07 ನವೆಂಬರ್ 2022

ನುಡಿತೋರಣ ನುಡಿ ಜಾತ್ರೆ....


 


ನುಡಿತೋರಣದ ನುಡಿ ಜಾತ್ರೆ. 


ಸಾಮಾಜಿಕ ಮಾಧ್ಯಮಗಳು ನಮ್ಮ ಯುವಪೀಳಿಗೆಯನ್ನು ಹಾಳು ಮಾಡಿವೆ .ನಮ್ಮ ಸಂಸ್ಕೃತಿ ಪರಂಪರೆಯ ನಾಶಕ್ಕೆ ಅವುಗಳೂ ಕಾರಣ ಎಂದು ಆಗಾಗ್ಗೆ ನಾವೆಲ್ಲರೂ ಮಾತನಾಡುತ್ತಾ ಸಮಾಜ  ಮತ್ತು ನಮ್ಮ ಪರಂಪರೆಯ ಬಗ್ಗೆ ಕಾಳಜಿ ವ್ಯಕ್ತಪಡಿಸುವ ಮಾತನಾಡುತ್ತೇವೆ ಈ ವಿಷಯದಲ್ಲಿ ಸತ್ಯ ಇದ್ದರೂ ಪೂರ್ಣವಾಗಿ ಸಾಮಾಜಿಕ ಮಾಧ್ಯಮಗಳಿಂದಲೇ  ಜನ ಹಾಳಾಗುತ್ತಿದ್ದಾರೆ ಸಂಸ್ಕೃತಿಯ ನಾಶವಾಗುತ್ತಿದೆ ಎಂದು ಒಪ್ಪಲಾಗದು. ಒಂದು ಚಾಕುವನ್ನು ಹಣ್ಣು ಕತ್ತರಿಸಲೂ ಬಳಸಬಹುದು ಕ್ರೂರ ಚಟುವಟಿಕೆಗಳಿಗೂ ಬಳಸಬಹುದು ಅದು ನಮ್ಮ ವಿವೇಚನೆ ಅವಲಂಬಿಸಿದೆ. 

ಸಾಮಾಜಿಕ ಮಾಧ್ಯಮ ಮನಸ್ಸು ಮಾಡಿದರೆ ನಮ್ಮ ನಾಡು ನುಡಿ ಸಂಪ್ರದಾಯ, ಸಂಗೀತ, ಸಾಹಿತ್ಯ, ಕಲೆ  ,ಅಧ್ಯಾತ್ಮ ಮುಂತಾದ ವಿಷಯಗಳನ್ನು ಚರ್ಚಿಸಿ ತನ್ಮೂಲಕ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಬಹುದು ಎಂದು ಹಲವಾರು ಸಾಮಾಜಿಕ ಮಾಧ್ಯಮಗಳು ಕಾರ್ಯಕ್ರಮ ರೂಪಿಸಿ ಕಾರ್ಯ ಪ್ರವೃತ್ತವಾಗಿ  ತಮ್ಮ ಬದ್ಧತೆಯನ್ನು ತೋರುತ್ತಾ ಬಂದಿವೆ.


ಇದಕ್ಕೆ ಉದಾಹರಣೆ ನಾನು ಸದಸ್ಯನಾಗಿರುವ "ನುಡಿ ತೋರಣ" ವಾಟ್ಸಪ್ ಬಳಗ. ಈ ಬಳಗದಲ್ಲಿ ನಮ್ಮ ನಾಡು ನುಡಿಯ ಬಗ್ಗೆ ಅಂಕಣಗಳಿವೆ ,ನಮ್ಮ ತಿಂಡಿ ತಿನಿಸು, ಆಚಾರ ವಿಚಾರ ,ಸಂಗೀತ, ಹಾಸ್ಯ, ಮುಂತಾದ ವಿಷಯಗಳ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯುತ್ತದೆ ಆಗಾಗ್ಗೆ ಗೂಗಲ್ ಮೀಟ್ ಬಳಸಿ ಒಂದೆಡೆ ಸೇರಿ ವಿಚಾರ ವಿನಿಮಯ ನಡೆಯುತ್ತದೆ. 


ನಿನ್ನೆ ಭಾನುವಾರ ನನ್ನ ತುರ್ತು ಕಾರ್ಯ ಮುಗಿಸಿ  ಸಂಜೆ  ಮನೆಗೆ ಬಂದು ನುಡಿತೋರಣ ಬಳಗದ ಗೂಗಲ್ ಮೀಟ್ ಲಿಂಕ್ ಒತ್ತಿ ಒಳಪ್ರವೇಶಿಸಿದರೆ ಅಲ್ಲಿ ಜಾನಪದ ಜಾತ್ರೆಯ ಸಡಗರ ರಂಗೇರಿತ್ತು. 

ಮುಂಬೈನಲ್ಲಿ ನೆಲೆಸಿರುವ ಕನ್ನಡತಿ ಮಧು ವಸ್ತ್ರದ್ ರವರು ತಿಂಗಳಿನಿಂದ ತಯಾರಿ ಮಾಡಿಕೊಂಡು ಅಚ್ಚುಕಟ್ಟಾಗಿ  ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಏನುಂಟು ಏನಿಲ್ಲ? ಜನಪದ ಹಾಡುಗಳ ಕಲರವ ,ನಮ್ಮ ಜನಪದ ಉಡುಪುಗಳ ಹಬ್ಬ, ಒಡಪುಗಳ ಸದ್ದು, ಜನಪದ ಹಾಡುಗಳ ಸಂಗೀತ, ಗೀಗಿಪದಗಳ ಸದ್ದು, ಇನ್ನೂ ಎನೇನೋ ...ಒಟ್ಟಾರೆ ಅದೊಂದು ಜನಪದ ಲೋಕ...


ನುಡಿ ತೋರಣ ಬಳಗದ ವತಿಯಿಂದ ಅಂದು  ಜರುಗಿದ ಜಾನಪದ ಜಾತ್ರೆಯು ಮೂರು ಗಂಟೆಗಳಿಗೂ ಅಧಿಕ ಸಮಯವನ್ನು ನಮಗರಿವಿಲ್ಲದೆಯೇ ಪಡೆದು ಯಶಸ್ವಿಯಾಯಿತು ಎನ್ನಬಹುದು.

