17 ಫೆಬ್ರವರಿ 2024

ನಮ್ಮ @ಸಂವಿಧಾನ ನಮ್ಮ ಹೆಮ್ಮೆ..

 


ನಮ್ಮ  #ಸಂವಿಧಾನ ನಮ್ಮ ಹೆಮ್ಮೆ..


ಸುಮಾರು ಇನ್ನೂರೈವತ್ತು  ವರ್ಷಗಳ ದಾಸ್ಯ ಸಂಕೋಲೆಯಿಂದ 1947 ರಲ್ಲಿ  ಮುಕ್ತಿ ಪಡೆದ ಭಾರತಕ್ಕೆ ನಮ್ಮದೇ ಆದ ಸುಶಾಸನ ಮಾಡಿಕೊಂಡು ಆಳ್ವಿಕೆ ಮಾಡುವ ಸಂಧಿ ಸಮಯದಲ್ಲಿ ಪ್ರಪಂಚವೇ ಬೆರಗುಗಣ್ಣಿನಿಂದ ನೋಡುವಂತ ಭಾರತೀಯರೆಲ್ಲ ಹೆಮ್ಮೆ ಪಡುವ ಸಂವಿಧಾನ ರಚನೆ ಮಾಡಿ ತೋರಿಸಿದ್ದು ಪ್ರತಿಯೊಬ್ಬ ಭಾರತೀಯನ ಹೆಮ್ಮೆ. 


ಇಂತಹ ಮಹಾನ್ ಸಂವಿಧಾನ ರಚನೆಯಲ್ಲಿ ಡಾ ಬಾಬು ರಾಜೇಂದ್ರ ಪ್ರಸಾದ್ ಅಧ್ಯಕತೆಯಲ್ಲಿ ಮುನ್ನೂರಕ್ಕೂ ಹೆಚ್ಚು ಸದಸ್ಯರು ವಿವಿದ ಕ್ಷೇತ್ರಗಳನ್ನು ಪ್ರತಿನಿಧಿಸಿ ಭಾಗವಹಿಸಿ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ.

ಅದರಲ್ಲೂ ಕರಡು ಸಮಿತಿಯ ಅಧ್ಯಕ್ಷರಾದ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿ "ಸಂವಿಧಾನದ ಶಿಲ್ಪಿ " ಎಂದು ಮಾನ್ಯರಾಗಿದ್ದಾರೆ.

ಸುದೀರ್ಘವಾದ ಹೋರಾಟದ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ಕೊಡಲು ಬ್ರಿಟಿಷರು ತೀರ್ಮಾನಿಸಿದರು.

ಕ್ಲಿಮೆಂಟ್ ಆಟ್ಲಿ ಎಂಬಾತ ಬ್ರಿಟಿಷ್ ಪ್ರಧಾನಮಂತ್ರಿಯಾದರು. ಅವರು 1946ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಕೊಡುವ ಭರವಸೆಯನ್ನು ಹಾಗೂ ಅದಕ್ಕೆ ಪೂರಕವಾಗಿ ಸಂವಿಧಾನ ಸಭೆಯನ್ನು ರಚಿಸಿಕೊಳ್ಳಲು ಅನುಮತಿಯನ್ನು ನೀಡಿದರು.


