08 ಏಪ್ರಿಲ್ 2025

ಕಾಶ್ಮೀರದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕೃತಿ. ಪುಸ್ತಕ ಪರಿಚಯ.


 


ಕಾಶ್ಮೀರದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕೃತಿ.

  

ಲೇಖಕ ಕೋಟಾ ವೆಂಕಟಾಚಲಂ ಒಬ್ಬ ಭಾರತೀಯ ವಿದ್ವಾಂಸ ಮತ್ತು ಲೇಖಕರಾಗಿದ್ದು ಭಾರತೀಯ ಕಾಲಗಣನೆ ಮತ್ತು ಇತಿಹಾಸದ ಅಧ್ಯಯನಕ್ಕೆ ಅವರ ಕೊಡುಗೆ ಅಪಾರ. ಅವರ ಬರಹಗಳು ಪ್ರಾಚೀನ ಭಾರತೀಯ ಮಹಾನ್ ಕೃತಿಗಳ ಆಳವಾದ ಅಧ್ಯಯನ ಮಾಡಿ  ಪಾಶ್ಚಿಮಾತ್ಯ ವಿದ್ವಾಂಸರು ಪ್ರಸ್ತಾಪಿಸಿದ ಐತಿಹಾಸಿಕ ಅಂಶಗಳ ಆಧಾರದ ಮೇಲೆ  ವಿಮರ್ಶಾತ್ಮಕ ದೃಷ್ಟಿಕೋನದಲ್ಲಿ ಹತ್ತಾರು ಪುಸ್ತಕಗಳನ್ನು ಬರೆದಿದ್ದಾರೆ. ಅವರು ತೆಲುಗು ಮತ್ತು ಇಂಗ್ಲಿಷ್‌ನಲ್ಲಿ ಹಲವಾರು ಕೃತಿಗಳನ್ನು ಬರೆದಿದ್ದಾರೆ.

"ಕ್ರೋನಾಲಜಿ ಆಪ್ ಕಾಶ್ಮೀರ್ ಹಿಸ್ಟರಿ  ರಿಕನ್ಸ್ಟಕ್ಟೆಡ್ " ಎಂಬ ಪುಸ್ತಕವು ಆಂಗ್ಲ ಭಾಷೆಯಲ್ಲಿದ್ದು 

 ಇದು ಕಾಶ್ಮೀರದ ಐತಿಹಾಸಿಕ ಕಾಲಗಣನೆಯ ವಿಮರ್ಶಾತ್ಮಕ ಮರುಮೌಲ್ಯಮಾಪನವನ್ನು ನೀಡುತ್ತದೆ.  ಈ ಪುಸ್ತಕವು ಪಾಶ್ಚಿಮಾತ್ಯ ವಿದ್ವಾಂಸರು ನಮ್ಮ ಮೇಲೆ ಹೇರಿದ   ಕಾಲಗಣನೆಯನ್ನು ಪ್ರಶ್ನಿಸುತ್ತಾ 

 ಭಾರತೀಯ ಇತಿಹಾಸದಲ್ಲಿ ಹೇಗೆ ತಿರುಚಿದ್ದಾರೆ ಎಂದು ಹೇಳಿದ್ದಾರೆ.  ವಿಶೇಷವಾಗಿ ಭಾರತೀಯ ನಾಗರಿಕತೆಯ ಪ್ರಾಚೀನತೆಗೆ ಸಂಬಂಧಿಸಿದಂತೆ ಪೂರ್ವಭಾವಿ ಕಲ್ಪನೆಗಳಿಂದ ಕೂಡಿದೆ ಎಂದು ವೆಂಕಟಾಚಲಂ ವಾದಿಸುತ್ತಾರೆ. 


  ಭಾರತೀಯ ಇತಿಹಾಸದ ಪುನರ್ನಿರ್ಮಾಣದಲ್ಲಿ ಭಾರತೀಯ ಪುರಾಣಗಳು, ಮಹಾಕಾವ್ಯಗಳು ಮತ್ತು ಐತಿಹಾಸಿಕ ಕೃತಿಗಳಿಗೆ ಆದ್ಯತೆ ನೀಡುವ ಪ್ರಾಮುಖ್ಯತೆಯನ್ನು ವೆಂಕಟಾಚಲಂ ಪ್ರತಿಪಾದಿಸುತ್ತಾರೆ. ಈ ಮೂಲಗಳನ್ನು ಪಾಶ್ಚಿಮಾತ್ಯ ವಿದ್ವಾಂಸರು  ನಿರ್ಲಕ್ಷಿಸಿದ್ದಾರೆ.ಇದರ ಪರಿಣಾಮವಾಗಿ ಭಾರತದ ಐತಿಹಾಸಿಕ ಪಥದ ತಪ್ಪಾದ ಮತ್ತು ಅಪೂರ್ಣ ತಿಳುವಳಿಕೆ ಉಂಟಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

