21 ಏಪ್ರಿಲ್ 2024

ಭೂದಿನ 2024


 


ಭೂದಿನ 


ಜಗತ್ತಿನ ಎಲ್ಲ ದೇಶಗಳು ಈ ವರ್ಷದ ಜಾಗತಿಕ ತಾಪಮಾನದ ತೊಂದರೆಗಳಿಂದ ಬಳಲಿದ್ದಾರೆ ಎಂದರೆ ತಪ್ಪಾಗಲಾರದು. ಅಕಾಲಿಕ ಮಳೆ ,ಋತುಗಳ  ಏರುಪೇರು, ಉಷ್ಣತೆಯಲ್ಲಿ ಗಣನೀಯ ಹೆಚ್ಚಳ ಇವು ನಾವು ಪ್ರಪಂಚದಾದ್ಯಂತ ಕಾಣುತ್ತಿರುವ ಸಾಮಾನ್ಯ ಸಂಗತಿಗಳು. ಈಗೇಕೆ? ಎಂದು ಪ್ರಶ್ನೆ ಮಾಡಿದರೆ ಬೆರಳು ನಮ್ಮ ಕಡೆಗೆ ತಿರುತ್ತದೆ.

ಈ ನಿಟ್ಟಿನಲ್ಲಿ ಪ್ರತಿವರ್ಷ ಆಚರಿಸಲಾಗುವ ಭೂದಿನದಂದು ನಾವು ಚಿಂತನ ಮಂಥನ ಮಾಡಬೇಕು.

ಪ್ರತಿವರ್ಷ ಭೂ ದಿನವನ್ನು  ಏಪ್ರಿಲ್ 22 ರಂದು ಜಗತ್ತಿನ ಎಲ್ಲಾ ಕಡೆ ಆಚರಿಸಲಾಗುತ್ತದೆ.  ಮೊದಲ ಬಾರಿಗೆ ಏಪ್ರಿಲ್ 22, 1970 ರಂದು ಆಚರಿಸಲಾಯಿತು.

ಪ್ರತಿವರ್ಷ ಒಂದೊಂದು ಥೀಮ್ ಆಧಾರದಲ್ಲಿ ಭೂ ದಿನವನ್ನು ಆಚರಿಸಲಾಗುತ್ತದೆ.


  "ಪ್ಲಾನೆಟ್ ವರ್ಸಸ್ ಪ್ಲ್ಯಾಸ್ಟಿಕ್ಸ್." ಇದು 2024 ರ ಥೀಮ್ ಆಗಿದ್ದು 2040 ರ ಹೊತ್ತಿಗೆ ಶೇಕಡಾ60 ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದೆ. ಇದಕ್ಕೆ 60×40 ಎಂದು ಸಂಕ್ಷಿಪ್ತವಾಗಿ ಕರೆಯಲಾಗಿದೆ.


ಭೂ ದಿನದ ಹಿನ್ನೆಲೆ.

1969 ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಯುನೆಸ್ಕೋ ಸಮ್ಮೇಳನದಲ್ಲಿ   ಶಾಂತಿ ಕಾರ್ಯಕರ್ತ ಜಾನ್ ಮೆಕ್‌ಕಾನ್ನೆಲ್ ಭೂಮಿ ಮತ್ತು ಶಾಂತಿಯ ಪರಿಕಲ್ಪನೆಯನ್ನು ಗೌರವಿಸಲು ಒಂದು ದಿನವನ್ನು ಪ್ರಸ್ತಾಪಿಸಿದರು. ಇದನ್ನು ಮೊದಲು ಮಾರ್ಚ್ 21, 1970 ರಂದು ಉತ್ತರ ಗೋಳಾರ್ಧದಲ್ಲಿ ವಸಂತಕಾಲದ ಮೊದಲ ದಿನ ಆಚರಿಸಲಾಗುತ್ತದೆ. ಪ್ರಕೃತಿಯ ಈ ದಿನವನ್ನು ನಂತರ ಮ್ಯಾಕ್‌ಕಾನ್ನೆಲ್ ಬರೆದ ಘೋಷಣೆಯಲ್ಲಿ ಅನುಮೋದಿಸಲಾಯಿತು ಮತ್ತು ಯುನೈಟೆಡ್ ನೇಷನ್ಸ್‌ನಲ್ಲಿ ಪ್ರಧಾನ ಕಾರ್ಯದರ್ಶಿ ಯು ಥಾಂಟ್ ಸಹಿ ಮಾಡಿದರು. ಒಂದು ತಿಂಗಳ ನಂತರ ಯುನೈಟೆಡ್ ಸ್ಟೇಟ್ಸ್ ಸೆನೆಟರ್  ಗೇಲಾರ್ಡ್ ನೆಲ್ಸನ್ ಏಪ್ರಿಲ್ 22, 1970 ರಂದು ರಾಷ್ಟ್ರವ್ಯಾಪಿ ಪರಿಸರ ಆಂದೋಲನ ಕೈಗೊಳ್ಳುವ   ಕಲ್ಪನೆಯನ್ನು ಪ್ರಸ್ತಾಪಿಸಿದರು. ಅವರು ಯುವ ಕಾರ್ಯಕರ್ತ ಡೆನಿಸ್ ಹೇಯ್ಸ್ ಅವರನ್ನು ರಾಷ್ಟ್ರೀಯ ಸಂಯೋಜಕರಾಗಿ ನೇಮಿಸಿಕೊಂಡರು. ನೆಲ್ಸನ್ ಮತ್ತು ಹೇಯ್ಸ್ ಈವೆಂಟ್ ಅನ್ನು "ಅರ್ಥ್ ಡೇ" ಎಂದು ಮರುನಾಮಕರಣ ಮಾಡಿದರು. ಡೆನಿಸ್ ಮತ್ತು ಅವರ ಸಿಬ್ಬಂದಿ  ಸಂಘಟಿಸಿದ  ಕಾರ್ಯಕ್ರಮದಲ್ಲಿ  20 ದಶಲಕ್ಷಕ್ಕೂ ಹೆಚ್ಚು ಜನರು ಬೀದಿಗಳಲ್ಲಿ ಸೇರಿದರು, ಮತ್ತು ಮೊದಲ ಭೂ ದಿನವು ಮಾನವ ಇತಿಹಾಸದಲ್ಲಿ ಅತಿದೊಡ್ಡ ಏಕದಿನ ಪ್ರತಿಭಟನೆಯಾಗಿ ಉಳಿಯುವಂತೆ ಮಾಡಿದರು. 

 2016 ರ ಭೂ ದಿನವು ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ಅಂದು ದಿನದಂದು, ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ಚೀನಾ ಮತ್ತು 120 ಇತರ ದೇಶಗಳು ಈ ಒಪ್ಪಂದಕ್ಕೆ  ಸಹಿ ಹಾಕಿದವು. 

ಇದುವರೆಗಿನ ಭೂ ದಿನದ ಆಚರಣೆಯ ಫಲಶ್ರುತಿ ಏನು ಎಂಬುದನ್ನು ಕೆಲವರು ಪ್ರಶ್ನಿಸುತ್ತಾರೆ.

ಕ್ಲೀನ್ ಏರ್ ಆಕ್ಟ್‌ನಂತಹ ಹಲವಾರು ಪರಿಸರ ಕಾನೂನುಗಳನ್ನು ಸ್ಥಾಪಿಸಲಾಯಿತು ಅಥವಾ ಗಮನಾರ್ಹವಾಗಿ ಬಲಪಡಿಸಲಾಯಿತು.

ಇತ್ತೀಚಿನ ಘಟನೆಗಳು ನೂರಾರು ಮಿಲಿಯನ್ ಮರಗಳನ್ನು ನೆಡುವುದು, ಸುಸ್ಥಿರ ಕೃಷಿ ಪದ್ಧತಿಗಳೊಂದಿಗೆ ರೈತರನ್ನು ಬೆಂಬಲಿಸುವುದು ಮತ್ತು ಪ್ರಪಂಚದಾದ್ಯಂತ ಹವಾಮಾನ ಸಾಕ್ಷರತಾ ಯೋಜನೆಗಳನ್ನು ಪ್ರಾರಂಭಿಸುವುದು ಸೇರಿವೆ.

ನಾವೂ ಸಹ ಭೂದಿನವನ್ನು ಪರಿಸರಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಿಸೋಣ.


ಮರಗಿಡ ಕಡಿದು

ಕಟುಕರಾಗದೆ

ಪರಿಸರ ಉಳಿಸಲು

ಕಟಿಬದ್ದರಾದರೆ

ಭುವಿಯೆ ಸ್ವರ್ಗವು

ನೋಡು ಶ್ರೀದೇವಿತನಯ


ಸಿಹಿಜೀವಿ ವೆಂಕಟೇಶ್ವರ

ತುಮಕೂರು





ಸಂತಸದ ಮಾರ್ಗ

 



ಸಂತಸದ ಮಾರ್ಗ 


ಎಂದಿಗೂ ಅಳಲು ಬೇಡ

ಜಗಳವಾಡಲೇ ಬೇಡ 

ಇತರರ ಕೆಣಕಬೇಡ 

ಇದೇ ಸಂತಸದ ಮಾರ್ಗ ನೋಡ


ಸಿಹಿಜೀವಿ ವೆಂಕಟೇಶ್ವರ

ತುಮಕೂರು 

ಇಂಧನ ,ಧನ .(ಹನಿಗವನ)

 


ಇಂಧನ 


ಪ್ರಮಾಣಿಕತೆ, ಬದ್ದತೆ,ಮೌಲ್ಯಗಳು

ಪ್ರಜಾಪ್ರಭುತ್ವ ಮತ್ತು ಚುನಾವಣೆಗೆ ಇಂಧನ|

ಈಗೀಗ ಇವೆಲ್ಲವೂ ಗೌಣ 

ಇವಿರದಿದ್ದರೂ ಚಿಂತೆಯಿಲ್ಲ 

ಇದ್ದರೆ  ಸಾಕು ಧನ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

09 ಏಪ್ರಿಲ್ 2024

ಅಸಲಿ, ನಕಲಿ

 


ಅಸಲಿ, ನಕಲಿ


ದಿನಕ್ಕೊಂದು ವಸ್ತು ಸಂತೆಯಲಿ

ಯಾವುದು ಅಸಲಿ?  ನಕಲಿ?

ಗುರುತಿಸುವುದನ್ನು  ನೀ ಕಲಿ 

ಬುದ್ದಿವಂತನಾಗು ಈ ಜಗದಲಿ


ಸಿಹಿಜೀವಿ ವೆಂಕಟೇಶ್ವರ

ತುಮಕೂರು


06 ಏಪ್ರಿಲ್ 2024

ವಿಶ್ವ ಆರೋಗ್ಯ ದಿನ. ನನ್ನ ಆರೋಗ್ಯ ನನ್ನ ಹಕ್ಕು.


 


ವಿಶ್ವ ಆರೋಗ್ಯ ದಿನ. ನನ್ನ ಆರೋಗ್ಯ ನನ್ನ ಹಕ್ಕು.


ಮಾನವನ ಜೀವಿತ ಸರಾಸರಿ ಆಯುಷ್ಯ ಹೆಚ್ಚಾಗಿರುವುದು ಇತ್ತೀಚಿನ ಸಮೀಕ್ಷೆಯಿಂದ ಸಾಬೀತಾಗಿದೆ. ಆದರೂ ಜಾಗತಿಕ ತಾಪಮಾನ ಮತ್ತು ಇತರ ಕಾರಣದಿಂದಾಗಿ ವಿವಿಧ ರೋಗಗಳಿಂದ ಬಳಲುವವರೂ ಹೆಚ್ಚಾಗಿದ್ದಾರೆ.

 ವಿಶ್ವದ ಸಕಲ ಮನುಜರ ಆರೋಗ್ಯವನ್ನು ಕಾಪಾಡಿಕೊಳ್ಳುವ ಮಹತ್ವಾಕಾಂಕ್ಷೆಯಿಂದ ಹಲವು ಯೋಜನೆಗಳನ್ನು ಪ್ರಾರಂಭಿಸಲಾಯಿತು. 1948ರಲ್ಲಿ ಜಿನೀವಾದಲ್ಲಿ ನಡೆದ ವಿಶ್ವ ಆರೋಗ್ಯ ಶೃಂಗಸಭೆಯಲ್ಲಿ ವರ್ಷಕ್ಕೊಮ್ಮೆ ವಿಶ್ವ ಆರೋಗ್ಯ ದಿನವನ್ನು ಆಚರಿಸುವ ಮಹತ್ವದ ಬಗ್ಗೆ ಸಮಾಲೋಚಿಸಲಾಯಿತು.


1950ರ ಏಪ್ರಿಲ್ 7 ರಂದು ಪ್ರಥಮ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸುತ್ತಾ ಬರಲಾಗಿದೆ. ಅಂದಿನಿಂದ ವಿಶ್ವ ಆರೋಗ್ಯ ಸಂಸ್ಥೆ ಪ್ರತಿವರ್ಷವೂ  ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಶ್ವದೆಲ್ಲೆಡೆ  ವಿವಿಧ ಚಟುವಟಿಕೆಗಳನ್ನು ಏರ್ಪಡಿಸುತ್ತಾ ಬಂದಿದೆ. ಪ್ರತಿ ವರ್ಷ ಒಂದೊಂದು ಥೀಮ್ ಆಧರಿಸಿ ಈ ದಿನವನ್ನು ಆಚರಿಸಲಾಗುತ್ತದೆ. "ನನ್ನ ಆರೋಗ್ಯ ನನ್ನ ಹಕ್ಕು" ಇದು 2024 ರ ಥೀಮ್! ಹೌದು ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಹಕ್ಕೂ ಹೌದು ಕರ್ತವ್ಯ ಕೂಡ.


ಆರೋಗ್ಯದ ಕಾಳಜಿಯ ಕುರಿತಾದ  ವಿಷಯಗಳನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಮತ್ತು ಈ ಬಗ್ಗೆ ಅರಿವು ಮೂಡಿಸಲು ಈ ದಿನದಂದು ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಹಲವು ಖ್ಯಾತನಾಮರು ಈ ಕಾರ್ಯಕ್ರಮಗಳಲ್ಲಿ ಯಾವುದೇ ಪ್ರತಿಫಲವಿಲ್ಲದೇ ಭಾಗಿಯಾಗಿ ಜನಹಿತ ಕಾರ್ಯಕ್ರಮಗಳಿಗೆ ಬಂಬಲ ನೀಡುತ್ತಾ ಬಂದಿದ್ದಾರೆ. ವಿಷಯದ ಕುರಿತಾದ ಪ್ರಸ್ತುತಿಗಳು ಇಡಿಯ ವರ್ಷ ಜನರ ಮನದಲ್ಲಿ ಹಸಿರಾಗಿ ಉಳಿಯಲು ಕ್ರಮ ಕೈಗೊಳ್ಳಲಾಗುತ್ತದೆ.


ಅರಿವಿಲ್ಲದೇ ಜನತೆ ಆಚರಿಸುತ್ತಾ ಬಂದಿರುವ ಅನಾರೋಗ್ಯಕರ ಮತ್ತು ಪಿಡುಗುಗಳ ಬಗ್ಗೆ ಮಾಹಿತಿ ನೀಡಿ ಜನರನ್ನು ಸರಿದಾರಿಗೆ ತರಲು ಪ್ರಯತ್ನಪಡುತ್ತಾರೆ. ಕಾಲಕಾಲಕ್ಕೆ ತೆಗೆದುಕೊಳ್ಳಬೇಕಾದ ಔಷಧಿ, ಕಾಪಾಡಬೇಕಾದ ನೈರ್ಮಲ್ಯ, ಸ್ವಚ್ಛತಾ ಅಭ್ಯಾಸಗಳು, ನೀರಿನ ದುಂದುವೆಚ್ಚ, ಪರಿಸರದ ಸ್ವಚ್ಛತೆ, ಮೊದಲಾದ ವಿಷಯಗಳ ಬಗ್ಗೆ ಕಾಳಜಿವಹಿಸುವ ಮಾಹಿತಿಯನ್ನು ನೀಡುತ್ತಾರೆ. ನಮ್ಮ ಆರೋಗ್ಯ ಕಾಪಾಡಿಕೊಂಡು  ಸಮಾಜದ ಆರೋಗ್ಯ ಉತ್ತಮಗೊಳಿಸುವ ಪ್ರಯತ್ನಕ್ಕೆ ನಾವೂ ಕೈಜೋಡಿಸೋಣ ತನ್ಮೂಲಕ ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಪಣ ತೊಡೋಣ.

 

ಸಿಹಿಜೀವಿ ವೆಂಕಟೇಶ್ವರ

ತುಮಕೂರು