಕಾಲ ಬಿದ್ದು ಒದ್ದಾಡುವೆ
ಎದ್ದು ಆತ್ಮವನುದ್ದರಿಸಿಕೋ
ಸ್ವಾರ್ಥ ಲೋಭಗಳ ಬಿಡು
ಜಗದ ಜಂಜಡವ ಬಿಡು
ಸಿಧ್ಧಿಯೆಡೆಗೆ ಮನಸಿಡು|೧|

ಕಾಮದ ಬಲೆಯಲಿ ಸಿಲುಕಿ
ಬಿಡಿಸಿಕೊಳ್ಳದೆ ನಲುಗಿ
ಇಂದ್ರಿಯ ಸುಖದಿ ಮುಳುಗಿ
ಅಂಧನಾಗುವುದ ಬಿಡು
ಭಗವಂತನಲಿ ಮನಸಿಡು|೨|

ಕ್ರೋಧದಿಂದಲಿ  ಎಗರಾಡಿ
ಮಾಡಿಕೊಂಡು ಜೀವನ ರಾಡಿ
ಮತ್ಸರದಿಂದಲಿ  ಬಡಿದಾಡಿ
ಕತ್ತಿ ಮಸೆಯುವುದ ಬಿಡು
ಸರ್ವಶಕ್ತನಲಿ  ಮನಸಿಡು|೩|

ಮೋಹದಿ ಮೈಮರೆತು
ನಾನು ನನದೆಂದು ಅಬ್ಬರಿಸಿ
ಲೌಕಿಕವೆ ದಿಟವೆಂದು ತಿಳಿದು
ಮರುಳಾಗುವುದ ಬಿಡು
ಪರಮಾತ್ಮನಲಿ  ಮನಸಿಡು|೪|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

10 ಮಾರ್ಚ್ 2018

ಹನಿ ಹನಿ ಇಬ್ಬನಿ ವಾಟ್ಸಪ್ ಕವಿ ಬಳಗದ ಯಶೋಗಾಥೆ (ಲೇಖನ)

*ಹನಿ ಹನಿ‌ ಇಬ್ಬನಿಯ  ವಾಟ್ಸಪ್ ಗುಂಪಿನ ಯಶೋಗಾಥೆ*

ವಾಟ್ಸಪ್ ಅನ್ನು ಕೇವಲ ಮನರಂಜನೆಯ ಮತ್ತು ಟೈಂಪಾಸ್ ಮಾಡಲು ಬಳಸುವ ಈ ಕಾಲದಲ್ಲಿ ಅದರ ಬಳಕೆಯಿಂದ ಸಾಹಿತ್ಯ ಸೇವೆ ಮಾಡಬಹುದು ಎಂಬುದನ್ನು ಸದ್ದಿಲ್ಲದೇ ಹಲವು ವಾಟ್ಸಪ್ ಕವಿ ಬಳಗಗಳು ಮಾಡಿತೋರಿಸುತ್ತಿವೆ ಅವುಗಳಲ್ಲಿ ಮುಂಚೂಣಿಯಲ್ಲಿರುವ ಗುಂಪು "ಹನಿ ಹನಿ ಇಬ್ಬನಿ ಕವಿ ಬಳಗ "

ಒಂದು ಕಾಲದಲ್ಲಿ ಸಾಹಿತ್ಯ ಕೇವಲ ಪಂಡಿತರಿಗೆ ಸೀಮಿತ ,ಕವನ ದೊಡ್ಡ ಕವಿಗಳ ಸ್ವತ್ತು ಎಂದು ನಂಬಲಾಗಿತ್ತು ಅದನ್ನು ಸುಳ್ಳು ಮಾಡಲು ಸಾಮಾನ್ಯರಲ್ಲಿರುವ ಕವಿ ಭಾವನೆಗಳನ್ನು ಬಡಿದೆಬ್ಬಿಸಲು *ಹನಿ ಹನಿ ಇಬ್ಬನಿ* ಬಳಗ ಟೊಂಕ ಕಟ್ಟಿ ನಿಂತಿದೆ


ಖುಷಿ ಕೃಷ್ಣ ರವರ ನೇತೃತ್ವದಲ್ಲಿ ಮುನ್ನೆಡಯುತ್ತಿರುವ ಈ ಬಳಗಕ್ಕೆ ಚಂದ್ರು ರವರು ಬೆನ್ನೆಲುಬಾಗಿ ನಿಂತು‌ ನಾಡಿನಾದ್ಯಂತ ಸಾಹಿತ್ಯದ ಕಂಪನ್ನು ಪಸರಿಸುತ್ತಿದ್ದಾರೆ.ಒಂದು ವಿಶ್ವವಿದ್ಯಾಲಯ ಮಾಡಬಹುದಾದ ಕನ್ನಡ ಕಟ್ಟುವ ಕೆಲಸವನ್ನು. ಒಂದೊಂದು ಪ್ರಸಾರಾಂಗ ಮಾಡಬಹುದಾದ ಪ್ರಕಟಣಾ ಕೆಲಸವನ್ನು ಸದ್ದಿಲ್ಲದೆ ಮಾಡಿ ನೂರಾರು ಉದಯೋನ್ಮುಖ ಸಾಹಿತಿಗಳನ್ನು ಬೆಳೆಸುವ ಕಾರ್ಯದಲ್ಲಿ ಬಳಗ ಯಶಸ್ವಿಯಾಗಿ ಮಾಡುತ್ತಿದೆ.
ಈಗಾಗಲೇ ಬಳಗವು
೧ *ಹನಿ ಹನಿ ಇಬ್ಬನಿ*
೨ *ಹನಿಹನಿ ಕಾವ್ಯಕಹಾನಿ*
೩*ಹನಿಹನಿ ತುಂತುರು*
೪ *ಹನಿಹನಿಭಾವಸಿಂಚನ*
೫ * ನನ್ನ ಪ್ರೀತಿಯ ಕೋತಿ ಮರಿ ಭಾಗ ೧*
೬ * ಹನಿ ಹನಿ ಕಾವ್ಯಧಾರೆ*
ಎಂಬ ಆರು ರತ್ನ ಗಳನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿದೆ

ಮುಂದುವರೆದು ಬಳಗವು ರಾಜ್ಯಾದ್ಯಂತ ಸುಪ್ತ ಪ್ರತಿಭೆಯನ್ನು ಪ್ರೋತ್ಸಾಹ ಮಾಡಲು ಮೂರು ರಾಜ್ಯ ಮಟ್ಟದ ಕವಿಗೋಷ್ಟಿಗಳ ಹಮ್ಮಿಕೊಂಡು ಯಶಸ್ವಿಯಾಗಿ ಮುನ್ನೆಡೆದಿದೆ.
ಬಳಗದ ಮುಂದಿನ ಯೋಜನೆಯನ್ನು ಕರಾರುವಕ್ಕಾಗಿ ಮಾಡಿದ ಅಡ್ಮಿನ್ ದ್ವಯರು  ಮುಂದಿನ ದಿನಗಳಲ್ಲಿ ಭಾವಗೀತೆಗಳ ಸಿ.ಡಿ  ಮಾಡುವ  ಕೆಲಸವನ್ನು ಸದ್ದಿಲ್ಲದೆ ಪ್ರಾರಂಭಿಸಿದರು. ಮುಂದಿನ ದಿನಗಳಲ್ಲಿ ಬಳಗದ. ಕವಿಗಳ ವೈಯಕ್ತಿಕ ಕವಿಗಳ ಪುಸ್ತಕ ಪ್ರಕಾಶನ ಮಾಡುವ ಮಹೋನ್ನತ ಕನಸ ಕಂಡಿದ್ದು ಆ ನಿಟ್ಟಿನಲ್ಲಿ ಯಶಸ್ವಿಯಾಗಲು‌ ನಾನು  ಹಾರೈಸುವೆನು.

