25 ಫೆಬ್ರವರಿ 2024

ಆತ್ಮೀಯ ಶಿಕ್ಷಕ, ಶಿಕ್ಷಕಿಯರೆ ದಯವಿಟ್ಟು ಗಮನಿಸಿ...

 


ಆತ್ಮೀಯ ಶಿಕ್ಷಕ, ಶಿಕ್ಷಕಿಯರೆ ದಯವಿಟ್ಟು ಗಮನಿಸಿ...


ಜಾಗತೀಕರಣ, ಆಧುನೀಕರಣ, ಕೈಗಾರಿಕೀಕರಣ, ನಗರೀಕರಣದ ಈ ಕಾಲಘಟ್ಟದಲ್ಲಿ ಮೊಬೈಲ್,ಎ ಐ ,ಟಿ ವಿ ಗಳು ಮತ್ತು ಸಾಮಾಜಿಕ ಮಾದ್ಯಮಗಳ ಅತಿಯಾದ ಬಳಕೆಯ ಈ ಸಂಧಿಕಾಲದಲ್ಲಿ ಶಿಕ್ಷಕರ ಕೆಲಸ ಸವಾಲಿನದು ಎಂದರೆ ತಪ್ಪಾಗಲಾರದು. ಪ್ರಭುತ್ವದ ಕೆಲ ನಿಯಮಗಳು, ಮಕ್ಕಳ ಅತಿಯಾದ ನಕಾರಾತ್ಮಕ ಚಟುವಟಿಕೆಗಳು, ಪೋಷಕರ ಅತಿಯಾದ ಮುದ್ದು ಇವುಗಳ ಪರಿಣಾಮವಾಗಿ ಶಾಲೆಗೆ ಬರುವ ಕೆಲ ಮಕ್ಕಳ ವರ್ತನೆ ಸಾಮಾನ್ಯ ವಿದ್ಯಾರ್ಥಿಗಳ ವರ್ತನೆಯಂತಿರದೆ ಯಾವುದೋ ಬಾಹ್ಯ ಪ್ರಪಂಚದಿಂದ ಪ್ರೇರಣೆಗೊಂಡು ನಿರ್ದೇಶಿತವಾದಂತೆ ಭಾಸವಾಗುತ್ತದೆ. ಇಂತಹ ಸಂಕೀರ್ಣವಾದ ಸಮಯದಲ್ಲಿ ಶಿಕ್ಷಕರಾದ ನಾವು ಇನ್ನೂ ಹೆಚ್ಚಿನ ಜವಾಬ್ದಾರಿ ಮತ್ತು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

 ಮೊನ್ನೆ ಈ ವಿಷಯಕ್ಕೆ ಸಂಬಂಧಿಸಿದಂತೆ ಗೆಳೆಯನೋರ್ವ ಒಂದು ಸಂದೇಶ ಕಳಿಸಿದ್ದ ಅದಕ್ಕೆ ಕೆಲ ನನ್ನ ಮಾತುಗಳನ್ನು ಸೇರಿಸಿರುವೆ.

ಇಂದಿನ ಶಿಕ್ಷಕರಾದ ನಾವು ಅಗತ್ಯವಾಗಿ ಕೆಲ ಅಂಶಗಳನ್ನು ತಿಳಿದಿರಬೇಕು ಹಾಗೂ ನಮ್ಮ ಬೋಧನಾ ಜೀವನದಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿಕೊಳ್ಳಲು ಪ್ರಯತ್ನ ಮಾಡೋಣ.

ತೀರಾ ಇತ್ತೀಚಿನವರೆಗೆ ಶಿಕ್ಷಕರು ಪ್ರಶ್ನಾತೀತರಾಗಿದ್ದರು. ಆದರೆ ಇಂದು ಅವರನ್ನು ವಿದ್ಯಾರ್ಥಿಗಳೂ ಸೇರಿದಂತೆ ಎಲ್ಲರೂ ಪ್ರಶ್ನಿಸಬಹುದು ಎಂದು ತಿಳಿದಿರಲಿ.ಮೊದಲು ಟೀಚಿಂಗ್ ಪ್ರೊಫೆಷನ್ ಈಸ್ ನೋಬಲ್ ಪ್ರೊಫೆಷನ್ ಎಂಬ ಗೌರವವಿತ್ತು.ಆದರೆ  ಶಿಕ್ಷಕ ವೃತ್ತಿ ಇಂದು ಇತರ ವೃತ್ತಿಗಳಂತೆ ಒಂದು ವೃತ್ತಿ ಎಂದು ಕೆಲವರು ಭಾವಿಸಿದ್ದಾರೆ ಎಂಬುದು ನಿಮಗೆ  ಗೊತ್ತಿರಲಿ.ಧರ್ಮ, ಜಾತಿ, ರಾಜಕೀಯ ದಂತಹ ವಿಚಾರಗಳು ಈ ದಿನಗಳಲ್ಲಿ ತೀರಾ ಸೂಕ್ಷ್ಮ ವಿಚಾರಗಳು. ಇಲ್ಲಿ ಹಗ್ಗದ ಮೇಲಿನ ನಡಿಗೆಯಂತಹ ಎಚ್ಚರ ಅಗತ್ಯ ಎಂಬ ಅರಿವಿರಲಿ.

ಈ ಮೇಲಿನ ಎಲ್ಲಾ ಕ್ಷೇತ್ರಗಳಲ್ಲೂ ನಿಮ್ಮ ನಿಲುವು ತಟಸ್ಥವಾಗಿಯೇ ಇರಲಿ.ನಮಗೂ ಖಾಸಗಿ ಬದುಕಿದೆ. ನಮ್ಮ ಖಾಸಗಿ ಬದುಕಿನ ಖಾಸಗಿ ವಿಚಾರಗಳು ಕೂಡಾ ನಮ್ಮ ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರುತ್ತವೆ ಎಂಬ ಸತ್ಯದ ಅರಿವಿರಲಿ.

ನಮ್ಮ ನಿಯಂತ್ರಣದಲ್ಲಿ  ವಿದ್ಯಾರ್ಥಿ ಸಮುದಾಯ ಇದೆ ಎಂಬ ಭಾವನೆ ಪೂರ್ತಿ ನಿಜವಲ್ಲ. ಅವರನ್ನು ಶಾಲೆಯ ಹೊರಗಿನ ವಿವಿಧ ಶಕ್ತಿಗಳು ವಿವಿಧ ಪರಿಸರ ಕೂಡಾ ನಿಯಂತ್ರಿಸುತ್ತಿರಬಹುದು ಎಂಬ ಅರಿವಿರಲಿ.ನೀವೆಷ್ಟೇ ಸರಿ ಇದ್ದರೂ, ನಿಮ್ಮನ್ನು ವಿರೋಧಿಸುವ ಶಕ್ತಿಯೊಂದು ನಿಮ್ಮ ಪಕ್ಕದಲ್ಲೇ ಇದೆ ಎಂದು ಎಚ್ಚರವಹಿಸಿ. ಯಾಕೆಂದರೆ ನಿಮಗೆ ಸರಿಯೆನಿಸಿದ್ದು ಇತರರ ದೃಷ್ಟಿಯಿಂದ ತಪ್ಪಾಗಿ ಕಾಣಬಹುದು.ಸಂಘರ್ಷ ಮತ್ತು ಸಮನ್ವಯ, ಇವೆರಡರ  ನಡುವೆ ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ ಎಂಬ ಗೊಂದಲ ಎದುರಾದಾಗ ಸಮನ್ವಯವನ್ನು ಆಯ್ದುಕೊಳ್ಳಿ. ಸಂಘರ್ಷದಿಂದ ಯುದ್ದ ಗೆದ್ದು ನಾವೇನು ಸಾಮ್ರಾಟರಾಗಬೇಕಿಲ್ಲ. ನಮ್ಮ ಭಾವೀ ಸಮಾಜವೂ ಸಮನ್ವಯದ ಜೀವನ ಪದ್ಧತಿಯನ್ನೇ ಕಲಿಯಬೇಕಿದೆ. ಸಮನ್ವಯ ಎಂದರೆ ಶರಣಾಗತಿ ಅಥವಾ ವೀಕ್ನೆಸ್  ಎಂದು ಅರ್ಥವಲ್ಲ. ಇದಕ್ಕಾಗಿ ಮನವೊಲಿಸುವ ಕಲೆ ಯಲ್ಲಿ ಪರಿಣತಿ ಸಾಧಿಸಿ.

ನೀವು ಬೋಧಿಸುವ ವಿಷಯ ಮತ್ತು  ಬೋಧನಾ ವಿಧಾನದ ಬಗ್ಗೆ ಸಾಧ್ಯವಾದಷ್ಟು ಪಾಂಡಿತ್ಯ ಗಳಿಸಿ. ಅಪ್ಡೇಟ್ ಆಗಿ. ಎಷ್ಟೇ ಜ್ಞಾನಿಯಾಗಿದ್ದರೂ ಇನ್ನಷ್ಟು ಕಲಿಯುವ ವಿದ್ಯಾರ್ಥಿಯಾಗಿಯೇ ಮುಂದುವರಿಯಿರಿ.ಕಲಿಕೆ ಗರ್ಭದಿಂದ ಗೋರಿಯವರೆಗೆ ನಿರಂತರ ಎಂಬುದನ್ನು ಮತ್ತೊಂದು ಬಾರಿ ನೆನಪಿಸಿಕೊಳ್ಳಿ.

ನಿಮ್ಮ ಎದುರು ಇರುವ ಮಕ್ಕಳನ್ನು ಅವರು ಸೂಕ್ಷ್ಮ ಸಂವೇದನಾಶೀಲರು ಎಂದೇ ಭಾವಿಸಿ ಭೋಧನೆ ಮಾಡಿ. ಅವರು ವಯಸ್ಸಿನಲ್ಲಿ ನಿಮಗಿಂತ ಚಿಕ್ಕವರಿರಬಹುದು. ಆದರೂ ಇಂದಿನ ಇಂಟರ್ನೆಟ್ ಯುಗದಲ್ಲಿ ಕೆಲವು ವಿಷಯಗಳಲ್ಲಿ ಅವರು ಕಿರಿಯ ಶರೀರ ಧರಿಸಿರುವ ಹಿರಿಯ ಜೀವ  ಆಗಿರುತ್ತಾರೆ ಎಂದು ನೆನಪಿಡಿ.ಮಕ್ಕಳಿಗೆ ನಿಮ್ಮಷ್ಟು ತಿಳಿಯದೇ ಇರಬಹುದು. ಆದರೆ ಅವರು ನಿಮ್ಮನ್ನು ತಿಳಿದಿರುತ್ತಾರೆ ಎಂದು ಅರಿವು ಇರಲಿ.

