28 ಅಕ್ಟೋಬರ್ 2023

ರಾಷ್ಟ್ರೀಯ ಏಕತಾ ದಿನ

 



#ರಾಷ್ಟ್ರೀಯ ಏಕತಾ ದಿನ .. 


ಭಾರತದ  ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಉಕ್ಕಿನ ಮನುಷ್ಯ   ಸರಪಟೇಲರು

ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು2014 ರಿಂದ  ರಾಷ್ಟ್ರೀಯ ಏಕತಾ  ದಿನವನ್ನಾಗಿ ಆಚರಿಸಲಾಗುತ್ತಿದೆ. 


 ಏಕತೆ, ಸಮಗ್ರತೆ ಮತ್ತು ನೈಜ ಮತ್ತು ಸಂಭಾವ್ಯ ಬೆದರಿಕೆಗಳನ್ನು ತಡೆದುಕೊಳ್ಳಲು ನಮ್ಮ ರಾಷ್ಟ್ರದ ಅಂತರ್ಗತ ಶಕ್ತಿಯನ್ನು ಮರುದೃಢೀಕರಿಸಲು ಇಂತಹ ದಿನಾಚರಣೆಗಳ ಅಗತ್ಯವಿದೆ.


ಭಾರತದ ಏಕೀಕರಣದ ಕಥೆಯೇ ಒಂದು ರೋಚಕ ಬಹುತೇಕ ಅಸಾಧ್ಯ ಎನ್ನಬಹುದಾದ ಕೆಲಸವನ್ನು ಇದು ಸಾಧ್ಯ ಎಂದು ಮಾಡಿ ತೋರಿಸಿದವರು ನಮ್ಮ ಪಟೇಲ್ ರವರು. 


ಭಾರತ ಸ್ವಾತಂತ್ರ್ಯ ನಂತರ

 ಪಟೇಲರು ಉಪಪ್ರಧಾನಿಯಾಗಿ ಗೃಹಖಾತೆಯನ್ನು ವಹಿಸಿಕೊಂಡರು. ತಮ್ಮ ಎಪ್ಪತ್ತೆರಡನೆಯ ವಯಸ್ಸಿನಲ್ಲಿ  565 ರಾಜ ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸಿ, ಅಲ್ಲಿ ಪ್ರಜಾಪ್ರಭುತ್ವವನ್ನು ಜಾರಿಗೊಳಿಸುವ ದೇಶದ ರಕ್ಷಣೆಯ ವ್ಯವಸ್ಥೆಯನ್ನು ರೂಪಿಸುವ  ಹಾಗೂ ಭಾರತವನ್ನು ಒಗ್ಗಟ್ಟಾದ ದೇಶವನ್ನಾಗಿ ಕಟ್ಟುವ ಮಹತ್ತರ ಜವಾಬ್ದಾರಿಯನ್ನು ಪಟೇಲರು ಹೊತ್ತುಕೊಂಡರು.  


ಅಧಿಕಾರದ ವಿಕೇಂದ್ರೀಕರಣ, ಧಾರ್ಮಿಕ ಸಮಾನತೆ ಮತ್ತು ಸ್ವಾತಂತ್ರ್ಯ , ಆಸ್ತಿ ಹಕ್ಕು ಇತ್ಯಾದಿ ವಿಷಯಗಳನ್ನು ವಿಷದೀಕರಿಸಿ, ಭಾರತದ ಸಂವಿಧಾನದ ರಚನೆಯಲ್ಲಿ ಮಹತ್ವದ ಕೊಡುಗೆ ನೀಡಿದರು.  ರಾಜ ಮಹಾರಾಜ ಸಾಮಂತರುಗಳಿಂದ ತುಂಬಿದ್ದ ಬ್ರಿಟಿಷ್ ಇಂಡಿಯವನ್ನು ನೈಜ  ಭಾರತವನ್ನಾಗಿಸಲು   ಸಾಮ ಭೇದ ದಾನ ದಂಡ ಇವುಗಳನ್ನು ಸಂದರ್ಭಕ್ಕೆ ಸರಿಯಾಗಿ ಬಳಸಿದ ಹಿರಿಮೆ ಪಟೇಲರದ್ದು.  


