19 ಫೆಬ್ರವರಿ 2024

ಮಕ್ಕಳಲ್ಲಿ ಪೌರ ಪ್ರಜ್ಞೆ ಮೂಡಿಸುವ ಸಿ ಎಂ ಸಿ ಎ

 



ಮಕ್ಕಳಲ್ಲಿ  ಪೌರ ಪ್ರಜ್ಞೆ ಮೂಡಿಸುವ ಸಿ ಎಂ ಸಿ ಎ.



ಇಂದಿನ ಪೋಷಕರು ಮಕ್ಕಳಿಗೆ ಹೇಳುವ ಒಂದೇ ಮಾತು ಜಾಸ್ತಿ ಪರ್ಸೆಂಟೇಜ್ ತೆಗಿ, ಟೈಮ್ ವೇಸ್ಟ್ ಮಾಡಬೇಡ, ಕಲ್ಚರಲ್ ಆಕ್ಟಿವಿಟೀಸ್ ಏನೂ ಬೇಡ  ಬರೀ ಓದು ಸಾಕು.

ಹೀಗೆ ಬೆಳೆದ ಮಕ್ಕಳಿಗೆ 

ಪ್ರಜಾಪ್ರಭುತ್ವ, ಸರ್ಕಾರ, ಸಾಮಾಜಿಕ ಸಮಾನತೆ, ಲಿಂಗ ಸಮಾನತೆ, ಬಹುತ್ವ ಇವೆಲ್ಲವೂ ಹೇಗೆ ತಾನೆ ಅರ್ಥವಾಗಬೇಕು?  

ಕೆಲ ಶಾಲಾ ಕಾಲೇಜುಗಳಲ್ಲಿ ಈ ಕುರಿತಾದ ಪ್ರಯತ್ನಗಳಾಗಿರುವುದು ಸ್ವಾಗತಾರ್ಹ ಆದರೆ ಅಷ್ಟೊಂದು ವ್ಯಾಪಕವಾಗಿ ಆಗಿಲ್ಲದಿರುವುದು ಅಷ್ಟೇ ಸತ್ಯ. ಈ ನಿಟ್ಟಿನಲ್ಲಿ

ಬೆಂಗಳೂರಿನ ಚಿಲ್ಡ್ರನ್  ಮೂವ್‌ಮೆಂಟ್ ಫಾರ್ ಸಿವಿಕ್ ಅವೇರ್‌ನೆಸ್‌ ಸಂಸ್ಥೆಯು (ಸಿಎಂಸಿಎ) ಎರಡು ದಶಕಕ್ಕೂ ಹೆಚ್ಚಿನ ಅವಧಿಯಿಂದ ಕೆಲಸ ಮಾಡುತ್ತಿದೆ.

ಐದು ವರ್ಷಗಳ ಹಿಂದೆ ನಾನು ಈ ಸಂಸ್ಥೆಗೆ ಭೇಟಿ ನೀಡಿದ್ದೆ  ಆ ಸಂಸ್ಥೆಯಲ್ಲಿ  ಸಹಾಯಕ ನಿರ್ದೇಶಕರಾಗಿ  ಕಾರ್ಯನಿರ್ವಹಿಸುವ ಮರಳಪ್ಪ ರವರು ಸಂಸ್ಥೆಯ ಕಾರ್ಯ ವಿಧಾನವನ್ನು ವಿವರಿಸಿದ್ದರು.


'ಪಬ್ಲಿಕ್ ಅಫೇರ್ಸ್ ಸೆಂಟರ್' ಸಂಸ್ಥೆಯ ಯೋಜನೆಯಾಗಿ 'ಚಿಲ್ಡ್ರನ್    ಮೂವ್‌ಮೆಂಟ್ ಫಾರ್ ಸಿವಿಕ್ ಅವೇರ್‌ನಸ್‌' ಹುಟ್ಟು ಪಡೆಯಿತು. ನಂತರದ ದಿನಗಳಲ್ಲಿ ಈ ಯೋಜನೆಯೇ ಸಂಸ್ಥೆಯ ರೂಪ ಪಡೆದುಕೊಂಡಿತು. ಮಂಜುನಾಥ ಸದಾಶಿವ, ವೃಂದಾ ಭಾಸ್ಕರ್ ಹಾಗೂ ಪ್ರಿಯಾ ಕೃಷ್ಣಮೂರ್ತಿ ಅವರು ಸೇರಿ ಈ ಸಂಸ್ಥೆಯನ್ನು 2000ನೇ ಇಸ್ವಿಯಲ್ಲಿ ಹುಟ್ಟುಹಾಕಿದರು.


ಮಕ್ಕಳನ್ನು ಜವಾಬ್ದಾರಿಯುತ ಪ್ರಜೆಯಾಗಿಸಲು, ಅವರಲ್ಲಿ ಜೀವನ ಕೌಶಲಗಳನ್ನು ತುಂಬಲು ಈ ಸಂಸ್ಥೆ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಸಂಸ್ಥೆಯ ಕಾರ್ಯಕರ್ತರು ಶಾಲೆ ಶಾಲೆಗಳಿಗೆ ತೆರಳಿ ಸಂಸ್ಥೆಯ ಕುರಿತು, ಅವರ ಯೋಜನೆಯ ಕುರಿತು ವಿವರಿಸುತ್ತಾರೆ. ಅದು, ಸರ್ಕಾರಿ ಶಾಲೆ ಇರಬಹುದು, ಖಾಸಗಿ ಶಾಲೆ ಇರಬಹುದು. ಶಾಲೆಯು ಒಪ್ಪಿಗೆ ನೀಡಿದರೆ, ಸಂಸ್ಥೆಯು ತನ್ನ ಕಾರ್ಯಚಟುವಟಿಕೆಗಳನ್ನು ಆರಂಭಿಸುತ್ತದೆ. ಶಾಲೆಗಳೂ ಖುದ್ದಾಗಿ ಸಂಸ್ಥೆಯನ್ನು ಸಂಪರ್ಕಿಸಬಹುದು.


