28 ಫೆಬ್ರವರಿ 2025

ಕಂಬನಿಯ ಕುಯಿಲು ಪುಸ್ತಕ ಪರಿಚಯ.


 


ಕಂಬನಿಯ ಕುಯಿಲು..


ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಶಾ ಮಂ ಕೃಷ್ಣ ರಾಯರವರ ಸಂಪಾದಕತ್ವದ ತ ರಾ ಸು ಸಾಹಿತ್ಯ ಸಂಪದ ಸಂಪುಟ ಒಂದರ ಐತಿಹಾಸಿಕ ಕಾದಂಬರಿಗಳ ಸೆಟ್ ನಲ್ಲಿ ಮೂರು ಕಾದಂಬರಿಗಳಲ್ಲಿ.   ಎರಡನೇ ಕಾದಂಬರಿ "ಕಂಬನಿಯ ಕುಯಿಲು" ಕಾದಂಬರಿಯನ್ನು ಶಿವರಾತ್ರಿ ಜಾಗರಣೆ ಮಾಡುತ್ತಾ ಓದಿದೆ.


ಮದಕರಿನಾಯಕರ ಮರಣದ ಶೋಕದಿಂದ ಮೊದಲುಗೊಳ್ಳುವ ಕಾದಂಬರಿಯು ಗೌರವ್ವನಾಗತಿಯು ತನ್ನ ಹಠದಿಂದಾಗಿ ಸಹಗಮನಕ್ಕೆ ಸಿದ್ದವಾಗಿರುವ ಹಿರಿಯ ಓಬವ್ವನಾಗತಿಯ ಮೇಲೆ ದುರ್ಗದ ಭವಿಷ್ಯದ ಭಾರ ಹಾಕಿ ತಾನು ಸಹಗಮನ ಮಾಡುತ್ತಾಳೆ. ಇಹಲೋಕದ ಬಂಧನಗಳಿಂದ ಮುಕ್ತಳಾಗಿ ಸ್ವರ್ಗ ಸೇರುವ ಆತುರದಲ್ಲಿದ್ದ ಓಬವ್ವನಾಗತಿಗೆ ಬಿದ್ದ ಕರ್ತವ್ಯ ನಿರ್ವಹಿಸುವಾಗ ಇನ್ನೇನು ಎಲ್ಲಾ ತಾವಂದುಕೊಂಡಂತೆ   ಮದಕರಿನಾಯಕರ   ಆಸೆಯ ಈಡೇರಿಕೆಯಾಯಿತು ಎನ್ನುವಾಗ ಬರುವ ವಿವಿಧ ವಿಘ್ನಗಳನ್ನು ಭುವನಪ್ಪ, ಕಸ್ತೂರಿ ನಾಯಕ, ಗಿರಿಜೆ ಮುಂತಾದವರ ಬೆಂಬಲದಿಂದ ಚಾಕಚಕ್ಯತೆಯಿಂದ ನಿಭಾಯಿಸಿದರೂ ಕೊನೆಗೆ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡದ್ದು ಓದುವಾಗ ಕಂಬನಿ ಬೀಳುತ್ತದೆ.

 

ಲಿಂಗಪ್ಪನಾಯಕರ ಮಾತೃಪ್ರೇಮ, ತ್ಯಾಗಗಳ ಬಗ್ಗೆ ಓದುವಾಗ ಮನ ನೋಯುತ್ತದೆ. ಭುವನಪ್ಪನವರಿಗೆ ದುರ್ಗದ ಮೇಲಿರುವ ಅಪಾರ ನಿಷ್ಠೆಯಿಂದ ಆಗಲಿರುವ ಅನಾಹತ  ತಪ್ಪಿಸಲು ಶತಾಯಗತಾಯ ಪ್ರಯತ್ನ ಮಾಡುವ ಜೊತೆಯಲ್ಲಿ ತನ್ನ  ಪ್ರಧಾನಿ ಹುದ್ದೆಯನ್ನು ರಾಜ್ಯದ ಒಳಿತಿಗಾಗಿ ತ್ಯಾಗ ಮಾಡಿದರೂ ಕೊನೆಗೆ ತಮ್ಮ ಕೈ ಮೀರಿ ಒಳಶತೃಗಳ ಪಿತೂರಿಗೆ ಪ್ರಾಣ ಅರ್ಪಿಸಿದ್ದನ್ನು ಓದುವಾಗ ಕಂಬನಿ ಹನಿಯುತ್ತದೆ.

  ನ್ಯಾಯದ ಹೆಸರಿನಲ್ಲಿ ದ್ವೇಷ,ಕಠೋರತೆ, ಹಠಗಳೇ ರೂಪವೆತ್ತಂತೆ ನಿಲ್ಲುವ ದಳವಾಯಿ ಮುದ್ದಣ್ಣ ಖಳನಾಯಕನ ಕುತಂತ್ರಗಳನ್ನು ಓದುವಾದ ಮೈ ಉರಿಯುತ್ತದೆ.  ತನ್ನ ಅಸಮಾಧಾನದ ಸಣ್ಣ ಕಿಡಿಯಿಂದ ಆರಂಭವಾದ ಒಳಸಂಚು ದುರ್ಗವನ್ನೇ ದಹಿಸುವಾಗ ಅದನ್ನು ಹಿಡಿತಕ್ಕೆ ತರಲಾಗದೇ ತಾವೇ ಬೆಂದು ಮಾರಣಹೋಮಕ್ಕೆ ಮೊದಲ ಬಲಿಯಾಗುವ ದಳವಾಯಿ ದೇಸಣ್ಣನ ರುಂಡ ಎಗರುವಾಗ ಭಯವಾಗುತ್ತದೆ.