ಪ್ರಜೆಗಳ ಆಶೋತ್ತರಗಳಿಗೆ ಹೊಂದಿಕೊಂಡಿದ್ದ ಮೈಸೂರು, ಇಂದೋರ್ ಮುಂತಾದ ಪ್ರಾಂತ್ಯಗಳ ಜೊತೆ ಗೌರವದಿಂದ ವರ್ತಿಸಿದರು. ಸೂಕ್ಷ್ಮ ವಾದ ಜಾಗಗಳಾದ  ತಿರುವಾಂಕೂರು ಮತ್ತಿತರೆಡೆಗೆ  ವಿ. ಪಿ. ಮೆನನ್ ರಂತಹ ಪ್ರತಿನಿಧಿಗಳನ್ನು ಕಳಿಸಿ ಭಾರತದಲ್ಲಿ ತಮ್ಮ ಸಂಸ್ಥಾನವನ್ನು ಸೇರಿಸುವಂತೆ ಆಯಾ ರಾಜರ ಮನ  ಒಲಿಸಿದರು. 


ಯುದ್ಧ ಮಾಡಲು ಹಿಂಜರಿಯದ, ಆದರೆ ನೇರಯುದ್ಧಕ್ಕೆ ಸಿದ್ಧರಿಲ್ಲದ ರಾಜರ ಜೊತೆ ಮಾತನಾಡುವಾಗ ಮಿಲಿಟರಿ ವ್ಯವಹಾರಗಳ ಡೈರೆಕ್ಟರ್ ಜನರಲ್ ಸ್ಯಾಮ್ ಮಾಣಿಕ್ ಶಾರನ್ನು ಜೊತೆಯಾಗಿಟ್ಟುಕೊಂಡು ಹೋಗುತ್ತಿದ್ದರು. ಜುನಾಗಢ್, ಜಮ್ಮು-ಕಾಶ್ಮೀರ, ಹೈದರಾಬಾದ್ ಈ ಮೂರು ರಾಜ್ಯಗಳ ರಾಜರು ಮಾತ್ರ ಪಟೇಲರ ಚಾಕಚಕ್ಯತೆಗೆ ಮತ್ತು ಭಾರತದ ಒಗ್ಗಟ್ಟಿಗೆ ಸವಾಲು ಹಾಕಿದಾಗ  ಸೈನ್ಯವನ್ನು ಕಳಿಸಿ, ರಾಜ್ಯಗಳನ್ನು ಆಕ್ರಮಿಸಿ, ಆಯಾ ರಾಜ್ಯಗಳು ಮತ್ತು ಪ್ರಜೆಗಳನ್ನು ಭಾರತದ ಭಾಗವಾಗಿಸಿದರು.  


565  ಸಂಸ್ಥಾನಗಳಲ್ಲಿ ಹಂಚಿಹೋಗಿದ್ದ ಭಾರತವನ್ನು ಒಗ್ಗೂಡಿಸುವ ಮಹತ್ಕಾರ್ಯಕ್ಕೆ ಪಟೇಲರೇ ಸೂಕ್ತ ವ್ಯಕ್ತಿ ಎಂದು ಕಾಂಗ್ರೆಸ್ ಪಕ್ಷದ ,ಮೌಂಟ್ ಬ್ಯಾಟನ್ನರ ಹಾಗೂ ಹಿರಿಯ ಬ್ರಿಟಿಷ್ ಅಧಿಕಾರಿಗಳ ಒಮ್ಮತದ ಅಭಿಪ್ರಾಯವಾಗಿತ್ತು. “ರಾಜ್ಯಗಳ ಈ ಸಮಸ್ಯೆ ಎಷ್ಟು ಸಂಕೀರ್ಣವಾಗಿದೆಯೆಂದರೆ ನೀವೊಬ್ಬರೇ ಅದನ್ನು ಬಗೆಹರಿಸಲು ಸಮರ್ಥರು” ಎಂದು ಗಾಂಧೀಜಿ ಕೂಡಾ ಪಟೇಲರಿಗೆ ಹೇಳಿದ್ದರು.


ಈ ಗುರುತರ ಕಾರ್ಯವನ್ನು ಯಶಸ್ವಿಯಾಗಿ ಕೈಗೂಡಿಸುವ ಮನಃ ಸ್ಥೈರ್ಯ , ಚಾಣಾಕ್ಷತನ ಹಾಗೂ ಅಚಲತೆ ಇದ್ದವರಾದ ಪಟೇಲರು, ರಾಷ್ಟ್ರಹಿತಕ್ಕಾಗಿ ಮುಂದೆ ನಿಂತು ಸರ್ಕಾರದ ನಿರ್ಧಾರಗಳನ್ನು ಜಾರಿಮಾಡುವುದಕ್ಕೆ ತಯಾರಿದ್ದರೂ, ಸಂಸ್ಥಾನಿಕರೊಂದಿಗೆ ಸಂಧಾನ ನಡೆಸಲು ಬೇಕಾದ ಅನುಭವವನ್ನೂ, ಮುತ್ಸದ್ದಿತನವನ್ನೂ ಪಡೆದುಕೊಂಡಿದ್ದರು.  


ಸ್ವಾತಂತ್ರ್ಯ ಪೂರ್ವದಲ್ಲೇ ಈ ಕಾರ್ಯಕ್ಕೆ ಕೈ ಹಾಕಿದ್ದ ಪಟೇಲರು

1947ರ ಮೇ 6 ರಂದು  ರಾಜರುಗಳ ಜೊತೆ ವಿಲೀನದ ಮಾತುಕತೆ ಪ್ರಾರಂಭಿಸಿದರು. ಈ ಮಾತುಕತೆಯ ಉದ್ದೇಶ ಈ ರಾಜರು ಭವಿಷ್ಯದ ಭಾರತ ಸರ್ಕಾರದೊಂದಿಗೆ ಸಹಕಾರ ಕೊಡುವುದಕ್ಕೂ ಹಾಗೂ ಮುಂದೆ ಉಂಟಾಗಬಹುದಾದ ಘರ್ಷಣೆಗಳನ್ನು ಆರಂಭದಲ್ಲಿಯೇ  ಚಿವುಟಿಹಾಕುವುದಾಗಿತ್ತು.  


ಬಹಳಷ್ಟು ಸಂಸ್ಥಾನಿಕ ರಾಜರುಗಳನ್ನು ತಮ್ಮ ಮನೆಗೆ ಆಹ್ವಾನಿಸಿ ಭೋಜನ ಅಥವಾ ಚಹಾ ಸತ್ಕಾರ ಏರ್ಪಡಿಸಿದ ಪಟೇಲರು ಈ ಸಾಮಾಜಿಕ ಹಾಗೂ ಅನಧಿಕೃತ ಭೇಟಿಗಳ ಮೂಲಕ ಅವರನ್ನು ವಿಲೀನದ ಪ್ರಕ್ರಿಯೆಯಲ್ಲಿ ತೊಡಗಿಸಿದರು.ಹಾಗೂ 1947  ಆಗಸ್ಟ್ 15ರ ಒಳಗಾಗಿ ಭಾರತದಲ್ಲಿ ವಿಲೀನವಾಗುವಂತೆ ಅವರನ್ನು ಆಗ್ರಹಿಸಿದರು.


ತಮ್ಮ ಪ್ರಜೆಗಳ ಭವಿಷ್ಯದ ಹಿತಕ್ಕಾಗಿ ರಾಜ್ಯವನ್ನು ಭಾರತಕ್ಕೆ ಬಿಟ್ಟುಕೊಡುವಂತೆಯೂ, ಭಾರತದಿಂದ ಸ್ವತಂತ್ರವಾಗಿ ರಾಜ್ಯಭಾರ ಮಾಡುವುದರ , ಬಗ್ಗೆ ಎಲ್ಲಾ 565 ರಾಜರುಗಳಿಗೆ ಮನದಟ್ಟು ಮಾಡಿಕೊಟ್ಟರು. ವಿಲೀನವಾದವರ ಪೀಳಿಗೆಯವರಿಗೆ ರಾಜಧನದ ಆಶ್ವಾಸನೆಯನ್ನೂ ಅವರು ನೀಡಿದರು.  ಕಾಶ್ಮೀರ, ಹೈದರಾಬಾದು ಹಾಗೂ ಜುನಾಘಢ, ರಾಜ್ಯಗಳನ್ನು ಹೊರತುಪಡಿಸಿ, ಬಾಕಿ ಎಲ್ಲಾ ಸಂಸ್ಥಾನಗಳೂ ವಿಲೀನಕ್ಕೆ ಒಪ್ಪಿದವು. 


ತಮ್ಮ ಸ್ವಂತ ರಾಜ್ಯ ಗುಜರಾತಿನಲ್ಲಿದ್ದ ಜುನಾಘಡ ಸಂಸ್ಥಾನ ಪಟೇಲರಿಗೆ ಸಹಜವಾಗಿಯೇ ಮಹತ್ವದ್ದಾಗಿತ್ತು. ಅಲ್ಲಿಯ ನವಾಬರ ಮೇಲೆ ಪಾಕಿಸ್ತಾನ ಸೇರುವಂತೆ ಸರ್ ಶಾ ನವಾಜ್ ಭುಟ್ಟೋ ಒತ್ತಡ ಹೇರಿದ್ದರು. ಜುನಾಗಡ ಪಾಕಿಸ್ತಾನದಿಂದ ಸಾಕಷ್ಟು ದೂರವಿದ್ದದ್ದಷ್ಟೇ ಅಲ್ಲ ಅಲ್ಲಿಯ ಜನಸಂಖ್ಯೆಯ ಶೇಕಡಾ  80 ಹಿಂದೂಗಳಾಗಿದ್ದರು. ಪಟೇಲರು ಮುತ್ಸದ್ದಿತನದೊಡನೆ ಬಲಪ್ರದರ್ಶನವನ್ನೂ ಮಾಡಿ ಪಾಕಿಸ್ತಾನ ಜುನಾಘಡದಿಂದ ದೂರವಿರುವಂತೆಯೂ ಹಾಗೂ ಜುನಾಘಡವು ಭಾರತದೊಂದಿಗೆ ವಿಲೀನವಾಗಬೇಕೆಂದೂ ಒತ್ತಡ ಹಾಕಿದರು. ಇದರೊಂದಿಗೆ ಸೇನೆಯ ತುಕಡಿಗಳನ್ನು ಜುನಾಘಡದ ಮೂರು ಪ್ರದೇಶಗಳಿಗೆ ಕಳುಹಿಸಿ ತಮ್ಮ ಧೃಢನಿರ್ಧಾರವನ್ನು ಪ್ರಕಟಪಡಿಸಿದರು. ವ್ಯಾಪಕ ಪ್ರತಿಭಟನೆಯ ನಂತರ ಜನಪರ ಸರ್ಕಾರ  ರಚನೆಯಾದ ಮೇಲೆ ಭುಟ್ಟೋ ಮತ್ತು ನವಾಬ ಇಬ್ಬರೂ ಪಾಕಿಸ್ತಾನಕ್ಕೆ ಪಲಾಯನ ಮಾಡಿದರು. ಪಟೇಲರ ಆದೇಶದ ಮೇರೆ ಭಾರತೀಯ ಸೇನೆ ಹಾಗೂ ಪೋಲೀಸ್ ಪಡೆಗಳು ಜುನಾಘಡವನ್ನು ಪ್ರವೇಶಿಸಿದವು.


ಮುಂದೆ ನಡೆದ ಜನಮತಗಣನೆಯಲ್ಲಿ ಶೇಕಡಾ 99.5 ಮಂದಿ ಭಾರತದೊಂದಿಗೆ ವಿಲೀನದ ಪರವಾಗಿ ಮತವಿತ್ತರು. ಇಂದಿನ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರದ ಭಾಗಗಳನ್ನೊಳಗೊಂಡ ಹೈದರಾಬಾದ್ ಭಾರತದ ಸಂಸ್ಥಾನಗಳಲ್ಲಿಯೇ ಅತಿ ದೊಡ್ಡದಾಗಿತ್ತು. ಅಲ್ಲಿನ ನಿಜಾಮ ಮುಸ್ಲಿಮರಾಗಿದ್ದರೂ ಜನಸಂಖ್ಯೆಯ ಶೇಕಡಾ 80 ಹಿಂದೂಗಳಾಗಿದ್ದರು. 


ಜಿನ್ನಾ ಮೊದಲಾದ ಪಾಕಿಸ್ತಾನ ನಾಯಕರು ಹಾಗೂ ಬ್ರಿಟೀಷ್ ರ ಬೆಂಬಲದಿಂದ ಹೈದರಾಬಾದ್ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ನಿಜಾಮ ಘೋಷಿಸಿದ. ಆತನ ಸೇನೆಗೆ ಅತ್ಯಾಧುನಿಕ ಸಿಡ್ನಿ ಕಾಟನ್ ಬಂದೂಕುಗಳು, ಮದ್ದುಗುಂಡುಗಳನ್ನು ಮತ್ತು ತರಬೇತಿಯನ್ನು ಬ್ರಿಟೀಷ್ ರು ನೀಡಿದರು.ಕಾಸೀಂ ರಜ್ವಿಯಂಬ ಮತಾಂಧ ಮತ್ತು ಉಗ್ರವಾದಿಯ ಮುಂದಾಳತ್ವದಲ್ಲಿ ಸಾವಿರಾರು ಜನ ರಜಾಕಾರರು ಹೈದರಾಬಾದ್ ಸಂಸ್ಥಾನದಲ್ಲಿ ಜನಸಾಮಾನ್ಯರ ಮೇಲೆ ಆಕ್ರಮಣ ನೆಡೆಸಿದರು. 