ವಿದ್ಯಾರ್ಥಿಗಳು ನೀವು ಹೇಳಿದ್ದನ್ನು ಅರ್ಥ ಮಾಡಿಕೊಳ್ಳದೇ ಹೋದರೂ, ನೀವು ಹೇಳದೇ ಇದ್ದುದನ್ನು ಅರ್ಥ ಮಾಡಿಕೊಳ್ಳಲು ತುಂಬಾ ಪ್ರಯತ್ನಿಸುತ್ತಾ ಇರುತ್ತಾರೆ ಎಂಬ ರಹಸ್ಯ ನಿಮಗೆ ಗೊತ್ತಿರಲಿ. ಈಗ ಚಾಟ್ ಜಿ ಪಿ ಟಿ, ಮತ್ತು ಎ ಐ ನಂತಹ ಸಹಾಯಕರು  ಅವರ ಮನೆಯಲ್ಲಿದ್ದಾರೆ.ವಿಷಯ ಜ್ಞಾನ ದೊಂದಿಗೆ ಸಂವಹನ ಕೌಶಲ, ಔದ್ಯೋಗಿಕ ಮಾರ್ಗದರ್ಶನ, ಸಮಸ್ಯೆಗಳ ಪರಿಹಾರದಂತಹ ಜೀವನ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿ. ಮತ್ತು ಮೊದಲು ಇವುಗಳನ್ನು ನೀವು ಕಲಿಯಿರಿ.ನೀವು ಕಲಿಸಿದ್ದೆಲ್ಲವನ್ನೂ ಮರೆತರೂ, ಮಕ್ಕಳು ಸದಾ ನಿಮ್ಮನ್ನು ಮರೆಯದೆ ಇರುವಂತಹ ಶಿಕ್ಷಕರಾಗಲು ಪ್ರಯತ್ನಿಸಿ.ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗ‌ವಿಲ್ಲ. ಎಂಬ ಗಾದೆ ಮಾತನ್ನು ಮೌನ ಬಲ್ಲವನಿಗೆ ಜಗಳವಿಲ್ಲ ಎಂಬಂತೆ ಕೊಂಚ ವಿಸ್ತರಿಸಿಕೊಳ್ಳಿ.ನಿಮ್ಮ ಮೌನವೂ ಎಷ್ಟು ಪ್ರಭಾವಶಾಲಿ ಆಗಿರುತ್ತದೆ  ಎಂಬುದನ್ನು ಅನುಭವದಿಂದ ಕಲಿಯಿರಿ.ಪಾಠಕ್ಕೆ ಪೂರಕವಾದ ವಿಷಯಗಳನ್ನು ಪ್ರಸ್ತುತ ಪಡಿಸುವ ಅಗತ್ಯ ಎದುರಾದಾಗ ಇದನ್ನು ಹೇಳದೇ ಇರುವುದು, ಅದನ್ನು ಹೇಳುವುದಕ್ಕಿಂತ ಹೆಚ್ಚು ಪ್ರಯೋಜನಕರ ಎಂದು ಅನಿಸಿದರೆ ಅದನ್ನು ಹೇಳದೇ ಇರುವುದೇ ಉತ್ತಮ ಎಂದು ನೆನಪಿಡಿ.ನಿಮ್ಮ ಸಹೋದ್ಯೋಗಿಗಳು ಮತ್ತು ಮುಖ್ಯಸ್ಥ ರೊಂದಿಗೆ ನಿಮಗೆದುರಾಗುವ ಸಮಸ್ಯೆ ಗಳ ಮತ್ತು ಗೊಂದಲಗಳ ಬಗ್ಗೆ ಚರ್ಚಿಸಿ. ಅವರ ಸಲಹೆ, ಮಾರ್ಗದರ್ಶನ ಪಡೆಯಲು ಹಿಂಜರಿಯಬೇಡಿ.ಎಷ್ಟೇ ಪರಿಣಿತರಿದ್ದರೂ ನಮ್ಮಿಂದ ತಪ್ಪುಗಳು ನಡೆದು ಹೋಗಬಹುದು. ತಪ್ಪುಗಳು ನಡೆದುಹೋದರೆ ಪ್ರಾಂಜಲ ಮನಸ್ಸಿನಿಂದ ಅದನ್ನು ಒಪ್ಪಿಕೊಂಡು ಮುಂದುವರಿಯಿರಿ.

ನಮ್ಮನ್ನು ಟೀಕಿಸುವವರನ್ನು ಹತ್ತಿರ ಇರಿಸಿಕೊಳ್ಳಿ. ಅದರಿಂದ ನಿಮಗೆ ಒಳಿತು ಜಾಸ್ತಿ ಎಂದು ಗೊತ್ತಿರಲಿ.

ಸಮಾಜ ಮತ್ತು ವಿದ್ಯಾರ್ಥಿಗಳು ನಿಮ್ಮ ಯಾವುದೇ ಶಕ್ತಿಗೆ ತಲೆ ಬಾಗದೆ ಹೋದರೂ ನಹಿ ಜ್ಞಾನೇನ ಸದೃಶಂ ಎಂಬಂತೆ ಜ್ಞಾನ ಸಂಪತ್ತಿಗೆ ತಲೆಬಾಗುತ್ತಾರೆ ಎಂಬ ವಿಶ್ವಾಸ ನಿಮ್ಮಲ್ಲಿರಲಿ. ಜ್ಞಾನ ಸಂಪತ್ತಿನ ನೆರವಿನಿಂದ ನೀವು ಎಲ್ಲರ ಗೌರವಾದರಗಳನ್ನು ಖಂಡಿತಾ ಪಡೆಯುತ್ತೀರಿ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಪ್ರವೃತ್ತರಾಗೋಣ.

ಶಿಕ್ಷಕ ವೃತ್ತಿ ಹಿಂದೆಯೂ, ಇಂದಿಗೂ ಮುಂದೆ ಹಾಗೂ ಎಂದೆಂದಿಗೂ ಪವಿತ್ರ ವೃತ್ತಿ ಎಂಬುದನ್ನು ಸಾಬೀತುಪಡಿಸೋಣ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529.


ಗುರುವೇ ನಮಃ

 ಗುರುವೇ ನಮಃ 


ಗುರು ಬ್ರಹ್ಮ ಗುರು ವಿಷ್ಣು ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಎಂಬ ಉಕ್ತಿಯಂತೆ ಶಿಕ್ಷಕರಿಗೆ ದೇವರ ಸ್ಥಾನ ನೀಡಲಾಗಿದೆ. ಆಧುನೀಕರಣ ಹಾಗೂ ಇತರ ಕಾರಣದಿಂದಾಗಿ ಅಲ್ಲಲ್ಲಿ ಶಿಕ್ಷಕರ ಬಗ್ಗೆ ಕೆಲ ನಕಾರಾತ್ಮಕ ಸುದ್ದಿಗಳು ಬಿತ್ತರವಾಗುತ್ತಿದ್ದರೂ  ಇಂದಿಗೂ ಗುರುಗಳಿಗೆ ತನ್ನದೇ ಆದ ಸ್ಥಾನವಿದೆ.ಈ ಕೆಳಗಿನ ಘಟನೆ ಗುರುವಿನ ಮಹತ್ವ ಸಾರುತ್ತದೆ. 


ಒಮ್ಮೆ ಡಾ.ವಿ ಕೃ   ಗೋಕಾಕರು ರೈಲಿನಲ್ಲಿ ಪ್ರವಾಸ ಮಾಡುತ್ತಿದ್ದರು.

ರಾತ್ರಿ ಪ್ರವಾಸ­ವಾದ್ದರಿಂದ ಪೈಜಾಮಾ, ಶರ್ಟು ಹಾಕಿಕೊಂಡಿದ್ದರು. ಮಲಗುವ ಮುನ್ನ ಶರ್ಟು ತೆಗೆದಿಟ್ಟು ಬನಿಯನ್ ನೊಂದಿಗೆ ಮಲಗಿದ್ದರು. ಬೆಳಿಗ್ಗೆ ಎಚ್ಚರವಾದಾಗ ರೈಲು ಒಂದು ನಿಲ್ದಾಣದಲ್ಲಿ ನಿಂತಿತ್ತು. ಗೋಕಾಕರು ಕಿಟಕಿಯಿಂದ ಆಚೆ ನೋಡಿ ಹತ್ತಿರದಲ್ಲೇ ಚಹಾದ ಅಂಗಡಿ ಇರುವು­ದನ್ನು ಕಂಡರು. ಚಹಾ ಕುಡಿಯ­ಬೇಕೆಂದು ಅವಸರದಿಂದ ಪೈಜಾಮಾದ ಜೇಬಿನಲ್ಲಿ ಎರಡು ರೂಪಾಯಿ ಹಾಕಿ­ಕೊಂಡು ಕೆಳಗಿಳಿದರು. ನೇರವಾಗಿ ಚಹಾದ ಅಂಗಡಿಗೆ ನಡೆದು ಚಹಾ ಆರ್ಡರ್ ಮಾಡಿದರು.


ಚಹಾ ಕುಡಿಯುತ್ತಿದ್ದಂತೆ ರೈಲು ಹೊರಡ­ತೊಡಗಿತು. ಇವರು ಗಾಬರಿಯಿಂದ ಚಹಾ ಕುಡಿಯುವುದನ್ನು ಬಿಟ್ಟು ರೈಲಿನ ಕಡೆಗೆ ಓಡಿದರು. ಆದರೆ ರೈಲು ಹೊರಡುತ್ತ ವೇಗವನ್ನು ಪಡೆದುಕೊಳ್ಳ­ತೊಡಗಿತು. ಇವರು ಎಷ್ಟೇ ಧಾವಂತ­ದಿಂದ ಓಡಿದರೂ ರೈಲು ಮುಂದೆ ಹೋಗಿಯೇ ಬಿಟ್ಟಿತು! ಡಾ. ಗೋಕಾಕ­ರಿಗೆ ಈಗ ಫಜೀತಿ. ಹಾಕಿಕೊಳ್ಳಲು ಬಟ್ಟೆಯಿಲ್ಲ, ಹಣವೂ ಇಲ್ಲ. ಇದ­ರೊಂದಿಗೆ ತಾವು ಹೊರಟಿದ್ದ ಮಹತ್ವದ ಕಾರ್ಯಕ್ರಮದಲ್ಲಿ ಭಾಗಿಯಾಗಲಾಗುವುದಿಲ್ಲ.


ಇನ್ನೇನು ಮಾಡು­ವುದು ಎಂದು ಚಿಂತಿಸುವಷ್ಟರಲ್ಲಿ ರೈಲು ಪ್ಲಾಟ್‌ಫಾರ್ಮ್‌ ದಾಟಿಯಾಗಿತ್ತು. ಇವರು ಹತಾಶರಾಗಿ ನಿಂತಿದ್ದಾಗ ಒಂದು ಆಶ್ಚರ್ಯಕರ ಸಂಗತಿ ಘಟಿಸಿತು! ಹೊರಟಿದ್ದ ರೈಲು ನಿಂತಿತು. ಇವರು ನೋಡುತ್ತಿದ್ದಂತೆ ಹಿಂದೆ ಹಿಂದೆ ಬರತೊಡಗಿತು! ರೈಲಿನ ಗಾರ್ಡ್ ಇದ್ದ ಬೋಗಿ ಪ್ಲಾಟ್ ಫಾರ್ಮ್  ಮೇಲೆ ಬಂದೊಡನೆ ಅದರಲ್ಲಿದ್ದ ಗಾರ್ಡ್ ಹೊರಗೆ ಹಾರಿಕೊಂಡ. ಗೋಕಾಕರು ನೋಡುತ್ತಿರುವಂತೆ ಆತ ಓಡಿಬಂದು ಅವರ ಕಾಲು ಮುಟ್ಟಿ ನಮಸ್ಕರಿಸಿದ!


ಇವರು ಬೆರಗಿನಲ್ಲಿದ್ದಂತೆಯೇ ಅತ ಹೇಳಿದ  ‘ಸರ್, ನಾನು ಕರ್ನಾಟಕ ಕಾಲೇಜಿನಲ್ಲಿ ನಿಮ್ಮ ವಿದ್ಯಾರ್ಥಿ­ಯಾಗಿದ್ದೆ. ನಾನು ಬಿ.ಎ. ಓದುತ್ತಿರು­ವಾಗ ಪರೀಕ್ಷೆಯಲ್ಲಿ ಕಾಪಿ ಮಾಡುತ್ತಿ­ದ್ದೆನೆಂದು ನೀವು ಮೂರು ವರ್ಷ ಡಿಬಾರ್ ಮಾಡಿಸಿದ್ದಿರಿ’. ‘ಹೌದಲ್ಲ, ನೀನು ಮೆನೆಜಿಸ್ ಅಲ್ಲವೇ?’ ಕೇಳಿದರು ಗೋಕಾಕ. ‘ಹೌದು ಸರ್, ಡಿಬಾರ್ ಮಾಡಿದ್ದು ನಿಮ್ಮ ತಪ್ಪಲ್ಲ ಸರ್, ಅದು ನನ್ನ ತಪ್ಪಿಗೆ ಶಿಕ್ಷೆ. ಆದರೆ ಆಮೇಲೆ ನಾನು ತಮ್ಮನ್ನು ಕಂಡು ಕ್ಷಮೆ ಕೇಳಿ ಪರಿಶ್ರಮ­ದಿಂದ ಓದಿದೆ. ನಂತರ ನೀವು ನನ್ನ ಡಿಬಾರ್ ಅವಧಿಯನ್ನು ಒಂದು ವರ್ಷಕ್ಕೆ ಇಳಿಸಿದಿರಿ. ಮರುವರ್ಷ ನಾನು ಪರೀಕ್ಷೆಗೆ ಕುಳಿತು ಪಾಸಾದೆ. ನನಗೆ ಈ ಗಾರ್ಡ್‌ ಕೆಲಸ ದೊರಕಿತು. ಸರ್, ಇಂದಿಗೂ ನಾನು ತಮ್ಮ ಇಂಗ್ಲೀಷ್ ತರಗತಿಗಳನ್ನು ಮರೆತಿಲ್ಲ’ ಎಂದ ಗಾರ್ಡ್‌ ಮೆನೆಜಿಸ್.


ಗೋಕಾಕರು ನಿರಾಳವಾಗಿ ರೈಲನ್ನೇರಿ ಪ್ರವಾಸ ಮುಂದುವರೆಸಿದರು. ಆದರ್ಶ ಶಿಕ್ಷಕರು ಏನೆಲ್ಲ ಮಾಡಬಹುದು. ವಿದ್ಯಾರ್ಥಿ­ಗಳನ್ನು ವಿಷಯದಲ್ಲಿ ಹೇಗೆ ಪ್ರೋತ್ಸಾ­­ಹಿಸಬಹುದು, ಅವರ ಬದುಕಿಗೆ ಮಾರ್ಗದರ್ಶನ ನೀಡಬಹುದು, ಸಮಾಜದಲ್ಲಿ ಪರಿವರ್ತನೆ ತರಬ­ಹುದು. ಇದೆಲ್ಲದರ ಜೊತೆಗೆ ಮುಂದೆ ಹೋದ ರೈಲನ್ನು ಕೂಡ ಮರಳಿ ಪ್ಲಾಟಫಾರ್ಮ್‌ಗೆ ತರಬಹುದು.

 ಒಬ್ಬ ಆದರ್ಶ ಶಿಕ್ಷಕ  ಮಕ್ಕಳಿಗೆ ಸ್ಪೂರ್ತಿ ಚೈತನ್ಯ ವನ್ನು ತುಂಬ್ತಾನೆ. ಮಕ್ಕಳ ಮನಸ್ಸನ್ನು ಅರಿತು ಅವರೊಡನೆ ಬೆರೆತು ನಿರಂತರ ವಿದ್ಯಾರ್ಥಿಯಾಗಿರುತ್ತಾನೆ.

ಉತ್ತಮ ಸಮಾಜದ ರೂವಾರಿಯಾಗಿರುತ್ತಾನೆ. 


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529


ತನ್ನಂತೆ ಪರರ ಬಗೆದೊಡೆ ಕೈಲಾಸ.

 


ತನ್ನಂತೆ ಪರರ ಬಗೆದೊಡೆ ಕೈಲಾಸ.


ಮಾನವ ಸಂಘಜೀವಿ. ನಮ್ಮ ನೆಮ್ಮದಿಗೆ  ಸಹಜೀವನ,ಸಹಕಾರ ಅಪೇಕ್ಷಣೀಯವಾದರೂ ಮಾನವ ಸಹಜ ಗುಣಗಳಾದ ಮತ್ಸರ, ಸ್ವಾರ್ಥ ಸದಾ ಇಣುಕಿ  ನಮ್ಮ ಮತ್ತು ಸಮಾಜದ ನೆಮ್ಮದಿ ಹಾಳು ಮಾಡಿಬಿಡುತ್ತವೆ.

ಒಂದು ದಿನ ಯಮಧರ್ಮರಾಯ ಒಂದು ವ್ಯಕ್ತಿಯ ಪ್ರಾಣವನ್ನು ಕೊಂಡೊಯ್ಯಲು ಭೂಮಿಗೆ ಬಂದ. ಆದರೆ ಪ್ರಾಣ ಕೊಂಡೊಯ್ಯಬೇಕಾಗಿದ್ದ ವ್ಯಕ್ತಿಯೇ ಯಮಧರ್ಮನಿಗೆ ಎದುರಾದ. ಯಮನಿಗೆ ಭೂಲೋಕ ಸುತ್ತಿ ಸುತ್ತಿ ದಾಹವಾಗಿತ್ತು. ಅವನಿಗೆ ಕುಡಿಯಲು ನೀರು ಕೇಳುತ್ತಾನೆ. ಸಾಯಬೇಕಾಗಿರುವ ವ್ಯಕ್ತಿಯೇ ನೀರು ಕೊಟ್ಟು ದಾಹ ತೀರಿಸುತ್ತಾನೆ.


           ಆದರೆ ಯಮ ಕೊಂಡೊಯ್ಯಬೇಕಾದ  ವ್ಯಕ್ತಿ ಅವನೇ ಎಂದು ತಿಳಿದು ಒಂದು ವರ ಕೊಡುತ್ತಾನೆ. ಏನೆಂದರೆ ಒಂದು ಹಣೆಬರಹದ ಪುಸ್ತಕ ಕೊಟ್ಟು ಇದರಲ್ಲಿ ನಿನಗೆ ಅಂತ ಒಂದು ಹಾಳೆ ಇದೆ. ನಿನಗೆ ಏನು ಬೇಕೋ ಅದನ್ನು ಬರೆದುಕೊ. ನೀನು ಏನು ಬರೆದುಕೊಂಡರೂ ನೆರವೇರುವುದು. ಇದರಲ್ಲಿ ಸಂಶಯವಿಲ್ಲ. ಆದರೆ ನೀನು ಬರೆದುಕೊಳ್ಳಲು ನಿನಗೆ ಐದು ನಿಮಿಷ ಮಾತ್ರ ಸಮಯ, ಆ ಐದು ನಿಮಿಷವೇ ನಿನಗೇ ಅತ್ಯಮೂಲ್ಯ. ಆ ಐದು ನಿಮಿಷ ದಾಟಿದ ನಂತರ ನಿನ್ನ ಹಣೆಬರಹ ಹೇಗಿರುತ್ತೋ ಹಾಗಾಗುವುದು ಎಂದು ಹೇಳಿ ಒಂದು ಪುಸ್ತಕ ಕೊಡುತ್ತಾನೆ. 


     ಆ ವ್ಯಕ್ತಿ ಪುಸ್ತಕ ತೆಗೆದ ತಕ್ಷಣ ಮೊದಲ ಪುಟ ಓದುತ್ತಾನೆ.ಅದರಲ್ಲಿ ನಿನ್ನ ಸ್ನೇಹಿತ ವಿದೇಶಕ್ಕೆ ಹೋಗುತ್ತಾನೆ ಎಂದಿರುತ್ತದೆ. ಅದಕ್ಕೆ ಅವನು ವಿದೇಶಕ್ಕೆ ಹೋಗಬಾರದೆಂದು ಬರೆದು ತಡೆಯುತ್ತಾನೆ.ಮತ್ತೊಂದು ಪುಟ ತೆರೆಯುತ್ತಾನೆ ಅದರಲ್ಲಿ ಮತ್ತೊಬ್ಬ ಸ್ನೇಹಿತ ಲಕ್ಷಗಟ್ಟಲೆ ಲಾಟರಿ ಗೆಲ್ಲುತ್ತಾನೆಂದಿರುತ್ತದೆ. ಅವನಿಗೆ ಲಾಟರಿ ಸಿಗಬಾರದು ಎಂದು ಬರೆಯುತ್ತಾನೆ. 

ಮತ್ತೊಂದು ಪುಟ ತೆರೆಯುತ್ತಾನೆ. ಅದರಲ್ಲಿ ಅವನ ಆಪ್ತ ಗೆಳತಿ ಆಗರ್ಭ ಶ್ರೀಮಂತನನ್ನು ಮದುವೆಯಾಗುತ್ತಾಳೆ ಎಂದಿರುತ್ತದೆ.ಆಪ್ತ ಗೆಳತಿ ಆಗರ್ಭ ಶ್ರೀಮಂತ ವ್ಯಕ್ತಿಯನ್ನು  ಮದುವೆಯಾಗಬಾರದೆಂದು ಬರೆಯುತ್ತಾನೆ. 

ಮತ್ತೊಂದು ಪುಟ ತೆರೆಯುತ್ತಾನೆ. ಪಕ್ಕದ ಮನೆಯ ರೈತ ಬೆಳೆದ ಬೆಳೆಗೆ ಒಳ್ಳೆಯ ಬೆಲೆ ಸಿಕ್ಕಿ ಸಿರಿವಂತನಾಗುತ್ತಾನೆಂದು ಇರುತ್ತದೆ. ಅವನು ಸಿರಿವಂತ ನಾಗಬಾರದು ಎಂದು ಬರೆಯುತ್ತಾನೆ. ಕೊನೆಯ ಹಾಳೆ ತೆರೆಯುತ್ತಾನೆ. ಅದು ಖಾಲಿ ಹಾಳೆಯಾಗಿರುತ್ತದೆ. ಅದರಲ್ಲಿ ಬರೆಯಬೇಕೆನ್ನುವಷ್ಟರಲ್ಲಿ  ಯಮ ಆ ಪುಸ್ತಕವನ್ನು ಕಸಿದುಕೊಳ್ಳುತ್ತಾನೆ. ಏಕೆಂದರೆ ಅವನಿಗೆ ಕೊಟ್ಟ ಐದು ನಿಮಿಷದ ಗಡುವು  ಮುಗಿದು ಹೋಗಿರುತ್ತದೆ. ಆಗ ಯಮ ಹೇಳುತ್ತಾನೆ, "ನಿನ್ನ ಆಯಸ್ಸು ಮುಗಿದಿದೆ ನಡೆ" ಎಂದು. ಆಗ ಆ ವ್ಯಕ್ತಿ ಹೇಳುತ್ತಾನೆ ನನಗೆ ಅಂತ ನಾ ಏನು ಬರೆದುಕೊಳ್ಳಲಿಲ್ಲ ಎಂದು. ಆಗ ಯಮ ಹೇಳುತ್ತಾನೆ ನಿಮಗೆ ಅಂತ ಒಂದಷ್ಟು ವರ್ಷ ಆಯಸ್ಸು ಕೊಟ್ಟಿರುತ್ತೇವೆ. ಅದರಲ್ಲೂ ವರವೆಂದು ಒಂದೈದು ನಿಮಿಷ ಆಯಸ್ಸು ಕೊಟ್ಟರೂ ನಿಮ್ಮಬಗ್ಗೆ ಯೋಚಿಸದೆ ಪರರ ಅವನತಿಯ ಬಗ್ಗೆ ಯೋಚಿಸುತ್ತೀರಾ ಎಂದರೆ  ಏನು ಹೇಳೋಣ? 