 ಭಾರತೀಯ ಇತಿಹಾಸದಲ್ಲಿನ ಮಹತ್ವದ ಘಟನೆಗಳು ಮತ್ತು ವ್ಯಕ್ತಿಗಳಿಗೆ ಪರಿಷ್ಕೃತ ಕಾಲಗಣನೆಯನ್ನು ಲೇಖಕರು ಪ್ರಸ್ತಾಪಿಸಿದ್ದಾರೆ.  ಉದಾಹರಣೆಗೆ ಅವರು ಮಹಾಭಾರತ ಯುದ್ಧವನ್ನು ಕ್ರಿ.ಪೂ. 3138 ರ ಸುಮಾರಿಗೆ ನಡೆದಿದೆ ಎಂದು ಅಭಿಪ್ರಾಯಪಡುತ್ತಾರೆ.

 ಈ ಪುಸ್ತಕವು ಕಾಶ್ಮೀರದ ಪ್ರಮುಖ ಐತಿಹಾಸಿಕ ಪಠ್ಯವಾದ ಕಲ್ಹಣನ "ರಾಜತರಂಗಿಣಿ" ಯ ಆಳವಾದ ವಿಶ್ಲೇಷಣೆಯನ್ನು ಮಾಡಿದೆ.ಅದರ ಮಹತ್ವ, ಮೂಲಗಳು ಮತ್ತು ವಿದ್ವತ್ಪೂರ್ಣ ವ್ಯಾಖ್ಯಾನಗಳನ್ನು ಚರ್ಚಿಸುತ್ತದೆ. 


ವೆಂಕಟಾಚಲಂ ಅವರು ಬುಹ್ಲರ್, ಹಲ್ಟ್ಜ್ ಮತ್ತು ಸ್ಟೈನ್ ಅವರಂತಹ ಪಾಶ್ಚಿಮಾತ್ಯ ಇತಿಹಾಸಕಾರರ ಕೃತಿಗಳನ್ನು ಟೀಕಿಸಿದ್ದಾರೆ.  ಅವರ ವ್ಯಾಖ್ಯಾನಗಳನ್ನು ಪ್ರಶ್ನಿಸುತ್ತಾ   ಭಾರತೀಯ ಇತಿಹಾಸದ ತಪ್ಪು ನಿರೂಪಣೆಗಳನ್ನು ಖಂಡಿಸಿದ್ದಾರೆ.

 ಈ ಪುಸ್ತಕವು ಮಹಾಭಾರತ ಯುದ್ಧದ ಡೇಟಿಂಗ್, ಕಲಿಯುಗ ಮತ್ತು ಬುದ್ಧ, ವಿಕ್ರಮಾದಿತ್ಯ ಮತ್ತು ಕಾನಿಷ್ಕನಂತಹ ವ್ಯಕ್ತಿಗಳ ಕಾಲಗಣನೆ ಸೇರಿದಂತೆ ಭಾರತೀಯ ಇತಿಹಾಸದಲ್ಲಿನ ವಿವಾದಾತ್ಮಕ ಕಾಲಾನುಕ್ರಮದ ಸಮಸ್ಯೆಗೆ ಪರಿಹಾರವನ್ನು ಸೂಚಿಸುವ ಪ್ರಯತ್ನ ಮಾಡಿದ್ದಾರೆ.

ಜೊತೆಗೆ  ಈ ಪುಸ್ತಕವು ಮುಸ್ಲಿಂ ಆಳ್ವಿಕೆ, ಚಕ್ಸ್, ಮೊಘಲರು, ಆಫ್ಘನ್ನರು, ಸಿಖ್ಖರು ಮತ್ತು ಡೋಗ್ರಾಗಳನ್ನು ಒಳಗೊಂಡ ಕಾಶ್ಮೀರದ  ಐತಿಹಾಸಿಕ ಅವಧಿಗಳ ಅವಲೋಕನವನ್ನು ಸಹ ಒದಗಿಸುತ್ತದೆ.


