21 ಡಿಸೆಂಬರ್ 2023

ಅಕ್ಷರ ಸಂತ ಡಾ.ಕವಿತಾ ಕೃಷ್ಣ















 

*ಅಕ್ಷರ ಸಂತ ಡಾ.ಕವಿತಾ ಕೃಷ್ಣ*

ವಿದ್ಯಾ ವಾಚಸ್ಪತಿ ,ಸರ್ವೊತ್ತಮ ಆಚಾರ್ಯ ಡಾ. ಕವಿತಾ ಕೃಷ್ಣ ರವರು ನಮ್ಮೊಂದಿಗೆ ಇರುವ ಸರಳತೆಯ ಸಾಕಾರ ಮೂರ್ತಿ,  ಜ್ಞಾನದ ಆಗರ, ಪ್ರಖರ ವಾಗ್ಮಿ,  ಅಕ್ಷರ ಸಂತ.

ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಬರೆದ ಮಹಾನ್ ಜ್ಞಾನ ಶಿಖರ ಇವರು.ಸಂಸ್ಕೃತ ಮತ್ತು ಕನ್ನಡ ಭಾಷೆಯಲ್ಲಿ ಪಾಂಡಿತ್ಯ ಪಡೆದ ಇವರು ಆದರ್ಶ ಶಿಕ್ಷಕರು, ಕಾದಂಬರಿಕಾರರು, ಮಕ್ಕಳ ಸಾಹಿತ್ಯದಲ್ಲಿ ಅಪಾರ ಹೆಸರು ಗಳಿಸಿದವರು,  ಕರ್ನಾಟಕ ಶಾಲಾ ಶಿಕ್ಷಣ ಪಠ್ಯ ಪುಸ್ತಕ ಸಮಿತಿಯ ಸದಸ್ಯರಾಗಿದ್ದವರು, ಉತ್ತಮ ಸಂಘಟಕರು ,ಪ್ರಕಾಶಕರು, ಪ್ರಖರ ವಾಗ್ಮಿ, ಜನಾನುರಾಗಿ, ಯುವ ಬರಹಗಾರರ ಬೆನ್ತಟ್ಟುವ ಗುರುಗಳು. ಇನ್ನೂ ಇವರ ಬಗ್ಗೆ ಹೇಳುತ್ತಾ ಹೋದರೆ ಗ್ರಂಥಗಳನ್ನೇ ಬರೆಯಬೇಕಾದೀತು.

20ಕವನ ಸಂಕಲನಗಳು,20 ನಾಟಕಗಳು,10 ಅಭಿನಂದನಾ ಗ್ರಂಥಗಳು, 42 ಜೀವನ ಚರಿತ್ರೆಗಳು,25 ಮಕ್ಕಳ ಸಾಹಿತ್ಯ ಕೃತಿಗಳು,2 ಕಾದಂಬರಿಗಳು,14 ಮಹಾನ್ ಕೃತಿಗಳು, 26 ಸಂಪಾದನಾ ಕೃತಿಗಳು,13 ಶೈಕ್ಷಣಿಕ ಕೃತಿಗಳು,6 ಸಂಶೋಧನಾ ಕೃತಿಗಳು ಸೇರಿ ಮುನ್ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಇವರ 30 ಕ್ಕು ಹೆಚ್ಚು ಕೃತಿಗಳು ಸದ್ಯದಲ್ಲೇ ಪ್ರಕಟಗೊಳ್ಳಲಿವೆ. ಇದನ್ನು ನೋಡಿದಾಗ ನಮಗೆ ಡಾ ಕವಿತಾ ಕೃಷ್ಣ ರವರು ಸಾಹಿತ್ಯದ ಮೇರು ಪರ್ವತ ಎಂದರೆ ಅತಿಶಯವೇನಲ್ಲ.

ಇವರ ಮಹಾನ್ ಕೃತಿಗಳಾದ ವಾಲ್ಮೀಕಿ ವಚನ ರಾಮಾಯಣ,  ಹಾಗೂ ವ್ಯಾಸ ಭಾರತ ಕೃತಿಗಳು ಹಲವಾರು ಮರುಮುದ್ರಣ ಕಂಡಿವೆ. ನಾಡಿನೆಲ್ಲೆಡೆ ಸಹೃದಯರು ಈ ಪುಸ್ತಕಗಳನ್ನು ಓದಿ ಪುನೀತರಾಗಿದ್ದಾರೆ.
ತಮ್ಮದೇ ಕವಿತಾ ಪ್ರಕಾಶನ ಆರಂಭಿಸಿ ಏಕಕಾಲಕ್ಕೆ ಅವರು ಬರೆದ 30 ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದ್ದು ಒಂದು ದಾಖಲೆಯಾಗಿ ಉಳಿದಿದೆ.ತಾನೂ ಬೆಳೆದು ಇತರರ ಬೆಳೆಸುವ ಉದಾತ್ತ ಗುಣದ ಇವರು ನಾಡಿನ ಉದಯೋನ್ಮುಖ ಬರಹಗಾರರಿಗೆ ತಮ್ಮ ಪ್ರಕಾಶನದ ವತಿಯಿಂದ ಅತೀ ಕಡಿಮೆ ಬೆಲೆಯಲ್ಲಿ ಪುಸ್ತಕ ಪ್ರಕಾಶನ ಮಾಡಿಸಿದ ಪ್ರೋತ್ಸಾಹ ನೀಡುವ ಕವಿಸ್ನೇಹಿ ನಮ್ಮ ಕವಿತಾ ಕೃಷ್ಣ ರವರು.
ಸುಮಾರು ನಾಲ್ಕು ನೂರು ಕೃತಿಗಳಿಗೆ ಅವರು ಮುನ್ನುಡಿ ಬೆನ್ನುಡಿ ಬರೆದಿರುವುದು  ಸಾಹಿತಿಗಳಿಗೆ ಅವರು  ಬೆಂಬಲ ನೀಡುತ್ತಿರುವುದಕ್ಕೆ  ಮತ್ತೊಂದು  ಉದಾಹರಣೆ.

ಮನೆಯನ್ನೇ ಸಾಹಿತ್ಯ ಮಂದಿರವನ್ನಾಗಿ ಪರಿವರ್ತಿಸಿರುವ ಅವರು ನಿರಂತರವಾಗಿ ಸಾಹಿತ್ಯಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿದ್ದಾರೆ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕನ್ನಡದ ನುಡಿಸೇವೆಗೈದ ಇವರು ವಿದೇಶಗಳಲ್ಲೂ ಕನ್ನಡ ಪಸರಿಸುವ ಕಾಯಕ ಮಾಡಿದ್ದಾರೆ.ಡಾ.ರಾಜ್ ಕುಮಾರ್ ನೇತೃತ್ವದಲ್ಲಿ ನಡೆದ ಗೋಕಾಕ್ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಕನ್ನಡದ ಕಟ್ಟಾಳು ನಮ್ಮ ಡಾ. ಕವಿತಾ ಕೃಷ್ಣ ರವರು.

ತಮ್ಮ ಎಪ್ಪತೈದನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ನಾಡಿನ ಇಬ್ಬರು ಮಹಾನ್ ಸ್ವಾಮೀಜಿಗಳು ಅವರನ್ನು ಆಶೀರ್ವದಿಸಿದ ಕ್ಷಣಗಳನ್ನು ಅವರು ಸಂತಸದಿಂದ ನೆನೆಯುತ್ತಾರೆ. ನಡೆದಾಡುವ ದೈವ ಶ್ರೀ ಶ್ರೀ  ಡಾ. ಶಿವಕುಮಾರ ಸ್ವಾಮೀಜಿಯವರು,ಜ್ಞಾನ ದಾಸೋಹಿ ಚುಂಚನಗಿರಿ ಕ್ಷೇತ್ರದ ಶ್ರೀ ಡಾ. ಬಾಲ ಗಂಗಾಧರನಾಥ ಸ್ವಾಮೀಜಿಯವರು ಅಂದು ಇವರನ್ನು ಆಶೀರ್ವದಿಸಿದ್ದರು.
ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಕನ್ನಡ ಸಾಹಿತ್ಯ ಪರಿಷತ್ತು  ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ನೀಡಿ ಗೌರವಿಸಿದೆ. ಅವರ ಸಮ್ಮೇಳನದ ಭಾಷಣವನ್ನು ಈಗಲೂ ಹಲವರು ಉಲ್ಲೇಖ ಮಾಡುವುದುಂಟು.

ಇವರ ಸಾಹಿತ್ಯ ಮತ್ತು  ಸಂಘಟನಾ ಶಕ್ತಿ ಗುರುತಿಸಿ ದೇಶ ವಿದೇಶಗಳಲ್ಲಿ ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿವೆ.

ಅವುಗಳಲ್ಲಿ ಪ್ರಮುಖವಾದ
ನವದೆಹಲಿಯ ಭಾರತೀಯ ವಿದ್ಯಾಭವನ ನೀಡುವ ಸರ್ವೋತ್ತಮ ಆಚಾರ್ಯ ಪುರಸ್ಕಾರವು ಬಹಳ ಅತ್ಯನ್ನತವಾದುದು. ಡಾ.ರಾಧಾಕೃಷ್ಣನ್ ರಂತವರಿಗೆ ಇಂತಹ ಪುರಸ್ಕಾರ ನೀಡಲಾಗುತ್ತು ಎಂಬುದನ್ನು ಸ್ಮರಿಸಿಕೊಳ್ಳಬಹುದು. ದಕ್ಷಿಣ ಭಾರತದ ಕೆಲವೇ ಕೆಲವರಿಗೆ ಇಂತಹ ಪುರಸ್ಕಾರ ಲಭಿಸಿರುವುದು. 
ಇದರ ಜೊತೆಯಲ್ಲಿ ಅನೇಕ ಸಂಘ ಸಂಸ್ಥೆಗಳು ಇವರ ಸಾಹಿತ್ಯ ಸೇವೆಯನ್ನು ಗುರ್ತಿಸಿ ಸನ್ಮಾನಿಸಿವೆ. ಇಂತಹ ಮಹಾನ್ ಸಾಹಿತಿ ನಮ್ಮ ಕಾಲಘಟ್ಟದಲ್ಲಿ ಇದ್ದು ನಮಗೆ ಸಲಹೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂಬುದೇ ನಮಗೆ ಸಂತಸದ ವಿಷಯ.  ಇಳಿ ವಯಸ್ಸಿನಲ್ಲೂ ಅವರದು ಯುವಕನ ಚೈತನ್ಯ. ಇಂತಹ ಮಹಾನ್ ಚೇತನ ನಮ್ಮೊಂದಿಗೆ ನೂರ್ಕಾಲ ಬಾಳಲಿ ಎಂದು ಎಲ್ಲಾ ಸಾಹಿತ್ಯಾಭಿಮಾನಿಗಳ ಪರವಾಗಿ ದೇವರಲ್ಲಿ ಬೇಡುವೆ....

*ಸಿಹಿಜೀವಿ ವೆಂಕಟೇಶ್ವರ*
ತುಮಕೂರು
9900925529

ನೀರೆಯರಿಗೆ ಸೀರೆ ದಿನದ ಶುಭಾಶಯಗಳು.


 


ನೀರೆಯರಿಗೆ ಸೀರೆ ದಿನದ ಶುಭಾಶಯಗಳು.


 ನಮ್ಮ ಸಹೋದ್ಯೋಗಿಗಳೊಂದಿಗೆ  ಹೀಗೆ ಮಾತುಕತೆ ನಡೆಯುತ್ತಿತ್ತು. "ಅಯ್ಯೋ ನಮ್ ಮನೆ ಬೀರು ತುಂಬಾ ನಮ್ ಮನೇರ ಸೀರೇನೇ ಸರ್, ಆ ಬೀರ್ ನಲ್ಲಿ ಒಂದ್ ಮೂಲೇನಲ್ಲಷ್ಟೇ ನನ್ ಬಟ್ಟೆಗೆ ಜಾಗ" ಎಂದು ಅವರಿನ್ನೂ ಮಾತು ಮುಗಿಸಿರಲಿಲ್ಲ ಮತ್ತೊಬ್ಬ ಸಹೋದ್ಯೋಗಿ "ಅಯ್ಯೋ ನಮ್ ಮನೆ ಕಥೆನೂ ಅದೇ ಸಾ" ಎಂದರು.

ಇತ್ತೀಚಿನ ದಿನಗಳಲ್ಲಿ ನೈಟಿಯು ಸೀರೆಯ ಸ್ಥಾನ ಆಕ್ರಮಿಸಿಕೊಂಡಿದೆಯೇನೋ ಎಂಬ ಅನುಮಾನ ಮೂಡುತ್ತದೆ.


ನೀರೆಯರು

ಸೀರೆಯಿಂದ ದೂರ

ಪಾಶ್ಚಾತ್ಯ ಮೋಹ.


ಅವ್ಯಾವುದೋ ಪಾಶ್ಚಾತ್ಯ ಮಾದರಿಯ ಡ್ರೆಸ್ ಬಂದರೂ ನಮ್ಮ ಮಹಿಳೆಯರು ಸೀರೆ ಕೊಳ್ಳುವುದು ಮತ್ತು  ಉಡುವುದು ಕಮ್ಮಿಯಾಗಿಲ್ಲ.


ಗಂಡ ಹೆಂಡಿರ ನಡುವೆ ಜಗಳ ಆಗಲು ಸಾಮನ್ಯ ಕಾರಣಗಳಲ್ಲಿ ಸೀರೆ ಕೊಳ್ಳುವ ಕಾರಣಕ್ಕೆ ಹೆಚ್ಚು ಜಗಳವಾಗುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ.

ಇಂತಹ ಜಗಳ ನೋಡಿದ ಮೇಲೆ ನಾನು ಬರದ ಹನಿಗವನ...


ಪ್ರತಿ ಬಾರಿಯೂ

ನಾನು ಸೀರೆ ಕೊಡಿಸಿ

ಎಂದಾದಲೆಲ್ಲಾ ನಿರಾಕರಿಸುವಿರಿ

ನಿಮಗೆ ಅರ್ಥವಾಗುವುದಿಲ್ಲ

ನನ್ನ ಮನಸ್ಥಿತಿ|

ಅವನು ಗೊಣಗಿದ

ನಿನಗೂ ಅರ್ಥವಾಗುವುದಿಲ್ಲ

ನನ್ನ ಆರ್ಥಿಕ ಪರಿಸ್ಥಿತಿ||


ಸೀರೆ ಮಹತ್ವ ತಿಳಿದ ನಮ್ಮವರು ಸೀರೆಗೂ ಒಂದು ದಿನ ಮೀಸಲಿಟ್ಟಿದ್ದಾರೆ ಪ್ರತಿವರ್ಷ ಡಿಸೆಂಬರ್ 21 ನ್ನೂ ಸೀರೆ ದಿನವಾಗಿ ಆಚರಿಸಲಾಗುತ್ತದೆ.

ಸೀರೆಯ ವಿಧಗಳು ನೂರಾರು ಆಯಾ ಪ್ರಾಂತ್ಯ ಸಂಸ್ಕಾರ, ಸಂಪ್ರದಾಯದ ಆಧಾರದ ಮೇಲೆ ಹಲವಾರು ವಿಧಗಳಿವೆ.

ನಮ್ಮ ನಾಡಲ್ಲಿ ಸೀರೆ ಎಂದರೆ ತಟ್ಟನೆ ಹೊಳೆವುದು ಮೈಸೂರು ಸಿಲ್ಕ್ ಜೊತೆಯಲ್ಲಿ ‌ಇಳಕಲ್ ಮೊಳಕಾಲ್ಮೂರು ಸೀರೆಗಳು ಪ್ರಖ್ಯಾತಿ ಪಡೆದಿವೆ. 


ಆಂದ್ರ ಮತ್ತು ತೆಲಾಂಗಣದಲ್ಲಿ 

ಪೋಚಂಪಲ್ಲಿ ಸೀರೆ, ವೆಂಕಟಕಿರಿ ಸೀರೆ, ಗಡ್ವಾಲ್ ಸೀರೆ, ಗುಂಟೂರ ಸೀರೆ, ನಾರಾಯಣ ಪೇಠ್ ಸೀರೆ,ಮಂಗಲಮುರಿ ಸೀರೆ ,ಧರ್ಮಾವರಂ ಸೀರೆ ಎಂಬ ವಿಧಗಳಿವೆ.  ಬಿಹಾರ, ಚತ್ತೀಸ್ ಘಡ ದಲ್ಲಿ ಈರಿರೇಷ್ಮೆ ಸೀರೆ (ಕಾಡು ರೇಷ್ಮೆಯ ಸೀರೆ ) ಪ್ರಸಿದ್ಧ.

ಗುಜರಾತ್, ಹರ್ಯಾಣ, ಗಳಲ್ಲಿ

ತಾರಿನ್ ಜೋಯಿ ಬ್ರೋಕೇಡ್ಪ ,(ಪಟೋಲಾ ) ಟೋಲಾ ಸೀರೆ , 

ಕೇರಳದಲ್ಲಿ ಬಾಂಧಣಿ ಸೀರೆ , ಭಂದೇಜ ಸೀರೆ,ಬಕರಾಂಪುರಂ ಸೀರೆ ಹೆಚ್ಚು ಬಳಕೆಯಲ್ಲಿವೆ.


 ಈಶಾನ್ಯ ರಾಜ್ಯಗಳಲ್ಲಿ

ಚಂದ್ರಗಿರಿ ಸೀರೆ , ಮಹೆಶ್ವರಿ ಸೀರೆ  ಹೆಚ್ಚು ಜನಪ್ರಿಯ.

ತಮಿಳುನಾಡಿನಲ್ಲಿ

ಕಾಂಜೀವರಂ ಸೀರೆ, ಧರ್ಮಾವರಂ ಸೀರೆ, ಅರನಿ ಸೀರೆ, ಮಧುರೈ ಸೀರೆ, ಚಟ್ಟಿನಾಡು ಸೀರೆ, ಛಿನ್ನಲಪತ್ತಿ ಸೀರೆ, ಕೊಯಂಬತ್ತೋರ ಸೀರೆ ಬಹುಬೇಡಿಕೆ ಹೊಂದಿವೆ.

ಉತ್ತರ ಪ್ರದೇಶದಲ್ಲಿ  

ಬನಾರಸಿ ಸೀರೆ (ಬಫ್ಟಾ ಮತ್ತು ಅಮೃ ಶೈಲಿ), ಶಾಲು ಸೀರೆ, ಕಿಂಕಾಬ್ ಸೀರೆ 

ಪಶ್ಚಿಮ ಬಂಗಾಳದಲ್ಲಿ

ಜಾಮ್ದಾನಿ’ ಎಂಬ ಹೆಸರಿನ ಕುಸುರಿ ಕಲೆ ಹಾಗೂ ಜರಿಯುಳ್ಳ ಮಸ್ಲಿನ್ ಸೀರೆ, ಬಿರ್ ಭೌಮ್ ಸೀರೆ, ಕಲ್ಕತ್ತಾ ಕಾಟನ್ ಸೀರೆ ಧಾನಿಖಾಲಿ ಹತ್ತಿ, ಬುಲುಛರಿ, ಫುಲಿಯ ಮತ್ತು ಸಮುದ್ರಗಡದ ವಿಶಿಷ್ಟ ಸೀರೆಗಳು ಢಾಕಾ ಜಾಮ್ದಾನಿ, ಢಾಕಾ ಕಾಟನ್, ಢಾಕಾ ಸಿಲ್ಕ್, ಐದು ಗ್ರಾಂ ಸೀರೆ, ಕೈಯಿಂದ ನೇಯ್ದ ಫೂಲಿಯಾ, ತಾನ್‌ಚೂಡಿ ಸಿಲ್ಕ್, ಬಾಪಾ ಬುಟ್ಟಿ, ಓಂಕೈ ಕಾಟನ್, ಬನಾರಸಿ, ಟಾಂಗೈ ಬಾಲುಚೂಡಿ, ಮಲ್‌ಮಲೈ ಹೀಗೆ ಹಲವು ಬಗೆಯ ಸೀರೆಗಳು 

ಅಬ್ಬಾ! ನಮ್ಮ ಭಾರತದಲ್ಲಿ ಇಷ್ಟೆಲ ಸೀರೆಗಳ ವಿಧಗಳಿವೆ. ಕರ್ನಾಟಕದ ಸೀರೆಗಳ ಕೊಂಡೇ ನಮ್ಮ ಮನೆಗಳ ಬೀರುಗಳು ತುಂಬಿವೆ ಇನ್ನೂ ಈ ಸೀರೆಗಳ ಮಾಹಿತಿ ನಮ್ಮ ನೀರೆಯರಿಗೆ ಸಿಕ್ಕರೆ ನಮ್ಮ ಪುರುಷರನ್ನು ದೇವರೇ ಕಾಪಾಡಬೇಕು.

ಇರಲಿ ಎಲ್ಲಾ ನೀರೆಯರಿಗೆ ಸೀರೆ ದಿನದ ಶುಭಾಶಯಗಳು...


ಸಿಹಿಜೀವಿ ವೆಂಕಟೇಶ್ವರ

ತುಮಕೂರು

19 ಡಿಸೆಂಬರ್ 2023

ನಿಸರ್ಗಕ್ಕೆ ಋಣಿಯಾಗಿರೋಣ.



 


ನಿಸರ್ಗಕ್ಕೆ ಋಣಿಯಾಗಿರೋಣ.


ನಿಸರ್ಗಕ್ಕೆ ನಾವು ಋಣಿಯಾಗಿರಬೇಕು ಎಂದು ಅಂತಃಪ್ರಜ್ಞೆ ಜಾಗೃತಿ ಕೇಂದ್ರದ ಸಂಸ್ಥಾಪಕರಾದ ಶ್ರೀನಿವಾಸ ಅರ್ಕ ಗುರೂಜಿಯವರು ಕರೆ ನೀಡಿದರು.


ಅನನ್ಯ ಕಾಲೇಜು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಗುರೂಜಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. 


ನಮ್ಮ ಸುತ್ತಲಿನ ಪರಿಸರವನ್ನು ಗಮನಿಸಿದರೆ ಚಳಿ, ಮಳೆ, ಬಿಸಿಲು, ಬಿರುಗಾಳಿಯಂತಹ ವಿಭಿನ್ನ ಋತುಮಾನಗಳನ್ನು ಕಾಣುತ್ತೇವೆ.  ನಮಗೆ ನಿಸರ್ಗ  ಎಲ್ಲವನ್ನೂ ನೀಡಿದೆ. ಅದಕ್ಕೆ ನಾವು ಋಣಿಯಾಗಿರಬೇಕು.  ಯಾವಾಗಲೂ ಸಕಾರಾತ್ಮಕವಾಗಿರಬೇಕು. ಯಾವುದೇ ಸನ್ನಿವೇಶಗಳಲ್ಲಿ ರಚನಾತ್ಮಕ ದೃಷ್ಟಿಯಿಂದ ನೋಡುವ ಮನೋಭಾವವನ್ನು ನಾವು ಬೆಳೆಸಿಕೊಂಡಾಗ  ನಮ್ಮೊಳಗೆ ನಿರಾಳವಾದ ಹಾಗೂ  ಹಗುರ ಎಂದೆನಿಸುವ ಭಾವ ಒಡಮೂಡುತ್ತದೆ. ಇಂತಹ ಭಾವ ನಿಮ್ಮ ಉನ್ನತ ವ್ಯಕ್ತಿತ್ವ ರೂಪಿಸುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅದ್ಯಕ್ಷರಾದ ಗೀತಾ ನಾಗೇಶ್ ರವರು ಶ್ರೀನಿವಾಸ ಅರ್ಕ ಗುರೂಜಿಯವರು ಅಂತಾರಾಷ್ಟ್ರೀಯ ಖ್ಯಾತಿಯ ವ್ಯಕ್ತಿತ್ವ ವಿಕಸನ ತರಬೇತುದಾರ ರಾಗಿದ್ದು ಅವರು ನೀಡುವ ಜ್ಞಾನದ ಸದುಪಯೋಗ ಪಡೆದು ನಿಮ್ಮ ವ್ಯಕ್ತಿತ್ವ ಉತ್ತಮಪಡಿಕೊಳ್ಳಿ, ಹಾಗೂ ಕನ್ನಡ ಭಾಷೆಯ ಮಹತ್ವ ಅರಿತು ಉಳಿಸಿ ಬೆಳೆಸುವಲ್ಲಿ ವಿದ್ಯಾರ್ಥಿಗಳು ಕೈಜೋಡಿಸಿ ಎಂದು ನುಡಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಹನ ಮಾಡಿದ ಗುರೂಜಿಯವರು ವಿದ್ಯಾರ್ಥಿಗಳ ಸಂದೇಹಗಳಿಗೆ ಪರಿಹಾರ ಸೂಚಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷರಾದ ಚಿಕ್ಕ ಬೆಳ್ಳಾವಿ ಶಿವಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಕಾರ್ಯದರ್ಶಿಗಳಾದ ಚಾಂದು, ಸಿಹಿಜೀವಿ ವೆಂಕಟೇಶ್ವರ,

ಅನನ್ಯ ಕಾಲೇಜಿನ ಪ್ರಾಂಶುಪಾಲರಾದ   ಡಾಕ್ಟರ್ ವಿಶ್ವಾಸ್  ಲೇಖಕಿಯರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಸುಗುಣದೇವಿ, ಲತಾ ವೆಂಕಟೇಶ್ ಅನನ್ಯ ಕಾಲೇಜು ಸಿಬ್ಬಂದಿ ಉಪಸ್ಥಿತರಿದ್ದರು. 

ಅಹಂಕಾರ...

 ಅಹಂಕಾರ.

ಸುಂದರ ಶಿಲೆಯಾಗಿ ಕೆತ್ತಬಹುದು ಕಲ್ಲನ್ನು ಇಲ್ಲದಿದ್ದರೂ ಯಾವುದೇ ಆಕಾರ|

ಬದಲಿಸಲಾಗುವುದೇ ಇಲ್ಲ

ಮನುಷ್ಯರಲ್ಲಿ ತುಂಬಿಕೊಂಡರೆ ಅಹಂಕಾರ||

18 ಡಿಸೆಂಬರ್ 2023

ಚಿತ್ತಾರ...


 ಓ ನಲ್ಲೆ..  ಮನೆಯ ಬಣ್ಣ ಮಾಸಿರಬಹುದು ಕೊಂಚ|

ಚಿತ್ತಾರ ಬಿಡಿಸುವೆನು ತನು,ಮನದಲಿ ಹಿಡಿದು ಕುಂಚ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು