10 ಮೇ 2024

ನಾರ್ಥ್ ಬೇ ಐಲ್ಯಾಂಡ್ ನಲ್ಲಿ ಸೀ ವಾಕಿಂಗ್

 


ಅಂಡಮಾನ್ ೯

ನಾರ್ಥ್ ಬೇ ಐಲ್ಯಾಂಡ್ ನಲ್ಲಿ  ಸೀ ವಾಕಿಂಗ್ 


ಭಾರತದ ಒಂದೊಂದು ಕರೆನ್ಸಿ ನೋಟಿನ ಹಿಂದೆ ನಮ್ಮ ದೇಶದ ಸಂಸ್ಕೃತಿ ಪರಂಪರೆಯನ್ನು ಸಾರುವ ಮಹತ್ವದ ಚಿತ್ರಗಳನ್ನು ಮುದ್ರಿಸಿರುವರು.ಇಪ್ಪತ್ತು ರೂಪಾಯಿಯ  ನೋಟಿನ ಹಿಂದೆ ಅಂಡಮಾನ್ ನ ನಾರ್ಥ್ ಬೇ ದ್ವೀಪದ ಚಿತ್ರ ಪ್ರಿಂಟ್ ಆಗಿದೆ.ಅಂತಹ ನೀರಿನ ಮೇಲಿನ ಸ್ವರ್ಗಕ್ಕೆ ಭೇಟಿ ನೀಡಲು ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ.

ಪೋರ್ಟ್ ಬ್ಲೇರ್ ನ ಅಂಡಮಾನ್   ವಾಟರ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ತಲುಪಿದ ನಾವು ಅಲ್ಲಿ ಒಂದು ಗುಂಪು ಪೋಟೋ ಹಾಗೂ ಸೆಲ್ಪಿಗಳನ್ನು   ತೆಗೆದುಕೊಂಡು ಮುಂದೆ ಸಾಗಿದಾಗ ಒಂದು ಸ್ಮಾರಕ ಕಣ್ಣಿಗೆ ಬಿತ್ತು. ಹತ್ತಿರ ಹೋಗಿ ನೋಡಿದಾಗ ಸುನಾಮಿ ಮೆಮೋರಿಯಲ್ ಎಂಬ ಬೋರ್ಡ್ ಕಣ್ಣಿಗೆ ಬಿತ್ತು. ಸುನಾಮಿಯ ಪ್ರಾಕೃತಿಕ ಹೊಡೆತಕ್ಕೆ ತತ್ತರಿಸಿ ಪ್ರಾಣ ತೆತ್ತವರ ನೆನಪಿಗಾಗಿ ಆ ಸ್ಮಾರಕ ನಿರ್ಮಿಸಲಾಗಿದೆ. ಅಲ್ಲಿ ಒಂದು ಕ್ಷಣ ನಿಂತು ಅಗಲಿದ ಆತ್ಮಗಳಿಗೆ ನಮನ ಸಲ್ಲಿಸಿ ಮುಂದೆ ಸಾಗಿದೆವು.


ಪೋರ್ಟ್ ಬ್ಲೇರ್ ನಿಂದ  ಜೆಟ್ಟಿ ಮೂಲಕ ನಾರ್ತ್ ಬೇ ದ್ವೀಪ ತಲುಪಬೇಕು. ಮಹೇಶ್ವರಿ ಎಂಬ ಜೆಟ್ಟಿ ಏರಿ ನಾರ್ಥ್ ಬೇ ಕಡೆಗೆ ಜಲಪಯಣ ಆರಂಬಿಸಿದೆವು.