ಒಟ್ಟಾರೆ ನಮ್ಮನ್ನು ಚಿಂತನೆಗೆ ಹಚ್ಚುವ ಇದು ಭಾರತೀಯರು ಓದಲೇ ಬೇಕಾದ ಕೃತಿ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

 

06 ಏಪ್ರಿಲ್ 2025

ನಮ್ಮ ಮೌಲ್ಯ ನಮಗೇ ತಿಳಿದಿಲ್ಲ


 


ನಮ್ಮ ಮೌಲ್ಯ ನಮಗೇ ತಿಳಿದಿಲ್ಲ 


ಇದೊಂದು  ಕಬ್ಬಿಣದ ಬಾರ್. ಇದರ ಮೌಲ್ಯ ಸುಮಾರು 100 ಡಾಲರ್.


ನೀವು ಇದರಿಂದ  ಕುದುರೆ ಲಾಳಗಳನ್ನು ತಯಾರಿಸಲು ನಿರ್ಧರಿಸಿದರೆ, ಅದರ ಮೌಲ್ಯ  250 ಡಾಲರ್ ಗೆ  ಹೆಚ್ಚಾಗುತ್ತದೆ.


ಬದಲಾಗಿ ನೀವು ಇದರಲ್ಲಿ ಹೊಲಿಗೆ ಸೂಜಿಗಳನ್ನು ತಯಾರಿಸಲು ನಿರ್ಧರಿಸಿದರೆ ಅದರ ಮೌಲ್ಯ ಸುಮಾರು 70,000 ಡಾಲರ್ ಗೆ  ಹೆಚ್ಚಾಗುತ್ತದೆ.



ನೀವು ಇದರಿಂದ ಗಡಿಯಾರದ ಸ್ಪ್ರಿಂಗ್‌ಗಳನ್ನು ಉತ್ಪಾದಿಸಲು ನಿರ್ಧರಿಸಿದರೆ ಅದರ  ಮೌಲ್ಯ ಸುಮಾರು 6 ಮಿಲಿಯನ್‌ ಡಾಲರ್ ಗೆ  ಹೆಚ್ಚಾಗುತ್ತದೆ.


ಕಬ್ಬಿಣದ ಬಾರ್ ನೀವೇ! ನೀವು ನಿಮ್ಮ ಮೌಲ್ಯವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬುದರ ಬಗ್ಗೆ ಗಮನ ಕೊಡಿ. ನಿಮ್ಮಲಿರುವ ಅದ್ಭುತ ವ್ಯಕ್ತಿ ಹೊರಬರಲಿ.ನಿಮ್ಮ ವ್ಯಕ್ತಿತ್ವ ಉಜ್ವಲವಾಗಲಿ..


ಸಿಹಿಜೀವಿ ವೆಂಕಟೇಶ್ವರ



04 ಏಪ್ರಿಲ್ 2025

ಗೇದು..ಬೂತಾನಿನ ಪ್ರಮುಖ ಪ್ರಾಕೃತಿಕ ತಾಣ.





 


ಭೂತಾನ್ ಪ್ರವಾಸ ೭ 

ಗೇದು..


ಕರ್ಬಂತಿ ಗಿಂಬ ನೋಡಿ ಬಸ್ ಏರಿ ಸಾಗುವಾಗ ನಮ್ಮ ನಾಡಿನ ಘಾಟಿಗಳಲ್ಲಿ ಸಂಚರಿಸಿದ ಅನುಭವವನ್ನು ಪಡೆಯುತ್ತೇವೆ.ಎಲ್ಲಾ ಕಡೆ ಹಸುರು ಮತ್ತು  ತಿರುವು ಮುರುವು ರಸ್ತೆಯಲ್ಲಿ ಸಾಗಿದೆವು.

ಹೀಗೆ ಸಾಗಿ ವಿಶ್ರಾಂತಿ ಗಾಗಿ ಗೇದು ಎಂಬ ಸ್ಥಳದಲ್ಲಿ ನಿಲ್ಲಿಸಿದೆವು.


ಚುಖಾ ಜಿಲ್ಲೆಯ ಒಂದು ಪಟ್ಟಣ ಗೆಡು. ಮೂಲತಃ ಸ್ಥಳೀಯ ಜಲವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುವ ಜನರಿಗೆ ವಸತಿ ಕಲ್ಪಿಸಲು ಅಭಿವೃದ್ಧಿಪಡಿಸಲಾದ ಈ ಪಟ್ಟಣವು ಈಗ ಒಂದು ಸಣ್ಣ ಕಾಲೇಜಿಗೆ ನೆಲೆಯಾಗಿದೆ. ಬೆಟ್ಟದ ಸ್ಥಳಕ್ಕೆ ಅಂಟಿಕೊಂಡಿರುವ ಗೆಡುವಿನ ಸೌಂದರ್ಯ ಸವಿದು ಪೋಟೋ ತೆಗೆದುಕೊಂಡು ವೀಡಿಯೋ ಮಾಡಿಕೊಂಡೆವು.


   ಫ್ಯೂಯೆಂಟ್‌ಶೋಲಿಂಗ್ ಮತ್ತು ಥಿಂಫು  ನಡುವಿನ ಅತಿದೊಡ್ಡ ಜನಸಂಖ್ಯಾ ಕೇಂದ್ರವಾಗಿರುವುದರಿಂದ  ಇದು ಉಪಾಹಾರ ಸೇವಿಸಲು ಅನುಕೂಲಕರ ಸ್ಥಳವಾಗಿದೆ.

ಸ್ವಲ್ಪ ವಿಶ್ರಾಂತಿ ಪಡೆದ ನಂತರ ನಾವು ಗೆದುವಿನಲ್ಲಿ  ಇರುವ 

ಎಂಟು ಧರ್ಮ ಕಾಯ ಸ್ತೂಪಗಳನ್ನು ನೋಡಿದೆವು. 

ಎಂಟು ಮಹಾ ಬೌದ್ಧ ಸ್ತೂಪಗಳು  ಪ್ರಮುಖ ಟಿಬೆಟಿಯನ್ ಬೌದ್ಧಧರ್ಮದ  ಸಂಸ್ಕೃತಿಯಾಗಿದೆ.ಇದು ಬುದ್ಧ ಶಾಕ್ಯಮುನಿಯ ಜೀವನ ಮತ್ತು ಕೃತಿಗಳಲ್ಲಿನ ಎಂಟು ಪ್ರಮುಖ ಘಟನೆಗಳನ್ನು ಪ್ರತಿನಿಧಿಸುತ್ತದೆ. ಎಂಟು ಮಹಾ ಬೌದ್ಧ ಸ್ತೂಪಗಳು ಪ್ರಬುದ್ಧ ಮನಸ್ಸಿನ ಸಂಕೇತಗಳಾಗಿವೆ ಮತ್ತು ಅದರ ಸಾಕ್ಷಾತ್ಕಾರದ ಮಾರ್ಗವಾಗಿದೆ. 


ಎಂಟು ಮಹಾ ಬೌದ್ಧ ಸ್ತೂಪಗಳು ಬುದ್ಧನ ದೇಹ, ಮಾತು ಮತ್ತು ಮನಸ್ಸನ್ನು ಪ್ರತಿನಿಧಿಸುತ್ತವೆ. ಪರಿಣಾಮವಾಗಿ, ಎಂಟು ಸ್ತೂಪಗಳು ಬೌದ್ಧ ಅನುಯಾಯಿಗಳ ಪೂಜಾ ಸ್ಥಳಗಳಾಗಿವೆ.

ಮೊದಲ ಸ್ತೂಪ  ಬುದ್ಧನ ಜನನದ ಕಮಲದ ಹೂವು ಸ್ತೂಪ 

ಎರಡನೇಯದು ಜ್ಞಾನೋದಯ ಸ್ತೂಪ. 

ಮೂರನೆಯದು  ಧರ್ಮದ ಚಕ್ರವನ್ನು ತಿರುಗಿಸುವ ಸ್ತೂಪ. ನಾಲ್ಕನೆಯ ಸ್ತೂಪ ಮಹಾ ಪವಾಡ ಸ್ತೂಪ. 

ಐದು  ತುಶಿತ ಸ್ವರ್ಗದಿಂದ ಬಂದ ಸ್ತೂಪ.ಆರನೇ ಸ್ತೂಪ ಸಾಮರಸ್ಯದ ಸ್ತೂಪ. 

ಏಳನೇಯದು ಸರ್ವವಿಜಯಶಾಲಿ ಸ್ತೂಪ 

ಕೊನೆಯ ಮತ್ತು ಎಂಟನೇ ಸ್ತೂಪ  ಪರಿನಿರ್ವಾಣ ಸ್ತೂಪ.

ಎಲ್ಲಾ ಎಂಟೂ ಸ್ತೂಪಗಳನ್ನು ದರ್ಶಿಸಿ ಕೈಮುಗಿದು ಹೊರಬಂದು ಮತ್ತೊಮ್ಮೆ ಪ್ರಕೃತಿಯ ಸೊಬಗನ್ನು ಸವಿಯುತ್ತಾ ಬಸ್ ಏರಿ ಥಿಂಫು ಕಡೆಗೆ ಪಯಣ ಮುಂದುವರೆಸಿದೆವು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

 


03 ಏಪ್ರಿಲ್ 2025

ಮರೆತು ಹೋದ ಸ್ವಾತಂತ್ರ್ಯ ಹೋರಾಟಗಾರರ ಸ್ಮರಿಸೋಣ.


 ಮರೆತು ಹೋದ ಸ್ವಾತಂತ್ರ್ಯ ಹೋರಾಟಗಾರರ ಸ್ಮರಿಸೋಣ.ಈ



ನಾನು ಇಂದು ಪ್ರಭಾ ಚೋಪ್ರಾ ಮತ್ತು ಪಿ.ಎನ್. ಚೋಪ್ರಾ ಅವರಿಂದ ರಚಿತವಾದ ಇಂಗ್ಲೀಷ್ ಪುಸ್ತಕ  

"ಫರ್ಗಾಟನ್ ಹೀರೋಸ್ ಆಫ್ ಇಂಡಿಯಾಸ್ ಫ್ರೀಡಂ ಸ್ಟ್ರಗಲ್ " ಎಂಬ ಆಂಗ್ಲ  ಪುಸ್ತಕ ಓದಿದೆ.

ಇದರಲ್ಲಿ  ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಅಸಂಖ್ಯಾತ ಮರೆತುಹೋದ ವೀರರು, ಕ್ರಾಂತಿಕಾರಿಗಳು, ಸ್ವಾತಂತ್ರ್ಯ ವೀರರ  ತ್ಯಾಗ ಮತ್ತು  ಶೌರ್ಯದ ವಿವರವಾದ ಮಾಹಿತಿಯಿದೆ.


 ಈ ಕೃತಿಯ ಲೇಖಕರು  ಬ್ರಿಟಿಷ್ ಸರ್ಕಾರ ಸಿದ್ಧಪಡಿಸಿದ ರಹಸ್ಯ ಗುಪ್ತಚರ ವರದಿಗಳನ್ನು ಅಧ್ಯಯನ ಮಾಡಿ ನಮಗೆ ಈ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಸ್ವಾತಂತ್ರ್ಯ ಚಳವಳಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿಗ್ರಹಿಸಲು ರಚಿಸಲಾದ ಈ ದಾಖಲೆಗಳು   ನಮ್ಮ ದೇಶಭಕ್ತರ ಅಚಲ ಧೈರ್ಯ, ತ್ಯಾಗ ಮತ್ತು ದೃಢನಿಶ್ಚಯಕ್ಕೆ ಪ್ರಬಲ ಸಾಕ್ಷಿಯಾಗಿ ನಿಂತಿವೆ.


 ಈ ಪುಸ್ತಕವು ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಗಳನ್ನು ಬೆಳಕಿಗೆ ತರುವಲ್ಲಿ  ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.ಹಾಗೂ 

 ಶ್ರೀಮಂತ ಐತಿಹಾಸಿಕ ಹಿನ್ನೆಲೆಯನ್ನು ಒದಗಿಸುತ್ತದೆ. ಬ್ರಿಟಿಷ್ ಆಳ್ವಿಕೆಯ ವಿರುದ್ಧ ಪ್ರತಿರೋಧದ ವಿಕಸನದ ಸ್ವರೂಪವನ್ನು ವಿವರಿಸುತ್ತದೆ. ಆರಂಭಿಕ ಸಾಂವಿಧಾನಿಕ ವಿಧಾನಗಳ ಜೊತೆಗೆ ನಿರ್ದಿಷ್ಟ ಘಟನೆಗಳು ಮತ್ತು ನೀತಿಗಳಿಂದ ಪ್ರಚೋದಿಸಲ್ಪಟ್ಟ ಬೆಳೆಯುತ್ತಿರುವ ಕ್ರಾಂತಿಕಾರಿ ಉತ್ಸಾಹವು ಹೇಗೆ ಹೊರಹೊಮ್ಮಿತು ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ. ಪೂನಾದಲ್ಲಿ ಬುಬೊನಿಕ್ ಪ್ಲೇಗ್ ಏಕಾಏಕಿ ಉಂಟಾದ ನಂತರದ ಅಸಮಾಧಾನ ಮತ್ತು ಪ್ಲೇಗ್ ಸಮಿತಿಯ ಬಲವಂತದ ಕ್ರಮಗಳನ್ನು ಹೆಚ್ಚುತ್ತಿರುವ ಅಶಾಂತಿಯ ವೇಗವರ್ಧಕಗಳಾಗಿ ಪುಸ್ತಕವು ವಿವರಿಸುತ್ತದೆ. ಸ್ವದೇಶಿ ಚಳುವಳಿ ಮತ್ತು ಬಂಗಾಳದ ವಿಭಜನೆಯನ್ನು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ ಪ್ರಮುಖ ಕ್ಷಣಗಳಾಗಿ ಪ್ರಸ್ತುತಪಡಿಸಲಾಗಿದೆ. ಇದು ಹೆಚ್ಚು ಆಮೂಲಾಗ್ರ ಪ್ರತಿರೋಧದ ರೂಪಗಳು ಮತ್ತು ಸ್ವಾತಂತ್ರ್ಯಕ್ಕಾಗಿ ಸಶಸ್ತ್ರ ಹೋರಾಟಕ್ಕೆ ಬದ್ಧವಾಗಿರುವ ಕ್ರಾಂತಿಕಾರಿ ಸಂಘಟನೆಗಳ ಹೊರಹೊಮ್ಮುವಿಕೆಗೆ ಕಾರಣವಾಯಿತು.


 ಬ್ರಿಟಿಷ್ ಅಧಿಕಾರಿಗಳ ಮೇಲಿನ ದಾಳಿಗಳನ್ನು ಯೋಜಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಅನುಸಿಲನ್ ಸಮಿತಿಯಂತಹ ಪ್ರಮುಖ ರಹಸ್ಯ ಸಮಾಜಗಳ ಚಟುವಟಿಕೆಗಳ ಮೇಲೆ ಈ ಪುಸ್ತಕ ಬೆಳಕು ಚೆಲ್ಲುತ್ತದೆ. ಇದು ಕ್ರಾಂತಿಕಾರಿಗಳು ತಮ್ಮ ಉದ್ದೇಶಕ್ಕೆ ತೋರಿದ ಅಚಲ ಬದ್ಧತೆಯನ್ನು ವಿವರಿಸುವ ನಿರ್ದಿಷ್ಟ ಧಿಕ್ಕಾರ ಮತ್ತು ತ್ಯಾಗದ ಕೃತ್ಯಗಳನ್ನು ವಿವರಿಸುತ್ತದೆ. ಖುದಿರಾಮ್ ಬೋಸ್ ಮತ್ತು ಪ್ರಫುಲ್ಲ ಚಾಕಿ ಅವರು ಬ್ರಿಟಿಷ್ ಮ್ಯಾಜಿಸ್ಟ್ರೇಟ್‌ರನ್ನು ಹತ್ಯೆ ಮಾಡಲು ಪ್ರಯತ್ನಿಸಿದ ಘಟನೆಗಳಂತಹ ಘಟನೆಗಳನ್ನು ಈ ಪುಸ್ತಕ  ವಿವರಿಸುತ್ತದೆ.ಈ ಕಾರ್ಯಾಚರಣೆಯು ಅಮಾಯಕ ನಾಗರಿಕರ ಸಾವಿಗೆ ದುರಂತವಾಗಿ ಕಾರಣವಾಯಿತು.ಈ ಹೋರಾಟದಲ್ಲಿ ಅಂತರ್ಗತವಾಗಿದ್ದ  ಅಪಾಯಗಳು ಮತ್ತು ನೈತಿಕ ಸಂಕೀರ್ಣತೆಗಳನ್ನು ಒತ್ತಿಹೇಳುತ್ತದೆ.


ವಿದೇಶಿ ನೆಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕ್ರಾಂತಿಕಾರಿಗಳ ಪ್ರಮುಖ ಕೊಡುಗೆಗಳನ್ನು ಸಹ ಸೂಕ್ಷ್ಮವಾಗಿ ಇಲ್ಲಿ  ದಾಖಲಿಸುತ್ತದೆ. ಲಂಡನ್‌ನಲ್ಲಿ ಭಾರತೀಯ ಹೋಮ್ ರೂಲ್ ಸೊಸೈಟಿಯನ್ನು ಸ್ಥಾಪಿಸಿದ ಶ್ಯಾಮ್‌ಜಿ ಕೃಷ್ಣ ವರ್ಮಾ ಮತ್ತು ಜರ್ಮನ್ ನೆಲದಲ್ಲಿ ಭಾರತೀಯ ರಾಷ್ಟ್ರೀಯ ಧ್ವಜವನ್ನು ಧೈರ್ಯದಿಂದ ಹಾರಿಸಿದ ಮೇಡಮ್ ಭಿಖಾಜಿ ಕಾಮಾ ಅವರಂತಹ ವ್ಯಕ್ತಿಗಳಿಗೆ ಸರಿಯಾದ ಮನ್ನಣೆ ನೀಡಲಾಗುತ್ತದೆ. ಬೆಂಬಲವನ್ನು ಸಜ್ಜುಗೊಳಿಸುವುದು, ನಿರ್ಣಾಯಕ ನಿಧಿಗಳನ್ನು ಸಂಗ್ರಹಿಸುವುದು, ಅಗತ್ಯ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವುದು ಮತ್ತು ಬ್ರಿಟಿಷ್ ಆಳ್ವಿಕೆಯನ್ನು ವಿರೋಧಿಸುವ ಸರ್ಕಾರಗಳೊಂದಿಗೆ ಕಾರ್ಯತಂತ್ರದ ಮೈತ್ರಿಗಳನ್ನು ರೂಪಿಸುವ ಗುರಿಯನ್ನು ಹೊಂದಿರುವ ವಿವಿಧ ದೇಶಗಳಲ್ಲಿ ರಹಸ್ಯ ಜಾಲಗಳ ಸ್ಥಾಪನೆಯನ್ನು  ಈ ಪುಸ್ತಕ  ವಿವರಿಸುತ್ತದೆ.


ಸ್ವತಂತ್ರ ಎಂದರ ಸ್ವೇಚ್ಛೆ ಎಂದು ಅಪಾರ್ಥ ಮಾಡಿಕೊಡಿರುವ 

 ಇಂದಿನ ಪೀಳಿಗೆಯು ಇಂತಹ ಪುಸ್ತಕಗಳನ್ನು ಓದುವ ಅಗತ್ಯವಿದೆ. ತನ್ಮೂಲಕ ನಮ್ಮ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ತಮ್ಮ ತ್ಯಾಗ ಮತ್ತು ಬಲಿದಾನ ಮಾಡಿದ ಆತ್ಮಗಳಿಗೆ ಗೌರವ ಸೂಚಿಸಬೇಕಿದೆ.


ಸಿಹಿಜೀವಿ ವೆಂಕಟೇಶ್ವರ

ಸಾಹಿತಿಗಳು ಹಾಗೂ

ಸಮಾಜ ವಿಜ್ಞಾನ ಶಿಕ್ಷಕರು

ತುಮಕೂರು

02 ಏಪ್ರಿಲ್ 2025

ಆಂತರಿಕ ಶಾಂತಿ ಹೊಂದುವುದು ಹೇಗೆ?


 


ಆಂತರಿಕ ಶಾಂತಿ ಹೊಂದುವುದು ಹೇಗೆ?


ಹೊರಗೆ ಅಶಾಂತಿಯ ವಾತಾವರಣವಿದ್ದರೂ ಸಾಧಕರು ತಮ್ಮ ಆಂತರಿಕ ಶಾಂತಿಯನ್ನು ಕಾಯ್ದುಕೊಂಡು ಸಂತಸದಿಂದ ಇರುವುದನ್ನು ಗಮನಿಸಿದ್ದೇವೆ.

ನಾವೂ  ಆಂತರಿಕ ಶಾಂತಿಯನ್ನು ಕಾಪಾಡಿಕೊಳ್ಳಲು  ಸಾಧ್ಯವಿದೆ. ಅದಕ್ಕೆ ನಮ್ಮ ಜೀವನದಲ್ಲಿ  ಅಲ್ಪ ಸ್ವಲ್ಪ  ಬದಲಾವಣೆ ಮಾಡಿಕೊಂಡರೆ ಸಾಕು.

 ನಮ್ಮ ಜೀವನದಲ್ಲಿ ಕೆಲ ವಿಷಕಾರಿ ಜನರಿರುತ್ತಾರೆ ಅವರು ಸರ್ವರಿಗೂ ವಿಷ ಕಕ್ಕುವುದೇ ತಮ್ಮ ಕಾಯಕವನ್ನಾಗಿ ಮಾಡಿಕೊಂಡಿರುತ್ತಾರೆ ಅಂತವರಿಂದ ಆದಷ್ಟೂ ದೂರವಿರೋಣ.


ಕೆಲವೊಮ್ಮೆ ನಮ್ಮಲ್ಲಿ ನಕಾರಾತ್ಮಕ ಆಲೋಚನೆಗಳು ಮೂಡುವುದು ಸಹಜ ಇದರ ಜೊತೆಯಲ್ಲಿ ನಕಾರಾತ್ಮಕ ಆಲೋಚನೆ ಮಾಡುವರು ನಮ್ಮ ಸುತ್ತುವರೆದರೆ ಮುಗಿಯಿತು. ಇವರು ನಮ್ಮನ್ನು   ಎಂದಿಗೂ ಬೆಳೆಯಲು ಸಹಾಯ ಮಾಡುವುದಿಲ್ಲ. ಇಂಥವರಿಂದ ದೂರವಿರೋಣ.

ಜೀವನದಲ್ಲಿ ಕೆಲವೊಮ್ಮೆ ಸಂಘರ್ಷ ಮಾತಿನ ಚಕಮಕಿ ನಡೆಯುತ್ತದೆ. ನಮ್ಮ ಶಾಂತಿಗಾಗಿ  ಎಲ್ಲರೊಂದಿಗೆ  ಯುದ್ಧಕ್ಕೆ ಇಳಿಯುವುದನ್ನು ಕಡಿಮೆ ಮಾಡಿಕೊಂಡು ಬುದ್ಧಿವಂತಿಕೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳೋಣ.   ಪ್ರತಿಯೊಂದಕ್ಕೂ ಅನಗತ್ಯವಾಗಿ ನಮ್ಮ ಶಕ್ತಿ ವ್ಯಯಮಾಡುತ್ತಾ  ಪ್ರತಿಕ್ರಿಯೆಯನ್ನು ನೀಡುವ  ಅಗತ್ಯವಿಲ್ಲ.

ನಾವೇನು ರೋಬೋ ಅಥವಾ ಯಂತ್ರಗಳಲ್ಲ ನಮಗೂ ದಣಿವು ಸಹಜ ಅಂತಹ ಸಂದರ್ಭದಲ್ಲಿ ವಿಶ್ರಾಂತಿ ಪಡೆಯೋಣ. ಬಹಳ ದಣಿದಂತೆ ಅನಿಸಲು ಪ್ರಾರಂಭಿಸಿದಾಗ ರಜೆಯ ತೆಗದುಕೊಂಡು ರಿಪ್ರೆಶ್ ಆಗೋಣ. 

  ನಮಗಾಗಿ ಸಮಯವನ್ನು ಮಾಡಿಕೊಳ್ಳೋಣ. ಜನಜಂಗುಳಿಯಿಂದ ಮನಸ್ಸಿಗೆ ಕಿರಿಕಿರಿಯಾಗಿ ಅಶಾಂತಿಯೆನಿಸಿದರೆ ಒಂಟಿಯಾಗಿರುವುದು ಕೆಲವೊಮ್ಮೆ ಚಿಕಿತ್ಸೆಯೆಂದು ಭಾವಿಸಿ  ಒಂಟಿಯಾಗಿರಲು ಪ್ರಯತ್ನಿಸೋಣ  


ಅತಿಯಾದ ಸಾಮಾಜಿಕ ಮಾಧ್ಯಮಗಳ ಬಳಕೆ  ನಮ್ಮ ಶಾಂತಿಯುತ ಮನಸ್ಸನ್ನು ಕದಡಬಹುದು ಆದ್ದರಿಂದ ಅಗತ್ಯವಿರುವಾಗ ಮಾತ್ರ ಕಡಿಮೆ ಸಮಯ ಸಾಮಾಜಿಕ ಮಾಧ್ಯಮಗಳನ್ನು ಬಳಸಲು ಕಡಿವಾಣ ಹಾಕಿಕೊಳ್ಳೋಣ.ಮತ್ತು ಹೊಸ ಹವ್ಯಾಸಗಳು ಒತ್ತಡ ಕಡಿಮೆ ಮಾಡಿ ನಾವು ಸಂತಸದಿಂದ ಇರಲು ಪೂರಕವಾಗಿವೆ ಇಂತಹ ಉತ್ಪಾದಕ ಹವ್ಯಾಸಗಳನ್ನು ಹೆಚ್ಚು ರೂಪಿಸಿಕೊಳ್ಳೋಣ.

ಕೆಲವೊಮ್ಮೆ ಸಮಯ ಸಂದರ್ಭಕ್ಕೆ ಅನುಗುಣವಾಗಿ

ಬದಲಾವಣೆಗೆ ಹೊಂದಿಕೊಳ್ಳುವ ಗುಣವೂ ನಮ್ಮದಾಗಬೇಕು. 


ಹೀಗೆ ನಮ್ಮ ಸಂತಸ ಆಂತರಿಕ ಶಾಂತಿಗೆ ಬಹುತೇಕ ನಾವೇ ಕಾರಣರಾಗಿರುವುದರಿಂದ ಸಂತಸದಿಂದ ಬಾಳೋಣ ಆಂತರಿಕ ಶಾಂತಿ ಅನುಭವಿಸೋಣ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು