26 ಮಾರ್ಚ್ 2019

ಪುರಸ್ಕಾರ ಮಾಲೆ(ಚಿತ್ರ ಕವನ)

*ಪುರಸ್ಕಾರದ ಮಾಲೆ*

ಓದಬೇಕು ನಾನೀಗ
ತಿಳಿಯಲು ಈ ಜಗ
ಬರೆದುಕೊಳ್ಳಬೇಕು
ನನ್ನ ಹಣೆಬರಹ ನಾನೇ
ಕಾಲಿಲ್ಲದಿದ್ದರೂ ನಿಲ್ಲಬೇಕು
ನನ್ನ ಕಾಲ ಮೇಲೆ
ಸಾಧಿಸಿದ ನನ್ನ ಕೊರಳಿಗೆ
ಬಿದ್ದೇ ಬೀಳುವುದು
ಪುರಸ್ಕಾರದ ಮಾಲೆ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

25 ಮಾರ್ಚ್ 2019

*ಗಜಲ್೫೫(ಬಾ ಮಳೆಯೇ ಬಾ)

         *ಗಜಲ್*

ಧರೆಯತ್ತಿ ಉರಿಯುತಿದೆ ವರ್ಷವೆ ಬಾ
ತಿರೆಯ ಜೀವಿಗಳು ತತ್ತರಿಸಿವೆ ಪರ್ಜನ್ಯವೆ ಬಾ .

ಉತ್ತರೀಯ ನೆನೆಸಲೂ ಜಲವಿಲ್ಲ ಇಲ್ಲಿ
ಬಾಯಾರಿಕೆಗೆ ಉತ್ತರಿಸುವ ಉತ್ತರವೆ ಬಾ.

ನೊಗವ ಹೂಡಿಲ್ಲ ರೈತರು ನೀ ಬರದೆ
ಮೊಗೆದರೂ ಮುಗಿಯದ ಮಘವೆ ಬಾ .

ಹರಿಣಗಳಾದಿಯಾಗಿ ಮೃಗಗಳಿಗೆ ಜಲವಿಲ್ಲ
ಜೀವರಾಶಿಗಳ ರಕ್ಷಕ ಮೃಗಶಿರವೆ ಬಾ .

ಹಸ್ತತೊಳೆಯಲು ನೀರಿಲ್ಲ ಎಲ್ಲೆಡೆಯೂ
ಸೀಹಿಜೀವಿಗಳ ಜೀವನಾಡಿ ಹಸ್ತಚಿತ್ತವೆ ಬಾ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*





23 ಮಾರ್ಚ್ 2019

ಗಜಲ್ ೫೪(ನನ್ನ ಶಿಕ್ಷಕ)


         *ಗಜಲ್೫೪*


ಕನಸು ಕಾಣಲು ಹೇಳಿಕೊಟ್ಟವನೇ ನನ್ನ ಶಿಕ್ಷಕ,
ನನಸಾದ ನನ್ನ ಗುರಿಗಳ ತಲುಪಿಸಿದವನೇ ನನ್ನ ಶಿಕ್ಷಕ .

ದೇವರು ಕಣ್ಣಿಗೆ ಕಾಣುವುದು ಅಪರೂಪ,
ಶಿವನ ಸ್ವರೂಪಿಯಾಗಿ ಕ್ಷಕಿರಣ ಬೀರಿದವನೇ ನನ್ನ ಶಿಕ್ಷಕ

ಕೆಡಲು ನೂರು ದಾರಿಗಳು ಆಧುನಿಕ ಜಗದಿ,
ಬದುಕಲು ಮಾರ್ಗದರ್ಶನ ನೀಡಿದವನೇ ನನ್ನ ಶಿಕ್ಷಕ.

ಸಮಾಜ ತಿದ್ದುವವರು ಬಹಳಿಲ್ಲ ಭವದಿ ,
ಸಾಮ ದಾನ ಭೇದ  ದಂಡಗಳಲಿ ಕಲಿಸಿದವನೇ ನನ್ನ ಶಿಕ್ಷಕ.

ಸೀಜೀವಿಯು ಅಂಧಕಾರದಲ್ಲಿದ್ದು ತೊಳಲುತಲಿದ್ದನು ,
ಜ್ಞಾನದ ಪಂಜನಿಡಿದು ಬಾಳ ಬೆಳಗಿಸಿದವನೇ ನನ್ನ ಶಿಕ್ಷಕ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*





22 ಮಾರ್ಚ್ 2019

*ಮಹಾಮಾತೆ*(ಹನಿಗವನ)

              *ಮಹಾಮಾತೆ*(ಹನಿಗವನ)

ಜನ್ಮ‌ನೀಡಿದ ಜನ್ಮದಾತೆ
ಬತ್ತದ ಪ್ರೀತಿಯ ವರತೆ
ನನ್ನ ಸಲಹಿದ ವಾತ್ಸಲ್ಯದಾತೆ
ಅವಳೇ ಮಹಾಮಾತೆ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

ಗಜಲ್ ೫೩(ಜೀವಜಲ)

*ಗಜ್ಹಲ್*

ಜೀವಿಗಳು ಉಳಿಯಲು ರಕ್ಷಿಸಬೇಕಿದೆ  ಜೀವಜಲ
ನಾವುಗಳು ಅಳಿಯದಿರಲು ಸಂಗ್ರಹಿಸಬೇಕಿದೆ ಜೀವಜಲ

ಬಳಸಿಯಾಗಿದೆ ಮಂದಿನ ಪೀಳಿಗೆಯ ಸಲಿಲ
ಭುವಿಯ ವಾರಸುದಾರರಿಗೆ  ಬಳುವಳಿ ನೀಡಬೇಕಿದೆ ಜೀವಜಲ

ಉಳಿಸಿದ  ಹನಿ ಗಳಿಸಿದ ಕೋಟಿ ಹನಿಗೆ ಸಮ
ಅತಿ ಕಡಿತಗೊಳಿಸಿ  ಮಿತವಾಗಿ ಬಳಸಬೇಕಿದೆ ಜೀವಜಲ

ನೀರಿನ ಮೂಲಗಳಿಗೆ ಕನ್ನಹಾಕಿದ್ದು ಸಾಕು
ಸ್ವಾಭಾವಿಕ ರೀತಿಯಲಿ ಪಡೆಯಬೇಕಿದೆ ಜೀವಜಲ

ಸಿಹಿಜೀವಿಯಂತೆ ಜಲಸಂಸ್ಕೃತಿ ಪಾಲಿಸಬೇಕಿದೆ ನಾವೆಲ್ಲ
ಹನಿ ಹನಿಗೂಡಿಸಿ ಹಳ್ಳವಾಗಿಸಲು ಉಳಿಸಬೇಕಿದೆ ಜೀವಜಲ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

*ಇಂದು ವಿಶ್ವ ಜಲದಿನ ಬನ್ನಿ ಜಲಸಂರಕ್ಷಣೆಯ ಪಣ ತೊಡೋಣ*

15 ಮಾರ್ಚ್ 2019

ಸಿಹಿಜೀವಿಯ ಹನಿಗಳು (ಕುಂಬಕರ್ಣ,ಸಂತಸ,ವಿರಳ)

              *ಸಿಹಿಜೀವಿಯ ಹನಿಗಳು*

*೧*

*ಕುಂಬಕರ್ಣ*

ಪಾತ್ರಾಭಿನಯ
ನಮ್ಮ ರಾಜಕಾರಣಿಗಳಿಗೆ
ಕರತಲಾಮಲಕ
ಚುನಾವಣೆಯ ಮೊದಲು
ಎಲ್ಲರೂ ನಟಿಸುವರು
ದಾನಶೂರ ಕರ್ಣನಂತೆ
ಗೆದ್ದ ನಂತರ ಆಗುವರು
ಕುಂಬಕರ್ಣನಂತೆ

*೨*

*ಸಂತಸ*

ದಿನನಿತ್ಯದ ಜೀವನದಿ
ಅಪ್ಪ‌ ,ಅಮ್ಮ ಅಣ್ಣ ತಮ್ಮ
ವಿವಿಧ ಪಾತ್ರಗಳ ನಿರ್ವಹಣೆ
ಮಾಡಲೇಬೇಕು
ಏತಕೆ ಎಲ್ಲೆಡೆ ವಿರಸ
ಬಾಳೋಣ ಹಂಚಿ ಸಂತಸ

*೩*

*ವಿರಳ*

ಜಗದಲಿ ಬಹಳ
ಸಂತಸದ ಜನರಿರುವ
ದೇಶ ಭೂತಾನ
ಕಾರಣ ಅತೀ ಸರಳ
ಆ ದೇಶದಲಿ
ಹಣವೊಂದೇ ಸಂತಸ
ಎಂಬುವರು ವಿರಳ

*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*

14 ಮಾರ್ಚ್ 2019

ಸಿಹಿಜೀವಿಯ ಹನಿಗಳು (ಮೂತ್ರ ಪಿಂಡ ದಿನ ವಿಶೇಷ)

          *ಸಿಹಿಜೀವಿಯ ಹನಿಗಳು*

*೧*

*ಮೂತ್ರ ಪಿಂಡ*

ಅನವಶ್ಯಕ ಗುಳಿಗೆ
ನುಂಗದಿರಿ
ತೃಪ್ತಿಯಾಗುವಂತೆ
ನೀರು ಕುಡಿಯಿರಿ
ಆರೋಗ್ಯವಾಗಿರುವುದು
ಮೂತ್ರಪಿಂಡ
ಇಲ್ಲವಾದರೆ ಬೇಗ
ಇಡುವರು ಪಿಂಡ

(ಇಂದು ವಿಶ್ವ ಮೂತ್ರ ಪಿಂಡ ದಿನ)


*೨*

*ಫಲಿತಾಂಶ*


ಅತೃಪ್ತ ಮನಗಳ
ಕೊಂಕು ನುಡಿಗೆ
ಜಗ್ಗದೇ ಮುಂದಡಿ ಇಡು
ಆತ್ಮತೃಪ್ತಿಯಿಂದ
ಕಾಯಕಮಾಡು
ಜಗವೇ ನಿನ್ನೆಡೆ
ತಿರುಗುವುದು ನೋಡು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

13 ಮಾರ್ಚ್ 2019

ಸಿಹಿಜೀವಿಯ ಹನಿಗಳು

           *೧*

*ಮೆರೆಯುವೆ*

ಸಕಾಲಕ್ಕೆ ಸಕಲವ
ನೀಡುವ ಸರ್ವಶಕ್ತನ
ಮರೆಯುವೆ
ಸಲಿಲದ ಮೇಲಿನ
ಗುಳ್ಳೆ ಈ‌ ಜೀವನ
ಗೊತ್ತಿದ್ದರೂ ನೀ
ಮೆರೆಯುವೆ

*೨*

*ಜಾಗೃತವಾಗು*

ನಿನಗಿಂತ ಇತರರು
ಸುಂದರ ,ಬಲಿಷ್ಠ
ಸಿರಿವಂತ ಧೀಮಂತ
ಎಂದು ಕೊರಗಬೇಡ
ನಿನ್ನಲೇ ಸಕಲವಿದೆ
ಜಾಗೃತವಾಗು ನೀ
ಕೀಳರಿಮೆ ಬೇಡ

*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*



08 ಮಾರ್ಚ್ 2019

ಮಹಿಳಾ ಸಬಲೀಕರಣ?(ಕವನ)

       
*ಮಹಿಳಾ ಸಬಲೀಕರಣ?*


ಇತ್ತೀಚಿನ ದಿನಗಳಲ್ಲಿ
ಮಹಿಳಾ ಸಬಲೀಕರಣವಾಗಿದೆ
ಆಗೊಮ್ಮೆ ಈಗೊಮ್ಮೆ
ಮಹಿಳಾಪರ ಘೋಷಣೆ ಕೇಳುತ್ತಿದೆ.


ಶಾಸನ ಸಭೆಗಳಲಿ
ಮಹಿಳೆಯರಿಗೆ ಮೀಸಲಾತಿ
ದೊರೆತಿದೆ ಜಿಲ್ಲಾ ,ತಾಲೂಕು ಗ್ರಾಮ ಪಂಚಾಯತಿಗಳಲಿ ಮಹಿಳಾ ಪ್ರತಿನಿಧಿಗಳು ಇದ್ದಾರೆ.
ಸಭೆ ಸಮಾರಂಭಗಳಲ್ಲಿ ಮಾತ್ರ
ಅವರ ಗಂಡಂದಿರು ಭಾಗವಹಿಸುತ್ತಾರೆ.
ಹೌದು ಮಹಿಳಾ ಸಬಲೀಕರಣವಾಗಿದೆ.!


ಮನೆಯಲ್ಲದೆ  ಹೊರಗೂ
ಮಹಿಳೆಯರು ದುಡಿಯುತ್ತಿದ್ದಾರೆ.
ಎ ಟಿ‌ ಎಮ್  ಕಾರ್ಡ್‌ ಮಾತ್ರ
ಅವರ  ಗಂಡಂದಿರ ಬಳಿ ಇದೆ.
ಹೌದು ಮಹಿಳಾ ಸಬಲೀಕರಣವಾಗಿದೆ!

ಅವಳೆಂದರೆ ಸರ್ವಶಕ್ತೆ
ಎಲ್ಲಾ ರಂಗದಲ್ಲಿಯೂ
ಮಹಿಳೆಯರು ಮುಂದೆ ಬರುತ್ತಿದ್ದಾರೆ
ಎಲ್ಲದರಲ್ಲೂ ‌ಪ್ರಮುಖ
ನಿರ್ಧಾರ ತೆಗೆದುಕೊಳ್ಳುವುದು ಮಾತ್ರ ಗಂಡಸರು.
ಹೌದು ಮಹಿಳಾ ಸಬಲೀಕರಣವಾಗಿದೆ!

*ಸಿ‌.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಕನ್ನಡ ಪ್ರೀತಿ (ನ್ಯಾನೋ ಕಥೆ)

           *ಕನ್ನಡ ಪ್ರೀತಿ*

"ಅಪ್ಪಾ ಈ ‌ಕನ್ನಡ ಪದ್ಯ ನಮ್ಮ ಮಿಸ್ಸು ಶಾಲೆಯಲ್ಲಿ ಹೇಳಿಕೊಟ್ಟಿದ್ದು  ಸರಿಯಾಗಿ ಅರ್ಥ ಆಗಿಲ್ಲ ಸ್ವಲ್ಪ ಹೇಳಿಕೊಡಪ್ಪ " ಎಂದು ಐದನೇ ತರಗತಿ ಓದುವ ಸುಷ್ಮಿತ ಪ್ರೀತಿಯಿಂದ ಕೇಳಿದಾಗ " ನನಗೆ ಅಖಿಲಭಾರತ ಸಾಹಿತ್ಯ ಸಮ್ಮೇಳನಕ್ಕೆ ಹೊರಡಲು ಸಮಯವಾಗಿದೆ ನಿನ್ನಮ್ಮ ಅಥವಾ ಪಕ್ಕದ ಮನೆಯವರ ಹತ್ತಿರ ಹೇಳಿಸಿಕೋ ಚಿನ್ನು ಬಾಯ್ " ಎಂದು ಬ್ಯಾಗ್ ತಗಲಾಕಿಕೊಂಡು  ಹೊರಟೇಬಿಟ್ಟರು ರಾಯರು.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

07 ಮಾರ್ಚ್ 2019

ಶುಕ್ರದೆಸೆ( ಕವನ)

         *ಶುಕ್ರದೆಸೆ?*


ಮೊಟ್ಟೆಯಿಂದ ಹೊರಬಂದು
ಜೀವತಳೆದಾಗ ಏನೋ ಆನಂದ
ಮಿಲಿ ಮೀಟರ್ ಗಾತ್ರದ
ಜೀವಿಗೆ ಸೊಪ್ಪು ಹಾಕಿದ
ದಣಿಯ ನೆನೆದು
ಸಂತಸಸಗೊಂಡು
ಮೇಯುತ ಪೊರೆಬಿಡುತ
ಜೀವನ ಮುಂದುವರೆಯಿತು.

ಜ್ವರದಿಂದ ಜ್ವರಕೆ
ಬೆಳೆಯುತ
ಮಿಲೀಮೀಟರ್ ಸೆಂಟಿಮೀಟರ್
ಆದದ್ದು ತಿಳಿಯಲೇ ಇಲ್ಲ
ನಾಲ್ಕನೇ ಜ್ವರ ದಾಟಿ
ಹಣ್ಣಾಗಿ ಬಂಗಾರದ ಬಣ್ಣ
ಕಂಡು ಮೈಪುಳಕ.

ಶುಕ್ರ ದೆಸೆ ಬಂತೆಂದು
ಬಂಗಾರದೆಳೆಯ ಗೂಡು
ಕಟ್ಟುತ ಸ್ವಂತ ನೆಲೆಗೆ ಸೇರಿದ
ಅನುಭವ ಒಳಗೊಳಗೆ
ನೆಮ್ಮದಿಯ ಭಾವ
ಚಿಟ್ಟೆಯಾಗಿ ಹಾರುವೆನೆಂದು
ನೂರಾರು ಮೈಲು ಹಾರುವೆನೆಂದು
ಸಾವಿರಾರು ಕನಸು ಕಾಣತಿರಲು

ಮಾರನೆಯ ದಿನ
ರೀಲರ್ ರೇಷ್ಮೆಯ ಗೂಡನು
ಬಿಸಿನೀರಿನಲಿ ಕುದಿಸಿ
ನೂಲು ತೆಗೆಯುವಾಗ
ಪ್ರಾಣಪಕ್ಷಿ ಹಾರಿಹೋಗುದೆಂದು
ಪಾಪ ರೇಷ್ಮೆ ಹುಳುವಿಗೆ
ತಿಳಿದಿರಲಿಲ್ಲ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


ಠೀವಿ ( ಕವನ)

          
   *ಠೀವಿ*

ನೀನಿರದೇ ಏನೋ
ಕಳೆದುಕೊಂಡಂತೆ
ನೀರಿರದ ಮೀನಿನಂತೆ
ನಿನ್ನನೇಕೋ ಬಹಳ
ಮೆಚ್ಚಿಕೊಂಡು ಹಚ್ಚಿ ಕೊಂಡೆ
ನೀ ಬಂದ ಮೇಲೆ ಬಂಧು
ಬಾಂಧವರ ಕಳೆದುಕೊಂಡೆ
ಮನೆಯವರ ಪ್ರೀತಿಸುವುದ
ಮರೆತೆ

ನಮ್ಮನೆಯವರು ಹಾಗೆ
ನೀನಿಲ್ಲದೆ ಅರೆಕ್ಷಣ
ಬದುಕಲಾರರು
ನೀನಾಗಿರುವೆ ಅವರ ಸಂಗಾತಿಯು
ನೀ ಮಾಡಿರುವುದು ಮಾಯೆಯೋ
ಮೋಡಿಯೋ ನಾ ಕಾಣೆ

ಇನ್ನೂ ಮಕ್ಕಳು ನೀನಿರದಿದ್ದರೆ
ಊಟ ತಿಂಡಿ ಮಾಡಲ್ಲ
ನಿನ್ನ ಒಮ್ಮೆ ನೋಡಿದರೆ
ಮತ್ತೆ ನೋಡವ ಕಾತರ
ಅವರಲಿ ಓದಲು ಆಸಕ್ತಿ ಇಲ್ಲ
ಏಕಾಗ್ರತೆ ಇಲ್ಲವೇ ಇಲ್ಲ
ಹಗಲು ರಾತ್ರಿಯ ಪರಿವೆಇಲ್ಲ
ನಿದ್ರೆ ಏರುಪೇರಾಗಿದೆಯಲ್ಲ .

ನಿನ್ನ ನೋಡುತಾ ಕುಂತಲ್ಲೆ
ಕುಂತು ಹೆಚ್ಚಾಗಿದೆ ದೇಹದ
ಸುತ್ತಳತೆಯ
ಇತ್ತೀಚೆಗೆ ತೂಕದ ಯಂತ್ರ
ಹೇಳಿತು ನಿಂದು ಅತಿಯಾಯಿತು.

ನೀನು ಕುಂತಲ್ಲೆ ಬುದ್ದಿವಂತನಂತೆ
ನಟಿಸಿ ನಮ್ಮನ್ನೆಲ್ಲಾ ಮೂರ್ಖರಂತೆ
ಮಾಡುವ ಟೀವಿಯೇ ಎಷ್ಟು
ಹೇಳಿದರೂ ಮುಗಿಯದು
ನಿನ್ನ ಠೀವಿ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*







ಅಭಿನಂದನೆಎ(ಅಭಿನಂದನ್ ಗೆ)

            *ಅಭಿನಂದನೆ*

ವಂದನೆ
ನಿನಗೆ ಅಭಿನಂದನೆ
ಭಾರತಾಂಬೆಯ ಕಂದನೆ
ಶತೃಗಳ ನಡುಗಿಸಿದವನೆ
ಪಾಪಿಗಳ ವಿರುದ್ದ ಗುಡುಗಿದವನೆ
ಸ್ಬಾಗತವು ನಿನಗೆ ತಾಯ್ನೆಲಕೆ
ನಮ್ಮಯ ಹೃದಯ ಮಂದಿರಕೆ
ನೀನೆಂದಿಗೂ ಮಹಾನ್
ನಿನ್ನ ಮರೆಯಲ್ಲ *ಅಭಿನಂದನ್*

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

ಅರಿಯಬೇಕಿದೆ (ಕವನ)

*ಅರಿಯಬೇಕಿದೆ*

ಪ್ರಾಮಾಣಿಕತೆ ಶಾಂತಿ ಸಹಕಾರ ದಯೆ
ಎಲ್ಲಿವೆ  ದುರ್ಬೀನು ಹಾಕಿ ಹುಡುಕಬೇಕಿದೆ
ಕಳೆದ ದಿನಗಳ ಗತ ಕಾಲ ಮರಳಬೇಕಿದೆ
ಮೌಲ್ಯಗಳ ಎಲ್ಲರೂ ಪಾಲಿಸಬೇಕಿದೆ.

ಬರೀ ಗಂಡು ಹೆಣ್ಣಿನ ಆಕರ್ಷಣೆ
ಸಂಕುಚಿತ ಅರ್ಥದ ಕಾಮವೇ
ಪ್ರೀತಿಯಲ್ಲ ಪ್ರತಿಫಲಾಪೇಕ್ಷೆ ಇಲ್ಲದೇ
ಸಕಲರ ಪ್ರೀತಿಸುವ ಮೌಲ್ಯ ಇಂದು ಎಲ್ಲರೂ ಕಲಿಯಬೇಕಿದೆ

ಪ್ರಾಣಿ ಪಕ್ಷಿಗಳ ಹಿಂಸೆ ಎಲ್ಲೆಡೆ
ಪ್ರಾಣಿಗಳು ನಿಕೃಷ್ಟ ಎಂಬ ನಡೆ
ಭುವಿ ಕೇವಲ ಮಾನವನದಲ್ಲ
ದುರಾಸೆಯಿಂದ ಮೆರೆಯುತಿಹನಲ್ಲ
ದಯವಿಲ್ಲ ಸಕಲ ಜೀವಿಗಳಲಿ
ಕರುಣೆಯ ಮೌಲ್ಯವ ಪಾಲಿಸಬೇಕಿದೆ.

ಅಸಹನೆಯಿಂದ ಕುದಿಯುತಿದೆ ಜಗ
ಅನಾಹುತಗಳು ಸಾಮಾನ್ಯ ಆಗಾಗ
ಸಹನೆಯ ಮೂರ್ತಿ ನಮ್ಮಮ್ಮನಿಂದ ಕಲಿಯಬೇಕಿದೆ
ಭೂತಾಯಿಯ ಸಹನಾ ಮೌಲ್ಯ ಅರಿಯಬೇಕಿದೆ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*





06 ಮಾರ್ಚ್ 2019

ವಿಚಾರಣೆ (ಸಣ್ಣ ಕಥೆ)

               ಸಣ್ಣ ಕಥೆ

*ವಿಚಾರಣೆ*

ಈ ಮೊಬೈಲ್ ಯುಗದಲ್ಲಿ
ಅಪರೂಪಕ್ಕೊಮ್ಮೆ ಲ್ಯಾಂಡ್ ಲೈನ್ ರಿಂಗ್ ಆದಾಗ ಮುಖ್ಯ ಶಿಕ್ಷಕರಾದ ಮಾರುತಿಯವರು ರಿಸೀವರ್ ಎತ್ತಿ ಹಲೋ ಎಂದು
"ರೀ ತಿಮ್ಮಯ್ಯ ಆ ರಮೇಶ್ ಮಾಸ್ಟರ್‌ ನಂತೆ ಕರೀರಿ ಅವರಿಗೆ ಪೋನ್ ಇದೆ " ಎಂದು ರಾಮಣ್ಣನಿಗೆ ಹೇಳಿದರು.
ರಮೇಶ್‌ ಮಾಸ್ಟರ್ ಬಂದು ಹಲೋ ಎಂದು ರಿಸೀವರ್ ಗೆ ಕಿವಿಗೊಡುತ್ತಲೇ ಆ ಕಡೆಯಿಂದ ಬಂದ ಗಡಸು ಧ್ವನಿ " ನಾನು ಬಾಗಲಕೋಟೆ ಎಸ್.ಪಿ ಆಪೀಸ್ ನಿಂದ ಮಾತನಾಡುತ್ತಾ ಇದ್ದೇನೆ" ಎಂದಿತು  ಈ ಮಾತು ಕೇಳುತ್ತಲೇ ಸಣ್ಣಗೆ ಬೆವರಲು ಆರಂಬಿಸಿದ ರಮೇಶ್ ಭಯದಿಂದ "ಯಾಕೆ ಸರ್" ಎಂದ ಅದನ್ನೆಲ್ಲ ಡಿಟೈಲ್ ಆಗಿ ಹೇಳ್ತಿನಿ ಮೊದಲು ನಿಮ್ಮ ಮೊಬೈಲ್ ನಂಬರ್ ಹೇಳಿ " ಎಂದಿತು‌ ಧ್ವನಿ ತೊದಲುತ್ತಲೇ ಮೊಬೈಲ್ ನಂಬರ್ ಹೇಳಿದ ನಂತರ ಫೋನ್ ಕಟ್ ಆಯಿತು.
"ಯಾರ್ರಿ ಅದು‌"ಎಂದರು ಮುಖ್ಯ ಶಿಕ್ಷಕರು "ಗೊತ್ತಿಲ್ಲ ಸಾರ್ ಆಮೇಲೆ ಮಾಡ್ತಾರಂತೆ" ಎಂದು ಭಯದಿಂದ ಮತ್ತು ಚಿಂತಿಸುತ್ತಾ ಸ್ಟಾಪ್ ರೂಮ್ ಗೆ ಹೋಗಿ ಮೊಬೈಲ್ ಗೆ ಕರೆ ಯಾವಾಗ ಬರುವುದೋ? ಏನು ಕಾದಿದೆಯೋ ?ಎಂದು ಗಲ್ಲಕ್ಕೆ ಕೈಹೊತ್ತು ಚಿಂತಿಸುತ್ತಾ ಕುಳಿತರು.

ತಲೆಯಲ್ಲಿ ಏನೋನೋ ಕೆಟ್ಟ ವಿಚಾರಗಳು ದುತ್ತೆಂದು ಬಂದು ಕಾಡಲಾರಂಬಿಸಿದವು ಬೆಳಿಗ್ಗೆ ದಿನಪತ್ರಿಕೆಗಳಲ್ಲಿ " ವಾಟ್ಸಪ್ ಅವಹೇಳನ ಗುಂಪಿನ ಅಡ್ಮಿನ್ ಸರ್ಕಾರಿ ನೌಕರನ  ಬಂಧನ" ಎಂದು ಓದಿದ್ದು ನೆನಪಾಗಿ
ಪೋಲೀಸ್ ಬಂದು‌ ನನ್ನ ‌ಅರೆಸ್ಟ್ ಮಾಡಿದರೆ ನನ್ನ ಮರ್ಯಾದೆ ಏನಾಗಬೇಡ? ಎಂದು  ತಾನು ಅಡ್ಮಿನ್ ಆಗಿರುವ ಗುಂಪು ತೆರೆದು ನೋಡಿದ ಯಾವುದೇ ಅಂತಹ ಪೋಸ್ಟ್ ಇರಲಿಲ್ಲ. ಕೊಂಚ ಸಮಾಧಾನವಾಯಿತು.ಆದರೂ ಯಾಕೆ ಎಸ್ ಪಿ ಆಫೀಸ್‌ ನಿಂದ ಪೋನ್ ಬಂತು ?ಎಂದು ಯೋಚಿಸುತ್ತಿರುವಾಗ ಬೆಳಿಗ್ಗೆ ತನ್ನ  ಪೇಸ್ ಬುಕ್ನ ಗೋಡೆಯಲ್ಲಿ "ಪಾಪಿ ಪಾಕಿಗಳೆ ನಮ್ಮ ಕೆಣಕಿದ್ದೀರಿ ನಿಮಗಿದೆ ಗತಿ " ಎಂದು ಸ್ಟೇಟಸ್ ಹಾಕಿದ್ದಾಗ ಗೆಳೆಯ ಜಬಿ ಆ ರೀತಿಯಲ್ಲಿ ಪೋಸ್ಟ್ ಮಾಡುವುದು ಒಳಿತಲ್ಲ‌ಎಂದಿದ್ದ ಅದೇ ಏನಾದರೂ ತಪ್ಪಾಯಿತೇ? ಛೆ ಇನ್ನು ಮುಂದೆ ಈ ವಾಟ್ಸಪ್, ಪೇಸ್ಬುಕ್  ಟ್ವಿಟರ್ ಸಹವಾಸ ಬೇಡ ನಾಳೆಯೇ ಎಲ್ಲಾ ಅನ್ಇನ್ಸ್ಟಾಲ್ ಮಾಡಿ ನೆಮ್ಮದಿಯಾಗಿರಬೇಕು  ಎಂದು ಭಯದಿಂದ ಏನೋನೋ ಯೋಚಿಸುತ್ತಾ .ಆ ಪೋನ್ಗೆ ಕಾಯ್ತಾ ಕುಳಿತರು ಇತರ ಸಹೋದ್ಯೋಗಿಗಳು "ಯಾಕ್ ಸರ್ ಡಲ್ ಆಗಿದ್ದೀರಿ" ಎಂದಾಗ ಏನೂ ಇಲ್ಲ ಎಂದು ನಟಿಸಲು ಪ್ರಯತ್ನ ಪಟ್ಟರು.

ಮೊಬೈಲ್ ಪೋನ್ ರಿಂಗಾಯಿತು ಭಯದಿಂದ ಪೋನ್ ರಿಸೀವ್ ಮಾಡಿದ ರಮೇಶ್ ಹಲೋ ಎಂದರು . ಆ ಕಡೆಯಿಂದ " ನಾನು ಬಾಗಲಕೋಟೆ ಎಸ್ .ಪಿ‌ ನನ್ನ ಮಗಳಿಗೆ ಗಂಡು ಹುಡುಕುತ್ತಾ ಇದ್ದೇವೆ ಚಿಕ್ಕಬಳ್ಳಾಪುರ ದಲ್ಲಿ ನಮ್ಮ ಜಾತಿಯ ಒಳ್ಳೆಯ ವರ ಇರುವನಂತೆ ನಿಮ್ಮ ಸ್ನೇಹಿತರಾದ ಅಮರಾವತಿ ತಿರುಪತಿ ರವರು ನಿಮ್ಮ ಶಾಲೆಯ ನಂಬರ್ ಕೊಟ್ಟು ನಿಮ್ಮ ಹೆಸರು ಹೇಳಿದರು ದಯವಿಟ್ಟು ಆ ವರನ ಬಗ್ಗೆ ಮಾಹಿತಿ ಕಲೆ ಹಾಕಿ ಹೇಳಿದರೆ ಮಹದುಪಕಾರವಾಗುತ್ತದೆ " ಎಂದರು.
ರಮೇಶ್ಗೆ  ಹೋದ ಜೀವ ಬಂದಂತಾಯಿತು .ತನ್ನ ಸ್ನೇಹಿತನ ಬೈದುಕೊಂಡು ಆಯ್ತು ಸರ್ ಪೋನ್ ಮಾಡುವೆ ಎಂದು ಪೋನ್ ಕಟ್ ಮಾಡಿ ಸೀಮೇ ಸುಣ್ಣ ತೆಗೆದುಕೊಂಡು ತರಗತಿಗೆ ಹೊರಟರು.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

05 ಮಾರ್ಚ್ 2019

*ಅಮರ ಪ್ರೇಮಿಗಳಾಗೋಣ (ಕವನ)

                    *ಅಮರ ಪ್ರೇಮಿಗಳಾಗೋಣ*

ಬಾರೆ ದೂರಕೆ ಹೋಗೋಣ
ಹೋಗಿ ಕುಣಿದು ನಲಿಯೋಣ
ಯಾರೂ ಇಲ್ಲದ ತಾಣಕೆ ಹೋಗಿ
ಮಧುಚಂದ್ರವ ಆಚರಿಸೋಣ

ಚಂದಿರನೂರಿಗೆ ಹೋಗೋಣ
ತಂಪಿನ‌ ನಾಡಲಿ ಕುಣಿಯೋಣ
ಬೆಳದಿಂಗಳ ಬೆಳಕಲಿ‌ ನಲಿಯೋಣ
ಪ್ರೇಮದ‌ ತೋರಣ ಕಟ್ಟೋಣ

ತಾರೆಗಳೂರಿಗೆ ಜಿಗಿಯೋಣ
ಜಗ ಮಗ ಬೆಳಕಲಿ‌ ಮಿಂಚೋಣ
ತಾರಾ ಮೆರಗನು ಪಡೆಯೋಣ
ಒಲವಿನ‌ ಸಿಹಿಯನು ಸವಿಯೋಣ

ಸ್ವರ್ಗಕ್ಕೆ ಹಾರಿ ಜಿಗಿಯೋಣ
ಕಲ್ಪವೃಕ್ಷವ ನೋಡೋಣ
ಪ್ರೇಮದ ವರವನು ಪಡೆಯೋಣ
ಅಮರ ಪ್ರೇಮಿಗಳಾಗೋಣ

*ಸಿ .ಜಿ ವೆಂಕಟೇಶ್ವರ*
*ಗೌರಿಬಿದನೂರು*




04 ಮಾರ್ಚ್ 2019

ನೀರು (ಕವನ)

       *ನೀರು*

ಎಲ್ಲೆಡೆ ಘೋಷಣೆ
ಮನೆಗೊಂದು ಮರ
ಊರಿಗೊಂದು ವನ.
ಬರೀ ಘೋಷಣೆ ಅಲ್ಲ
ಇದು ಜಾರಿಗೆ ಬಂದಿದೆ
ಕಾಡಿನ ಒಂದು ಮರ
ಕಡಿದರೆ ಮೂರು ನೆಟ್ಟರು.

ಮರಳು ಗಣಿಗಾರಿಕೆ
ಸಂಪೂರ್ಣ ಸ್ತಬ್ಧ
ಸಕಾಲಕ್ಕೆ ಮಳೆ ಬಂದು
ಕೆರೆ ಕಟ್ಟೆ ತುಂಬಿವೆ
ಒರತೆ ತೋಡಿದರೆ
ಕುಡಿವ ನೀರು ಲಬ್ಯ

ಸಸ್ಯ ಪ್ರಾಣಿ ಸಂಕುಲಗಳು
ಸಮೃದ್ಧಿಯಿಂದ ಜೀವಿಸುತ್ತಿವೆ
ಜೀವಿಗಳಿಗೆ ಜಲ ಅಪಾರವಾಗಿದೆ
ಅಕ್ಷರಶಃ ಜೀವಜಲ

ರಾಜ್ಯಗಳು ನೀರಿಗಾಗಿ
ಕಚ್ಚಾಡುತ್ತಿಲ್ಲ ಬಡಿದಾಡುತ್ತಿಲ್ಲ
ಎಲ್ಲರೂ ಸಮರಸದಿಂದ ಸಹಬಾಳ್ವೆ
ಮಾಡುತ್ತಿದ್ದಾರೆ .
ಎಷ್ಟೋ ದೇಶಗಳ ಜಲವಿವಾದಗಳು
ಬಗೆಹರಿದಿವೆ.
ವಿಶ್ವ ಶಾಂತಿಗೆ ಮುನ್ನುಡಿ
ಬರೆದಿದೆ.
ಇದರ ಫಲಶೃತಿ ಜಗದಾನಂದ .

ರೀ ಕುಡಿಯಾಕೆ ನೀರಿಲ್ಲ
ಎದ್ದೇಳ್ರಿ ಎಂದು ನನ್ನವಳು
ಕೂಗಿದಾಗ ಎದ್ದು ಖಾಲಿ
ಬಿಂದಿಗೆ ತೆಗೆದುಕೊಂಡು
ಮೂರು ಕಿಲೋಮೀಟರ್
ದೂರಕ್ಕೆ ಹೋಗಿ
ನೀರು ತರಲು ಅಣಿಯಾದೆ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*




ಶಿವ ಶಿವ ಎನ್ನೋಣ (ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು)

   *ಶಿವ ಶಿವ ಎನ್ನೋಣ*

ಶಿವ ಶಿವ ಎನ್ನೋಣ
ಹರ ಹರ ಎನ್ನೋಣ

ಅಣ್ಣಾಮಲೆಯಲಿ ನೆಲೆಸಿರುವ
ಅರುಣಾಚಲೇಶ್ವರಗೆ
ಶಿವ ಶಿವ ಎನ್ನೋಣ

ಗೋಕರ್ಣದಲಿ‌ ಹರಸುತಿಹ
ಗೋಕರ್ಣೇಶ್ವರಗೆ
ಹರ ಹರ ಎನ್ನೋಣ

ಧರ್ಮಸ್ಥಳದಲಿ ನೆಲೆಸಿರುವ
ಮಜುನಾಥ ಸ್ವಾಮಿಗೆ
ಶಿವ ಶಿವ ಎನ್ನೋಣ

ವಾರಣಾಸಿಯಲಿ ನಿಂತಿರುವ
ಕಾಶಿವಿಶ್ವೇಶ್ವರನಿಗೆ
ಹರ ಹರ ಎನ್ನೋಣ

ಶ್ರೀಶೈಲದ ನೆಲೆಸಿರುವ
ಮಲ್ಲಿನಾಥ ಸ್ವಾಮಿಗೆ
ಶಿವ ಶಿವ ಎನ್ನೋಣ

ಕಠ್ಮಂಡುವಲಿ‌ ನಿಂತಿರುವ
ಪಶುಪತಿನಾಥಗೆ
ಹರ ಹರ ಎನ್ನೋಣ



*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*