ಆ ಜರ್ನಿಯೇ ಒಂದು ರೋಮಾಂಚನಕಾರಿ ಅನುಭವ ಸುತ್ತಲೂ ನೀರು ಅಲ್ಲಲ್ಲಿ ದೂರದಲ್ಲಿ ಕಾಣುವ ದ್ವೀಪಗಳು ಅದಕ್ಕೆ ಪೂರಕವಾಗಿ ನಮ್ಮ ಗೈಡ್ ಹಿನ್ನೆಲೆಯಲ್ಲಿ ಆ ಪ್ರದೇಶದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದರು.  ನಮ್ಮ ಜೆಟ್ಟಿ ಸಾಗುತ್ತಿರುವಾಗ "ದೋಣಿ ಸಾಗಲಿ ಮುಂದೆ ಹೋಗಲಿ ..ದೂರ ತೀರವ ಸೇರಲಿ.."  ಎಂಬ ಹಾಡು ನೆನಪಾಗಿ ನಾರ್ತ್ ಬೇ ಐಲ್ಯಾಂಡ್ ಸೇರಲು ನನ್ನ ಮನ ಹಾತೊರೆಯುತ್ತಿತ್ತು.

ನಮ್ಮ ಜೆಟ್ಟಿ ನಾರ್ತ್ ಬೇ ದ್ವೀಪ ತಲುಪಿದಾಗ ಅಲ್ಲಿ ನಮಗೆ ಒಂದೂವರೆ ಗಂಟೆ ಸಮಯವಿದೆ ಎಂಬುದನ್ನು ನೆನೆಪಿಸಿ ಆ ದ್ವೀಪದ ಸೌಂದರ್ಯ ಸವಿಯಲು ನಮ್ಮ ಗೈಡ್ ಹೇಳಿದರು. 

 ಸಮಯ ಒಂದು ಗಂಟೆಯಾದ್ದರಿಂದ ಒಂದು ಗುಡಿಸಲ ಕೆಳಗೆ ಕುಳಿತು ಉಪಾಹಾರ ಸೇವಿಸಿದೆವು.

ನಾರ್ತ್ ಬೇ ಐಲ್ಯಾಂಡ್ 

ಅಂಡಮಾನ್   ಸುಂದರ ದ್ವೀಪಗಳಲ್ಲಿ ಒಂದಾಗಿದೆ.  ಹವಳದ ಬಂಡೆಗಳು ಮತ್ತು ಹರ್ಷದಾಯಕ ಸಾಹಸ ಚಟುವಟಿಕೆಗಳಾದ  

ಸ್ಕೂಬಾ ಡೈವಿಂಗ್, ಸ್ನಾರ್ಕೆಲಿಂಗ್, ಸಮುದ್ರ ವಾಕಿಂಗ್ ಮತ್ತು ಗಾಜಿನ ದೋಣಿ ಸವಾರಿಯಂತಹ ಚಟುವಟಿಕೆಗಳು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತವೆ. ಅಂಡಮಾನ್ ನ   ನೀಲ್ ಐಲ್ಯಾಂಡ್ ಮತ್ತು ಹ್ಯಾವ್‌ಲಾಕ್‌ ನಲ್ಲಿ  ಇಂತಹ ಸಮುದ್ರ ಆಟಗಳಿಗೆ ಅವಕಾಶವಿದೆ.

  


