15 ಡಿಸೆಂಬರ್ 2023

ಹೊಣೆ ಯಾರು...?



 


ಯಾರು ಹೊಣೆ...

ಅವನ  ತಂದೆ ಸರ್ಕಾರಿ ನೌಕರಿಯಲ್ಲಿದ್ದರು.ಅವರ ಅಕಾಲಿಕ ಮರಣದಿಂದ ಆ ಹುಡುಗನ ಅಕ್ಕನಿಗೆ ಅನುಕಂಪದ ಸರ್ಕಾರಿ ನೌಕರಿ ದೊರೆಯಿತು. ನೌಕರಿಯ ಬಲದಿಂದ ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮವಾಯಿತು. ಹೋಗಿ ಬರುವ ಪಯಣ
ಸುಮಾರು 100 ಕಿಲೋಮೀಟರ್ ಆದರೂ ಕೆಲಸ ಸಿಕ್ಕ ಖುಷಿಯಲ್ಲಿ ಅದೇನು ಅಷ್ಟು ತೊಂದರೆ ಎನಿಸಲಿಲ್ಲ.  ತನ್ನ ಹಳ್ಳಿಯಿಂದ ನಗರಕ್ಕೆ, ಪುನಃ ನಗರದಿಂದ ಮತ್ತೊಂದು ನಗರಕ್ಕೆ ಕೆಲಸ ಮಾಡಲು ಹೋಗಿ ಬರಬೇಕಾಗಿತ್ತು. ಆರಂಭದಲ್ಲಿ ಇದು ಕಷ್ಟವಾದರೂ ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೆ ಅಷ್ಟೇ ಸಾಕು ಎಂದು ಬರು ಬರುತ್ತಾ ಕಷ್ಟದ ಜೀವನಕ್ಕೆ ಹೊಂದಿಕೊಂಡಿದ್ದಳು. ದೂರದ ಪ್ರಯಾಣವಾದ್ದರಿಂದ ಬಸ್ ಗಳು ಸಕಾಲದಲ್ಲಿ ಸಿಗದೆ ಕೆಲವೊಮ್ಮೆ ನಗರಕ್ಕೆ ತಲುಪುವುದೇ ರಾತ್ರಿ ಒಂಭತ್ತರ ಮೇಲಾಗುತ್ತಿತ್ತು.ಅಲ್ಲಿಂದ ಹಳ್ಳಿಯ ಮನೆ ಸೇರಲು ಮತ್ತೆ ಕಾಲು ಗಂಟೆ ಬೇಕಾಗುತ್ತಿತ್ತು.
ಕೆಲವು ದಿನ ಡ್ಯೂಟಿಯಿಂದ ರಾತ್ರಿ  ಲೇಟಾಗಿ ಬಂದರೆ ನಗರದಿಂದ ಅಕ್ಕನ ಕರೆತರಲು ಹತ್ತನೇ ತರಗತಿಯಲ್ಲಿ ಓದುವ ತಮ್ಮ ಪಕ್ಕದ ಮನೆಯ ಗೆಳೆಯ ನನ್ನು ಕರೆದುಕೊಂಡು ತನಗೆ ಪರಿಚಿತವಾಗಿರುವ ಅಂಕಲ್ ನಿಂದ  ಬೈಕ್ ಕೇಳಿ ಪಡೆದು ನಗರದಿಂದ ಹಳ್ಳಿಗೆ ಕರೆ ತರುತ್ತಿದ್ದ. ರಾತ್ರಿ ಹತ್ತರ ನಂತರ ಬರುವ ಮಗಳ ಸ್ಥಿತಿಯನ್ನು ನೋಡಿ " ಅಲ್ಲೇ ಟೌನ್ ನಲ್ಲಿ ಒಂದು ರೂಮೋ ಪಿ ಜಿ ನೋ ಮಾಡ್ಕಂಡಿರಮ್ಮ ರಾತ್ರಿ ಹೊತ್ತು ಇಂಗ್ ಬಂದ್ರೆ ಎಂಗಮ್ಮ" ಎಂದು ತಾಯಿ ಸಲಹೆ ನೀಡಿದ್ದರು. ಮಗಳು ಇದನ್ನು ನಯವಾಗಿಯೇ ನಿರಾಕರಿಸಿದ್ದಳು.
ತಂದೆಯ ಅನುಪಸ್ಥಿತಿಯಲ್ಲಿ ತಾಯಿ,  ಮಗಳು, ಮಗ ಸಂತೋಷವಾಗಿ ಜೀವನ ಸಾಗಿಸುತ್ತಿದ್ದರು. ಅದ್ಯಾರ ಕೆಟ್ಟ ದೃಷ್ಟಿ ಬಿತ್ತೋ ಏನೋ..
ಅಂದು ರಾತ್ರಿ ಒಂಭತ್ತು ಗಂಟೆಗೆ ಅಕ್ಕ ಪೋನ್ ಮಾಡಿದರು.ತಮ್ಮನು  ಪಕ್ಕದ ಮನೆಯ ಅಂಕಲ್ ನಿಂದ  ಬೈಕ್ ಪಡೆದು ತನ್ನ ಗೆಳೆಯನ ಜೊತೆಯಲ್ಲಿ ನಗರದ ಕಡೆ ಸ್ವಲ್ಪ ಜೋರಾಗಿಯೇ ಎಕ್ಸಲೇಟರ್  ಒತ್ತಿದ. 
ಅತ್ತ ಅಕ್ಕ ಕಾಯುತ್ತಿದ್ದರು.ಈ ಮಧ್ಯ ರಾತ್ರಿ ಹತ್ತರ ಸಮಯದಲ್ಲಿ ಒಂಟಿ ಯುವತಿ ನಿಂತಿರುವುದನ್ನು ಕಂಡ ಪುಂಡರ ಗುಂಪು ಚುಡಾಯಿಸಲಾರಂಭಿಸಿದೆ.ಯುವತಿ ಅಲ್ಲಿಂದ ನಿಧಾನವಾಗಿ ಮುಂದೆ ಚಲಿಸಿದ್ದಾಳೆ. ಗಾಬರಿಯಿಂದ ತಮ್ಮನಿಗೆ ಮತ್ತೆ ಕರೆ ಮಾಡಿದಳು.ಕರೆ ಸ್ವೀಕರಿಸಿದ ತಮ್ಮ ಗಾಡಿಯ ಎಕ್ಸಲೇಟರ್ ಮತ್ತೂ ಒತ್ತಿದ.  ಸ್ಪೀಡೋಮೀಟರ್ ಮುಳ್ಳು ಏರುತ್ತಾ ಬೈಕ್ ಮುಂದೆ ಚಲಿಸಿತು.ಆಗಲೇ ಅವಘಡ ಸಂಭವಿಸಿದ್ದು! ಕ್ಷಣಾರ್ಧದಲ್ಲಿ   ಅತಿ ವೇಗವಾಗಿ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಬಾಲಕರು ಆರು ಅಡಿ ಜಿಗಿದು ದೂರದಲ್ಲಿ ಬಿದ್ದರು. ರಸ್ತೆ ಅಕ್ಕ ಪಕ್ಕದ ಜನರು ಸೇರಿ ಮಕ್ಕಳ ಎತ್ತಿದ್ದರು.ಅಷ್ಟರಲ್ಲಾಗಲೇ ಇಬ್ಬರ ಪ್ರಾಣಪಕ್ಷಿ ಹಾರಿತ್ತು. ಕಾರಿನ ಚಾಲಕನೂ ಗಾಯಗೊಂಡು ಆಸ್ಪತ್ರೆ ಸೇರಿದ.ಸ್ಥಳಕ್ಕೆ ಬಂದ ಪೋಲಿಸರು ಮಹಜರು ಮಾಡಿ ಬೈಕ್ ಮಾಲೀಕನನ್ನು ಪತ್ತೆ ಹಚ್ಚಿ ಅಪ್ರಾಪ್ತ ಬಾಲಕರಿಗೆ ಬೈಕ್ ಕೊಟ್ಟ ಅರೋಪದ ಮೇಲೆ ಬಂದಿಸಲಾಯಿತು. 
ಸ್ಥಳದಲ್ಲಿದ್ದ ಜನ ಆ ಬಾಲಕರ ಸ್ಥಿತಿಯನ್ನು ಕಂಡು ಮರುಗುತ್ತಿದ್ದರು.ಕೆಲವರು ಅದು ಕಾರ್ ನ ಚಾಲಕನ  ಅಜಾಗರೂಕತೆಯಿಂದ ಆದ ಅವಘಡ ಎಂದರೆ ಕೆಲವರು ಅಪ್ರಾಪ್ತ ಮಕ್ಕಳು ಬೈಕ್ ಯಾಕೆ ಓಡಿಸಬೇಕಿತ್ತು? ಎಂದು ಮಾತನಾಡುವ ವೇಳೆಯಲ್ಲಿ ಸ್ಥಳಕ್ಕೆ ಬಂದ ಸಹೋದರಿ ಈ ದುರ್ಘಟನೆಗೆ ನಾನೇ ಕಾರಣವೆಂದು ಗೋಳಾಡತೊಡಗಿದಳು.ಅಂಬುಲೆನ್ಸ್ ಶಬ್ದ ದೂರದಲ್ಲಿ ಕೇಳುತ್ತಿತ್ತು... ಪಾಪ  ಈ ಹುಡುಗ್ರ ಸಾವಿಗೆ ಯಾರ್ ಹೊಣೆ ಎಂದು ಪ್ರಶ್ನಿಸುತ್ತಿರುವಾಗ ಮೂಲೆಯಲ್ಲಿ ಬೆಡ್ ಶೀಟ್ ಹೊದ್ದು ನಿಂತ ವಯೋವೃದ್ದರು ಹಣೆ ಬರಹಕ್ಕೆ ಯಾರು ಹೊಣೆನಪ್ಪ? ಎಂದಾಗ ನೀರವ ಮೌನ ಆವರಿಸಿತು..

ಸಿಹಿಜೀವಿ ವೆಂಕಟೇಶ್ವರ
ತುಮಕೂರು

ಮದ್ಯ ಪ್ರಿಯರ ಮನವಿ

 


ಮದ್ಯ ಪ್ರಿಯರ ಮನವಿ


ನಮಗೂ ಮರ್ಯಾದೆ ಕೊಡಿ

ಕುಡಿಯುಬಹದು ನಾವು

ಬ್ರಾಂದಿ ,ವಿಸ್ಕಿ ,ಬೀರು|

ಕುಡುಕರೆಂದು ಅವಮಾನಿಸಬೇಡಿ

ಗೌರವದಿ ಹೇಳಿ ಮದ್ಯಪ್ರಿಯರು||


ನಮ್ಮ ಘೋಷವಾಕ್ಯ ನಿತ್ಯ ದುಡಿ,

ಸ್ವಲ್ಪ ಕುಡಿ, ಸತ್ಯ ನುಡಿ|

ಬೈಯಬೇಡಿ ನಮ್ಮನ್ನು ಕುಡಿದಾಗ

ಸ್ವಲ್ಪ ಅಲ್ಲಾಡಬಹುದು ಬಾಡಿ ||


ನಮಗೋಸ್ಕಕರ ಸ್ಥಾಪಿಸಿ ಬಿಡಿ

ಮದ್ಯಪ್ರಿಯರ ಕಲ್ಯಾಣ ನಿಧಿ|

ಇರಲಿ ಒಂದು ಅಂಬುಲೆನ್ಸ್

ನಮಗಾಗಿ ಬಾರ್ ಬದಿ ||


ಸರ್ಕಾರದ ಆದಾಯದಲ್ಲಿ ನಮ್ಮದೂ ಪಾಲಿದೆ ಅದು ಹೆಮ್ಮೆ|

ನಮ್ಮ ಬೇಡಿಕೆಗಳನ್ನು ಪರಿಶೀಲಿಸಿ

ನಮ್ಮ ಕಡೆ ಕೃಪೆ ತೋರಿ ಒಮ್ಮೆ||


(ಮದ್ಯಪಾನ ಆರೋಗ್ಯಕ್ಕೆ ಹಾನಿಕರ)


ಸಿಹಿಜೀವಿ ವೆಂಕಟೇಶ್ವರ

ತುಮಕೂರು


12 ಡಿಸೆಂಬರ್ 2023

ಕುದುರೆಗೊಂದು ದಿನ


 


ಕುದುರೆಗೊಂದು ದಿನ 


ಆಕರ್ಷಕವಾಗಿ ಕಾಣುವ ಹಲವು ಪ್ರಾಣಿಗಳಲ್ಲಿ ಕುದುರೆಯೂ ಒಂದು. ಮಹಾರಾಜರು ಕುದುರೆ ಏರಿ ಹೊರಟರೆ ಆ ಗತ್ತೇ ಬೇರೆ. ಸೈನಿಕರ ,ಸಾರಿಗೆಯ ಬಹು ಮುಖ್ಯ ಪ್ರಾಣಿಯಾಗಿದ್ದ   ಕುದುರೆ ಅಶ್ವ ಮೇಧಯಾಗಕ್ಕೂ ಸಿದ್ದ ವಾಗಿದ್ದನ್ನ  ಕಂಡಿದ್ದೇವೆ.ಇಂತಹ ಬಹುಪಯೋಗಿ ಕುದುರೆ ಈಗ    ರೇಸ್  ಓಡುವ ಕುದುರೆಯಾಗಿ ಜೂಜಿಗೆ ಸೀಮಿತವಾಗಿದೆ.

ಅಶ್ವ ,ವಾಜಿ ,ತುರುಗ, ಎಂಬಿತ್ಯಾದಿ ನಾಮಗಳಿಂದ ಪರಿಚಿತವಾದ ಕುದುರೆಗೂ ವಿಶ್ವ ಸಂಸ್ಥೆ ಒಂದು ದಿನ ನಿಗದಿ ಮಾಡಿ ಪ್ರತಿ ವರ್ಷವೂ ಆಚರಿಸಲು ಅನುವು ಮಾಡಿಕೊಟ್ಟಿದೆ. ಪ್ರತಿವರ್ಷ ಡಿಸೆಂಬರ್ 13 ರಂದು ರಾಷ್ಟ್ರೀಯ ಕುದುರೆ ದಿನವಾಗಿ ಆಚರಿಸಲಾಗುತ್ತದೆ.

ಕುದುರೆಗೆ, ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಮಹತ್ವವಿದೆ.  ಜಾನಪದರ ಬಾಯಲ್ಲಿ ಕುದುರೆ ನಲಿದಾಡಿದೆ.

ಕುದುರೆಯ ಹೆಸರಲ್ಲಿ ಕನ್ನಡದ ಹಲವಾರು ಹಾಡುಗಳು ಬಂದಿವೆ. "ಕುದುರೆ ಏರಿ ಸೂರ್ಯ ಬಂದವ್ನೆ...." ಎಂಬ ಲಾಲಿ ಹಾಡು ಚಿತ್ರದ ಹಾಡು ಈಗಲೂ ಕಿವಿಯಲ್ಲಿ ಗುಂಯ್ಗುಡುತ್ತದೆ. "ಕಾಡು ಕುದುರೆ ಓಡಿ ಬಂದಿತ್ತಾ...." ಎಂಬ ಹಾಡಿನಲ್ಲಿ ಶಿವಮೊಗ್ಗ ಸುಬ್ಬಣ್ಣ ರವರ ಧ್ವನಿಯು ಎಲ್ಲರನ್ನೂ ಆಕರ್ಷಿಸಿದ್ದು ಸುಳ್ಳಲ್ಲ. ಎಲ್ಲಾ ಆರ್ಕೆಸ್ಟ್ರಾಗಳಲ್ಲಿ ಈಗಲೂ ಅತಿ ಹೆಚ್ಚು ಬೇಡಿಕೆಯ ಹಾಡು ಅಣ್ಣಾವ್ರ "ಹೃದಯ ಸಮುದ್ರ ಕಲಕಿ ಹೊತ್ತಿದ ದ್ವೇಷದ ಬೆಂಕಿ..." ಅಶ್ವದೊಂದಿಗೆ ಚಿತ್ರಿತವಾದ ಈ ಹಾಡನ್ನು ಈಗ ನೋಡಿದರೂ  ರೋಮಾಂಚನವಾಗುತ್ತದೆ.

ಇನ್ನೂ "ಕುದುರೇನ ತಂದೀನಿ ಜೀನಾವಾ ಬಿಗಿದೀನಿ ಬರಬೇಕು ತಂಗಿ ಮದುವೇಗೆ" ಜಾನಪದ ಗೀತೆ ಯಾರು ಕೇಳಿಲ್ಲ ಹೇಳಿ?

ಇತ್ತೀಚಿನ ಶಿವಣ್ಣ ಅಭಿನಯದ ಕವಚ ಚಿತ್ರದ "ರೆಕ್ಕೆಯ ಕುದುರೆ ಏರಿ..." ಹಾಡು ಸುಮಧುರ.

ಹೀಗೆ ಕುದುರೆಯ ಮೇಲೆ ಬಂದಿರುವ ಹಾಡುಗಳು ಒಂದಕ್ಕಿಂತ ಒಂದು ಸುಮಧುರ ಮತ್ತು ಅರ್ಥಗರ್ಭಿತ. ಮುಂದೆಯೂ ನಾಟಕಗಳಲ್ಲಿ ಮತ್ತು ಸಿನಿಮಾದಲ್ಲಿ ಇನ್ನೂ ಹೆಚ್ಚಿನ ಕುದುರೆ ಹಾಡುಗಳ ನಿರೀಕ್ಷೆ ಮಾಡೋಣ...

ಎಲ್ಲರಿಗೂ ಅಂತರರಾಷ್ಟ್ರೀಯ ಕುದುರೆ ದಿನದ ಶುಭಾಶಯಗಳು..


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529


ಹೆಣ್ಣಿನ ದಶಗುಣಗಳು.


 


ಹೆಣ್ಣಿನ ದಶಗುಣಗಳು.


ಹೆಣ್ಣು ಎಂಬ ಎರಡಕ್ಷರದಲ್ಲಿ ಏನಿದೆ?ಏನಿಲ್ಲ? ಜಗದ ಆದಿ ಅಂತ್ಯವೇ ಹೆಣ್ಣು. ತಾಯಿಯಾಗಿ,ತಂಗಿಯಾಗಿ,ಅತ್ತೆಯಾಗಿ,ಸೊಸೆಯಾಗಿ, ಸಹೋದರಿಯಾಗಿ,ಗೆಳತಿಯಾಗಿ...ನಾನಾ ರೂಪಗಳಲ್ಲಿ ನಮ್ಮ ನಡುವೆ ಇರುವ ಹೆಣ್ಣು ಅವಳ ಮಹಾನ್ ಗುಣಗಳಿಂದ ಅಚ್ಚರಿ ಮೂಡಿಸುತ್ತಾಳೆ. ಅಂತಹ ಗುಣಗಳ ಪಟ್ಟಿ ಮಾಡುವಾಗ ನನಗೆ ದಕ್ಕಿದ್ದು ಈ ಕೆಳಗಿನ ಗುಣಗಳು.


 1. ಅವಳು ಬುದ್ಧಿವಂತೆ.


 ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲದಿದ್ದರೂ  ಬುದ್ದಿವಂತಿಕೆಯೆಂದರೆ ಹೆಣ್ಣು ಎನ್ನುವಂತಾಗಿದೆ.  ಅವಳು ಬಾಯ್ತೆರೆದು ಮಾತಾನಾಡಲಾರಂಬಿಸಿದರೆ   ಬುದ್ಧಿವಂತಿಕೆಯನ್ನು ಹೊರಹಾಕುತ್ತಾಳೆ.  ಒಬ್ಬರು ಅವಳೊಂದಿಗೆ ಕಠಿಣ ಮತ್ತು ಗಂಭೀರವಾಗಿ ಮಾತನಾಡಬಹುದು.ಅದಕ್ಕೆ ತಕ್ಕಂತೆ ಅವಳ ಉತ್ತರ ಸಿದ್ದವಿರುತ್ತದೆ.


 2. ಅವಳು ಭಾವನಾತ್ಮಕವಾಗಿ ಸ್ಥಿರವಾಗಿರುತ್ತಾಳೆ.


 ಹೌದು ಹೆಣ್ಣು ಗಂಡಿಗಿಂತ ಹೆಚ್ಚು ಭಾವನಾತ್ಮಕ ಜೀವಿ. ಅವಳು  ಕೆಲವೊಮ್ಮೆ ನಗುತ್ತಾಳೆ, ಕೆಲವೊಮ್ಮೆ ಅಳು, ಮತ್ತೆ ಸಿಟ್ಟು ಸೆಡೆವು, ಕರುಣೆ , ಶಾಂತ   ಹೀಗೆ ತನ್ನ ವಿವಿಧ ಭಾವನೆಗಳನ್ನು ವ್ಯಕ್ತಪಡಿಸುವ ಅವಳನ್ನು     ತನ್ನ ಭಾವನೆಗಳ ಮಾಸ್ಟರ್ ಎಂದರೆ ತಪ್ಪಾಗಲಾರದು.


 3. ಅವಳು ಗುಣಿಸುತ್ತಾಳೆ.


ಹೆಣ್ಣಿನ ಕಾರ್ಯ ವರ್ಣಿಸುವಾಗ ಅವಳಿಗೆ ಹತ್ತು ಕೈ ಒಂದೊಂದರಲ್ಲಿ ಒಂದು ಕೆಲಸ ಮಾಡುವ ಗೌರವಪೂರ್ವಕವಾದ ಚಿತ್ರ ನೋಡಿದ್ದೇವೆ.ಅದೇ ಅವಳ ತಾಕತ್ತು 

 ಅವಳು ನೂರನ್ನು   ಸಾವಿರವಾಗಿ, ಸಾವಿರವನ್ನು ಮಿಲಿಯನ್ ಆಗಿ ಪರಿವರ್ತಿಸುತ್ತಾಳೆ. ಅದು ಬರೀ ಹಣದ ಮತ್ತು ಸಂಪತ್ತಿನ ಲೆಕ್ಕಾಚಾರವಲ್ಲ  ಅದರಲ್ಲಿ ಎಲ್ಲವೂ ಇದೆ. 


 4. ಅವಳು ಪ್ರೀತಿಸಲ್ಪಡುವುದನ್ನು ಪ್ರೀತಿಸುತ್ತಾಳೆ.


ಪ್ರೀತಿಗೆ ಮನಸೋಲದವರು ಈ ಜಗದಲ್ಲಿ ಯಾರೂ ಇಲ್ಲ.ಅದಕ್ಕೆ ಅವಳು ಹೊರತಲ್ಲ.ಹಾಗೆ ನೋಡಿದರೆ ಅವಳ ಬಿಟ್ಟು ಪ್ರೀತಿಯಿಲ್ಲ.

 ಹೌದು,  ನೀವು ಅವಳನ್ನು ಪ್ರೀತಿಸಿದಾಗ ಮತ್ತು ಅವಳಿಗೆ ಒಳ್ಳೆಯದನ್ನು ಮಾಡಿದಾಗ, ಅವಳು ಸ್ವೀಕರಿಸುವಳು ಮತ್ತು ಶ್ಲಾಘಿಸುವವಳು.  


 5. ಅವಳು ಆಹಾರದ ಮೂಲಕ ಪ್ರೀತಿಸುತ್ತಾಳೆ.


ಪಾಕ ಪ್ರವೀಣ ಗಂಡಸರು ಇಬ್ಬರೇ ನಮಗೆ ಗೊತ್ತಿರುವವರು ಅವರೇ ನಳ ಮತ್ತು ಭೀಮ ಉಳಿದೆಲ್ಲಾ ಪಾಕ ಪಾಂಡಿತ್ಯವನ್ನು ಅವಳು ಗುತ್ತಿಗೆ ಪಡೆದಾಗಿದೆ.

 ಅವಳು  ಅತ್ಯುತ್ತಮ ಆಹಾರ   ಸಿದ್ದಪಡಿಸಲು  ಪ್ರಯತ್ನಿಸುತ್ತಾಳೆ  ಮತ್ತು  ಪಾಕ ಪ್ರಕ್ರಿಯೆಯಲ್ಲಿ  ನಮ್ಮ ಆತ್ಮಕ್ಕೂ ಆಹಾರವನ್ನು ನೀಡುತ್ತಾಳೆ.


 6. ಅವಳಂದರೆ ಮೋಜು. 


 ಅವಳು ಬುದ್ಧಿವಂತಳಾಗಿದ್ದರೂ, ಅವಳು ಮೂರ್ಖಳಾಗಿ ತನ್ನ ತಾನು ಅಪಹಾಸ್ಯ ಮಾಡಿಕೊಂಡು ಕೆಲವೊಮ್ಮೆ  ಹಾಸ್ಯ ಚಟಾಕಿ ಹಾರಿಸುತ್ತಾಳೆ, ಕೀಟಲೆ ಮಾಡುತ್ತಾಳೆ, ನಗುತ್ತಾಳೆ, ಅವಳಿದ್ದರೆ ಮೋಜಿಗೂ ಬರವಿಲ್ಲ.


 7. ಸಹಾಯ ಪಡೆಯುವಳು 


 ಅವಳು ಯಾವುದಾದರೂ ತೊಂದರೆಯಲ್ಲಿ ಸಿಲುಕಿಕೊಂಡಾಗ ಅಥವಾ ತೊಂದರೆಯಲ್ಲಿದ್ದಾಗ, ಸಹಾಯವನ್ನು ಹೇಗೆ ಕೇಳಬೇಕೆಂದು ಅವಳು ತಿಳಿದಿದ್ದಾಳೆ.  ಅವಳು ಒಬ್ಬಂಟಿಯಾಗಿ ಬಳಲುವುದಿಲ್ಲ. ನಾವು ಆಪತ್ತಿನಲ್ಲಿದ್ದಾಗ . ಸಮಯಕ್ಕೆ ಸರಿಯಾಗಿ ಸೂಕ್ತ ಸಹಾಯ ಬೇಡುವದು ತಪ್ಪಲ್ಲ.


 8. ಅವಳು ದೇವರ ಪ್ರತಿಬಿಂಬ.


ಅವಳು ಕಾಳಿ, ದುರ್ಗೆ, ದೇವಿ, ಶಾರದೆ, ಹೀಗೆ ನಾನಾ ರೂಪಗಳ ಪ್ರತಿಬಿಂಬವಾಗಿ

 ನೀವು ಅವಳನ್ನು ನೋಡುತ್ತೀರಿ ಮತ್ತು ದೇವರನ್ನು ನೋಡುತ್ತೀರಿ, ಅವಳು ಹೆಚ್ಚು ಹೆಚ್ಚು ದೇವರಂತೆ ಆಗುತ್ತಿದ್ದಾಳೆ  ಪ್ರೀತಿಸುವ, ಕ್ಷಮಿಸುವ, ಆಕರ್ಷಕವಾದ, ಬಲವಾದ ಮೌಲ್ಯಯುತ ಜೀವನವನ್ನು ಅವಳಿಂದ ಕಲಿಯಬಹುದು.


 9. ಅವಳೆಂದರೆ ಆತ್ಮವಿಶ್ವಾಸ 


 ಅವಳು ಅಂತರ್ಮುಖಿಯಾಗಿರಲಿ ಅಥವಾ ಬಹಿರ್ಮುಖಿಯಾಗಿರಲಿ, ಅವಳು ಹೆಚ್ಚಿನ ಸ್ವಾಭಿಮಾನವನ್ನು ಹೊಂದಿರುತ್ತಾಳೆ. ಆತ್ಮವಿಶ್ವಾಸದ ವಿಷಯದಲ್ಲಿ  ನೀವು ಅವಳನ್ನು ಬೀಟ್ ಮಾಡಲು  ಸಾಧ್ಯವಿಲ್ಲ.  ಅವಳು ಪ್ರಶಂಸನೀಯ ಗುಣಗಳನ್ನು ಹೊಂದಿದ್ದಾಳೆ


 10. ಅವಳು ಸಂಬಂಧಗಳಿಗೆ ಬೆಲೆ ಕೊಡುತ್ತಾಳೆ.


 ಉತ್ತಮ ಸ್ನೇಹಿತ, ಗೆಳತಿಯರ ಗುಂಪು ಅಥವಾ ಆಪ್ತ ಸ್ನೇಹಿತರ ಗುಂಪೇ ಆಗಿರಲಿ, ಅವಳು ಅವಳನ್ನು ಸುತ್ತುವರೆದಿರುವ ಬಲವಾದ ಜನರನ್ನು ಸುಲಭವಾಗಿ ಬೆರೆಯುತ್ತಾಳೆ.  ಅವಳು ತನ್ನ  ಗಂಡ ಅಥವಾ ಸ್ನೇಹಿತನ ಜೊತೆಯಲ್ಲಿ  ಸಂಬಂಧಕ್ಕೆ   ಬೆಲೆ ಕೊಡುವುದು  ಮಾತ್ರವಲ್ಲ      ಕುಟುಂಬದೊಂದಿಗಿನ ಸಂಬಂಧವನ್ನು ಸಹ  ಗೌರವಿಸುತ್ತಾಳೆ.


ಒಟ್ಟಾರೆ ಹೆಣ್ಣು ಅಗಣಿತ ಗುಣಗಳ ಗಣಿ ಅವಳಿಲ್ಲದ ಈ ಜಗವ ಉಳಿಸಿಕೊಳ್ಳಲು ಸಹ ಕಷ್ಟ. ಆದ್ದರಿಂದ ಹೆಣ್ಣನ್ನು ಗೌರವಿಸೋಣ. 



ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

 

11 ಡಿಸೆಂಬರ್ 2023

ತಂದೆ ತಾಯಿಗಳೇ ಅಸ್ತಿ... ಪುಸ್ತಕ ವಿಮರ್ಶೆ..

 



ತಂದೆ ತಾಯಿಗಳೇ ಅಸ್ತಿ...


ಮಾತೃದೇವೋಭವ ಪಿತೃದೇವೊಭವ ಆಚಾರ್ಯ ದೇವೋಭವ ಎಂದ ಪುಣ್ಯ ಭೂಮಿ ನಮ್ಮದು.  ಅದರಲ್ಲೂ ಮಾತಾಪಿತರ  ಋಣ ತೀರಿಸಲು ಅಸಾಧ್ಯ. ಪ್ರಮೋದ್ ಶ್ರೀಪಾದರಾವ್ ಕುಲಕರ್ಣಿ ರವರು ತಮ್ಮ ತಂದೆ ತಾಯಿಗಳು ಮಾಡಿದ ಆಸ್ತಿಯನ್ನು ಬಯಸದೇ ಅವರನ್ನೇ ನನ್ನ ಆಸ್ತಿ ಎಂದರು! ಎಂತಹ ಉದಾತ್ತ ಚಿಂತನೆ.  ಸ್ವಾರ್ಥವೇ ತುಂಬಿ ತುಳುಕುವ ಇಂದಿನ ಆಧುನಿಕ ಜಗತ್ತಿನಲ್ಲಿ ಕುಲಕರ್ಣಿ ರವರು ರಚಿಸಿರುವ ಈ ಕೃತಿ ಒಂದು ಆಶಾಕಿರಣದಂತೆ ತೋರುತ್ತದೆ.ಎಲ್ಲಾ ಮಕ್ಕಳು ತಮ್ಮ  ಹೆತ್ತವರನ್ನು   ಇಳಿವಯಸ್ಸಿನಲ್ಲಿ ಗೌರವದಿಂದ ಪ್ರೀತಿಯಿಂದ ನೋಡಿಕೊಂಡರೆ ವೃದ್ದಾಶ್ರಮಗಳ ಅಗತ್ಯವೇ ಇರುವುದಿಲ್ಲ.ಎಲ್ಲರೂ ಈ ಪುಸ್ತಕ ಓದೋಣ ನಮ್ಮ ತಂದೆ ತಾಯಿಗಳು ಬೆಲೆ ಕಟ್ಟದ ಆಸ್ತಿ ಎಂಬುದನ್ನು ಮನಗಂಡು ಅವರನ್ನು ಚೆನ್ನಾಗಿ ‌ನೋಡಿಕೊಳ್ಳೊಣ.ಹಾಗೂ ಮೌಲ್ಯಯುತ ಸಮಾಜದ ನಿರ್ಮಾಣಕ್ಕೆ ಒಣ ತೊಡೋಣ.


ಪುಸ್ತಕ: ಮಾತಾ ಪಿತೃಗಳ ಕೊಡುಗೆ

ಲೇಖಕರು: ಪ್ರಮೋದ್ ಶ್ರೀಪಾದರಾವ್ ಕುಲಕರ್ಣಿ


ಸಿಹಿಜೀವಿ ವೆಂಕಟೇಶ್ವರ

ತುಮಕೂರು.