ಜೀವನವಿಡೀ ಕೊಟ್ಟರು ನೀವೇನೆಂದು ತಿಳಿಯದೆ ಪರರ ಬಗ್ಗೆ ಆಲೋಚಿಸುವವರಿಗೆ ಇಲ್ಲಿಬದುಕುವ ಹಕ್ಕಿಲ್ಲವೆಂದು ಕರೆದೊಯ್ದುಬಿಡುತ್ತಾನೆ.

ನಮಗೆ ಅಂತ ಒಂದಷ್ಟು ಹಾಳೆಗಳಿವೆ.ನಮಗೆ ಅಂತ ಒಂದಷ್ಟು ದಿನಗಳಿವೆ.

ನಮಗೆ ಅಂತ ಒಂದು ಬದುಕಿದೆ.

ನಮಗೆ ಅಂತ ಒಂದು ದಾರಿಯಿದೆ.

ನಮಗೆ ಅಂತ ಏನಿದಿಯೋ ಅದು ಸನ್ಮಾರ್ಗದಲ್ಲಿರಲಿ ಅದು ಬಿಟ್ಟು  ಪರರ ಬಗ್ಗೆ ಅಸೂಯೆ ಪಡುವುದು ತರವಲ್ಲ. ಸರ್ವೇ ಜನಾಃ ಸುಖಿನೋಭವಂತು ಎಂಬ ಭಾವನೆ ನಮ್ಮದಾಗಲಿ.ತನ್ನಂತೆ ಪರರ ಬಗೆದೊಡೆ ಕೈಲಾಸ  ಬಿನ್ನಾಣವಕ್ಕು ಸರ್ವಜ್ಞ .ಅಲ್ಲವೇ?


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529




ಆರ್ಟಿಕಲ್ 370 #article370


 


ಆರ್ಟಿಕಲ್ 370 ...


ಪ್ರಕಾಶಕ ಮತ್ತು ಲೇಖಕರಾದ ಗೆಳೆಯ ಶಂಕರಾನಂದ್ ರವರ ಜೊತೆಯಲ್ಲಿ ಇತ್ತೀಚೆಗೆ ಐನಾಕ್ಸ್ ಥಿಯೇಟರ್ ನಲ್ಲಿ ಆರ್ಟಿಕಲ್ 370 ಚಿತ್ರ ವೀಕ್ಷಿಸಿದೆ.

ತುಮಕೂರಿನಲ್ಲಿ ಐನಾಕ್ಸ್ ಆರಂಭವಾದ ತರುವಾಯ ಕನ್ನಡ ಸೇರಿ ಹಿಂದಿ, ತೆಲುಗು,ಇಂಗ್ಲಿಷ್, ತಮಿಳು ಹೀಗೆ ವಿವಿಧ ಭಾಷೆಯ ಎಲ್ಲಾ ಜಾನರ್ ಸಿನಿಮಾ ನೋಡಿದ್ದರೂ ರಾಜಕೀಯ ಜ್ಞಾನ ನೀಡುವ ,ದೇಶದ ಭದ್ರತಾ ವಿಷಯ ಮತ್ತು ಏಕತೆಯ ಸಂದೇಶ ಸಾರುವ ಈ ಚಿತ್ರ ಗಮನಾರ್ಹವಾದದು ಎಂದು ನನಗನಿಸಿತು.


 2016 ರಿಂದ 2019 ರವರೆಗೆ ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸುವ ಹಿನ್ನೆಲೆಯಲ್ಲಿ ನಡೆದ ಅನೇಕ ಘಟನೆಗಳನ್ನು ಒಟ್ಟುಗೂಡಿಸಿ. ಉತ್ತಮ ಸ್ಕ್ರೀನ್ ಪ್ಲೇ ಮೂಲಕ ನಮಗೆ ಚಿತ್ರವನ್ನು ಸಮರ್ಪಕವಾಗಿ ತಲುಪಿಸಿದ ಚಿತ್ರತಂಡಕ್ಕೆ ಒಂದು ಮೆಚ್ಚುಗೆ ಹೇಳಲೇಬೇಕು.  

ಜೋನಿ ಹಕ್ಸರ್ ಎಂಬ ಗುಪ್ತಚರ ಅಧಿಕಾರಿಯ ಡಿ ಗ್ಲಾಮ್ ಪಾತ್ರದಲ್ಲಿ ಯಾಮಿ ಗೌತಮಿ ಅತ್ಯುತ್ತಮ ಅಭಿನಯ ನೀಡಿದ್ದಾರೆ. ತನ್ನ ತಂದೆಯ ಅಸಹಜ ಸಾವು ನೆನೆದು ಹಾಗೂ ಜೀವದ ಗೆಳೆಯ ಅಸುನೀಗಿದ ಸಮಯದಲ್ಲಿ ನೋವಿನಿಂದ ಬಳಲುವ ಅಭಿನಯ ಗಮನ ಸೆಳೆಯುತ್ತದೆ.  ತಮಿಳುನಾಡು ಮೂಲದ  ಗೃಹ ಕಾರ್ಯದರ್ಶಿಯಾಗಿ  ಪ್ರಿಯ ಮಣಿಯವರದು ಪ್ರಬುದ್ದ ಅಭಿನಯ.370ನೇ ವಿಧಿಯ  ರದ್ದತಿಗೆ ಕಾರಣವಾಗುವ ಘಟನೆಗಳನ್ನು ಬಹಳ ಚಾಕಚಕ್ಯತೆಯಿಂದ ನಿರ್ವಹಿಸುವಲ್ಲಿ ನಿರ್ದೇಶಕರಾದ 

ಆದಿತ್ಯ ಸುಹಾಸ್ ಜಂಬಳೆರವರು ಪ್ರಿಯಾಮಣಿ 

ಅವರಿಂದ ಉತ್ತಮ ಅಭಿನಯ ತೆಗೆದಿದ್ದಾರೆ. 

 ಒಂದೆಡೆ ಬಿಲ್ ಮಂಡನೆಯ  ಹಿನ್ನೆಲೆಯಲ್ಲಿ ನಡೆಯುವ ರಾಜಕೀಯ ಚಟುವಟಿಕೆಗಳು, ಕಣಿವೆಯಲ್ಲಿ ನಡೆವ ಉಗ್ರ ಚಟುವಟಿಕೆಗಳು,  ಅವುಗಳನ್ನು ನಿಭಾಯಿಸಲು ಪಿ ಎಂ ಓ ಕಛೇರಿಯ ಕಾರ್ಯಾಚರಣೆ  ಇವುಗಳು ಕೆಲವೊಮ್ಮೆ ನಮಗೆ ಜ್ಞಾನದ ಜೊತೆಯಲ್ಲಿ ಆಕ್ಷನ್ ಥ್ರಿಲ್ಲರ್ ರೀತಿಯಲ್ಲಿ  ನಮ್ಮನ್ನು ನಮ್ಮ ಆಸನದ ತುದಿಯಲ್ಲಿ ಇರಿಸುತ್ತದೆ.


ಇನ್ನೂ ಚಿತ್ರದ ಸಂಕಲನ ಬಹಳ ಚುರುಕಾಗಿರುವುದರಿಂದ ಸಿನಿಮಾ ನಿಮೆಗೆಲ್ಲಿಯೂ ಬೋರ್ ಆಗುವುದಿಲ್ಲ 

ವಿಶೇಷವಾಗಿ 370 ನೇ ವಿಧಿಯ ಕಾನೂನು ಅಂಶಗಳ ಚರ್ಚೆಯ ಸಮಯದಲ್ಲಿ  ಕ್ಯಾಮರಾ ಕೆಲಸ ಮತ್ತು  ಹಿನ್ನೆಲೆಯ  ಸಂಗೀತವು ಶ್ಲಾಘನೀಯವಾಗಿದೆ. 


ಚಿತ್ರ ನೋಡಿ ಥಿಯೇಟರ್ ನಿಂದ   ಹೊರ ಬರುವಾಗ ಕಾಲೇಜು ವಿದ್ಯಾರ್ಥಿಗಳು ಬಿಲ್ ಅನ್ನು ರಾಜ್ಯ ಸಭೆಯಲ್ಲಿ ಮಂಡಿಸಿದ ರೀತಿ, ಅಲ್ಲಿ ನಡೆದ ಚರ್ಚೆಯ ಪ್ರಮುಖಾಂಶಗಳ ಬಗ್ಗೆ ಮಾತನಾಡುವುದನ್ನು ಕೇಳಿಸಿಕೊಂಡ ನನಗೆ ನಿಜಕ್ಕೂ ಇದೊಂದು ಕಾಡುವ ಸಿನಿಮಾ ಎಂದನಿಸಿತು. ಬಿಲ್ ಮಂಡನೆಯ ಹಿನ್ನೆಲೆ, ಕಾನೂನಿನ ಜ್ಞಾನ, ಭದ್ರತೆ ,ಮುಂತಾದ ವಿಷಯಗಳು ಎಷ್ಟು ಮುಖ್ಯ ಎಂಬುದನ್ನು ರಾಜ್ಯಶಾಸ್ತ್ರದ ವಿದ್ಯಾರ್ಥಿಗಳು ಮತ್ತು ರಾಜಕೀಯ ಆಸಕ್ತರು ಈ ಸಿನಿಮಾ ನೋಡಿದರೆ ಒಂದು ನಿರ್ದಿಷ್ಟ ಜ್ಞಾನ ಲಭಿಸುತ್ತದೆ.ಒಟ್ಟಾರೆ ಹೇಳುವುದಾದರೆ ನಮ್ಮ ದೇಶದ ಎಲ್ಲ ನಾಗರಿಕರು  ನೋಡಲೇಬೇಕಾದ ಚಿತ್ರ ಇದು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಪ್ರೇಮ ಗೀತೆ

 ಬಾ

ನಲ್ಲೆ

ಸೇರೋಣ

ಸಂತಸದಿ 

ನಲಿದಾಡೋಣ

ಸಂಭ್ರಮಿಸುತಲಿ

ನಮ್ಮ ಪ್ರೀತಿಯನು 

ಜಗತ್ತಿಗೆ ತೋರಿಸೋಣ

ಪ್ರೇಮೋತ್ಸವ ಇದು

ನನ್ನ ನಿನ್ನ ಗೀತೆ

ಹಾಡೋಣ ಇಂದು

ಪ್ರೇಮಗೀತೆ

ಒಟ್ಟಾಗಿ 

ನಾನು

ನೀ


ಸಿಹಿಜೀವಿ ವೆಂಕಟೇಶ್ವರ






ಉತ್ಸವ

ಇದು