 ಈ  ದ್ವೀಪದಲ್ಲಿ ಸ್ನಾರ್ಕ್ಲಿಂಗ್ ಮತ್ತು ಸ್ಕೂಬಾ ಡೈವಿಂಗ್ ಆಪರೇಟರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರು ವಿವಿಧ ಸಮುದ್ರ ಆಟಗಳ ವಿವರ ಮತ್ತು ಬೆಲೆಯನ್ನು ನಮಗೆ ಅರ್ಥ ಮಾಡಿಸುತ್ತಾರೆ.  ನಮ್ಮ ಪ್ರವಾಸದ ಗುಂಪಿನ ಬಹುತೇಕ ಸಹಪಾಠಿಗಳು   ಸ್ನಾರ್ಕ್ಲಿಂಗ್ ಮಾಡಲು ತೆರಳಿದರು. ಆದರೆ  ನಾನು ಸೀ ವಾಕ್ ಮಾಡಲು ತೀರ್ಮಾನಿಸಿ ಸಮುದ್ರದ ಸಾಹಸಕ್ಕೆ ಸಿದ್ದನಾದೆ.  ಮೂರು ಸಾವಿರ ಶುಲ್ಕ ನೀಡಿ ಸುಮಾರು ಎರಡು ಕಿಲೋಮೀಟರ್ ಸಮುದ್ರದಲ್ಲಿ ದೋಣಿಯ ಮೂಲಕ ಹೋಗಿ ಅಲ್ಲಿ ಸೀ ವಾಕಿಂಗ್ ಗೆ ಮೀಸಲಾದ ಸ್ಥಳವನ್ನು ತಲುಪಿದೆ. ಅಲ್ಲಿ ಸುಮಾರು ಹದಿನೈದು ನಿಮಿಷಗಳ ಕಾಲ  ಸೀ ವಾಕಿಂಗ್ ಗೆ ತರಬೇತಿ ನೀಡಿದರು. ಸಮುದ್ರದ ಆಳದಲ್ಲಿ ನಾವು ಸನ್ನೆಯ ಮೂಲಕ ಸಂಭಾಷಣೆ ಮಾಡುವುದನ್ನು ಹೇಳುತ್ತಾರೆ.ಪಾರದರ್ಶಕ ಮುಂಬಾಗವನ್ನು ಹೊಂದಿರುವ ಹೆಲ್ಮೆಟ್ ಮಾದರಿಯ ಬ್ರೀಟರ್ ನ್ನು ನನ್ನ ತಲೆಯ ಮೇಲೆ ಅಳವಡಿಸಿ ಅದಕ್ಕೆ ಆಕ್ಸಿಜನ್ ಸಂಪರ್ಕ ನೀಡಿ ನನ್ನ ಜೊತೆಯಲ್ಲಿ ಒಬ್ಬ ನುರಿತ ಮುಳುಗುಗಾರರು ಬಂದರು ಆಗ ನಮ್ಮ ಸಮುದ್ರದಾಳದ ಪಯಣ ಆರಂಭವಾಯಿತು. ನ್ಯಾಷನಲ್ ಜಿಯಾಗ್ರಾಫಿಕ್ ಚಾನೆಲ್ ನಲ್ಲಿ ನಾನು ನೋಡಿದ ಚಿತ್ರಣವು   ನನ್ನ ಅನುಭವ ಆಗುತ್ತಿರುವುದಕ್ಕೆ ಥ್ರಿಲ್  ಆಗಿದ್ದೆ.


ಮೊದಲು ಏಣಿಯ ಸಹಾಯದಿಂದ ನಿಧಾನವಾಗಿ ನೀರಿಗಿಳಿದೆ ನನ್ನ ಪಕ್ಕದಲ್ಲೇ ನನ್ನೊಂದಿಗೆ ತಜ್ಞ ಮುಳುಗುಗಾರ ನೀರಿನ ಆಳಕ್ಕೆ ಇಳಿಯುತ್ತಿದ್ದ ಸನ್ನೆಯ ಮೂಲಕ ಸಂವಹನ ಮಾಡುತ್ತಿದ್ದ ಸುಮಾರು ಇಪ್ಪತ್ತು ಅಡಿ ಆಳಕ್ಕೆ ಇಳಿದಾಗ ನನ್ನ ಕಿವಿಯಲ್ಲಿ ಏನೋ ತುಂಬಿದಂತೆ ಭಾರವಾದಂತಾಯಿತು ನನ್ನ ಜೊತೆಗಾರನಿಗೆ ಸನ್ನೆಯ ಮೂಲಕ ಆತಂಕದಿಂದ ಹೇಳಿದೆ.

ಆತ ಸನ್ನೆಯ ಮೂಲಕವೇ ಮೂಗು ಹಿಡಿದುಕೊಂಡು ಬಾಯಲ್ಲಿ ಉಸಿರಾಡಲು ಪ್ರಯತ್ನ ಮಾಡಿ ಉಸಿರು ಹೊರ ಹಾಕಲು ಪ್ರಯತ್ನ ಮಾಡಿ ಎಂದು ಸನ್ನೆ ಮಾಡಿದ ಅದರಂತೆ ಮಾಡಿದೆ ಕಿವಿ ಪ್ರೀಯಾಯಿತು.ಮತ್ತೂ ಆಳಕ್ಕೆ ಇಳಿದೆವು.ಅಲ್ಲಿ ನೀರ ಜೀವ ವೈವಿಧ್ಯತೆ ಅನಾವರಣವಾಯಿತು ಬಣ್ಣ ಬಣ್ಣದ ಮೀನುಗಳು ಹವಳ, ಮತ್ತು ಇತರ ಮೀನುಗಳು ನಮ್ಮ ಕೈ ಮೈ ಮುಟ್ಟಿ ಸಾಗುತ್ತಿದ್ದವು. ಈ ಮಧ್ಯ ನಮ್ಮ ಮುಂದೆ ಬಂದ ಮತ್ತೊಬ್ಬ ಮುಳುಗುಕಾರ ನಮ್ಮ ಪೋಟೋ ಮತ್ತು ವೀಡಿಯೋ ಚಿತ್ರಿಸಿಕೊಂಡು ಹೋದ.

