03 ಮಾರ್ಚ್ 2018

ಪಯಣಿಸು (ಭಾವಗೀತೆ)



*ಪಯಣಿಸು*

ಈಸಬೇಕು ಇದ್ದು ಜೈಸಬೇಕು
ಜೀವನದ ತೀರ ಸೇರಬೇಕು|ಪ|

ಕಡಲಲೆಗಳು ನಿರಂತರ
ಎದುರಿಸಿ ಮುನ್ನುಗ್ಗಬೇಕು
ಬಿರುಗಾಳಿ ಆಗೊಮ್ಮೆ ಈಗೊಮ್ಮೆ
ಸಾವಕಾಶವಾಗಿ ಸಾಗಬೇಕು|೧|

ತಿಮಿಂಗಿಲ ಮೊಸಳೆಗಳು ನೂರಾರು
ಎಚ್ಚರವಿರಲಿ ಪಯಣದಲಿ
ನಡುವೆ ಮಂಗಳ ತಂಗಾಳಿ
ಆಸ್ವಾದಿಸು ಆನಂದದಲಿ|೨|

ಮೈಮರೆಯದಿರು ಎಂದಿಗೂ
ಅಡೆತಡೆಗಳಿವೆ ಹೆಜ್ಜೆ ಹೆಜ್ಜೆಗು
ಎಲ್ಲರೊಳಗೊಂದಾಗಿ ಪಯಣಿಸು
ಎಲ್ಲರನು ಗೌರವಿಸುತ ಸಾಗು|೩|


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*



02 ಮಾರ್ಚ್ 2018

ಬದುಕಿನ ದಾರಿ(ಕವನ)

*ಬದುಕಿನ ದಾರಿ*

ಬಣ್ಣ ಹಚ್ಚಿ ನಟನೆ ಮಾಡಿ
ನಿಮ್ಮ ನಾನು ನಗಿಸುವೆ
ಮುಖವಾಡ ಹಾಕಿ ಬದುಕುವವರ
ಬಣ್ಣ ಬಯಲು ಮಾಡುವೆ |೧|

ಸರಿ ಗಮ ರಾಗ ತಿಳಿದು
ಹಾಡನ್ನು ಹಾಡುವೆ
ಸರಿಯಾದ ಮಾರ್ಗ ತಿಳಿಸಿ
ಬಾಳು ಸಂಗೀತಮಯ ಎನ್ನುವೆ |೨|

ಬಣ್ಣ ಕುಂಚ ಹಿಡಿಯುವೆ
ಜಗದ ಚಿತ್ರ ಬಿಡಿಸುವೆ
ಮೊಗದಿ ಸಿಹಿ ಒಳಗೆ ಕಹಿ
ಜನರ ವಿಚಿತ್ರ ಗುಣವ  ತೋರುವೆ |೩|

ನವರಸಗಳ ಅರಿಯುವೆ
ನಟನೆಯನ್ನು ಮಾಡುವೆ
ಕೆಟ್ಟ ಜನರ ಮುಖವಾಡವ
ದಿಟ್ಟ ತನದಿ ತೋರುವೆ|೪|

ಸೀಮೆ ಸುಣ್ಣ ಪುಸ್ತಕ ಹಿಡಿವೆ
ಒಲವಿನಲಿ ಪಾಠ ಮಾಡುವೆ
ದಾರಿ ತಪ್ಪಿದ ಮಕ್ಕಳ ತಿದ್ದಿ
ಬದುಕಿನ ದಾರಿ ತೋರುವೆ|೫|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*





ಫಲಿತಾಂಶ (ಕಿರುಗಥೆ)

"ಕಿರುಗಥೆ*

*ಫಲಿತಾಂಶ*

ತನ್ನ ಅಪ್ಪ ಹಾವು ಕಡಿದು ಕಾಲವಾದ ಮೇಲೆ ಬಾಲಜಿ ಮತ್ತು ಅಣ್ಣ ಇಂದ್ರೇಶ್ ಅಮ್ಮನೊಂದಿಗೆ ಮಾವನ ಮನೆಯಲ್ಲಿ ಇದ್ದರು .
ಅಣ್ಣಾ ಇಂದ್ರೇಶ್ ಎಸ್ ಎಸ್ ಎಲ್ ಸಿ ಯಲ್ಲಿ ಫಸ್ಟ್ ಕ್ಲಾಸ್ ಪಾಸಾದರೂ  ಪಿ.ಯು .ಸಿ ಯಲ್ಲಿ ಪೇಲಾಗಿ ಮಾವನ ಮನೆಯಲ್ಲಿ ಕೃಷಿ ಕೆಲಸ ಮಾಡುವುದು ನೋಡಿ ನಾಳೆ ನನ್ನ ಪಿ.ಯು ಸಿ   ಫಲಿತಾಂಶ ನಾನು ಫೇಲಾದರೆ? ಮುಂತಾದ ಯೋಚನೆಯಲ್ಲಿ ಬಾಲಜಿಗೆ ರಾತ್ರಿ ನಿದ್ದೆಯೇ  ಬರಲಿಲ್ಲ.
"ಯಾರು ಆ ಕೃಷ್ಣಪ್ಪನ ಅಳಿಯ ಇಡೀ ಕಾಲೇಜಿಗೆ ಪಸ್ಟ್ ಬಂದನಾ ?" ಎಂದು ಊರ ಜನರು ಅರಳಿ ಕಟ್ಟೆ ಮೇಲೆ ಕುಳಿತು ಮಾತನಾಡುತ್ತಿದ್ದರು ."ಓ ಆ ಹುಡುಗ ಒಂದು ದಿನನೂ ಈ ಕಡೆ ಕಾಣಿಸುತ್ತಿರಲಿಲ್ಲ ಚೆನ್ನಾಗಿ ಮಾರ್ಕ್ಸ್ ತೆಗೆದವ್ನಲ್ಲ" ಎಂದು ರಾಮಣ್ಣ ಹೇಳುವ ಸಮಯಕ್ಕೆ ಬಾಲಾಜಿ ಆ ಕಟ್ಟೆಯ ಮುಂದೆ ಬಂದ. ಅಲ್ಲಿನ ಜನ "ಇವನೆ ಅ ಹುಡುಗ  ಚೆನ್ನಾಗಿ ಓದಿದಿಯಾ ಮಗ ಈಗೆ ಓದು ಮುಂದೆ ನಿನಗೆ ಯಾವುದಾದರೂ ಗವರ್ನಮೆಂಟ್ ಕೆಲ್ಸ ಸಿಗುತ್ತೆ ನನ್ನ ಮಗ ನೂ ಅದಾನೆ ಕಳ್ ನನ್ ಮಗ ನಾಲಕ್ ಸಬ್ಜೆಕ್ಟ ಪೇಲ್ ಆಗವ್ನೆ" ಎಂದರು  .ತಿಮ್ಮಣ್ಣ ಮುಂದುವರಿದು "ಈ ಹುಡುಗುಂಗೆ ಅಪ್ಪ ಇಲ್ಲ ಅವರ ಮಾವ ಕೃಷ್ಣಪ್ಪ ಇಲ್ಲೆ ಓದಿಸತವ್ನೆ ಈ ಹುಡುಗನೂ ಚೆನ್ನಾಗಿ ಓದುತಾನೆ" ಎಂದರು .ಎಲ್ಲೋ ಬಾಲಜಿಗ ಸ್ವೀಟ್? ಎಂದು ಕೇಳುವ ಸಮಯಕ್ಕೆ ಕೃಷ್ಣಪ್ಪ ಕೈಯಲ್ಲಿ ಮೈಸೂರ್ ಪಾಕ್ ಬಾಕ್ಸ್ ಹಿಡಿದು ಅಲ್ಲಿಗೇ ಬಂದರು. ಊರವರಿಗೆ ಸಿಹಿ ಕೊಡಲು ಮುಂದಾದ ಕೃಷ್ಣಪ್ಪ ಗೆ "ಮೊದಲು ನಿನ್ನ ಅಳಿಯನಿಗೆ ಕೊಡು ಸ್ವೀಟ್ ನಾವೇನು ದಬ್ಬಾಕಿದಿವಿ" ಎಂದರು ಬಾಲಾಜಿಗೆ ಅವನ ಮಾವ ಸಿಹಿ‌ತಿನ್ನಿಸಿದಾಗ ಬಾಲಾಜಿಯ ಕಣ್ಣುಗಳಲ್ಲಿ ಗೊತ್ತಿಲ್ಲದೇ ನಾಲ್ಕು ಹನಿಗಳು ಹೊರಬಂದವು .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

01 ಮಾರ್ಚ್ 2018

ಉತ್ತರ (ಹನಿಗವನ)

*ಹನಿಗವನ*

*ಉತ್ತರ*

ಒಲವಿನ ಉಡುಗೊರೆ
ನಲಿವಿನ ಕೊಡುಗೆ
ಚೆಲುವಿನ ಮುತ್ತು
ವಿಧ ವಿಧ ಕೊಡುಗೆಗಳ
ನೀಡುವೆನೆಂದು ಅವನು
ಪೀಡಿಸಿದನು
ವಿಧ ವಿಧದ ಜೋಡುಗಳಲಿ
ಕೊಡುವೆನೆಂದು ಅವಳು
ಜಾಡಿಸಿದಳು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

*ಬರುವುದು ಒಳ್ಳೆದಿನ*(ಕವನ) ಕನ್ನಡ ಸಾಹಿತ್ಯ ಲೋಕ ವಾಟ್ಸಪ್ ಗುಂಪಿನಲ್ಲಿ ನಡೆದ ಗಾಯನ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ಪಡೆದ ಕವನ‌




*ಬರುವುದು ಒಳ್ಳೆದಿನ*(ಕವನ)

ಓದಿ ಬರೆವ ಕಾಲದಿ
ಮನ ಏಕೆ ನಿನಗೆ ಚಂಚಲವು
ಸವಿ ಕನಸ ಕಾಣೋ ವೇಳೆಯಲಿ
ಏಕೆ ಪ್ರೀತಿ ಗೊಡವೆಯು |ಪ|

ಈ ಕಾಲ ಸಿಗದು ನಾಳೆ
ಮೈಮರೆಯೆ ಬಾಳೆ ಗೋಳು
ಇದ ತಿಳಿದು ನೀನು ಅರಿತು ಬಾಳು
ಮುಂದೆ ಇಹುದು ನಾಕವು |೧|

ಹೆತ್ತವರ ಕನಸನ್ನು
ನನಸು ಮಾಡು ನೀನು
ಸುತ್ತಲಿನ ಜಗವನ್ನು
ಮೊದಲು ತಿಳಿ ನೀನು |೨|

ಹಿಡಿದಿಡು ನಿನ್ನ ಮನವ
ತರಿದಿಡು ಕೆಟ್ಟ ಚಟವ
ಹಿಡಿತವಿರಲಿ ಮನ
ಬರುವುದು ಒಳ್ಳೆ ದಿನ |೩|


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*..