ತುಮಕೂರು
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
30 ಅಕ್ಟೋಬರ್ 2023
ಸಿಕ್ಸರ್...
ವಿಶ್ವ ಮಿತವ್ಯಯ ದಿನ
ವಿಶ್ವ ಮಿತ ವ್ಯಯ ದಿನ.
ಕೊಳ್ಳುಬಾಕ ಸಂಸ್ಕೃತಿಯ ವಿರುದ್ಧವಾಗಿ ಜಾಗೃತಿ ಮೂಡಿಸಲು ಮತ್ತು ಭವಿಷ್ಯದ ಅಗತ್ಯಗಳನ್ನು ಪೂರೈಸಲು, ಉಳಿತಾಯಕ್ಕೆ ಪ್ರೋತ್ಸಾಹ ನೀಡಲು ಜಗತ್ತಿನಾದ್ಯಂತ
ಪ್ರತಿವರ್ಷ ಅಕ್ಟೋಬರ್ 31 ರಂದು ವಿಶ್ವ ಮಿತವ್ಯಯ ದಿನ ಆಚರಿಸಲಾಗುತ್ತದೆ. ಭಾರತದಲ್ಲಿ ಒಂದು ದಿನ ಮೊದಲು ಅಂದರೆ, ಅಕ್ಟೋಬರ್ 30ರಂದು ಮಿತವ್ಯಯ ದಿನ ಆಚರಿಸಲಾಗುತ್ತದೆ. ಹೀಗಾಗಿ ಭಾರತದ ಇಂದು ಮತ್ತು ನಾಳೆ ಮಿತವ್ಯಯ ದಿನ ಎನ್ನಬಹುದು. ತಿಂಗಳ ಕೊನೆ ದಿನವಾಗಿರುವುದರಿಂದ ಸ್ಯಾಲರಿ ಆಗದೆ ಅನಿವಾರ್ಯವಾಗಿ ಈ ಎರಡು ದಿನ ಬಹುತೇಕರು ಮಿತವ್ಯಯ ಮಾಡಬಹುದು. ಆದರೆ, ಜೀವನಪೂರ್ತಿ ಮಿತವ್ಯಯ ರೀತಿ ಅನುಸರಿಸಿದರೆ ಸುಖವುಂಟು ಎನ್ನಬಹುದು.
ಅದಕ್ಕೆ ಕವಿವಾಣಿ
"ತಿಂಗಳ ಮೊದಲ ದಿನ ಸ್ಯಾಲರಿ
ತಿಂಗಳ ಕೊನೆಯಲ್ಲಿ ಸಾಲಾ ರಿ "
ಎಂದಿರುವುದು.
ಹಣ ಉಳಿತಾಯ ಮಾಡುವುದು ಮತ್ತು ಹಣಕಾಸು ಭದ್ರತೆ ಹೆಚ್ಚಿಸಿಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಮಿತವ್ಯಯ ದಿನ ಆಚರಿಸಲಾಗುತ್ತದೆ. ಇದು ಕೇವಲ ವೈಯಕ್ತಿಕ ಹಂತದಲ್ಲಿ ಮಾತ್ರವಲ್ಲ ದೇಶಗಳೂ ಹಣ ಮಿತವ್ಯಯ ಮಾಡಬೇಕು ಎನ್ನುವುದನ್ನು ಈ ದಿನ ತಿಳಿಸುತ್ತದೆ. ವಿಶ್ವ ಯುದ್ಧದ ಬಳಿಕ ಇಂತಹ ಮಿತವ್ಯಯಗಳನ್ನು ಸೂಚಿಸಲಾಗಿದೆ. ರಷ್ಯಾ-ಉಕ್ರೇನ್ ಯುದ್ದ, ಇಸ್ರೇಲ್ ಹಮಾಸ್ ಸಂಘರ್ಷದ ಈ ಸಂದರ್ಭದಲ್ಲಿಯೂ ಹಣದ ತೊಂದರೆಗಳನ್ನು ಜಗತ್ತು ಗಮನಿಸುತ್ತಿದೆ. ಅದಕ್ಕೆ ತಕ್ಕಂತೆ ನಾವೂ ಜಾಗರೂಕತೆಯಿಂದ ಹಣವನ್ನು ಖರ್ಚು ಮಾಡಿ ಉಳಿತಾಯ ಮಾಡಬೇಕಿದೆ.
1924ರಲ್ಲಿ ಇಂಟರ್ನ್ಯಾಷನಲ್ ಥ್ರಿಫ್ಟ್ ಕಾಂಗ್ರೆಸ್ ಮೊದಲ ಬಾರಿಗೆ ವಿಶ್ವ ಮಿತವ್ಯಯ ದಿನ ಘೋಷಿಸಿತ್ತು. ಇಟಲಿಯ ಮಿಲನ್ನಲ್ಲಿ ಈ ದಿನವನ್ನು ಮೊದಲ ಬಾರಿಗೆ ಘೋಷಿಸಲಾಯಿತು. ಇಟಲಿಯ ಪ್ರೊಫೆಸರ್ ಫಿಲಿಪ್ಪೊ ರವಿಝಾ ಅವರು ಅಕ್ಟೋಬರ್ 31 ಅನ್ನು ವಿಶ್ವ ಮಿತವ್ಯಯ ದಿನವೆಂದು ಘೋಷಿಸಿದರು. ಜನರು ಹಣ ಉಳಿತಾಯ ಮಾಡುವಂತೆ ಮತ್ತು ಬ್ಯಾಂಕ್ಗಳ ಕುರಿತು ತಮ್ಮ ಭರವಸೆ ಹೆಚ್ಚಿಸಿಕೊಳ್ಳುವಂತೆ ಮಾಡುವ ಉದ್ದೇಶ ಈ ದಿನದ್ದಾಗಿದೆ. ವಿಶ್ವ ಯುದ್ಧದ ಬಳಿಕ ಜನರಲ್ಲಿ ಹಣ ಉಳಿತಾಯದ ಅರಿವು ಹೆಚ್ಚಿಸುವ ಸಲುವಾಗಿ ಈ ದಿನಾಚರಣೆ ಆರಂಭಿಲಾಯಿತು. ಶಾಲೆಗಳಲ್ಲಿ, ಆಫೀಸ್ಗಳಲ್ಲಿ, ಅಸೋಸಿಯೇಷನ್ಗಳಲ್ಲಿ ಜನರು ಹಣ ಉಳಿತಾಯದ ಕುರಿತು ಜಾಗೃತಿ ಮೂಡಿಸಲಾಗುತ್ತದೆ.
1984ರಲ್ಲಿ ಭಾರತದಲ್ಲಿ ಇಂದಿರಾ ಗಾಂಧಿಯವರ ಹತ್ಯೆ ಬಳಿಕ ವಿಶ್ವ ಮಿತವ್ಯಯ ದಿನವನ್ನು ಅಕ್ಟೋಬರ್ 31ರ ಬದಲು ಅಕ್ಟೋಬರ್ 30ಕ್ಕೆ ಆಚರಿಸಲಾಗುತ್ತಿದೆ.
ವಿಶ್ವ ಮಿತವ್ಯಯ ದಿನದ ಪ್ರಮುಖ ಉದ್ದೇಶ ಬ್ಯಾಂಕ್ನಲ್ಲಿ ಹಣ ಉಳಿತಾಯ ಮಾಡುವುದು. ಈ ಮೂಲಕ ದೇಶದಲ್ಲಿ ಹಣಕಾಸು ವ್ಯವಸ್ಥೆ ಸರಿಯಾಗಿ ಇರುವಂತೆ ನೋಡಿಕೊಳ್ಳುವುದು. ಹಣವನ್ನು ಮನೆಯಲ್ಲಿ ಉಳಿತಾಯ ಮಾಡಿದರೆ ಅದು ಚಲಾವಣೆಗೊಳ್ಳುವುದಿಲ್ಲ. ಬ್ಯಾಂಕ್ನಲ್ಲಿ ಉಳಿತಾಯ ಮಾಡಿದರೆ ಆ ಹಣದ ಸರಿಯಾದ ಬಳಕೆಯಾಗುತ್ತದೆ.ಆದರೆ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಗಳಲ್ಲಿ ನಿರಂತರವಾಗಿ ಬಡ್ಡಿಯ ಪ್ರಮಾಣ ಕಡಿಮೆಯಾಗುತ್ತಿರುವುದು ಹಾಗೂ ಬ್ಯಾಂಕುಗಳು ಅನವಶ್ಯಕ ಮತ್ತು ಹೆಚ್ಚು ಶುಲ್ಕಗಳನ್ನು ವಿಧಿಸುವ ಕ್ರಮಗಳಿಂದ ಬೇಸತ್ತು ಜನರು ಉಳಿತಾಯದ ಕಡೆಗೆ ಮುಖ ಮಾಡದಿರುವುದು ಕಂಡು ಬಂದಿದೆ. ಇದಕ್ಕೊಂದು ಪರಿಹಾರವನ್ನು ತುರ್ತಾಗಿ ಕೈಗೊಳ್ಳಬೇಕಿದೆ.
2023ರ ಮಿತ ವ್ಯಯ ದಿನದ ಘೋಷಣೆ
"ಉಳಿತಾಯದ ಮೂಲಕ ನಿಮ್ಮ ನಾಳೆಗಳನ್ನು ಜಯಿಸಿ "
(conquer your tomorrow by savings) ಭವಿಷ್ಯದಲ್ಲಿ ಏನೇ ಕಷ್ಟ ಬಂದರೂ ನಮ್ಮಲ್ಲಿ ಹಣಕಾಸು ಉಳಿತಾಯವಿದ್ದರೆ ಭಯ ಕಡಿಮೆಯಾಗುತ್ತದೆ. ಭವಿಷ್ಯದಲ್ಲಿ ಕಾಯಿಲೆಗಳು, ಆರ್ಥಿಕ ಸಂಕಷ್ಟಗಳು ಉಂಟಾದರೆ ಬ್ಯಾಂಕ್ನಲ್ಲಿರುವ ನಮ್ಮ ಉಳಿತಾಯದ ಹಣವು ನೆರವಿಗೆ ಬರುತ್ತದೆ. ಹೀಗಾಗಿ, ಉಳಿತಾಯದ ಅಭ್ಯಾಸ ಇಲ್ಲದವರು ಇಂದಿನಿಂದಲೇ ಹಣ ಉಳಿತಾಯ ಆರಂಭಿಸಿ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529
29 ಅಕ್ಟೋಬರ್ 2023
ಆತ್ಮ ವಿಶ್ವಾಸ ಮೂಡಿಸೋಣ...
ಆತ್ಮವಿಶ್ವಾಸ ಮೂಡಿಸೋಣ
ಒಬ್ಬ ವಿದ್ಯಾರ್ಥಿ ಒಂದು ಟೆಸ್ಟ್ ನಲ್ಲಿ ಕಡಿಮೆ ಅಂಕ ಪಡೆದರೆ, ಒಬ್ಬ ನೌಕರ ಒಂದು ಟಾಸ್ಕ್ ನಲ್ಲಿ ಕಡಿಮೆ ದಕ್ಷತೆ ತೋರಿದರೆ ಸಾಮಾನ್ಯವಾಗಿ ಅವನು ಅಷ್ಟೇ ಎಂದು ಷರಾ ಬರೆದು ಅವನ ಕೆಳಮಟ್ಟದ ಪರ್ಪಾರ್ಮೆನ್ಸ್ ಮಾಡುವವನೆಂದು ಷರಾ ಬರೆದು ಅವನ ಹಣೆಗೆ ಕಟ್ಟಿಬಿಡುತ್ತೇವೆ.
ಎಲ್ಲಾ ವ್ಯಕ್ತಿಗಳು ಎಲ್ಲಾ ಕಾಲದಲ್ಲೂ ಒಂದೇ ರೀತಿಯ ಕೆಲಸ ಮಾಡುತ್ತಾರೆ ಎಂದರೆ ಮೂರ್ಖತನವಾದೀತು.
ಸಮಯ, ಸಂದರ್ಭ, ಒತ್ತಡ, ಪರಿಸರ, ಪ್ರೇರಣೆ ಹೀಗೆ ನಾನಾ ಅಂಶಗಳು ನಮ್ಮ ಕಾರ್ಯ ವೈಖರಿಯನ್ನು ನಿರ್ಧಾರ ಮಾಡುತ್ತವೆ.
ವರ್ಷಗಟ್ಟಲೆ ಶ್ರಮಿಸಿ ಬಲ್ಬ್ ಕಂಡುಹಿಡಿದಿದ್ದ ಥಾಮಸ್ ಅಲ್ವಾ ಎಡಿಸನ್. ಅದನ್ನು ಹೋಲ್ಡರ್ ಗೆ ಸಿಕ್ಕಿಸಬೇಕಿತ್ತು. ಹೋಲ್ಡರ್ ಇದ್ದುದು ಮಹಡಿಯ ಮೇಲೆ. "ಹೋಗಿ ಅದಕ್ಕೆ ಸಿಕ್ಕಿಸಿ ಬಾ" ಎಂದು ತನ್ನ ಸಹಾಯಕನೊಬ್ಬನಿಗೆ ಹೇಳಿದ ಎಡಿಸನ್. ಹುಡುಗ ಎಷ್ಟು ನರ್ವಸ್ ಆಗಿದ್ದನೆಂದರೆ ಮೆಟ್ಟಿಲು ಹತ್ತುವುದರೊಳಗಾಗಿ ಅವನ ಕೈ ನಡುಗಿ ಆಗಷ್ಟೇ ಕಷ್ಟಪಟ್ಟು ತಯಾರಿಸಿದ ಬಲ್ಬ್ ಬಿದ್ದು ಒಡೆದುಹೋಯಿತು.
ಎಡಿಸನ್ ಸಿಟ್ಟಾಗಲಿಲ್ಲ. ಮತ್ತೊಂದು ಬಲ್ಬ್ ತಯಾರಿಸಿದ. ಅದಕ್ಕೆ ಪೂರ್ತಿ ಇಪ್ಪತ್ನಾಲ್ಕು ತಾಸು ಹಿಡಿದವು. ಅವನ ಟೀಮಿನ ಅಷ್ಟೂ ಸಹಾಯಕರು ಅದಕ್ಕಾಗಿ ದುಡಿದಿದ್ದರು. ಎಲ್ಲಾ ಆದ ಮೇಲೆ ಮತ್ತೆ ಅದೇ ಹುಡುಗನನ್ನು ಕರೆದು "ಈ ಸಲವೂ ನೀನೇ ಸಿಕ್ಕಿಸಿ ಬಾ" ಎಂದ. ಉಳಿದ ಸಹಾಯಕರು ಇರಸು ಮುರಿಸಿಗೆ ಒಳಗಾದರು. ಈ ಹುಡುಗ ಮತ್ತೆ ಬಲ್ಬ್ ಒಡೆದರೆ, ಅದನ್ನು ತಯಾರಿಸಲು ಮತ್ತೆ ಇಪ್ಪತ್ನಾಲ್ಕು ಗಂಟೆ ಬೇಕು. ಎಡಿಸನ್ ಯಾಕಿಂತ ರಿಸ್ಕು ತೆಗೆದುಕೊಳ್ಳುತ್ತಿದ್ದಾನೆ?
ಅದಕ್ಕೆ ಎಡಿಸನ್ ಹೇಳಿದ " ನೋಡ್ರೋ, ಅಂಥ ಸಾವಿರ ಬಲ್ಬ್ ಗಳನ್ನು ಸಾವಿರ ದಿನ ಕೆಲಸ ಮಾಡಿ ತಯಾರಿಸಿ ಬಿಡಬಹುದು. ಆದರೆ ಆ ಹುಡುಗನ ಆತ್ಮವಿಶ್ವಾಸ ನಾಶವಾಗಿ ಬಿಟ್ಟರೆ ಅದನ್ನು ಮತ್ತೆ ತುಂಬಿ ಕೊಡುವುದು ಸುಲಭವಲ್ಲ!"
ನಾವೂ ಕೂಡಾ ದಿನನಿತ್ಯದ ಜೀವನದಲ್ಲಿ ಎಡಿಸನ್ ಶಿಷ್ಯ ನಂತಹ ಸಾವಿರಾರು ಜನರನ್ನು ನೋಡುತ್ತೇವೆ.ತಪ್ಪೆಸಗಿದರೆ ಮುಗಿಯಿತು ಆಳಿಗೊಂದು ಕಲ್ಲು ಬೀಸಿ ಸಹಸ್ರ ನಾಮಾರ್ಚನೆ ಮಾಡಿ ಮುಂದೆ ಆ ವ್ಯಕ್ತಿ ಆ ಕೆಲಸಕ್ಕೆ ಕೈ ಹಾಕದಂತೆ ಮಾಡಿಬಿಡುತ್ತೇವೆ. ಯಾರಿಗೆ ಆಗಲಿ ಯಶಸ್ಸಿನಲ್ಲಿ ಅವರ ಜೊತೆಗಿರದಿದ್ದರೂ ತಪ್ಪು ಮಾಡಿದಾಗ ಮತ್ತು ಜೀವನದಲ್ಲಿ ಸೋತಾಗ ಅವರ ಬೆನ್ನಿಗೆ ನಿಲ್ಲೋಣ ನಾಲ್ಕು ಆತ್ಮವಿಶ್ವಾಸವನ್ನು ವೃದ್ಧಿಸುವ ಮಾತುಗಳನ್ನಾಡೋಣ ಯಾರಿಗೆ ಗೊತ್ತು ಆ ವ್ಯಕ್ತಿ ಮುಂದೆ ಅದ್ಭುತವಾದ ಸಾಧನೆ ಮಾಡಬಹುದು!
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925429
28 ಅಕ್ಟೋಬರ್ 2023
ರಾಷ್ಟ್ರೀಯ ಏಕತಾ ದಿನ
#ರಾಷ್ಟ್ರೀಯ ಏಕತಾ ದಿನ ..
ಭಾರತದ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಉಕ್ಕಿನ ಮನುಷ್ಯ ಸರಪಟೇಲರು
ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು2014 ರಿಂದ ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲಾಗುತ್ತಿದೆ.
ಏಕತೆ, ಸಮಗ್ರತೆ ಮತ್ತು ನೈಜ ಮತ್ತು ಸಂಭಾವ್ಯ ಬೆದರಿಕೆಗಳನ್ನು ತಡೆದುಕೊಳ್ಳಲು ನಮ್ಮ ರಾಷ್ಟ್ರದ ಅಂತರ್ಗತ ಶಕ್ತಿಯನ್ನು ಮರುದೃಢೀಕರಿಸಲು ಇಂತಹ ದಿನಾಚರಣೆಗಳ ಅಗತ್ಯವಿದೆ.
ಭಾರತದ ಏಕೀಕರಣದ ಕಥೆಯೇ ಒಂದು ರೋಚಕ ಬಹುತೇಕ ಅಸಾಧ್ಯ ಎನ್ನಬಹುದಾದ ಕೆಲಸವನ್ನು ಇದು ಸಾಧ್ಯ ಎಂದು ಮಾಡಿ ತೋರಿಸಿದವರು ನಮ್ಮ ಪಟೇಲ್ ರವರು.
ಭಾರತ ಸ್ವಾತಂತ್ರ್ಯ ನಂತರ
ಪಟೇಲರು ಉಪಪ್ರಧಾನಿಯಾಗಿ ಗೃಹಖಾತೆಯನ್ನು ವಹಿಸಿಕೊಂಡರು. ತಮ್ಮ ಎಪ್ಪತ್ತೆರಡನೆಯ ವಯಸ್ಸಿನಲ್ಲಿ 565 ರಾಜ ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸಿ, ಅಲ್ಲಿ ಪ್ರಜಾಪ್ರಭುತ್ವವನ್ನು ಜಾರಿಗೊಳಿಸುವ ದೇಶದ ರಕ್ಷಣೆಯ ವ್ಯವಸ್ಥೆಯನ್ನು ರೂಪಿಸುವ ಹಾಗೂ ಭಾರತವನ್ನು ಒಗ್ಗಟ್ಟಾದ ದೇಶವನ್ನಾಗಿ ಕಟ್ಟುವ ಮಹತ್ತರ ಜವಾಬ್ದಾರಿಯನ್ನು ಪಟೇಲರು ಹೊತ್ತುಕೊಂಡರು.
ಅಧಿಕಾರದ ವಿಕೇಂದ್ರೀಕರಣ, ಧಾರ್ಮಿಕ ಸಮಾನತೆ ಮತ್ತು ಸ್ವಾತಂತ್ರ್ಯ , ಆಸ್ತಿ ಹಕ್ಕು ಇತ್ಯಾದಿ ವಿಷಯಗಳನ್ನು ವಿಷದೀಕರಿಸಿ, ಭಾರತದ ಸಂವಿಧಾನದ ರಚನೆಯಲ್ಲಿ ಮಹತ್ವದ ಕೊಡುಗೆ ನೀಡಿದರು. ರಾಜ ಮಹಾರಾಜ ಸಾಮಂತರುಗಳಿಂದ ತುಂಬಿದ್ದ ಬ್ರಿಟಿಷ್ ಇಂಡಿಯವನ್ನು ನೈಜ ಭಾರತವನ್ನಾಗಿಸಲು ಸಾಮ ಭೇದ ದಾನ ದಂಡ ಇವುಗಳನ್ನು ಸಂದರ್ಭಕ್ಕೆ ಸರಿಯಾಗಿ ಬಳಸಿದ ಹಿರಿಮೆ ಪಟೇಲರದ್ದು.
ಪ್ರಜೆಗಳ ಆಶೋತ್ತರಗಳಿಗೆ ಹೊಂದಿಕೊಂಡಿದ್ದ ಮೈಸೂರು, ಇಂದೋರ್ ಮುಂತಾದ ಪ್ರಾಂತ್ಯಗಳ ಜೊತೆ ಗೌರವದಿಂದ ವರ್ತಿಸಿದರು. ಸೂಕ್ಷ್ಮ ವಾದ ಜಾಗಗಳಾದ ತಿರುವಾಂಕೂರು ಮತ್ತಿತರೆಡೆಗೆ ವಿ. ಪಿ. ಮೆನನ್ ರಂತಹ ಪ್ರತಿನಿಧಿಗಳನ್ನು ಕಳಿಸಿ ಭಾರತದಲ್ಲಿ ತಮ್ಮ ಸಂಸ್ಥಾನವನ್ನು ಸೇರಿಸುವಂತೆ ಆಯಾ ರಾಜರ ಮನ ಒಲಿಸಿದರು.
ಯುದ್ಧ ಮಾಡಲು ಹಿಂಜರಿಯದ, ಆದರೆ ನೇರಯುದ್ಧಕ್ಕೆ ಸಿದ್ಧರಿಲ್ಲದ ರಾಜರ ಜೊತೆ ಮಾತನಾಡುವಾಗ ಮಿಲಿಟರಿ ವ್ಯವಹಾರಗಳ ಡೈರೆಕ್ಟರ್ ಜನರಲ್ ಸ್ಯಾಮ್ ಮಾಣಿಕ್ ಶಾರನ್ನು ಜೊತೆಯಾಗಿಟ್ಟುಕೊಂಡು ಹೋಗುತ್ತಿದ್ದರು. ಜುನಾಗಢ್, ಜಮ್ಮು-ಕಾಶ್ಮೀರ, ಹೈದರಾಬಾದ್ ಈ ಮೂರು ರಾಜ್ಯಗಳ ರಾಜರು ಮಾತ್ರ ಪಟೇಲರ ಚಾಕಚಕ್ಯತೆಗೆ ಮತ್ತು ಭಾರತದ ಒಗ್ಗಟ್ಟಿಗೆ ಸವಾಲು ಹಾಕಿದಾಗ ಸೈನ್ಯವನ್ನು ಕಳಿಸಿ, ರಾಜ್ಯಗಳನ್ನು ಆಕ್ರಮಿಸಿ, ಆಯಾ ರಾಜ್ಯಗಳು ಮತ್ತು ಪ್ರಜೆಗಳನ್ನು ಭಾರತದ ಭಾಗವಾಗಿಸಿದರು.
565 ಸಂಸ್ಥಾನಗಳಲ್ಲಿ ಹಂಚಿಹೋಗಿದ್ದ ಭಾರತವನ್ನು ಒಗ್ಗೂಡಿಸುವ ಮಹತ್ಕಾರ್ಯಕ್ಕೆ ಪಟೇಲರೇ ಸೂಕ್ತ ವ್ಯಕ್ತಿ ಎಂದು ಕಾಂಗ್ರೆಸ್ ಪಕ್ಷದ ,ಮೌಂಟ್ ಬ್ಯಾಟನ್ನರ ಹಾಗೂ ಹಿರಿಯ ಬ್ರಿಟಿಷ್ ಅಧಿಕಾರಿಗಳ ಒಮ್ಮತದ ಅಭಿಪ್ರಾಯವಾಗಿತ್ತು. “ರಾಜ್ಯಗಳ ಈ ಸಮಸ್ಯೆ ಎಷ್ಟು ಸಂಕೀರ್ಣವಾಗಿದೆಯೆಂದರೆ ನೀವೊಬ್ಬರೇ ಅದನ್ನು ಬಗೆಹರಿಸಲು ಸಮರ್ಥರು” ಎಂದು ಗಾಂಧೀಜಿ ಕೂಡಾ ಪಟೇಲರಿಗೆ ಹೇಳಿದ್ದರು.
ಈ ಗುರುತರ ಕಾರ್ಯವನ್ನು ಯಶಸ್ವಿಯಾಗಿ ಕೈಗೂಡಿಸುವ ಮನಃ ಸ್ಥೈರ್ಯ , ಚಾಣಾಕ್ಷತನ ಹಾಗೂ ಅಚಲತೆ ಇದ್ದವರಾದ ಪಟೇಲರು, ರಾಷ್ಟ್ರಹಿತಕ್ಕಾಗಿ ಮುಂದೆ ನಿಂತು ಸರ್ಕಾರದ ನಿರ್ಧಾರಗಳನ್ನು ಜಾರಿಮಾಡುವುದಕ್ಕೆ ತಯಾರಿದ್ದರೂ, ಸಂಸ್ಥಾನಿಕರೊಂದಿಗೆ ಸಂಧಾನ ನಡೆಸಲು ಬೇಕಾದ ಅನುಭವವನ್ನೂ, ಮುತ್ಸದ್ದಿತನವನ್ನೂ ಪಡೆದುಕೊಂಡಿದ್ದರು.
ಸ್ವಾತಂತ್ರ್ಯ ಪೂರ್ವದಲ್ಲೇ ಈ ಕಾರ್ಯಕ್ಕೆ ಕೈ ಹಾಕಿದ್ದ ಪಟೇಲರು
1947ರ ಮೇ 6 ರಂದು ರಾಜರುಗಳ ಜೊತೆ ವಿಲೀನದ ಮಾತುಕತೆ ಪ್ರಾರಂಭಿಸಿದರು. ಈ ಮಾತುಕತೆಯ ಉದ್ದೇಶ ಈ ರಾಜರು ಭವಿಷ್ಯದ ಭಾರತ ಸರ್ಕಾರದೊಂದಿಗೆ ಸಹಕಾರ ಕೊಡುವುದಕ್ಕೂ ಹಾಗೂ ಮುಂದೆ ಉಂಟಾಗಬಹುದಾದ ಘರ್ಷಣೆಗಳನ್ನು ಆರಂಭದಲ್ಲಿಯೇ ಚಿವುಟಿಹಾಕುವುದಾಗಿತ್ತು.
ಬಹಳಷ್ಟು ಸಂಸ್ಥಾನಿಕ ರಾಜರುಗಳನ್ನು ತಮ್ಮ ಮನೆಗೆ ಆಹ್ವಾನಿಸಿ ಭೋಜನ ಅಥವಾ ಚಹಾ ಸತ್ಕಾರ ಏರ್ಪಡಿಸಿದ ಪಟೇಲರು ಈ ಸಾಮಾಜಿಕ ಹಾಗೂ ಅನಧಿಕೃತ ಭೇಟಿಗಳ ಮೂಲಕ ಅವರನ್ನು ವಿಲೀನದ ಪ್ರಕ್ರಿಯೆಯಲ್ಲಿ ತೊಡಗಿಸಿದರು.ಹಾಗೂ 1947 ಆಗಸ್ಟ್ 15ರ ಒಳಗಾಗಿ ಭಾರತದಲ್ಲಿ ವಿಲೀನವಾಗುವಂತೆ ಅವರನ್ನು ಆಗ್ರಹಿಸಿದರು.
ತಮ್ಮ ಪ್ರಜೆಗಳ ಭವಿಷ್ಯದ ಹಿತಕ್ಕಾಗಿ ರಾಜ್ಯವನ್ನು ಭಾರತಕ್ಕೆ ಬಿಟ್ಟುಕೊಡುವಂತೆಯೂ, ಭಾರತದಿಂದ ಸ್ವತಂತ್ರವಾಗಿ ರಾಜ್ಯಭಾರ ಮಾಡುವುದರ , ಬಗ್ಗೆ ಎಲ್ಲಾ 565 ರಾಜರುಗಳಿಗೆ ಮನದಟ್ಟು ಮಾಡಿಕೊಟ್ಟರು. ವಿಲೀನವಾದವರ ಪೀಳಿಗೆಯವರಿಗೆ ರಾಜಧನದ ಆಶ್ವಾಸನೆಯನ್ನೂ ಅವರು ನೀಡಿದರು. ಕಾಶ್ಮೀರ, ಹೈದರಾಬಾದು ಹಾಗೂ ಜುನಾಘಢ, ರಾಜ್ಯಗಳನ್ನು ಹೊರತುಪಡಿಸಿ, ಬಾಕಿ ಎಲ್ಲಾ ಸಂಸ್ಥಾನಗಳೂ ವಿಲೀನಕ್ಕೆ ಒಪ್ಪಿದವು.
ತಮ್ಮ ಸ್ವಂತ ರಾಜ್ಯ ಗುಜರಾತಿನಲ್ಲಿದ್ದ ಜುನಾಘಡ ಸಂಸ್ಥಾನ ಪಟೇಲರಿಗೆ ಸಹಜವಾಗಿಯೇ ಮಹತ್ವದ್ದಾಗಿತ್ತು. ಅಲ್ಲಿಯ ನವಾಬರ ಮೇಲೆ ಪಾಕಿಸ್ತಾನ ಸೇರುವಂತೆ ಸರ್ ಶಾ ನವಾಜ್ ಭುಟ್ಟೋ ಒತ್ತಡ ಹೇರಿದ್ದರು. ಜುನಾಗಡ ಪಾಕಿಸ್ತಾನದಿಂದ ಸಾಕಷ್ಟು ದೂರವಿದ್ದದ್ದಷ್ಟೇ ಅಲ್ಲ ಅಲ್ಲಿಯ ಜನಸಂಖ್ಯೆಯ ಶೇಕಡಾ 80 ಹಿಂದೂಗಳಾಗಿದ್ದರು. ಪಟೇಲರು ಮುತ್ಸದ್ದಿತನದೊಡನೆ ಬಲಪ್ರದರ್ಶನವನ್ನೂ ಮಾಡಿ ಪಾಕಿಸ್ತಾನ ಜುನಾಘಡದಿಂದ ದೂರವಿರುವಂತೆಯೂ ಹಾಗೂ ಜುನಾಘಡವು ಭಾರತದೊಂದಿಗೆ ವಿಲೀನವಾಗಬೇಕೆಂದೂ ಒತ್ತಡ ಹಾಕಿದರು. ಇದರೊಂದಿಗೆ ಸೇನೆಯ ತುಕಡಿಗಳನ್ನು ಜುನಾಘಡದ ಮೂರು ಪ್ರದೇಶಗಳಿಗೆ ಕಳುಹಿಸಿ ತಮ್ಮ ಧೃಢನಿರ್ಧಾರವನ್ನು ಪ್ರಕಟಪಡಿಸಿದರು. ವ್ಯಾಪಕ ಪ್ರತಿಭಟನೆಯ ನಂತರ ಜನಪರ ಸರ್ಕಾರ ರಚನೆಯಾದ ಮೇಲೆ ಭುಟ್ಟೋ ಮತ್ತು ನವಾಬ ಇಬ್ಬರೂ ಪಾಕಿಸ್ತಾನಕ್ಕೆ ಪಲಾಯನ ಮಾಡಿದರು. ಪಟೇಲರ ಆದೇಶದ ಮೇರೆ ಭಾರತೀಯ ಸೇನೆ ಹಾಗೂ ಪೋಲೀಸ್ ಪಡೆಗಳು ಜುನಾಘಡವನ್ನು ಪ್ರವೇಶಿಸಿದವು.
ಮುಂದೆ ನಡೆದ ಜನಮತಗಣನೆಯಲ್ಲಿ ಶೇಕಡಾ 99.5 ಮಂದಿ ಭಾರತದೊಂದಿಗೆ ವಿಲೀನದ ಪರವಾಗಿ ಮತವಿತ್ತರು. ಇಂದಿನ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರದ ಭಾಗಗಳನ್ನೊಳಗೊಂಡ ಹೈದರಾಬಾದ್ ಭಾರತದ ಸಂಸ್ಥಾನಗಳಲ್ಲಿಯೇ ಅತಿ ದೊಡ್ಡದಾಗಿತ್ತು. ಅಲ್ಲಿನ ನಿಜಾಮ ಮುಸ್ಲಿಮರಾಗಿದ್ದರೂ ಜನಸಂಖ್ಯೆಯ ಶೇಕಡಾ 80 ಹಿಂದೂಗಳಾಗಿದ್ದರು.
ಜಿನ್ನಾ ಮೊದಲಾದ ಪಾಕಿಸ್ತಾನ ನಾಯಕರು ಹಾಗೂ ಬ್ರಿಟೀಷ್ ರ ಬೆಂಬಲದಿಂದ ಹೈದರಾಬಾದ್ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ನಿಜಾಮ ಘೋಷಿಸಿದ. ಆತನ ಸೇನೆಗೆ ಅತ್ಯಾಧುನಿಕ ಸಿಡ್ನಿ ಕಾಟನ್ ಬಂದೂಕುಗಳು, ಮದ್ದುಗುಂಡುಗಳನ್ನು ಮತ್ತು ತರಬೇತಿಯನ್ನು ಬ್ರಿಟೀಷ್ ರು ನೀಡಿದರು.ಕಾಸೀಂ ರಜ್ವಿಯಂಬ ಮತಾಂಧ ಮತ್ತು ಉಗ್ರವಾದಿಯ ಮುಂದಾಳತ್ವದಲ್ಲಿ ಸಾವಿರಾರು ಜನ ರಜಾಕಾರರು ಹೈದರಾಬಾದ್ ಸಂಸ್ಥಾನದಲ್ಲಿ ಜನಸಾಮಾನ್ಯರ ಮೇಲೆ ಆಕ್ರಮಣ ನೆಡೆಸಿದರು.
ಮಹಿಳೆಯರ ಮಾನಭಂಗ, ಮಕ್ಕಳ ಹತ್ಯೆ, ಜನರ ಹತ್ಯೆ ಇವು ಸಾವಿರಾರು ಕಡೆ ನೆಡೆದವು. ಸ್ವಾಮಿ ರಮಾನಂದತೀರ್ಥರ ನೇತೃತ್ವದಲ್ಲಿ ಹೈದರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟ ನೆಡೆಯಿತು. ಕರ್ನಾಟಕದ ಮುಂಡರಗಿಯ ಶಿಬಿರಕ್ಕೆ ಕೇಂದ್ರ ಮಂತ್ರಿ ಗಾಡ್ಗೀಳರನ್ನು ಕಳುಹಿಸಿದ ಪಟೇಲ್ ರು ಈ ಹೋರಾಟಕ್ಕೆ ಬೆಂಬಲ ನೀಡಿ ಪ್ರೋತ್ಸಾಹಿಸಿದರು.
ಯುದ್ಧ ಭೀತಿಯಿಂದ ಹತಾಶರಾಗಿದ್ದ ಮೌಂಟ್ ಬ್ಯಾಟನ್ನರ ಪ್ರಯತ್ನದಿಂದ ತಟಸ್ಥ ಒಪ್ಪಂದವಾದರೂ, ನಿಜಾಮ ತನ್ನ ನಿಲುವನ್ನು ಬದಲಾಯಿಸಿ ಈ ಒಪ್ಪಂದವನ್ನು ತಿರಸ್ಕರಿಸಿದ. ವಿಶ್ವಸಂಸ್ಥೆಗೆ ಈ ವಿವಾದವನ್ನು ಒಪ್ಪಿಸುವ ಕುತಂತ್ರ ಅವನದಾಗಿತ್ತು. 1948ರ ಸೆಪ್ಟೆಂಬರಿನಲ್ಲಿ ಪಟೇಲರು ಭಾರತ ಇನ್ನು ಕಾಯಲಾಗದು ಎಂದು ರಾಜಾಜಿಯವರನ್ನು ಒಪ್ಪಿಸಿ, ಹೈದರಾಬಾದನ್ನು ವಶಕ್ಕೆ ತೆಗೆದುಕೊಳ್ಳಲು ಭಾರತದ ಸೇನೆಯನ್ನು ಕಳುಹಿಸಿದರು.
ಆಪರೇಷನ್ ಪೋಲೋ ಎಂಬ ಈ ಕಾರ್ಯಾಚರಣೆಯಲ್ಲಿ ಸಾವಿರಾರು ರಜಾಕಾರರು ಕೊಲ್ಲಲ್ಪಟ್ಟರು. 1948 ಸೆಪ್ಟೆ೦ಬರ್ 17 ರಂದು ಈಗಿನ ಬೀದರ್ ಜಿಲ್ಲೆಯ ಹುಮುನಾಬಾದಿನಲ್ಲಿ ನಿಜಾಮರ ಸೈನ್ಯ ಶರಣಾಯಿತು. ಹೈದರಾಬಾದು ಪ್ರಾ೦ತ್ಯ ಸುರಕ್ಷಿತವಾಗಿ ಭಾರತದ ಭಾಗವಾಯಿತು. ಕೇವಲ ಎರಡುದಿನವಷ್ಟೇ ನಡೆದ ಕಾರ್ಯಚರಣೆಯನ್ನು ಭಾರತ ಸರಕಾರದ ದಾಖಲೆಗಳಲ್ಲಿ ಪೋಲೀಸ್ ಕಾರ್ಯಚರಣೆಯೆ೦ದು ಕರೆಯಲಾಗಿದೆ.
ನಿಜಾಮರ ಸೈನ್ಯದ ಸೈನ್ಯಾಧಿಕಾರಿ ಒಬ್ಬ ಬ್ರಿಟಿಷ್ ಆಗಿದ್ದನೆ೦ಬುವುದು ಇಲ್ಲಿ ಗಮನಾರ್ಹ. ಬಲಪ್ರಯೋಗದಿಂದ ಹೈದರಾಬಾದನ್ನು ವಶಪಡಿಸಿಕೊಂಡಲ್ಲಿ ಅದು ಹಿಂದೂ-ಮುಸ್ಲಿಮ್ ದಂಗೆಗಳಿಗೆ ಅವಕಾಶ ಕೊಡಬಹುದು ಎಂದು ಮೌಂಟ್ ಬ್ಯಾಟನ್ ಮತ್ತು ನೆಹರೂ ಶಂಕಿಸಿ ಹಿಂಜರಿದರೂ ಪಟೇಲರು ಹೈದರಾಬಾದನ್ನು ಹಾಗೆಯೇ ಬಿಟ್ಟಲ್ಲಿ ಅದು ಭಾರತದ ಪ್ರತಿಷ್ಟೆಗೇ ಸವಾಲಾಗುವುದಷ್ಟೇ ಅಲ್ಲ, ಅದರಿಂದಾಗಿ ಹಿಂದೂಗಳಾಗಲೀ, ಮಸಲ್ಮಾನರಾಗಲೀ ಆ ರಾಜ್ಯದಲ್ಲಿ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
ಯಾವುದೇ ನಾಗರೀಕ ಪ್ರತಿಭಟನೆಯಿಲ್ಲದೇ ಯಶಸ್ವಿಯಾದ ಹೈದರಾಬಾದಿನ ವಿಲೀನವನ್ನು ಅನೇಕ ಭಾರತೀಯ ಮುಸ್ಲಿಮರು ಕೊಂಡಾಡಿದರು. ನಿಜಾಮರ ಮೇಲೆ ಸಂತಾಪವಿದ್ದರೂ, ಪಟೇಲರು ಅವರನ್ನು ರಾಜ್ಯದ ಅಲಂಕಾರಿಕ ಮುಖ್ಯಸ್ಥನನ್ನಾಗಿ ನೇಮಿಸಿದರು. ಮುಂದೆ ನಡೆದ ಮಾತುಕತೆಯಲ್ಲಿ ನಿಜಾಮರು ಪಟೇಲರನ್ನು ಕ್ಷಮಾಪಣೆ ಕೇಳಿದ್ದರಿಂದ ಪಟೇಲರು ದೊಡ್ಡ ಮನಸ್ಸಿನಿಂದ ವೈರವನ್ನು ತಮ್ಮ ಮನಸ್ಸಿನಿಂದ ತೆಗೆದುಹಾಕಿದರು.
ಕಾಶ್ಮೀರ ದ ಏಕೀಕರಣವೂ ಪಟೇಲರ ಚಾಣಾಕ್ಷತನದಿಂದ ಆದ ಕಾರ್ಯವಾಗಿದೆ.
ಭಾರತವನ್ನು ಒಟ್ಟುಗೂಡಿಸುವುದು ಸುಲಭದ ಕೆಲಸವೇನಾಗಿರಲಿಲ್ಲ. ಪಟೇಲರ ಗಣನೀಯ ಸೇವೆಯನ್ನು ಗಮನದಲ್ಲಿಟ್ಟು ಅವರನ್ನು ಭಾರತದ ಬಿಸ್ಮಾರ್ಕ್ ಎಂದು ಕರೆಯಲಾಗುತ್ತದೆ. ಪಟೇಲರು ಭಾರತದ ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯ ಹಿರಿಯ ಸದಸ್ಯರಾಗಿದ್ದರು.
ಭಾರತದ ಸಂವಿಧಾನದಲ್ಲಿ ನಾಗರಿಕ ಸ್ವಾತಂತ್ರ್ಯದ ರೂಪರೇಷೆಗಳನ್ನು ನಿರ್ಧರಿಸುವುದಕ್ಕಾಗಿ ರಚಿಸಲಾಗಿದ್ದ ಅನೇಕ ಮಹತ್ವದ ಸಮಿತಿಗಳ ನಾಯಕರಾಗಿದ್ದರು. ಸರಕಾರದ ರಕ್ಷಣಾತ್ಮಕ ಅಧಿಕಾರವಿರುವ, ವ್ಯಾಪಕ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅವರು ಬೆಂಬಲ ನೀಡಿದರು. ರಾಷ್ಟ್ರೀಕೃತ ಸಿವಿಲ್ ಸರ್ವೀಸನ್ನು ಅವರು ಬಲವಾಗಿ ಬೆಂಬಲಿಸಿದ್ದಲ್ಲದೇ , ಆಸ್ತಿ ಹಕ್ಕು ಮತ್ತು ರಾಜಧನದ ಕಲಮುಗಳನ್ನೂ ಸೇರಿಸಿದರು. ಇಂತಹ ಮಹಾನ್ ಸಾಧನೆ ಮಾಡಿದ ಪಟೇಲರ ಜನ್ಮ ದಿನವನ್ನು ಏಕತಾ ದಿನವನ್ನಾಗಿ ಆಚರಿಸುವುದು ಅರ್ಥಪೂರ್ಣ. ನಮ್ಮ ದೇಶದ ಸಮಗ್ರತೆ ಮತ್ತು ಏಕತೆಗೆ ಈ ದಿನ ನಾವೆಲ್ಲರೂ ಪ್ರತಿಜ್ಞೆ ಸ್ವೀಕರಿಸಿ ಕಾರ್ಯ ಪ್ರವೃತ್ತರಾದರೆ ಈ ದಿನಕ್ಕೆ ಇನ್ನೂ ಅರ್ಥ ಬರುವುದು.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529.
25 ಅಕ್ಟೋಬರ್ 2023
ಕಾರ್ಬಿನ್ ಕೋವ್ ಬೀಚ್.ನನ್ನ ಬ್ಲಾಗ್ ನ .2000 ಪೋಸ್ಟ್ ನ ಸಂಭ್ರಮ
ನಯನ ಮನೋಹರ ಕೋರ್ಬಿನ್ ಕೋವ್ ಬೀಚ್..
ನಯನ ಮನೋಹರ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಮತ್ತು ಜಲ ಸಾಹಸ ಕ್ರೀಡೆಗಳಿಗೆ ಹೆಸರಾದ ಅಂಡಮಾನ್ ನ ಬೀಚ್ ಗಳಲ್ಲಿ ಕಾರ್ಬಿನ್ ಕೋವ್ ಪ್ರಮುಖ ಬೀಚ್.
ಇದು ಪೋರ್ಟ್ ಬ್ಲೇರ್ನ ಅತಿ ಹೆಚ್ಚು ಭೇಟಿ ನೀಡುವ ಬೀಚ್ ಸಹ ಆಗಿದೆ. ಎಟರ್ನಲ್ ಅಂಡಮಾನ್ನ 2017 ರ ಸಮೀಕ್ಷೆಯ ಪ್ರಕಾರ 10 ರಲ್ಲಿ 7 ಜನರು ಅಂಡಮಾನ್ ದ್ವೀಪಗಳಿಗೆ ಭೇಟಿ ನೀಡುವ ಪ್ರವಾಸಿಗರು ತಮ್ಮ ಪ್ರವಾಸದಲ್ಲಿ ಈ ಬೀಚ್ಗೆ ಭೇಟಿ ನೀಡುತ್ತಾರೆ.
ಕಾರ್ಬಿನ್ಸ್ ಕೋವ್ ಕಡಲತೀರವು ಪೋರ್ಟ್ ಬ್ಲೇರ್ನಲ್ಲಿ 1.5 ಕಿಮೀ ಉದ್ದದವರೆಗೆ ಅರ್ಧಚಂದ್ರಾಕಾರದ ಆಕಾರದಲ್ಲಿ ನಿರ್ಮಿಸಲಾದ ಅತ್ಯಂತ ಉದ್ದವಾದ ತೀರವನ್ನು ಹೊಂದಿದೆ.
ಆ ತೀರದಗುಂಟ ಸಮಾನ ಮನಸ್ಕರ ಜೊತೆಯಲ್ಲಿ ನಡೆಯುವುದೇ ಒಂದು ಸುಂದರ ಅನುಭವ. ಪ್ರೇಮಿಗಳು ದಂಪತಿಗಳು ,ಕುಟುಂಬ ಸಮೇತವಾಗಿ ಸಂಜೆಗೆ ಈ ಬೀಚ್ ಗೆ ಭೇಟಿ ನೀಡುವ ಜನ ಹೆಚ್ಚಾಗಿರುವರು.
ಬಲಭಾಗದಲ್ಲಿ ಸಾಲಾಗಿ ನಿಂತ ತೆಂಗಿನ ಮರಗಳು ಎಡಭಾಗದಲ್ಲಿ ಬಿಳಿ ಮರಳು ಹಸಿರು ಮತ್ತು ನೀಲಿ ಬಣ್ಣದ ನೀರು ನಮ್ಮ ಮನಸ್ಸನ್ನು ಪ್ರಫುಲ್ಲವಾಗಿಸುತ್ತದೆ. ನಾವು ಬೀಚ್ ನಲ್ಲಿ ನಡೆಯುವಾಗ ಐಸ್ ಕ್ಯಾಂಡಿ ,ಚುರುಮುರಿ ಮಾರುವವರು ಅಡ್ಡಲಾಗಿ ತಮ್ಮ ಪದಾರ್ಥಗಳನ್ನು ಮಾರಲು ಪ್ರಯತ್ನಿಸುವರು.
ನಾವು ಒಂದು ಚುರುಮುರಿ ಕೊಂಡು ತಿಂದೆವು. ರುಚಿ ಕರ್ನಾಟಕದ ರುಚಿಗೆ ಹತ್ತಿರವಿತ್ತು ಆದರೆ ಪ್ರಮಾಣ ಕಡಿಮೆ ಹಣ ಜಾಸ್ತಿ!
ತೀರದಲ್ಲಿ ಒಂದು ಕಿಲೋಮೀಟರ್ ವಾಕ್ ಮಾಡಿದ ಮೇಲೆ ನಮಗೆ ಕೆಲವು ಶಿಥಿಲವಾದ ಬಂಕರ್ ಗಳು ಕಾಣುತ್ತವೆ. ಅವು ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನ್ ನವರು ನಿರ್ಮಿಸಿದ ಬಂಕರ್ ಗಳು ಎಂದು ನಮ್ಮ ಟ್ರಾವೆಲ್ ಗೈಡ್ ಮಾಹಿತಿ ನೀಡಿದನು.
ನಾವು ಬೀಚ್ ನಲ್ಲಿ ವಾಕ್ ಮಾಡುತ್ತಾ ಸೌಂದರ್ಯವನ್ನು ಸವಿಯುವಾಗ ಜೆಟ್ ಸ್ಕಿ, ಬೋಟ್ ರೈಡಿಂಗ್ , ಮುಂತಾದ ವಾಟರ್ ಗೇಮ್ಸ್ ನಲ್ಲಿ ನಿರತ ಯುವಕರು ನೀರಾಟದಲ್ಲಿ ಮೈಮರೆತಿರುವುದನ್ನು ಗಮನಿಸಿದೆ.
ಸ್ವಲ್ಪ ದೂರ ಸಾಗಿದ ನಮಗೆ ಮತ್ತೊಂದು ಬಂಕರ್ ಎದುರಾಯಿತು.
ಅಲ್ಲಿ ನಿಂತು ನೋಡಿದರೆ ಹಾವು ದ್ವೀಪವನ್ನು ಕಾಣಬಹುದು.
ಕಡಲತೀರದ ಕೆಳಗೆ ಮತ್ತಷ್ಟು ಬಲಕ್ಕೆ ನಡೆದರೆ, ನೀವು ದೊಡ್ಡ ಮೀನುಗಾರಿಕೆ ದೋಣಿಗಳನ್ನು ಕಾಣಬಹುದು ಮತ್ತು ಹೇರಳವಾಗಿ ದಟ್ಟವಾದ ಮ್ಯಾಂಗ್ರೋವ್ ಕಾಡುಗಳ ಕಾಣಬಹುದು.
ಹೀಗೆ ಕಾರ್ಬಿನ್ ಕೋವ್ ಬೀಚ್ ನ ಸೌಂದರ್ಯ ಸವಿಯುವ ನಮ್ಮ ಮನಗಳಿಗೆ ಸೂರ್ಯ ದೇವ ಸಂಜೆ 4 .45 ಕ್ಕೆ ಅಸ್ತಂಗತವಾಗಿ ತಣ್ಣೀರೆರಚಿಬಿಟ್ಟ! ಅಂಡಮಾನ್ ನಲ್ಲಿಯೇ ಹಾಗೆ ಬೆಳಿಗ್ಗೆ ನಾಲ್ಕುವರೆಗೆ ಸೂರ್ಯೋದಯ ಸಂಜೆ ನಾಲ್ಕುಮಕ್ಕಾಲಿಗೆ ಸೂರ್ಯಾಸ್ತ!
ಒಟ್ಟಾರೆಯಾಗಿ ನೀವು ಅಂಡಮಾನ್ ಪ್ರವಾಸ ಕೈಗೊಂಡರೆ ಪೋರ್ಟ್ ಬ್ಲೇರ್ನಲ್ಲಿ ನೀವು ಭೇಟಿ ನೀಡಬಹುದಾದ ಅತ್ಯುತ್ತಮ ಕಡಲತೀರಗಳಲ್ಲಿ ಕಾರ್ಬಿನ್ ಕೋವ್ ಬೀಚ್ ಸಹ ಒಂದಾಗಿದೆ. ಎಂದು ಹೇಳಬಹುದು.
ಸಿಹಿಜೀವಿ ವೆಂಕಟೇಶ್ವರ
ತುಮಕೂರು