ಆಗ ನಾವು ಸಮುದ್ರದ ತಳಭಾಗ ತಲುಪಿ ನಿಜವಾದ ಸೀ ವಾಕ್ ಮಾಡಿದೆವು.ನಾನು ನೋಡಿರದ. ವೈವಿಧ್ಯಮಯ ಜಲಚರರಾಶಿಯನ್ನು ಅಲ್ಲಿ ಕಂಡೆ. ಹವಳದ ವಿವಿಧ ರೂಪಗಳು ನನ್ನ ಕಣ್ಣಿಗೆ ಹಬ್ಬವನ್ನು ಉಂಟು ಮಾಡಿದವು.ನನಗೆ ಇನ್ನೂ ಸಂತೋಷದ ಅಚ್ಚರಿಯ ಘಟನೆ ಆಗ ಜರುಗಿತು. ನನ್ನ ಸಹಮುಳುಗುಗಾರ ಕೈಯಲ್ಲಿ ಏನೋ ತಂದು ನನ್ನ ಕೈಗೆ ಕೊಟ್ಟು ನಿಧಾನವಾಗಿ ಬಿಡಲು ಸನ್ನೆ ಮಾಡಿದ.ಅದು ಮಣ್ಣಿನಂತಹ ವಸ್ತು ನಾನು ಕೈಯಲ್ಲಿ ಬಿಗಿಯಾಗಿ ಹಿಡಿದು ನಿಧಾನವಾಗಿ ಸ್ವಲ್ಪ ಸ್ವಲ್ಪ ಕೈಯಿಂದ ಹೊರ ಬಿಡುವಾಗ ಬಣ್ಣ ಬಣ್ಣದ ಮೀನುಗಳು ಜೀವಿಗಳು ಬಂದು ನನ್ನ ಕೈಗೆ "ಮುತ್ತಿ"ಗೆ ಹಾಕಿದವು.


ಸಾಗರದಾಳದಲ್ಲಿ ನನ್ನ ಕೈಗಳಿಗೆ 

ಜಲಚರ ಪ್ರಾಣಿಗಳು ಹಾಕಿದವು ಮುತ್ತಿಗೆ|

ನನ್ನ ಕೈಗಳು ರೋಮಾಂಚನಗೊಂಡವು 

ಜಲಚರಗಳ ಸವಿ ಮುತ್ತಿಗೆ||



ಈ ವಿದ್ಯಮಾನ ಕಂಡು ಒಮ್ಮೆ ಖುಷಿ ಮತ್ತೊಮ್ಮೆ ಭಯ ಒಟ್ಟಿಗೆ ಆಯಿತು. ನನ್ನ ಆತಂಕ ಕಂಡ ಅವನು ಕೈಸನ್ನೆಯ ಮೂಲಕ ಧೈರ್ಯ ತುಂಬಿದ.ಸುಮಾರು ಮೂವತ್ತು ನಿಮಿಷಗಳ ಸೀ ವಾಕ್ ನ ಅದ್ಭುತ ಅನುಭವ ಪಡೆದ ನನಗೆ ಮೇಲ್ಮುಖವಾಗಿ ಚಲಿಸಲು ಅವನು ಸನ್ನೆ ಮಾಡಿದ ಒಲ್ಲದ ಮನಸ್ಸಿನಿಂದ ನಿಧಾನವಾಗಿ ಮೇಲ್ಮುಖ ಚಲನೆ ಮಾಡಿದೆವು. ನೀರಿನಿಂದ ಮೇಲೆ ಬಂದು ಬಟ್ಟೆಗಳನ್ನು ಬದಲಾಯಿಸಿಕೊಂಡು ನನ್ನ ಪೋನ್ ಗೆ ಸೀ ವಾಕಿಂಗ್ ನ ಪೋಟೋ ಮತ್ತು ವೀಡಿಯೋಗಳನ್ನು ಹಾಕಿಸಿಕೊಂಡು ಮತ್ತೆ ದೋಣಿಯೇರಿ ನಮ್ಮ ಸಹಪ್ರವಾಸಿಗರನ್ನು ಸೇರಿಕೊಂಡೆ.ಅವರೆಲ್ಲರೂ ಒಮ್ಮೆಗೇ ಕುತೂಹಲದಿಂದ  ಕೇಳಿದರು ಹೇಗಿತ್ತು ಸೀ ವಾಕ್? ನಾನು ಒಂದೇ ಮಾತಲ್ಲಿ ಹೇಳಿದೆ ವರ್ಣಿಸಲಸದಳ! 

ಅದಕ್ಕೆ ಪೂರಕವಾಗಿ ಪೋಟೋ ಮತ್ತು ವೀಡಿಯೋ ತೋರಿಸಿದೆ.ಅವರು ಬಹಳ ಖುಷಿಪಟ್ಟರು.


ಇತ್ತೀಚಿಗೆ ನಮ್ಮ ಮಾನ್ಯ  ಪ್ರಾಧಾನಿಗಳು ಗುಜರಾತ್ ನಲ್ಲಿ ಸ್ಕೂಬಾ ಡೈವಿಂಗ್ ಮಾಡಿದ ದೃಶ್ಯಗಳನ್ನು ನೋಡಿದ ನನಗೆ ನನ್ನ ಅಂಡಮಾನ್ ನ ನಾರ್ಥ್ ಬೇ ಯ ಸೀ ವಾಕಿಂಗ್ ನೆನಪಾಗಿ ಮತ್ತೊಮ್ಮೆ ರೋಮಾಂಚಿತನಾದೆ ನೀವು ಇಂತಹ ಅನುಭವ ಪಡೆಯಲು ಅಂಡಮಾನ್ ನ ನಾರ್ಥ್ ಬೇ ದ್ವೀಪಕ್ಕೆ ಒಮ್ಮೆ ಭೇಟಿ ಕೊಡಬಹುದು.


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು

ತುಮಕೂರು

9900925529

08 ಮೇ 2024

ಎರಡು ಹಾಯ್ಕುಗಳು


*ಹಾಯ್ಕುಗಳು*



೧ ನಿರೂಪ


ನಿರೂಪದಿಂದ

ಬದಲಾಗದು ಜಗ

ಜಾರಿಯು ಮುಖ್ಯ.


೨ ನಿರೋಧ


ಮನಸ್ಸು ಮಾಡು

ನಿರೋಧ ಮೆಟ್ಟಿನಿಲ್ಲು 

ಗುರಿ ಮುಟ್ಟುವೆ.



*ಸಿಹಿಜೀವಿ ವೆಂಕಟೇಶ್ವರ*

ತುಮಕೂರು

06 ಮೇ 2024

ಹಂಚಿ ತಿನ್ನೋಣ...ಹನಿಗವನ

 ಸ್ಪರ್ದೆಗೆ 


*ಹಂಚಿ ತಿನ್ನೋಣ*.


ಬಹುಜನರಿಗಿಲ್ಲ ಅಶನ ವಸನ

ಹಲವರಿಗೆ ದಿನವೂ ನಿರಶನ|

ನಡೆಸೋಣ ನಾವು ಸಹಜೀವನ 

ಹಂಚಿ ತಿನ್ನುವುದ ಕಲಿಯೋಣ||


*ಸಿಹಿಜೀವಿ ವೆಂಕಟೇಶ್ವರ*

ತುಮಕೂರು

04 ಮೇ 2024

ನಮ್ಮುಳಿವಿಗಾಗಿ ಬೆಳೆಸೋಣ ಮರ ಗಿಡ.


 


ನಮ್ಮುಳಿವಿಗಾಗಿ ಬೆಳೆಸೋಣ ಮರ ಗಿಡ.


ಮೊನ್ನೆ ಸಾಮಾಜಿಕ ಜಾಲತಾಣದಲ್ಲಿ ಒಂದು ಚಿತ್ರ ನನ್ನ ಗಮನ ಸೆಳೆಯಿತು. ಬಹುಶಃ ನೀವೂ ಅದನ್ನು ಗಮನಿಸಿರಬಹುದು. ಆ ಚಿತ್ರದಲ್ಲಿ  ರಸ್ತೆಗಳಲ್ಲಿ ಬೀದಿ ದೀಪಗಳ ಕಂಬಗಳ ಮೇಲೆ ಬೀದಿ ದೀಪದ ಜೊತೆಯಲ್ಲಿ ದೊಡ್ಡ ಫ್ಯಾನ್ ಅಳವಡಿಸಲಾಗಿತ್ತು.ಆ  ಚಿತ್ರದ ಅಡಿಬರಹ ಹೀಗಿತ್ತು.  ಮರಗಳ ಕಡಿದ  ತಪ್ಪಿಗೆ  ಇನ್ನೂ ಕೆಲವೇ ದಿನಗಳಲ್ಲಿ ಈ ಪರಿಸ್ಥಿತಿ ಬರುತ್ತದೆ ಎಚ್ಚರ!


ಕೃತಕವಾಗಿ ಭುವಿಯನು  ತಂಪುಮಾಡಲು ಸಾಧ್ಯವೇನು?|

ಎಲ್ಲಿ ತರುವಿರಿ ಈ ಧರೆಗೆ 

ದೊಡ್ಡದಾದ  ಫ್ಯಾನು?||


ಹೌದಲ್ಲವಾ ಇದ್ದ ಬದ್ದ ಮರಗಿಡ ಕಡಿದು ರಸ್ತೆ, ರೈಲು, ಕಟ್ಟಡ ಕಟ್ಟಲು ನಾವು ಮಾರಣ ಹೋಮ ಮಾಡಿದ ಮರಗಳ ಸಂಖ್ಯೆಗೆ ಲೆಕ್ಕವೇ ಇಲ್ಲ.ಅದರ ಪರಿಣಾಮ ಈಗ ಅನುಭವಿಸುತ್ತಿದ್ದೇವೆ.


ಕೆಲ ದೇಶಗಳಲ್ಲಿ ಪರಿಸರ

ಸಮತೋಲನದಲ್ಲಿದೆ ಕಾರಣ

ಅಲ್ಲಿ ಸಾಕಷ್ಟು ಕಾಡಿದೆ|

ನಮ್ಮ ದೇಶದಲ್ಲಿ ಮರ ಗಿಡ

ಕಡಿದ ಪರಿಣಾಮವಾಗಿ 

ಬಿಸಿಗಾಳಿ ನಮ್ಮ ಕಾಡಿದೆ||


ಈ ಬಿರು ಬೇಸಿಗೆಯ  ಇಂದಿನ ದಿನಗಳಲ್ಲಿ ಕೂಲರ್‌ಗಳು, ಫ್ಯಾನ್‌ಗಳು ಇತ್ಯಾದಿಗಳ ಸಹಾಯದಿಂದ ಜನರು ತಮ್ಮ ಜೀವನವನ್ನು ಕಳೆಯುತ್ತಿದ್ದೇವೆ.  ಇದು ನಾವೇ ಮಾಡಿದ  ತಪ್ಪಿಗೆ ಪ್ರಾಯಶ್ಚಿತ್ತ.  ಇನ್ನೂ ಬರುವ ಸಮಯವು ತುಂಬಾ ಭಯಾನಕವಾಗಿರುತ್ತದೆ.  ಇದು ಊಹಿಸಲು ಅಸಾಧ್ಯವಾಗಿದೆ. ಆದ್ದರಿಂದ ಮುಂಬರುವ ಮಳೆಗಾಲದಲ್ಲಿ ನಾವೆಲ್ಲರೂ ನಮ್ಮ ಸುತ್ತಮುತ್ತ 2 ಸಸಿಗಳನ್ನು  ನೆಡೋಣ ಬರೀ ಸಸಿ ನೆಟ್ಟರೆ ಸಾಲದು ಅದು ಮರವಾಗುವವರೆಗೆ ನಮ್ಮ ಮಕ್ಕಳಂತೆ ಹಾರೈಕೆ ಮಾಡಬೇಕಿದೆ.


ಮರಗಿಡ ಕಡಿದು

ಕಟುಕರಾಗದೆ

ಪರಿಸರ ಉಳಿಸಲು

ಕಟಿಬದ್ದರಾದರೆ

ಭುವಿಯೆ ಸ್ವರ್ಗವು

ನೋಡು ಶ್ರೀದೇವಿತನಯ.





  ಇಂದು  ಭಾರತದ ಜನಸಂಖ್ಯೆಗೆ ಅನುಗುಣವಾಗಿ ಸುಮಾರು 400 ರಿಂದ 500 ಕೋಟಿ ಮರಗಳ ಅಗತ್ಯವಿದೆ. ಪರಿಸರ ತಜ್ಞರ ಪ್ರಕಾರ ನಮ್ಮ ದೇಶದಲ್ಲಿ ಶೇಕಡಾ 3೦ ರಷ್ಟಾದರೂ ಕಾಡಿರಬೇಕು.ಆದರೆ ಅದು ಪ್ರಸ್ತುತ ಇಪ್ಪತ್ತರ ಆಸುಪಾಸಿನಲ್ಲಿದೆ ಅದರ ಪರಿಣಾಮ ಅತಿಯಾದ ಬಿಸಿಲು ಅಕಾಲಿಕ ಮಳೆ ಋತುವಿನಲ್ಲಿ ಏರುಪೇರು. ತಂತ್ರಜ್ಞಾನದ ಬಳಕೆಯಿಂದ ಸಂಪತ್ತಿನ ವಿವೇಚನಾರಹಿತ ಬಳಕೆಯಿಂದ   ಬದುಕನ್ನು ಹುಡುಕುತ್ತಾ ನಾವು ಸಾವಿಗೆ ಎಷ್ಟು ಹತ್ತಿರ ಬಂದಿದ್ದೇವೆ?  ಪರಿಸ್ಥಿತಿ ಹೀಗೆ ಮುಂದುವರೆದರೆ   45 °C ನಿಂದ 50 °C ತಾಪಮಾನ ಸಾಮಾನ್ಯವಾಗುತ್ತದೆ.ಮುಂದೆ ಇದು 55 °C ನಿಂದ 60 °C ಗೆ ಏರಲು  ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಮಾನವರು 56 ರಿಂದ 57 °C ನಲ್ಲಿ ಬದುಕುವುದಿಲ್ಲ. ಆದ್ದರಿಂದ ಇದನ್ನು ಅರ್ಥಮಾಡಿಕೊಳ್ಳೋಣ  ಮತ್ತು ಈಗಿನಿಂದ ಸಸ್ಯಗಳನ್ನು ನೆಡಲು ಪ್ರಾರಂಭಿಸೋಣ. 


ಸಮಯ ಕಳೆದದ್ದು ಸಾಕು

ಬೇಗ ಬಾರ|

ನಮ್ಮುಳಿವಿಗಾಗಿ ಬೆಳೆಸೋಣ

ಗಿಡ ಮರ||


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು ಹಾಗೂ ಸಾಹಿತಿಗಳು

ತುಮಕೂರು

9900925529


22 ಏಪ್ರಿಲ್ 2024

ಚೊಂಬು .ಹನಿಗವನ

 


ಚೊಂಬು


ಇನ್ನೂ ಕಾಲ ಮಿಂಚಿಲ್ಲ

ಚೆನ್ನಾಗಿ ಆಡ್ತಾರೆ 

ಆರ್ ಸಿ ಬಿ ನಂಬು|

ಖಂಡಿತವಾಗಿಯೂ

ತಂದೇ ತರ್ತಾರೆ ಚೊಂಬು||


ಸಿಹಿಜೀವಿ ವೆಂಕಟೇಶ್ವರ

ತುಮಕೂರು