6ನೇ ತರಗತಿಯಿಂದ 10ನೇ ತರಗತಿಯ ವರೆಗಿನ ಮಕ್ಕಳನ್ನು ಸಂಸ್ಥೆಯು ಮುಖ್ಯ ಗುರಿಯನ್ನಾಗಿಸಿಕೊಂಡಿದೆ. 6ನೇ ತರಗತಿಯ ಒಬ್ಬ ಮಗುವು ಈ ಯೋಜನೆಯ ಭಾಗವಾದರೆ, ಆ ಮಗುವು 10ನೇ ತರಗತಿಗೆ ಬರುವವರೆಗೂ ಸಂಸ್ಥೆಯ ಯೋಜನೆಗಳ ಭಾಗವಾಗಿಯೇ ಇರುತ್ತದೆ. ಶಾಲೆಯೊಂದರಲ್ಲಿ ವಾರಕ್ಕೆ ಒಂದು ತರಗತಿಯನ್ನು ಪ್ರತಿ ತರಗತಿಯ ಮಕ್ಕಳಿಗೆ ಸಂಸ್ಥೆಯು ನಡೆಸುತ್ತದೆ. ತಜ್ಞರ ಮೂಲಕ ಸಂಸ್ಥೆಯು ತನ್ನದೇ ಪಠ್ಯಕ್ರಮವನ್ನೂ ರೂಪಿಸಿಕೊಂಡಿದೆ. ಸಹಾನುಭೂತಿ, ಒಂದು ವಿಷಯದ ಕುರಿತು ವಿಮರ್ಶೆ ಮಾಡುವುದು, ಕ್ರಿಯಾಶೀಲ ವಿಚಾರವಂತಿಕೆಯನ್ನು ಬೆಳೆಸಿಕೊಳ್ಳುವುದು, ಉತ್ತಮ ಸಂವಹನ ಹೀಗೆ ಅನೇಕ ಜೀವನ ಕೌಶಲಗಳನ್ನೂ ಸಂಸ್ಥೆ ಕಲಿಸಿಕೊಡುತ್ತದೆ.


ಪ್ರಾಯೋಗಿಕ ಚಟುವಟಿಕೆಗಳೇ ಸಂಸ್ಥೆಯ ಪಠ್ಯಕ್ರಮ. ಕರ್ನಾಟಕವಲ್ಲದೆ, ತಮಿಳುನಾಡು, ಮಹಾರಾಷ್ಟ್ರ ಮತ್ತು ಒಡಿಶಾದಲ್ಲಿಯೂ ತನ್ನ ಕಾರ್ಯ ಚಟುವಟಿಕೆಗಳನ್ನು ಸಂಸ್ಥೆ ವಿಸ್ತರಿಸಿ ಕೊಂಡಿದೆ. ತನ್ನೆಲ್ಲಾ ಕಾರ್ಯಚಟು ವಟಿಕೆಗಳನ್ನು ಸಂಸ್ಥೆ ಉಚಿತವಾಗಿ ಮಾಡುತ್ತದೆ. ದಾನಿಗಳ ದೇಣಿಗೆಯೇ ಸಂಸ್ಥೆಯ ಆರ್ಥಿಕ ಬೆನ್ನೆಲುಬು. 


ಹಾಗೂ ನಾಗರಿಕ ಸಮಸ್ಯೆಗಳ ಕುರಿತು ತಿಳಿಸಿಕೊಡಲು 'ಸಿಎಂಸಿಎ ಕ್ಲಬ್' ಯೋಜನೆಯನ್ನು ಸಂಸ್ಥೆ ರೂಪಿಸಿದೆ. ಜೊತೆಗೆ, ಸರ್ಕಾರದೊಂದಿಗೆ ಕೈಜೋಡಿಸಿ, ಮಕ್ಕಳ ಗ್ರಾಮ ಸಭೆಗಳನ್ನೂ ಸಂಸ್ಥೆ ಆಯೋಜಿಸುತ್ತದೆ. 'ನನ್ನ ಒಳಿತಿಗಾಗಿ ಗ್ರಂಥಾಲಯ' ಎನ್ನುವ ಯೋಜನೆಯಡಿ, ಗ್ರಾಮದಲ್ಲಿನ ಗ್ರಂಥಾಲಯಕ್ಕೆ ಬರುವಂತೆ ಮಕ್ಕಳನ್ನು ಹುರಿದುಂಬಿಸುತ್ತದೆ. ನಾಗರಿಕ ವಿಷಯಗಳ ಕುರಿತು ಜಾಗೃತಿ ಮೂಡಿಸಲು, ಮಕ್ಕಳಿಂದ ಹಲವು ಚಟುವಟಿಕೆಗಳನ್ನು ಮಾಡಿಸುತ್ತದೆ. ಕಾರ್ಯಚಟುವಟಿಕೆ: ಶಾಲೆಯಲ್ಲಿ ಶೌಚಾಲಯ ಇಲ್ಲದಿದ್ದರೆ, ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇಲ್ಲದಿದ್ದರೆ, ತಮ್ಮ ಮನೆಯ ಎದುರು ಕಸ ಸುರಿಯುತ್ತಿದ್ದರೆ, ಬಾಲ ಕಾರ್ಮಿಕ ಪದ್ಧತಿ ನಡೆಯುತ್ತಿದ್ದರೆ... ಹೀಗೆ ಅನೇಕ ಸಾಮಾಜಿಕ ಸಮಸ್ಯೆಗಳ ಕುರಿತು, ಪರಿಸರ ಸಂರಕ್ಷಣೆ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ. 

ಹೀಗೆ ಸಿ ಎಮ್ ಸಿ‌ಎ  ಭವಿಷ್ಯದ ಜವಾಬ್ದಾರಿಯುತ ನಾಗರಿಕರ ನಿರ್ಮಾಣಕ್ಕೆ ಉತ್ತಮ ಯೋಜನೆಗಳನ್ನು ರೂಪಿಸಿ ಕಾರ್ಯಪ್ರವೃತ್ತವಾಗಿದೆ.ಇವರೊಂದಿಗೆ ಸಮುದಾಯವು ಸಕ್ರಿಯವಾಗಿ ಪಾಲ್ಗೊಂಡು ಸಾರ್ವಜನಿಕರು ಸಹಕಾರ ನೀಡಿದರೆ ಜವಾಬ್ದಾರಿಯುತ ಸಮಾಜ ನಮ್ಮದಾಗುತ್ತದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು.

17 ಫೆಬ್ರವರಿ 2024

ಜ್ಞಾನಪೀಠವೇರಿದ ಗುಲ್ಜಾರ್ ಗೆ ಜೈ... ಹೋ.


 ಜ್ಞಾನಪೀಠವೇರಿದ ಗುಲ್ಜಾರ್ ಗೆ ಜೈ... ಹೋ...



ಸಂಪೂರಣ್ ಸಿಂಗ್ ಕಾಲ್ರಾ ಎಂದರೆ ಬಹಳಷ್ಟು ಜನರಿಗೆ ಬೇಗ ಅರ್ಥವಾಗದಿರಬಹುದು. ಜೈ ಹೋ ಹಾಡಿನ ಗೀತ ರಚನೆಕಾರ ಯಾರೆಂದರೆ ತಟ್ಟನೆ ನೆನಪಾಗುವೆ ಹೆಸರೇ ಗುಲ್ಜಾರ್.

