04 ಫೆಬ್ರವರಿ 2024

ಪೋಷಕರಿಗೊಂದು ಪತ್ರ...

 



ಪೋಷಕರಿಗೊಂದು ಪತ್ರ...

ಆತ್ಮೀಯ ಪೋಷಕರೇ....


 ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ದಿನಾಂಕ 5.2.2024 ರಿಂದ ಎರಡನೇ  ಅಭ್ಯಾಸ ಪತ್ರಿಕೆಯ   ಪರೀಕ್ಷೆ ಪ್ರಾರಂಭವಾಗುವುದರಿಂದ ತಮ್ಮ ಮಗುವನ್ನು ಪರೀಕ್ಷೆಗೆ ತಯಾರಿ ನಡೆಸಿ ಉತ್ತಮ ಅಂಕ ಪಡೆಯಲು ಮನೆಯಲ್ಲಿ ಪ್ರೇರಣೆ ಮತ್ತು ಮಾರ್ಗದರ್ಶನ ನೀಡಿ...ಈ ಪರೀಕ್ಷೆಗೆ ಗೈರುಹಾಜರಾಗದಂತೆ  ಕಡ್ಡಾಯವಾಗಿ ಹಾಜರಾಗಲು ಕ್ರಮ ವಹಿಸಿ.....


ಮಕ್ಕಳಿಗೆ ಆದಷ್ಟೂ ಮೊಬೈಲ್ ಮತ್ತು ಬೈಕ್ ಕೊಡುವುದನ್ನು ನಿಲ್ಲಿಸಿ...ಓದಿನ ಕಡೆ ಹೆಚ್ಚು ಗಮನ ಕೊಡಲು ತಿಳಿಸಿ...


8 ಮತ್ತು ಒಂಭತ್ತನೆಯ ತರಗತಿಯ ಮಕ್ಕಳಿಗೆ ಈ ವರ್ಷ ಮೌಲ್ಯಂಕನ ಪರೀಕ್ಷೆ ಇರುವುದರಿಂದ ಆ ಮಕ್ಕಳಿಗೆ ಸೋಮವಾರ ಅಂದರೆ 5/2/2024 ರಿಂದ ಸಂಜೆ 4.20 ರಿಂದ 5 ಗಂಟೆಯ ವರೆಗೆ ವಿಶೇಷ ತರಗತಿಗಳನ್ನು ಆರಂಭಿಸುತ್ತಿದ್ದೇವೆ...  ನಿಮ್ಮ ಮಕ್ಕಳು ಶಾಲಾ ಅವಧಿ ಮುಗಿದ ಬಳಿಕ ಮನೆ ತಲುಪುವುದನ್ನು ಖಚಿತ ಮಾಡಿಕೊಳ್ಳಿ.



ಮತ್ತೊಮ್ಮೆ ಎಲ್ಲಾ ಮಕ್ಕಳ ಪೋಷಕರಿಗೆ ತಮ್ಮ ಮಕ್ಕಳು ಯೂನಿಫಾರ್ಮ್ ,ಶೂ ,ಹಾಕಿಕೊಂಡು, ಸಭ್ಯವಾದ ರೀತಿಯಲ್ಲಿ ಕಟಿಂಗ್ ಮಾಡಿಸಿ ಶಾಲೆಗೆ ಕಳಿಸುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ.ಶಾಲೆಯ ಶಿಸ್ತು ಕಾಪಾಡಲು, ಮಕ್ಕಳ ವ್ಯಕ್ತಿತ್ವ ರೂಪಿಸಲು  ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡಲು  ನಿಮ್ಮ ಸಹಕಾರ ಅಗತ್ಯ... ನಿಮ್ಮ ಸಹಕಾರದ ನಿರೀಕ್ಷೆಯಲ್ಲಿ....


ಇಂದ...


ಮುಖ್ಯ ಶಿಕ್ಷಕರು 

ಮತ್ತು ಸಿಬ್ಬಂದಿ

ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ

 

02 ಫೆಬ್ರವರಿ 2024

ಉದ್ಯಮಿಯಾಗಲು ದಶಸೂತ್ರಗಳು.

 



ಉದ್ಯಮಿಯಾಗಲು ದಶಸೂತ್ರಗಳು.


ಅಂದು ಒಂದು ಚಿಕ್ಕ ಗ್ಯಾರೇಜ್ ನಲ್ಲಿ ಆರಂಭವಾದ ಒಂದು ಐಟಿ ಕಂಪನಿಯು ಇಂದು ಲಕ್ಷಾಂತರ ಕೋಟಿ ವ್ಯವಹಾರ ಮಾಡುತ್ತಾ ಸಾವಿರಾರು ಕುಟುಂಬಕ್ಕೆ ಆಧಾರ ಸ್ತಂಭವಾಗಿರುವ ತನ್ಮೂಲಕ ದೇಶದ ಜಿ ಡಿ ಪಿ ಗೂ ಕೊಡುಗೆ ಸಲ್ಲಿಸುತ್ತಿರುವ ನಮ್ಮ ಕರ್ನಾಟಕದ ಹೆಮ್ಮೆಯ ಇನ್ಪೋಸಿಸ್ ಯಶೋಗಾಥೆ ನಮಗೆಲ್ಲ ತಿಳಿದಿದೆ. ನಾರಾಯಣಮೂರ್ತಿ ರವರು ಯಶಸ್ವಿ ಉದ್ಯಮಿಯಾಗಿ ಇಂದಿನ ಯುವ ಉದ್ಯಮಿಗಳಿಗೆ ಮತ್ತು ಉದ್ಯಮಗಾರಿಕೆಗೆ ಪ್ರೇರಕ ಶಕ್ತಿಯಾಗಿದ್ದಾರೆ. 

ರಿಸ್ಕ್ ತೆಗೆದುಕೊಳ್ಳುವ ಗುಣ ,ಸತತ ಪರಿಶ್ರಮ ಸ್ಮಾರ್ಟ್ ವರ್ಕ್ ಮಾಡುವ ಯಾರಾದರೂ ಯಶಸ್ವಿ ಉದ್ಯಮಿಯಾಗಬಹುದು. ಇದರ ಜೊತೆಗೆ ನಿಮ್ಮ  ಈ ಕೆಳಕಂಡ ಗುಣಗಳಿದ್ದರೆ ಉದ್ಯಮಗಾರಿಕೆ ನಿಮ್ಮದಾಗುವಲ್ಲಿ ಸಂದೇಹವಿಲ್ಲ.

  

1 ವ್ಯಾಪಾರ ಗಮನ:


ಎಲ್ಲಾ ನಿರ್ಧಾರಗಳು ಮತ್ತು ಕ್ರಿಯೆಗಳಿಗೆ ಆಧಾರವಾಗಿರುವ ಉದ್ದೇಶವು ಯಾವಾಗಲೂ ವ್ಯಾಪಾರ ಲಾಭ ಮತ್ತು ಬೆಳವಣಿಗೆಯಾಗಿದೆ.ಆದ್ದರಿಂದ ಉದ್ಯಮಿಯಾಗಬೇಕಾದವನು ಸದಾ ತನ್ನ ವ್ಯಾಪಾರದ ಬಗ್ಗೆ ವಿಶೇಷ ಗಮನಹರಿಸಬೇಕು.


2 ಆತ್ಮವಿಶ್ವಾಸ:


ತಾನು ಹಿಡಿದ ಕಾರ್ಯವನ್ನು ಮಾಡಿಯೇ ತೋರುತ್ತೇನೆ ಎಂಬ ಆತ್ಮವಿಶ್ವಾಸ ಇರಲೇಬೇಕು 

 ಸ್ವಯಂ ನಂಬಿಕೆಯನ್ನು ಹೊಂದಿ  ವ್ಯವಹಾರದ ಬೆಳವಣಿಗೆಗೆ ಒಬ್ಬರ ಸಾಮರ್ಥ್ಯವನ್ನು  ಗುರ್ತಿಸಿ ಬೆಳೆಸಲು ಮೊದಲು ತಾನು ಆತ್ಮವಿಶ್ವಾಸ ಹೊಂದಿರಬೇಕಾಗುತ್ತದೆ. 


3 ಸೃಜನಾತ್ಮಕತೆ:


ಸೃಜನಾತ್ಮಕ ಉದ್ಯಮಿಗಳು ಯಾವಾಗಲೂ ತಮ್ಮ ವ್ಯವಹಾರವನ್ನು ಉತ್ತಮಗೊಳಿಸಲು ಅನನ್ಯ ಮಾರ್ಗಗಳ ಬಗ್ಗೆ ಯೋಚಿಸುತ್ತಾರೆ. ಅವರು ವ್ಯಾಪಾರ ಕ್ಷೇತ್ರದಲ್ಲಿನ ಬದಲಾವಣೆಗಳ ಬಗ್ಗೆ ತಿಳಿದಿರುತ್ತಾರೆ ಮತ್ತು ಔಟ್ ಆಪ್  ಬಾಕ್ಸ್  ಚಿಂತನೆಯಲ್ಲಿ ಪ್ರವೀಣರಾಗಿರುತ್ತಾರೆ. ಹಾಗೂ ಅವರು ನವೀನ ವ್ಯವಹಾರ ಕಲ್ಪನೆಗಳು ಮತ್ತು ವಿಧಾನಗಳನ್ನು ತ್ವರಿತವಾಗಿ ಅಳವಡಿಸಿಕೊಳ್ಳುತ್ತಾರೆ.


4 ಪ್ರತಿನಿಧಿ:


ವ್ಯವಹಾರವು ಬೆಳೆಯುತ್ತಿರುವಾಗ  ಸ್ಮಾರ್ಟ್ ಉದ್ಯಮಿಗಳು ತಾವು ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ ಎಂದು ಅರಿತುಕೊಳ್ಳುತ್ತಾರೆ ಮತ್ತು ಅವರು ತಮ್ಮ ತಂಡಕ್ಕೆ ಹೆಚ್ಚಿನ ಜವಾಬ್ದಾರಿಗಳನ್ನು ಹಸ್ತಾಂತರಿಸಬೇಕಾಗುತ್ತದೆ.ಅದು ವ್ಯವಹಾರಗಳ ವಿಸ್ತರಣೆ ಮತ್ತು ತಮ್ಮ ಕಂಪನಿಯ ಬೆಳವಣಿಗೆಗೆ ಪೂರಕವಾಗಿರುತ್ತದೆ.


5 ಸಂಕಲ್ಪ:


ಯಾವುದೇ ಶ್ರೇಷ್ಠ ಕೆಲಸಗಳು ಉತ್ತಮ ಸಂಕಲ್ಪದಿಂದ ಆರಂಭವಾಗುತ್ತವೆ.

ಯಶಸ್ವಿ ಉದ್ಯಮಿಗಳು ಉತ್ತಮ ಸಂಕಲ್ಪದೊಂದಿಗೆ  ಕಠಿಣ ಸಮಯಗಳಲ್ಲಿ ಪರಿಶ್ರಮ ಪಡುತ್ತಾರೆ ಮತ್ತು ಅವರ ದೃಢತೆ ಅವರಿಗೆ ಹಿಂದೆಂದೂ ಬಲವಾಗಿ ಪುಟಿದೇಳಲು ಸಹಾಯ ಮಾಡುತ್ತದೆ.


6 ಸ್ವತಂತ್ರ:


ಒಬ್ಬ ವ್ಯಕ್ತಿಯು ಏಕಾಂಗಿಯಾಗಿ ವ್ಯವಹಾರವನ್ನು ಪ್ರಾರಂಭಿಸಬಹುದು ಮತ್ತು ನಡೆಸಬಹುದು ಇದರ ಜೊತೆಗೆ ಸಕಾಲದಲ್ಲಿ ಉತ್ತಮ. ನಿರ್ಣಯವನ್ನು ಕೈಗೊಳ್ಳಲು ಉದ್ಯಮಿಯಾದವನು ಹಿಂದೆ ಮುಂದೆ ನೋಡಬಾರದು. 


7 ಜ್ಞಾನ ಅನ್ವೇಷಕ:


ಮಹಾನ್ ವಾಣಿಜ್ಯೋದ್ಯಮಿಗಳು 'ಜ್ಞಾನವು ಶಕ್ತಿ' ಎಂದು ಅರಿತುಕೊಳ್ಳುತ್ತಾರೆ ಮತ್ತು ಅವರು ತಮ್ಮ ಪ್ರತಿ ಸ್ಪರ್ಧಿಗಳಿಗಿಂತ ಮುಂದೆ ಇರಲು ಎಲ್ಲಾ ಉದ್ಯಮದ ಬೆಳವಣಿಗೆಗಳು ಮತ್ತು ಮಾಹಿತಿಗಳನ್ನು ಅಪ್ಡೇಟ್ ಮಾಡಿಕೊಂಡಿರುತ್ತಾರೆ. ಹೊಸತಿಗೆ ಹಾತೊರೆಯುತ್ತಾರೆ.


8 ಪ್ರವರ್ತಕ:


ಪರಿಣಾಮಕಾರಿ ಉದ್ಯಮಿಗಳು ತಮ್ಮ ವ್ಯಾಪಾರವನ್ನು ಅನುಮೋದಿಸಲು ಮತ್ತು ಎಲ್ಲಾ ವೇದಿಕೆಗಳಲ್ಲಿ ಅದನ್ನು ಉತ್ತೇಜಿಸುತ್ತಾರೆ.ಇದಕ್ಕೆ ಸಾಮಾಜಿಕ ಮಾಧ್ಯಮ ಸೇರಿದಂತೆ ವಿವಿಧ ಮಾಧ್ಯಮಗಳ ಬಳಕೆ ಮಾಡಿಕೊಂಡು ತನ್ನ ಉತ್ಪನ್ನಗಳನ್ನು ಸರ್ವರಿಗೂ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು.


9 ಉತ್ತಮ ಸಂಬಂಧ:


ಹೆಚ್ಚು ಯಶಸ್ವಿ ಉದ್ಯಮಿಗಳು ಸಾಮಾನ್ಯವಾಗಿ ಉದ್ಯೋಗಿಗಳು, ಗ್ರಾಹಕರು ಮತ್ತು ಗ್ರಾಹಕರೊಂದಿಗೆ ಬಲವಾದ ಪರಸ್ಪರ ಕೌಶಲ್ಯಗಳನ್ನು ಪೋಷಿಸುವ ಉತ್ತಮ ಸಂಬಂಧವನ್ನು  ಹೊಂದಿರುತ್ತಾರೆ. ಇದು ಅವರ ಉದ್ಯಮದ ಯಶಸ್ಸಿಗೆ ಪೂರಕವಾದ ಅಂಶವಾಗಿದೆ.


10 ರಿಸ್ಕ್ ಟೇಕಿಂಗ್:


ಫಾರ್ಚೂನ್ ಪೇವರ್ಸ್ ಬ್ರೇವ್ ಎಂಬಂತೆ ಕೆಲವೊಮ್ಮೆ ನಾವು ಮುನ್ನುಗ್ಗಲೇ ಬೇಕು.

ದ್ಯಮಶೀಲತೆಯ ಮೂಲತತ್ವವು ಅಪಾಯ ತೆಗೆದುಕೊಳ್ಳುವಿಕೆಯನ್ನು ಒಳಗೊಳ್ಳುತ್ತದೆ ಮತ್ತು ಯಶಸ್ವಿ ವ್ಯಾಪಾರ ವ್ಯಕ್ತಿಗಳು ಲೆಕ್ಕ ಹಾಕಿದ ಅಪಾಯಗಳನ್ನು ತೆಗೆದುಕೊಳ್ಳುವಲ್ಲಿ ಪ್ರವೀಣರಾಗಿರುತ್ತಾರೆ.


ಈ ಮೇಲಿನ ದಶಗುಣಗಳಿರುವ ಯಾರಾದರೂ ಹೊಸ ಉದ್ಯಮ ಆರಂಭಿಸಲು ಮುಂದಡಿ ಇಡಬಹುದು. ಇದಕ್ಕೆ ಪೂರಕವಾಗಿ ಸರ್ಕಾರದ ಅರ್ಥಿಕ ಬೆಂಬಲ ಆತ್ಮೀಯರ ಪ್ರೋತ್ಸಾಹ ಇದ್ದರೆ ಉದ್ಯಮಗಾರಿಕೆ ಕಷ್ಟದಾಯಕವಲ್ಲ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529


31 ಜನವರಿ 2024

30 ಜನವರಿ 2024

ಸಂಸ್ಕೃತಿ ಸಂಸ್ಕಾರ ಬೆಳೆಸುವ ಮಿಶ್ರ ಮಾಧುರ್ಯ.

 

ಸಂಸ್ಕೃತಿ ಸಂಸ್ಕಾರ ಬೆಳೆಸುವ  ಮಿಶ್ರ ಮಾಧುರ್ಯ.


ಸೋಷಿಯಲ್ ಮೀಡಿಯಾಗಳು ಜನರ ಸಮಯ ಹಾಳು ಮಾಡುತ್ತಿವೆ. ಯುವ ಜನರ ದಾರಿ ತಪ್ಪಿಸುತ್ತಿವೆ ಎಂಬ ಆರೋಪದ ನಡುವೆ ಕೆಲ ಸಂಘ ಸಂಸ್ಥೆಗಳು, ಸಮಾನ ಮನಸ್ಕ ತಂಡಗಳು ವಾಟ್ಸಪ್ ,ಪೇಸ್ ಬುಕ್ ಮುಂತಾದ ಮಾಧ್ಯಮಗಳ ಮೂಲಕ ಕಲೆ ,ಸಾಹಿತ್ಯ, ಸಂಸ್ಕೃತಿ ಬೆಳೆಸುವ ಕಾಯಕ ಮಾಡುವುದು ಸ್ತುತ್ಯಾರ್ಹ.ಈ ಸಾಮಾಜಿಕ ಮಾಧ್ಯಮಕ್ಕೆ ಹೊಸ ಸೇರ್ಪಡೆ ಕ್ಲಬ್ ಹೌಸ್ ಅಥವಾ ಕೇಳು ಕೋಣೆ.ಇಂತಹ ಕೇಳು ಕೋಣೆಯನ್ನು ಸಮರ್ಪಕವಾಗಿ ಬಳಸಿಕೊಂಡು 

ಡಾ.ಗಣಪತಿ ಹೆಗಡೆ ರವರ ನೇತೃತ್ವದಲ್ಲಿ 

ಮೈತ್ರಿ ಫೌಂಡೇಶನ್ ರವರು ಸಂಸ್ಕೃತ ಮತ್ತು ಸಂಸ್ಕೃತಿಗಳ ಪ್ರಸಾರ ಮಾಡುವಲ್ಲಿ ಬಹಳ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಈಗಾಗಲೇ 123 ದಿನಗಳ ಕಾಲ  ಸತತವಾಗಿ ಮುಂಜಾನೆಯ "ಮಿಶ್ರ ಮಾಧುರ್ಯ" ಕಾರ್ಯಕ್ರಮದಲ್ಲಿ ಕನಿಷ್ಠ ಮುನ್ನೂರಕ್ಕೂ ಹೆಚ್ಚು ಶ್ರೋತೃಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಪ್ರತಿದಿನ ಮುಂಜಾನೆ ಆರೂವರೆಯಿಂದ ಎಂಟರವರೆಗೆ ‌ನಡೆಯುವ ಈ ಕಾರ್ಯಕ್ರಮದ ಹಿಂದೆ ಒಂದು ಸಂಘಟಿತ ಪ್ರಯತ್ನ ಇರುವುದು ಎದ್ದು ಕಾಣುತ್ತದೆ.ರಾಮತಾರಕ ಜಪದ ಮೂಲಕ ಆರಂಭವಾಗುವ ಕೇಳು ಕೋಣೆಯ ಈ ಕಾರ್ಯಕ್ರಮದಲ್ಲಿ

ಗೀತಾ ಪಠಣವಿರುತ್ತದೆ. ವೇದ ಘೋಷದ ಶ್ಲೋಕಗಳ ಪಠಣ ಮತ್ತು ಅರ್ಥವಿವರಣೆ ಇರುತ್ತದೆ.ನಮ್ಮ ಮೆದುಳಿಗೆ ಮೇವು ಹಾಕುವ ನಮ್ಮ ಸಂಸ್ಕಾರ ಸಂಸ್ಕೃತಿ ಪರಿಚಯ ಮಾಡುವ  ರಸ ಪ್ರಶ್ನೆ ಮೂಡಿಬರುತ್ತದೆ.  ನಾವು ಬಾಲ್ಯದಲ್ಲಿ "ಈಯಂ ಆಕಾಶವಾಣಿ..".ಎಂಬ ಬಲದೇವಾನಂದ್ ಸಾಗರ್ ರವರ  ಸಂಸ್ಕೃತ ವಾರ್ತೆಯನ್ನು ನೆನಪಿಸುವ ಸಂಸ್ಕೃತ ವಾರ್ತೆಯನ್ನು ಕೇಳುವಾಗ ಸಾಮಾನ್ಯ ಜ್ಞಾನದ ಜೊತೆ ಜೊತೆಗೆ ಸಂಸ್ಕೃತ ಭಾಷೆಯ ಜ್ಞಾನ ವಿಕಾಸ ಆಗುವಲ್ಲಿ ಸಹಕಾರಿ.  ಇದರ ಜೊತೆಗೆ ನಮ್ಮ ಆರೋಗ್ಯದ ಬಗ್ಗೆ ಆಯುರ್ವೇದ ಮೂಲದ ಔಷಧೀಯ ಗುಣಗಳ ಪದಾರ್ಥಗಳ ಬಗ್ಗೆ ಮಾಹಿತಿಯನ್ನು ನೀಡುವ  ಅಂಗೈಯಲ್ಲಿ ಆರೋಗ್ಯ ನಮಗೆ ಬಹಳ ಉಪಯುಕ್ತವಾಗಿದೆ. ಹೀಗೆ ಹಲವಾರು ಪ್ರಕಾರಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಕಿವಿಯಾಗುವ ಅವಕಾಶ ಸಿಕ್ಕಿದ್ದು ನಮ್ಮ ಭಾಗ್ಯ ಎಂದು ಹಲವಾರು ಕೇಳುಗರು ತಮ್ಮ ಮನದಾಳದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮದ ಕೇಂದ್ರ ಬಿಂದು ಮುತ್ತು ಮಾರ್ಗದರ್ಶಕರಾದ ಸಂಸ್ಕೃತ ವಿದ್ವಾನ್ ಡಾ. ಗಣಪತಿ  ಹೆಗಡೆ ರವರು   ಸದ್ಯದಲ್ಲೇ ಇದಕ್ಕೆ ಇನ್ನೂ ಕೆಲ ಅಂಶಗಳನ್ನು ಸೇರಿಸಿ ಈ ಕೇಳುಕೋಣೆಯ ಮಿಶ್ರಮಾಧುರ್ಯ ಕಾರ್ಯಕ್ರಮವನ್ನೂ ಮತ್ತಷ್ಟು ಮಧುರವಾಗಿಸುವ ಸುಳಿವು ನೀಡಿದ್ದಾರೆ. ನಾನಂತೂ ಪ್ರತಿ ದಿನ ಮುಂಜಾನೆ  ಈ ಮಧುರಾನುಭೂತಿ ಪಡೆಯುತ್ತಿರುವೆ ನೀವು ಸಹ ಇಂತಹ ಕ್ಲಬ್ ಹೌಸ್ ಕಾರ್ಯಕ್ರಮ ಕೇಳಿ ನಿಮ್ಮ ವ್ಯಕ್ತಿತ್ವ ಉತ್ತಮ ಪಡಿಸಿಕೊಳ್ಳಬಹುದು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

29 ಜನವರಿ 2024

ಪರೀಕ್ಷಾ ಪೇ ಚರ್ಚಾ..ಮತ್ತು ಸಲಹೆಗಳು


ಪರೀಕ್ಷಾ ಪೇ ಚರ್ಚಾ..ಮತ್ತು ಸಲಹೆಗಳು 


ನೆಹರೂ ರವರು ಮಕ್ಕಳ ಪ್ರೀತಿಯ ಚಾಚಾ ನೆಹರೂ ಆಗಿದ್ದರು.ಡಾ ಅಬ್ದುಲ್ ಕಲಾಂ ಜಿ ರವರು ಮಕ್ಕಳಿಗೆ ಅಮೂಲ್ಯವಾದ ಸಲಹೆ ಮಾರ್ಗದರ್ಶನ ನೀಡಿ ಪುಸ್ತಕಗಳನ್ನು ಸಹ ಬರೆದು ಹುರಿದುಂಬಿಸಿದರು.ಅದೇ ಹಾದಿಯಲ್ಲಿ ನಮ್ಮ ಪ್ರಧಾನಿಯವರು ಸಾಗುತ್ತಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಮಾನ್ಯ ಪ್ರಧಾನ ಮಂತ್ರಿಗಳು ಪರೀಕ್ಷಾ ಪೆ ಚರ್ಚಾ 2024 ನಡೆಸಿಕೊಟ್ಟರು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ನೇರ ಸಂವಾದ ನಡೆಸಿದರು. ಈ ಕಾರ್ಯಕ್ರಮವು ದೆಹಲಿಯ  ಭಾರತ್‌ ಮಂಟಪದಲ್ಲಿ ಬೆಳಿಗ್ಗೆ 11:00 ಗಂಟೆಯಿಂದ  ನಡೆಯಿತು  ಈ ಬಾರಿ  ಒಟ್ಟು 205.62 ಲಕ್ಷ ವಿದ್ಯಾರ್ಥಿಗಳು, 14.93 ಲಕ್ಷ ಶಿಕ್ಷಕರು ಮತ್ತು 5.69 ಲಕ್ಷ ಪೋಷಕರು ಪರೀಕ್ಷಾ ಪೇ ಚರ್ಚಾ 2024 ನೋಂದಾಯಿಸಿಕೊಂಡಿದ್ದರು. 


ಮಾನ್ಯ ಪ್ರಧಾನ ಮಂತ್ರಿಗಳು  ಪರೀಕ್ಷೆಯ ಒತ್ತಡವನ್ನು ನಿವಾರಿಸುವ ಮಾರ್ಗಗಳ ಬಗ್ಗೆ ಸಾಮೂಹಿಕವಾಗಿ ಕಾರ್ಯತಂತ್ರ ರೂಪಿಸಲು ಅತ್ಯಂತ ಸ್ಮರಣೀಯ ಸಭೆ ಇದಾಗಿದೆ ಎಂದರು.

ಜೊತೆಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ಗೊಂದಲ ನಿವಾರಿಸುವ ಪ್ರಯತ್ನ ಮಾಡಿದರು. ಅದರಲ್ಲೂ, ಪರೀಕ್ಷೆಯ ಕುರಿತು ವಿದ್ಯಾರ್ಥಿಗಳು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದು, ಪ್ರಧಾನಿಯವರು  ಹಲವು ಸಲಹೆಗಳನ್ನು ನೀಡಿದ್ದಾರೆ. ಉದಾಹರಣೆ, ನಿದರ್ಶನಗಳ ಮೂಲಕ ಪರೀಕ್ಷಾ ಭಯ ಹೋಗಲಾಡಿಸಲು ಯತ್ನಿಸಿದ್ದಾರೆ. ಅವುಗಳಲ್ಲಿ ಪ್ರಮುಖ 10 ಸಲಹೆಗಳು ಇಲ್ಲಿವೆ.


ರೈಲು ಬರುತ್ತಲೇ ಯಾರೂ ಸ್ಟೇಷನ್‌ ತಲುಪುವುದಿಲ್ಲ. ರೈಲು ಬರುವ 10 ನಿಮಿಷ ಮೊದಲೇ ತೆರಳುತ್ತೇವೆ. ಹಾಗೆಯೇ, ಪರೀಕ್ಷೆಯ ಕೊಠಡಿಗೂ ಮೊದಲೇ ತೆರಳಬೇಕು. ಕೊಠಡಿಯ ಬಾಗಿಲಿನವರೆಗೆ ಪುಸ್ತಕ ಹಿಡಿದುಕೊಂಡು ಹೋಗಬಾರದು. 10 ನಿಮಿಷ ಮೊದಲೇ ಪರೀಕ್ಷಾ ಕೇಂದ್ರಕ್ಕೆ ತೆರಳಿ. ಗೆಳೆಯರೊಂದಿಗೆ ಮಾತನಾಡಿ, ಒಂದು ಜೋಕ್‌ ಹೇಳಿ, ಮೊದಲು ನಿರಾತಂಕವಾಗಿ ಉಸಿರಾಡಿ.

ಪ್ರಶ್ನೆಪತ್ರಿಕೆ ಕೈಗೆ ನೀಡುತ್ತಲೇ ಗಾಬರಿಯಾಗದಿರಿ. ಪ್ರಶ್ನೆ ಪತ್ರಿಕೆ ಸಿಗುತ್ತಲೇ ಎಲ್ಲ ಪ್ರಶ್ನೆಗಳನ್ನು ಓದಿಕೊಳ್ಳಿ. ಯಾವ ಪ್ರಶ್ನೆಗೆ ಹೆಚ್ಚು ಸಮಯ ಬೇಕಾಗುತ್ತದೆ ಎಂಬುದನ್ನು ಯೋಚಿಸಿ. ಊಟ ಮಾಡುವಾಗ ಯಾರೂ ಗಡಿಯಾರ ನೋಡುವುದಿಲ್ಲ. ಹಾಗೆಯೇ, ಪರೀಕ್ಷೆ ಬರೆಯುವಾಗ ಅನಗತ್ಯವಾಗಿ ಗಡಿಯಾರ ನೋಡಿಕೊಳ್ಳದಿರಿ. ಅವಸರಕ್ಕೆ ಬಿದ್ದು ಬರೆಯಲು ಮುಂದಾಗದಿರಿ.

ಪರೀಕ್ಷೆಗೆ ಹೆಚ್ಚಿನ ವಿದ್ಯಾರ್ಥಿಗಳು ಓದಿಕೊಂಡು ಹೋಗುತ್ತಾರೆಯೇ ಹೊರತು, ಮೊದಲು ಬರೆದು ಬರೆದು ಅಭ್ಯಾಸ ಮಾಡಿಕೊಂಡಿರುವುದಿಲ್ಲ. ಹಾಗಾಗಿ, ಎಷ್ಟೇ ಓದಿದರೂ ಪರೀಕ್ಷೆಯಲ್ಲಿ ಉತ್ತಮವಾಗಿ ಬರೆಯಲು ಆಗುವುದಿಲ್ಲ. ಹಾಗಾಗಿ, ಪರೀಕ್ಷೆಗೂ ಮೊದಲು ಪ್ರಶ್ನೆಗಳಿಗೆ ಉತ್ತರ ಬರೆದು ಬರೆದು ಅಭ್ಯಾಸ ಮಾಡಿಕೊಳ್ಳಿ. ಆಗ ಮನನವೂ ಆಗುತ್ತದೆ, ಪರೀಕ್ಷೆಯಲ್ಲಿ ಸುಲಭವಾಗಿ ಬರೆಯುವುದೂ ಸಾಧ್ಯವಾಗುತ್ತದೆ.

ಯಾರೇ ಆಗಲಿ, ನೀರಿಗೆ ಇಳಿಯದ ಹೊರತು ಈಜು ಕಲಿಯಲು ಸಾಧ್ಯವಿಲ್ಲ. ಹಾಗೆಯೇ, ಹಳೆಯ ಪ್ರಶ್ನೆಪತ್ರಿಕೆಗಳಿಗೆ, ಪ್ರಶ್ನೆಗಳಿಗೆ ಬರೆದು, ನೋಟ್ಸ್‌ಗಳನ್ನು ಮಾಡಿಕೊಂಡು ಪರೀಕ್ಷೆಗೆ ತಯಾರಾಗಿ. ಬರೆದು ಅಭ್ಯಾಸ ಮಾಡಿಕೊಂಡರೆ, ಮನನ ಮಾಡಿಕೊಂಡರೆ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆ ಹೊಂದಬಹುದು.

ವಿದ್ಯಾರ್ಥಿಗಳು ಓದಿಕೊಂಡು, ಬರೆದುಕೊಂಡು ಪರೀಕ್ಷೆಗೆ ಹೋಗುವುದರ ಜತೆಗೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವಾಗಲೇ ಶಿಕ್ಷಕರೊಂದಿಗೆ ಉತ್ತಮ ಒಡನಾಟ ಇಟ್ಟುಕೊಳ್ಳಬೇಕು. ಓದುವಾಗ ಗೊಂದಲ ಬಂದರೆ ಶಿಕ್ಷಕರಿಗೆ ಪ್ರಶ್ನೆ ಕೇಳಬೇಕು, ಮನೆಯಲ್ಲಿದ್ದರೆ ಮೊಬೈಲ್‌ ಕರೆ ಮಾಡಬೇಕು. ಆಗ ತಕ್ಷಣವೇ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ.

ಎಲ್ಲ ವಿದ್ಯಾರ್ಥಿಗಳ ಬಳಿಯೂ, ಮನೆಗಳಲ್ಲೂ ಮೊಬೈಲ್‌ ಇದೆ. ಆ ಮೊಬೈಲ್‌ಅನ್ನು ನಿತ್ಯ ಚಾರ್ಜ್‌ ಮಾಡದಿದ್ದರೆ ಅದು ಸ್ವಿಚ್‌ಆಫ್‌ ಆಗುತ್ತದೆ. ಹಾಗೆಯೇ ಮನುಷ್ಯನ ದೇಹವನ್ನೂ ರಿಚಾರ್ಜ್‌ ಮಾಡಬೇಕಾಗುತ್ತದೆ. ಅದರಲ್ಲೂ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮೆದುಳು, ಮನಸ್ಸಿನ ಜತೆಗೆ ದೇಹವನ್ನೂ ಉಲ್ಲಸಿತಗೊಳಿಸಬೇಕು.

ವಿದ್ಯಾರ್ಥಿಗಳು ಒಂದೇ ಕಡೆ ಓದುವ ಬದಲು ಎಳೆ ಬಿಸಿಲಿನಲ್ಲಿ ಕುಳಿತು ಓದಬೇಕು. ಶಾಂತಿಯುತ ವಾತಾವರಣದಲ್ಲಿ ಅಧ್ಯಯನ ಮಾಡಬೇಕು. ಸರಿಯಾಗಿ ನಿದ್ದೆ ಮಾಡಬೇಕು. ಮೊಬೈಲ್‌ನಲ್ಲಿ ಒಂದರ ಹಿಂದೆ ಒಂದು ರೀಲ್ಸ್‌ಗಳನ್ನು ನೋಡಿದರೆ ಮೊದಲು ನೋಡಿದ ರೀಲ್‌ ನೆನಪಿರುವುದಿಲ್ಲ. ಹಾಗಾಗಿ, ಎಡೆಬಿಡದೆ ಓದುವ ಬದಲು ದೇಹಕ್ಕೆ ಬೇಕಾಗುವಷ್ಟು ನಿದ್ದೆ ಮಾಡಬೇಕು. ಇದು ಮೆದುಳು, ಮನಸ್ಸು ಹಾಗೂ ದೇಹದ ಮೇಲೆ ಪರಿಣಾಮ ಬೀರುತ್ತದೆ. ಹಾಗಂತ ಮೋದಿ ಹೇಳಿದರು ಎಂದು ಬರೀ ನಿದ್ದೆಯನ್ನೇ ಮಾಡಬೇಡಿ ಎಂದು ಚಟಾಕಿ ಹಾರಿಸಿದರು.

ಮಕ್ಕಳು ಓದುವುದು, ಬರೆಯುವುದು, ಮನನ ಮಾಡಿಕೊಳ್ಳುವುದು ಎಷ್ಟು ಮುಖ್ಯವೋ ಆಹಾರವೂ ಅಷ್ಟೇ ಮುಖ್ಯ. ಪರೀಕ್ಷೆಯ ದಿನಗಳಲ್ಲಿ ನಿಯಮಿತ ಆಹಾರ ಸೇವಿಸಿ. ಬಡತನ ಇರಲಿ ಸಿರಿತನ ಇರಲಿ ಇರುವ ಆಹಾರ ಸೇವಿಸಿ. ಸರಿಯಾದ ಸಮಯಕ್ಕೆ ಊಟ ಮಾಡಿ.

ವ್ಯಾಯಾಮವು ವಿದ್ಯಾರ್ಥಿಗಳಿಗೆ ಪ್ರಮುಖವಾಗಿದೆ. ನಿತ್ಯವೂ ಬೆಳಗ್ಗೆ ಎದ್ದು ಹಲ್ಲುಜ್ಜುವ ರೀತಿ, ಬೆಳಗ್ಗೆ ಎದ್ದ ತಕ್ಷಣ 10 ನಿಮಿಷವಾದರೂ ವ್ಯಾಯಾಮ ಮಾಡಿ. ಇದರಿಂದ ದೇಹವು ಉಲ್ಲಾಸಗೊಳ್ಳುತ್ತದೆ. ದೈಹಿಕ ಚಟುವಟಿಕೆಯು ವಿದ್ಯಾರ್ಥಿಗಳಿಗೆ ಪ್ರಮುಖವಾಗಿದೆ.

ನಾವು ಚಳಿಯೊಂದಿಗೆ ಜೀವನ ಸಾಗಿಸುವ ಮನಸ್ಥಿತಿ ರೂಢಿಸಿಕೊಂಡರೆ, ಹೆಚ್ಚು ಚಳಿ ಎನಿಸುವುದಿಲ್ಲ. ಪರೀಕ್ಷೆಯೂ ಹಾಗೆಯೇ ನಾವು ಮೊದಲು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವ ದೃಢ ನಿಶ್ಚಯ ಮಾಡಿಕೊಳ್ಳಬೇಕು. ನಾವು ಮೊದಲು ಮೆದುಳನ್ನು ಪರೀಕ್ಷೆಗೆ ಸಿದ್ಧಗೊಳಿಸುವ ಜತೆಗೆ ಮನಸ್ಸನ್ನೂ ಹುರಿಗೊಳಿಸಬೇಕು. ಈ ಪರೀಕ್ಷೆಯಲ್ಲಿ ನಾನು ಉತ್ತಮ ಅಂಕ ಪಡೆಯುತ್ತೇನೆ ಎಂದು ನಿಶ್ಚಯ ಮಾಡಿಕೊಳ್ಳಬೇಕು. ಎಂದು ತಿಳಿಸಿದ್ದಾರೆ.


ಮಾನ್ಯ ಪ್ರಧಾನ ಮಂತ್ರಿಗಳು ಈ ಪರೀಕ್ಷ ಪೆ ಚರ್ಚಾ ಕಾರ್ಯಕ್ರಮದಲ್ಲಿ ಕೇವಲ ಮಕ್ಕಳಿಗೆ ಮಾತ್ರ ಸಲಹೆ ನೀಡದೆ ಪೋಷಕರು ಮತ್ತು ಶಿಕ್ಷಕರಿಗೂ ಕೆಲ ಕಿವಿ ಮಾತುಗಳನ್ನು ಹೇಳಿದರು.

 ಕೆಲವು ಪೋಷಕರು ಮಗುವಿನ ರಿಪೋರ್ಟ್ ಕಾರ್ಡನ್ನು ತಮ್ಮ ವಿಸಿಟಿಂಗ್ ಕಾರ್ಡ್ ಆಗಿ ಪರಿವರ್ತಿಸುತ್ತಾರೆ.

ಸ್ವತಃ ಯಶಸ್ವಿಯಾಗದಂತಹ ಪೋಷಕರು ತಮ್ಮ ಮಕ್ಕಳ ರಿಪೋರ್ಟ್ ಕಾರ್ಡ್ ಅನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ.

ಅವರು ಎಲ್ಲಿಗೆ ಹೋದರೂ, ಅವರು ತಮ್ಮ ಮಕ್ಕಳ ಬಗ್ಗೆ ಕಥೆಗಳನ್ನು ಹೇಳುತ್ತಾ, ತಮ್ಮ ಯಶಸ್ಸೆನ್ನುವಂತೆ ಬಿಂಬಿಸುತ್ತಾರೆ.

 ಪೋಷಕರು ತಮ್ಮ ಮಕ್ಕಳನ್ನು ಯಾವಾಗಲೂ ಶಪಿಸುತ್ತಾರೆ, ಆದ್ದರಿಂದ ಇದು ನಿಮ್ಮ ಮನಸ್ಸಿನಲ್ಲಿ ರೂಢಿಯಾಗುತ್ತದೆ.ಇದು ತಪ್ಪಬೇಕು ಎಂದರು 

ಪೋಷಕರು-ಮಕ್ಕಳ ಸಂವಹನ ಹೆಚ್ಚಬೇಕು.

ಮಕ್ಕಳಲ್ಲಿ ಒತ್ತಡವನ್ನು ಕಡಿಮೆ ಮಾಡುವಲ್ಲಿ ಶಿಕ್ಷಕರು ಸಹ ಪ್ರಮುಖವಾದ ಪಾತ್ರ ವಹಿಸುತ್ತಾರೆ ಹಾಗೂ ವಹಿಸಬೇಕು.

 ಆದ್ದರಿಂದ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಯಾವಾಗಲೂ ಸಕಾರಾತ್ಮಕ ಸಂಬಂಧ ಇರಬೇಕು.

 ಶಿಕ್ಷಕರ ಕೆಲಸ ಕೇವಲ ಕೆಲಸ ಮಾಡುವುದು ಮಾತ್ರವಲ್ಲ, ಜೀವನವನ್ನು ರೂಪಿಸುವುದು, ಜೀವನಕ್ಕೆ ಶಕ್ತಿ ನೀಡುವುದು,

ಪರೀಕ್ಷೆಯ ಒತ್ತಡವನ್ನು ವಿದ್ಯಾರ್ಥಿಗಳು ಮತ್ತು ಇಡೀ ಕುಟುಂಬ ಮತ್ತು ಶಿಕ್ಷಕರು ಒಟ್ಟಾಗಿ ಪರಿಹರಿಸಬೇಕು.

 ನಾವು ಯಾವುದೇ ಒತ್ತಡವನ್ನು ತಡೆದುಕೊಳ್ಳಲು ಸಮರ್ಥರಾಗಿ, ನಮ್ಮ ಮಾನಸಿಕ ಸ್ಥಿತಿಯಿಂದ ಒತ್ತಡವನ್ನು ನಿವಾರಿಸಬೇಕು.

 ಏನೇ ತೊಂದರೆಗಳಿರಲಿ, ನಾವು ಅದನ್ನು ಕುಟುಂಬದಲ್ಲಿಯೂ ಚರ್ಚಿಸಬೇಕು.

ಜೀವನದಲ್ಲಿ ಯಾವುದೇ ಸವಾಲು ಮತ್ತು ಸ್ಪರ್ಧೆ ಇಲ್ಲದಿದ್ದರೆ, ಜೀವನವು ಸ್ಫೂರ್ತಿದಾಯಕ ಮತ್ತು ಬುದ್ಧಿಹೀನವಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳು, ಪೋಷಕರು, ಶಿಕ್ಷಕರು ಕಾರ್ಯ ಪ್ರವೃತ್ತರಾಗಬೇಕು ಎಂದು ಕರೆ ನೀಡಿದರು 


ಈ ಸಲಹೆಗಳು ಕೇವಲ ಮಕ್ಕಳಿಗೆ ಮಾತ್ರವಲ್ಲದೆ ಈ ವರ್ಷ ಪರೀಕ್ಷೆ ಬರೆಯುವ ಎಲ್ಲಾ ಪರೀಕ್ಷಾರ್ಥಿಗಳಿಗೆ, ಪೋಷಕರಿಗೆ, ಶಿಕ್ಷಕರಿಗೆ  ನೀಡಿದ ಸಲಹೆಯಂತೆ ತೋರುತ್ತದೆ. ಇವುಗಳನ್ನು ಪಾಲಿಸಿ,ಹಾಗೂ ಗೆಲ್ಲವ ಪಾಲಿಸಿ ನಿಮ್ಮದಾಗಲಿ ಪರೀಕ್ಷೆ ಬರೆಯುವ ಸರ್ವರಿಗೂ ಶುಭವಾಗಲಿ..


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು

ತುಮಕೂರು

9900925529