ಮಹಿಳೆಯರ ಮಾನಭಂಗ, ಮಕ್ಕಳ ಹತ್ಯೆ, ಜನರ ಹತ್ಯೆ ಇವು ಸಾವಿರಾರು ಕಡೆ ನೆಡೆದವು. ಸ್ವಾಮಿ ರಮಾನಂದತೀರ್ಥರ ನೇತೃತ್ವದಲ್ಲಿ ಹೈದರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟ ನೆಡೆಯಿತು. ಕರ್ನಾಟಕದ ಮುಂಡರಗಿಯ ಶಿಬಿರಕ್ಕೆ ಕೇಂದ್ರ ಮಂತ್ರಿ ಗಾಡ್ಗೀಳರನ್ನು ಕಳುಹಿಸಿದ ಪಟೇಲ್ ರು ಈ ಹೋರಾಟಕ್ಕೆ ಬೆಂಬಲ ನೀಡಿ ಪ್ರೋತ್ಸಾಹಿಸಿದರು.


ಯುದ್ಧ ಭೀತಿಯಿಂದ ಹತಾಶರಾಗಿದ್ದ ಮೌಂಟ್ ಬ್ಯಾಟನ್ನರ ಪ್ರಯತ್ನದಿಂದ ತಟಸ್ಥ ಒಪ್ಪಂದವಾದರೂ, ನಿಜಾಮ ತನ್ನ ನಿಲುವನ್ನು ಬದಲಾಯಿಸಿ ಈ ಒಪ್ಪಂದವನ್ನು ತಿರಸ್ಕರಿಸಿದ. ವಿಶ್ವಸಂಸ್ಥೆಗೆ ಈ ವಿವಾದವನ್ನು ಒಪ್ಪಿಸುವ ಕುತಂತ್ರ ಅವನದಾಗಿತ್ತು. 1948ರ ಸೆಪ್ಟೆಂಬರಿನಲ್ಲಿ ಪಟೇಲರು ಭಾರತ ಇನ್ನು ಕಾಯಲಾಗದು ಎಂದು ರಾಜಾಜಿಯವರನ್ನು ಒಪ್ಪಿಸಿ, ಹೈದರಾಬಾದನ್ನು ವಶಕ್ಕೆ ತೆಗೆದುಕೊಳ್ಳಲು ಭಾರತದ ಸೇನೆಯನ್ನು ಕಳುಹಿಸಿದರು.  


ಆಪರೇಷನ್ ಪೋಲೋ ಎಂಬ ಈ ಕಾರ್ಯಾಚರಣೆಯಲ್ಲಿ ಸಾವಿರಾರು ರಜಾಕಾರರು ಕೊಲ್ಲಲ್ಪಟ್ಟರು. 1948 ಸೆಪ್ಟೆ೦ಬರ್ 17 ರಂದು ಈಗಿನ ಬೀದರ್ ಜಿಲ್ಲೆಯ ಹುಮುನಾಬಾದಿನಲ್ಲಿ ನಿಜಾಮರ ಸೈನ್ಯ ಶರಣಾಯಿತು. ಹೈದರಾಬಾದು ಪ್ರಾ೦ತ್ಯ ಸುರಕ್ಷಿತವಾಗಿ ಭಾರತದ ಭಾಗವಾಯಿತು. ಕೇವಲ ಎರಡುದಿನವಷ್ಟೇ ನಡೆದ ಕಾರ್ಯಚರಣೆಯನ್ನು  ಭಾರತ ಸರಕಾರದ ದಾಖಲೆಗಳಲ್ಲಿ ಪೋಲೀಸ್ ಕಾರ್ಯಚರಣೆಯೆ೦ದು ಕರೆಯಲಾಗಿದೆ. 


ನಿಜಾಮರ ಸೈನ್ಯದ ಸೈನ್ಯಾಧಿಕಾರಿ ಒಬ್ಬ ಬ್ರಿಟಿಷ್ ಆಗಿದ್ದನೆ೦ಬುವುದು ಇಲ್ಲಿ ಗಮನಾರ್ಹ. ಬಲಪ್ರಯೋಗದಿಂದ ಹೈದರಾಬಾದನ್ನು ವಶಪಡಿಸಿಕೊಂಡಲ್ಲಿ ಅದು ಹಿಂದೂ-ಮುಸ್ಲಿಮ್ ದಂಗೆಗಳಿಗೆ ಅವಕಾಶ ಕೊಡಬಹುದು ಎಂದು ಮೌಂಟ್ ಬ್ಯಾಟನ್ ಮತ್ತು ನೆಹರೂ ಶಂಕಿಸಿ ಹಿಂಜರಿದರೂ ಪಟೇಲರು ಹೈದರಾಬಾದನ್ನು ಹಾಗೆಯೇ ಬಿಟ್ಟಲ್ಲಿ ಅದು ಭಾರತದ ಪ್ರತಿಷ್ಟೆಗೇ ಸವಾಲಾಗುವುದಷ್ಟೇ ಅಲ್ಲ, ಅದರಿಂದಾಗಿ ಹಿಂದೂಗಳಾಗಲೀ, ಮಸಲ್ಮಾನರಾಗಲೀ ಆ ರಾಜ್ಯದಲ್ಲಿ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.


