31 ಡಿಸೆಂಬರ್ 2023

ಸೋಮನಗೌಡರ ಮೋತಿ.


 





ಸೋಮನಗೌಡರ ಮೋತಿ.


ಕೆಲವು ಪ್ರಾಣಿಗಳು ಮಾನವರಿಗಿಂತಲೂ ಸೂಕ ಸಂವೇದನೆ ಹೊಂದಿರುತ್ತವೆ.ನಾಯಿಯಂತಹ ಪ್ರಾಣಿಗಳು ನಿಯತ್ತಿಗೆ ಹೆಸರುವಾಸಿ.ಅನ್ನ ಹಾಕಿದ ಮನೆಗೆ ಕನ್ನ ಹಾಕಲು ಬಂದ ಕಳ್ಳರ ಸಂಚನ್ನು ಬಯಲು ಮಾಡಿ ಮಾಲೀಕನ ಸಂಪತ್ತನ್ನು ರಕ್ಷಣೆ ಮಾಡಿದ ಮೋತಿಯ ಕಥೆ   ನಾವು ಪ್ರಾಥಮಿಕ ಹಂತದಲ್ಲಿ ಓದುವಾಗ ನಮ್ಮ ಪಠ್ಯ ವಾಗಿತ್ತು ಈ ಕಥೆಯನ್ನು ನೀವೂ ಓದಿರುತ್ತೀರಿ. ಮತ್ತೊಮ್ಮೆ ಜ್ಞಾಪಿಸಿಕೊಳ್ಳೋಣ.

ಸೋಮನಗೌಡರು ಊರಿಗೆಲ್ಲ ದೊಡ್ಡ ಶ್ರೀಮಂತರು. ಅವರು ಒಂದು ನಾಯಿಯನ್ನು ಸಾಕಿದ್ದರು. ಅದರ ಹೆಸರು ಮೋತಿ, ಮೋತಿ ಬಲು ನಂಬಿಗೆಯ ಪ್ರಾಣಿ. ಜಾಣತನಕ್ಕೆ ಅದು ಊರಿಗೆಲ್ಲ ಹೆಸರಾಗಿತ್ತು. ಗೌಡರ ಮನೆ ಊರ ಹೊರಗೆ ಇತ್ತು. ಪ್ರತಿ ರಾತ್ರಿಯೆಲ್ಲ ಎಚ್ಚರವಾಗಿದ್ದು ಮನೆ ಕಾಯುತ್ತಿತ್ತು. 


ಒಂದು ದಿನ ಆಪ್ತರ ಮದುವೆಗೆ ಗೌಡರ ಮನೆಯವರೆಲ್ಲ ನೆರೆಯೂರಿಗೆ ಹೋದರು. ಮೋತಿಯನ್ನು ಮನೆ ಕಾಯಲು ಬಿಟ್ಟು ಹೋದರು. ಗೌಡರ ಮನೆಯಲ್ಲಿ ಬಹಳ ಬಂಗಾರವಿತ್ತು, ಕಳ್ಳರು ಸಮಯ ಸಾಧಿಸುತ್ತಿದ್ದರು. ಮನೆಯಲ್ಲಿ ಯಾರೂ ಇಲ್ಲದ ಈ ಸಮಯ ನೋಡಿ ಗೌಡರ ಮನೆಗೆ ಹಿಂಬದಿಯಿಂದ ಕನ್ನ ಹಾಕಿದರು. ಕಳ್ಳರ ಗುಂಪಿನಲ್ಲಿ ಮೂರು ನಾಲ್ಕು ಜನರಿದ್ದರು. ಮೋತಿ ಅವರನ್ನು ನೋಡಿತು. ಆದರೆ ಬೊಗಳಲಿಲ್ಲ. ಎಲ್ಲವನ್ನು ನೋಡುತ್ತ ಮರೆಯಲ್ಲಿ ನಿಂತಿತು.

  

ಗೌಡರ ಬಂಗಾರ ಮತ್ತು ಹಣ ತುಂಬಿದ ಪೆಟ್ಟಿಗೆ ಭಾರವಾಗಿತ್ತು. ಕಳ್ಳರಿಗೆ ಅವಸರದಲ್ಲಿ ದೂರ ಒಯ್ಯಲು ಸಾಧ್ಯವಾಗಲಿಲ್ಲ. ಅವರಿಗೆ ಏನು ಮಾಡಬೇಕೆಂದು ತಿಳಿಯದಾಯಿತು. ಅಷ್ಟರಲ್ಲಿ ಬೆಳಗಾಗುತ್ತ ಬಂತು. ಬಹಳ ಯೋಚನೆ ಮಾಡಿದರು. ಕೊನೆಗೆ ಊರ ಹೊರಗಿನ ಗುಡ್ಡದ ಸಮೀಪ ಅದನ್ನು ಒಯ್ದರು. ಅಲ್ಲಿ ಅದನ್ನು ಹೂಳಿಟ್ಟರು. ಮೋತಿ ಗೊತ್ತಾಗದಂತೆ ಅವರನ್ನು ಹಿಂಬಾಲಿಸಿತು. ಹೂಳಿಟ್ಟ ಸ್ಥಳವನ್ನು ನೋಡಿತು. ಮರುದಿನ ಪೆಟ್ಟಿಗೆಯನ್ನು ಒಡೆದು ಕಳ್ಳರು ಅದನ್ನು ಹಂಚಿಕೊಳ್ಳುವವರಿದ್ದರು.


ಮದುವೆ ಮುಗಿಸಿ ಗೌಡರು ಮನೆಗೆ ಬಂದರು. ಮೋತಿ ಎಂದಿನಂತೆ ಒಡೆಯನನ್ನು ಸ್ವಾಗತಿಸಲಿಲ್ಲ. ಮೋತಿಯ ಜೋಲುಮೋರೆ ನೋಡಿ ಗೌಡರಿಗೆ ಗಾಬರಿಯಾಯಿತು, ಬಾಗಿಲು ತೆಗೆದು ಒಳಗೆ ಬಂದರು. ಹಿಂಬದಿಯ ಗೋಡೆ ಒಡೆದಿತ್ತು. ಪೆಟ್ಟಿಗೆ ಮಾಯವಾಗಿತ್ತು.


ಮೋತಿ ದೀನ ಸ್ವರದಿಂದ ಕೂಗಿತು. ಗೌಡರು ಹೊರಗೆ ಬಂದರು. ಮೋತಿ ಗೌಡರ ಧೋತರವನ್ನು ಹಿಡಿದೆಳೆಯಿತು. ಗೌಡರು ಮೋತಿಯ ಹಿಂದೆ ಹೋದರು. ಮೋತಿ ಪೆಟ್ಟಿಗೆ ಹುಗಿದ ಸ್ಥಳವನ್ನು ಕಾಲಿನಿಂದ ಕೆದರಿತು. ಗೌಡರಿಗೆ ಅನುಮಾನ ಬಂದಿತು. ತಮ್ಮ ಆಳುಗಳನ್ನು 

ಕರೆಯಿಸಿದರು. ಆ ಸ್ಥಳದಲ್ಲಿ ಅಗೆಯಿಸಿದರು. ಅಲ್ಲಿ ಅವರಿಗೆ ತಮ್ಮ ಪೆಟ್ಟಿಗೆಯು ಕಾಣಿಸಿತು. ಆಳುಗಳು ಪೆಟ್ಟಿಗೆಯನ್ನು ಹೊತ್ತುಕೊಂಡು ಗೌಡರ ಮನೆಗೆ ತಂದರು. ಗೌಡರು ಮೋತಿಯ ಜಾಣತನಕ್ಕೆ ಮೆಚ್ಚಿದರು. ಪ್ರೀತಿಯಿಂದ ಮೈಮೇಲೆ ಕೈಯಾಡಿಸಿದರು. ಮೋತಿಗೆ ಸಂತೋಷವಾಯಿತು.


ಇಂದಿನ ಪ್ರಸ್ತುತ ಸಮಾಜದಲ್ಲಿ ಬಹುತೇಕ ಕಡೆಯಲ್ಲಿ ಕಾಣಸಿಗುವ ಅಪ್ರಮಾಣಿಕತೆ, ಸೋಮಾರಿತನ, ಕಾರ್ಯಬದ್ದತೆಯ ಕೊರತೆ ಮುಂತಾದವುಗಳ ನೋಡಿ ಯಾಕೋ ಸೋಮನ ಗೌಡರ ಮೋತಿ ನೆ‌ನಪಾಯಿತು..


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

28 ಡಿಸೆಂಬರ್ 2023

ವಿಶ್ವ ಮಾನವ ಸಂದೇಶ ಪಾಲಿಸೋಣ..


 


ವಿಶ್ವ ಮಾನವ ಸಂದೇಶ ಪಾಲಿಸೋಣ..


ಧರ್ಮ ಜಾತಿಗಳ ಮಧ್ಯೆ ಕಚ್ಚಾಟ, ಇಸಂಗಳ ಮೇಲಾಟ, ದೇಶ ದೇಶಗಳ ಮಧ್ಯ ತಾಕಲಾಟಗಳ ಪರಿಣಾಮವಾಗಿ ಜಗತ್ತಿನಲ್ಲಿ ಇಂದು ಯಾರೂ ನೆಮ್ಮದಿಯಾಗಿಲ್ಲದ ವಾತಾವರಣದಲ್ಲಿ ವಾಸಿಸುವ ಅನಿವಾರ್ಯತೆಯಿದೆ.ಇದನ್ನು ಹೋಗಲಾಡಿಸಲು ಮದ್ದು ನಮ್ಮ ರಾಷ್ಟ್ರಕವಿ, ರಸ ಋಷಿಯ ಚಿಂತನೆ "ವಿಶ್ವ ಮಾನವ ತತ್ವ ".

ಕುವೆಂಪು ರವರ ವಿಶ್ವ ಮಾನವ ತತ್ವ ಸಾರ್ವಕಾಲಿಕ  ಈ ತತ್ವ ಅಳವಡಿಸಿಕೊಂಡರೆ ಉದಾತ್ತ ಚಿಂತನೆ ನಮ್ಮನ್ನು ಆವರಿಸುತ್ತದೆ.ಈ ನಿಟ್ಟಿನಲ್ಲಿ ಕುವೆಂಪು ಅವರ ಚಿಂತನೆಗಳನ್ನು ಪ್ರಚಾರ ಮಾಡಿ ಅಳವಡಿಸಿಕೊಳ್ಳಲು ಕರ್ನಾಟಕ ಸರ್ಕಾರ ಪ್ರತಿ ವರ್ಷ ಅವರು ಹುಟ್ಟಿದ ದಿನವನ್ನು ವಿಶ್ವ ಮಾನವ ದಿನವಾಗಿ ಆಚರಿಸಲಾಗುತ್ತದೆ. ಆದರೆ ಇದು ಕೇವಲ ಆಚರಣೆಗೆ ಮಾತ್ರ ಸೀಮಿತಾವಾಗಿರುವುದು ದುರದೃಷ್ಟಕರ.


ಕುವೆಂಪು ರವರು ತಮ್ಮ ವಿಶ್ವ ಮಾನವ ಸಂದೇಶ ಸಾರಿದ ಓ ನನ್ನ ಚೇತನ.... ಆಗು ನೀ ಅನಿಕೇತನ ...ಜಗದ ರಾಷ್ಟ್ರಗೀತೆಯಾಗಬೇಕಿದೆ..

ಹುಟ್ಟುವ ಪ್ರತಿ ಮಗುವು ವಿಶ್ವಮಾನವನೇ! ಆ ನಂತರ ಆ ಮಗುವನ್ನು "ಜಾತಿ,ಮತ"ದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಹಾಗಾಗ ಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು, ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು. ಹಾಗಾಗಿ ಕುವೆಂಪು ಅವರ ಜಾತ್ಯಾತೀತ ಮನೋಭಾವದಿಂದ ಮೂಡಿ ಬಂದ ಆಶಯವೇ ವಿಶ್ವಮಾನವ ಸಂದೇಶವಾಗಿದೆ. ಬುದ್ಧ, ಬಸವರ ಹಾಗೆ ಸಮಾಜದಲ್ಲಿ ವ್ಯಕ್ತಿ ಸ್ವತಂತ್ರವಾಗಿ, ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕೆಂದು ಅವರು ಹೇಳುತ್ತಿದ್ದರು.


ವಿಶ್ವ ಮಾನವ ಗೀತೆಯು ನಮಗೆ " ಪಂಚ ಮಂತ್ರ"ಗಳನ್ನು  ಕಟ್ಟಿಕೊಡುತ್ತದೆ. 


ಪ್ರತಿಯೊಂದು ಮಗುವೂ ಹುಟ್ಟುತ್ತಲೆ ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು 'ಅಲ್ಪಮಾನವ'ನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು 'ವಿಶ್ವಮಾನವ'ನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು.

ಹುಟ್ಟುವಾಗ 'ವಿಶ್ವಮಾನವನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ, ವರ್ಣ ಇತ್ಯಾದಿಗಳಿಂದ ಬಂಧನ  ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು 'ಬುದ್ಧ'ನನ್ನಾಗಿ, ಅಂದರೆ ವಿಶ್ವಮಾನವನನ್ನಾಗಿ, ಪರಿವರ್ತಿಸುವುದೆ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಲೋಕ ಉಳಿದು, ಬಾಳಿ ಬದುಕಬೇಕಾದರೆ! ಪ್ರಪಂಚದ ಮಕ್ಕಳೆಲ್ಲ 'ಅನಿಕೇತನ'ರಾಗಬೇಕು.

ಮಾನವ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಸಂಭವಿಸಿ ಹೋಗಿದ್ದಾರೆ. ಅವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊಂಡು ಕಡೆಗೆ ಮತವಾಗಿ ಪರಿಮಿತವಾಯಿತು. ಮಾನವರನ್ನು ಕೂಡಿಸಿ ಬಾಳಿಸಬೇಕೆಂಬ ಸದುದ್ದೇಶದಿಂದ ಹುಟ್ಟಿ ಕೊಂಡ ಮಹಾತ್ಮರ ವಾಣಿ ಮತವಾಗಿ ಮಾದಕವಾಯಿತು. ಒಂದು ಯುಗಕ್ಕೆ ಅಗತ್ಯವೆನ್ನಿಸಿದ ಧರ್ಮ ಕಾಲಾನುಕಾಲಕ್ಕೆ ಮತವಾಗಿ ನಿರುಪಯುಕ್ತವೆನಿಸಿ  ಮತ್ತೊಂದು ಹೊಸ ಧರ್ಮಕ್ಕೆ ಎಡೆಗೊಟ್ಟುದೂ ಉಂಟು. ಹೀಗಾಗಿ ಅನೇಕ ಧರ್ಮಗಳು ಮತಗಳಾಗಿ ಜನತೆಯನ್ನು ಗುಂಪುಗುಂಪಾಗಿ ಜನತೆಯನ್ನು ಒಡೆದಿವೆ.ಯುದ್ಧಗಳನ್ನು ಹೊತ್ತಿಸಿವೆ. ಜಗತ್ತಿನ ಕ್ಷೋಭೆಗಳಿಗೆಲ್ಲ ಮೂಲಕಾರಣವೆಂಬಂತೆ ವಿಜ್ಞಾನಯುಗದ ಪ್ರಾಯೋಗಿಕ ದೃಷ್ಟಿಗೆ ಇನ್ನು ಮೇಲೆ ಮತಮೌಢ್ಯ ಒಪ್ಪಿಗೆಯಾಗದು. ವಿನೋಬಾ ಭಾವೆಯವರು ಹಿಂದೆ ಹೇಳಿದಂತೆ 'ಮತ ಮತ್ತು ರಾಜಕೀಯದ ಕಾಲ ಆಗಿ ಹೋಯಿತು. ಇನ್ನೇನಿದ್ದರೂ ಅಧ್ಯಾತ್ಮ ಮತ್ತು ವಿಜ್ಞಾನದ ಕಾಲ ಬರಬೇಕಾಗಿದೆ.'

ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣ ದೃಷ್ಟಿ, ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ. ಅಂದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; "ಮನುಜಮತ". ಆ ಪಥ ಈ ಪಥ ಅಲ್ಲ; "ವಿಶ್ವಪಥ". ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ ಅದುವೇ "ಸರ್ವೋದಯ". ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; "ಸಮನ್ವಯ"ಗೊಳ್ಳುವುದು. ಮಿತಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ ಪಾರಮಾರ್ಥಿಕ ಎಂಬ ಭಿನ್ನ ದೃಷ್ಟಿಯಲ್ಲ.ಎಲ್ಲವನ್ನು ಭಗವದ್ ದೃಷ್ಟಿಯಿಂದ ಕಾಣುವ "ಪೂರ್ಣದೃಷ್ಟಿ".

ಯಾವ ಭಾವನೆಗಳು ಜಗತ್ತಿನಲ್ಲಿ ಎಲ್ಲ ಮಾನವರಿಗೂ ಅನ್ವಯವಾಗಬಹುದೊ ಅಂತಹ ಭಾವನೆ ಅಂತಹ ದೃಷ್ಟಿ ಬರಿಯ ಯಾವುದೊ ಒಂದು ಜಾತಿಗೆ, ಮತಕ್ಕೆ, ಗುಂಪಿಗೆ, ಒಂದು ದೇಶಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಸರ್ವಕಾಲಕ್ಕೂ ಅನ್ವಯವಾಗುವ ಇವು ಮೂಲಮೌಲ್ಯಗಳು. ಈ ಮೌಲ್ಯಗಳು ಮಾನವರನ್ನು ಕೂಡಿಸಿ ಬಾಳಿಸುವತ್ತ ನಡೆದಾವು. ಗುಂಪುಗಾರಿಕೆಗೆಂದೂ ಇವು ತೊಡಗುವುದಿಲ್ಲ.ಅದೇನಿದ್ದರೂ ರಾಜಕೀಯದ ಕರ್ಮ. ವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿಯೂ ಸಮಷ್ಟಿಯ ಉದ್ಧಾರದ ದೃಷ್ಟಿ ಇದರದು. ಈ ದೃಷ್ಟಿಗೆ ವ್ಯಕ್ತಿಗಳೆಷ್ಟೊ ಅಷ್ಟೂ ಸಂಖ್ಯೆಯ ಮತಗಳಿರು ವುದು ಸಾಧ್ಯ.ಅಷ್ಟೂ ವ್ಯಕ್ತಿಗಳು ಸಮಷ್ಟಿಯ ವಿಕಾಸಕ್ಕೆ ಸಾಧಕವಾಗುವುದೂ ಸಾಧ್ಯ. ಈ 'ದರ್ಶನ'ವನ್ನೆ 'ವಿಶ್ವಮಾನವ ಗೀತೆ' ಸಾರುತ್ತದೆ.

 

ಕುವೆಂಪುರವರ ವಿಶ್ವ ಮಾನವ ಸಂದೇಶವನ್ನು ನಾವೆಲ್ಲರೂ ಪಾಲಿಸಿ ಅದರಂತೆ ಬಾಳೋಣ.ಜಗದ ಶಾಂತಿಗೆ ಪಣ ತೊಡೋಣ.ಸರ್ವರಿಗೂ ವಿಶ್ವ ಮಾನವ ದಿನದ ಶುಭಾಶಯಗಳು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು


27 ಡಿಸೆಂಬರ್ 2023

ನುಡಿ ಹಬ್ಬಕ್ಕೆ ಸಿಹಿಜೀವಿಯ ಹನಿಗಳು*


 *ನುಡಿ ಹಬ್ಬಕ್ಕೆ ಸಿಹಿಜೀವಿಯ ಹನಿಗಳು*


*ಎಲ್ಲರೂ ಪಾಲ್ಗೊಳ್ಳೋಣ*


ತುಮಕೂರಿನಲ್ಲಿ ನಡೆಯಲಿದೆ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ|

ಸಕುಟುಂಬ ಸಪರಿವಾರ ಸಮೇತ

ಎಲ್ಲರೂ ಪಾಲ್ಗೊಳ್ಳೋಣ|


*ಕನ್ನಡಮ್ಮನ ತೇರು*


ಕಲ್ಪತರು ನಾಡಲ್ಲಿ

ಕನ್ನಡ ಹಬ್ಬಕ್ಕೆ ಸಿದ್ದತೆ ಜೋರು|

ಬನ್ನಿ ಎಲ್ಲರೂ ಸೇರಿ ಎಳೆಯೋಣ

ಕನ್ನಡಮ್ಮನ ತೇರು||


*ಇಪ್ಪತ್ತೊಂಭತ್ತು ಮೂವತ್ತು*


ಮರೀ ಬೇಡಿ  ದಿನಾಂಕಗಳ 

ಡಿಸೆಂಬರ್ ಇಪ್ಪತ್ತೊಂಭತ್ತು 

ಮೂವತ್ತು|

ಕನ್ನಡ ಜಾತ್ರೆಗೆ  ಬಂದು ಬಿಡಿ ಗಾಜಿನ ಮನೆಗೆ ಆವತ್ತು||

 

*ಸಿಹಿಜೀವಿ ವೆಂಕಟೇಶ್ವರ*

ತುಮಕೂರು



 

21 ಡಿಸೆಂಬರ್ 2023

#ರಸ್ತೆ ಸುರಕ್ಷತೆ #Roadsafty

 


ನಿಯಮ...


ರಸ್ತೆಯಲ್ಲಿ ಸಂಚರಿಸುವಾಗ

ಪಾಲನೆ ಮಾಡು ನಿಯಮ|

ಇಲ್ಲದಿದ್ದರೆ ಸ್ವಾಗತ ಮಾಡಲು

ನಿಂತಿರುವನು ಯಮ ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಅಕ್ಷರ ಸಂತ ಡಾ.ಕವಿತಾ ಕೃಷ್ಣ















 

*ಅಕ್ಷರ ಸಂತ ಡಾ.ಕವಿತಾ ಕೃಷ್ಣ*

ವಿದ್ಯಾ ವಾಚಸ್ಪತಿ ,ಸರ್ವೊತ್ತಮ ಆಚಾರ್ಯ ಡಾ. ಕವಿತಾ ಕೃಷ್ಣ ರವರು ನಮ್ಮೊಂದಿಗೆ ಇರುವ ಸರಳತೆಯ ಸಾಕಾರ ಮೂರ್ತಿ,  ಜ್ಞಾನದ ಆಗರ, ಪ್ರಖರ ವಾಗ್ಮಿ,  ಅಕ್ಷರ ಸಂತ.

ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಬರೆದ ಮಹಾನ್ ಜ್ಞಾನ ಶಿಖರ ಇವರು.ಸಂಸ್ಕೃತ ಮತ್ತು ಕನ್ನಡ ಭಾಷೆಯಲ್ಲಿ ಪಾಂಡಿತ್ಯ ಪಡೆದ ಇವರು ಆದರ್ಶ ಶಿಕ್ಷಕರು, ಕಾದಂಬರಿಕಾರರು, ಮಕ್ಕಳ ಸಾಹಿತ್ಯದಲ್ಲಿ ಅಪಾರ ಹೆಸರು ಗಳಿಸಿದವರು,  ಕರ್ನಾಟಕ ಶಾಲಾ ಶಿಕ್ಷಣ ಪಠ್ಯ ಪುಸ್ತಕ ಸಮಿತಿಯ ಸದಸ್ಯರಾಗಿದ್ದವರು, ಉತ್ತಮ ಸಂಘಟಕರು ,ಪ್ರಕಾಶಕರು, ಪ್ರಖರ ವಾಗ್ಮಿ, ಜನಾನುರಾಗಿ, ಯುವ ಬರಹಗಾರರ ಬೆನ್ತಟ್ಟುವ ಗುರುಗಳು. ಇನ್ನೂ ಇವರ ಬಗ್ಗೆ ಹೇಳುತ್ತಾ ಹೋದರೆ ಗ್ರಂಥಗಳನ್ನೇ ಬರೆಯಬೇಕಾದೀತು.

20ಕವನ ಸಂಕಲನಗಳು,20 ನಾಟಕಗಳು,10 ಅಭಿನಂದನಾ ಗ್ರಂಥಗಳು, 42 ಜೀವನ ಚರಿತ್ರೆಗಳು,25 ಮಕ್ಕಳ ಸಾಹಿತ್ಯ ಕೃತಿಗಳು,2 ಕಾದಂಬರಿಗಳು,14 ಮಹಾನ್ ಕೃತಿಗಳು, 26 ಸಂಪಾದನಾ ಕೃತಿಗಳು,13 ಶೈಕ್ಷಣಿಕ ಕೃತಿಗಳು,6 ಸಂಶೋಧನಾ ಕೃತಿಗಳು ಸೇರಿ ಮುನ್ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಇವರ 30 ಕ್ಕು ಹೆಚ್ಚು ಕೃತಿಗಳು ಸದ್ಯದಲ್ಲೇ ಪ್ರಕಟಗೊಳ್ಳಲಿವೆ. ಇದನ್ನು ನೋಡಿದಾಗ ನಮಗೆ ಡಾ ಕವಿತಾ ಕೃಷ್ಣ ರವರು ಸಾಹಿತ್ಯದ ಮೇರು ಪರ್ವತ ಎಂದರೆ ಅತಿಶಯವೇನಲ್ಲ.

ಇವರ ಮಹಾನ್ ಕೃತಿಗಳಾದ ವಾಲ್ಮೀಕಿ ವಚನ ರಾಮಾಯಣ,  ಹಾಗೂ ವ್ಯಾಸ ಭಾರತ ಕೃತಿಗಳು ಹಲವಾರು ಮರುಮುದ್ರಣ ಕಂಡಿವೆ. ನಾಡಿನೆಲ್ಲೆಡೆ ಸಹೃದಯರು ಈ ಪುಸ್ತಕಗಳನ್ನು ಓದಿ ಪುನೀತರಾಗಿದ್ದಾರೆ.
ತಮ್ಮದೇ ಕವಿತಾ ಪ್ರಕಾಶನ ಆರಂಭಿಸಿ ಏಕಕಾಲಕ್ಕೆ ಅವರು ಬರೆದ 30 ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದ್ದು ಒಂದು ದಾಖಲೆಯಾಗಿ ಉಳಿದಿದೆ.ತಾನೂ ಬೆಳೆದು ಇತರರ ಬೆಳೆಸುವ ಉದಾತ್ತ ಗುಣದ ಇವರು ನಾಡಿನ ಉದಯೋನ್ಮುಖ ಬರಹಗಾರರಿಗೆ ತಮ್ಮ ಪ್ರಕಾಶನದ ವತಿಯಿಂದ ಅತೀ ಕಡಿಮೆ ಬೆಲೆಯಲ್ಲಿ ಪುಸ್ತಕ ಪ್ರಕಾಶನ ಮಾಡಿಸಿದ ಪ್ರೋತ್ಸಾಹ ನೀಡುವ ಕವಿಸ್ನೇಹಿ ನಮ್ಮ ಕವಿತಾ ಕೃಷ್ಣ ರವರು.
ಸುಮಾರು ನಾಲ್ಕು ನೂರು ಕೃತಿಗಳಿಗೆ ಅವರು ಮುನ್ನುಡಿ ಬೆನ್ನುಡಿ ಬರೆದಿರುವುದು  ಸಾಹಿತಿಗಳಿಗೆ ಅವರು  ಬೆಂಬಲ ನೀಡುತ್ತಿರುವುದಕ್ಕೆ  ಮತ್ತೊಂದು  ಉದಾಹರಣೆ.

ಮನೆಯನ್ನೇ ಸಾಹಿತ್ಯ ಮಂದಿರವನ್ನಾಗಿ ಪರಿವರ್ತಿಸಿರುವ ಅವರು ನಿರಂತರವಾಗಿ ಸಾಹಿತ್ಯಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿದ್ದಾರೆ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕನ್ನಡದ ನುಡಿಸೇವೆಗೈದ ಇವರು ವಿದೇಶಗಳಲ್ಲೂ ಕನ್ನಡ ಪಸರಿಸುವ ಕಾಯಕ ಮಾಡಿದ್ದಾರೆ.ಡಾ.ರಾಜ್ ಕುಮಾರ್ ನೇತೃತ್ವದಲ್ಲಿ ನಡೆದ ಗೋಕಾಕ್ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಕನ್ನಡದ ಕಟ್ಟಾಳು ನಮ್ಮ ಡಾ. ಕವಿತಾ ಕೃಷ್ಣ ರವರು.

ತಮ್ಮ ಎಪ್ಪತೈದನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ನಾಡಿನ ಇಬ್ಬರು ಮಹಾನ್ ಸ್ವಾಮೀಜಿಗಳು ಅವರನ್ನು ಆಶೀರ್ವದಿಸಿದ ಕ್ಷಣಗಳನ್ನು ಅವರು ಸಂತಸದಿಂದ ನೆನೆಯುತ್ತಾರೆ. ನಡೆದಾಡುವ ದೈವ ಶ್ರೀ ಶ್ರೀ  ಡಾ. ಶಿವಕುಮಾರ ಸ್ವಾಮೀಜಿಯವರು,ಜ್ಞಾನ ದಾಸೋಹಿ ಚುಂಚನಗಿರಿ ಕ್ಷೇತ್ರದ ಶ್ರೀ ಡಾ. ಬಾಲ ಗಂಗಾಧರನಾಥ ಸ್ವಾಮೀಜಿಯವರು ಅಂದು ಇವರನ್ನು ಆಶೀರ್ವದಿಸಿದ್ದರು.
ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಕನ್ನಡ ಸಾಹಿತ್ಯ ಪರಿಷತ್ತು  ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ನೀಡಿ ಗೌರವಿಸಿದೆ. ಅವರ ಸಮ್ಮೇಳನದ ಭಾಷಣವನ್ನು ಈಗಲೂ ಹಲವರು ಉಲ್ಲೇಖ ಮಾಡುವುದುಂಟು.

ಇವರ ಸಾಹಿತ್ಯ ಮತ್ತು  ಸಂಘಟನಾ ಶಕ್ತಿ ಗುರುತಿಸಿ ದೇಶ ವಿದೇಶಗಳಲ್ಲಿ ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿವೆ.

ಅವುಗಳಲ್ಲಿ ಪ್ರಮುಖವಾದ
ನವದೆಹಲಿಯ ಭಾರತೀಯ ವಿದ್ಯಾಭವನ ನೀಡುವ ಸರ್ವೋತ್ತಮ ಆಚಾರ್ಯ ಪುರಸ್ಕಾರವು ಬಹಳ ಅತ್ಯನ್ನತವಾದುದು. ಡಾ.ರಾಧಾಕೃಷ್ಣನ್ ರಂತವರಿಗೆ ಇಂತಹ ಪುರಸ್ಕಾರ ನೀಡಲಾಗುತ್ತು ಎಂಬುದನ್ನು ಸ್ಮರಿಸಿಕೊಳ್ಳಬಹುದು. ದಕ್ಷಿಣ ಭಾರತದ ಕೆಲವೇ ಕೆಲವರಿಗೆ ಇಂತಹ ಪುರಸ್ಕಾರ ಲಭಿಸಿರುವುದು. 
ಇದರ ಜೊತೆಯಲ್ಲಿ ಅನೇಕ ಸಂಘ ಸಂಸ್ಥೆಗಳು ಇವರ ಸಾಹಿತ್ಯ ಸೇವೆಯನ್ನು ಗುರ್ತಿಸಿ ಸನ್ಮಾನಿಸಿವೆ. ಇಂತಹ ಮಹಾನ್ ಸಾಹಿತಿ ನಮ್ಮ ಕಾಲಘಟ್ಟದಲ್ಲಿ ಇದ್ದು ನಮಗೆ ಸಲಹೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂಬುದೇ ನಮಗೆ ಸಂತಸದ ವಿಷಯ.  ಇಳಿ ವಯಸ್ಸಿನಲ್ಲೂ ಅವರದು ಯುವಕನ ಚೈತನ್ಯ. ಇಂತಹ ಮಹಾನ್ ಚೇತನ ನಮ್ಮೊಂದಿಗೆ ನೂರ್ಕಾಲ ಬಾಳಲಿ ಎಂದು ಎಲ್ಲಾ ಸಾಹಿತ್ಯಾಭಿಮಾನಿಗಳ ಪರವಾಗಿ ದೇವರಲ್ಲಿ ಬೇಡುವೆ....

*ಸಿಹಿಜೀವಿ ವೆಂಕಟೇಶ್ವರ*
ತುಮಕೂರು
9900925529