ಹನಿ ಹನಿ ಇಬ್ಬನಿ ಬಳಗ  ಹತ್ತರಲ್ಲಿ ಹನ್ನೊಂದಾಗದೇ ವಿಶೇಷವಾಗಿ ಬೆಳೆಯಲು‌ ಕಾರಣವಾಗಿರುವ *ದಶಾಂಶಗಳು*

೧ ಬಳಗಕ್ಕೆ ತನ್ನದೇ ಆದ ಗುರಿ ಇದ್ದು ಅದರಂತೆ ಮುನ್ನಡೆಯುತ್ತಿದೆ.

೨ ನೀನು ಬೆಳೆ ಮತ್ತು ಇತರರನ್ನು ಮಾರ್ಗದರ್ಶನ ಮಾಡಿ ಬೆಳೆಸು ಎಂಬ ಸದುದ್ದೇಶವನ್ನು ಹೊಂದಿದೆ

೩ ಬಳಗದ ಒಳಗೆ ಒಂದು ಆಂತರಿಕ ಶಿಸ್ತು ಎಲ್ಲರನ್ನು ಹಿಡಿದಿಟ್ಟಿದೆ

೪ ಬಳಗ ಕೇವಲ ಬಳಗವಲ್ಲ , ಒಂದು ಕುಟುಂಬದ ವಾತಾವರಣವು ನಿರ್ಮಾಣವಾಗಿದೆ ನೋವು ನಲಿವುಗಳಲ್ಲಿ ಬಂಧುಗಳಿಗಿಂತ ಹೆಚ್ಚಾಗಿ ಸ್ಪಂದಿಸುವ ಗುಣ

೫ ಗೊಂದಲಕ್ಕೆ ಅವಕಾಶ ನೀಡದೆ ..ಕವನ ಬರೆಯಲು  *ಹನಿಹನಿ ಇಬ್ಬನಿ*, ಅನಿಸಿಕೆ ವಿಮರ್ಶೆಗೆ *ಚಿಂತಕರ ಚಾವಡಿ*, ತೀರ್ಪು ನೀಡಲು *ತೀರ್ಪುಗಾರರ ಬಳಗ*, ಕೊನೆಗೆ ಮುಕ್ತ ಮಾತುಕತೆಗೆ *ತಾರೆಗಳ ತೋಟ* . ಎಂಬ ಸಮಾನಾಂತರ ಗುಂಪುಗಳು ಸಕ್ರೀಯವಾಗಿವೆ .

 ೬ ದಿನದ ಅಡ್ಮಿನ್, ವಾರದ ಅಡ್ಮಿನ್ ಎಂಬ ವಿಧವಿಧ ಪದನಾಮಗಳ ಸೃಷ್ಟಿಸುವ ಮೂಲಕ ಜವಾಬ್ದಾರಿ ಯ ವಿಕೇಂದ್ರೀಕರಣ ಮಾಡಲಾಗಿದೆ.

  ೭ ದಿನಕ್ಕೊಂದು *ಶೀರ್ಷಿಕೆ* ನೀಡುವುದರ ಮೂಲಕ  ಬರೆಯಲು  ಪ್ರೋತ್ಸಾಹ ಮತ್ತು ಪ್ರೇರಣೆ ನೀಡುತ್ತಿರುವುದು

೮ ವಾರದ ಸ್ಪರ್ಧೆ ಮಾಡಿ ಬಹುಮಾನ ನೀಡಿ ಬರೆಯಲು ಕವಿಗಳಿಗೆ ಪ್ರೋತ್ಸಾಹ ನೀಡುತ್ತಿರುವುದು.

೯ ಕೇವಲ ಕವನ ಬರೆಯಲು ಪ್ರೋತ್ಸಾಹ ನೀಡದೆ ಸಾಹಿತ್ಯದ ವಿವಿಧ ಪ್ರಕಾರಗಳಾದ ಭಾವಗೀತೆ, ಕಿರುಗಥೆ, ಗಜ಼ಲ್, ಶಾಹಿರಿ,ಹಾಯ್ಕು ಲೇಖನ ಬರೆಯಲು ಪ್ರೋತ್ಸಾಹ ನೀಡುತ್ತಿರುವುದು

೧೦  ಬಿ.ಆರ್ ಲಕ್ಷಣರಾವ್ . ಎಸ್ ಜಿ‌ ಸಿದ್ದ ರಾಮಯ್ಯ ಮುಂತಾದ ಕವಿಗಳೊಂದಿಗೆ ಸಂವಾದ ನಡೆಸಿ ಕವಿಗಳಿಗೆ ಪ್ರೇರಣೆ ನೀಡಿರುವುದು.