ಅದರಂತೆ 1946ರಲ್ಲಿ ಚುನಾವಣೆಯ ಮೂಲಕ 389 ಮುಖಂಡರನ್ನೊಳಗೊಂಡ ಒಂದು ಸಂವಿಧಾನ ಸಭೆಯನ್ನು ರಚಿಸಲಾಯಿತು. (ಮುಂದೆ ಈ ಸಭೆಯ ಸದಸ್ಯರ ಸಂಖ್ಯೆ 299ಕ್ಕೆ ಇಳಿಯಿತು.) ಇದರಲ್ಲಿ ಪ್ರಮುಖ ರಾಜಕೀಯ ಮುಖಂಡರು, ಕಾಂಗ್ರೆಸ್ ಪಕ್ಷದವರು, ಕಮ್ಯುನಿಷ್ಟರು. ಸಮಾಜವಾದಿಗಳು, ಕೈಗಾರಿಕೋದ್ಯಮಿಗಳು, ಕಾರ್ಮಿಕ ಸಂಘಗಳ ಪ್ರತಿನಿಧಿಗಳು, ವಿಭಿನ್ನ ಆರ್ಥಿಕ ಮತ್ತು ರಾಜಕೀಯ ಸಿದ್ಧಾಂತಗಳವರು, ಭಿನ್ನ ಪಂಥಗಳಿಗೆ ಸೇರಿದವರು, ಹಿಂದುಗಳು. ಮುಸಲ್ಮಾನರು, ಕ್ರಿಶ್ಚಿಯನ್ನರು, ಪಾರ್ಸಿಗಳು, ನಾಸ್ತಿಕರು ಮತ್ತು ವಿಭಿನ್ನ ಸಾಮಾಜಿಕ ವರ್ಗಗಳಿಗೆ ಸೇರಿದವರು. ಶ್ರೀಮಂತರು, ಮಧ್ಯಮ ವರ್ಗದವರು. ಹಿಂದುಳಿದ ವರ್ಗದವರು. ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದವರು ಎಲ್ಲರೂ ಈ ಸಮಿತಿಯಲ್ಲಿದ್ದರು.


ಆಸ್ಟ್ರೇಲಿಯಾ, ಕೆನಡಾ ,ಐರ್ಲೆಂಡ್, ಜಪಾನ್ , ರಷ್ಯಾ, ಅಮೇರಿಕಾ ಇಂಗ್ಲೆಂಡ್, ಜರ್ಮನಿ ,ಪ್ರಾನ್ಸ್  ಮುಂತಾದ ಇಪ್ಪತ್ತಕ್ಕೂ ಹೆಚ್ಚು ದೇಶಗಳ ಸಂವಿಧಾನಗಳನ್ನು ಆಧ್ಯಯನ ಮಾಡಿ ಅವುಗಳ ಉತ್ಕೃಷ್ಟ ಅಂಶಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿಕೊಳ್ಳುವಲ್ಲಿ ಅಂಬೇಡ್ಕರ್ ರವರ ಪಾತ್ರ ಪ್ರಮುಖವಾದುದು. 

2 ವರ್ಷ, 11 ತಿಂಗಳು18  ದಿನಗಳ ಕಠಿಣ ಕಾರ್ಯದ ಫಲವಾಗಿ 1949 ನವೆಂಬರ್ 26 ರಂದು ನಮ್ಮ ಸಂವಿಧಾನವನ್ನು ಅಂಗೀಕರಿಸೆದೆವು.ಆ ಸವಿನೆನಪಿಗಾಗಿ ಪ್ರತಿ ವರ್ಷ ನವೆಂಬರ್26 ನ್ನು ಸಂವಿಧಾನ ದಿನ ವನ್ನಾಗಿ ಆಚರಿಸಲಾಗುತ್ತದೆ.

ಜನವರಿ 26 1950 ರಂದು ನಮ್ಮ ಸಂವಿಧಾನವು ಅಧಿಕೃತವಾಗಿ ಜಾರಿಗೆ ಬಂದ ದಿನವನ್ನು ಪ್ರತಿ ವರ್ಷ ಗಣತಂತ್ರ ದಿನ ವಾಗಿ ಆಚರಿಸಲಾಗುತ್ತದೆ.


ನಮ್ಮ ಸಂವಿಧಾನದ ಮಹತ್ವ...


ಭಾರತ ಸಂವಿಧಾನವು ಭಾರತದ ಪ್ರಜೆಗಳಾದ ನಾವು... ಎಂಬ ಪ್ರಾರಂಭಿಕ ವಾಕ್ಯದೊಂದಿಗೆ ಪ್ರಾರಂಭವಾಗುವುದು. ಸಂವಿಧಾನದ ಪೂರ್ವಪೀಠಿಕೆಯು ಸಂವಿಧಾನದ ಪೂರ್ಣ ಸಾರಾಂಶವಾಗಿದೆ. ಭಾರತ ಸಂವಿಧಾನದ ಫಲವಾಗಿ, ಭಾರತದಲ್ಲಿ ವಂಶಪಾರಂಪರಿಕ ಆಡಳಿತ ಕೊನೆಗೊಂಡು ಪ್ರಜೆಗಳೇ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ವ್ಯವಸ್ಥೆ ಜಾರಿಯಾಗಿದೆ.


ಭಾರತ ಸಂವಿಧಾನವು ಭಾರತದ ತಳಮಟ್ಟದ ಜನರಿಂದ ಹಿಡಿದು ಮೇಲ್ಮಟ್ಟದ ಜನರವರೆಗೆ ಸಾಮಾಜಿಕ ನ್ಯಾಯ, ಆರ್ಥಿಕ ಸಬಲೀಕರಣ, ರಾಜಕೀಯ ಪ್ರಾತಿನಿಧ್ಯವನ್ನು ನೀಡುವ ಮೂಲಕ ಅವರನ್ನು ಸಶಕ್ತಗೊಳಿಸುವ ಆಶಯವನ್ನು ಹೊಂದಿದೆ.

ಭಾರತ ಒಂದು ವೈವಿಧ್ಯತೆಯಿಂದ ಕೂಡಿದ ರಾಷ್ಟ್ರ ಇಲ್ಲಿ ಅನೇಕ ಜಾತಿ, ಧರ್ಮ, ಸಂಸ್ಕೃತಿಗಳು ಆಚರಣೆಯಲ್ಲಿವೆ. ವೈವಿಧ್ಯತೆಯಲ್ಲೂ ಏಕತೆಯನ್ನು ಸಾಧಿಸಿ, ಪ್ರತಿಯೊಬ್ಬ ಪ್ರಜೆಯ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸುವ ಗುರಿಯನ್ನು ಹೊಂದಿ ಆ ಮೂಲಕ ನಮ್ಮ ಸಂವಿಧಾನವು ಶ್ರೇಷ್ಠತೆಯನ್ನು ಸಾಧಿಸಿದೆ.


ಮತದಾನದ ಹಕ್ಕಿನ ಮೂಲಕ ಪ್ರಜೆಗಳೆಲ್ಲರೂ ರಾಜಕೀಯ ಹಕ್ಕನ್ನು ಪಡೆದು, ತಮ್ಮ ಮತದಾನದ ಮೂಲಕ ತಮ್ಮ ಆಯ್ಕೆಯ ಪ್ರತಿನಿಧಿಯನ್ನು ಆರಿಸುವ ಹಕ್ಕನ್ನು ಇಂದು ಸಂವಿಧಾನ ನೀಡಿದೆ.


ಮಹಿಳೆಯರು ಮತ್ತು ಮಕ್ಕಳ ಶಿಕ್ಷಣದ ಕುರಿತಾಗಿ ಹೇಳುವುದಾದರೆ  ಸಂವಿಧಾನ ಪೂರ್ವದಲ್ಲಿ ಎಲ್ಲ ಮಹಿಳೆಯರು ಮತ್ತು ಮಕ್ಕಳಿಗೆ ಶಿಕ್ಷಣ ದೊರೆಯುತ್ತಿರಲಿಲ್ಲ. ಭಾರತ ಸಂವಿಧಾನದಲ್ಲಿ ಸರ್ವರಿಗೂ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರತಿಯೊಂದು ಸಮಾಜದ ಮಹಿಳೆಯರು ಮತ್ತು ಮಕ್ಕಳು ಇಂದು ಉಚಿತ ಶಿಕ್ಷಣವನ್ನು ಪಡೆದು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಂವಿಧಾನ ಅನುವು ಮಾಡಿಕೊಟ್ಟಿದೆ.

ಭಾರತದ ಎಲ್ಲ ಪ್ರಜೆಗಳ ಸರ್ವತೋಮುಖ ಅಭಿವೃದ್ಧಿಯು ಸಂವಿಧಾನದ ಮೂಲ ಆಶಯ ಮತ್ತು ಮೂಲ ಆಧಾರವಾಗಿದೆ.

ಭಾರತ ಸ್ವಾತಂತ್ರ್ಯಗೊಂಡು ಎಪ್ಪತ್ತೈದು ವರ್ಷಗಳ ಪೂರೈಸಿದ ಈ ಅಮೃತ ಕಾಲದಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಸಂವಿಧಾನದ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು.

12 ಫೆಬ್ರವರಿ 2024

ನೆಮ್ಮದಿಯಿಂದಿರುವುದು ಹೇಗೆ?


ನೆಮ್ಮದಿಯಿಂದಿರುವುದು  ಹೇಗೆ?




ಅಲ್ಲೊಂದು ಪುಟ್ಟ ಗುಡಿಸಲು. ಅದೊಂದು ಚಿಕ್ಕ ಸಂಸಾರ. ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದ ಅವರ ಮುಖದಲ್ಲಿ ಸದಾ ಮಂದಹಾಸ, ಶ್ರಮವಹಿಸಿ ದುಡಿಯುತ್ತಿದ್ದಿದ್ದರಿಂದ ಸದೃಢ ಶರೀರವಿತ್ತು. ನಿತ್ಯ ಗಂಜಿ ಊಟವನ್ನೇ ಮಾಡಿದರೂ ಅವರೆಲ್ಲ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಗುಡಿಸಲ ಎದುರು ಭಾಗದಲ್ಲೊಂದು ಭವ್ಯ ಬಂಗಲೆ. ಸಿರಿತನದ ಎಲ್ಲ ವೈಭೋಗಗಳು ತುಂಬಿಕೊಂಡಿದ್ದರೂ ಮನೆಯ ಜನರ ಮೊಗದಲ್ಲಿ ಏನೋ ಅಸಂತುಷ್ಟಿ.  ಮನೆಯಲ್ಲಿ ಯಾವಾಗಲೂ ಬಿಗುವಿನ ವಾತಾವರಣ. ಮನೆಯೊಡತಿಗೆ ಸದಾ ಮನದಲ್ಲಿ ಕಾಡುವ ಪ್ರಶ್ನೆಯೇನೆಂದರೆ ‘ನಮಗೆ ಎಲ್ಲ ರೀತಿಯ ಐಶ್ವರ್ಯಗಳಿದ್ದರೂ ಈ ಅತೃಪ್ತಿ, ಅಸಮಾಧಾನ ಏಕೆ? ದಿನವಿಡೀ ಕೂಲಿ ಮಾಡಿದ್ರೂ ಆ ಗುಡಿಸಲಿನ ಜನ ಸಂತಸದಿಂದ ಹೇಗೆ ಇರುವರು?’ ಎಂದು.


ಹೀಗಿರುವಾಗ ಸಾಧುವೊಬ್ಬರು ಆಕೆಯ ಮನೆಗೆ ಬಂದರು. ಮನದಲ್ಲಿ ಕಾಡುತ್ತಿದ್ದ ಆ ಪ್ರಶ್ನೆಯನ್ನು ಸಾಧುಗಳಲ್ಲಿ ಹೇಳಿಕೊಂಡಳು. ಆಗ ಅವರು, ‘ತಾಯಿ, ನಿನ್ನ ಪ್ರಶ್ನೆಗೆ ಉತ್ತರಿಸುವ ಮೊದಲು ಒಂದು ಕೆಲಸ ಮಾಡು. ಇಂದಿನಿಂದ ಒಂದು ತಿಂಗಳಕಾಲ ಆ ಬಡ ಜನರಿಗೆ ನಿತ್ಯವೂ ಮನೆಗೆ ಕರೆದು ಮೃಷ್ಟಾನ್ನ ಭೋಜನ ಹಾಕು.ನಂತರ ಅವರನ್ನು ಕರೆಯುವುದನ್ನು ನಿಲ್ಲಿಸು ಮುಂದಿನ ಬೆಳವಣಿಗೆಯನ್ನು ಗಮನಿಸಿ ನನಗೆ ತಿಳಿಸು’ ಎಂದರು. ಅದರಂತೆ ಆ ಹೆಂಗಸು ತಿಂಗಳ ಕಾಲ ಮೃಷ್ಟಾನ್ನ ಭೋಜನವನ್ನು ಆ ಜನರಿಗೆ ಉಣಬಡಿಸಿದಳು. ಅವರೋ ಸಂತೋಷದಿಂದ ಬಂದು ಊಟ ಮಾಡಿ ಹೋಗುತ್ತಿದ್ದರು. ನಂತರ ಇದ್ದಕ್ಕಿದ್ದಂತೆ ಊಟ ಕೊಡುವುದನ್ನು ನಿಲ್ಲಿಸಿ ಬಿಟ್ಟಳು.


ಆಶ್ಚರ್ಯವೆಂಬಂತೆ ಇಷ್ಟುದಿನ ಖುಷಿಯಿಂದಿರುತ್ತಿದ್ದ ಅವರಲ್ಲಿ ಏನೋ ಒಂದು ರೀತಿಯ ಬೇಸರದ ಭಾವನೆ ಕಾಣತೊಡಗಿತು. ಉಚಿತವಾದ ಭೋಜನದ ಸವಿ ಕಂಡ ಅವರಿಗೆ ಈಗ ನಿತ್ಯದ ಊಟ ಸಪ್ಪೆ ಎನಿಸತೊಡಗಿತು. ದುಡಿಮೆ ಮರೆತ ಶರೀರ ಕೃಶವಾಗತೊಡಗಿತು. ‘ಅಯ್ಯೋ ದಿನಾಲೂ ಇಂಥ ಊಟ ಸವಿಯುವ ಭಾಗ್ಯ ನಮಗಿಲ್ಲವಲ್ಲ’ ಎಂಬ ಕೊರಗು ಅವರನ್ನು ಆವರಿಸಿಬಿಟ್ಟಿತು. ಇದನ್ನೆಲ್ಲ ಗಮನಿಸಿದ ಆ ಹೆಂಗಸು ಸಾಧುಗಳಲ್ಲಿ ವಿಷಯ ತಿಳಿಸಿದಾಗ ಅವರು ‘ನಿನ್ನ ಪ್ರಶ್ನೆಗೆ ಉತ್ತರ ಇಲ್ಲಿಯೇ ಇದೆ. ಮೊದಲು ಇದ್ದುದ್ದರಲ್ಲಿಯೇ ಅವರು ತೃಪ್ತರಾಗಿದ್ದರು. ಆದ್ದರಿಂದ ಸದಾ ಸಂತಸದಿಂದಿರುತ್ತಿದ್ದರು. ಈಗ ಬೇರೆಯವರನ್ನು ನೋಡಿ ತಮಗಿಲ್ಲವಲ್ಲ ಎಂಬ ಕೊರಗು ಅವರನ್ನು ಕಾಡುತ್ತಿರುವುದರಿಂದ ನಗು ಮಾಯವಾಗಿದೆ. ಅದಕ್ಕೇ ಹಿರಿಯರು, ‘ಸಂತೃಪ್ತಿಯೇ ಸುಖಕ್ಕೆ ಕಾರಣ’ ಎಂದು ಹೇಳಿರುವುದು. ಆದ್ದರಿಂದಲೇ ನಾವು ನಮ್ಮನ್ನು ಬೇರೆಯವರಿಗೆ ಹೋಲಿಸಿಕೊಳ್ಳದೆ ಇದ್ದುದ್ದರಲ್ಲಿಯೇ ತೃಪ್ತಿ ಕಂಡುಕೊಂಡಲ್ಲಿ ನೆಮ್ಮದಿಯಿಂದ ಜೀವನ ನಡೆಸಬಹುದು’ ಎಂದರು. ಡಿ ವಿ ಜಿ ಯವರು ತಮ್ಮ ಕಗ್ಗದಲ್ಲಿ 

ಬರದಿಹುದರೆಣಿನಿಕೆಯಲಿ ಬಂದಿಹುದ ಮರೆಯದಿರು ।ಗುರುತಿಸೊಳಿತಿರುವುದನು ಕೇಡುಗಳ ನಡುವೆ ।।

ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು ।ಹರುಷಕದೆ ದಾರಿಯೆಲೊ – ಮಂಕುತಿಮ್ಮ ।।  

ಎಂದಿರುವರು.


 ನಮಗೆ ನಿಜವಾದ ಸಂತೋಷವೇನೆಂದು ಗೊತ್ತಿಲ್ಲ.  ನಮಗೆ ಯಾವುದು ಸಂತೋಷ ನೀಡುವ ವಸ್ತು, ವ್ಯಕ್ತಿ ಅಥವಾ ವಿಷಯ ಎಂದೂ ಗೊತ್ತಿಲ್ಲ. ತೃಪ್ತಿ ಎಂದರೆ ಏನು ಮತ್ತು ಹೇಗಿರುತ್ತದೆ ಎನ್ನುವುದು ನಮಗೆ ಅರಿವಿಲ್ಲ. ಹೀಗಿರುವಾಗ ಸಂತೋಷ ಪಡುವುದಾದರೂ ಹೇಗೆ ?  ಬಹಳ ಸುಲಭ   ನಮಗೆ ಸಿಕ್ಕದ್ದರಲ್ಲಿ ತೃಪ್ತಿಯಿಂದ ಜೀವಿಸೋಣ.ಸಂತೋಷಪಡೋಣ.


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು

ತುಮಕೂರು


  

11 ಫೆಬ್ರವರಿ 2024

ಮರಳುಗಾಡು ..

 ಮರಳುಗಾಡು


ಬೇಸರದಿಂದ ಕೂಡಿ

ನನ್ನ ಜೀವನವಾಗಿದೆ

ಮರಳುಗಾಡು |

ನನ್ನ ಕಾಪಾಡಲು ನನ್ನ

ಕಡೆಗೆ ಮರಳು ಗಾಡು ||



ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಬಾರದ ರತ್ನ

 


ಬಾರದ ರತ್ನ


ಈ ವರ್ಷ ಐದು ಗಣ್ಯರಿಗೆ

ಸಿಕ್ಕಿದೆ ಭಾರತ ರತ್ನ|

ತಾವು ನಿರೀಕ್ಷಿಸಿದವರಿಗೆ 

ಸಿಗದಿದ್ದರೆ ಅದು ಬಾರದ ರತ್ನ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

09 ಫೆಬ್ರವರಿ 2024

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ ೩ #gk #quiz @kannada

 


ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ ೩


41."ದಿ ಸ್ಟಾರಿ ನೈಟ್" ಅನ್ನು ಯಾವ ಪ್ರಸಿದ್ಧ ಕಲಾವಿದ ಚಿತ್ರಿಸಿದ್ದಾರೆ?

42.ಚೀನಾದ ಕರೆನ್ಸಿ ಯಾವುದು?

43.ವಿಶ್ವದ ಅತಿ ಎತ್ತರದ ಜಲಪಾತ ಯಾವುದು?

44.ಮೈಕ್ರೋಸಾಫ್ಟ್ ಕಾರ್ಪೊರೇಶನ್ ಅನ್ನು ಸ್ಥಾಪಿಸಿದವರು ಯಾರು?

45.ಭಾರತದ ರಾಷ್ಟ್ರೀಯ ಲಾಂಛನ ಯಾವುದು?

46.ಭೂ ವಿಸ್ತೀರ್ಣದಲ್ಲಿ ವಿಶ್ವದ ಅತ್ಯಂತ ಚಿಕ್ಕ ದೇಶ ಯಾವುದು?

47."ದಿ ಪರ್ಸಿಸ್ಟೆನ್ಸ್ ಆಫ್ ಮೆಮೊರಿ" ಅನ್ನು ಚಿತ್ರಿಸಿದವರು ಯಾರು?

48.ಭಾರತದ ಮೊದಲ ರಾಷ್ಟ್ರಪತಿ ಯಾರು?

49.ಆಸ್ಟ್ರೇಲಿಯಾದ ರಾಜಧಾನಿ ಯಾವುದು?

50.ಪ್ರಪಂಚದಲ್ಲಿ ಅತಿ ಹೆಚ್ಚು ಮಾತನಾಡುವ ಭಾಷೆ ಯಾವುದು?

51.ಭಾರತದಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿ ಮತ್ತು ಗೌರವ ಯಾವುದು?

52.ವಿಸ್ತೀರ್ಣದಲ್ಲಿ ಭಾರತದ ಅತಿ ದೊಡ್ಡ ರಾಜ್ಯ ಯಾವುದು

53.ಭಾರತೀಯ ಸಂವಿಧಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?

54."ದಿ ಕ್ಯಾಂಟರ್ಬರಿ ಟೇಲ್ಸ್" ಬರೆದವರು ಯಾರು?

55.ವಿಶ್ವದ ಅತ್ಯಂತ ಆಳವಾದ ಸಾಗರ ಯಾವುದು?

56.ಪ್ರಸ್ತುತ ಭಾರತದ ಪ್ರಧಾನ ಮಂತ್ರಿ ಯಾರು?

57.ಗುರುತ್ವಾಕರ್ಷಣೆಯ ನಿಯಮವನ್ನು ಕಂಡುಹಿಡಿದವರು ಯಾರು?

58.ಉತ್ತರ ಅಮೇರಿಕಾದಲ್ಲಿ ಅತಿ ದೊಡ್ಡ ಜಲಪಾತ

ಯಾವುದು?

59."ದಿ ಲಾಸ್ಟ್ ಸಪ್ಪರ್" ಅನ್ನು ಚಿತ್ರಿಸಿದವರು ಯಾರು?

60.ಭಾರತದ ಅತಿ ದೊಡ್ಡ ಮರುಭೂಮಿ ಯಾವುದು


ಉತ್ತರಗಳು.

41.ವಿನ್ಸೆಂಟ್ ವ್ಯಾನ್ ಗಾಗ್.

42.ಚೈನೀಸ್ ಯುವಾನ್.

43.ಏಂಜೆಲ್ ಫಾಲ್ಸ್.

44.ಬಿಲ್ ಗೇಟ್ಸ್ ಮತ್ತು ಪಾಲ್ ಅಲೆನ್.

45. ನಾಲ್ಕು ತಲೆಯ ಸಿಂಹ.

46.ವ್ಯಾಟಿಕನ್ ಸಿಟಿ.

47.ಸಾಲ್ವಡಾರ್ ಡಾಲಿ

48.ಡಾ. ರಾಜೇಂದ್ರ ಪ್ರಸಾದ್

49.ಕ್ಯಾನ್‌ಬೆರಾ

50.ಮ್ಯಾಂಡರಿನ್ ಚೈನೀಸ್.

51.ಭಾರತ ರತ್ನ

52.ರಾಜಸ್ಥಾನ

53.ಡಾ.ಬಿ.ಆರ್. ಅಂಬೇಡ್ಕರ್

54.ಜೆಫ್ರಿ ಚಾಸರ್.

55.ಪೆಸಿಫಿಕ್ ಸಾಗರ.

56.ನರೇಂದ್ರ ಮೋದಿ.

57.ಸರ್ ಐಸಾಕ್ ನ್ಯೂಟನ್.

58.ನಯಾಗರಾ ಜಲಪಾತ.

59.ಲಿಯೊನಾರ್ಡೊ ಡಾ ವಿನ್ಸಿ.

60.ಥಾರ್ ಮರುಭೂಮಿ


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು

ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ

9900925529