  ದುರ್ಗದ ಅಂತಃಕಲಹದಲ್ಲಿ ಕರ್ತವ್ಯ ನಿಷ್ಠೆಗೆ ಹೆಸರಾದ   ಗಿರಿಜವ್ವ ತದ್ವಿರುದ್ಧವಾದ ಗುಣಗಳ   ವೀರನಾಯಕನ ದುರಂತ ಅಂತ್ಯವನ್ನು ಓದುವಾಗ ನಮ್ಮ ಅಳು ತಡೆಯುವುದು ಕಷ್ಟ.

 ಕಸ್ತೂರಿನಾಯಕ ದುರ್ಗದ ನಾಯಕರ ಪ್ರಾಣ ರಕ್ಷಣಾ ಕವಚ.ಆದರೂ ನಾಯಕರ ಸಾವಿನ ಸುದ್ದಿ ತಿಳಿದು ತನ್ನ ಆತ್ಮಹುತಿ ಮಾಡಿಕೊಳ್ಳುವುದು ನೋಡಿ ಮನ ಮಿಡಿಯುತ್ತದೆ. 

ಈ ಕಾದಂಬರಿ ಓದುವಾಗ  ರಾಜ್ಯ, ಅರಮನೆ, ವೈಭವ, ಅಧಿಕಾರಗಳ ಬಗ್ಗೆ ಜಿಗುಪ್ಸೆ ಮೂಡಿಸುತ್ತದೆ.  

ಕಾದಂಬರಿ ಓದಿ ಮುಗಿಸಿದ ಎರಡು ಮೂರು ದಿನ ಒಂದು ರೀತಿಯ ಬೇಸರ ಆವರಿಸುವುದು ಸತ್ಯ. ಅಷ್ಟು ಪರಿಣಾಮಕಾರಿಯಾಗಿ ದುರ್ಗದ ಇತಿಹಾಸದ ಹಿನ್ನೆಲೆಯಲ್ಲಿ ಕಾದಂಬರಿ ರಚಿಸಿದ   ತ ರಾ ಸು ರವರ ಪ್ರತಿಭೆಯನ್ನು ಎಷ್ಟು ಹೊಗಳಿದರೂ ಸಾಲದು. ಅವರ ಮತ್ತೊಂದು ಕಾದಂಬರಿ "ರಾಜ್ಯ ದಾಹ " ಓದಿ ಮತ್ತೆ ಸಿಗುತ್ತೇನೆ

ಧನ್ಯವಾದಗಳು

ನಿಮಗೆ ತ ರಾ ಸು ರವರ ಯಾವ ಕಾದಂಬರಿ ಇಷ್ಟ ಎಂದು ಹೇಳಬಹುದು.


ಸಿಹಿಜೀವಿ ವೆಂಕಟೇಶ್ವರ


27 ಫೆಬ್ರವರಿ 2025

ಜ್ಞಾನಾಮೃತ ಉಣಬಡಿಸಲು ಸಿದ್ಧವಾಗುತ್ತಿರುವ ಶಿವಶರಣರ ವಚನಾಮೃತ ಮಂಟಪ.

 




ಜ್ಞಾನಾಮೃತ ಉಣಬಡಿಸಲು ಸಿದ್ಧವಾಗುತ್ತಿರುವ   ಶಿವಶರಣರ ವಚನಾಮೃತ ಮಂಟಪ.


ಪುರಾತನ ಕಾಲದಿಂದಲೂ ದೇವಾಲಯಗಳು ಭಕ್ತಿಯ ಸ್ಥಳಗಳೂ ಆಗಿ ಕೆಲವೊಮ್ಮೆ ಮನರಂಜನಾ ತಾಣಗಳಾಗಿಯೂ ಗುರುತಿಸಲ್ಪಟ್ಟಿದ್ದವು.ದೇವಾಲಯಗಳಲ್ಲಿ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ಹಿಂದಿನ ಕಾಲದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದವು.ಮನರಂಜನಾ ಪರಿಕಲ್ಪನೆ ಮತ್ತು ವ್ಯಾಪ್ತಿ ಬದಲಾದ ಕಾಲಘಟ್ಟದಲ್ಲಿ ಮನರಂಜನೆಗೆ ಇತರೆ ಮಾಧ್ಯಮಗಳ ಭರಪೂರ ಬೆಳವಣಿಗೆಯ ನಂತರ ದೇವಾಲಯಗಳು ಕೇವಲ ಭಕ್ತಿಯ ತಾಣಗಳಾದವು.ಕೆಲ ದೇವಾಲಯಗಳು ಜ್ಞಾನ ಪಸರಿಸುವ ತಾಣಗಳಾಗಿ‌‌ ಹಿಂದಿನಿಂದಲೂ ಕಾರ್ಯನಿರ್ವಹಿಸುತ್ತಿದ್ದವು. ಅಲ್ಲಿ ವೇದ,ಉಪನಿಷತ್ ಮುಂತಾದವುಗಳ  ಕಲಿಕೆ  ನಡೆಯುತ್ತಿತ್ತು. ಈಗಲೂ ಕೆಲ ದೇವಾಲಯಗಳು ಜ್ಞಾನ ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.ಅಂತಹ ದೇವಾಲಯಗಳಲ್ಲಿ 





ಸಿದ್ದರಾಮೇಶ್ವರ75 ನೇ ಗದ್ದುಗೆಯಿರುವ ಬೆಳಗುಂಬದ ದೇವಾಲಯ ಭಕ್ತರ ಮತ್ತು ಜ್ಞಾನಾರ್ಥಿಗಳ ಗಮನ ಸೆಳೆಯುತ್ತಿದೆ.