ಕವಿಯಾಗಿ, ಚಿತ್ರ ನಿರ್ದೇಶಕರಾಗಿ, ಗೀತ ರಚನಕಾರರಾಗಿ ಪ್ರಸಿದ್ಧಿ ಪಡೆದಿದ್ದಾರೆ.  ಹಿಂದಿ-ಉರ್ದು, ಪಂಜಾಬಿ, ಮತ್ತು ಹಲವು ಉಪಭಾಷೆಗಳಾದ ಬ್ರಜ್, ಖಾರಿಬೋಲಿ, ಹರ್ಯಾಣ್ವಿ, ಮರ್ವಾರಿ ಭಾಷೆಗಳಲ್ಲಿ ಅವರದ್ದು ಅಪ್ರತಿಮ ಪ್ರಭುತ್ವ. 

ಇವರಿಗೆ ಈ ವರ್ಷದ ಭಾರತದ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪುರಸ್ಕಾರ ಜ್ಞಾನಪೀಠ ಪ್ರಶಸ್ತಿ ಲಭಿಸಿರುವುದು ಸಂತಸದ ವಿಷಯ.


ಗುಲ್ಜಾರರು ಈಗಿನ ಪಾಕಿಸ್ಥಾನದ ಭಾಗವಾಗಿರುವ ‘ದಿನಾ ಝೇಲಂ’ ಎಂಬ ಊರಿನಲ್ಲಿ ಸಿಖ್  ಮನೆತನವೊಂದರಲ್ಲಿ ಆಗಸ್ಟ್ 18. 1936ರಲ್ಲಿ ಜನಿಸಿದರು.  ಗುಲ್ಜಾರರು ಕವಿಯಾಗುವುದಕ್ಕೆ ಮುಂಚೆ ದೆಹಲಿಯ ಗ್ಯಾರೇಜ್ ಒಂದರಲ್ಲಿ ಕಾರ್ ಮೆಕಾನಿಕ್ ಆಗಿದ್ದರು.  ಸಿನಿಮಾ ಸಾಹಿತಿಯಾಗಿ ಗುಲ್ಜಾರರು ಮೊದಲಿಗೆ ಬಿಮಲ್ ರಾಯ್ ಮತ್ತು ಹೃಷಿಕೇಶ್ ಮುಖರ್ಜಿ ಅವರೊಂದಿಗೆ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದರು.  


ಗೀತರಚನಕಾರರಾಗಿ ಗುಲ್ಜಾರರು ಪ್ರವೇಶ ಪಡೆದದ್ದು  1963ರಲ್ಲಿ    ಸಚಿನ್ ದೇವ್ ಬರ್ಮನ್ ಸಂಗೀತ ನೀಡಿದ ‘ಬಂಧಿನಿ’ ಚಿತ್ರದ ಮೂಲಕ.  ಆ ಚಿತ್ರದ ಎಲ್ಲ ಹಾಡುಗಳನ್ನು ಬರೆದ ಶೈಲೇಂದ್ರರು ಗುಲ್ಜಾರರಿಗೆ ‘ಮೋರಾ ಗೋರ ಆಂಗ್ ಲಾಯ್ಲೆ’ ಗೀತೆಯನ್ನು ಬರೆಯುವ ಅವಕಾಶವನ್ನು ಕಲ್ಪಿಸಿಕೊಟ್ಟರು.  ಈ ಹಾಡಿಗೆ ಅಭಿನಯ ನೀಡಿದವರು ನೂತನ್.  ಗುಲ್ಜಾರರ  ಚಿತ್ರಗೀತೆಗಳು ಸಚಿನ್ ದೇವ್ ಬರ್ಮನ್ ಮತ್ತು ರಾಹುಲ್ ದೇವ್ ಬರ್ಮನ್ ಸಂಗೀತ ನಿರ್ದೇಶನದಲ್ಲಿ  ಹೆಚ್ಚು ಪ್ರಸಿದ್ಧಿ ಪಡೆದವು.  ಹೀಗಾಗಿ ಬರ್ಮನ್ ಅವರನ್ನು ತಮ್ಮ ಚಿತ್ರ ಜೀವನಕ್ಕೆ ಇಂಬುಕೊಟ್ಟವರು ಎಂದು ಗುಲ್ಜಾರ್ ಕೃತಜ್ಞತೆಯಿಂದ ಸ್ಮರಿಸುತ್ತಾರೆ.  ಸಲೀಲ್ ಚೌಧುರಿ ಸಂಗೀತ ನಿರ್ದೇಶನದ ಆನಂದ್, ಮೇರೆ ಅಪ್ನೆ ಮುಂತಾದ ಚಿತ್ರಗಳಲ್ಲಿ ಗುಲ್ಜಾರರ ಗೀತೆಗಳು ಪ್ರಶಸ್ತಿ ಪಡೆದವು.  ಮೌಸಂ ಚಿತ್ರದ ಮದನ್ ಮೋಹನ್; ವಿಶಾಲ್ ಭಾರದ್ವಾಜ್ ಸಂಗೀತ ನಿರ್ದೇಶನದ  ‘ಮ್ಯಾಚಿಸ್’, ಓಂಕಾರ, ಕಾಮಿನಯ್; ಎ ಆರ್ ರೆಹಮಾನ್ ಅವರ ದಿಲ್ ಸೆ, ಗುರು, ಸ್ಲಂ ಡಾಗ್ ಮಿಲಿಯನೇರ್, ರಾವಣ್; ಶಂಕರ್ ಎಹಸಾನ್ ಲಾಯ್ ಅವರ ಬಂಟಿ ಔರ್ ಬಬ್ಲಿ ಹೀಗೆ ಎಲ್ಲ ತಲೆಮಾರುಗಳ ಸಂಗೀತ ನಿರ್ದೇಶಕರ ಜೊತೆಯಲ್ಲಿ ಸಾಹಿತ್ಯ ರಚಿಸಿದ ಕೀರ್ತಿ ಗುಲ್ಜಾರರಿಗೆ ಸೇರಿದೆ.


ಗೀತ ರಚನಾಕಾರರಾಗಿ ಗುಲ್ಜಾರರು ಸಚಿನ್ ದೇವ್ ಬರ್ಮನ್, ಸಲಿಲ್ ಚೌದುರಿ, ಶಂಕರ ಜೈ ಕಿಶನ್. ಹೇಮಂತ್ ಕುಮಾರ್, ರಾಹುಲ್ ದೇವ್ ಬರ್ಮನ್, ಲಕ್ಷ್ಮೀಕಾಂತ್ ಪ್ಯಾರೆಲಾಲ್, ಮದನ್ ಮೋಹನ್, ಎ ಆರ್ ರಹಮಾನ್,   ರಾಜೇಶ್ ರೋಶನ್, ಅನು ಮಲಿಕ್, ಶಂಕರ್- ಎಹಸಾನ್ -ಲಾಯ್,  ವಿಶಾಲ್ ಭಾರದ್ವಾಜ್ ಮುಂತಾದ ಸಂಗೀತ ನಿರ್ದೇಶಕರೊಂದಿಗಿನ ಜೊತೆಗಾರಿಕೆಯಲ್ಲಿ ಎದ್ದು ಕಾಣುತ್ತಾರೆ.


ಕೇವಲ ಗೀತ ರಚನೆ ಮಾತ್ರವಲ್ಲದೆ ಅವರು ಹಲವಾರು ಚಿತ್ರಗಳಿಗೆ ಸಾಹಿತ್ಯ, ಚಿತ್ರಕತೆ ಮತ್ತು ಸಂಭಾಷಣೆಗಳನ್ನೂ ಒದಗಿಸಿದ್ದಾರೆ.  ಗುಲ್ಜಾರರು ನಿರ್ದೇಶಿಸಿದ ಚಿತ್ರಗಳು ಹಲವಾರು ಪ್ರಶಸ್ತಿಗಳನ್ನು ಗಳಿಸಿ ವಿದ್ವಜ್ಜನರಿಂದ ಮೊದಲ್ಗೊಂಡು ಸಾಮಾನ್ಯರವರೆಗೆ ಎಲ್ಲ ವರ್ಗದ ಜನರನ್ನೂ ಆಕರ್ಷಿಸಿವೆ.  ದೂರದರ್ಶನದಲ್ಲಿ ಅವರು  ಮಿರ್ಜಾ ಗಾಲಿಬ್, ತಹರೀರ್ ಮುನ್ಷಿ ಪ್ರೇಮಚಂದ್ ಕಿ ಕಹಾನಿ ಮುಂತಾದ ಧಾರಾವಾಹಿಗಳನ್ನು ಸಹಾ ಸೃಷ್ಟಿಸಿದ್ದಾರೆ.  ಹೆಲೋ ಜಿಂದಗಿ, ಪೊಟ್ಲಿ ಬಾಬಾ ಕಿ, ಜಂಗಲ್ ಬುಕ್ ಮುಂತಾದ ದೂರದರ್ಶನ ದೃಶ್ಯಾವಳಿಗಳಿಗೆ  ಗೀತೆ ರಚನೆ ಸಹಾ ಮಾಡಿದ್ದಾರೆ.


ಆಶೀರ್ವಾದ್, ಆನಂದ್, ಖಾಮೋಷಿ ಮುಂತಾದ ಪ್ರಸಿದ್ಧ ಚಿತ್ರಗಳಿಗೆ ಚಿತ್ರಕತೆ ಮತ್ತು ಸಂಭಾಷಣೆ ಬರೆದ ನಂತರದಲ್ಲಿ ಗುಲ್ಜಾರರು  1971ರಲ್ಲಿ ‘ಮೇರೆ ಅಪ್ನೆ’ ಎಂಬ ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟರು.  ತಪನ್ ಸಿನ್ಹಾ ಅವರ ಬೆಂಗಾಲಿ ಚಿತ್ರ ‘ಅಪರಿಜನ್’ ಅವರ ಹಿಂದಿ ಅವತರಣಿಕೆಯಾದ ಈ ಚಿತ್ರದಲ್ಲಿ ಮೀನಾ ಕುಮಾರಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.  ಈ ಚಿತ್ರದ ಸಾಧಾರಣ ಯಶಸ್ಸಿನ ನಂತರದಲ್ಲಿ ಗುಲ್ಜಾರರು ‘ಪರಿಚಯ್’ ಮತ್ತು ‘ಕೋಶಿಶ್’ ಚಿತ್ರಗಳನ್ನೂ ನಿರ್ದೇಶಿಸಿದರು.  ಪರಿಚಯ್ ಚಿತ್ರ ಬೆಂಗಾಲಿ ಬಾಷೆಯ ‘ರಂಗೀನ್ ಉತ್ತರೈನ್’ ಕಥೆಯನ್ನು ಆಧರಿಸಿ  ಇಂಗ್ಲಿಷ್ ಭಾಷೆಯ ‘ದಿ ಸೌಂಡ್ ಆಫ್ ಮ್ಯೂಸಿಕ್’ ಪ್ರೇರಣೆ ಪಡೆದು  ಜನ ಮೆಚ್ಚುಗೆ ಗಳಿಸಿತು.  ‘ಕೋಶಿಶ್’ ಚಿತ್ರ ಕಿವುಡು ಮೂಖ ದಂಪತಿಗಳ ಕಥಾಹಂದರವನ್ನೂ ಒಳಗೊಂಡು ಜಯಾಬಾಧುರಿ ಮತ್ತು ಸಂಜೀವ್ ಕುಮಾರ್ ಅವರ ಅಪ್ರತಿಮ ಅಭಿನಯವನ್ನು ಹೊರತಂದಿತ್ತು.  ಸಂಜೀವ್ ಕುಮಾರ್ ಈ ಚಿತ್ರದ ಅಭಿನಯಕ್ಕಾಗಿ ಶ್ರೇಷ್ಠ ನಟ ಪ್ರಶಸ್ತಿ ಪಡೆದರು.   1973ರಲ್ಲಿ ತೆರೆಕಂಡ ‘ಅಚಾನಕ್’ ಗುಲ್ಜಾರರ ಮತ್ತೊಂದು ಶ್ರೇಷ್ಠ ಚಿತ್ರವಾಗಿ ಅಪಾರ ಜನಪ್ರಿಯತೆಯ ಜೊತೆಗೆ ಪ್ರಶಸ್ತಿಗಳನ್ನೂ ಗಳಿಸಿಕೊಂಡಿತು.  ಗುಲ್ಜಾರರ ‘ಅಂಧಿ’ ಮತ್ತೊಂದು ಶ್ರೇಷ್ಠ ಚಿತ್ರ.  ‘ಕಾಲಿ ಆಂಧಿ’ ಎಂಬ ಕಮಲೇಶ್ವರ್ ಅವರ ಕಥೆಯನ್ನು ಆಧರಿಸಿದ ಈ ಚಿತ್ರ ಅಪಾರ ಜನಪ್ರಿಯತೆ ಮತ್ತು ಪ್ರಶಸ್ತಿಗಳನ್ನು ಗಳಿಸಿತ್ತು.  ಈ ಚಿತ್ರಕತೆ ತಾರಕೇಶ್ವರ ಸಿನ್ಹ ಅವರ ಜೀವನವನ್ನು ಆಧರಿಸಿತ್ತು.  .ಅವರ ಮುಂದಿನ ಚಿತ್ರ ಖುಷ್ಬೂ.  ಅವರ ‘ಮೌಸಂ’ ಚಿತ್ರ ಮತ್ತೊಂದು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆಯಿತು.  ಶರ್ಮಿಳಾ ಠಾಗೂರ್ ಈ ಚಿತ್ರದ ಅಭಿನಯಕ್ಕಾಗಿ ಶ್ರೇಷ್ಠ ನಟಿ ಪ್ರಶಸ್ತಿ ಪಡೆದರು.  ಸಂಜೀವ್ ಕುಮಾರರ ಅಭಿನಯ ಕೂಡಾ ಅಷ್ಟೇ ಶ್ರೇಷ್ಠ ಮಟ್ಟದ್ದಾಗಿತ್ತು.  ಅವರ ‘ಅಂಗೂರ್’ ಚಿತ್ರ ಅತ್ಯುತ್ತಮ ಹಾಸ್ಯ ಚಿತ್ರಗಳ ಪರಂಪರೆಯಲ್ಲಿ ನಿಲ್ಲುವಂತದ್ದು.  ಅವರ ಇನ್ನಿತರ ಚಿತ್ರಗಳಾದ ಇಜಾಸತ್, ಮಾಚಿಸ್, ಹು ತು ತು ಮುಂತಾದವು ಕೂಡ ಚಿತ್ರ ವಿದ್ವಾಂಸರ ಮೆಚ್ಚುಗೆ ಪಡೆದಂತಹವು.  ಗುಲ್ಜಾರರ ನಿರ್ದೇಶನದಲ್ಲಿ ಸಂಜೀವ್ ಕುಮಾರ್, ಜಯಾ ಬಾಧುರಿ, ಜಿತೇಂದ್ರ, ವಿನೋದ್ ಖನ್ನ, ಹೇಮಾಮಾಲಿನಿ ಮುಂತಾದವರ ಶ್ರೇಷ್ಠ ಅಭಿನಯ ಬೆಳಕಿಗೆ ಬಂತು.  ದೂರದರ್ಶನದಲ್ಲಿ ಮೂಡಿ ಬಂದ ಮಿರ್ಜಾ ಗಾಲಿಬ್ ಸರಣಿಯಲ್ಲಿ ನಸೀರುದ್ದೀನ್ ಷಾ  ಅಭಿನಯಿಸಿದ್ದರು.  ಇನ್ನು ಅವರ ಚಿತ್ರಗಳ ಹಾಡುಗಳಲ್ಲಿ ಪರಿಚಯ್ ಚಿತ್ರದ ‘ಮುಸಾಫಿರ್ ಹೂ ಯಾರೋ’, ಆಂಧಿಯ ‘ತೆರೆ ಬಿನಾ ಜಿಂದಗಿ ಸೆ ಕೊಯಿ’,’ಇಜಾಸತ್ ಚಿತ್ರದ ‘ಮೇರಾ ಕುಚ್ ಸಮಾನ್’, ಮಾಸೂಮ್ ಚಿತ್ರದ ‘ತುಜ್ಸೆ ನಾರಾಜ್ ನಹಿ ಜಿಂದಗಿ’ ಮುಂತಾದವು ಚಿರಸ್ಮರಣೀಯವಾಗಿವೆ.  ಅವರ ನಿರ್ದೇಶನದ ಹೊರತಾಗಿ ಕೂಡಾ ಇತರ ಚಿತ್ರಗಳಲ್ಲಿ ಇಂದೂ ಮೂಡಿ ಬರುತ್ತಿರುವ ಅವರ ಗೀತ ಸಾಹಿತ್ಯ ಜನಮನವನ್ನು ನಿರಂತರ ಬೆಳಗುತ್ತಾ ಸಾಗಿದೆ.


ಕವಿಯಾಗಿ ಗುಲ್ಜಾರ್ ಅವರ ಕಾವ್ಯಗಳು ಚಾಂದ್ ಪುಕರಾಜ್ ಕಾ, ರಾತ್ ಪಷ್ಮಿನೇ ಕಿ, ಪಂದ್ರಾಹ್ ಪಾಂಚ್ ಪಚ್ಹತ್ತರ್ ಮುಂತಾದ ಕಾವ್ಯ ಸಂಕಲನಗಳಲ್ಲಿ ದಾಖಲಾಗಿವೆ.  


 ಗುಲ್ಜಾರ್ ರವರಿಗೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ 

  2008ರಲ್ಲಿ   ಪದ್ಮಭೂಷಣ,

2002ರಲ್ಲಿ   ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ,

ಸ್ಲಂ ಡಾಗ್ ಮಿಲಿಯನೇರ್’ ಚಿತ್ರದ ‘ಜೈ ಹೋ’ ಗೀತೆಗಾಗಿ ಸಂದ ಅಕಾಡೆಮಿ ಪ್ರಶಸ್ತಿ,

ಗ್ರಾಮಿ ಪ್ರಶಸ್ತಿ ಮುಂತಾದವು ಗುಲ್ಜಾರ್ ಅವರ ವಿದ್ವತ್ಪೂರ್ಣ ಹಾಗೂ ಜನಪ್ರಿಯ ಅಭಿವ್ಯಕ್ತಿಗಳೆರಡೂ ಕ್ಷೇತ್ರಗಳಲ್ಲಿನ ಅಪ್ರತಿಮ ಸಾಧನೆಗಳ ದ್ಯೋತಕವಾಗಿವೆ.

2014ರಲ್ಲಿ ಪ್ರತಿಷ್ಠಿತ ಡಾ. ಬಾಬಾಸಾಹೇಬ್ ಫಾಲ್ಕೆ ಪ್ರಶಸ್ತಿ ಅವರ ಮುಡಿಗೇರಿದೆ. ಪ್ರಸ್ತುತ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ ಅಭಿನಂದನೆಗಳು ಗುಲ್ಜಾರ್ ಜಿ..


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529



ನಮ್ಮ @ಸಂವಿಧಾನ ನಮ್ಮ ಹೆಮ್ಮೆ..

 


ನಮ್ಮ  #ಸಂವಿಧಾನ ನಮ್ಮ ಹೆಮ್ಮೆ..


ಸುಮಾರು ಇನ್ನೂರೈವತ್ತು  ವರ್ಷಗಳ ದಾಸ್ಯ ಸಂಕೋಲೆಯಿಂದ 1947 ರಲ್ಲಿ  ಮುಕ್ತಿ ಪಡೆದ ಭಾರತಕ್ಕೆ ನಮ್ಮದೇ ಆದ ಸುಶಾಸನ ಮಾಡಿಕೊಂಡು ಆಳ್ವಿಕೆ ಮಾಡುವ ಸಂಧಿ ಸಮಯದಲ್ಲಿ ಪ್ರಪಂಚವೇ ಬೆರಗುಗಣ್ಣಿನಿಂದ ನೋಡುವಂತ ಭಾರತೀಯರೆಲ್ಲ ಹೆಮ್ಮೆ ಪಡುವ ಸಂವಿಧಾನ ರಚನೆ ಮಾಡಿ ತೋರಿಸಿದ್ದು ಪ್ರತಿಯೊಬ್ಬ ಭಾರತೀಯನ ಹೆಮ್ಮೆ. 


ಇಂತಹ ಮಹಾನ್ ಸಂವಿಧಾನ ರಚನೆಯಲ್ಲಿ ಡಾ ಬಾಬು ರಾಜೇಂದ್ರ ಪ್ರಸಾದ್ ಅಧ್ಯಕತೆಯಲ್ಲಿ ಮುನ್ನೂರಕ್ಕೂ ಹೆಚ್ಚು ಸದಸ್ಯರು ವಿವಿದ ಕ್ಷೇತ್ರಗಳನ್ನು ಪ್ರತಿನಿಧಿಸಿ ಭಾಗವಹಿಸಿ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ.

ಅದರಲ್ಲೂ ಕರಡು ಸಮಿತಿಯ ಅಧ್ಯಕ್ಷರಾದ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿ "ಸಂವಿಧಾನದ ಶಿಲ್ಪಿ " ಎಂದು ಮಾನ್ಯರಾಗಿದ್ದಾರೆ.

ಸುದೀರ್ಘವಾದ ಹೋರಾಟದ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ಕೊಡಲು ಬ್ರಿಟಿಷರು ತೀರ್ಮಾನಿಸಿದರು.

ಕ್ಲಿಮೆಂಟ್ ಆಟ್ಲಿ ಎಂಬಾತ ಬ್ರಿಟಿಷ್ ಪ್ರಧಾನಮಂತ್ರಿಯಾದರು. ಅವರು 1946ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಕೊಡುವ ಭರವಸೆಯನ್ನು ಹಾಗೂ ಅದಕ್ಕೆ ಪೂರಕವಾಗಿ ಸಂವಿಧಾನ ಸಭೆಯನ್ನು ರಚಿಸಿಕೊಳ್ಳಲು ಅನುಮತಿಯನ್ನು ನೀಡಿದರು.


ಅದರಂತೆ 1946ರಲ್ಲಿ ಚುನಾವಣೆಯ ಮೂಲಕ 389 ಮುಖಂಡರನ್ನೊಳಗೊಂಡ ಒಂದು ಸಂವಿಧಾನ ಸಭೆಯನ್ನು ರಚಿಸಲಾಯಿತು. (ಮುಂದೆ ಈ ಸಭೆಯ ಸದಸ್ಯರ ಸಂಖ್ಯೆ 299ಕ್ಕೆ ಇಳಿಯಿತು.) ಇದರಲ್ಲಿ ಪ್ರಮುಖ ರಾಜಕೀಯ ಮುಖಂಡರು, ಕಾಂಗ್ರೆಸ್ ಪಕ್ಷದವರು, ಕಮ್ಯುನಿಷ್ಟರು. ಸಮಾಜವಾದಿಗಳು, ಕೈಗಾರಿಕೋದ್ಯಮಿಗಳು, ಕಾರ್ಮಿಕ ಸಂಘಗಳ ಪ್ರತಿನಿಧಿಗಳು, ವಿಭಿನ್ನ ಆರ್ಥಿಕ ಮತ್ತು ರಾಜಕೀಯ ಸಿದ್ಧಾಂತಗಳವರು, ಭಿನ್ನ ಪಂಥಗಳಿಗೆ ಸೇರಿದವರು, ಹಿಂದುಗಳು. ಮುಸಲ್ಮಾನರು, ಕ್ರಿಶ್ಚಿಯನ್ನರು, ಪಾರ್ಸಿಗಳು, ನಾಸ್ತಿಕರು ಮತ್ತು ವಿಭಿನ್ನ ಸಾಮಾಜಿಕ ವರ್ಗಗಳಿಗೆ ಸೇರಿದವರು. ಶ್ರೀಮಂತರು, ಮಧ್ಯಮ ವರ್ಗದವರು. ಹಿಂದುಳಿದ ವರ್ಗದವರು. ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದವರು ಎಲ್ಲರೂ ಈ ಸಮಿತಿಯಲ್ಲಿದ್ದರು.


ಆಸ್ಟ್ರೇಲಿಯಾ, ಕೆನಡಾ ,ಐರ್ಲೆಂಡ್, ಜಪಾನ್ , ರಷ್ಯಾ, ಅಮೇರಿಕಾ ಇಂಗ್ಲೆಂಡ್, ಜರ್ಮನಿ ,ಪ್ರಾನ್ಸ್  ಮುಂತಾದ ಇಪ್ಪತ್ತಕ್ಕೂ ಹೆಚ್ಚು ದೇಶಗಳ ಸಂವಿಧಾನಗಳನ್ನು ಆಧ್ಯಯನ ಮಾಡಿ ಅವುಗಳ ಉತ್ಕೃಷ್ಟ ಅಂಶಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿಕೊಳ್ಳುವಲ್ಲಿ ಅಂಬೇಡ್ಕರ್ ರವರ ಪಾತ್ರ ಪ್ರಮುಖವಾದುದು. 

2 ವರ್ಷ, 11 ತಿಂಗಳು18  ದಿನಗಳ ಕಠಿಣ ಕಾರ್ಯದ ಫಲವಾಗಿ 1949 ನವೆಂಬರ್ 26 ರಂದು ನಮ್ಮ ಸಂವಿಧಾನವನ್ನು ಅಂಗೀಕರಿಸೆದೆವು.ಆ ಸವಿನೆನಪಿಗಾಗಿ ಪ್ರತಿ ವರ್ಷ ನವೆಂಬರ್26 ನ್ನು ಸಂವಿಧಾನ ದಿನ ವನ್ನಾಗಿ ಆಚರಿಸಲಾಗುತ್ತದೆ.

ಜನವರಿ 26 1950 ರಂದು ನಮ್ಮ ಸಂವಿಧಾನವು ಅಧಿಕೃತವಾಗಿ ಜಾರಿಗೆ ಬಂದ ದಿನವನ್ನು ಪ್ರತಿ ವರ್ಷ ಗಣತಂತ್ರ ದಿನ ವಾಗಿ ಆಚರಿಸಲಾಗುತ್ತದೆ.


ನಮ್ಮ ಸಂವಿಧಾನದ ಮಹತ್ವ...


ಭಾರತ ಸಂವಿಧಾನವು ಭಾರತದ ಪ್ರಜೆಗಳಾದ ನಾವು... ಎಂಬ ಪ್ರಾರಂಭಿಕ ವಾಕ್ಯದೊಂದಿಗೆ ಪ್ರಾರಂಭವಾಗುವುದು. ಸಂವಿಧಾನದ ಪೂರ್ವಪೀಠಿಕೆಯು ಸಂವಿಧಾನದ ಪೂರ್ಣ ಸಾರಾಂಶವಾಗಿದೆ. ಭಾರತ ಸಂವಿಧಾನದ ಫಲವಾಗಿ, ಭಾರತದಲ್ಲಿ ವಂಶಪಾರಂಪರಿಕ ಆಡಳಿತ ಕೊನೆಗೊಂಡು ಪ್ರಜೆಗಳೇ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ವ್ಯವಸ್ಥೆ ಜಾರಿಯಾಗಿದೆ.


ಭಾರತ ಸಂವಿಧಾನವು ಭಾರತದ ತಳಮಟ್ಟದ ಜನರಿಂದ ಹಿಡಿದು ಮೇಲ್ಮಟ್ಟದ ಜನರವರೆಗೆ ಸಾಮಾಜಿಕ ನ್ಯಾಯ, ಆರ್ಥಿಕ ಸಬಲೀಕರಣ, ರಾಜಕೀಯ ಪ್ರಾತಿನಿಧ್ಯವನ್ನು ನೀಡುವ ಮೂಲಕ ಅವರನ್ನು ಸಶಕ್ತಗೊಳಿಸುವ ಆಶಯವನ್ನು ಹೊಂದಿದೆ.

ಭಾರತ ಒಂದು ವೈವಿಧ್ಯತೆಯಿಂದ ಕೂಡಿದ ರಾಷ್ಟ್ರ ಇಲ್ಲಿ ಅನೇಕ ಜಾತಿ, ಧರ್ಮ, ಸಂಸ್ಕೃತಿಗಳು ಆಚರಣೆಯಲ್ಲಿವೆ. ವೈವಿಧ್ಯತೆಯಲ್ಲೂ ಏಕತೆಯನ್ನು ಸಾಧಿಸಿ, ಪ್ರತಿಯೊಬ್ಬ ಪ್ರಜೆಯ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸುವ ಗುರಿಯನ್ನು ಹೊಂದಿ ಆ ಮೂಲಕ ನಮ್ಮ ಸಂವಿಧಾನವು ಶ್ರೇಷ್ಠತೆಯನ್ನು ಸಾಧಿಸಿದೆ.


ಮತದಾನದ ಹಕ್ಕಿನ ಮೂಲಕ ಪ್ರಜೆಗಳೆಲ್ಲರೂ ರಾಜಕೀಯ ಹಕ್ಕನ್ನು ಪಡೆದು, ತಮ್ಮ ಮತದಾನದ ಮೂಲಕ ತಮ್ಮ ಆಯ್ಕೆಯ ಪ್ರತಿನಿಧಿಯನ್ನು ಆರಿಸುವ ಹಕ್ಕನ್ನು ಇಂದು ಸಂವಿಧಾನ ನೀಡಿದೆ.


ಮಹಿಳೆಯರು ಮತ್ತು ಮಕ್ಕಳ ಶಿಕ್ಷಣದ ಕುರಿತಾಗಿ ಹೇಳುವುದಾದರೆ  ಸಂವಿಧಾನ ಪೂರ್ವದಲ್ಲಿ ಎಲ್ಲ ಮಹಿಳೆಯರು ಮತ್ತು ಮಕ್ಕಳಿಗೆ ಶಿಕ್ಷಣ ದೊರೆಯುತ್ತಿರಲಿಲ್ಲ. ಭಾರತ ಸಂವಿಧಾನದಲ್ಲಿ ಸರ್ವರಿಗೂ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರತಿಯೊಂದು ಸಮಾಜದ ಮಹಿಳೆಯರು ಮತ್ತು ಮಕ್ಕಳು ಇಂದು ಉಚಿತ ಶಿಕ್ಷಣವನ್ನು ಪಡೆದು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಂವಿಧಾನ ಅನುವು ಮಾಡಿಕೊಟ್ಟಿದೆ.

ಭಾರತದ ಎಲ್ಲ ಪ್ರಜೆಗಳ ಸರ್ವತೋಮುಖ ಅಭಿವೃದ್ಧಿಯು ಸಂವಿಧಾನದ ಮೂಲ ಆಶಯ ಮತ್ತು ಮೂಲ ಆಧಾರವಾಗಿದೆ.

ಭಾರತ ಸ್ವಾತಂತ್ರ್ಯಗೊಂಡು ಎಪ್ಪತ್ತೈದು ವರ್ಷಗಳ ಪೂರೈಸಿದ ಈ ಅಮೃತ ಕಾಲದಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಸಂವಿಧಾನದ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು.

12 ಫೆಬ್ರವರಿ 2024

ನೆಮ್ಮದಿಯಿಂದಿರುವುದು ಹೇಗೆ?


ನೆಮ್ಮದಿಯಿಂದಿರುವುದು  ಹೇಗೆ?




ಅಲ್ಲೊಂದು ಪುಟ್ಟ ಗುಡಿಸಲು. ಅದೊಂದು ಚಿಕ್ಕ ಸಂಸಾರ. ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದ ಅವರ ಮುಖದಲ್ಲಿ ಸದಾ ಮಂದಹಾಸ, ಶ್ರಮವಹಿಸಿ ದುಡಿಯುತ್ತಿದ್ದಿದ್ದರಿಂದ ಸದೃಢ ಶರೀರವಿತ್ತು. ನಿತ್ಯ ಗಂಜಿ ಊಟವನ್ನೇ ಮಾಡಿದರೂ ಅವರೆಲ್ಲ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಗುಡಿಸಲ ಎದುರು ಭಾಗದಲ್ಲೊಂದು ಭವ್ಯ ಬಂಗಲೆ. ಸಿರಿತನದ ಎಲ್ಲ ವೈಭೋಗಗಳು ತುಂಬಿಕೊಂಡಿದ್ದರೂ ಮನೆಯ ಜನರ ಮೊಗದಲ್ಲಿ ಏನೋ ಅಸಂತುಷ್ಟಿ.  ಮನೆಯಲ್ಲಿ ಯಾವಾಗಲೂ ಬಿಗುವಿನ ವಾತಾವರಣ. ಮನೆಯೊಡತಿಗೆ ಸದಾ ಮನದಲ್ಲಿ ಕಾಡುವ ಪ್ರಶ್ನೆಯೇನೆಂದರೆ ‘ನಮಗೆ ಎಲ್ಲ ರೀತಿಯ ಐಶ್ವರ್ಯಗಳಿದ್ದರೂ ಈ ಅತೃಪ್ತಿ, ಅಸಮಾಧಾನ ಏಕೆ? ದಿನವಿಡೀ ಕೂಲಿ ಮಾಡಿದ್ರೂ ಆ ಗುಡಿಸಲಿನ ಜನ ಸಂತಸದಿಂದ ಹೇಗೆ ಇರುವರು?’ ಎಂದು.


ಹೀಗಿರುವಾಗ ಸಾಧುವೊಬ್ಬರು ಆಕೆಯ ಮನೆಗೆ ಬಂದರು. ಮನದಲ್ಲಿ ಕಾಡುತ್ತಿದ್ದ ಆ ಪ್ರಶ್ನೆಯನ್ನು ಸಾಧುಗಳಲ್ಲಿ ಹೇಳಿಕೊಂಡಳು. ಆಗ ಅವರು, ‘ತಾಯಿ, ನಿನ್ನ ಪ್ರಶ್ನೆಗೆ ಉತ್ತರಿಸುವ ಮೊದಲು ಒಂದು ಕೆಲಸ ಮಾಡು. ಇಂದಿನಿಂದ ಒಂದು ತಿಂಗಳಕಾಲ ಆ ಬಡ ಜನರಿಗೆ ನಿತ್ಯವೂ ಮನೆಗೆ ಕರೆದು ಮೃಷ್ಟಾನ್ನ ಭೋಜನ ಹಾಕು.ನಂತರ ಅವರನ್ನು ಕರೆಯುವುದನ್ನು ನಿಲ್ಲಿಸು ಮುಂದಿನ ಬೆಳವಣಿಗೆಯನ್ನು ಗಮನಿಸಿ ನನಗೆ ತಿಳಿಸು’ ಎಂದರು. ಅದರಂತೆ ಆ ಹೆಂಗಸು ತಿಂಗಳ ಕಾಲ ಮೃಷ್ಟಾನ್ನ ಭೋಜನವನ್ನು ಆ ಜನರಿಗೆ ಉಣಬಡಿಸಿದಳು. ಅವರೋ ಸಂತೋಷದಿಂದ ಬಂದು ಊಟ ಮಾಡಿ ಹೋಗುತ್ತಿದ್ದರು. ನಂತರ ಇದ್ದಕ್ಕಿದ್ದಂತೆ ಊಟ ಕೊಡುವುದನ್ನು ನಿಲ್ಲಿಸಿ ಬಿಟ್ಟಳು.


ಆಶ್ಚರ್ಯವೆಂಬಂತೆ ಇಷ್ಟುದಿನ ಖುಷಿಯಿಂದಿರುತ್ತಿದ್ದ ಅವರಲ್ಲಿ ಏನೋ ಒಂದು ರೀತಿಯ ಬೇಸರದ ಭಾವನೆ ಕಾಣತೊಡಗಿತು. ಉಚಿತವಾದ ಭೋಜನದ ಸವಿ ಕಂಡ ಅವರಿಗೆ ಈಗ ನಿತ್ಯದ ಊಟ ಸಪ್ಪೆ ಎನಿಸತೊಡಗಿತು. ದುಡಿಮೆ ಮರೆತ ಶರೀರ ಕೃಶವಾಗತೊಡಗಿತು. ‘ಅಯ್ಯೋ ದಿನಾಲೂ ಇಂಥ ಊಟ ಸವಿಯುವ ಭಾಗ್ಯ ನಮಗಿಲ್ಲವಲ್ಲ’ ಎಂಬ ಕೊರಗು ಅವರನ್ನು ಆವರಿಸಿಬಿಟ್ಟಿತು. ಇದನ್ನೆಲ್ಲ ಗಮನಿಸಿದ ಆ ಹೆಂಗಸು ಸಾಧುಗಳಲ್ಲಿ ವಿಷಯ ತಿಳಿಸಿದಾಗ ಅವರು ‘ನಿನ್ನ ಪ್ರಶ್ನೆಗೆ ಉತ್ತರ ಇಲ್ಲಿಯೇ ಇದೆ. ಮೊದಲು ಇದ್ದುದ್ದರಲ್ಲಿಯೇ ಅವರು ತೃಪ್ತರಾಗಿದ್ದರು. ಆದ್ದರಿಂದ ಸದಾ ಸಂತಸದಿಂದಿರುತ್ತಿದ್ದರು. ಈಗ ಬೇರೆಯವರನ್ನು ನೋಡಿ ತಮಗಿಲ್ಲವಲ್ಲ ಎಂಬ ಕೊರಗು ಅವರನ್ನು ಕಾಡುತ್ತಿರುವುದರಿಂದ ನಗು ಮಾಯವಾಗಿದೆ. ಅದಕ್ಕೇ ಹಿರಿಯರು, ‘ಸಂತೃಪ್ತಿಯೇ ಸುಖಕ್ಕೆ ಕಾರಣ’ ಎಂದು ಹೇಳಿರುವುದು. ಆದ್ದರಿಂದಲೇ ನಾವು ನಮ್ಮನ್ನು ಬೇರೆಯವರಿಗೆ ಹೋಲಿಸಿಕೊಳ್ಳದೆ ಇದ್ದುದ್ದರಲ್ಲಿಯೇ ತೃಪ್ತಿ ಕಂಡುಕೊಂಡಲ್ಲಿ ನೆಮ್ಮದಿಯಿಂದ ಜೀವನ ನಡೆಸಬಹುದು’ ಎಂದರು. ಡಿ ವಿ ಜಿ ಯವರು ತಮ್ಮ ಕಗ್ಗದಲ್ಲಿ 

ಬರದಿಹುದರೆಣಿನಿಕೆಯಲಿ ಬಂದಿಹುದ ಮರೆಯದಿರು ।ಗುರುತಿಸೊಳಿತಿರುವುದನು ಕೇಡುಗಳ ನಡುವೆ ।।

ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು ।ಹರುಷಕದೆ ದಾರಿಯೆಲೊ – ಮಂಕುತಿಮ್ಮ ।।  

ಎಂದಿರುವರು.


 ನಮಗೆ ನಿಜವಾದ ಸಂತೋಷವೇನೆಂದು ಗೊತ್ತಿಲ್ಲ.  ನಮಗೆ ಯಾವುದು ಸಂತೋಷ ನೀಡುವ ವಸ್ತು, ವ್ಯಕ್ತಿ ಅಥವಾ ವಿಷಯ ಎಂದೂ ಗೊತ್ತಿಲ್ಲ. ತೃಪ್ತಿ ಎಂದರೆ ಏನು ಮತ್ತು ಹೇಗಿರುತ್ತದೆ ಎನ್ನುವುದು ನಮಗೆ ಅರಿವಿಲ್ಲ. ಹೀಗಿರುವಾಗ ಸಂತೋಷ ಪಡುವುದಾದರೂ ಹೇಗೆ ?  ಬಹಳ ಸುಲಭ   ನಮಗೆ ಸಿಕ್ಕದ್ದರಲ್ಲಿ ತೃಪ್ತಿಯಿಂದ ಜೀವಿಸೋಣ.ಸಂತೋಷಪಡೋಣ.


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು

ತುಮಕೂರು


  

11 ಫೆಬ್ರವರಿ 2024

ಮರಳುಗಾಡು ..

 ಮರಳುಗಾಡು


ಬೇಸರದಿಂದ ಕೂಡಿ

ನನ್ನ ಜೀವನವಾಗಿದೆ

ಮರಳುಗಾಡು |

ನನ್ನ ಕಾಪಾಡಲು ನನ್ನ

ಕಡೆಗೆ ಮರಳು ಗಾಡು ||



ಸಿಹಿಜೀವಿ ವೆಂಕಟೇಶ್ವರ

ತುಮಕೂರು