27 ಫೆಬ್ರವರಿ 2025

ಜಲಿಯನ್ ವಾಲಾಬಾಗ್ ಮಾರಣಹೋಮ.


 ಜಲಿಯನ್ ವಾಲಾಬಾಗ್ ಮಾರಣಹೋಮ.


ಕೆಲ ವರ್ಷಗಳ ಹಿಂದೆ ಪಂಜಾಬ್ ನ ಅಮೃತಸರಕ್ಕೆ ಪ್ರವಾಸ ಹೋದಾಗ ಜಲಿಯನ್ ವಾಲಾಬಾಗ್ ಎಂಬ ಮಾರಣಹೋಮದ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದೆವು.ಪುಸ್ತಕಗಳಲ್ಲಿ ಬ್ರಿಟಿಷರು ಕ್ರೌರ್ಯವನ್ನು ಅಮಾನುಷ ಕ್ರಮವನ್ನು ಓದಿದ್ದೆ.ಮಕ್ಕಳಿಗೆ ಹೇಳಿದ್ದೆ.ಅಂದು  ಕಣ್ಣಾರೆ ಆ ಕಟುಕರು ಮಾಡಿದ ಅನರ್ಥ, ಅಮಾನವೀಯತೆ ಮತ್ತು ಮಾರಣ ಹೋಮಕ್ಕೆ ಸಾಕ್ಷಿಯಾದ ಗುಂಡಿನ ಗುರುತುಗಳನ್ನು ಹೊಂದಿರುವ  ಗೋಡೆಗಳು,  ನೂರಾರು ಅಮಾಯಕ ಮಕ್ಕಳು ಮಹಿಳೆಯರು  ಪ್ರಾಣ ಭೀತಿಯಿಂದ ಹಾರಿ ಪ್ರಾಣ ಕಳೆದುಕೊಂಡ ಬಾವಿಯನ್ನು ನೋಡಿ ಮನಸ್ಸು ಭಾರವಾಯಿತು.

ಅದು 1919ರ  ಏಪ್ರಿಲ್ 13ರ ದಿನ.  ಬ್ರಿಟಿಷರು ಜಾರಿಗೆ ತಂದ ರೌಲಟ್ ಆಕ್ಟನ್ನು ವಿರೊಧಿಸಿ ಪಂಜಾಬ್ ರಾಜ್ಯದ ಮುಖ್ಯವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಲ್ಲೊಂದಾದ ಅಮೃತಸರದಲ್ಲಿನ ಹೃದಯಭಾಗದಲ್ಲಿರುವ ಜಲಿಯ‍ನ್ವಾಲ ಬಾಗ್ ಉದ್ಯಾನದಲ್ಲಿ ಸಹಸ್ರಾರು ಮಂದಿ ಭಾರತೀಯರು ಮುಖ್ಯವಾಗಿ ಪಂಜಾಬಿ ನಾಗರೀಕರು ಸಮಾವೇಶಗೊಂಡಿದ್ದರು. 

ಆ ಪವಿತ್ರದಿನದಂದು ಬೈಸಾಖಿ ಹಬ್ಬವನ್ನು ಆಚರಿಸಲು ಅಮೃತಸರದಲ್ಲಿ ಸಮಾವೇಶಗೊಳ್ಳುವುದು ಸಂಪ್ರದಾಯವಾಗಿತ್ತು.

 ಬ್ರಿಟಿಷ್ ಆಡಳಿತ ವಿಧಿಸಿದ ನಿರ್ಬಂಧಿತ  ಶಾಸನದ ಪ್ರಕಾರ ಅಮೃತಸರದಲ್ಲಿ ಐದಕ್ಕಿಂತ ಹೆಚ್ಚಿನ ಜನ ಗುಂಪುಗೂಡುವಂತಿರಲಿಲ್ಲ  'ಮಾರ್ಷಲ್ ನಿಯಮ' ಎನ್ನುತ್ತಿದ್ದರು. ಅಂದು ನಡೆದ ಸಮಾವೇಶ ಈ ನಿಯಮದ ಉಲ್ಲಂಘನೆಯಾಗಿತ್ತು.

ಇದನ್ನು ಕಂಡು ಕೆರಳಿದ ಆಂಗ್ಲ ಅಧಿಕಾರಿಗಳು ಕ್ರೋಧಗೊಂಡರು.

ತೊಂಬತ್ತು   ಸೈನಿಕರಿದ್ದ ಬಂದೂಕುಗಳಿಂದ ಶಸ್ತ್ರಸಜ್ಜಿತವಾದ ತುಕಡಿಯೊಂದು ಉದ್ಯಾನವನಕ್ಕೆ ಎರಡು ಶಸ್ತ್ರಸಜ್ಜಿತ ಕಾರುಗಳೊಂದಿಗೆ ಬಂದಿತು. ಮೆಷಿನ್ಗನ್ ‍ಗಳನ್ನು ಅಳವಡಿಸಲಾಗಿದ್ದ ಆ ವಾಹನಗಳು ಉದ್ಯಾನದ ಕಡಿದಾದ ಬಾಗಿಲಿನಿಂದ ಬರಲು ಅಸಾಧ್ಯವಾಗಿತ್ತು. ಆ ತುಕಡಿಯ ನಿಯಂತ್ರಕನಾದ ಬ್ರಿಗೇಡಿಯರ್ ಜನರಲ್ ರೆಗಿನಾಲ್ಡ್ ಡೈಯರ್   ಉದ್ಯಾನದೊಳಗೆ ಕಾಲಿಡುತ್ತಲೇ ಅಲ್ಲಿ ನೆರೆದಿದ್ದವರಿಗೆ ಯಾವೊಂದು ಎಚ್ಚರಿಕೆಯನ್ನೂ ಕೊಡದೆ ಗುಂಪು ಚದುರುವಂತೆ ಯಾವೊಂದು ಆದೇಶವನ್ನೀಯದೇ ಹಠಾತ್ತಾಗಿ ಗುಂಡಿನ ಮಳೆಗರೆವಂತೆ ತಮ್ಮ ತುಕಡಿಗೆ ಆದೇಶವನ್ನಿತ್ತುಬಿಟ್ಟ. ಅದರಲ್ಲಿಯೂ ವಿಶೇಷವಾಗಿ, ಜನಸಾಂದ್ರತೆ ಎಲ್ಲಿ ಹೆಚ್ಚಾಗಿರುವುದೋ ಅತ್ತಕಡೆ ಗುಂಡಿನ ದಾಳಿ ಕೇಂದ್ರೀಕೃತವಾಗುವಂತೆ ಆದೇಶಿಸಿದ.