ಎಷ್ಟು ಜನ ಸೇರಿದ್ದರು ಎಂಬುದು ಮುಖ್ಯವಲ್ಲ ಅದರ ಪರಿಣಾಮ ಮತ್ತು ಪ್ರಯತ್ನ ಪ್ರಶಂಸನೀಯ 

ಮೂವತ್ತಕ್ಕೂ ಅಧಿಕ ಸದಸ್ಯರು ಅತಿ ಸಂಭ್ರಮದಿಂದ ದೇಸೀ ದಿರಿಸುಗಳಲ್ಲಿ ಭಾಗಿಯಾಗಿದ್ದು ಕಾರ್ಯಕ್ರಮದ ಯಶಸ್ಸನ್ನು ರುಜುವಾತು ಮಾಡಿದಂತೆನಿಸಿತು. ಎಲ್ಲರೂ ಬಣ್ಣ ಬಣ್ಣದ ವೇಷಭೂಷಣಗಳಿಂದ, ಮುಖದ ತುಂಬ ಸಂತಸದ ನಗೆಯಿಂದ ಕಂಗೊಳಿಸುತ್ತಿದ್ದರು. ಇದು ಕಾರ್ಯಕ್ರಮವು ತನ್ನ ಗಮ್ಯವನ್ನು ಸೇರಿತೆಂಬ ಸಾರ್ಥಕ ಭಾವನೆಯನ್ನು ತಂದಿತು.

ಬಳಗದ ಹೆಮ್ಮೆಯ ಸದಸ್ಯರಾದ 

ಶೈಲಾ ಜಯಕುಮಾರರ ಪ್ರಾಸ್ತಾವಿಕ ನುಡಿಗಳು ನೆನಪಿಟ್ಟುಕೊಳ್ಳುವಷ್ಟು ಸತ್ವಯುತವಾಗಿದ್ದವು. ಅತಿಥಿಗಳಾಗಿ ಬಂದ ಗೌರಮ್ಮನವರು ಮತ್ತು ಆಶಾ ಯಮಕನಮರಡಿಯವರ ಜಾನಪದ ಗಾಯನ ಮೆರುಗು ತಂದಿತು.


ಸುಮನಾ ಹೇರ್ಳೆಯವರ ತಾಳಮದ್ದಳೆಯ ಕುರಿತಾದ ಮಂಡನೆ, ಮಾಧುರಿ ದೇಶಪಾಂಡೆಯವರ ಮಾತುಗಳು, ಈಶ್ವರ ಸಂಪಗಾವಿಯವರ ಒಡಪುಗಳ ಬಗ್ಗೆ ವ್ಯಾಖ್ಯಾನ ಇಷ್ಟವಾದವು. ಕವಿಕುಟುಂಬ, ಶ್ಯಾಮಸುಂದರ್ಜಿ,  ಗಿರಿಜಾ ಇಟಗಿ, ಬನಾಸು, ಸುಮಾ ಸೂರ್ಯ, ಸ್ವರ್ಣ ರಂಗನಾಥ್, ಸಿಹಿಜೀವಿ, ಡಾ. ರುಕ್ಮಿಣಿ, ಜಯಶ್ರೀ ರಾಜು,  ರತ್ನ ಬಡವನಹಳ್ಳಿ, ಕ್ಷಮಾ ರಘುರಾಮ್, ಮಾನಸಾ ಮುಂತಾದವರ ಪ್ರಸ್ತುತಿಗಳು ಗಮನಸೆಳೆದವು. ಚಿನ್ನುಪ್ರಿಯ, ಜಯಶ್ರೀ ರಾಜು ಮುಂತಾದವರ ಉಪಸ್ಥಿತಿ ಜಾತ್ರೆಯ ಮೆರಗು ಹೆಚ್ಚಿಸಿತು.


ಕಿರಣ್ ಹಿರಿಸಾವೆ, ರವರು ಮತ್ತು ಶ್ರೀಕಾಂತ್ ಪತ್ರೆಮರ ರವರ ನೇತೃತ್ವದ ಸಂಚಾಲನ ಸಮಿತಿಯ ಮಾರ್ಗದರ್ಶನದಲ್ಲಿ ಸಾಗುವ ನುಡಿತೋರಣ ಬಳಗದಲ್ಲಿ ನಾನೂ ಒಬ್ಬ ಹೆಮ್ಮೆಯ ಸದಸ್ಯ ಎಂದು ಹೇಳಿಕೊಳ್ಳಲು ಸಂತಸವಾಗುತ್ತದೆ.

ಮೇಲ್ನೋಟಕ್ಕೆ ಇದು ವಾಟ್ಸಪ್ ಬಳಗದ ಕಾರ್ಯಕ್ರಮ ಆದರೂ ಅದರ ಪರಿಣಾಮ ವಿಸ್ತಾರವಾದುದು. ಈ ಕಾರ್ಯಕ್ರಮಕ್ಕೆ ವಾರದಿಂದ ತಯಾರಿ ಮಾಡಿಕೊಳ್ಳುವಾಗ ಸ್ಪರ್ಧಿಗಳ ಅಭ್ಯಾಸ .ಮಾಡುವಾಗ ಜನಪದ ಗೀತೆಗಳು, ಕಂಜರ,ಡೋಲಕ್, ಚಕ್ಕೆ ಮುಂತಾದ ವಾದ್ಯಗಳ ಪರಿಚಯ ಮನೆಯ ಮಕ್ಕಳಿಗೆ ಆಗಿರುತ್ತದೆ, ಬರೀ ಸಿನಿಮಾ ಹಾಡುಗಳನ್ನೇ ಸಂಗೀತ ಎಂಬ ನಮ್ಮ ಮಕ್ಕಳ ಮನೋಭಾವ ಬದಲಾಗಲು ಇಂತಹ ಕಾರ್ಯಕ್ರಮ ಸಹಾಯಕ .ಇನ್ನೂ ಜನಪದ ಉಡುಪುಗಳು ನಮ್ಮ ಪರಂಪರೆಯ ಪ್ರತೀಕ ನಮ್ಮ ಮುಂದಿನ ಪೀಳಿಗೆಗೆ ಇದರ ಪರಿಚಯ ಮಾಡಿಸಿದ್ದು ಬಳಗದ ಮತ್ತೊಂದು ಪರೋಕ್ಷವಾದ ಯಶಸ್ಸು  ದೂರಗಾಮಿ   ಸಕಾರಾತ್ಮಕ ಹಾಗೂ ಉತ್ತಮ ಪರಿಣಾಮ ಬೀರುತ್ತವೆ  ಎಂಬುದೇ ನನ್ನ ಭಾವನೆ.

 

ಸದಸ್ಯರು, ಅಧ್ಯಕ್ಷರು ಮುಂತಾದ ಪದವಿಗಳನ್ನು ಹೊತ್ತು ನೂರಾರು ಕೋಟಿ ಹಣ ವ್ಯಯ ಮಾಡುವ ಅಕಾಡೆಮಿಗಳು  ಪರಿಷತ್ತುಗಳು  ಮಾಡುವ ಕನ್ನಡ ಕಟ್ಟುವ ಮತ್ತು ಸಂಸ್ಕೃತಿ ಉಳಿಸುವ ಕೆಲಸವನ್ನು ಒಂದು ವಾಟ್ಸಪ್ ಬಳಗ ಸದ್ದಿಲ್ಲದೇ  ಮಾಡುತ್ತಿರುವುದು ಪ್ರಶಂಸನೀಯ. ಬಳಗ ಇಂತಹ ಚಟುವಟಿಕೆಗಳನ್ನು ಇನ್ನೂ ಹೆಚ್ಚು ಸಂಘಟಿಸಲಿ . ನಾಡು ನುಡಿ ಸಂಸ್ಕೃತಿ ಉಳಿಸಲು ಯಾವಾಗಲೂ  ಇನ್ನೊಬ್ಬರು ಮಾಡಲಿ   ಎಂಬ ಭಾವನೆಗಳನ್ನು ಬಿಟ್ಟು ನಮ್ಮ ಕೈಲಾದ ಕೆಲಸ ಮಾಡೋಣ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗಗೆ ವರ್ಗಾಯಿಸೋಣ..


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು.


  

04 ನವೆಂಬರ್ 2022

ರಂಗಜ್ಜಿ ಮತ್ತು ಕೆಂಚಜ್ಜಿ....ಆತ್ಮಕಥೆ ೪೩

 



ರಂಗಜ್ಜಿ ಮತ್ತು ಕೆಂಚಜ್ಜಿ 


ಆಗ ನಮ್ಮೂರಿಂದ ತಾಲ್ಲೂಕು ಮತ್ತು ಜಿಲ್ಲಾ  ಕೇಂದ್ರ ಸಂಪರ್ಕ ಮಾಡಲು ಇದ್ದ ಬಸ್ ಎರಡೇ ಒಂದು ವಾಣಿ ಬಸ್ ಇನ್ನೊಂದು ಶಾಯಿನ್ ಬಸ್ . ಒಂದು ಬೆಳಿಗ್ಗೆ ಒಂದು ಸಂಜೆ...  ನಮ್ಮೂರ ಗೇಟ್ ನಿಂದ ಇತ್ತ ಚಿತ್ರಳ್ಳಿ ವರೆಗೂ ಅತ್ತ ಐಮಂಗಲ ವರೆಗೂ  ಮಣ್ಣಿನ ರಸ್ತೆ  .ಒಮ್ಮೆ ಬಸ್ಸಿನಲ್ಲಿ ಹತ್ತಿ ಕೂತರೆ ಅದೇ ನಮಗೆಲ್ಲ ಉಚಿತವಾಗಿ ಪೌಡರ್ ಹಾಕುತ್ತಿತ್ತು. ರಸ್ತೆಯ ಗುಂಡಿಗಳ ನಡುವೆ ಧೂಳಿನ ರಸ್ತೆಯಲ್ಲಿ ಡ್ರೈವರ್ ಹರಸಾಹಸ ಪಟ್ಟು ಬಸ್ ಓಡಿಸುವುದನ್ನು ನೋಡಲು ನಾನು ಸೀದಾ ಡ್ರೈವರ್ ಬಳಿ ಹೋಗಿ ನಿಂತುಬಿಡುತ್ತಿದ್ದೆ. ಅದರಲ್ಲೂ ಆಗಿನ ಕಾಲದಲ್ಲಿ ರಿವರ್ಸ್ ಹೊಡೆಯುವ ಮತ್ತು ತಿರುವಿನಲ್ಲಿ ಅವನು ಸ್ಟೇರಿಂಗ್ ತಿರುಗಿಸುವ ರೀತಿ ನೋಡುತ್ತಾ ನಾನು ಮುಂದೆ ಡ್ರೈವರ್ ಆಗಿಬಿಡಬೇಕು ಎಂದು ಕೊಂಡಿದ್ದೆ.


ನಮ್ಮೂರು ಕೊಟಗೇಣಿಯಿಂದ ನಮ್ಮ ಮಾವನವರ ಊರು ಯರಬಳ್ಳಿಗೆ ಹೋಗಲು ನಮಗೆ  ಇದೇ ಬಸ್ ಗಳು ಆಧಾರ. ಸಾಮಾನ್ಯವಾಗಿ ಸಾಯಂಕಾಲದ ನಾಲ್ಕು ವರೆಗೆ ನಮ್ಮ ಗೇಟ್ ಗೆ ಬರುತ್ತಿದ್ದ ವಾಣಿ ಬಸ್ ನಲವತ್ತು ಕಿಲೋಮೀಟರ್ ದೂರದ ಯರಬಳ್ಳಿ ಸೇರುತ್ತಿದ್ದದ್ದು  ರಾತ್ರಿಯ ಏಳುಗಂಟೆಗೆ ಕೆಲವೊಮ್ಮೆ ಇನ್ನೂ ಲೇಟಾಗಿ ತಲುಪಿದ ಉದಾಹರಣೆ ಇದೆ.


