25 ನವೆಂಬರ್ 2018

ಕಲಿಯುಗ ಕರ್ಣ ( ನುಡಿನಮನ)

                      *ಕಲಿಯುಗ ಕರ್ಣ*(ನುಡಿನಮನ)

ಚಿತ್ರರಂಗದ ಹೆಮ್ಮೆಯ
ಮೈಸೂರ್ ಜಾಣ
ಅಭಿಮಾನಿಗಳ ಪಾಲಿನ
ಪ್ರೀತಿಯ ಜಲೀಲ
ಕೋಟಿ ಜನರ ಪಾಲಿಗೆ
ಮಂಡ್ಯದ ಗಂಡು
ದುಷ್ಟರ ಪಾಲಿಗೆ
ರೆಬೆಲ್ ಸ್ಟಾರ್
ಪಡ್ಡೆಗಳ ಪ್ರೀತಿಯ
ಕನ್ವರ್ ಲಾಲ್
ನಟನೆಯಲಿ ಎಂದೂ
ಮರೆಯದ  ದಿಗ್ಗಜ
ಕೊಡಗೈದಾನಿಯಾದ
ಕಲಿಯುಗ ಕರ್ಣ
ಕನ್ನಡ ಕಲಾವಿದರಿಗೆ
ನಮಗೆಲ್ಲ ಅಣ್ಣ
ಅಮರ್ ನಾಥ್  ಹೆಸರಿನಂತೆ
ಅಮರನಾದೆ
ದೇಹದಿಂದ ನಿನ್ನ ಪ್ರಾಣ
ಹೋದರೂ ನಮ್ಮ ಹೃದಯದಲಿ
ಶಾಶ್ವತವಾಗಿ ನೆಲೆಸಿರುವೆ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

24 ನವೆಂಬರ್ 2018

ಗಜ಼ಲ್51(ಬದಲಾಗಿದ್ದೇನೆ)

          *ಗಜ಼ಲ್ 51*

ನಲವತ್ತು ದಾಟಿದ ಮೇಲೆ ನಿಜವಾಗಿ ಬದುಕಲು‌  ಬದಲಾಗಿದ್ದೇನೆ
ಗತಕಾಲದ ಮೆನಪುಗಳ ಮೊಗೆದು  ಸವಿಯಲು   ಬದಲಾಗಿದ್ದೇನೆ

ತಪ್ಪು ಮಾಡದವರಾರಿಲ್ಲ ಪರಿಪೂರ್ಣರು ಹುಟ್ಟಿಲ್ಲ
ವ್ಯಕ್ತಿ ,ವಸ್ತುಗಳು  ಹೇಗಿದ್ದರೂ ಹಾಗೆಯೇ  ಸ್ವೀಕರಿಸಲು‌  ಬದಲಾಗಿದ್ದೇನೆ

ನಡೆಯುವುದ ತಡೆಯುವ ನಿಯಂತ್ರಣ ಶಕ್ತಿ ನಾನಲ್ಲ
ನಿನ್ನೆ ನಾಳೆಗಳ ಚಿಂತಿಸದೇ   ವರ್ತಮಾನದಿ ಜೀವಿಸಲು  ಬದಲಾಗಿದ್ದೇನೆ

ಕುರುಡು ಕಾಂಚಾಣ ಕುಣಿದು ಅಮ್ಮ ಅಪ್ಪ ಬಂಧು ಬಳಗ ದೂರಮಾಡಿದೆ
ಸಂಬಂಧ ಗಳೊಂದಿಗೆ ರಾಜಿಯಾಗಿ ಸಂಭ್ರಮಿಸಲು ಬದಲಾಗಿದ್ದೇನೆ

ಸೂರ್ಯ, ಚಂದಿರ,ಗಾಳಿ ,ಭುವಿ ನಿರಂತರ ಕಾಯಕ ನಿರತ
ಸೀಜೀವಿಯನು ಇತರರು ಪ್ರಶಂಸೆ ಮಾಡಬೇಕು ಎಂಬುದನು ತೊರೆಯಲು ಬದಲಾಗಿದ್ದೇನೆ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

23 ನವೆಂಬರ್ 2018

ಮಾತಾಪಿತರಾಗೋಣ (ಹನಿಗವನ)

*ಮಾತಾಪಿತರಾಗೋಣ*

ಓ ನನ್ನ ಒಲವ ನಲ್ಲೆ
ವಿರಸವನು ನೀಗೋಣ
ಸರಸದಲಿ ಸಂಭ್ರಮಿಸೋಣ
ವರುಷದೊಳಗೊಂದು
ವರ ಪಡೆದು ಮುದ್ದಾದ
ಕಂದನಿಗೆ ಮಾತಾಪಿತರಾಗೋಣ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

21 ನವೆಂಬರ್ 2018

ಮರೆಯಲಾರೆ (ಕವನ)

              *ಮರೆಯಲಾರೆ*

ಸವಿಯಾದ ನೆನಪು ಮರೆಯಲಾರೆ
ಕವಿಯಾಗಿ ಅವುಗಳ ವರ್ಣಿಸಲಾರೆ

ಅಕ್ಷರ ಕಾಗುಣಿತ ತಪ್ಪಿ ಬ್ಯಾ ಬ್ಯಾ
ಅಂದಾಗ ಬೆತ್ತದಿ ಬಾರಿಸಿ
ಬಾಸುಂಡೆ ಬರುವಂತೆ ಬಾರಿಸಿ
ಜೀವನ ಪಾಠ  ಕಲಿಸಿದ
ಭಗವಂತನಂತಹ ಗುರುವ ಮರೆಯಲಾರೆ

ಬುಗುರಿ ಚಿನ್ನಿದಾಂಟು ಕುಂಟೊಬಿಲ್ಲೆ
ಆಟಗಳಲ್ಲಿ ನಲಿದಾಡಿ
ಬೇಲಿ ಸಾಲಲಿ‌ ಸುತ್ತಿ
ಕಾರೆ ತೊಂಡೆ ಹಣ್ಣುಗಳ ಸವಿವಾಗ
ಜೊತೆಗಿದ್ದ  ಬಾಲ್ಯದ ಗೆಳೆಯರ ಮರೆಯಲಾರೆ

ಅಪ್ಪನಿಲ್ಲದಿದ್ದರೂ ಒಪ್ಪವಾಗಿ ಬೆಳೆಸಿ
ಹೆತ್ತು ಹೊತ್ತು ಸಾಕಿ ಸಲಹಿ
ಹೊತ್ತಿಗೆ ತುತ್ತು ಅನ್ನ ನೀಡಿ
ಹೊತ್ತಗೆ  ಹಿಡಿಯುವಂತೆ ಮಾಡಿ
ಅತಿ‌ಮುದ್ದಾಗಿ ಬೆಳೆಸಿದ ಅಮ್ಮನ ಮರೆಯಲಾರೆ

ಮರಳಿನಲಿ ಗೂಡನ್ನು ಕಟ್ಟಿ
ಕೈ ಕೈ ಹಿಡಿದು ನೆಡೆದಾಡಿ
ನಿನ್ನನೇ ಮದುವೆಯಾಗುವೆನೆಂದು
ಅಪ್ಪ ಅಮ್ಮನ ಆಟವನಾಡಿದ
ಮೊದಲ ಒಲವನು ಮರೆಯಲಾರೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

12 ನವೆಂಬರ್ 2018

ಹೊಸ ಜಗವ ಕಟ್ಟೋಣ ( ಕವನ)

*ಹೊಸ ಜಗ ಕಟ್ಟೋಣ*

 ದೀಪದ ಹಬ್ಬದಿ  ಮೆರೆಯುವುದಿಲ್ಲ
ಪರಿಸರ ಕಾಳಜಿ ಮರೆಯುವುದಿಲ್ಲ

ಪಟಾಕಿ ಚಟಾಕಿ ಹೊಡೆಯುವುದಿಲ್ಲ
ಸಿಹಿ ಹಂಚುವುದು ಮರೆಯುವುದಿಲ್ಲ
ಭೂಚಕ್ರಗಳನು ಹಚ್ಚವುದಿಲ್ಲ
ಚಕ್ರಪಾಣಿಯ ಸ್ಮರಣೆ ಮರೆಯುವುದಿಲ್ಲ

ಬಿರುಸು   ಬಾಣಗಳ ಬಳಸುವುದಿಲ್ಲ
ದಿರಿಸು ಧರಿಸಿ ಮಿಂಚುವೆವವು ಎಲ್ಲ
ಆಕಾಶಬುಟ್ಡಿ ಕಟ್ಟಲು ಮರೆಯಲ್ಲ
ಮಾಲಿನ್ಯವನು ನಾವು ಮಾಡುವುದಿಲ್ಲ

ಬೊಗಸೆಯಲಿ ದೀಪದಳ ಬೆಳಗಿಸುವೆವು
ದೀಪದಿಂದಲಿ ದೀಪಗಳ  ಹಚ್ಚುವೆವು
ಕತ್ತೋಲೋಡಿಸಿ ಬೆಳಕು ಮೂಡಿಸುವೆವು
ಹೊಸ ಜಗವ ಕಟ್ಡಲು ಪಣತೊಡುವೆವು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*