03 ಡಿಸೆಂಬರ್ 2017

*ವಿಶ್ವಮಾನವನಾಗು*(ಕವನ)



*ವಿಶ್ವಮಾನವನಾಗು*

ಮಡಿಲಲಿ  ಪವಡಿಸು ನನ್ನ ಕಂದ
ನಿನ್ನಯ  ಮೊಗವು ಬಲು ಅಂದ
ಸಾಧಿಸಿ ತೋರಿಸು ನಿನ್ನ ಗುರಿಯ
ಈಡೇರಿಸು ಮುಂದೆ ನನ್ನಾಸೆಯ

ಒಲವಿನ ಮಾತಾಡಿ ಗೆಲುವನೆ ನೀ ಪಡೆ
ಛಲವ ಬಿಡಬೇಡ ಸಾಗು ಗುರಿಯೆಡೆ
ಮೇಲು ಕೀಳು ಬೇಡ ಸಾಮಾನತೆ ಸಾರು
ಬಡವರ ಕಂಬನಿಯ ನೀ  ಒರೆಸುತಿರು

ಒಳ್ಳೆಯ ಗುಣಗಳ ಗಣಿಯಾಗು
ಕೆಟ್ಟ ಮನುಜರ ಶಿಕ್ಷಿಪ ಖಲಿಯಾಗು
ಧರ್ಮದ  ಮಾರ್ಗದಿ ನೀ ನಡೆ
ಅಧರ್ಮದ ಹಾದಿಗೆ ನೀಡು‌ ತಡೆ

ದೇಶ ಭಕ್ತಿಯ ಕಿಚ್ಚನು  ಹೊತ್ತಿಸು
ಸಂಕುಚಿತ ಭಾವನೆಯ ಹೊಡೆದೋಡಿಸು
ವಿಶಾಲವಾದ ಭಾವದ ಪಾಠವ ಕಲಿಸು
ವಿಶ್ವಮಾನವತೆಯ ಸಂದೇಶ ಪಾಲಿಸು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಕೋಟ್ಯಾಧಿಪತಿ ಆಗುವುದು ಹೇಗೆ? (ಲೇಖನ)

ಕೋಟ್ಯಾಧಿಪತಿ ಆಗುವುದು ಹೇಗೆ?


ಯಶಸ್ಸಿಗೆ ಯಾವುದೇ ಅಡ್ಡದಾರಿಗಳು ಇರುವುದಿಲ್ಲ. ಆದರೆ ಕೆಲ ಹವ್ಯಾಸಗಳನ್ನು ಅನುಸರಿಸಿದರೆ ಅವು ಸ್ವಯಂ ನಿರ್ಮಿತ(self made) ಕೋಟ್ಯಾಧಿಪತಿ ಆಗುವಂತೆ ಉತ್ತೇಜನ ಹಾಗೂ ಪ್ರೇರೆಪಣೆ ನೀಡಬಲ್ಲವು ಎಂಬುದರಲ್ಲಿ ಸಂಶಯವಿಲ್ಲ.
 ಟಾಟಾ, ಅಂಬಾನಿ, ನಾರಾಯಣಮೂರ್ತಿ, ಬಿಲ್ ಗೇಟ್ಸ್ ಹೀಗೆ ಹಲವರ ಜೀವನಶೈಲಿ ನಮ್ಮನ್ನು ಸ್ಪೂರ್ತಿ ನೀಡಬಲ್ಲದು. ಅವರೆಲ್ಲ ಕೋಟ್ಯಾಧಿಪತಿಯಾದ ಸಾಹಸಗಳ ಹಿಂದಿನ ಶಕ್ತಿಗಳೇನು? ಅನುಸರಿಸಿದ ಮಾರ್ಗಗಳೇನು? ಅವರೆಲ್ಲ ಮಿಲಿಯನೇರ್ ಆಗಲು ಸಾಧ್ಯ ಆಗಿದ್ದಾದರು ಹೇಗೆ? ಹೀಗೆ ಹತ್ತು ಹಲವು ಪ್ರಶ್ನೆಗಳು ನಮ್ಮನ್ನು ಕಾಡಬಹುದು. ಅದಕ್ಕಾಗಿ 'Stay Hungry Stay Foolish' ಯಾವಾಗಲೂ ಪ್ರಸ್ತುತ. ಸ್ವಯಂ ನಿರ್ಮಿತ(self made) ಕೋಟ್ಯಾಧಿಪತಿ ಆಗಲು ಬಯಸುವ ಆಶಾವಾದಿಗಳು ತಿಳಿದುಕೊಳ್ಳಬೇಕಾದ ಸೀಕ್ರೆಟ್ ಸಂಗತಿಗಳು ಯಾವುವು ಗೊತ್ತೆ? ಇಲ್ಲಿವೆ ನೋಡಿ...

1. ಆದಾಯದ ಮೂಲಗಳನ್ನು ಹೆಚ್ಚಿಸಿ 'Never depend on single income.' ಎಂದು ವಾರೆನ್ ಬಫೆಟ್ ಹೇಳಿದ್ದಾರೆ. ಕೋಟ್ಯಾಧಿಪತಿ ಆಗಬೇಕೆಂದು ಬಯಸುವ ಆಶಾವಾದಿಗಳು ಮೂಲಭೂತವಾಗಿ ಆದಾಯದ ಮೂಲಗಳನ್ನು ಹೆಚ್ಚಿಸಲೇ ಬೇಕು. ಒಂದೇ ಆದಾಯದ ಮೂಲಕ್ಕೆ ಅವಲಂಬನೆ ಆಗುವುದು ಬೇಡ. ಹೂಡಿಕೆ ಮಾಡಬಹುದಾದ ಮಾರ್ಗ ಮತ್ತು ಮೂಲಗಳನ್ನು ಹುಡುಕಿ. ರಿಯಲ್ ಎಸ್ಟೇಟ್, ಇನ್ಫ್ರಾಸ್ಟ್ರಕ್ಚರ್, ಷೇರುಗಳಲ್ಲಿ ಹೂಡಿಕೆ ಮಾಡಿ. ಶ್ರೀಮಂತ ಜನರು ಯಾವುದೇ ಒಂದು ಆದಾಯದ ಮೇಲೆ ಅವಲಂಬಿತರಾಗಿರುವುದಿಲ್ಲ.

2. ಯೋಜನೆ ರೂಪಿಸಿ ಅಲನ್ ಲಾಕೆನ್ ಯೋಜನೆ ಕುರಿತು 'Failing to plan is planning to fail.' ಎಂದಿದ್ದಾರೆ. ಹೀಗಾಗಿ ಯೋಜನೆಯೇ ಯಶಸ್ಸಿನ ಮೂಲಮಂತ್ರ. ಗುರಿ ಇಲ್ಲದ ಸ್ಟೀವ್ ಜಾಬ್ಸ್ ರನ್ನು ಊಹಿಸಲು ಯಾರಿಂದಲಾದರೂ ಸಾಧ್ಯವಿದೆಯೆ? ನಿಮ್ಮ ಗುರಿಗಳನ್ನು ಬರೆದು ನೀವು ಬಯಸಿದಂತ ಭವಿಷ್ಯವನ್ನು ಊಹಿಸಿಕೊಳ್ಳಿ. ಅಂದರೆ ಮನಸ್ಸಿನಲ್ಲಿರುವ ಗುರಿಗಳನ್ನು ಬರೆದಿಟ್ಟು ಅದಕ್ಕನುಗುಣವಾಗಿ ಯೋಜನೆಗಳನ್ನು ರೂಪಿಸಿ, ಅದರ ಸಾಧನೆಗಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಕಾಗದದ ಮೇಲೆ ಬರೆದಿಡುವುದರಿಂದ ಅದು ಸಂಭವಿಸುವಂತೆ ಮಾಡಬಹುದು!

 3. ಸಮಯ ಅಮೂಲ್ಯವಾದದ್ದು ಒಂದು ಭಾರಿ ಕಳೆದ ಸಮಯ ಎಂದೂ ಮತ್ತೆ ಸಿಗದು. ಸಮಯವನ್ನು ಅನ್ಯತಹ ವ್ಯರ್ಥ ಮಾಡುವುದು ಮನುಷ್ಯನ ದೊಡ್ಡ ದೌರ್ಬಲ್ಯ. ಕೆಲವರು ಟಿವಿ ನೋಡುತ್ತಾ, ಹರಟೆ ಹೊಡೆಯುತ್ತ ಕಾಲಹರಣ ಮಾಡುತ್ತಿರುತ್ತಾರೆ. ಆದರೆ ಕೋಟ್ಯಾಧಿಪತಿಗಳು ಟಿವಿ ನೋಡುವುದರಿಂದ ದೂರ ಉಳಿದು ಬಿಸಿನೆಸ್ ಸ್ಟ್ರಾಟಜಿ ಅಥವಾ ಹೊಸ ಯೋಜನೆಗಳ ಬಗ್ಗೆ ಕೆಸ ಮಾಡುತ್ತಿರುತ್ತಾರೆ. ಅವರಿಗೆ ತಮ್ಮ ಬಿಸಿನೆಸ್ ಮತ್ತು ಪ್ರಾಜೆಕ್ಟ್ ಮೇಲೆ ಹೆಚ್ಚು ಸಮಯ ಕಳೆಯುವುದೇ ಸಂತೋಷ ಕೊಡುತ್ತದೆ.

4. ಬೇರೆಯವರನ್ನು ನೋಡಿ ಕಲಿಯಬೇಕು ಎಲ್ಲ ತಪ್ಪುಗಳನ್ನು ನಾವೇ ಮಾಡಿ ಅದನ್ನು ಸರಿಪಡಿಸಿಕೊಂಡು ಹೋಗುವಷ್ಟು ದೀರ್ಘ ಜೀವನ ನಮ್ಮದಲ್ಲ. ಆದರಿಂದ ಇನ್ನೊಬ್ಬರ ಸೋಲು ಗೆಲುವುಗಳಿಂದ ತಿಳಿದುಕೊಳ್ಳಬೇಕಾದದ್ದು ತುಂಬಾ ಇರುತ್ತದೆ. ಇನ್ನೊಬ್ಬರಿಂದ ತಿಳಿದುಕೊಳ್ಳಬೇಕಾದ, ಬೋಧಿಸಿಕೊಳ್ಳಬೇಕಾದ ಅಗತ್ಯ ಏನಿದೆ ಎಂಬ ಅಹಂಭಾವ ಇರಬಾರದು. ಶ್ರೀಮಂತರು ಯಾವಾಗಲೂ ಸಲಹೆಗಾರರನ್ನು ಇಟ್ಟುಕೊಂಡು ಮಾರ್ಗದರ್ಶನ ಪಡೆಯುತ್ತಿರುತ್ತಾರೆ. ಹೀಗಾಗಿ ಯಾವಾಗಲೂ ತುಂಬಾ ಎಚ್ಚರಿಕೆಯಿಂದ ಮನಸ್ಸನ್ನು ಸದಾ ಜಾಗೃತನನ್ನಾಗಿ ಇಡಬೇಕಾಗುತ್ತದೆ. ಹೊಸತನಕ್ಕೆ ಸದಾ ತೆರೆದುಕೊಂಡು, ಹೊಂದಿಕೊಂಡು ಹೋಗಬೇಕಾಗುತ್ತದೆ.

5. ಯಶಸ್ಸಿಗಾಗಿ ಕನಸು ಕಾಣಿರಿ ನಿಮ್ಮ ಕನಸುಗಳನ್ನು ಬಿಟ್ಟುಕೊಡಬೇಡಿ. ಉತ್ತಮ ಭವಿಷ್ಯದತ್ತ ಸಾಗಲು ಕಂಡ ಕನಸ್ಸುಗಳ ಸಾಕಾರದತ್ತ ಮುನ್ನಡೆಯಬೇಕು. ಶ್ರೀಮಂತನಾಗ ಬಯಸುವ ವ್ಯಕ್ತಿ ಕೇವಲ ಕನಸುಗಳನ್ನು ನನಸು ಮಾಡುವತ್ತ ನಡೆಯುತ್ತಿರುತ್ತಾನೆ. ಎದುರಾಗುವ ಅಡಚಣೆ, ವೈಫಲ್ಯ, ತೊಂದರೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಕನಸುಗಳ ಮೇಲೆ ಸವಾರಿ ಮಾಡುವುದಷ್ಟೇ ಅವರ ಗುರಿ.

6. ನಿರಂತರತೆ ಮುಖ್ಯ ಯಶಸ್ಸು ಅನ್ನುವುದು ನಿಂತ ನೀರಲ್ಲ. ಅದು ಯಾವಾಗಲೂ ನಿರಂತರವಾಗಿರುತ್ತದೆ. ಕೋಟ್ಯಾಧಿಪತಿ ಆಗಬಯಸುವವರಿಗೆ ನಿರಂತರತೆಯೇ ಕಿಲಿ ಕೈ. ಯೋಜನೆ ಮತ್ತು ವ್ಯವಹಾರಗಳ ಬಗ್ಗೆ ನಿರಂತರತೆ ಇರುತ್ತದೆ. ನಿರಂತರತೆ ಅನ್ನುವುದು ಅಹಂ ಅಲ್ಲ. ಅದು ದೃಢತೆಯನ್ನು ಪ್ರತಿಬಿಂಬಿಸುವ ಚಟ, ಹಂಬಲ ಹಾಗೂ ತುಡಿತ. ಹೀಗಾಗಿ ನಿರಂತರತೆ ತುಂಬಾ ಮುಖ್ಯ.

 7. ಪ್ರತಿ ಹೆಜ್ಜೆ ಅವಲೋಕನ ಮಾಡಬೇಕು ಪ್ರತಿ ಹಂತದಲ್ಲೂ ಏಳು ಬೀಳುಗಳ ಬಗ್ಗೆ ಅವಲೋಕನ ಮಾಡುವುದು ತುಂಬಾ ಮುಖ್ಯ. ಪ್ರತಿನಿತ್ಯ ನಿಮ್ಮ ಪ್ರಗತಿ ಬಗ್ಗೆ ಅವಲೋಕನ ಮಾಡುವುದರಿಂದ ನಾವು ಯಾವ ಹಾದಿಯಲ್ಲಿ ಸಾಗುತ್ತಿದ್ದೇವೆ ಹಾಗೂ ಸರಿ ತಪ್ಪುಗಳೇನು ಎಂಬುದು ಗೊತ್ತಾಗುತ್ತದೆ. ನಮ್ಮ ತಪ್ಪುಗಳನ್ನು ಸರಿಪಡಿಸಿ ಮುನ್ನಡೆಯದಿದ್ದರೆ ಯಶಸ್ಸು ಸಾಧ್ಯವಿಲ್ಲ. ಸೋಲು ಮತ್ತು ಗೆಲುವುಗಳಿಗೆ ಕಾರಣಗಳೇನು ಎಂಬುದನ್ನು ಪ್ರತಿ ಹೆಜ್ಜೆಯಲ್ಲೂ ತಿಳಿದುಕೊಳ್ಳುತ್ತಿರಬೇಕು.

8. ನಿಮ್ಮ ಸುತ್ತಮುತ್ತ ಯಶಸ್ಸು ತುಂಬಿರಲಿ ಶ್ರೀಮಂತ ವ್ಯಕ್ತಿಗಳು ಯಾವಾಗಲೂ ತಮ್ಮ ಸುತ್ತಮತ್ತ ಯಶಸ್ವಿ, ಸಮಾನ ಮನಸ್ಕ ಮತ್ತು ಬುದ್ದಿವಂತ ಜನರನ್ನು ಹೊಂದಿರಲು ಬಯಸುತ್ತಾರೆ. ಯಶಸ್ವಿ ವ್ಯಕ್ತಿಗಳು ಅಂದರೆ ತಮ್ಮ ಚಿಕ್ಕ ವಯಸ್ಸಿನಲ್ಲಿ ಮಹತ್ತರ ಸಾಧನೆ ಮಾಡಿ ಇನ್ನೂ ಹೆಚ್ಚಿನ ಸಾಧನೆಗಾಗಿ ಹಪಹಪಿಸುತ್ತಿರುತ್ತಾರೆ ಅಂತವರು ನಮ್ಮ ಸುತ್ತಮುತ್ತ ಇರುವಂತೆ ನೋಡಿಕೊಳ್ಳಬೇಕು. ಅವರಲ್ಲಿರುವ ಉತ್ಸಾಹ ಇನ್ನು ಉತ್ತಮ ಕೆಲಸಕ್ಕಾಗಿ ಪ್ರೇರೆಪಿಸುತ್ತದೆ.

 9. ಬೇಗ ಎದ್ದೇಳಿ ಹೆಚ್ಚಿನ ಯಶಸ್ವಿ ವ್ಯಕ್ತಿಗಳು ಬೇಗ ಎದ್ದೇಳುವ ಹವ್ಯಾಸ ಹೊಂದಿರುತ್ತಾರೆ. ಮುಂಜಾನೆ ಬೇಗ ಎದ್ದೇಳುವುದರಿಂದ ಹೆಚ್ಚಿನ ಸಮಯ ಸಿಗುತ್ತದೆ. ಪ್ರತಿನಿತ್ಯ ವ್ಯಾಯಾಮ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹಾಗೂ ಇಡೀ ದಿನ ಉಲ್ಲಾಸದಿಂದ ಇರುವುದು ಮುಖ್ಯವಾಗಿರುತ್ತದೆ

ಸಂಗ್ರಹ: ಸಿ.ಜಿ.ವೆಂಕಟೇಶ್ವರ
ಕೃಪೆ: ವಾಟ್ಸಪ್

ಹನಿಗವನಗಳು (ಕಂಬನಿ)

*ಹನಿಗವನಗಳು*

*೧*

*ನೀನೇತಕೆ?*

ಪ್ರಿಯೆ ನಿನ್ನ ಕಂಬನಿ
ಒರೆಸಲು ಬರಲೇ
ನಿನ್ನ ಹತ್ತಿರಕೆ
ಕರವಸ್ತ್ರವಿದೆಯಲ್ಲ ನನ್ನ
ಕೈಯಲ್ಲಿ ನೀನೇತಕೆ ?

*೨*

*ಕಾರಣ*

ನಿನ್ನ ಕಂಬನಿಗೆ ಯಾರು ಕಾರಣ
ಹೇಳು ಪ್ರಿಯೆ
ಅವರಿಗೆ ಬುದ್ದಿ
ಕಲಿಸುವೆನು
ಯಾರೂ ಇಲ್ಲ ಪ್ರಿಯ
ಈಗ ತಾನೆ ಈರುಳ್ಳಿ
ಹಚ್ಚಿರುವೆನು


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

02 ಡಿಸೆಂಬರ್ 2017

ಗಜ಼ಲ್ ೧೨ (ಏಕೆ)

*ಗಜ಼ಲ್*


ಇದ್ದ ಒಲವ ತಿರಸ್ಕರಿಸಿ ಕಾಲ್ತೆಗೆದು ಹೋದೆ ಏಕೆ?
ಸವಿನೆನಪ ನನಗಿತ್ತು ಹೇಳದೇ ನೀ   ತೆರಳಿದೆ ಏಕೆ?

ಮಾತಿನಲಿ  ಮತ್ತು ಬರಿಸಿ  ನೋಟದಿ ಆಕರ್ಷಿಸಿ
ಮಾತಾಡದೇ ಮುನಿಸಿಕೊಂಡು ಹೊರಟೋದೆ ಏಕೆ?

ಕಡುಕಪ್ಪು ಹಸಿರೆಲೆಗಳು ಒಮ್ಮೆಲೇ ತರಗೆಲೆಗಳಾದವು
ಚೈತ್ರ ಬರುವ ಕಾಲದಿ ಆಷಾಡ ಬಂದಿದೆ ಏಕೆ?


ಕೆನೆಹಾಲು ಜೇನು ಸೇರಿದಂತಿತ್ತು ನಮ್ಮಯ ಒಲವು
ಜೇನಮುತ್ತುಗಳ ಮರೆತು ಏನೂ ಹೇಳದೆ ಹೋದೆ ಏಕೆ?

ಕಹಿಗುಳಿಗೆಯನಿತ್ತು ಸೀಜೀವಿಯ ಮನಕೆ ಘಾಸಿ ಮಾಡಿ
ಶಾಶ್ವತ ಗಾಯ ಮಾಡಿ ಕಾಣದೇ  ಮರೆಯಾದೆ ಏಕೆ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಕನ್ನಡ ಸಾಹಿತ್ಯಕ್ಕೆ ಸಾಹಿತ್ಯ ಸಮ್ಮೇಳನಗಳ ಕೊಡುಗೆ ಎಷ್ಟು?

ಕನ್ನಡ ಸಾಹಿತ್ಯಕ್ಕೆ ಸಾಹಿತ್ಯ ಸಮ್ಮೇಳನಗಳ ಕೊಡುಗೆ ಎಷ್ಟು?

ಮೇಳ ಎಂದರೆ ಗುಂಪು ,ಜೊತೆ ಸೇರುವುದು. ಮುಂತಾದ ಅರ್ಥದಲ್ಲಿ ಬಳಸಲಾಗುತ್ತದೆ. ಸಮ್ಮೇಳನ ಒಂದು ಒಳ್ಳೆಯ ಉದ್ದೇಶದಿಂದ ಸೇರಿದ ಒಂದು ಕಾರ್ಯಕ್ರಮ ಎನ್ನಬಹುದು.
ಕನ್ನಡ ಸಾಹಿತ್ಯ ಸಮ್ಮೇಳನ ಈ ನಿಟ್ಟಿನಲ್ಲಿ ಒಂದು ಉತ್ತಮ ಕಾರ್ಯಕ್ರಮ.
ವಿಶ್ವೇಶ್ವರಯ್ಯ ರವರು ಕನ್ನಡ ಸಾಹಿತ್ಯ ಪರಿಷತ್ತು ಆರಂಭಿಕ ಮಾಡಿದಾಗಿನಿಂದಲೂ ಈ ರೀತಿಯಲ್ಲಿ ಸಾಹಿತ್ಯ ಸಮ್ಮೇಳನಗಳು ನಡೆದು ಕೊಂಡು ಬಂದಿವೆ .ಅವು ವಿಶ್ವ ,  ಅಖಿಲಭಾರತ, ಜಿಲ್ಲಾ, ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಇಂದಿಗೂ ನಡೆದು ಕೊಂಡು ಬರುತ್ತಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಸಮ್ಮೇಳನದಲ್ಲಿ ನಡೆಯುವ ಕೆಲ ಅನಪೇಕ್ಷಣೀಯ ಬೆಳವಣಿಗೆಗಳು .ಸಾಹಿತ್ಯ ಸಮ್ಮೇಳನ ಅಸ್ತಿತ್ವವನ್ನು ಪ್ರಶ್ನಿಸುವಂತಾಗಿದೆ .
ಅಂದ ಮಾತ್ರಕ್ಕೆ ಸಮ್ಮೇಳನದಲ್ಲಿ ಕನ್ನಡದ ಕೆಲಸ ಆಗಿಲ್ಲ ಎಂದರೆ ಒಪ್ಪಲು ಸಾದ್ಯವಿಲ್ಲ.
ಪ್ರತಿ ಸಮ್ಮೇಳನದ ಹಿನ್ನೆಲೆಯಲ್ಲಿ ಹಲವಾರು ಕವಿಗಳ ಸಮ್ಮಿಳನ ಹೊಸ ಕವಿಮನಗಳಿಗೆ ಬರೆಯಲು ಪ್ರೇರಣೆ ನೀಡುವುದು ಸುಳ್ಳಲ್ಲ .ಸಮ್ಮೇಳನದ ಅಂಗವಾಗಿ ನಡೆವ ಪುಸ್ತಕ ಮಾರಾಟದ ಮತ್ತು ಪ್ರಕಾಶನ ಸಂಸ್ಥೆಗಳು ಕನ್ನಡ ಪುಸ್ತಕಗಳನ್ನು ಈಗ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಾಶನ ಮಾಡಿ ಮುದ್ರಿಸಿ ಮಾರುವಲ್ಲಿ ಸಮ್ಮೇಳನದ ಪಾತ್ರವನ್ನು ಅಲ್ಲಗಳೆಯುವಂತಿಲ್ಲ .
ಇನ್ನೂ ಕವಿ ಗೋಷ್ಠಿ. ವಿವಾದ ಗೋಷ್ಟಿ, ಮುಂತಾದವು ನಮ್ಮ ಭಾಷೆ ನೆಲ ಜಲ ಮುಂತಾದ ವಿಷಯಗಳ ಬಗ್ಗೆ ಚಿಂತನ ಮಂಥನ ನಡೆಸುವುದು ಭಾಷೆಯ ಬೆಳವಣಿಗೆಗೆ ಪೂರಕವಾಗಿವೆ .
ಸಮ್ಮೇಳನದಲ್ಲಿ ತೆಗೆದುಕೊಂಡ ಕೆಲ ನಿರ್ಣಯಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಲಾಗಿಲ್ಲ ಎಂಬ ಕೊರಗು‌ ಹಲವಾರು ಬಾರಿ ಕಾಡಿದೆ .ಅಂದ ಮಾತ್ರಕ್ಕೆ ನಿರ್ಣಯವನ್ನು ಅಂಗೀಕಾರ ಮಾಡುವುದು ಬೇಡ ಎಂದರೆ ಹೇಗೆ ಕೆಲವೊಮ್ಮೆ ನಾವು ಆ ದಿಕ್ಕಿನಲ್ಲಿ ಯೋಚಿಸಲು  ಸಹಾಯಕ ಮತ ಇದು ಪರೋಕ್ಷವಾಗಿ ನಮ್ಮ ಭಾಷೆ ,ನೆಲ ,ಜಲದ  ಅಭಿವೃದ್ಧಿಗೆ ಪೂರಕವಾಗಿರುವ ಉದಾಹರಣೆ ಇವೆ .
ಆದರೆ ಇತ್ತೀಚಿನ ಕೆಲ ಬೆಳವಣಿಗೆಯ ಗಮನಿಸಿ ನೋಡಿದರೆ ಸಾಹಿತ್ಯ ಸಮ್ಮೇಳನ ರಾಜಕೀಯ ಸಮ್ಮೇಳನ ಅಥವಾ ಒಂದು ರಾಜಕೀಯ ಪಕ್ಷಗಳ ಸಮಾವೇಶ ಅಥವಾ ಸಭೆ ಆಗಿ ಮಾರ್ಪಟ್ಟಿತೋ ಏನೋ ಎಂಬ ಅನಮಾನ ಕಾಡದಿರದು .ಸಾಹಿತಿಗಳು ಪಕ್ಷಾತೀತರಾಗಿರಬೇಕೆಂದು ನಮ್ಮ ಅಪೇಕ್ಷಿಸುವ ಮನಸು ನಮ್ಮದಲ್ಲ ಆದರೆ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ರಾಜಕೀಯವಾಗಿ ಬಳಸುವುದು ತಪ್ಪಲ್ಲವೇ ಹಾಗಂದ ಮಾತ್ರಕ್ಕೆ ಮುಂದಿನ ವರ್ಷಗಳಲ್ಲಿ ಸಮ್ಮೇಳನ ನಿಲ್ಲಿಸಿಬಿಡೋಣ ಎಂದರೆ ಮೂರ್ಖತನದ ಪರಮಾವಧಿ ಆಗುತ್ತದೆ ನಮ್ಮ ಮನೆಗಳಲ್ಲಿ ಚಿಕ್ಕ ಕಾರ್ಯಕ್ರಮ ಮಾಡಿದಾಗ ಬಂಧುಗಳು ,ಸ್ನೇಹಿತರು ಮತ್ತು ಹಿತೈಷಿಗಳು ಪಾಲ್ಗೊಂಡು ನಮ್ಮ ಸಂಬಂದ ಗಳು ಗಟ್ಟಿಯಾಗಿ ಮನಸಂತೋಷವಾಗುತ್ತದೆ ಅಂತಹ ಚಿಕ್ಕ ಕಾರ್ಯಕ್ರಮ ದಲ್ಲಿಯೂ ಕೆಲವು ಎಡವಟ್ಟು ಆಗಿರುತ್ತದೆ ಅಂದರೆ ಮುಂದೆ ಹಬ್ಬ .ಜಾತ್ರೆ, ಕಾರ್ಯ ಕ್ರಮ ಮಾಡದೇ ಇರುತ್ತೇವೆಯೇ?
ಇನ್ನೂ ಮುಂದಾದರೂ   ನಮ್ಮ ನಾಡು ನುಡಿ ಹಬ್ಬಗಳನ್ನು ಮತ್ತು ಸಾಹಿತ್ಯ ಸಮ್ಮೇಳನ ಮಾಡುವಾಗ ಸಾಹಿತ್ಯ ಮತ್ತು ಸಾಹಿತ್ಯ ಸಂಬಂಧಿಸಿದ ಚಟುವಟಿಕೆಗಳನ್ನು ಮಾತ್ರ ಹಮ್ಮಿಕೊಂಡು ಮುನ್ನೆಡದರೆ ಖಂಡಿತ ಕನ್ನಡ ಸಾಹಿತ್ಯ ಸಮ್ಮೇಳನದ ಸಾರ್ಥಕ ಆಚರಣೆಯಾಗುವುದರಲ್ಲಿ ಸಂದೇಹವಿಲ್ಲ.

ವಂದನೆಗಳೊಂದಿಗೆ

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*