ಆತ್ಮೀಯರು, ಸಹೋದ್ಯೋಗಿಗಳು ಹಾಗೂ  ಕಲಾವಿದರಾದ ಕೋಟೆ ಕುಮಾರ್ ರವರೊಂದಿಗೆ ಇತ್ತೀಚಿಗೆ ಈ ದೇವಾಲಯಕ್ಕೆ ಭೇಟಿ ನೀಡಿ ಕಳೆದ ವರ್ಷ ಜೀರ್ಣೋದ್ಧಾರಗೊಂಡ ದೇವಾಲಯದಲ್ಲಿ  ಸಿದ್ದರಾಮೇಶ್ವರ ಸ್ವಾಮಿಯ ದರ್ಶನ ಪಡೆದು ಹೊರಬಂದಾಗ  ನಮ್ಮನ್ನು ಸೆಳೆದ ಮಂದಿರವೇ "ಶಿವ ಶರಣರ ವಚನಾಮೃತ" ಎಂಬ ಹೆಸರಿನ ಈ ಕಿರುಮಂಟಪ.

ಇದನ್ನು ತುಮಕೂರಿನ ಶ್ರೀ ಜಗಜ್ಯೋತಿ   ಬಸವೇಶ್ವರ ಟ್ರಸ್ಟ್ ನವರು ನಿರ್ಮಿಸಿದ್ದಾರೆ. ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹಾಗೂ ಹಿರಿಯ ಗಾಂಧೀವಾದಿ ಶ್ರೀ ಎಂ  ಬಸವಯ್ಯರವರ ಮುಂದಾಳತ್ವದಲ್ಲಿ ಪೌಳಿಶಂಕರಾನಂದಪ್ಪ ಮುಂತಾದವರ ಸಕಾರಾತ್ಮಕ ಯೋಚನೆಯ ಫಲವಾಗಿ  ಒಂದು ಸುಂದರವಾದ ಜ್ಞಾನ ಮಂಟಪ ತಲೆ ಎತ್ತಿದೆ.ಎರಡು ಭಾಗದಲ್ಲಿ ಇರುವ ಈ ವಚನಾಮೃತ ಮಂಟಪದಲ್ಲಿ  ವಚನ ಪಿತಾಮಹ ಫ ಗು ಹಳಕಟ್ಟಿ ಅವರ ಭಾವಚಿತ್ರ ಇಟ್ಟು ಅವರಿಗೆ ಗೌರವ ಸೂಚಿಸಲಾಗಿದೆ. ಬಸವಣ್ಣನವರಾದಿಯಾಗಿ ಹನ್ನೆರಡನೆಯ ಶತಮಾನದಿಂದ ಆರಂಭವಾಗಿ ಇಪ್ಪತ್ತೊಂದನೇ ಶತಮಾನದ ಶರಣರೂ  ಸೇರಿದಂತೆ  ಒಟ್ಟು 64  ಶಿವಶರಣರ ವಚನಗಳು ನಮ್ಮನ್ನು ಇಲ್ಲಿ ಶರಣು ಬನ್ನಿ ಎನ್ನುತ್ತಾ ಸ್ವಾಗತಿಸುತ್ತವೆ. 

 ವಚನಾಮೃತ ಮಂಟಪವು ಅನುಭವ ಮಂಟಪದ ಹಾಗೆ ಗೋಚರಿಸುತ್ತದೆ. ಭಕ್ತಿ ಹಾಗೂ ಜ್ಞಾನದ ಸಂಗಮವಾದ ಇಂಥಹ ಮಂದಿರಗಳು ನಾಡಿನಾದ್ಯಂತ ಹೆಚ್ಚಾಗಲಿ ತನ್ಮೂಲಕ ಜಂಜಡದ ಈ ಕಾಲದಲ್ಲಿ  ಜನರಿಗೆ ಶಾಂತಿ ನೆಮ್ಮದಿಯ ಜೊತೆಯಲ್ಲಿ ಜ್ಞಾನ ಲಭಿಸಲಿ ಎಂದು ಕಲಾವಿದರಾದ ಕೋಟೆ ಕುಮಾರ್ ರವರು ಅಭಿಪ್ರಾಯ ಪಟ್ಟರು.



ಬಸವಣ್ಣ, ಚನ್ನಬಸವೇಶ್ವರ, ಅಕ್ಕಮಹಾದೇವಿ, ಎಡೆಯೂರು ಸಿದ್ಧಲಿಂಗೇಶ್ವರ,ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ, ಡೋಹರ ಕಕ್ಕಯ್ಯ, ಮಡಿವಾಳ ಮಾಚಿದೇವ, ಕೂಗಿನ ಮಾರಯ್ಯ, ಬಹುರೂಪಿ ಚೌಡಯ್ಯ, ಮರುಳ ಶಂಕರದೇವ, ಕುರುಬ ಗೊಲ್ಲಾಳ, ಕಲ್ಬುರ್ಗಿ ಸಂಗನ ಬಸವೇಶ್ವರ, ಮಾತೆ ಮಹದೇವಿ, ಉದ್ದಾನೇಶ್ವರ  ಶಿವಯೋಗಿಗಳು, ಹಾನಗಲ್ ಕುಮಾರ ಸ್ವಾಮಿ, ಸರ್ವಜ್ಞ, ಅಲ್ಲಮಪ್ರಭು, ಸಿದ್ದರಾಮೇಶ್ವರ, ಮುಂತಾದ ಶರಣರ ಹಾಗೂ ವಚನಕಾರರ ಭಾವಚಿತ್ರ ಸಹಿತವಾಗಿ ಪ್ರಮುಖ 85 ವಚನಗಳನ್ನು ಗ್ರಾನೈಟ್ ಕಲ್ಲಿನಲ್ಲಿ ಕೆತ್ತಿದ್ದಾರೆ.

21 ನೇ ಶತಮಾನದ  ನಡೆದಾಡುವ ದೇವರು ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು, ಸಿದ್ದೇಶ್ವರ ಸ್ವಾಮೀಜಿಯವರ ಭಾವಚಿತ್ರ ಸಮೇತ  ವಚನಗಳು ಭಕ್ತರ ಮತ್ತು ಜ್ಞಾನಾರ್ಥಿಗಳನ್ನು ಸೆಳೆಯುತ್ತಿವೆ.

ಇತ್ತೀಚಿಗೆ ಈ ಮಂಟಪ ನಿರ್ಮಾಣವಾಗಿರುವುದನ್ನು ತಿಳಿದು ದೇವಾಲಯಕ್ಕೆ ಆಗಮಿಸುವ ಭಕ್ತರು ಉದ್ಘಾಟನೆಗೆ ಸಿದ್ದವಾಗಿರುವ ಈ ಮಂಟಪವನ್ನು ನೋಡಿ ಬಹಳ ಸಂತಸ ವ್ಯಕ್ತಪಡಿಸುತ್ತಾರೆ ಎಂದು

ಬೆಳಗುಂಬದ ಶ್ರೀ ಸಿದ್ದರಾಮೇಶ್ವರ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀಶಾಂತಮಲ್ಲೇಶಯ್ಯ ರವರು ಮಾಹಿತಿ ನೀಡಿದರು.

ಶೀಘ್ರದಲ್ಲೇ ಈ ಶಿವಶರಣರ ವಚನಾಮೃತ ಮಂಟಪವು ಅಧಿಕೃತವಾಗಿ ಉದ್ಘಾಟನೆಯಾಗಲಿದೆ.ಇದು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯುವ ಜೊತೆಯಲ್ಲಿ ಜನರಲ್ಲಿ ಭಕ್ತಿ ಮತ್ತು ಜ್ಞಾನ ಪಸರಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಪ್ರಯತ್ನಗಳು ನಾಡಿನೆಲ್ಲಡೆ ಆಗಲಿ ಎಂಬುದು ಎಲ್ಲ ಜ್ಞಾನಾರ್ಥಿಗಳ ಬಯಕೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು.

9900925529




 


ಜಲಿಯನ್ ವಾಲಾಬಾಗ್ ಮಾರಣಹೋಮ.


 ಜಲಿಯನ್ ವಾಲಾಬಾಗ್ ಮಾರಣಹೋಮ.


ಕೆಲ ವರ್ಷಗಳ ಹಿಂದೆ ಪಂಜಾಬ್ ನ ಅಮೃತಸರಕ್ಕೆ ಪ್ರವಾಸ ಹೋದಾಗ ಜಲಿಯನ್ ವಾಲಾಬಾಗ್ ಎಂಬ ಮಾರಣಹೋಮದ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದೆವು.ಪುಸ್ತಕಗಳಲ್ಲಿ ಬ್ರಿಟಿಷರು ಕ್ರೌರ್ಯವನ್ನು ಅಮಾನುಷ ಕ್ರಮವನ್ನು ಓದಿದ್ದೆ.ಮಕ್ಕಳಿಗೆ ಹೇಳಿದ್ದೆ.ಅಂದು  ಕಣ್ಣಾರೆ ಆ ಕಟುಕರು ಮಾಡಿದ ಅನರ್ಥ, ಅಮಾನವೀಯತೆ ಮತ್ತು ಮಾರಣ ಹೋಮಕ್ಕೆ ಸಾಕ್ಷಿಯಾದ ಗುಂಡಿನ ಗುರುತುಗಳನ್ನು ಹೊಂದಿರುವ  ಗೋಡೆಗಳು,  ನೂರಾರು ಅಮಾಯಕ ಮಕ್ಕಳು ಮಹಿಳೆಯರು  ಪ್ರಾಣ ಭೀತಿಯಿಂದ ಹಾರಿ ಪ್ರಾಣ ಕಳೆದುಕೊಂಡ ಬಾವಿಯನ್ನು ನೋಡಿ ಮನಸ್ಸು ಭಾರವಾಯಿತು.