ಒಮ್ಮೆ  ಎಂಭತ್ತು ವರ್ಷಕ್ಕೂ ಹೆಚ್ಚು ವಯಸ್ಸಾದ  ನಮ್ಮ ರಂಗಜ್ಜಿಯ ಜೊತೆಯಲ್ಲಿ ಯರಬಳ್ಳಿಗೆ ಹೋಗಲು ನಮ್ಮೂರ ಗೇಟ್ ಗೆ ಒಂದು ಕಿಲೋ ಮೀಟರ್ ನಡೆದುಕೊಂಡು ಬಂದು   ಬಸ್ ಹತ್ತಿದೆವು . ಬಸ್ ಹತ್ತಿದ ತಕ್ಷಣ ಯಾರೋ ಅಜ್ಜಿಗೆ ಸೀಟ್ ಬಿಟ್ಟು ಕೊಟ್ಟರು. ನಾನು ಎಂದಿನಂತೆ ಡ್ರೈವರ್ ಪಕ್ಕದಲ್ಲಿ ನಿಂತೆ.  

ಬಸ್ ಕೆರೆಯಾಗಳ ಹಳ್ಳಿ ಬಿಟ್ಟು, ತೇಕಲವಟ್ಟಿ ಗೊಲ್ಲರಹಟ್ಟಿ ದಾಟಿ ತೇಕಲವಟ್ಟಿಯಲ್ಲಿ ಎಲೆಪೆಂಡಿ ಮತ್ತು ಜನರ ಹತ್ತಿಸಿಕೊಂಡು ಕೊಳಾಳು ಕಡೆ ಧೂಳೆಬ್ಬಿಸುತ್ತಾ ಸಾಗಿತ್ತು.  ಯಲಕೂರನಹಳ್ಳಿಯ ಬಳಿ ಬಂದಾಗ ಸೂರ್ಯ ನನ್ನ ಡ್ಯೂಟಿ ಮುಗೀತು ಎಂದು ಹೊರಟೇಬಿಟ್ಟ. ನಮ್ಮ ಬಸ್ ಕಣಿಮೆಕೆರೆಯ ಪಕ್ಕ ಚಲಿಸುವಾಗ ಕೆರೆಯ ನೀರು ಮಬ್ಬಾಗಿ ಕಪ್ಪಾಗಿ ಕಾಣುತ್ತಿತ್ತು. ಕೆರೆಯ ಏರಿಯ ಬಳಿ ಬಂದಾಗ ಡ್ರೈವರ್ ಬಸ್ ಇಂಜಿನ್ ಆಪ್ ಮಾಡಿ ಎಡಕ್ಕೆ ಬಾಗಿ ಕೈಮುಗಿದ ದೂರದಲ್ಲಿ ಕುಳಿತಿದ್ದ ಅಜ್ಜಿ ಭೂತಪ್ಪಗೆ ಕೈ ಮುಗಿಯೋ ಎಂದು ಸನ್ನೆ ಮಾಡಿ ಅವರು ಕೈಮುಗಿದರು.ಪಯಣದ ತೊಂದರೆಗಳನ್ನು ನಿವಾರಿಸಲು ಎಲ್ಲರೂ ಭೂತಪ್ಪನ ಕೈಮುಗಿದು ಆಶೀರ್ವಾದ ಪಡೆಯುವುದು ನಮ್ಮ ಸಂಪ್ರದಾಯವಾಗಿತ್ತು.ಅಂದು ಭೂತಪ್ಪನ ಆಶೀರ್ವಾದ ಪಡೆದರೂ ಅನಾಹುತ ಸಂಭವಿಸಿಯೇ ಬಿಟ್ಟಿತು. ಕೋವೇರಹಟ್ಟಿ ಗೇಟ್ ದಾಟಿ , ದಾಸಣ್ಣನ ಮಾಳಿಗೆ ಮೂಲಕ ಐಮಂಗಲ ತಲುಪಿದಾಗ ರಾತ್ರಿ ಏಳುಗಂಟೆಯಾಗಿತ್ತು. ಇಂಜಿನ್ ಪ್ರಾಬ್ಲಮ್ ಇದೆ ಬಸ್ ಮುಂದೆ ಹೋಗಲ್ಲ ಎಲ್ಲಾ ಇಳಿರಿ ಅಂದ ಡ್ರೈವರ್. ರಂಗಜ್ಜಿ ಮತ್ತು ನನಗೂ ಭಯ ಆತಂಕ ಶುರುವಾಯಿತು. ನಾವು ತಲುಪಬೇಕಾದ ಯರಬಳ್ಳಿ ಇನ್ನೂ ಹತ್ತು ಕಿಲೋಮೀಟರ್ "  ಕತ್ಲಲ್ಲಿ ಕಾಮದೂರಾಗ್ ನಾವ್ ಎಲ್ಲಿಗ್ ಹೋಗಾನ ಸಾಮಿ, ನೀವೇನೋ ಬಸ್ ಹೋಗಲ್ಲ ಅಮ್ತಾ ಒಂದೆ ಸಲ ಅಂದ್ ಬಿಟ್ರಿ , ಈಗ ನಾವ್ ಏನ್ ಮಾಡಾನಾ " ಎಂದು ಕಂಡಕ್ಟರ್ ಮತ್ತು ಡ್ರೈವರ್ ನನ್ನ ಸ್ವಲ್ಪ ಜೋರಾಗಿಯೇ ತರಾಟೆಗೆ ತೆಗೆದುಕೊಂಡರು ನಮ್ಮ ರಂಗಜ್ಜಿ.  ಅಜ್ಜಿಯ ಬಾಯಿ ಕೇಳಿ ಅಲ್ಲಿಗೆ   ಬಂದ ಓರ್ವ ವ್ಯಕ್ತಿಯು ತನ್ನನ್ನು ಪೊಲೀಸ್ ಎಂದು ಪರಿಚಯ ಮಾಡಿಕೊಂಡು ನಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು  ಇಂದು ರಾತ್ರಿ ನಮ್ಮ ಮನೆಯಲ್ಲಿ ಊಟ ಮಾಡಿ, ಮಲಗಿಕೊಂಡು ನಾಳೆ ಬೆಳಿಗ್ಗೆ ನಿಮ್ಮ ಊರಿಗೆ ಹೋಗಬಹುದು ಅಂದರು. ನಾವು ಅಂದು ರಾತ್ರಿ ಅವರ ಮನೆಯಲ್ಲಿ ಊಟ ಮಾಡಿ ಮಲಗಿಕೊಂಡು ಬೆಳಿಗ್ಗೆ ಎದ್ದು ಅವರಿಗೆ ಧನ್ಯವಾದಗಳನ್ನು ಹೇಳಿ ಹೊರಟೆವು. ದೇವರ ಆಗಿ ನಮ್ಮ ಕಷ್ಟ ಕಾಲದಲ್ಲಿ ಬಂದು ಸಹಾಯ ಮಾಡಿದ ಆ ಪೋಲಿಸಪ್ಪ ಎಲ್ಲಿರುವರೋ ತಿಳಿಯದು   ಅವರು  ಮತ್ತು ಅವರ ಕುಟುಂಬ ಎಲ್ಲೇ ಇರಲಿ    ಸುಖಕರವಾಗಿರಲಿ .   


ನಲವತ್ತು ವರ್ಷಗಳ ಕಾಲ ಉರುಳಿದಂತೆ...

ಮೊನ್ನೆ ಆತ್ಮೀಯರಾದ ಶಂಕರಾನಂದ ರವರ ಜೊತೆಯಲ್ಲಿ ನನ್ನ ಕಾರಿನಲ್ಲಿ ನಮ್ಮ ಊರಿಗೆ ಹೋಗಿದ್ದೆ .ಎಂದಿನಂತೆ ಊರಿಗೆ ಹೋದಾಗ ನಮ್ಮ ಅಣ್ಣ ತೆಂಗಿನ ಕಾಯಿ, ಬಾಳೆ ಗೊನೆ ಎಳನೀರು ಅದೂ ಇದೂ ಎಂದು ಡಿಕ್ಕಿ ತುಂಬಿದ ಮೇಲೆ ಹಿಂದಿನ ಎರಡು ಸೀಟಿನ ಮೇಲೂ ವಸ್ತುಗಳ ಹಾಕಿದ್ದರು. ಮುಂದೆ ಡ್ರೈವರ್ ಸೀಟಲ್ಲಿ ನಾನು ಪಕ್ಕದಲ್ಲಿ ಶಂಕರಾನಂದರ ರವರು ಇದ್ರು.  ಊರಿಂದ ತುಮಕೂರಿನ ಕಡೆ ನಮ್ಮ ಕಾರು ಸಾಗುವಾಗ  ತೇಕಲವಟ್ಟಿ  ದಾಟಿದ ಬಳಿಕ ದಾರಿಯಲ್ಲಿ  ಒಂದು  ಅಜ್ಜಿ ಕೈಯಲ್ಲಿ  ಚೀಲ ಹಿಡಿದುಕೊಂಡು ಕಾರಿಗೆ ಕೈ ಅಡ್ಡ ಹಾಕಿತು ಕಾರ್ ಸ್ಲೋ ಮಾಡಿ ನಿಲ್ಲಿಸಿ ಏನಜ್ಜಿ ಅಂದೆ . "ಕೊಳಾಳ್ ಗೆ ಹೋಗ್ ಬೇಕು ಬಸ್ ಇಲ್ಲ ತೇಕಲವಟ್ಟಿಯಿಂದ ನೆಡೆಕಂಡು ಬಂದೆ ಕಣಪ್ಪ ,ಕತ್ಲಾಕ್ತಾ ಐತೆ .ನನ್ನ ಕೊಳಾಳಿಗೆ ಬಿಡ್ರಪ್ಪ" ಅಂತು ಆ ಪರಿಸ್ಥಿತಿಯಲ್ಲಿ ಅಜ್ಜಿಯನ್ನು ಬಿಟ್ಟು ಬರಲು ಮನಸ್ಸಾಗಲಿಲ್ಲ. ಹಿಂದಿನ ಸೀಟಲ್ಲಿ ಜಾಗ ಇರಲಿಲ್ಲ ಮುಂದೆ ಒಬ್ಬರು ಕೂರುವ ಜಾಗದಲ್ಲಿ ಅಜ್ಜಿಯ ಲಗೇಜ್ ಸಮೇತ ಇಬ್ಬರು ಕುಳಿತರು .ಐದಾರು ಕಿಲೋಮೀಟರ್ ಸಾಗಿದ ಮೇಲೆ ಕೊಳಾಳು ಬಂತು.ನಿಧಾನವಾಗಿ ಅಜ್ಜಿ  ಕಾರಿಂದ  ಇಳಿಯಿತು .ನಿಮಗೆ ಒಳ್ಳೆಯದಾಗ್ಲಿ ಕಣಪ್ಪ ಎಂದು ಹರಸಿತು . ಕುತೂಹಲಕ್ಕೆ ಅಜ್ಜಿ ನಿನ್ನ ಹೆಸರೇನು? ಕೇಳಿದೆ ಕೆಂಚವ್ವ ಕಣಪ್ಪ ಅಂತು ಯಾಕೆ ಕೊಳಾಳು ಗೆ ಹೊರಟಿರೋದೆಂದು ಕೇಳಿದೆ ಕೆಂಚಪ್ಪನ್ ಗುಡಿಗೆ ಕಣಪ್ಪ ಅಂತು ತಗ ಅಜ್ಜಿ ಹುಂಡಿಗೆ ಐವತ್ತು ರುಪಾಯಿ ಹಾಕು ಎಂದೆ ಆಗ್ಲಪ್ಪ ನಂದು ಹತ್ತು ಸೇರಿಸಿ ಹಾಕ್ತೀನಿ ಎಂದು ಗಂಟನ್ನು ಹಿಡಿದು ಕತ್ತಲಲ್ಲಿ ಗುಡಿಯ ಕಡೆ ಹೊರಟಿತು...  ನನ್ನ ಕಾರ್ ಮುಂದೆ ಸಾಗಿದಂತೆ  ಯಾಕೋ ನಮ್ಮ  ರಂಗಜ್ಜಿ  ಮತ್ತು ಆ ಪೋಲಿಸಪ್ಪ  ಪದೇ ಪದೇ ನೆನಪಾದರು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


02 ನವೆಂಬರ್ 2022

ಅರ್ಥ


 *ಅರ್ಥ*


ಒಂದೇ ದಿನ ಮಾಡಬಹುದು

ಮದುವೆ ಮತ್ತು ನಿಶ್ಚಿತಾರ್ಥ |

ಇದರಿಂದ ಹೆಣ್ಣು ಮತ್ತು

ಗಂಡಿನ ಕಡೆಯವರಿಗೂ 

ಉಳಿಯುವುದು "ಅರ್ಥ" ||


ಸಿಹಿಜೀವಿ 

ಸಿ ಜಿ ವೆಂಕಟೇಶ್ವರ


26 ಅಕ್ಟೋಬರ್ 2022

ಕಲಿಸುತ್ತಾ ಕಲಿಯೋಣ


 



ಉತ್ತಮ ಶಿಕ್ಷಕರು ಜೀವನ ಪರ್ಯಂತ ಕಲಿಯುವವರು.. 


ಭಾನುವಾರ ಸಂಜೆ ತುಮಕೂರಿನ ಬಾಯರ್ಸ್ ಕಾಫಿ ಹೌಸ್ ನಲ್ಲಿ ಟೀ ಕುಡಿಯುತ್ತಾ  ಸಮಾನ ಮನಸ್ಕ ಗೆಳೆಯರ ಜೊತೆ ಕುಳಿತು ಟೀ ಕುಡಿಯುವಾಗ ಸಾಹಿತ್ಯ, ಸಮಾಜ ,ಶಿಕ್ಷಣ ಹೀಗೆ ನಮ್ಮ ಮಾತುಕತೆ ಸಾಗುವಾಗ ಓದುವ ಹವ್ಯಾಸ ಕ್ರಮೇಣ ಕಡಿಮೆಯಾಗಿರುವ ಬಗ್ಗೆ ಚರ್ಚೆ ನಡೆಯುವಾಗ   ಸ್ಟೂಡೆಂಟ್ ಬುಕ್ ಹೌಸ್ ಮಾಲೀಕರು ಹಾಗೂ ಪ್ರಕಾಶಕರಾದ ಸದಾಶಿವ್ ರವರು ಒಂದು ಘಟನೆ ಹೇಳಿದರು .ಒಮ್ಮೆ ನನ್ನ ಪುಸ್ತಕದ ಅಂಗಡಿಗೆ ನಾಲ್ಕು ಜನ ಕಾರಿನಲ್ಲಿ ಬಂದು ಶಿಕ್ಷಕರು ಎಂದು ಪರಿಚಯ ಮಾಡಿಕೊಂಡು ಓರ್ವ ಶಿಕ್ಷಕರು ಸುಮಾರು ಎಂಟತ್ತು ಉತ್ತಮ ಅಭಿರುಚಿಯ ಪುಸ್ತಕಗಳನ್ನು ಕೊಂಡರು .ಅವರ ಜೊತೆಯಲ್ಲಿ ಇದ್ದ ಶಿಕ್ಷಕರೊಬ್ಬರು "ಸಾಕು ಬಾರಪ್ಪ ಅದೇನ್ ಪುಸ್ತಕ ಓದ್ತಿಯಾ ನೀನು " ಎಂದು ವ್ಯಂಗ್ಯವಾಗಿ ಹೇಳಿದರು. ಇದರಿಂದ ನನಗೆ ಬಹಳ ಬೇಸರ ವಾಯಿತು ಎಂದರು.. ಅವರು ಮುಂದುವರೆದು ನಾನು ಪುಸ್ತಕ ಅಂಗಡಿಯಿಟ್ಟು ಹದಿನೈದು ವರ್ಷಗಳಾದವು ಶಿಕ್ಷಕರು ಪುಸ್ತಕ ಕೊಳ್ಳುವುದು ಬಹಳ ಕಡಿಮೆ ಎಂದರು. ಅದಕ್ಕೆ ನಾನು ಆಕ್ಷೇಪಿಸಿ ನಾನು ಈ ವರ್ಷ ಹದಿನೈದು ಪುಸ್ತಕ ಕೊಂಡು ಓದಿರುವೆ ಎಂದೆ .ನೀವು ಹಾಗೂ ನಿಮ್ಮಂತವರು ಕೆಲವೇ ಮಂದಿ ಸರ್ ನಮ್ಮ ಮನೆಯ ಪಕ್ಕ ಎರಡು ಶಿಕ್ಷಕರ ಕುಟುಂಬ ಇವೆ ಅವರ ಮನೆಯಲ್ಲಿ ಒಂದು ನ್ಯೂಸ್ ಪೇಪರ್ ಸಹ ತರಿಸಲ್ಲ   ಅವರು ನ್ಯೂಸ್ ಪೇಪರನ್ನೇ  ಓದಲ್ಲ ಎಂದರೆ  ಪುಸ್ತಕ ಓದುವ ಮಾತೆಲ್ಲಿ ಬಂತು?     ಅಂದು ನನ್ನ ಬಾಯಿ ಮುಚ್ಚಿಸಿದರು. 

ರವೀಂದ್ರನಾಥ ಟಾಗೋರ್ ರವರು ಒಂದು ದೀಪ ತಾನು ಉರಿಯದೇ ಮತ್ತೊಂದು ದೀಪ ಹಚ್ಚಲಾಗದು ಎಂದಂತೆ ಶಿಕ್ಷಕರಾದವರು ಮೊದಲು ತಾವು  ಓದಿ ಜ್ಞಾನವನ್ನು ಪಡೆದರೆ ಮಾತ್ರ ಮಕ್ಕಳಿಗೆ ಜ್ಞಾನ ನೀಡಲು ಸಾದ್ಯ. ಸಾಧಾರಣ ಶಿಕ್ಷಕ ಪಾಠ ಮಾಡುತ್ತಾನೆ ಉತ್ತಮ ಶಿಕ್ಷಕ ಅರ್ಥ ಮಾಡಿಸುತ್ತಾನೆ ಅತ್ಯುತ್ತಮ ಶಿಕ್ಷಕ ಪ್ರೇರಣೆ ನೀಡುತ್ತಾನೆ ಅಂತಹ ಪ್ರೇರಣೆ ನೀಡುವ ಶಿಕ್ಷಕ ಮೊದಲು ಕಲಿಕಾರ್ಥಿಯಾಗಿ ಕಲಿತಿರಬೇಕು.ಬಹುತೇಕರು  ನಂಬಿದಂತೆ ಶಿಕ್ಷಕ ವೃತ್ತಿ ಸಿಕ್ಕಿದ ಮೇಲೆ ಕಲಿಯಲು ಏನೂ ಇಲ್ಲ ಎಂಬುದು ಸುಳ್ಳು. ಕಲಿಕೆಯು ಗರ್ಭದಿಂದ  ಗೋರಿಯವರೆಗೆ ನಡೆವ ನಿರಂತರ ಪ್ರಕ್ರಿಯೆಯಾಗಿದೆ. ಅದರಲ್ಲೂ ಈ ಇಪ್ಪತ್ತೊಂದನೇ ಶತಮಾನದ  ರೋಬಾಟಿಕ್ ಮತ್ತು  ಕೃತಕ ಬುದ್ಧಿಮತ್ತೆಯ ಕಾಲದಲ್ಲಿ ಮಕ್ಕಳು ಶಿಕ್ಷಕರಿಗಿಂತ ಒಂದು ಹೆಜ್ಜೆ ಮುಂದೆ ಇರುವುದು ನೋಡಬಹುದು. ಶಿಕ್ಷಕರಾದವರು ಅಪ್ಡೇಟ್ ಆಗುತ್ತ ಇರಬೇಕು ಹೊಸ ತಂತ್ರಜ್ಞಾನದ ತಿಳುವಳಿಕೆ, ಬೋಧನಾ ಕ್ಷೇತ್ರದಲ್ಲಿ ನಾವೀನ್ಯತೆಯ ಅಳವಡಿಸಿಕೊಂಡು ಬೋಧನೆ ಮಾಡಿದರೆ ಮಕ್ಕಳು ಶಿಕ್ಷಕರನ್ನು ಆರಾಧಿಸುತ್ತಾರೆ. ಆಗ ಶಿಕ್ಷಕರಿಗಾಗುವ ಆನಂದ ಅನುಭವಿಸಿಯೇ ತಿಳಿಯಬೇಕು ಆ ಅನುಭವ ನನಗಾಗಿದೆ ಎಂದು ಹೆಮ್ಮೆಯಿಂದ ಹೇಳಬಲ್ಲೆ.  ಶಿಕ್ಷಕರಾದವರು ಅಪ್ಡೇಟ್ ಆಗಲಿಲ್ಲ ಎಂದರೆ ಔಟ್ ಡೇಟ್ ಆಗಿಬಿಡುತ್ತೇವೆ ನಮ್ಮ ನಮ್ಮ ಬೋಧನಾ   ವಿಷಯಗಳಲ್ಲಿ ಪ್ರಾವೀಣ್ಯತೆ ಪಡೆಯಲು ಸದಾ ನಾವು ಕಲಿಯುತ್ತಲೇ ಇರಬೇಕು.ಇದರ ಜೊತೆಯಲ್ಲಿ ಶಿಕ್ಷಕರಾದವರು  "teachers must know something about everything and everything about something" ಎಂಬಂತೆ ನಮಗೆ ಇತರೆ ವಿಷಯಗಳ ಜ್ಞಾನವು ಅಗತ್ಯ . 2020 ರ ಹೊಸ ಶಿಕ್ಷಣ ನೀತಿಯು ಸಹ ಇದೇ ಆಧಾರದ ಮೇಲೆ ಶಿಕ್ಷಕರಾದವರು ಕಲಿಯುತ್ತಾ ಕಲಿಸಬೇಕು ಎಂಬುವ ಆಶಯ ಹೊಂದಿದೆ. ಈ ನಿಟ್ಟಿನಲ್ಲಿ ಶಿಕ್ಷಕರಾದ ನಾವು ಕಲಿಯುತ್ತಾ ಕಲಿಸೋಣ, ಕಲಿಸುತ್ತಾ ಕಲಿಯೋಣ .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


ಪಟಾಕಿ ಹೊಡೆಯೋ ಮುನ್ನ.....

 




ಪಟಾಕಿ ಹೊಡೆಯೋ ಮುನ್ನ...


ದೀಪಾವಳಿ ಹಬ್ಬಕ್ಕೆ ಪಟಾಕಿ ಹೊಡಯಬೇಡಿ ಎಂದರೆ ನಿಮ್ಮಲ್ಲಿ ಕೆಲವರು ನನ್ನನ್ನು ಕಣ್ಣು ಕೆಂಪಗೆ ಮಾಡಿಕೊಂಡು ಗುರಾಯಿಸೋದು ಗ್ಯಾರಂಟಿ. ಪರಿಸರ ಅದೂ ಇದು ಅಂದು ನಮ್ಮ ಸಂತೋಷಕ್ಕೆಅಡ್ಡಿ ಮಾಡಲು ನಿವ್ಯಾರು? ನಿವೇನ್ ದುಡ್ ಕೊಟ್ಟು ಪಟಾಕಿ ಕೊಡಿಸ್ತೀರಾ? ಯಾವ್ ಹಬ್ಬಕ್ಕೆ ಇಲ್ಲದ ನಿರ್ಬಂಧ ನಮಗ್ಯಾಕೆ ಹೀಗೆ ನೂರು ಪ್ರಶ್ನೆ ಕೇಳಿ ನನ್ ಬಾಯಿ ಮುಚ್ಚಿಸ್ತೀರಾ ಅಂತಾನೂ ಗೊತ್ತು..

ಅಂತೂ ಪಟಾಕಿ ಹೊಡಿಲೇ ಬೇಕು ಅಂತ ತೀರ್ಮಾನ ಮಾಡಿರೋರ್ನ ನಾನು ತಡೆಯೊಲ್ಲ ಪಟಾಕಿ ಹೊಡಿರಿ ಅದಕ್ಕೂ ಮುಂಚೆ ನಾ ಹೇಳೋ ಮಾತ್ ಕೇಳಿ...

ಮೊದಲನೆಯದಾಗಿ ಪಟಾಕಿ ಹೊಡೆಯಲು ಉತ್ತಮ ಸ್ಥಳ ಆರಿಸಿ. ವಿಶಾಲವಾದ ಪ್ರದೇಶ ಅಥವಾ ಮೈದಾನದಲ್ಲಿ ಪಟಾಕಿ ಹೊಡೆಯುವುದು ಒಳ್ಳೆಯದು. ಸ್ಥಳ ಕಡಿಮೆ ಇರುವವರು ಸಣ್ಣ-ಪುಟ್ಟ ಪಟಾಕಿಗಳನ್ನು ಮಾತ್ರ ಉಪಯೋಗಿಸಿ. ಇತರರಿಗೆ ತೊಂದರೆ ಆಗದಂತೆ ಜಾಗೃತೆ ವಹಿಸಿ.

*  ಪಟಾಕಿ ಸಿಡಿಸುವಾಗ ಮಕ್ಕಳ ಕಡೆಗೂ ಗಮನ ಹರಿಸಿ, ಚಿಕ್ಕ ಮಕ್ಕಳು ಆ ಸ್ಥಳದಿಂದ ದೂರ ಇರುವುದೇ ಉತ್ತಮ.

*  ಪಟಾಕಿ ಸಿಡಿಸುವಾಗ ಕಣ್ಣಿನ ಆರೋಗ್ಯದ ಬಗ್ಗೆಯೂ ಗಮನವಿರಲಿ. ಸಾಧ್ಯವಾದರೆ ನೇತ್ರ ಸುರಕ್ಷತಾ ಸಾಧನಗಳನ್ನು ಬಳಸಿ.

*  ಪಟಾಕಿ ಹೊಡೆಯುವಾಗ ಆದಷ್ಟು ಕಾಟನ್ ಬಟ್ಟೆಗಳನ್ನೇ ಧರಿಸಿ. ಇದು ಬಟ್ಟೆಗೆ ಬೇಗನೆ ಬೆಂಕಿ ಹತ್ತಿಕೊಳ್ಳುವುದನ್ನು ತಪ್ಪಿಸುತ್ತದೆ.

*  ಕಡಿಮೆ ಶಬ್ದ ಮತ್ತು ಕಡಿಮೆ ಹೊಗೆ ಬರುವ ಪಟಾಕಿಗಳಿಗೆ ಮೊದಲ ಆದ್ಯತೆ ನೀಡಿ. ಹಸಿರು ಪಟಾಕಿಗಳನ್ನು ಹೆಚ್ಚಾಗಿ ಬಳಸಿ.

*  ಪಟಾಕಿ, ನಕ್ಷತ್ರ ಕಡ್ಡಿ ಉಪಯೋಗಿಸುವಾಗ ಎಚ್ಚರವಿರಲಿ. ಬೆಂಕಿಯ ಕಿಡಿ ಮುಖ, ಕಣ್ಣು, ಕೂದಲಿಗೆ ಬರದಂತೆ ಎಚ್ಚರ ವಹಿಸಿ.

*  ಪಟಾಕಿ ಹೊಡೆಯುವಾಗ ಕಣ್ಣು ಮಾತ್ರವಲ್ಲದೇ ಕೈ-ಕಾಲು ಗಳಿಗೂ ತಗಲುವ ಅಪಾಯವಿರುವುದರಿಂದ ಆದಾಷ್ಟು ಎಚ್ಚರಿಕೆ ವಹಿಸುವುದು ಸೂಕ್ತ.

*  ಅರ್ಧ ಸುಟ್ಟ ಅಥವಾ ಸಿಡಿಯದೇ ಬಾಕಿ ಉಳಿದಿರುವ ಪಟಾಕಿಗಳನ್ನು ಬಳಸುವುದು ಬೇಡ. ಕತ್ತಲಲ್ಲಿ ಪಟಾಕಿ ಹೊಡೆಯುವ ಸಹಾಯ ಬೇಡ.

*  ಪಟಾಕಿ ಬಾಕ್ಸ್ ಪಕ್ಕದಲ್ಲಿ ಇಟ್ಟು ಪಟಾಕಿ ಹೊಡೆಯುವುದನ್ನು ತಪ್ಪಿಸಿ.

*  ಪ್ರಥಮ ಚಿಕಿತ್ಸೆಯ ಕಿಟ್ ಜೊತೆಗಿರಲಿ.

ಸುಪ್ರೀಂ ಕೋರ್ಟ್ ಪರಿಸರಕ್ಕೆ ಹಾನಿಯಾಗುವ ಪಟಾಕಿಗಳನ್ನು ಹೊಡೆಯಬಾರದು ಎಂದು ಆದೇಶ ನೀಡಿದೆ. ಕಳೆದ ವರ್ಷದಿಂದ ಸರ್ಕಾರ ಹಸಿರು ಪಟಾಕಿಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಹಾಗಾಗಿ ಎಲ್ಲರೂ ಆದಷ್ಟು ಹಸಿರು ಪಟಾಕಿಗಳನ್ನೇ ಬಳಸಿ. ಪಟಾಕಿ ಹೊಡೆಯಲು ರಾತ್ರಿ 8-10 ಗಂಟೆಯವರೆಗೆ ಮಾತ್ರ ಅವಕಾಶವಿದ್ದು, ಆ ಸಮಯದಲ್ಲೇ ಪಟಾಕಿ ಹೊಡೆಯುವುದು ಉತ್ತಮ. ಸಂಭ್ರಮ, ಸಡಗರದ ಜೊತೆಗೆ ಸುರಕ್ಷತೆ ಕಡೆಗೂ ಗಮನ ಹರಿಸುವುದು ಅಗತ್ಯ. ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