ಇಂತಹ ಕ್ರಿಯಾಶೀಲ ಬಳಗದಲ್ಲಿರುವುದು ನನಗೆ ಹೆಮ್ಮೆಯೆನಿಸುತ್ತದೆ  ಈ ಬಳಗಕ್ಕೆ ಸೇರಿದ ಮೇಲೆ ನಾನು ವಿವಿಧ ಪ್ರಕಾರಗಳಲ್ಲಿ ಬರೆಯಲು ನನಗೆ ಹಲವಾರು ಹಿರಿಯ ಕವಿಗಳು ಮಾರ್ಗದರ್ಶನ ನೀಡಿರುವುದು ನನ್ನ ಸುದೈವ ಎಲ್ಲರೂ ಕಲಿಯೋಣ ಎಲ್ಳರೂ ಬೆಳೆಯೋಣ ಎಂಬ ತತ್ವ ದಲ್ಲಿ ಬಳಗ ಮುನ್ನಡೆಯುತ್ತಿದೆ ನನ್ನಂತಹ  ಹನಿ ಹನಿ ಗಳನ್ನು ಸೇರಿಸಿ ಬಳಗವನ್ನು ಕಟ್ಟಿ ಮುನ್ನೆಡೆಸುತ್ತಿರುವ ಅಡ್ಮಿನ್ ದ್ವಯರಾದ ಖುಷಿ ಸರ್ ಹಾಗು ಚಂದ್ರು ಸರ್ ಮತ್ತು ಎಲ್ಲಾ ಕವಿಮನಗಳಿಗೆ ಹೃದಯ ಪೂರ್ವಕ ಧನ್ಯವಾದಗಳು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*




09 ಮಾರ್ಚ್ 2018

ನನ್ನಯ ಶಾಲೆ ( ಶಿಶುಗೀತೆ)

*ಶಿಶುಗೀತೆ*

*ನನ್ನಯ ಶಾಲೆ*

ಮರೆಯಲಾರೆ ನನ್ನಯ ಶಾಲೆ
ನನ್ನಯ ಅಚ್ಚುಮೆಚ್ಚಿನ ಶಾಲೆ
ವಿದ್ಯೆಗೆ ಇದುವೆ ವಿದ್ಯಾಲಯ
ಕಲಿಯುವ ಮಕ್ಕಳ ದೇವಾಲಯ|೧|

ಪುಣ್ಯವು ನನ್ನದು ಇಲ್ಲಿರಲು
ಉತ್ತಮ ಪರಿಸರ ಹೊಂದಿರಲು
ನೀಡಿಹುದೆನಗೆ ಅಧಮ್ಯ  ಚೇತನ
ಶಾಂತ ಪರಿಸರದ ಶಾಂತಿ ನಿಕೇತನ|೨|

ಪ್ರೇರಣೆ ನೀಡಿದ ಮುಖ್ಯ ಶಿಕ್ಷಕರು
ಸುಂದರ ಬೋಧನೆಗೈದ ಶಿಕ್ಷಕರು
ನೆನೆವೆನು  ಅನ್ನಪೂರ್ಣೆಯರ
ಸೇವೆ ಸಲ್ಲಿಸಿದ ಸಿಬ್ಬಂದಿಯವರ |೩|

 ಆಟಗಳ  ಪಾಠಗಳ ಕಲಿತಿಹೆನು
ಸಹಪಾಟಿಗಳೊಂದಿಗೆ ನಲಿದಿಹೆನು
ಮಾದರಿ  ಪ್ರಜೆಯು ಆಗುವೆನು
ಶಾಲೆಯ ಕೀರ್ತಿಯ ಬೆಳಗುವೆನು|೪|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*