ಗುಂಡಿನ ದಾಳಿಯು ಸಂಜೆ  ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ಕಾಲ ಸತತವಾಗಿ ನಡೆಯಿತು. ಸುತ್ತಲೂ ಇಟ್ಟಿಗೆ ಗೋಡೆಗಳಿಂದ ಕಟ್ಟಡಗಳಿಂದ ಆವೃತವಾಗಿದ್ದ ಉದ್ಯಾನವನಕ್ಕೆ ಇದ್ದದ್ದು ಐದು ಕಡಿದಾದ ದ್ವಾರಗಳು ಮಾತ್ರ. ಅದರಲ್ಲಿ ಬಹುತೇಕ ಶಾಶ್ವತವಾಗಿ ಮುಚ್ಚಲ್ಪಟ್ಟಿದ್ದವು. ತುಕಡಿಯಿದ್ದ ದ್ವಾರದ ಹೊರತಾಗಿ ಇನ್ನೊಂದೇ ದ್ವಾರವು ಮಾರ್ಗವಾಗಿ ಉಳಿದಿದ್ದರಿಂದ, ಕಂಗಾಲಾದ ಜನರು ಗೋಡೆಯನ್ನು ಹತ್ತಿ ಹಾರಲು ಪ್ರಯತ್ನಿಸಿದರು.

ಬಹಳಷ್ಟು ಜನರು ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಉದ್ಯಾನದಲ್ಲಿದ್ದ ಬಾವಿಯೊಳಗೆ ಹಾರಿದರು. ಈ ಹತ್ಯಾಕಾಂಡ ಸ್ಮಾರಕದಲ್ಲಿನ ಅಂಶವೊಂದರ ಪ್ರಕಾರ, ಬಾವಿಯೊಂದರಿಂದಲೇ ಸುಮಾರು 120 ಶವಗಳನ್ನು ಹೊರತೆಗೆಯಲಾಗಿತ್ತು. ಹತ್ಯಾಕಾಂಡದಿಂದ ನೂರಾರು ಜನರು ಸಾವನಪ್ಪಿದರಲ್ಲದೆ ಸಾವಿರಾರು ಮಂದಿ ಗಾಯಗೊಂಡರು. ಸರ್ಕಾರಿ ಮೂಲಗಳ ಪ್ರಕಾರ 379 ಮಂದಿ ಸಾವನಪ್ಪಿದ್ದಾರೆ. ಆದರೆ ಸಾವಗೀಡಾದವರ ನಿಜವಾದ ಸಂಖ್ಯೆ ಇನ್ನು ಹೆಚ್ಚಿತ್ತು ಎನ್ನಲಾಗುತ್ತದೆ.

ಕರ್ಫ್ಯು ವಿಧಿಸಿದ ಕಾರಣ ಗಾಯಗೊಂಡ ಹಲವರನ್ನು ಹತ್ಯಾಕಾಂಡದ ಸ್ಥಳದಿಂದ ಇತರೆಡೆಗೆ ಸ್ಥಳಾಂತರಿಸಲಾಗಲಿಲ್ಲ. ನಿಜವಾದ ಸಾವಿನ ಸಂಖ್ಯೆಗಳ ಬಗ್ಗೆ ಇಂದಿಗೂ ಚರ್ಚೆ ನಡೆಯುತ್ತಲೇ ಇದೆ. ಈ ಘಟನೆ ನಡೆದ ಬಳಿಕ, ಬ್ರಿಟಿಷ್ ಸೇನೆಗೆ ವಿದ್ರೋಹಿ ಸೈನ್ಯವು ಎದುರಾದುದರಿಂದ ಅವರಿಗೆ ತಕ್ಕ ಪಾಠ ಕಲಿಸಿದ್ದಾಗಿ  ಜನರಲ್ ಡೈಯರನು ತನ್ನ ಮೇಲಧಿಕಾರಿಗಳಿಗೆ ಸುಳ್ಳು  ವರದಿಯೊಪ್ಪಿಸಿದನು.

ಇದಕ್ಕೆ ಉತ್ತರಿಸಿದ ಪಂಜಾಬ್‌ನ ಅಂದಿನ ಲೆಫ್ಟಿನೆಂಟ್-ಗವರ್ನರ್  ಮೈಕಲ್ ಓಡ್ವಾಯರ್ ಅವರಿಗೆ ತಕ್ಕ ಪಾಠ ಕಲಿಸಿದಿರಿ ಲೆಫ್ಟಿನೆಂಟ್-ಗವರ್ನರ ಇದನ್ನು ಅನುಮೋದಿಸುತ್ತಾರೆ ಎಂದು ತಂತಿಯ ಮೂಲಕ ಜನರಲ್ ಡೈಯರ್‌ಗೆ ಸಂದೇಶ ಕಳುಹಿಸಿ ಮಾಡಿದ ಕಗ್ಗೊಲೆಗೆ ಬೆಂಬಲ ನೀಡಿಬಿಟ್ಟ. ಮೈಕಲ್ ಓಡ್ವಾಯರ್ನ ಇಚ್ಚೆಯಂತೆ ಈ ಘಟನೆಯ ನಂತರ ಅಂದಿನ ವೈಸರಾಯ್  ಫ್ರೆಡ್ರಿಕ್ ತೆಸಿಂಗರ್ ಅಮೃತಸರ ಹಾಗು ಅದರ ಸುತ್ತಮುತ್ತ ಮಿಲಿಟರಿ ಆಡಳಿತವನ್ನು ಹೇರುವಂತೆ ಆದೇಶಿಸಿದ.

ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಕುರಿತು ತನಿಖೆ ನಡೆಸಲು ಹಂಟರ್ ಆಯೋಗ ಅನ್ನು ಸ್ಥಾಪಿಸುವಂತೆ ಅಂದಿನ ಭಾರತದ ರಾಜ್ಯಾಂಗ ಕಾರ್ಯದರ್ಶಿಯಾಗಿದ್ದ ಎಡ್ವಿನ್ ಮೊಂಟಾಗೊ ನಿರ್ಧರಿಸಿದನು. ಈ ಆಯೋಗದೆದುರು ಮೈಕಲ್ ಓಡ್ವಾಯರ್ನನ್ನು ಕರೆತರಲಾಯಿತು. ವಿಚಾರಣೆಯ ವೇಳೆ ಜಲಿಯನ್‌ವಾಲ ಬಾಗ್ ನಲ್ಲಿ ಉದ್ದೆಶಿಸಲಾಗಿದ್ದ ಕಾರ್ಯಕ್ರಮದ ಬಗ್ಗೆ ತನಗೆ ಅಂದಿನ ದಿನ ಮಧ್ಯಾಹ್ನ ದ ವೇಳೆಗೆ ತಿಳಿಯಿತಾದರೂ ಇದನ್ನು ತಡೆಗಟ್ಟಲು ಯಾವುದೇ ಕ್ರಮ ಕೈಗೊಂಡಿರಲ್ಲಿಲ್ಲವೆಂದು ಡ್ವಾಯರ್ ಒಪ್ಪಿಕೊಂಡು  ತಾನು ಜಲಿಯನ್‌ವಾಲ ಬಾಗ್ ‌ಗೆ ಗುಂಡು ಹಾರಿಸುವ ಉದ್ದೇಶದಿಂದಲೆ ತೆರಳಿದ್ದಾಗಿ ತಿಳಿಸಿದನು. "ಜಲಿಯನ್‌ವಾಲಾ ಬಾಗನಲ್ಲಿ ಸೇರಿದ ಜನರನ್ನು ಚದುರಿಸಲು ಗುಂಡಿನ ಅವಶ್ಯಕತೆ ಇರಲ್ಲಿಲವಾದರೂ ತಾನು ಆ ಕ್ರಮ ಕೈಗೊಂಡಿರದಿದ್ದರೆ ಜನರು ಮತ್ತೆ ಗುಂಪು ಸೇರಿ ತನ್ನನ್ನು ನೋಡಿ ಗೇಲಿ ಮಾಡಿ ತಾನು ಒಬ್ಬ ಮೂರ್ಖನಂತೆ ತೋರುತಿದ್ದೆ" ಎಂದು ಹಂಟರ್ ಆಯೋಗದ ಮುಂದೆ ಡಯರ್  ತನ್ನ ನಿಲುವನ್ನು ಸ್ಪಷ್ಟಪಡಿಸಿದ.


1920ರಲ್ಲಿ ಹಂಟರ್ ವರದಿಯ ಬಿಡುಗಡೆಯ ನಂತರ ಉಂಟಾದ ಜನರ ಆಕ್ರೋಶದ ಮಧ್ಯೆ ಡೈಯರ್‍ನನ್ನು ನಿಷ್ಕ್ರಿಯ ಅಧಿಕಾರಿಗಳ ಪಟ್ಟಿಗೆ ಸೇರಿಸಲಾಯಿತು. ಅವನ ಪದವಿಯನ್ನು ಕಮಾಂಡರ್ ಇನ್ ಚೀಫ್ ಇಂದ ಕರ್ನಲ್ ಪದವಿಗೆ ಇಳಿಸಲಾಯಿತು. ಅಂದಿನ ಕಮಾಂಡರ್-ಇನ್-ಚೀಫ್ ಅವರು ಡಯರ್‍ಗೆ ಭಾರತದಲ್ಲಿ ಇನ್ನು ಮುಂದೆ ಯಾವ ಕೆಲಸವನ್ನೂ ಕೊಡುವುದಲ್ಲ  ಎಂದು ಹೇಳಿಕೆ ನೀಡಿದರು.

ಡೈಯರ್ ನ ಆರೋಗ್ಯವೂ ಚೆನ್ನಾಗಿರಲಿಲ್ಲ. ಅವನನ್ನು ಒಂದು ವೈದ್ಯಕೀಯ ಹಡಗಿನಲ್ಲಿ ಇಂಗ್ಲೆಂಡಿಗೆ ಅವನ ಮನೆಗೆ ಕಳಿಸಲಾಯಿತು. ಕೆಲವು ಹಿರಿಯ ಬ್ರಿಟಿಷ್ ಅಧಿಕಾರಿಗಳು ಮತ್ತು ಭಾರತದ ಅನೇಕ ಸಾರ್ವಜನಿಕರು 'ಇನ್ನೊಂದು ಭಾರತೀಯ ದಂಗೆ'ಯನ್ನು ಅಡಗಿಸಿದ್ದಕ್ಕಾಗಿ ಅವನನ್ನು ಪ್ರಶಂಶಿಸಿದರು. ಲಾರ್ಡ್ಸ್ ಸಭೆ ಯು ಅವನನ್ನು ಹೊಗಳಿ ನಿರ್ಣಯವನ್ನು ಅಂಗೀಕರಿಸಿತು. ಆದರೆ ಹೌಸ್ ಆಫ್ ಕಾಮನ್ಸ್, ಅವನನ್ನು ಖಂಡಿಸಿತು.

 ವಿನ್‍ಸ್ಟನ್ ಚರ್ಚಿಲ್   "ಜಲಿಯನ್‍ವಾಲಾ ಬಾಗ್ ನಲ್ಲಿ ನಡೆದಿರುವ ಈ ಘಟನೆಯು ಒಂದು ಅಸಾಮಾನ್ಯ ಘಟನೆಯಾಗಿದ್ದು, ವಿಸ್ಮಯಗೊಳಿಸುವಂತಹ ಅಮಾನುಷ ದುಷ್ಕೃತ್ಯವಾಗಿದೆ.ಎಂದರು.  ಡೈಯರ್‍ನ ಕ್ರಮವು ಜಗತ್ತಿನಾದ್ಯಂತ ನಿಂದಿಸಲ್ಪಟ್ಟಿತು. ಆಗ ಎಚ್ಚೆತ್ತ  ಬ್ರಿಟೀಷ್ ಸರಕಾರವು ಅವನನ್ನು ಅಧಿಕೃತವಾಗಿ ಅಮಾನತುಗೊಳಿಸಿತು. ಅವನು ತನ್ನ ಹುದ್ದೆಗೆ 1920ರಲ್ಲಿ ರಾಜೀನಾಮೆ ಕೊಟ್ಟನು.

ಮಾರ್ನಿಂಗ್ ಪೋಸ್ಟ್ ಪತ್ರಿಕೆಯು ಡೈಯರ್‍ನಿಗಾಗಿ ಒಂದು ಸಹಾನುಭೂತಿ ನಿಧಿಯನ್ನು ಸ್ಥಾಪಿಸಿ 26,000 ಕ್ಕೂ ಹೆಚ್ಚು ಪೌಂಡ್‍ಗಳನ್ನು ಸಂಗ್ರಹಿಸಿತು. ಶುಭಕೋರಿರುವರ ಹೆಸರುಗಳನ್ನೊಳಗೊಂಡ ಸ್ಮರಣ ಸಂಚಿಕೆಯನ್ನು ಡೈಯರ್‍ಗೆ ಅರ್ಪಿಸಲಾಯಿತು. ಭಾರತದಲ್ಲಿ ಈ ಹತ್ಯಾಕಾಂಡವು ಅತೀವ ದುಃಖ, ರೋಷವನ್ನು ಉಂಟುಮಾಡಿತು.

ಈ ಹತ್ಯಾಕಾಂಡವು ಭಾರತದ ಸ್ವಾತಂತ್ರ್ಯ ಚಳುವಳಿಗೆ ವೇಗೋತ್ಕರ್ಷಕವಾಗಿ ಪರಿಣಮಿಸಿ ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಬ್ರಿಟೀಷರ ವಿರುದ್ಧದ 1920ರಲ್ಲಿ ನಡೆದ ಅಸಹಕಾರ ಸತ್ಯಾಗ್ರಹದಲ್ಲಿ ಹೆಚ್ಚಿನ ಉತ್ಸಾಹದಿಂದ ಜನರು ಪಾಲ್ಗೊಳ್ಳುವಂತಾಯಿತು. ನೊಬೆಲ್ ಪ್ರಶಸ್ತಿ ವಿಜೇತರಾದ ರವೀಂದ್ರನಾಥ ಠಾಗೋರ್ ಅವರು ಪ್ರತಿಭಟನೆಯೆಂದು ತಮ್ಮ ನೈಟ್ ಪದವಿಯನ್ನು ಚಕ್ರವರ್ತಿಗೆ ಹಿಂತಿರುಗಿಸಿದರು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮಂಡಿಸಿದ ನಿರ್ಣಯದ ಮೇರೆಗೆ ಈ ಸ್ಥಳದಲ್ಲಿ ಒಂದು ಸ್ಮಾರಕವನ್ನು ನಿರ್ಮಿಸುವ ಸಲುವಾಗಿ 1920ರಲ್ಲಿ ಟ್ರಸ್ಟ್ ಒಂದನ್ನು ರಚಿಸಲಾಯಿತು. 1923ರಲ್ಲಿ ಇದಕ್ಕೆ ಬೇಕಾದ ಜಾಗವನ್ನು ಖರೀದಿಸಲಾಯಿತು. ಆ ಸ್ಥಳದಲ್ಲಿ ಸ್ಮಾರಕವನ್ನು ನಿರ್ಮಿಸಲಾಯಿತು. ಇದನ್ನು 1961ಏಪ್ರಿಲ್ 13ರಂದು ಅಂದಿನ ಪ್ರಧಾನಿ ಜವಹರಲಾಲ್ ನೆಹರು ಮತ್ತಿತರ ಮುಖಂಡರ ಸಮ್ಮುಖದಲ್ಲಿ ಭಾರತದ ಅಂದಿನ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅವರು ಉದ್ಘಾಟಿಸಿದರು.

ನಂತರ ಜ್ಯೋತಿಯೊಂದನ್ನು ಇಡಲಾಯಿತು. ಗುಂಡಿನಿಂದಾದ ರಂಧ್ರಗಳನ್ನು ಇಂದಿಗೂ ಅಲ್ಲಿನ ಗೋಡೆಗಳ ಮೇಲೆ, ಅಕ್ಕಪಕ್ಕದ ಕಟ್ಟಡಗಳ ಮೇಲೆ ನೋಡಬಹುದಾಗಿದೆ. ಬಹಳಷ್ಟು ಜನರು ಧುಮುಕಿದ ಅಲ್ಲಿನ ಬಾವಿಯನ್ನು ಕೂಡ ಸಂರಕ್ಷಿಸಿ, ಸ್ಮಾರಕವನ್ನಾಗಿ ಮಾಡಲಾಗಿದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು


25 ಫೆಬ್ರವರಿ 2025

ಮಾತು ೨


 ಹೆದರಿಸುವವರ ಮುಂದೆ

ನಮ್ಮ ಮಾತಾಗಲಿ ಕತ್ತಿ|

ಹಿರಿಯರ ಮುಂದೆ 

ನಮ್ಮ ನುಡಿಯಾಗಲಿ ಹತ್ತಿ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು


     

ಮಾತು..


 


ಮಾತು...


 ವೈರಿಗಳ ಮುಂದೆ 

ನಮ್ಮ ಮಾತಿಗಿರಲಿ ಗತ್ತು|

ಆತ್ಮೀಯರ ಮಂದೆ 

ನಮ್ಮ ಸೊಲ್ಲಾಗಲಿ ಮುತ್ತು

23 ಫೆಬ್ರವರಿ 2025

ಕಸ್ತೂರಿ ಕಂಕಣ .ಪುಸ್ತಕ ಪರಿಚಯ.



 


ಕಸ್ತೂರಿ ಕಂಕಣ..


ಶಾ ಮಂ ಕೃಷ್ಣ ರಾಯರವರ ಸಂಪಾದಕತ್ವದ ತ ರಾ ಸು ಸಾಹಿತ್ಯ ಸಂಪದ ಸಂಪುಟ ಒಂದರ ಐತಿಹಾಸಿಕ ಕಾದಂಬರಿಗಳ ಸೆಟ್ ನಲ್ಲಿ ಮೂರು ಕಾದಂಬರಿಗಳು ಇವೆ. ಅದರಲ್ಲಿ  "ಕಸ್ತೂರಿ ಕಂಕಣ" ಕಾದಂಬರಿಯನ್ನು ಈ ವಾರ ಬಿಡುವಿನ ವೇಳೆಯಲ್ಲಿ ಓದಿದೆ.


ಚಿತ್ರದುರ್ಗದ ಮೇಲೆ ಸೇಡು ತೀರಿಸಿಕೊಳ್ಳಲು   ಸೀರ್ಯದವರು ಮತ್ತು ತರೀಕೆರೆಯವರು ಜೊತೆ ಸೇರಿ ಕುಟಿಲ ತಂತ್ರ ರೂಪಿಸಿ ಸೀರ್ಯದ ರಂಗಪ್ಪ ನಾಯಕನ ಮಗ ಕೃಷ್ಣಪ್ಪನಾಯಕನ ಜೊತೆ ಕಸ್ತೂರಿ ರಂಗಪ್ಪನ ಮಗಳ ಜೊತೆಯಲ್ಲಿ ಜಾತಕ ಕೂಡಿ ಬರದಿದ್ದರೂ  ಮದುವೆ ಮಾಡಿಸುತ್ತಾರೆ. ಇದರಲ್ಲಿ ತರೀಕೆರೆಯ ವಕೀಲ ವೆಂಕಪ್ಪಯ್ಯ ಸಹಜಾನಂದ ಸ್ವಾಮಿಯ ವೇಷ ಧರಿಸಿ ದುರ್ಗದ ನಕ್ಷೆ ಸಮೇತವಾಗಿ ರಹಸ್ಯ ಮಾಹಿತಿಗಳನ್ನು ಸೀರ್ಯ ಮತ್ತು ತರೀಕೆರೆಗೆ ರವಾನಿಸಿ ದುರ್ಗದ ಮೇಲೆ ಆಕ್ರಮಣ ಮಾಡಲು ಸಂಚು ರೂಪಿಸುತ್ತಾನೆ.

ಈ ಮದುವೆಯ ಮಾತುಕತೆ ಶುರುವಾದಾಗಿನಿಂದ  ದುರ್ಗದ  ಹಿತೈಷಿಯಾದ ಹಿರಿಯೂರಿನ ಕೆಂಚಣ್ಣ ನಾಯಕನಿಗೆ ಸೀರ್ಯದವರ ಮೇಲೆ ಅನುಮಾನವಿರುತ್ತದೆ ಈ ಕಾರಣದಿಂದ ಅವರ ಬೇಹುಗಾರರನ್ನು ಸೀರ್ಯದಲ್ಲಿ ಬಿಟ್ಟಿರುತ್ತಾನೆ.

ಇತ್ತ ಸೀರ್ಯದವರು ದುರ್ಗದ ಸೇನೆಯ ಗಮನ ಸೆಳೆಯಲು ಯಾವುದೇ ಸುಳಿವು ಕೊಡದೆ ಹಿರಿಯೂರಿನ ಮೇಲೆ ದಾಳಿ ಮಾಡುತ್ತಾರೆ.ಈ ಸಂದರ್ಭದಲ್ಲಿ ದುರ್ಗದವರು ತಮ್ಮ ಸೈನ್ಯವನ್ನು ತೆಗೆದುಕೊಂಡು ಇತ್ತ ಬಂದಾಗ ಇನ್ನೊಂದು ಕಡೆಯಿಂದ ತರೀಕೆರೆಯವರಿಂದ ದುರ್ಗದ ಮೇಲೆ ದಾಳಿ ನಡೆಸುವ ಯೋಜನೆ ಸಿದ್ದವಾಗಿರುತ್ತದೆ.ಇದರ ಜೊತೆಗೆ ದುರ್ಗದಲ್ಲಿರುವ ತಮ್ಮ ಕಡೆಯವರಿಂದ ಆದಷ್ಟು ದುರ್ಗವನ್ನು ನಾಶ ಮಾಡಲು ಹುನ್ನಾರ ಮಾಡಿರುತ್ತಾರೆ.ಇದರಲ್ಲಿ  ನೀರಿನ ಮೂಲಗಳಿಗೆ ವಿಷ ಬೆರೆಸುವುದು, ಪ್ರಸಾದ ರೂಪದಲ್ಲಿ ವಿಷಪ್ರಾಶನ ಮತ್ತು ಕಗ್ಗೊಲೆ ಮಾಡುವ ಮೂಲಕ ದುರ್ಗದಲ್ಲಿ ಸ್ಮಶಾನದ ವಾತಾವರಣ ನಿರ್ಮಿಸುವುದು ವಿರೋಧಿಗಳ ಸಂಚಾಗಿರುತ್ತದೆ.ಕೆಂಚಪ್ಪನಾಯಕ, ದುರ್ಗದ ಯುವರಾಜ ಸರ್ಜಾನಾಯಕ ,ಸುಬ್ಬರಾಯ ಶಾಸ್ತ್ರಿ ಮುಂತಾದ ನಿಷ್ಠಾವಂತ ಪ್ರಜೆಗಳ ಸಾಂಘಿಕ ಪ್ರಯತ್ನದಿಂದ ದುರ್ಗಕ್ಕೆ ಒದಗಿದ ಗಂಡಾಂತರ ನೀಗುತ್ತದೆ. ತಮ್ಮನ್ನು ನಂಬಿದ ಸಾಮಂತರನ್ನು ಕಸ್ತೂರಿ ರಂಗಪ್ಪ ನಾಯಕ ಅಭಯ ನೀಡಿ ಕಾಯುತ್ತಾನೆ. ಅದು ಹೇಗೆ ಎಂಬುದನ್ನು ನೀವು ಕಾದಂಬರಿ ಓದಿಯೇ ಅನುಭವಿಸಬೇಕು.

ಈ ಕಾದಂಬರಿಯ ಸಂಭಾಷಣೆಗಳು ನನಗೆ ಬಹಳ ಹಿಡಿಸಿದವು.ಅದರಲ್ಲೂ ಪ್ರತಿ ಪೇಜ್ ಗೆ ಒಂದಾದರೂ ಸಮಯೋಚಿತವಾದ ಗಾದೆಗಳನ್ನು ಬಳಕೆ ಮಾಡಿರುವುದು ನನ್ನ ಗಮನ ಸೆಳೆದ ಮತ್ತೊಂದು ಅಂಶ.ಪ್ರಸ್ತುತ ಚಿತ್ರದುರ್ಗ ಜಿಲ್ಲೆಯಲ್ಲಿ ವಾಸವಾಗಿರುವವರು ಮತ್ತು ಚಿತ್ರದುರ್ಗದ ಕೋಟೆ ಮತ್ತು ಜಿಲ್ಲೆಯ ವಿವಿಧ ತಾಲ್ಲೂಕುಗಳ  ಬಗ್ಗೆ ಮಾಹಿತಿ ಇರುವವರಿಗೆ ಈ ಕಾದಂಬರಿ ಓದುವಾಗ ಆ ಸ್ಥಳಗಳಲ್ಲಿ ನಮ್ಮ ಕಣ್ಮುಂದೆಯೇ  ಘಟನೆಗಳು ನಡೆಯುತ್ತಿವೆಯೇನೋ ಎಂಬಂತೆ ಚಿತ್ರಿಸಿದ್ದಾರೆ ತ ರಾ ಸು ರವರು. 

ಇದೇ ಸಂಪುಟದಲ್ಲಿರುವ ಮತ್ತೆರಡು ಕಾದಂಬರಿಗಳಾದ ಕಂಬನಿಯ ಕುಯಿಲು ಮತ್ತು ರಾಜ್ಯ ದಾಹ ಓದಿ ಮತ್ತೆ ನಿಮ್ಮೊಂದಿಗೆ ಹಂಚಿಕೊಳ್ಳುವೆ.

ರಿಯಾಯಿತಿ ದರದಲ್ಲಿ ಪುಸ್ತಕ ನೀಡಿದ ಆತ್ಮೀಯರಾದ ಎಂ ವಿ ಶಂಕರಾನಂದ ರವರನ್ನು ಸಂದರ್ಭದಲ್ಲಿ ಸ್ಮರಿಸುತ್ತೇನೆ.



ಸಿಹಿಜೀವಿ ವೆಂಕಟೇಶ್ವರ

ತುಮಕೂರು


ಸಡಿಲಿನ ಸಿಂಹದ ಮರಿ ಛಾವ


 ಸಡಿಲಿನ ಸಿಂಹದ ಮರಿ  ಛಾವ 


"ಜೈ ಭವಾನಿ","ಹರ ಹರ ಮಹಾದೇವ" "ಜಗದಂಬಾ" ಈ ಘೋಷಣೆಗಳು ಚಿತ್ರ ಮಂದಿರದಿಂದ ಹೊರಬಂದಾಗಲೂ ನನ್ನ  ಕಿವಿಯಲ್ಲಿ ಮಾರ್ಧನಿಸುತ್ತಿದ್ದವು.

ಪ್ರೇಮಿಗಳ ದಿನ ದೇಶಪ್ರೇಮಿಗಳಿಗಾಗಿ ಮಾಡಿದ ಛಾವ ಚಲನಚಿತ್ರ ನೋಡಿದೆ.

ಬಹಳ ದಿನಗಳ ನಂತರ ಒಂದು ಉತ್ತಮ ಐತಿಹಾಸಿಕ ಚಿತ್ರ ನೋಡಿದ ಸಮಾಧಾನವಾಯ್ತು.ಇದು   ಹಿಂದಿ ಭಾಷೆಯ ಐತಿಹಾಸಿಕ ಆಕ್ಷನ್ ಚಿತ್ರವಾಗಿದ್ದು  ಮರಾಠಾ ಸಾಮ್ರಾಜ್ಯದ ಶಿವಾಜಿಯ ಮಗ   ಸಂಭಾಜಿಯ ಜೀವನವನ್ನು ಆಧರಿಸಿದೆ.  ವಿಕ್ಕಿ ಕೌಶಲ್ ಈ ಚಿತ್ರದಲ್ಲಿ ಛತ್ರಪತಿ ಸಂಭಾಜಿ ಪಾತ್ರದಲ್ಲಿ ನಟಿಸಿಲ್ಲ ಬದಲಿಗೆ ಜೀವಿಸಿದ್ದಾರೆ. ಶಿವಾಜಿ ಸಾವಂತ್ ಅವರ ಮರಾಠಿ ಕಾದಂಬರಿ ಆಧಾರಿತ ಈ ಚಿತ್ರವನ್ನು  ಲಕ್ಷ್ಮಣ್ ಉಟೇಕರ್ ಬಹಳ ಅಚ್ಚುಕಟ್ಟಾಗಿ  ನಿರ್ದೇಶನ ಮಾಡಿದ್ದಾರೆ.


ಶಿವಾಜಿಯ ಮರಣದ ನಂತರ  ಮೊಘಲ್ ಚಕ್ರವರ್ತಿ ಔರಂಗಜೇಬನ ಆಸ್ಥಾನದಲ್ಲಿ  ಸಂತೋಷದ ಪಾರ್ಟಿ ಮಾಡುವ ಚರ್ಚೆಯಿಂದ ಆರಂಭವಾಗುವ ಸಿನಿಮಾ ಕುತಂತ್ರದಿಂದ ಸಂಭಾಜಿಯ ಸೆರೆಹಿಡಿದು ಹಿಂಸೆ ನೀಡುವ ದೃಶ್ಯಗಳಿಂದ ಚಿತ್ರ ಮುಕ್ತಾಯವಾಗುತ್ತದೆ.ಚಿತ್ರದ ಮಧ್ಯ ಮಧ್ಯ ಮರಿ ಸಿಂಹದ ಘರ್ಜನೆ, ತಂತ್ರಗಳು ಮತ್ತು ಬುದ್ಧಿವಂತಿಕೆಯಿಂದ ಜನರು ಥಿಯೇಟರ್ ನಲ್ಲಿ ಶಿಳ್ಳೆ ಚಪ್ಪಾಳೆ ಹೊಡೆಯುತ್ತಾರೆ. ಕೊನೆಯ ಇಪ್ಪತ್ತು ನಿಮಿಷಗಳು ಪ್ರೇಕ್ಷಕರ ಕಣ್ಣಾಲಿಗಳು ತೇವವಾಗುತ್ತವೆ. ಶಿವಾಜಿ ಮರಣದ ನಂತರ ಪ್ರಮುಖ ಮೊಘಲ್ ಆಡಳಿತ ಮತ್ತು ವಾಣಿಜ್ಯ ಕೇಂದ್ರವಾದ ಬುರ್ಹಾನ್‌ಪುರದ ಮೇಲೆ  ಹಠಾತ್ ಸಂಭಾಜಿ ದಾಳಿ ಮಾಡಿ ಅಲ್ಲಿನ ಸಂಪತ್ತನ್ನು ವಶಪಡಿಸಿಕೊಳ್ಳುವಾಗ ಯುದ್ಧಭೂಮಿಯಲ್ಲಿ ಸಿಲುಕಿದ  ಶತೃಪಡೆಯ  ಪುಟ್ಟ ಮಗುವನ್ನು ಅದರ ತಾಯಿಯ ಮಡಿಲಿಗೆ ಸುರಕ್ಷಿತವಾಗಿ ತಲುಪಿಸಿ ಯುದ್ದವನ್ನು ಮುಂದುವರೆಸಿದ ಸಂಭಾಜಿಯ ಬಗ್ಗೆ ನನಗೆ ಬಹಳ ಹೆಮ್ಮೆ ಎನಿಸಿತು.

ಇದೇ  ಯುದ್ಧದಲ್ಲಿ ಸಂಭಾಜಿ ಸಿಂಹವಿರುವ ಬೋನಿಗೆ ಬಿದ್ದಾಗ  ತನ್ನ ಬರಿ ಕೈಗಳಿಂದಲೇ ಅದನ್ನು ಕೊಂದು ಅಸಲಿ ಛಾವ ಅಂದರೆ ಸಿಂಹದ ಮರಿಯಾಗಿ ಅಬ್ಬರಿಸಿತ್ತಾ ಬಂದು "ನಾನು ಘರ್ಜಿಸೋಲ್ಲ, ಬೇಟೆಯಾಡ್ತೇನೆ" ಎಂಬ ಡೈಲಾಗ್ ಗೆ ಪ್ರೇಕ್ಷಕರ ಶಿಳ್ಳೆ ಚಪ್ಪಾಳೆ ಹೊಡೆದುಬಿಟ್ಟರು.

 ಔರಂಗಜೇಬನ ಪಾತ್ರದಲ್ಲಿ ನಟಿಸಿರುವ ಅಕ್ಷಯ್ ಖನ್ನಾ ತಣ್ಣನೆಯ ಕ್ರೌರ್ಯ ಹೊರ ಹಾಕುತ್ತಾ ಸಂಭಾಜಿಯನ್ನು ಸೋಲಿಸದ ಹೊರತು ತನ್ನ ಕಿರೀಟಧಾರಣೆ ಮಾಡಲಾರೆ ಎಂದು ಶಪಥ ಮಾಡಿದ. ತನ್ನ ಲಕ್ಷಗಟ್ಟಲೆ ಸೈನ್ಯದ  ಮುಂದೆ ಸಾವಿರ ಲೆಕ್ಕಾಚಾರದ ಮರಾಠರ ಸೈನ್ಯ ಲೆಕ್ಕವಿಲ್ಲ ಎಂದು ಹಗುರವಾಗಿ ಯೋಚಿಸಿ ದಖ್ಖನ್ ಮೇಲೆ ದಾಳಿ ಮಾಡಲು ಆದೇಶ ಮಾಡುತ್ತಾನೆ. ಶಿವಾಜಿಯ ಕಾಲದಿಂದಲೂ ಗೆರಿಲ್ಲಾ ಯುದ್ಧ ತಂತ್ರದಲ್ಲಿ ಪಳಗಿದ ಮರಾಠರು ಛತ್ರಪತಿ ಸಂಭಾಜಿಯ ನೇತೃತ್ವದಲ್ಲಿ ಮೊಘಲರ ಸೇನೆಯನ್ನು ಸೋಲಿಸಿ ಹಿಮ್ಮೆಟ್ಟಿಸುತ್ತಾರೆ.

  ಸಂಭಾಜಿಯನ್ನು  ಪತ್ನಿ ಯೇಸುಬಾಯಿ ಆಗಿ  ರಶ್ಮಿಕಾ ಮಂದಣ್ಣ ಉತ್ತಮವಾಗಿ ಅಭಿನಯಿಸಿದ್ದಾರೆ. ಎಲ್ಲಾ ಕಡೆ ಇರುವಂತೆ  ಮರಾಠಾ ಆಸ್ಥಾನದಲ್ಲಿ ಗುಂಪುಗಾರಿಕೆ, ಒಳಸಂಚು ಬೆಳೆಯುತ್ತದೆ. ಸಂಭಾಜಿಯ ಮಲಸಹೋದರ ರಾಜಾರಾಮ್‌ನನ್ನು ಆಡಳಿತಗಾರನನ್ನಾಗಿ ಪ್ರತಿಷ್ಠಾಪಿಸಲು ಪಿತೂರಿಗಳು ನಡೆಯುತ್ತಲೇ ಇರುತ್ತವೆ.  ಮೊಘಲ್ ರಾಜಕುಮಾರ ಮಿರ್ಜಾ ಅಕ್ಬರ್ ಔರಂಗಜೇಬನ ವಿರುದ್ಧ ದಂಗೆ ಏಳಲು ಸಂಭಾಜಿಯ ಸಹಾಯವನ್ನು ಕೋರುವಾಗ   ಮಲತಾಯಿ ಸೋಯಾರಾಬಾಯಿ ಮತ್ತು ರಾಜಕುಮಾರನ ಜೊತೆಯಲ್ಲಿ   ಪಿತೂರಿಯ ಭಾಗವಾದವರನ್ನು   ಆನೆಯ ಕಾಲಿನಿಂದ ತುಳಿಸಿ ಸಾಯಿಸುವ  ದೃಶ್ಯಗಳನ್ನು ನೋಡಿದಾಗ ಮರಾಠರು ಮೋಸಗಾರರಿಗೆ ಕರುಣೆಗೆ ಅವಕಾಶವಿಲ್ಲದೇ  ತಕ್ಕ ಶಿಕ್ಷೆಗೆ ಗುರಿಪಡಿಸುತ್ತಿದ್ದರು ಎಂಬುದು ತಿಳಿದುಬರುತ್ತದೆ.  

ಔರಂಗಜೇಬನು ಮತ್ತೆ ದಖ್ಖನ್ ಕಡೆ ಯುದ್ಧಕ್ಕೆ ಬರುವ ಸುದ್ದಿ ತಿಳಿದು ನಿರ್ಣಾಯಕ ಯುದ್ದದಲ್ಲಿ ಸಂಗಮೇಶ್ವರದಲ್ಲಿ ಕೇವಲ ನೂರರ ಲೆಕ್ಕದಲ್ಲಿ ಇರುವ ಸೈನಿಕರಿಗೆ ಛತ್ರಪತಿಯು ಹುರಿದುಂಬಿಸುವ ಮಾತುಗಳು ಪ್ರೇಕ್ಷಕರ ಮೈ ನವಿರೇಳಿಸುತ್ತದೆ.ನಾವೂ ಅವರ ಜೊತೆಯಲ್ಲಿ ಹರ ಹರ ಮಹಾದೇವ್ ,ಜೈ ಭವಾನಿ ಎನ್ನಬೇಕು ಎಂಬ ಭಾವ ಮೂಡುತ್ತದೆ.

 ಸಂಭಾಜಿಯ ಮೇಲೆ ಸಾವಿರದ ಲೆಕ್ಕದಲ್ಲಿ ಮುತ್ತಿಗೆ ಹಾಕಿದ ಮೊಘಲರ ಸೈನ್ಯಕ್ಕೆ ಮರಾಠರಲ್ಲಿ ಕೆಲ ದ್ರೋಹಿ ಬಂಧುಗಳು ರಹಸ್ಯ ಮಾಹಿತಿ ನೀಡಿದ್ದು ಕಂಡು ಸಂಭಾಜಿ ಮರುಗುತ್ತಾನೆ.

ಯುದ್ದದಲ್ಲಿ ಗಾಯಗೊಂಡ ಸಂಭಾಜಿಯನ್ನು ಸರಪಳಿ ಹಾಕಿ ಬಂಧಿಸಿ ಅವನೊಂದಿಗೆ ಅವನ ಗೆಳೆಯ ಕವಿ ಕಲಾಷ್ ನನ್ನ ಚಿತ್ರ ಹಿಂಸೆ ನೀಡಿ ಮತಾಂತರ ಮಾಡಲು ಬಲವಂತ ಮಾಡುವಾಗ ಸಂಭಾಜಿಯು ಪ್ರತಿರೋಧ ತೋರಿದ ರೀತಿಯನ್ನು ಚೆನ್ನಾಗಿ ಚಿತ್ರಿಸಲಾಗಿದೆ. ಸಂಭಾಜಿಯ ಕಣ್ಣುಗಳನ್ನು ಕಾದ ಕಬ್ಬಿಣದ ಕೆಂಪನೆಯ ಸರಳುಗಳಿಂದ ಕೀಳುವಾಗ ಸಂಕಟವಾಗುತ್ತದೆ. ಅವರ ಉಗುರು ಕೀಳುತ್ತಾರೆ, ಗಾಯಕ್ಕೆ ಉಪ್ಪು ಕಾರ ಹಾಕಿ ಹಿಂಸಿಸುವಾಗ ಸಂಭಾಜಿಯ  ನರಳದೇ  ಒಂದೇ ಪದ ಉಚ್ಚಾರ ಮಾಡುತ್ತಾರೆ ಅದೇ "ಜಗದಂಬಾ" 

ಕೊನೆಗೆ ನಾಲಿಗೆ ಕೀಳಿಸಿದಾಗಲೂ ಅಸ್ಪಷ್ಟವಾಗಿ ತಾಯಿ ನಾಮ ಸ್ಮರಣೆ ಮಾಡುತ್ತಾನೆ ಸಂಭಾಜಿ!

ಹೀಗೆ ಹಿಂಸಿಸುವಾಗ ದಖ್ಖನ್ ನಿಂದ ಒಂದು ಸುದ್ದಿ ಬರುತ್ತದೆ. ಅದು  ಯೇಸುಬಾಯಿ ರಾಜಾರಾಮ್ ನನ್ನ ಛತ್ರಪತಿ ಸ್ಥಾನದಲ್ಲಿ ಪ್ರತಿಷ್ಟಾಪಿಸಿದ್ದಾರೆ  ಎಂಬುದನ್ನು ತಿಳಿದಾಗ ಸಂಭಾಜಿಗೆ ನೋವಿನಲ್ಲೂ ನಲಿವಾದರೆ.ಔರಂಗಜೇಬ್ ನಿಂತಲ್ಲೇ ಕುಸಿಯುತ್ತಾನೆ.


ಒಟ್ಟಾರೆ ಛಾವ ಒಂದು ಐತಿಹಾಸಿಕವಾದ ಸ್ವರಾಜ್ಯ ಕಲ್ಪನೆಯನ್ನು ಎತ್ತಿ ಹಿಡಿಯುವ ಚಿತ್ರ  ದೇಶಭಕ್ತಿ ಸಾರುವ ಇಂತಹ ಚಿತ್ರವನ್ನು ಎಲ್ಲರೂ ನೋಡಬಹುದು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು