29 ನವೆಂಬರ್ 2023

ಕೈಲಾಸಪತಿಯನ್ನು ಜಯಿಸಿದ ನಕ್ಕೀರ

 ಕೈಲಾಸಪತಿಯನ್ನು ಜಯಿಸಿದ ನಕ್ಕೀರ 


 ಅವನ ಹೆಸರು ನಕ್ಕೀರ ಯಾವಾಗಲೂ ಸಮುದ್ರದ ತಡಿ­ಯಲ್ಲೇ ಇರುವವನು. ಅವನ ಕೆಲಸ­ವೆಂದರೆ ಸಮುದ್ರದ ಆಳಕ್ಕೆ ಮುಳುಗಿ ಅಲ್ಲಿದ್ದ ಮುತ್ತುಗಳನ್ನು ಆಯ್ದು ತರು­ವುದು. ಅದು ಅವನಿಗೆ ದೈಹಿಕ ಕೆಲಸ­ವಾದರೂ ಅವನ ಪ್ರತಿ ಉಸಿರಿನಲ್ಲಿ ಶಿವನಿದ್ದ. ಅವನು ನೀರಿನಲ್ಲಿ ಮುಳುಗುವಾಗ, ಮುತ್ತು­ಗಳನ್ನು ಆಯುವಾಗ, ನೀರಿನಿಂದ ಹೊರಬಂದು ಅವುಗಳನ್ನು ಬೇರ್ಪಡಿ­ಸುವಾಗ ಪ್ರತಿಕ್ಷಣವೂ ಶಿವಧ್ಯಾನ. ಅವನಿಗೆ ಶಿವಭಕ್ತನೆಂದು ಅಷ್ಟು ದೊಡ್ಡ ಹೆಸರು ಬಂದ­ದ್ದನ್ನು ಕಂಡು ಶಿವನಿಗೂ ಅಸೂಯೆಯಾಯಿತಂತೆ.  ಅವನನ್ನು ಕಂಡು ಪರೀಕ್ಷಿಸ­ಬೇಕೆಂದು ಶಿವ ಸಮುದ್ರ ದಂಡೆಗೆ ಬಂದು ಪ್ರತ್ಯಕ್ಷನಾದ. ನಕ್ಕೀರ ತನ್ನ ಕಾಯಕ­ದಲ್ಲಿ ಎಷ್ಟು ತನ್ಮಯ­ನಾಗಿದ್ದನೆಂದರೆ ಮುಂದೆ ಶಿವ ನಿಂತದ್ದು ಕಾಣಲಿಲ್ಲವಂತೆ! ಅವನನ್ನು ಗಮನಿಸದೇ ನೀರಿನಲ್ಲಿ ಮುಳುಗು ಹಾಕಿದ. ಶಿವನಿಗೆ ಕೋಪ ಬಂತು.  ತನ್ನ ಭಕ್ತನೆಂದು ಜನ ಈತನನ್ನು ಕೊಂಡಾಡುತ್ತಿದ್ದರೆ ಈತ ಸಾಕ್ಷಾತ್ ತಾನೇ ಮುಂದೆ ಬಂದು ನಿಂತರೂ ಗಮನಿಸುತ್ತಿಲ್ಲ. ಶಿವನ ಕೋಪ ಹೆಚ್ಚಾ­ಯಿತು.


ನಕ್ಕೀರ ನೀರಿನಿಂದ ಮೇಲೆ ಬಂದೊಡನೆ ಕ್ರುದ್ಧನಾಗಿ ತನ್ನ ಮೂರನೆಯ ಕಣ್ಣನ್ನು ತೆರೆದ! ಶಿವನ ಹಣೆಗಣ್ಣು ತೆರೆದರೆ ಪ್ರಪಂಚವೇ ಭಸ್ಮವಾಗಿ ಹೋಗುತ್ತದೆ.  ನಕ್ಕೀರ ಹೇಗೆ ಬದುಕಿ ಉಳಿದಾನು? ಆದರೆ ಆಶ್ಚರ್ಯ! ಶಿವನ ತೆರೆದ ಕಣ್ಣೀರಿನ ಬೆಂಕಿಯ ಉರಿ ನಕ್ಕೀರನಿಗೆ ತಗುಲಲಿಲ್ಲ. ಅವನು ತನ್ನ ಕೆಲಸದಲ್ಲೇ ತೊಡಗಿದ್ದ. ಶಿವ ಆಶ್ಚರ್ಯದಿಂದ ನಕ್ಕೀರನನ್ನು ಕೇಳಿದ,  ‘ಅಲ್ಲಯ್ಯ,  ನನ್ನನ್ನು ಕಾಣಲೆಂದು ಅನೇ­ಕಾ­ನೇಕ  ಶರಣರು ನೂರಾರು ವರ್ಷ ತಪಸ್ಸು ಮಾಡಿದರೂ ದೊರೆಯದ ನಾನು, ನಿನ್ನ ಮುಂದೆಯೇ ನಿಂತಿದ್ದರೂ ನಿರ್ಲಕ್ಷ್ಯದಿಂದ ಕೆಲಸ ಮಾಡುತ್ತೀ­ದ್ದೀಯಾ.  ಇದಕ್ಕೆ ಏನು ಕಾರಣ?’ ಆಗ ನಕ್ಕೀರ, ‘ದೇವಾ, ನಾನು ನನ್ನ ಕೆಲಸದಲ್ಲಿ ತನ್ಮಯ­ನಾಗಿದ್ದೆ.  ನನಗೆ ಕಾಯಕವೇ ಪೂಜೆ.  ಆ ಕಾಯಕ ನೀನೇ.ನೀನೇ ನನ್ನ ಕಾಯಕದ ಉದ್ದೇಶ’ ಎಂದಾಗ ಶಿವ, ‘ಹೌದು, ಆದರೆ ನನ್ನ ಉರಿಗಣ್ಣಿನ ಬೆಂಕಿ  ನಿನ್ನನ್ನು ಯಾಕೆ ಸುಡಲಿಲ್ಲ?’ ಎಂದು ಕೇಳುತ್ತಾನೆ.


ಅದಕ್ಕೆ ನಕ್ಕೀರ, ‘ದೇವಾ, ನಾನು ದುಡಿದು ತಿನ್ನುವವನು, ನೀನು ತಿರಿದು ತಿನ್ನುವವನು. ದುಡಿದು ತಿನ್ನುವವನು ತಿರಿದು ತಿನ್ನುವವನಿಗಿಂತ ದೊಡ್ಡವನು.  ನಿನ್ನ ಉರಿಗಣ್ಣಿಗಿಂತ ನನ್ನ ಕಾಯಕದ ಶಕ್ತಿ ಹೆಚ್ಚು’ ಎನ್ನುತ್ತಾನೆ.  ಈ ಮಾತಿಗೆ ಶಿವ ಮೆಚ್ಚುತ್ತಾನೆ, ನಕ್ಕೀರನ ಕಾಯಕದ ಶಕ್ತಿ­ಯನ್ನು ಹೊಗಳುತ್ತಾನೆ, ಆಶೀರ್ವದಿ­ಸುತ್ತಾನೆ. 


ಕಾಯಕವೇ ಕೈಲಾಸ ಎಂದ ಶರಣರ ಚಿಂತನೆಯು ಇದೇ ಆಶಯವನ್ನು ಹೊಂದಿದೆ.ನಮ್ಮ ಕರ್ತವ್ಯವೇ ನಮಗೆ ದೇವರಾಗಲಿ ಎಲ್ಲರೂ ದುಡಿದು ತಿನ್ನುವ ಗುಣವನ್ನು ಬೆಳೆಸಿಕೊಳ್ಳೋಣ.



ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಯಶಸ್ಸಿಗೆ ಐದು ಪಾಠಗಳು.


 



ಯಶಸ್ಸಿಗೆ ಐದು ಪಾಠಗಳು.

ನಾವು ಯಾವುದೇ ಸಾಧಕರ ಯಶೋಗಾಥೆಗಳನ್ನು ಕೇಳುವಾಗ ಎಲ್ಲದರಲ್ಲೂ ಕೆಲ ಸಾಮಾನ್ಯ ಅಂಶಗಳು ಕಂಡುಬರುತ್ತವೆ.ಆ ಸಾಧಕರ ಸಾಧನೆಯ ಹಿಂದೆ ಈ ಕೆಳಕಂಡ ಅಂಶಗಳಿದ್ದೇ ಇರುತ್ತವೆ.

1. ನಮ್ಮನ್ನು  ನಂಬೋಣ .
ನಮ್ಮನ್ನು ನಾವು ನಂಬದಿದ್ದರೆ ಮತ್ತಾರು ನಂಬುತ್ತಾರೆ. ಎಲ್ಲಾ ಯಶಸ್ಸಿನ ಅಡಿಪಾಯವೇ ನಂಬಿಕೆ  ನಮ್ಮ ಮೇಲೆ ನಮಗೆ ನಂಬಿಕೆ ಬರಲು ಮೊದಲು ನಾವು ಸಣ್ಣ ಪುಟ್ಟ ಯಶಸ್ಸು ಗಳಿಸುವುದು ನಮ್ಮ ಮೇಲೆ ನಮಗೆ ಆತ್ಮವಿಶ್ವಾಸ ಮೂಡುತ್ತದೆ.   ನಮ್ಮ ಸಾಮರ್ಥ್ಯ ಮತ್ತು ಸಾಧನೆಗಳನ್ನು ಪ್ರತಿಬಿಂಬಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಅದಕ್ಕೆ ತಾಳ್ಮೆ ನಮ್ಮ ಜೊತೆಯಲ್ಲಿರಬೇಕು  ಮತ್ತು ಸಕಾರಾತ್ಮಕ ಸ್ವಯಂಚಿತ್ರಣವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು.

2. ಗುರಿಯಿರಲಿನಮಗೆನಾವು ಜೀವನದಲ್ಲಿ ಏನನ್ನು ಸಾಧಿಸಲು ಬಯಸುತ್ತೇವೆ ಎಂಬುದು ನಮಗೆ ಸ್ಪಷ್ಟವಾದ ಗುರಿಯಿರಬೇಕು. ಪ್ರತಿದಿನ ಆ ಗುರಿಯನ್ನು ಜ್ಞಾಪಿಸಿಕೊಳ್ಳುತ್ತಾ , ಕ್ರಮೇಣ ಆ ಗುರಿಯೆಡೆಗೆ ಸಾಗುವ ಪ್ರಮಾಣಿಕ ಪ್ರಯತ್ನ ಮಾಡುತ್ತಲೇ ಇರಬೇಕು. ಆ ಗುರಿ ತಲುಪಲು  ಯೋಜನೆಯನ್ನು ರೂಪಿಸಿ ಕಾರ್ಯರೂಪಕ್ಕೆ ತರಬೇಕು.

3. ಚಲನೆಯಿರಲಿ.
ನಾವು ಬಹುತೇಕರು ಆರಂಭಶೂರರು.ಮೊದಲು ಸ್ವಲ್ಪ ದಿನ ನಮ್ಮ ಗುರಿ ತಲುಪಲು ಬಹಳ ಜೋಶ್ ನಲ್ಲಿ ನಡೆದು,ಕ್ರಮೇಣವಾಗಿ ಸೋಮಾರಿತನ ನಮ್ಮನ್ನು ತಬ್ಬಿದಾಗ ಹೊದ್ದು ಮಲಗಿಬಿಡುತ್ತೇವೆ. ಈಗಾಗಬಾರದು.
ಸದಾ   ಸುಮ್ಮನೆ ಕುಳಿತುಕೊಳ್ಳದೇ  ಮತ್ತು ಏನಾಗುತ್ತದೆ ಎಂದು ಕಾಯದೇ.  ನಮ್ಮ ಕಾರ್ಯದಲ್ಲಿ ಚಲನಶೀಲರಾಗಬೇಕು  ಮತ್ತು ನಮ್ಮ ಗುರಿಗಳತ್ತ  ಸಾಗಲು ಸಣ್ಣ ಸಣ್ಣ ಹೆಜ್ಜೆಗಳನ್ನು ಇಡಬೇಕು. ಈ  ಹೆಜ್ಜೆಗಳು ಕೂಡ ದೊಡ್ಡ ವ್ಯತ್ಯಾಸವನ್ನು ಉಂಟುಮಾಡಬಹುದು. ದೊಡ್ಡ ದಾರಿ ತಲುಪಲು  ಸಣ್ಣ ಹೆಜ್ಜೆಗಳು ಅಗತ್ಯವಲ್ಲವೆ? 

4. ನಿರಂತರ ಪ್ರಯತ್ನ.
ನಮ್ಮ ಸಾಧನೆಯ ಹಾದಿಯಲ್ಲಿ ಅಲ್ಲಲ್ಲಿ ಅಡತಡೆಗಳು, ಕಲ್ಲುಮುಳ್ಳುಗಳು ಸಿಗಬಹುದು.
ದಾರಿಯುದ್ದಕ್ಕೂ ಹಿನ್ನಡೆಗಳು ಉಂಟಾಗಬಹುದು. ಆಗ ನಾವು  ಛಲಬಿಡದ ತ್ರಿವಿಕ್ರಮರಾಗಬೇಕು.ಸತತ ಪ್ರಯತ್ನದಿಂದ ಒಂದಲ್ಲ ಒಂದು ದಿನ ಗೆದ್ದ ನಾವು ನಮ್ಮ  ಗುರಿಗಳನ್ನು ತಲುಜೀವನದಲ್ಲಿನ

5. ಧನಾತ್ಮಕವಾಗಿರಿ. 
ಸಣ್ಣ ಸೋಲು, ಗೆಳೆಯರ ಕೊಂಕು ಮಾತು ಮತ್ತು ನಕಾರಾತ್ಮಕ ಮಾತುಗಳು ನಮ್ಮನ್ನು ಎದೆಗುಂದುವಂತೆ ಮಾಡುತ್ತವೆ.ಇಂತಹ ಸಂದರ್ಭಗಳಲ್ಲಿ ನಾವು ಸಕಾರಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳ ಬೇಕು.
ಸಕಾರಾತ್ಮಕ ಮನೋಭಾವವು ನಮಗೆ ಅಡೆತಡೆಗಳನ್ನು ನಿವಾರಿಸಲು ಮತ್ತು ಪ್ರೇರೇಪಿಸಲು ಸಹಾಯ ಮಾಡುತ್ತದೆ.  ನಮ್ಮ ಜೀವನದಲ್ಲಿನ  ಒಳ್ಳೆಯ ವಿಷಯಗಳ ಮೇಲೆ ಸದಾ ಕೇಂದ್ರೀಕರಿಸಬೇಕು  ಮತ್ತು ನಕಾರಾತ್ಮಕ ಆಲೋಚನೆಗಳು ನಮ್ಮನ್ನು ಕೆಡಿಸಲು ಬಿಡಬಾರದು.ಧನಾತ್ಮಕ ಜನರೊಂದಿಗೆ ನಮ್ಮನ್ನು ಸುತ್ತುವರೆದಿರುವಂತೆ ನೋಡಿಕೊಳ್ಳೋಣ.ನಮ್ಮ ಸಮಯವನ್ನು ನಾವು ಕಳೆಯುವ ಜನರು ನಮ್ಮ ಯಶಸ್ಸಿನ ಮೇಲೆ ದೊಡ್ಡ ಪ್ರಭಾವ ಬೀರಬಹುದು.  ನಮ್ಮನ್ನು ಬೆಂಬಲಿಸುವ ಮತ್ತು ನಮ್ಮ ಗುರಿಗಳನ್ನು ತಲುಪಲು ನಮ್ಮನ್ನು ಪ್ರೋತ್ಸಾಹಿಸುವ ಸಕಾರಾತ್ಮಕ ಜನರೊಂದಿಗೆ ಹೆಚ್ಚು ಒಡನಾಟ‌ ಹೊಂದಿದರೆ ನಮ್ಮ ಗುರಿ ಸಾಧಿಸಲು ಪೂರಕವಾಗುತ್ತದೆ.


ಈ 5  ಪಾಠಗಳನ್ನು ಅನುಸರಿಸುವ ಮೂಲಕ  ನಮ್ಮ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಯಶಸ್ಸಿನ ಸಾಧ್ಯತೆಗಳನ್ನು ನಾವು ಹೆಚ್ಚಿಸಬಹುದು.  ನೆನಪಿಡಿ ಯಶಸ್ಸು ಅದೃಷ್ಟ ಅಥವಾ ಪ್ರತಿಭೆಯಿಂದಲ್ಲ.  ಇದು ಕಠಿಣ ಪರಿಶ್ರಮ ಮತ್ತು ನಿರ್ಣಯ.  ಆದ್ದರಿಂದ ನಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು  ಕಷ್ಟಪಟ್ಟು ಇಷ್ಟ ಪಟ್ಟು    ಕೆಲಸ ಮಾಡುವುದನ್ನು ಮುಂದುವರಿಸೋಣ  ತನ್ಮೂಲಕ ಉತ್ತಮವಾದ ಸಾಧನೆ ಮಾಡೋಣ.

ಸಿಹಿಜೀವಿ ವೆಂಕಟೇಶ್ವರ
ಶಿಕ್ಷಕರು
ತುಮಕೂರು
9900925529

27 ನವೆಂಬರ್ 2023

ಬಾಳೋಣ ಬಾರ

 


ಬಾಳೋಣ ಬಾರ 


ಜತನದಿ ಕಾಪಾಡೋಣ ಪರಿಸರ

ನೀಡುವುದದು ನಮಗೆ ಸಕಲ ವರ 

ಸರ್ವ ಜೀವಿಗಳೂ ನಮ್ಮ ಪರಿವಾರ

ಸಮನ್ವಯದಿ ಬಾಳೋಣ ಬಾರಾ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

26 ನವೆಂಬರ್ 2023

ವಿಶ್ವದ ಎಂಟನೆಯ ಅದ್ಭುತ

 


ವಿಶ್ವದ ಎಂಟನೆಯ ಅದ್ಭುತ

ಪ್ರಪಂಚದ ಏಳು ಅದ್ಭುತಗಳನ್ನು ತಿಳಿದ ನಮಗೆ ಎಂಟನೆಯ ಅದ್ಭುತ ಯಾವುದು ಎಂಬ ಕುತೂಹಲವಿತ್ತು ಈ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ.ಇಟಲಿಯ ಪೋಂಪು ವನ್ನು ಹಿಂದಿಕ್ಕಿ  ಕಾಂಬೋಡಿಯಾದ  ಆಂಕೋರ್ ವಾಟ್ ದೇವಾಲಯ ಸಂಕೀರ್ಣ ಈ ಕೀರ್ತಿಗೆ ಭಾಜನವಾಗಿದೆ.  

ನಮ್ಮ ಭಾರತದ ತಾಜ್ ಮಹಲ್ ಸೇರಿದಂತೆ  ಚೀನಾದ ಗ್ರೇಟ್ ವಾಲ್, ಜೋರ್ಡಾನ್ನ ಪೆಟ್ರಾ, ಇಟಲಿಯ ಕೊಲೋಸಿಯಮ್, ಬ್ರೆಜಿಲ್ನ ಕ್ರೈಸ್ಟ್ ದಿ ರಿಡೀಮರ್, ಮೆಕ್ಸಿಕೋದ ಷಿಚೆನ್ ಇಟ್ಜಾ, ಪೆರುವಿನ ಮಾಚು ಪಿಚು ಇವು ಪ್ರಪಂಚದ ಏಳು ಅದ್ಭುತಗಳು.

ಆಂಕೋರ್ ವಾಟ್ ಕಾಂಬೋಡಿಯಾ ದೇಶದಲ್ಲಿರುವ ಹಿಂದೂ ದೇವಾಲಯ ಸಮುಚ್ಛಯ. ಕಾಂಬೋಡಿಯಾ ದೇಶದ ಖ್ಮೇರ್(Khmer) ಸಾಮ್ರಾಜ್ಯದ ರಾಜಧಾನಿಯಾಗಿದ್ದ 'ಆಂಗ್ಕರ್' ಎಂಬಲ್ಲಿದೆ. ಇದನ್ನು ಸಾಮ್ರಾಟ ಎರಡನೆಯ ಸೂರ್ಯವರ್ಮ 12ನೆಯ ಶತಮಾನದಲ್ಲಿ ಕಟ್ಟಿಸಿದನು.ಇದು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಧಾರ್ಮಿಕ ಸಮುಚ್ಛಯವಾಗಿದೆ.ಇದು ಆಯತಾಕಾರದಲ್ಲಿ 2800 ಆಡಿ ಅಗಲ ಮತ್ತು 3800 ಅಡಿ ಉದ್ದವಾಗಿದೆ. ಮರಳುಕಲ್ಲು ಹಾಗೂ ಇತರೆಕಲ್ಲು ಉಪಯೋಗಿಸಿ ಕಟ್ಟಲಾಗಿದೆ. ಮೇರುಪರ್ವತ ವನ್ನು ಹೋಲುವಂತೆ ಖ್ಮೇರ್ ಹಾಗೂ ದಕ್ಷಿಣ ಭಾರತೀಯ ವಾಸ್ತುಶಿಲ್ಪದಂತೆ ಇದನ್ನು ಕಟ್ಟಲಾಗಿದೆ. ಇದರ ನಿರ್ಮಾಣಕ್ಕೆ 3೦ ವರ್ಷಗಳಿಗಿಂತಲೂ ಹೆಚ್ಚಿನ ಸಮಯ ಬೇಕಾಯಿತು.

2 ನೆಯ ಸೂರ್ಯವರ್ಮ  ತನ್ನ ರಾಜಧಾನಿಯಾಗಿದ್ದ ಯಶೋಧರಪುರದ ಪಕ್ಕದಲ್ಲೇ ಈ ಅಗಾಧ, ಅನುಪಮ ದೇವಾಲಯವನ್ನು ನಿರ್ಮಿಸಿದ. 

ಗೊಂಡಾರಣ್ಯದ ಮಧ್ಯದಲ್ಲಿ ಮರಗಳನ್ನು ಕಡಿದು ಕಟ್ಟಡಕ್ಕೆ ಅಣಿಮಾಡಿಕೊಂಡ ವಿಶಾಲ ಪ್ರದೇಶ; ಅದನ್ನು ಸುತ್ತುಗಟ್ಟಿರುವ ನೀರು ತುಂಬಿದ ರಚನೆಗಳನ್ನು  ದಾಟಿ ದ್ವಾರಮಂಟಪಕ್ಕೆ ಹೋಗುವಂತೆ ಎತ್ತರಿಸಿ ಕಲ್ಲಿನಿಂದ ಕಟ್ಟಿರುವ ಒಡ್ಡುದಾರಿ, ನೀರಿನಿಂದಲೇ ಎದ್ದು ನಿಂತಿರುವಂತೆ ನಿರ್ಮಿತವಾಗಿ ಆ ಪ್ರದೇಶವನ್ನು ಸುತ್ತುವರಿದಿರುವ ಮೊಗಸಾಲೆ, ಪಕ್ಕದಲ್ಲಿ ಸುತ್ತುವರಿದಿರುವ ಹೊರಾಂಗಣ, ಅದರ ಸುತ್ತ ಒಂದು ತಗ್ಗುಗೋಡೆ ಮತ್ತು ಒಳಾಂಗಣ, ಮಧ್ಯದಲ್ಲಿ ಇಡೀ ಪ್ರದೇಶವನ್ನಾಕ್ರಮಿಸಿರುವ, ಪರಸ್ಪರಾನುರೂಪತೆಯನ್ನು ಹೊಂದಿ ವಾಸ್ತುಶಿಲ್ಪಕಲಾವೈಭವವನ್ನು ಮೆರೆಸುತ್ತಲಿರುವ, ಕಟ್ಟಡಗಳ ನಡುವೆ ನಿಂತಿರುವ ದೇವಸ್ಥಾನ. ಚಚ್ಚೌಕವಾದ ಈ ಪ್ರದೇಶದ ಸುತ್ತುಗೋಡೆಗಳು ಒಂದೊಂದೂ ಒಂದು ಮೈಲಿನಷ್ಟು ಉದ್ದವಿದೆ. ಒಳಗೆ ಸುತ್ತಲೂ ಬಂದಿರುವ ಹೊರಾಂಗಣ ಮತ್ತು ಒಳಾಂಗಣಗಳು, ಸಾವಿರಾರು ಜನರು ಸಭೆ ಸೇರಲು ಅನುಕೂಲವಾಗುವಷ್ಟು ವಿಶಾಲವಾದ ಪ್ರದೇಶಗಳು. ಒಳಾವರಣದ ಕಟ್ಟಡ ಪ್ರದೇಶದ ಸುತ್ತಳತೆಯೇ ಅರ್ಧ ಮೈಲಿಗಿಂತ ಹೆಚ್ಚಾಗಿದೆ. ಗೋಪುರಾಕೃತಿಯಲ್ಲಿ ನಿರ್ಮಿತವಾಗಿರುವ ಈ ಕಟ್ಟಡ ಸಮುದಾಯದಲ್ಲಿ ಮೂರು ಹಂತಗಳು, ಕೊನೆಯ ಹಂತದ ಮೇಲೆ ಐದು ಗೋಪುರಗಳನ್ನೊಳಗೊಂಡ ಮುಖ್ಯ ಪೂಜಾಗಾರ. ಈ ಗೋಪುರಗಳಲ್ಲಿ ನಡುವಿನದು ಸುತ್ತಣ ಅರಣ್ಯಪ್ರದೇಶಕ್ಕಿಂತ ಇನ್ನೂರಹದಿನೈದು ಅಡಿ ಎತ್ತರ.ಇಂಥ ಬೃಹದಾಕೃತಿಯ ಕಟ್ಟಡದಲ್ಲೂ ಅಲಂಕಾರ ಚೆಲುವಿದೆ. ಸೂಕ್ಷ್ಮತೆ ಇದೆ. ಅರೆಯುಬ್ಬು ಚಿತ್ರಗಳಲ್ಲಿ ಕಂಡುಬರುವ ಕಲಾಪ್ರೌಢಿಮೆ ಪ್ರೇಕ್ಷಕರನ್ನು ವಿಸ್ಮಯಗೊಳಿಸುತ್ತದೆ. ಆದರೆ ಅಲಂಕಾರ ಅತಿಯಾಗಿ ಎಲ್ಲೂ ಕಟ್ಟಡದ ಭವ್ಯತೆ ಘನತೆಗಳಿಗೆ ಕುಂದು ತಂದಿಲ್ಲ. ರಾಮಾಯಣ ಮಹಾಭಾರತಗಳಿಂದ ಆಯ್ದ ಚಿತ್ರಗಳು ವಿಶೇಷವಾಗಿವೆ.ಕೆಲವೆಡೆ ಎಂಟು ಅಡಿಗಳ ಎತ್ತರ ಇರುವ ಈ ಚಿತ್ರಗಳು ಅರ್ಧ ಮೈಲಿಯಷ್ಟು ದೂರ ಹಬ್ಬಿವೆ. ಭಾರತದ ಸಂಸ್ಕೃತಿ ಆ ಜನರ ಮೇಲೆ ಎಂಥ ಪರಿಣಾಮವನ್ನುಂಟುಮಾಡಿತ್ತು ಎನ್ನುವುದಕ್ಕೆ ಈ ಚಿತ್ರಗಳೇ ನಿದರ್ಶನ. ಅಲ್ಲಲ್ಲೇ ಕಾಣಬಹುದಾದ ದೇವತೆಗಳ ಮತ್ತು ಅಪ್ಸರೆಯರ ಚಿತ್ರಣವಂತೂ ರಮ್ಯವಾಗಿದೆ. ಮುಖದಲ್ಲಿ ಪ್ರಶಾಂತತೆ, ಪ್ರಸನ್ನತೆ, ತುಟಿಯಲ್ಲಿ ಹುಸಿನಗೆ, ಮೋಹಕವಾದ ಕುಡಿನೋಟ, ಆಭರಣ ತೊಡಿಗೆಯಲ್ಲಿ ಹಿತ ಮಿತ.ಆಂಗ್ಕೋರ್‍ವಾಟ್‍ನ ವಾಸ್ತುಶಿಲ್ಪದ ಉತ್ಕಷ್ಟತೆಯನ್ನು ನೋಡಿದವರಿಗೆ, ಅದನ್ನು ನಿರ್ಮಿಸಿದ ವಾಸ್ತುಶಿಲ್ಪಿಗಳು ಅನೇಕ ಶತಮಾನಗಳ ಕಾಲ ವಂಶಪಾರಂಪರ್ಯವಾಗಿ ಆ ಕಲೆಯನ್ನು ರೂಢಿಸಿಕೊಂಡು ಬಂದು ಕೊನೆಗೆ ಪರಾಕಾಷ್ಠತೆ ಪಡೆದಿದ್ದ ಕಲಾವಿದರು ಎಂಬುದು  ವ್ಯಕ್ತವಾಗುತ್ತದೆ. ಈ ಬೆಳೆವಣಿಗೆ ಒಂದು ಸಾವಿರ ವರ್ಷಗಳ ಹಿಂದೆಯೇ ಆರಂಭವಾಗಿರಬೇಕು. ಅನಂತರ ಕೊಂಚ ಕೊಂಚವಾಗಿ ವಿಕಾಸಗೊಳ್ಳುತ್ತ ಎರಡನೆಯ ಜಯವರ್ಮನು ಕಾಂಭೋಜ ರಾಜ್ಯಸ್ಥಾಪನೆ ಮಾಡಿದ ಕಾಲಕ್ಕೆ ಒಂದು ನಿರ್ದಿಷ್ಟನೆಲೆಗೆ ಬಂದು ಗೋಪುರಾಕೃತಿಯ ದೊಡ್ಡ ಕಟ್ಟಡಗಳ ನಿರ್ಮಾಣ ಪ್ರಾರಂಭವಾಯಿತು. ಅದು ತುತ್ತತುದಿಯನ್ನೇರಿದ್ದು ಆಂಗ್ಕೋರ್‍ವಾಟ್‍ನಲ್ಲಿ. ಇಂದಿಗೂ ಆಂಗ್ಕೋರ್‍ಥಾಮ್ ನಗರದ ಹಾಗೂ ಆಂಗ್ಕೋರ್‍ವಾಟ್‍ನ ಅವಶೇಷಗಳು ಪ್ರಾಕ್ತನ ಶಾಸ್ತ್ರಜ್ಞರನ್ನೂ ಪ್ರೇಕ್ಷಕರನ್ನೂ ಆಕರ್ಷಿಸುತ್ತಿವೆ.   
ಅಂಕೋರ್ ವಾಟ್ನಲ್ಲಿನ ಅತ್ಯಂತ ಅಪ್ರತಿಮ ಅನುಭವವೆಂದರೆ ಅದರ ಭವ್ಯವಾದ ಗೋಪುರಗಳ ಮೇಲೆ ಸೂರ್ಯೋದಯವನ್ನು ವೀಕ್ಷಿಸುವುದು.  ಮುಂಜಾನೆ, ದೇವಾಲಯವು ಗುಲಾಬಿ, ಕಿತ್ತಳೆ ಮತ್ತು ಚಿನ್ನದ ಛಾಯೆಗಳಲ್ಲಿ ನೆನೆಸಿ, ಮನಮೋಹಕ  ದೃಶ್ಯವನ್ನು ಸೃಷ್ಟಿಸುತ್ತದೆ.
ಈ ತಾಣವನ್ನು ವಿಶ್ವ ಸಂಸ್ಥೆಯ ಯುನೆಸ್ಕೊ ವಿಶ್ವ ಪಾರಂಪರಿಕ ತಸಣವೆಂದು ಘೋಷಿಸಿದೆ.
ವಾಸ್ತುಶಿಲ್ಪದ ವೈಭವವನ್ನು ಮೀರಿ, ಅಂಕೋರ್ ವಾಟ್ ಅಪಾರವಾದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ  ದೇವಾಲಯ ಸಂಕೀರ್ಣವು  ಸಕ್ರಿಯ ಧಾರ್ಮಿಕ ತಾಣವಾಗಿ ಉಳಿದಿದೆ ಬೌದ್ಧ ಸನ್ಯಾಸಿಗಳು ಮತ್ತು ಭಕ್ತರು ತಮ್ಮ ಗೌರವವನ್ನು ಸಲ್ಲಿಸಲು ಮತ್ತು ಪ್ರಾರ್ಥನೆ ಮತ್ತು ಧ್ಯಾನದಲ್ಲಿ ತೊಡಗಿಸಿಕೊಳ್ಳಲು ಇಲ್ಲಿಗೆ  ಬರುತ್ತಾರೆ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು


ಮನದುಂಬಿ.

 ಮನದುಂಬಿ 


ಜೇನೇ ನೀ ನನ್ನ ಸೃಷ್ಟಿ

ನಾನಿನ್ನ ಪ್ರೀತಿಸುವೆ 

ಹೇಳಿತು ದುಂಬಿ|

ಜೇನು ಮಾರ್ನುಡಿಯಿತು

ನಾನು ನಿನ್ನ ಪ್ರೀತಿಸುವೆ 

ಮನದುಂಬಿ|| 



ಸಿಹಿಜೀವಿ ವೆಂಕಟೇಶ್ವರ

ತುಮಕೂರು