30 ಸೆಪ್ಟೆಂಬರ್ 2023

ವಿಶ್ವ ಹೃದಯ ದಿನ....


 


ವಿಶ್ವ ಹೃದಯ ದಿನ ...

ಆಧುನಿಕ ಜೀವನಶೈಲಿ,ಆಹಾರ ಪದ್ದತಿ, ಅಶಿಸ್ತಿನ ಜೀವನ ,ಕೆಟ್ಟ ಚಟಗಳಿಗೆ ಬಲಿಯಾಗುವುದು ಇವೆಲ್ಲ ಕಾರಣದಿಂದಾಗಿ ಹೃದಯ ಸಂಬಂಧಿ ರೋಗಗಳು ಈಗೀಗ ಸಾಮಾನ್ಯವಾಗಿವೆ.ಇದಕ್ಕೆ ಅಪವಾದವೆಂಬಂತೆ ಯಾವುದೇ ಚಟಗಳು ಇಲ್ಲದಿದ್ದರೂ ಕೆಲವರಿಗೆ ಹೃದಯ ಸಂಬಂಧಿ ಕಾಯಿಲೆಗಳು ಸಾಮಾನ್ಯವಾಗಿ ಜನರು ಚಿಂತೆ ಮಾಡುವಂತಾಗಿದೆ.

ಹೃದಯದ ಬಗ್ಗೆ ಹೃದಯ ಸಂಬಂಧಿಸಿದ ರೋಗಗಳ ಬಗ್ಗೆ ಜಾಗೃತಿ ಮೂಡಿಸಲು

1991ರಿಂದ ಪ್ರತಿ ವರ್ಷದ ಸೆಪ್ಟೆಂಬರ್ ನಲ್ಲಿ ಕೊನೆಯ ಭಾನುವಾರ ವಿಶ್ವ ಹೃದಯ ದಿನವನ್ನು (World Heart Day) ವಿಶ್ವ ಹೃದಯ ಸಂಸ್ಥೆ (ವರ್ಲ್ಡ್ ಹಾರ್ಟ್ ಫೆಡರೇಷನ್ ) ಯು ಆಯೋಜಿಸುತ್ತಿತ್ತು. ಆದರೆ 2011 ರಿಂದ ವಿಶ್ವ ಹೃದಯ ದಿನವನ್ನು ಸೆಪ್ಟೆಂಬರ್ ಕೊನೆಯ ಭಾನುವಾರದ ಬದಲಾಗಿ 29 ಸೆಪ್ಟೆಂಬರ್ ರಂದು ಆಚರಿಸಲಾಗುತ್ತದೆ.


ವಿಶ್ವ ಹಾರ್ಟ್ ಫೆಡರೇಶನ್ ಸಂಸ್ಥೆಯು ಮುಖ್ಯ ಅಪಾಯಕಾರಿ ಅಂಶಗಳಾದ , ತಂಬಾಕು, ಅನಾರೋಗ್ಯಕರ ಆಹಾರ ಮತ್ತು ದೈಹಿಕ ಚಟುವಟಿಕೆ ಇಲ್ಲದಿರುವಿಕೆ ಗಳನ್ನು ನಿಯಂತ್ರಿಸುವುದರಿಂದ ಹೃದಯ ರೋಗ ಮತ್ತು ಹೃದಯಾಘಾತಗಳಿಂದ ಅಕಾಲಿಕ ಮರಣಗಳನ್ನು ಕನಿಷ್ಠ ಪ್ರತಿಶತ 80%ರಷ್ಟರ ಮಟ್ಟಿಗೆ ತಪ್ಪಿಸಬಹುದಾಗಿದೆ ಎಂದು ಪ್ರಚಾರ ಮಾಡುತ್ತದೆ. ಇಂತಹ ಸಾರ್ವಜನಿಕ ಭಾಷಣ, ಮತ್ತು ಪ್ರದರ್ಶನ , ನಡಿಗೆ ಮತ್ತು ಓಟ, ಸಂಗೀತ ಅಥವಾ ಕ್ರೀಡಾಕೂಟಗಳಂಥ ಚಟುವಟಿಕೆಗಳನ್ನು ವಿಶ್ವದಾದ್ಯಂತ ಏರ್ಪಡಿಸುತ್ತದೆ.


ವಿಶ್ವ ಹೃದಯ ಸಂಸ್ಥೆಯು (ವರ್ಲ್ಡ್ ಹಾರ್ಟ್ ಫೆಡರೇಷನ್ ) ಹೃದಯ ಕಾಯಿಲೆಗಳ ತಡೆಗಟ್ಟುವಿಕೆಗಾಗಿ ಮೀಸಲಾಗಿರುವ ಜಾಗತಿಕ ಸಂಸ್ಥೆಯಾಗಿದ್ದು ಮತ್ತು ಏಷ್ಯಾ ಫೆಸಿಫಿಕ್, ಯುರೋಪ್, ಪೂರ್ವ ಮೆಡಿಟರೇನಿಯನ್, ಅಮೆರಿಕಾ ಮತ್ತು ಆಫ್ರಿಕಾದ ಪ್ರದೇಶಗಳಲ್ಲಿರುವ ಸುಮಾರು 100 ದೇಶಗಳ ಹೃದಯ ಸಂಸ್ಥೆಗಳನ್ನು ನಿಯಂತ್ರಿಸುತ್ತಿದ್ದು ಸ್ವಿಜರ್ಲ್ಯಾಂಡ್ ನ ಜಿನೀವಾ ಮೂಲದ ಸರಕಾರೇತರ ಸಂಘಟನೆಯಾಗಿದೆ.
ನಮ್ಮ ಹೃದಯವನ್ನು ನಾವು ಜೋಪಾನವಾಗಿ ಕಾಪಾಡಿಕೊಳ್ಳೋಣ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು

29 ಸೆಪ್ಟೆಂಬರ್ 2023

ಸ್ವಾಮಿನಾಥನ್..

 




ಸ್ವಾಮಿನಾಥನ್..


ಕೋಟ್ಯಂತರ ಭಾರತೀಯರ

ಹಸಿವು ನೀಗಿಸಿದ ಅನ್ನದಾತ |

ನಮ್ಮಲ್ಲೆರ ಕೃತಜ್ಞತಾ ಪೂರ್ವಕ

ನಮನಗಳು ನಿಮಗೆ ಸ್ವಾಮಿನಾಥ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ನಂದನವನ.

 

ನೀಲ್ಲದ ದಿನಗಳು ನೀರಸ

ಮರುಭೂಮಿಯ ಜೀವನ|

ನೀ ಬಳಿ ಸುಳಿದರೂ ಸಾಕು

ಅದೇ ನನ್ನ ನಂದನವನ||

26 ಸೆಪ್ಟೆಂಬರ್ 2023

ಪರಿಸರಪ್ರಿಯ ಮತ್ತು ಆಸ್ತಿಕರ ಮೆಚ್ಚಿ‌ನ ಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯ

 



ಸರ್ಪ ಸಂಸ್ಕಾರದ ಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯ.


ಕರ್ನಾಟಕದ ಶ್ರೀಮಂತ ದೇಗುಲಗಳಲ್ಲಿ ಒಂದು ಕುಕ್ಕೆ  ಸುಬ್ರಹ್ಮಣ್ಯ ದೇವಾಲಯ. ಆಸ್ತಿಕರ ಪಾಲಿಗೆ ಕುಕ್ಕೆ ಎಂದೇ ಹೆಸರಾದ ಈ ದೇವಾಲಯ ಇರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ನಾಗಾರಾಧನೆ, ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರಕ್ಕೆ  ಹೆಸರಾದ ಈ ಕ್ಷೇತ್ರದಲ್ಲಿ ಪ್ರತಿದಿನವೂ ಒಂದಿಲ್ಲೊಂದು ವಿಶೇಷ ಪೂಜೆಗಳು ನಡೆಯುತ್ತವೆ ಷಷ್ಠಿ ದಿನಗಳು ಮತ್ತು ಮಂಗಳವಾರಗಳ ದಿನ ಹೆಚ್ಚು ಭಕ್ತರು ಈ ಕ್ಷೇತ್ರಕ್ಕೆ ಭೇಟಿ ನೀಡುವರು. ನಾವು ಸಹ  ಧರ್ಮಸ್ಥಳದ ಸ್ವಾಮಿಯ ದರ್ಶನದ ನಂತರ ಕುಕ್ಕೆ ಗೆ ಹೋಗಿ ಸುಬ್ಬಯ್ಯನ ದರ್ಶನ ಪಡೆದೇ ಬರುವೆವು.

ರಮ್ಯ ಕಾಡಿನ ಮತ್ತು ಬೆಟ್ಟಗುಡ್ಡಗಳ ನಡುವೆ ಇರುವ ಈ ದೇವಾಲಯ ಪ್ರಕೃತಿ ಪ್ರಿಯರನ್ನು ಸಹ ಸೆಳೆಯುತ್ತದೆ. ಕುಮಾರ ಧಾರಾ ಮ

ನದಿಯ ಸ್ನಾನವೂ ಸಹ ಒಂದು ಸುಂದರ ಅನುಭೂತಿಯನ್ನು ನೀಡುತ್ತದೆ.

ಈ ದೇವಾಲಯದ ಬಗ್ಗೆ ಇರುವ ಒಂದು ಐತಿಹ್ಯ ಹೀಗಿದೆ.

ಹಿಂದೆ ಕಾಡು ಬೆಟ್ಟಗಳಿಂದ ಕೂಡಿದ 'ಪೊಸರ' ಎಂಬ ಸ್ಥಳದಲ್ಲಿ ಕುಕ್ಕ ಮತ್ತು ಲಿಂಗ ಎಂಬ ಸೋದರ ಮಲೆಕುಡಿಯರು ವಾಸವಾಗಿದ್ದರು. ಇವರು ಗೆಡ್ಧೆ ಗೆಣಸು ಸಂಗ್ರಹ ಮತ್ತು ಪ್ರಾಣಿ ಬೇಟೆಯಿಂದ ಜೀವನ ನಡೆಸುತ್ತಿದ್ದರು.ಬಿಲ್ಲು,ಬಾಣ ಪ್ರಯೋಗದಲ್ಲಿ ಪರಿಣಿತರಾದ ಇವರು ತಮ‍್ಮ ಪರಿವಾರದ ನಾಯಕರಾಗಿದ್ದರು. ಒಂದೊಮ್ಮೆ ಈ ಮಲೆಕುಡಿಯ ನಾಯಕರು ಬೇಟೆಯಾಡುವ ಸಲುವಾಗಿ ಪೂರ್ವಭಾಗದ ಮಲೆಗೆ ಹೋಗಿದ್ದರು. ಆಯಾಸ ಪರಿಹಾರಕ್ಕಾಗಿ ಕಲ್ಲಮೇಲೆ ಕುಳಿತಿರುವಾಗ ಸಂಜೆಯಾಗುತ್ತಿರುವ ಆ ಹೊತ್ತಿನಲ್ಲಿಕಾಡಿನ ಮಧ್ಯೆ ಭೀಕರ ಬೆಂಕಿಯ ಉರಿ ಆವರಿಸುತ್ತಿರುವುದು ಕಂಡಿತು. ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸುತ್ತಿರುವಾಗ ಇವರಿಗೊಂದು ಆರ್ತ ಧ್ವನಿ ಕೇಳಿಸಿತು. ಅತ್ತ ಕಡೆ ನೋಡಿದಾಗ ಒಂದು ಬಿದಿರಿನ ಹಿಂಡಿಲು ಉರಿಯುತ್ತಿರುವುದು ಗೋಚರಿಸಿತು. 'ಭಯ ಪಡಬೇಡಿ ನನ‍್ನನ್ನು ರಕ್ಷಿಸಿ ' ಎಂದು ಕೇಳಿ ಬರುತ‍್ತಿದ್ದ ಮನುಷ್ಯ ಸ್ವರದ ಕಡೆಗೆ ನೋಡಿದಾಗ ಉರಿಯುತ್ತಿರುವ ಬಿದಿರಿನ ಹಿಂಡಿನಲ್ಲಿ ಉರಿಯದೆ ಇದ್ದ ಒಂದು ಬಿದಿರಿನ ತುದಿಯಲ್ಲಿ ಸುರುಳಿಯಾಗಿ ಸುತ್ತಿ ಜೀವ ರಕ್ಷಣೆಗಾಗಿ ಒದ್ಧಾಡುವ ಸರ್ಪ ವೊಂದು ಗೋಚರಿಸಿತ್ತು. ಭಯ ಭೀತರಾದ ಕುಕ್ಕ-ಲಿಂಗರು ಅದನ್ನು ನೋಡಿದಾಗ  ಸರ್ಪ ಮನುಷ್ಯ ಸ್ವರದಲ್ಲಿ ಗಂಭೀರವಾಗಿ "ನೀವು ನನ್ನನ್ನು ರಕ್ಷಿಸಿದ್ದೇ  ಆದಲ್ಲಿ ಮುಂದೆ ನಿಮಗೆ ಒಳ್ಳೆಯದಾಗುವುದು" ಎಂದು ದಿವ್ಯವಾಣಿಯಲ್ಲಿ ಹೇಳಿತು. ಆಗ ಕುಲದೇವರಾದ ಲಿಂಗರೂಪಿ ಶಿವನ ಮೇಲೆ ಭಾರ ಹಾಕಿ ಕುಕ್ಕೆಲಿಂಗರು ತಮ್ಮ ಬೇಟೆಯ ಬಿಲ್ಲನ್ನು ಅದರ ಕಡೆಗೆ ನೀಡಿದರು. ಮಹಾಸರ್ಪವು ನೀಡಿದ ಬಿಲ್ಲಿಗೆ ಸುರುಳಿಯಾಗಿ ಸುತ್ತಿಕೊಂಡಿತು. ಸುತ್ತಿಕೊಂಡ ಹಾವು ನೀವು ಎಲ್ಲಿಯೂ ನೆಲಕ್ಕಿಡದೆ ಎತ್ತಿಕೊಂಡು ಪರ್ವತದ ತಪ್ಪಲಿಗೆ ಕೊಂಡೊಯ್ಯುವಂತೆ ಹೇಳಿತು . ಇಡಲೂ ಆಗದ ಎತ್ತಲೂ ಆಗದ ಮಹಾ ಗಾತ್ರದ ಸರ್ಪವನ್ನು ಕುಕ್ಕಲಿಂಗರು ತಮ್ಮ ಹೆಗಲಿನಲ್ಲಿಟ್ಟು ಕೊಂಡು ಇಳಿಜಾರಿನ ಪರ್ವತಗಳಲ್ಲಿ ಇಳಿದು ಬಂದರು. ಇಳಿಯುವಾಗ ಕಾಲು ಜಾರುವುದು ಸಹಜ ,ಹಾಗಾಗಿ ಆಧಾರಕ್ಕಾಗಿ 'ಕಾಡುಕುವೆ' ಎನ್ನುವ ಸಸ್ಯದ ದಂಡುಗಳನ್ನು ಊರಿಕೊಂಡು ಇಳಿದುಬರುತ್ತಾರೆ. ಬಿದಿರಿನ ಹಿಂಡಿಲಿನಿಂದ ಬಿಲ್ಲಿಗೆ ಸರ್ಪ ಸುತ್ತಿಕೊಂಡಾಗ ಆದ ಅಶರೀರವಾಣಿಯಂತೆ ಆಯಾಸಗೊಂಡ ಕುಕ್ಕ-ಲಿಂಗರು ಬೆಟ್ಟದ ತಪ್ಪಲಿಗೆ ಬಂದಾಗ ತಂಪಾದ ಸಮತಟ್ಟು ಸ್ಥಳ ಸಿಕ್ಕಿತ್ತು. ದೂರದ ಬೆಟ್ಟದಿಂದ ಇಳಿದು ಬಂದ ಇವರಿಗೆ ಆಯಾಸವೂ ಬಾಯರಿಕೆಯೂ ಆಗಿತ್ತು. ಈ ಸ್ಥಳದಲಿ ಕುಕ್ಕ-ಲಿಂಗರಿಗೆ ಏನೋ ವಿಶೇಷವಿದ್ದಂತೆ ಮನಸ್ಸಿನಲ್ಲಿ ಅನ್ನಿಸಿತ್ತು. ಹಿಂದೆ ಆಗಿರುವ ಅಶರೀರವಾಣಿಯಂತೆ ಕುಕ್ಕ ಹಾವನ್ನು ನೆಲದಲ್ಲಿ ಇಡಬಾರದೆನ್ನುವ ಕಾರಣಕ್ಕಾಗಿ ಎರಡು ಕೈಗಳಿಂದ ಬಿಲ್ಲನ್ನು ತಾನು ಹಿಡಿದು ನಿಂತು ತಮ್ಮ ಲಿಂಗನನ್ನು ನೀರು ತರಲು ಕಳುಹಿಸಿದ. ತಮ್ಮ ಲಿಂಗನು ಮಣ್ಣಿನ ಸಣ್ಣ ಕುಡಿಕೆ ಹಿಡಿದು ನೀರಿಗಾಗಿ ಹೊರಟಾಗ " ಇಲ್ಲಿಂದ ಮುಂದೆ ತೆಂಕಿಗೆ ಹೋಗು ಅಲ್ಲಿ ಅಮ್ರತ ಸುರಿವ ಬೈನೆ ಮರವಿದೆ, ನೀನು ಹತ್ತಿರ ಹೋದರೆ ಅದು ಬಾಗಿ ನಿನ್ನ ಗಡಿಗೆ ತುಂಬಿ ಬರುತ್ತದೆ. "  ಎಂದು ಧ್ವನಿ ಕೇಳಿ ಬಂತು. ಕೇಳಿ ಬಂದ ಧ್ವನಿಯಂತೆ ತೆಂಕಿಗೆ ಹೊರಟು ಹೋದಾಗ ಅಲ್ಲಿ ಬೈನೆ ಮರ ಬಿಟ್ಟರೆ ಬೇರೇನು ಲಿಂಗನಿಗೆ ಕಾಣಲಿಲ್ಲ.  ನೋಡುತ್ತಾ ನಿಂತ ಲಿಂಗನಿಗೆ ತಾನಾಗಿಯೇ ಬಾಗಿದ ಬೈನೆ ಮರ ಹಿಡಿದ ಗಡಿಗೆಗೆ ಹಾಲಿನಂತಹ ನೀರನ್ನು ಸುರಿದು ಹಿಂದಿನ ಸ್ಥಿತಿಗೆ ನಿಂತಿತು. ಇದರಿಂದ ಲಿಂಗನಿಗೆ ಇನ್ನಷ್ಟು ಭಯವಾಯಿತು. ಏನೇ ಆಗಲೀ ಇದೆಲ್ಲವನ್ನು ಅಣ್ಣ ಕುಕ್ಕೆಗೆ ತಿಳಿಸಬೇಕೆಂದು ಆತುರದಿಂದ ಹಿಂದಿರುಗಿ ಬರುತ್ತಿದ್ದಾಗ ಕಾಲು ಎಡವಿದ. ಗಡಿಗೆ ಕೈ ಜಾರಿತು, ಅದರಲ್ಲಿ ಅಮ್ರತದಂತಹ ನೀರು ಒಂದಷ್ಟುಚೆಲ್ಲಿತ್ತುಉಳಿದದ್ದು ಇಬ್ಬರಿಗೆ ಕುಡಿಯಲು ಸಾಲದೆಂದು ಹತ್ತಿರದಲ್ಲಿದ್ದ ನೀರನ್ನು ತುಂಬಿಸಿಕೊಂಡ. ಆಗ ಅದು ಶೇಂದಿಯಾಗಿ ಪರಿವರ್ತನೆಯಾಯಿತು.  ಲಿಂಗ ಗಡಿಗೆಯ ನೀರನ್ನು ಮೊದಲು ಕುಡಿದ. ಅವನು ಅಮಲಿನ ಮತ್ತಲ್ಲಿ ಅಣ್ಣ ಕುಕ್ಕನಿಗೆ ಕುಡಿಸುವ ಬದಲಿಗೆ ತಲೆಗೆ ಸುರಿದು ಬಿಟ್ಟ. ಆಗ ಹುತ್ತ ಅವನನ್ನು ಪೂರ್ಣವಾಗಿ ಮುಚ್ಚಿಬಿಟ್ಟಿತ್ತು. 'ಇನ್ನು ಮುಂದೆ ನೀನು ನಿನ್ನ ಪರಿವಾರದೊಂದಿಗೆ ನನ್ನನ್ನು ಆರಾಧಿಸಿಕೊಂಡು ಬಾ' ಎನ್ನುವ ಸ್ವರ ಕೇಳಿಬಂತು. ಆದರೆ ಪೂಜೆ , ಆರಾಧನೆ ಏನೂ ಅರಿಯದ ಲಿಂಗ ಹುತ್ತದ ಬಳಿಯೇ ಮಲಗಿದ ಅವನಿಗೆ"ನೀನು ಚಿಂತಿಸಬೇಡ ನನ್ನ ಸೇವೆಗಾಗೆ ಉತ್ತಮ ಬ್ರಾಹ್ಮಣ ಸಮುದಾಯವನ್ನು ನಿಯಮಿಸು" ಎಂಬ ಸ್ವರ ಕೇಳಿತು. ಪೂಜೆಗಾಗಿ ಬ್ರಾಹ್ಮಣನನ್ನು ಹುಡುಕುತ್ತಾ ಬಂದವನಿಗೆ ಒಂದು ಬ್ರಾಹ್ಮಣ ಕುಟುಂಬ ಸಿಕ್ಕಿತು. ರಾತ್ರಿ ಅಲ್ಲಿಯೇ ನಿದ್ದೆ ಹೋದ. ಆ ಮನೆಯ ಎಳೆಯ ಪ್ರಾಯದ ಮಗುವೊಂದನ್ನು ರಾತ್ರಿಯೇ ಹೊತ್ತುಕೊಂಡು ಕುಕ್ಕೆಗೆ ಬಂದ. ಬ್ರಾಹ್ಮಣ ವಿಧಿಗಳನ್ನು ನಡೆಸಲು ಕುಕ್ಕೆಯಲ್ಲಿ ಯಾರು ಇಲ್ಲದ ಕಾರಣ ತಾನೆ ಬ್ರಾಹ್ಮಣ ಮಾಣಿಗೆ ನೂಲನ್ನು ಹಾಕಿದ ಅಲ್ಲದೆ ತನ್ನ ಮಗಳನ್ನೆ ಮದುವೆ ಮಾಡಿದ. ಕುಕ್ಕ ಸರ್ಪಸಮೇತ ನೆಲೆಯಾದ ಸ್ಥಳವೇ ಆದಿಕುಕ್ಕೆ ಸುಬ್ರಾಯ ತಳವಾಯಿತು. ಮುಂದೆ ಕೊಕ್ಕಡದ ಯಡಪ್ಪಾಡಿತ್ತಾಯ ಕುಟುಂಬದಿಂದ ತಂದು ನೆಲೆಗೊಳಸಿದ. ಪುರೋಹಿತ ಮೂಲದಿಂದಲೇ ಪೂಜೆ ವಿಧಾನ ನಡೆದು ಬಂತು. ಅಲ್ಲದೆ ಕೊಕ್ಕಡದ ನುರಿತ್ತಾಯ ಕುಟುಂಬವೂ ಸಹಾಯಕವಾಗಿ ನೆಲೆಯಾಯಿತು.

ಇಂತಹ ದಿವ್ಯ ದೈವ ಸನ್ನಿಧಾನಕ್ಕೆ ನೀವು ಭೇಟಿ ನೀಡಿಲ್ಲ ಎಂದಾದರೆ ಒಮ್ಮೆ ಹೋಗಿ ಬನ್ನಿ. ಬೆಂಗಳೂರಿನಿಂದ ರೈಲು ಮತ್ತು ಬಸ್ ಗಳ ಸಂಪರ್ಕವಿರುವ ಈ ಸ್ಥಳ ಧರ್ಮಸ್ಥಳಕ್ಕೆ ಹತ್ತಿರವಿದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

25 ಸೆಪ್ಟೆಂಬರ್ 2023

ಪ್ರೀತಿಗೆ ಪ್ರೀತಿಯೇ ಸಮ...

 


ಪ್ರೀತಿಗೆ ಪ್ರೀತಿಯೇ ಸಮ..

"ಪ್ರೀತಿ ಏಕೆ ಭೂಮಿ ಮೇಲಿದೆ? " ಎಂಬ ಪ್ರಶ್ನೆಗೆ ಹಾಡಿನಲ್ಲಿ "ಬೇರೆ ಎಲ್ಲೂ ಜಾಗವಿಲ್ಲದೇ..." ಎಂಬ ಉತ್ತರವನ್ನು ನಾವು ಕೇಳಿದ್ದೇವೆ. "ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ" ಎಂದು ಸಂಭ್ರಮಿಸುವ ಜೋಡಿಗಳನ್ನು ಕಂಡಿದ್ದೇವೆ. "ಪ್ರೀತ್ಸೇ ಪ್ರೀತ್ಸೇ.. ಕಣ್ಣು ಮುಚ್ಚಿ ನನ್ನ ಪ್ರೀತ್ಸೇ...." ಎಂದು ದುಂಬಾಲು ಬೀಳುವ   ಪಾಗಲ್ ಪ್ರೇಮಿಗಳಿಗೇನು ಕಡಿಮೆಯಿಲ್ಲ. ಪ್ರೀತಿ ಇಂದು ನಿನ್ನೆಯದಲ್ಲ ಅನಾದಿ ಕಾಲದಿಂದಲೂ ಅಜರಾಮರ.
'ಪ್ರೀತಿ' ಒಂದು ಸುಂದರ ಅನುಭವ, ಅದು ಕೇವಲ ಹದಿಹರೆಯದವರ ಬಾಹ್ಯ ಆಕರ್ಷಣೆಯ ತೋರ್ಪ ಡಿಕೆಯಷ್ಟೇ ಅಲ್ಲ. ಅದಕ್ಕೆ ನಾನಾ ರೂಪಗಳಿವೆ ಎಂದು ಫಿನ್ಸೆಂಡ್ನ ಅಲ್ಲೊ ವಿಶ್ವವಿದ್ಯಾಲಯದ ಹೊಸ ಅಧ್ಯಯನವೊಂದು ಹೇಳಿದೆ.
ಪ್ರೀತಿ ಯಾರಲ್ಲಿ ಯಾವಾಗ ಏಕೆ ಉಂಟಾಗುತ್ತದೆ ಎಂದು ಯಾರಿಗೂ ಗೊತ್ತಾಗುವುದಿಲ್ಲ.ಆದರೂ ಕೆಲವೊಮ್ಮೆ ಅವಳ ಕಣ್ಣೋಟಕ್ಕೆ, ಅವನ ಮೈಮಾಟಕ್ಕೆ   , ಅವನ ಉದಾರತೆಗೆ, ಅವಳ ಗುಣಕ್ಕೆ    ಪ್ರೀತಿ ಉದಯವಾಯಿತು ಎಂದು ಏನೋನೋ ಕಾರಣಗಳನ್ನು ಹೇಳಬಹುದಾದರೂ ನಿಶ್ಚಿತವಾದ ಕಾರಣ ಹೇಳಲು ಸಾದ್ಯವಿಲ್ಲ. ಆದರೂ

ಮಾನವನ ಶರೀರದಲ್ಲಿ ಹುಟ್ಟುವ ಪ್ರೀತಿಯ ವಿಭಿನ್ನ ರೂಪಗಳು ಹಾಗೂ ಅದರ ಭಾವೋತ್ಕಟತೆಯನ್ನು ವಿಶ್ವವಿ ದ್ಯಾಲಯದ ಸಂಶೋಧಕರು ಸಂಶೋಧನೆಯ ಮೂಲಕ  ದಾಖಲಿಸಿದ್ದಾರೆ. ಪ್ರೀತಿ ಅರಳುವ  ಬಗ್ಗೆ ನೂರಾರು ಜನರ ಸಮೀಕ್ಷೆ ನಡೆಸಿ ದತ್ತಾಂಶಗಳನ್ನು ಸಂಗ್ರಹಿಸಿದ್ದಾರೆ. ಪ್ರಣಯ, ಲೈಂಗಿಕ ಪ್ರೀತಿ, ಪೋಷಕರ ಪ್ರೀತಿ, ಸ್ನೇಹಿತರು, ಅಪರಿಚಿತರು, ನಿಸರ್ಗ, ದೇವರ ಮೇಲಿನ ಪ್ರೀತಿ ಸೇರಿದಂತೆ 27 ಬಗೆಯ ಪ್ರೀತಿ ಹುಟ್ಟುವ ಬಗೆಯನ್ನು ಸಂಶೋಧನಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಪ್ರೀತಿಗೆ ದುರ್ಬಲ ವ್ಯಕ್ತಿಯನ್ನು ಬಲಶಾಲಿಗೊಳಿಸುವ ಅಧಮ್ಯ ಶಕ್ತಿಯಿದೆ ಎಂದು ಸಂಶೋಧಕರು ಹೇಳಿದ್ದು, 'ಫಿಲಾಸಫಿಕಲ್ ಸೈಕಾಲಜಿ' ಜರ್ನಲ್ನಲ್ಲಿ ಈ ಸಂಶೋಧನಾ
ವರದಿ ಇತ್ತೀಚಿಗೆ ಪ್ರಕಟವಾಗಿದೆ.

ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರು ಪ್ರೀತಿಯ ವಿಭಿನ್ನ ರೂಪಗಳನ್ನು ಎಲ್ಲಿ ಅನುಭವಿಸಿದ್ದಾರೆ. ಜೊತೆಗೆ, ಆ ಪ್ರೀತಿಯು ದೈಹಿಕ ಮತ್ತು ಮಾನಸಿಕವಾಗಿ ಅವರಿಗೆ ಎಷ್ಟು ಉತ್ಕಟವಾಗಿ ಕಾಡಿದೆ ಎಂಬ ಬಗ್ಗೆ ಅವರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಮಾನವ ಶರೀರದಲ್ಲಿ ಉತ್ಕಟ ಪ್ರೀತಿ ಅನುಭವಕ್ಕೆ ಬರುವುದು ಯಾವಾಗ ಎಂಬುದನ್ನೂ ಸಂಶೋಧನೆಯಲ್ಲಿ ದಾಖಲಿಸಿದ್ದಾರೆ.

ಉನ್ನತ ಶಿಕ್ಷಣದ ಹಂತದಲ್ಲಿರುವಾಗ ಯುವತಿಯರಲ್ಲಿ ಪ್ರೀತಿಯ ತೀವ್ರತೆ ಹೆಚ್ಚಿರುತ್ತದೆ ಎಂದು ವರದಿ ಹೇಳಿದೆ. ನಿಕಟ ಸಂಬಂಧಗಳಲ್ಲಿ ಪ್ರೀತಿ ಸದೃಶವಾಗಿರುತ್ತದೆ. ಜೊತೆಗೆ, ಅದು ಗಾಢವಾಗಿ ಅನುಭವಕ್ಕೆ ಬರುವುದು ಗಮನಾರ್ಹ ಸಂಗತಿಯಾಗಿದ್ದು, ಅದಕ್ಕೆ ಅಚ್ಚರಿಪ ಡಬೇಕಿಲ್ಲ ಎಂದು ಈ ಅಧ್ಯಯನಕ್ಕೆ ಸಹಕರಿಸಿದ ದಾರ್ಶನಿಕ ಪಾರ್ಟಿಲಿ ರಿನ್ನೆ ಹೇಳಿದ್ದಾರೆ.

'ವ್ಯಕ್ತಿಗಳ ನಡುವಿನ ಪ್ರೀತಿಯನ್ನು ಲೈಂಗಿಕ, ಲೈಂಗಿಕೇತರ ಎಂದು ವಿಂಗಡಿಸಲಾಗಿದೆ. ಪರಸ್ಪರ ಹತ್ತಿರ ಇರುವ ಪ್ರೀತಿಯ ಪ್ರಕಾರಗಳಲ್ಲಿ  ಲೈಂಗಿಕ ಮತ್ತು ಪ್ರಣಯಅಯಾಮವನ್ನು ಹೊಂದಿರುತ್ತವೆ' ಎನ್ನುತ್ತಾರೆ ಪಾರ್ಟಿ ಲಿ ರಿನ್ನೆ. ಪ್ರೀತಿಯ ಆಳ ಅಗಲ ತಿಳಿಯಲು ಎಷ್ಟು ಸಂಶೋಧನೆಗಳಾದರೂ ಕಡಿಮೆಯೇ ಯಾಕೆಂದರೆ ಪ್ರೀತಿಗೆ ಪ್ರೀತಿಯೇ ಸಮ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
99009255