ಅದು 1919ರ  ಏಪ್ರಿಲ್ 13ರ ದಿನ.  ಬ್ರಿಟಿಷರು ಜಾರಿಗೆ ತಂದ ರೌಲಟ್ ಆಕ್ಟನ್ನು ವಿರೊಧಿಸಿ ಪಂಜಾಬ್ ರಾಜ್ಯದ ಮುಖ್ಯವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಲ್ಲೊಂದಾದ ಅಮೃತಸರದಲ್ಲಿನ ಹೃದಯಭಾಗದಲ್ಲಿರುವ ಜಲಿಯ‍ನ್ವಾಲ ಬಾಗ್ ಉದ್ಯಾನದಲ್ಲಿ ಸಹಸ್ರಾರು ಮಂದಿ ಭಾರತೀಯರು ಮುಖ್ಯವಾಗಿ ಪಂಜಾಬಿ ನಾಗರೀಕರು ಸಮಾವೇಶಗೊಂಡಿದ್ದರು. 

ಆ ಪವಿತ್ರದಿನದಂದು ಬೈಸಾಖಿ ಹಬ್ಬವನ್ನು ಆಚರಿಸಲು ಅಮೃತಸರದಲ್ಲಿ ಸಮಾವೇಶಗೊಳ್ಳುವುದು ಸಂಪ್ರದಾಯವಾಗಿತ್ತು.

 ಬ್ರಿಟಿಷ್ ಆಡಳಿತ ವಿಧಿಸಿದ ನಿರ್ಬಂಧಿತ  ಶಾಸನದ ಪ್ರಕಾರ ಅಮೃತಸರದಲ್ಲಿ ಐದಕ್ಕಿಂತ ಹೆಚ್ಚಿನ ಜನ ಗುಂಪುಗೂಡುವಂತಿರಲಿಲ್ಲ  'ಮಾರ್ಷಲ್ ನಿಯಮ' ಎನ್ನುತ್ತಿದ್ದರು. ಅಂದು ನಡೆದ ಸಮಾವೇಶ ಈ ನಿಯಮದ ಉಲ್ಲಂಘನೆಯಾಗಿತ್ತು.

ಇದನ್ನು ಕಂಡು ಕೆರಳಿದ ಆಂಗ್ಲ ಅಧಿಕಾರಿಗಳು ಕ್ರೋಧಗೊಂಡರು.

ತೊಂಬತ್ತು   ಸೈನಿಕರಿದ್ದ ಬಂದೂಕುಗಳಿಂದ ಶಸ್ತ್ರಸಜ್ಜಿತವಾದ ತುಕಡಿಯೊಂದು ಉದ್ಯಾನವನಕ್ಕೆ ಎರಡು ಶಸ್ತ್ರಸಜ್ಜಿತ ಕಾರುಗಳೊಂದಿಗೆ ಬಂದಿತು. ಮೆಷಿನ್ಗನ್ ‍ಗಳನ್ನು ಅಳವಡಿಸಲಾಗಿದ್ದ ಆ ವಾಹನಗಳು ಉದ್ಯಾನದ ಕಡಿದಾದ ಬಾಗಿಲಿನಿಂದ ಬರಲು ಅಸಾಧ್ಯವಾಗಿತ್ತು. ಆ ತುಕಡಿಯ ನಿಯಂತ್ರಕನಾದ ಬ್ರಿಗೇಡಿಯರ್ ಜನರಲ್ ರೆಗಿನಾಲ್ಡ್ ಡೈಯರ್   ಉದ್ಯಾನದೊಳಗೆ ಕಾಲಿಡುತ್ತಲೇ ಅಲ್ಲಿ ನೆರೆದಿದ್ದವರಿಗೆ ಯಾವೊಂದು ಎಚ್ಚರಿಕೆಯನ್ನೂ ಕೊಡದೆ ಗುಂಪು ಚದುರುವಂತೆ ಯಾವೊಂದು ಆದೇಶವನ್ನೀಯದೇ ಹಠಾತ್ತಾಗಿ ಗುಂಡಿನ ಮಳೆಗರೆವಂತೆ ತಮ್ಮ ತುಕಡಿಗೆ ಆದೇಶವನ್ನಿತ್ತುಬಿಟ್ಟ. ಅದರಲ್ಲಿಯೂ ವಿಶೇಷವಾಗಿ, ಜನಸಾಂದ್ರತೆ ಎಲ್ಲಿ ಹೆಚ್ಚಾಗಿರುವುದೋ ಅತ್ತಕಡೆ ಗುಂಡಿನ ದಾಳಿ ಕೇಂದ್ರೀಕೃತವಾಗುವಂತೆ ಆದೇಶಿಸಿದ.

ಗುಂಡಿನ ದಾಳಿಯು ಸಂಜೆ  ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ಕಾಲ ಸತತವಾಗಿ ನಡೆಯಿತು. ಸುತ್ತಲೂ ಇಟ್ಟಿಗೆ ಗೋಡೆಗಳಿಂದ ಕಟ್ಟಡಗಳಿಂದ ಆವೃತವಾಗಿದ್ದ ಉದ್ಯಾನವನಕ್ಕೆ ಇದ್ದದ್ದು ಐದು ಕಡಿದಾದ ದ್ವಾರಗಳು ಮಾತ್ರ. ಅದರಲ್ಲಿ ಬಹುತೇಕ ಶಾಶ್ವತವಾಗಿ ಮುಚ್ಚಲ್ಪಟ್ಟಿದ್ದವು. ತುಕಡಿಯಿದ್ದ ದ್ವಾರದ ಹೊರತಾಗಿ ಇನ್ನೊಂದೇ ದ್ವಾರವು ಮಾರ್ಗವಾಗಿ ಉಳಿದಿದ್ದರಿಂದ, ಕಂಗಾಲಾದ ಜನರು ಗೋಡೆಯನ್ನು ಹತ್ತಿ ಹಾರಲು ಪ್ರಯತ್ನಿಸಿದರು.

ಬಹಳಷ್ಟು ಜನರು ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಉದ್ಯಾನದಲ್ಲಿದ್ದ ಬಾವಿಯೊಳಗೆ ಹಾರಿದರು. ಈ ಹತ್ಯಾಕಾಂಡ ಸ್ಮಾರಕದಲ್ಲಿನ ಅಂಶವೊಂದರ ಪ್ರಕಾರ, ಬಾವಿಯೊಂದರಿಂದಲೇ ಸುಮಾರು 120 ಶವಗಳನ್ನು ಹೊರತೆಗೆಯಲಾಗಿತ್ತು. ಹತ್ಯಾಕಾಂಡದಿಂದ ನೂರಾರು ಜನರು ಸಾವನಪ್ಪಿದರಲ್ಲದೆ ಸಾವಿರಾರು ಮಂದಿ ಗಾಯಗೊಂಡರು. ಸರ್ಕಾರಿ ಮೂಲಗಳ ಪ್ರಕಾರ 379 ಮಂದಿ ಸಾವನಪ್ಪಿದ್ದಾರೆ. ಆದರೆ ಸಾವಗೀಡಾದವರ ನಿಜವಾದ ಸಂಖ್ಯೆ ಇನ್ನು ಹೆಚ್ಚಿತ್ತು ಎನ್ನಲಾಗುತ್ತದೆ.

ಕರ್ಫ್ಯು ವಿಧಿಸಿದ ಕಾರಣ ಗಾಯಗೊಂಡ ಹಲವರನ್ನು ಹತ್ಯಾಕಾಂಡದ ಸ್ಥಳದಿಂದ ಇತರೆಡೆಗೆ ಸ್ಥಳಾಂತರಿಸಲಾಗಲಿಲ್ಲ. ನಿಜವಾದ ಸಾವಿನ ಸಂಖ್ಯೆಗಳ ಬಗ್ಗೆ ಇಂದಿಗೂ ಚರ್ಚೆ ನಡೆಯುತ್ತಲೇ ಇದೆ. ಈ ಘಟನೆ ನಡೆದ ಬಳಿಕ, ಬ್ರಿಟಿಷ್ ಸೇನೆಗೆ ವಿದ್ರೋಹಿ ಸೈನ್ಯವು ಎದುರಾದುದರಿಂದ ಅವರಿಗೆ ತಕ್ಕ ಪಾಠ ಕಲಿಸಿದ್ದಾಗಿ  ಜನರಲ್ ಡೈಯರನು ತನ್ನ ಮೇಲಧಿಕಾರಿಗಳಿಗೆ ಸುಳ್ಳು  ವರದಿಯೊಪ್ಪಿಸಿದನು.

ಇದಕ್ಕೆ ಉತ್ತರಿಸಿದ ಪಂಜಾಬ್‌ನ ಅಂದಿನ ಲೆಫ್ಟಿನೆಂಟ್-ಗವರ್ನರ್  ಮೈಕಲ್ ಓಡ್ವಾಯರ್ ಅವರಿಗೆ ತಕ್ಕ ಪಾಠ ಕಲಿಸಿದಿರಿ ಲೆಫ್ಟಿನೆಂಟ್-ಗವರ್ನರ ಇದನ್ನು ಅನುಮೋದಿಸುತ್ತಾರೆ ಎಂದು ತಂತಿಯ ಮೂಲಕ ಜನರಲ್ ಡೈಯರ್‌ಗೆ ಸಂದೇಶ ಕಳುಹಿಸಿ ಮಾಡಿದ ಕಗ್ಗೊಲೆಗೆ ಬೆಂಬಲ ನೀಡಿಬಿಟ್ಟ. ಮೈಕಲ್ ಓಡ್ವಾಯರ್ನ ಇಚ್ಚೆಯಂತೆ ಈ ಘಟನೆಯ ನಂತರ ಅಂದಿನ ವೈಸರಾಯ್  ಫ್ರೆಡ್ರಿಕ್ ತೆಸಿಂಗರ್ ಅಮೃತಸರ ಹಾಗು ಅದರ ಸುತ್ತಮುತ್ತ ಮಿಲಿಟರಿ ಆಡಳಿತವನ್ನು ಹೇರುವಂತೆ ಆದೇಶಿಸಿದ.

ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಕುರಿತು ತನಿಖೆ ನಡೆಸಲು ಹಂಟರ್ ಆಯೋಗ ಅನ್ನು ಸ್ಥಾಪಿಸುವಂತೆ ಅಂದಿನ ಭಾರತದ ರಾಜ್ಯಾಂಗ ಕಾರ್ಯದರ್ಶಿಯಾಗಿದ್ದ ಎಡ್ವಿನ್ ಮೊಂಟಾಗೊ ನಿರ್ಧರಿಸಿದನು. ಈ ಆಯೋಗದೆದುರು ಮೈಕಲ್ ಓಡ್ವಾಯರ್ನನ್ನು ಕರೆತರಲಾಯಿತು. ವಿಚಾರಣೆಯ ವೇಳೆ ಜಲಿಯನ್‌ವಾಲ ಬಾಗ್ ನಲ್ಲಿ ಉದ್ದೆಶಿಸಲಾಗಿದ್ದ ಕಾರ್ಯಕ್ರಮದ ಬಗ್ಗೆ ತನಗೆ ಅಂದಿನ ದಿನ ಮಧ್ಯಾಹ್ನ ದ ವೇಳೆಗೆ ತಿಳಿಯಿತಾದರೂ ಇದನ್ನು ತಡೆಗಟ್ಟಲು ಯಾವುದೇ ಕ್ರಮ ಕೈಗೊಂಡಿರಲ್ಲಿಲ್ಲವೆಂದು ಡ್ವಾಯರ್ ಒಪ್ಪಿಕೊಂಡು  ತಾನು ಜಲಿಯನ್‌ವಾಲ ಬಾಗ್ ‌ಗೆ ಗುಂಡು ಹಾರಿಸುವ ಉದ್ದೇಶದಿಂದಲೆ ತೆರಳಿದ್ದಾಗಿ ತಿಳಿಸಿದನು. "ಜಲಿಯನ್‌ವಾಲಾ ಬಾಗನಲ್ಲಿ ಸೇರಿದ ಜನರನ್ನು ಚದುರಿಸಲು ಗುಂಡಿನ ಅವಶ್ಯಕತೆ ಇರಲ್ಲಿಲವಾದರೂ ತಾನು ಆ ಕ್ರಮ ಕೈಗೊಂಡಿರದಿದ್ದರೆ ಜನರು ಮತ್ತೆ ಗುಂಪು ಸೇರಿ ತನ್ನನ್ನು ನೋಡಿ ಗೇಲಿ ಮಾಡಿ ತಾನು ಒಬ್ಬ ಮೂರ್ಖನಂತೆ ತೋರುತಿದ್ದೆ" ಎಂದು ಹಂಟರ್ ಆಯೋಗದ ಮುಂದೆ ಡಯರ್  ತನ್ನ ನಿಲುವನ್ನು ಸ್ಪಷ್ಟಪಡಿಸಿದ.


1920ರಲ್ಲಿ ಹಂಟರ್ ವರದಿಯ ಬಿಡುಗಡೆಯ ನಂತರ ಉಂಟಾದ ಜನರ ಆಕ್ರೋಶದ ಮಧ್ಯೆ ಡೈಯರ್‍ನನ್ನು ನಿಷ್ಕ್ರಿಯ ಅಧಿಕಾರಿಗಳ ಪಟ್ಟಿಗೆ ಸೇರಿಸಲಾಯಿತು. ಅವನ ಪದವಿಯನ್ನು ಕಮಾಂಡರ್ ಇನ್ ಚೀಫ್ ಇಂದ ಕರ್ನಲ್ ಪದವಿಗೆ ಇಳಿಸಲಾಯಿತು. ಅಂದಿನ ಕಮಾಂಡರ್-ಇನ್-ಚೀಫ್ ಅವರು ಡಯರ್‍ಗೆ ಭಾರತದಲ್ಲಿ ಇನ್ನು ಮುಂದೆ ಯಾವ ಕೆಲಸವನ್ನೂ ಕೊಡುವುದಲ್ಲ  ಎಂದು ಹೇಳಿಕೆ ನೀಡಿದರು.

ಡೈಯರ್ ನ ಆರೋಗ್ಯವೂ ಚೆನ್ನಾಗಿರಲಿಲ್ಲ. ಅವನನ್ನು ಒಂದು ವೈದ್ಯಕೀಯ ಹಡಗಿನಲ್ಲಿ ಇಂಗ್ಲೆಂಡಿಗೆ ಅವನ ಮನೆಗೆ ಕಳಿಸಲಾಯಿತು. ಕೆಲವು ಹಿರಿಯ ಬ್ರಿಟಿಷ್ ಅಧಿಕಾರಿಗಳು ಮತ್ತು ಭಾರತದ ಅನೇಕ ಸಾರ್ವಜನಿಕರು 'ಇನ್ನೊಂದು ಭಾರತೀಯ ದಂಗೆ'ಯನ್ನು ಅಡಗಿಸಿದ್ದಕ್ಕಾಗಿ ಅವನನ್ನು ಪ್ರಶಂಶಿಸಿದರು. ಲಾರ್ಡ್ಸ್ ಸಭೆ ಯು ಅವನನ್ನು ಹೊಗಳಿ ನಿರ್ಣಯವನ್ನು ಅಂಗೀಕರಿಸಿತು. ಆದರೆ ಹೌಸ್ ಆಫ್ ಕಾಮನ್ಸ್, ಅವನನ್ನು ಖಂಡಿಸಿತು.

 ವಿನ್‍ಸ್ಟನ್ ಚರ್ಚಿಲ್   "ಜಲಿಯನ್‍ವಾಲಾ ಬಾಗ್ ನಲ್ಲಿ ನಡೆದಿರುವ ಈ ಘಟನೆಯು ಒಂದು ಅಸಾಮಾನ್ಯ ಘಟನೆಯಾಗಿದ್ದು, ವಿಸ್ಮಯಗೊಳಿಸುವಂತಹ ಅಮಾನುಷ ದುಷ್ಕೃತ್ಯವಾಗಿದೆ.ಎಂದರು.  ಡೈಯರ್‍ನ ಕ್ರಮವು ಜಗತ್ತಿನಾದ್ಯಂತ ನಿಂದಿಸಲ್ಪಟ್ಟಿತು. ಆಗ ಎಚ್ಚೆತ್ತ  ಬ್ರಿಟೀಷ್ ಸರಕಾರವು ಅವನನ್ನು ಅಧಿಕೃತವಾಗಿ ಅಮಾನತುಗೊಳಿಸಿತು. ಅವನು ತನ್ನ ಹುದ್ದೆಗೆ 1920ರಲ್ಲಿ ರಾಜೀನಾಮೆ ಕೊಟ್ಟನು.

ಮಾರ್ನಿಂಗ್ ಪೋಸ್ಟ್ ಪತ್ರಿಕೆಯು ಡೈಯರ್‍ನಿಗಾಗಿ ಒಂದು ಸಹಾನುಭೂತಿ ನಿಧಿಯನ್ನು ಸ್ಥಾಪಿಸಿ 26,000 ಕ್ಕೂ ಹೆಚ್ಚು ಪೌಂಡ್‍ಗಳನ್ನು ಸಂಗ್ರಹಿಸಿತು. ಶುಭಕೋರಿರುವರ ಹೆಸರುಗಳನ್ನೊಳಗೊಂಡ ಸ್ಮರಣ ಸಂಚಿಕೆಯನ್ನು ಡೈಯರ್‍ಗೆ ಅರ್ಪಿಸಲಾಯಿತು. ಭಾರತದಲ್ಲಿ ಈ ಹತ್ಯಾಕಾಂಡವು ಅತೀವ ದುಃಖ, ರೋಷವನ್ನು ಉಂಟುಮಾಡಿತು.

ಈ ಹತ್ಯಾಕಾಂಡವು ಭಾರತದ ಸ್ವಾತಂತ್ರ್ಯ ಚಳುವಳಿಗೆ ವೇಗೋತ್ಕರ್ಷಕವಾಗಿ ಪರಿಣಮಿಸಿ ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಬ್ರಿಟೀಷರ ವಿರುದ್ಧದ 1920ರಲ್ಲಿ ನಡೆದ ಅಸಹಕಾರ ಸತ್ಯಾಗ್ರಹದಲ್ಲಿ ಹೆಚ್ಚಿನ ಉತ್ಸಾಹದಿಂದ ಜನರು ಪಾಲ್ಗೊಳ್ಳುವಂತಾಯಿತು. ನೊಬೆಲ್ ಪ್ರಶಸ್ತಿ ವಿಜೇತರಾದ ರವೀಂದ್ರನಾಥ ಠಾಗೋರ್ ಅವರು ಪ್ರತಿಭಟನೆಯೆಂದು ತಮ್ಮ ನೈಟ್ ಪದವಿಯನ್ನು ಚಕ್ರವರ್ತಿಗೆ ಹಿಂತಿರುಗಿಸಿದರು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮಂಡಿಸಿದ ನಿರ್ಣಯದ ಮೇರೆಗೆ ಈ ಸ್ಥಳದಲ್ಲಿ ಒಂದು ಸ್ಮಾರಕವನ್ನು ನಿರ್ಮಿಸುವ ಸಲುವಾಗಿ 1920ರಲ್ಲಿ ಟ್ರಸ್ಟ್ ಒಂದನ್ನು ರಚಿಸಲಾಯಿತು. 1923ರಲ್ಲಿ ಇದಕ್ಕೆ ಬೇಕಾದ ಜಾಗವನ್ನು ಖರೀದಿಸಲಾಯಿತು. ಆ ಸ್ಥಳದಲ್ಲಿ ಸ್ಮಾರಕವನ್ನು ನಿರ್ಮಿಸಲಾಯಿತು. ಇದನ್ನು 1961ಏಪ್ರಿಲ್ 13ರಂದು ಅಂದಿನ ಪ್ರಧಾನಿ ಜವಹರಲಾಲ್ ನೆಹರು ಮತ್ತಿತರ ಮುಖಂಡರ ಸಮ್ಮುಖದಲ್ಲಿ ಭಾರತದ ಅಂದಿನ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅವರು ಉದ್ಘಾಟಿಸಿದರು.

ನಂತರ ಜ್ಯೋತಿಯೊಂದನ್ನು ಇಡಲಾಯಿತು. ಗುಂಡಿನಿಂದಾದ ರಂಧ್ರಗಳನ್ನು ಇಂದಿಗೂ ಅಲ್ಲಿನ ಗೋಡೆಗಳ ಮೇಲೆ, ಅಕ್ಕಪಕ್ಕದ ಕಟ್ಟಡಗಳ ಮೇಲೆ ನೋಡಬಹುದಾಗಿದೆ. ಬಹಳಷ್ಟು ಜನರು ಧುಮುಕಿದ ಅಲ್ಲಿನ ಬಾವಿಯನ್ನು ಕೂಡ ಸಂರಕ್ಷಿಸಿ, ಸ್ಮಾರಕವನ್ನಾಗಿ ಮಾಡಲಾಗಿದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು


25 ಫೆಬ್ರವರಿ 2025

ಮಾತು ೨


 ಹೆದರಿಸುವವರ ಮುಂದೆ

ನಮ್ಮ ಮಾತಾಗಲಿ ಕತ್ತಿ|

ಹಿರಿಯರ ಮುಂದೆ 

ನಮ್ಮ ನುಡಿಯಾಗಲಿ ಹತ್ತಿ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು


     

ಮಾತು..


 


ಮಾತು...


 ವೈರಿಗಳ ಮುಂದೆ 

ನಮ್ಮ ಮಾತಿಗಿರಲಿ ಗತ್ತು|

ಆತ್ಮೀಯರ ಮಂದೆ 

ನಮ್ಮ ಸೊಲ್ಲಾಗಲಿ ಮುತ್ತು