ಯಾವುದೇ ನಾಗರೀಕ ಪ್ರತಿಭಟನೆಯಿಲ್ಲದೇ ಯಶಸ್ವಿಯಾದ ಹೈದರಾಬಾದಿನ ವಿಲೀನವನ್ನು ಅನೇಕ ಭಾರತೀಯ ಮುಸ್ಲಿಮರು ಕೊಂಡಾಡಿದರು. ನಿಜಾಮರ ಮೇಲೆ ಸಂತಾಪವಿದ್ದರೂ, ಪಟೇಲರು ಅವರನ್ನು ರಾಜ್ಯದ ಅಲಂಕಾರಿಕ ಮುಖ್ಯಸ್ಥನನ್ನಾಗಿ ನೇಮಿಸಿದರು. ಮುಂದೆ ನಡೆದ ಮಾತುಕತೆಯಲ್ಲಿ ನಿಜಾಮರು ಪಟೇಲರನ್ನು ಕ್ಷಮಾಪಣೆ ಕೇಳಿದ್ದರಿಂದ ಪಟೇಲರು ದೊಡ್ಡ ಮನಸ್ಸಿನಿಂದ ವೈರವನ್ನು ತಮ್ಮ ಮನಸ್ಸಿನಿಂದ ತೆಗೆದುಹಾಕಿದರು.

ಕಾಶ್ಮೀರ ದ ಏಕೀಕರಣವೂ ಪಟೇಲರ ಚಾಣಾಕ್ಷತನದಿಂದ ಆದ ಕಾರ್ಯವಾಗಿದೆ.


ಭಾರತವನ್ನು ಒಟ್ಟುಗೂಡಿಸುವುದು ಸುಲಭದ ಕೆಲಸವೇನಾಗಿರಲಿಲ್ಲ.  ಪಟೇಲರ ಗಣನೀಯ ಸೇವೆಯನ್ನು ಗಮನದಲ್ಲಿಟ್ಟು ಅವರನ್ನು ಭಾರತದ ಬಿಸ್ಮಾರ್ಕ್ ಎಂದು ಕರೆಯಲಾಗುತ್ತದೆ. ಪಟೇಲರು ಭಾರತದ ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯ ಹಿರಿಯ ಸದಸ್ಯರಾಗಿದ್ದರು.


ಭಾರತದ ಸಂವಿಧಾನದಲ್ಲಿ ನಾಗರಿಕ ಸ್ವಾತಂತ್ರ್ಯದ ರೂಪರೇಷೆಗಳನ್ನು ನಿರ್ಧರಿಸುವುದಕ್ಕಾಗಿ ರಚಿಸಲಾಗಿದ್ದ ಅನೇಕ ಮಹತ್ವದ ಸಮಿತಿಗಳ ನಾಯಕರಾಗಿದ್ದರು. ಸರಕಾರದ ರಕ್ಷಣಾತ್ಮಕ ಅಧಿಕಾರವಿರುವ, ವ್ಯಾಪಕ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅವರು ಬೆಂಬಲ ನೀಡಿದರು. ರಾಷ್ಟ್ರೀಕೃತ ಸಿವಿಲ್ ಸರ್ವೀಸನ್ನು ಅವರು ಬಲವಾಗಿ ಬೆಂಬಲಿಸಿದ್ದಲ್ಲದೇ , ಆಸ್ತಿ ಹಕ್ಕು ಮತ್ತು ರಾಜಧನದ ಕಲಮುಗಳನ್ನೂ ಸೇರಿಸಿದರು.  ಇಂತಹ ಮಹಾನ್ ಸಾಧನೆ ಮಾಡಿದ ಪಟೇಲರ ಜನ್ಮ ದಿನವನ್ನು ಏಕತಾ ದಿನವನ್ನಾಗಿ ಆಚರಿಸುವುದು ಅರ್ಥಪೂರ್ಣ. ನಮ್ಮ ದೇಶದ ಸಮಗ್ರತೆ ಮತ್ತು ಏಕತೆಗೆ ಈ ದಿನ ನಾವೆಲ್ಲರೂ ಪ್ರತಿಜ್ಞೆ ಸ್ವೀಕರಿಸಿ ಕಾರ್ಯ ಪ್ರವೃತ್ತರಾದರೆ ಈ ದಿನಕ್ಕೆ ಇನ್ನೂ ಅರ್ಥ ಬರುವುದು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529.






25 ಅಕ್ಟೋಬರ್ 2023

ಕಾರ್ಬಿನ್ ಕೋವ್ ಬೀಚ್.ನನ್ನ ಬ್ಲಾಗ್ ನ .2000 ಪೋಸ್ಟ್ ನ ಸಂಭ್ರಮ

 


ನಯನ ಮನೋಹರ ಕೋರ್ಬಿನ್ ಕೋವ್ ಬೀಚ್..



ನಯನ ಮನೋಹರ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಮತ್ತು ಜಲ ಸಾಹಸ ಕ್ರೀಡೆಗಳಿಗೆ ಹೆಸರಾದ ಅಂಡಮಾನ್ ನ ಬೀಚ್ ಗಳಲ್ಲಿ ಕಾರ್ಬಿನ್ ಕೋವ್ ಪ್ರಮುಖ ಬೀಚ್.


ಇದು  ಪೋರ್ಟ್ ಬ್ಲೇರ್ನ ಅತಿ ಹೆಚ್ಚು ಭೇಟಿ ನೀಡುವ ಬೀಚ್ ಸಹ  ಆಗಿದೆ.  ಎಟರ್ನಲ್ ಅಂಡಮಾನ್ನ 2017 ರ ಸಮೀಕ್ಷೆಯ ಪ್ರಕಾರ  10 ರಲ್ಲಿ 7 ಜನರು ಅಂಡಮಾನ್  ದ್ವೀಪಗಳಿಗೆ ಭೇಟಿ ನೀಡುವ ಪ್ರವಾಸಿಗರು  ತಮ್ಮ ಪ್ರವಾಸದಲ್ಲಿ  ಈ  ಬೀಚ್ಗೆ ಭೇಟಿ ನೀಡುತ್ತಾರೆ. 


ಕಾರ್ಬಿನ್ಸ್ ಕೋವ್ ಕಡಲತೀರವು ಪೋರ್ಟ್ ಬ್ಲೇರ್ನಲ್ಲಿ 1.5 ಕಿಮೀ ಉದ್ದದವರೆಗೆ ಅರ್ಧಚಂದ್ರಾಕಾರದ ಆಕಾರದಲ್ಲಿ ನಿರ್ಮಿಸಲಾದ ಅತ್ಯಂತ ಉದ್ದವಾದ ತೀರವನ್ನು ಹೊಂದಿದೆ.

ಆ ತೀರದಗುಂಟ ಸಮಾನ ಮನಸ್ಕರ ಜೊತೆಯಲ್ಲಿ ನಡೆಯುವುದೇ ಒಂದು ಸುಂದರ ಅನುಭವ. ಪ್ರೇಮಿಗಳು ದಂಪತಿಗಳು ,ಕುಟುಂಬ ಸಮೇತವಾಗಿ ಸಂಜೆಗೆ ಈ ಬೀಚ್ ಗೆ ಭೇಟಿ ನೀಡುವ ಜನ ಹೆಚ್ಚಾಗಿರುವರು.


ಬಲಭಾಗದಲ್ಲಿ ಸಾಲಾಗಿ ನಿಂತ ತೆಂಗಿನ ಮರಗಳು ಎಡಭಾಗದಲ್ಲಿ ಬಿಳಿ ಮರಳು ಹಸಿರು ಮತ್ತು ನೀಲಿ ಬಣ್ಣದ ನೀರು ನಮ್ಮ ಮನಸ್ಸನ್ನು ಪ್ರಫುಲ್ಲವಾಗಿಸುತ್ತದೆ. ನಾವು ಬೀಚ್ ನಲ್ಲಿ ನಡೆಯುವಾಗ ಐಸ್ ಕ್ಯಾಂಡಿ ,ಚುರುಮುರಿ ಮಾರುವವರು ಅಡ್ಡಲಾಗಿ ತಮ್ಮ ಪದಾರ್ಥಗಳನ್ನು ಮಾರಲು ಪ್ರಯತ್ನಿಸುವರು.

ನಾವು ಒಂದು ಚುರುಮುರಿ ಕೊಂಡು ತಿಂದೆವು. ರುಚಿ ಕರ್ನಾಟಕದ ರುಚಿಗೆ ಹತ್ತಿರವಿತ್ತು ಆದರೆ ಪ್ರಮಾಣ ಕಡಿಮೆ ಹಣ ಜಾಸ್ತಿ! 


ತೀರದಲ್ಲಿ  ಒಂದು ಕಿಲೋಮೀಟರ್ ವಾಕ್ ಮಾಡಿದ ಮೇಲೆ ನಮಗೆ ಕೆಲವು ಶಿಥಿಲವಾದ ಬಂಕರ್ ಗಳು ಕಾಣುತ್ತವೆ. ಅವು ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನ್ ನವರು ನಿರ್ಮಿಸಿದ ಬಂಕರ್ ಗಳು ಎಂದು ನಮ್ಮ ಟ್ರಾವೆಲ್ ಗೈಡ್ ಮಾಹಿತಿ ನೀಡಿದನು.  

ನಾವು ಬೀಚ್ ನಲ್ಲಿ ವಾಕ್ ಮಾಡುತ್ತಾ ಸೌಂದರ್ಯವನ್ನು ಸವಿಯುವಾಗ ಜೆಟ್ ಸ್ಕಿ, ಬೋಟ್ ರೈಡಿಂಗ್ , ಮುಂತಾದ ವಾಟರ್ ಗೇಮ್ಸ್  ನಲ್ಲಿ ‌ನಿರತ ಯುವಕರು ನೀರಾಟದಲ್ಲಿ ಮೈಮರೆತಿರುವುದನ್ನು ಗಮನಿಸಿದೆ.


ಸ್ವಲ್ಪ ದೂರ ಸಾಗಿದ ನಮಗೆ ಮತ್ತೊಂದು ಬಂಕರ್ ಎದುರಾಯಿತು.

 ಅಲ್ಲಿ ನಿಂತು ನೋಡಿದರೆ  ಹಾವು ದ್ವೀಪವನ್ನು ಕಾಣಬಹುದು.

ಕಡಲತೀರದ ಕೆಳಗೆ ಮತ್ತಷ್ಟು ಬಲಕ್ಕೆ ನಡೆದರೆ, ನೀವು ದೊಡ್ಡ ಮೀನುಗಾರಿಕೆ ದೋಣಿಗಳನ್ನು ಕಾಣಬಹುದು ಮತ್ತು ಹೇರಳವಾಗಿ ದಟ್ಟವಾದ ಮ್ಯಾಂಗ್ರೋವ್ ಕಾಡುಗಳ ಕಾಣಬಹುದು.

 ಹೀಗೆ ಕಾರ್ಬಿನ್ ಕೋವ್ ಬೀಚ್ ನ ಸೌಂದರ್ಯ ಸವಿಯುವ ನಮ್ಮ ಮನಗಳಿಗೆ ಸೂರ್ಯ ದೇವ ಸಂಜೆ 4 .45 ಕ್ಕೆ ಅಸ್ತಂಗತವಾಗಿ  ತಣ್ಣೀರೆರಚಿಬಿಟ್ಟ! ಅಂಡಮಾನ್ ನಲ್ಲಿಯೇ ಹಾಗೆ ಬೆಳಿಗ್ಗೆ ನಾಲ್ಕುವರೆಗೆ ಸೂರ್ಯೋದಯ ಸಂಜೆ ನಾಲ್ಕುಮಕ್ಕಾಲಿಗೆ ಸೂರ್ಯಾಸ್ತ!


ಒಟ್ಟಾರೆಯಾಗಿ ನೀವು ಅಂಡಮಾನ್ ಪ್ರವಾಸ ಕೈಗೊಂಡರೆ  ಪೋರ್ಟ್ ಬ್ಲೇರ್ನಲ್ಲಿ ನೀವು ಭೇಟಿ ನೀಡಬಹುದಾದ ಅತ್ಯುತ್ತಮ ಕಡಲತೀರಗಳಲ್ಲಿ ಕಾರ್ಬಿನ್ ಕೋವ್ ಬೀಚ್ ಸಹ   ಒಂದಾಗಿದೆ. ಎಂದು ಹೇಳಬಹುದು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

 





24 ಅಕ್ಟೋಬರ್ 2023

ಚಾರಣ ಪ್ರಿಯರ ಸ್ವರ್ಗ ಸಾವನದುರ್ಗ...

 


ಚಾರಣ ಪ್ರಿಯರ ಸ್ವರ್ಗ  ಸಾವನದುರ್ಗ

ಪರಿಸರ ಪ್ರಿಯರನ್ನು ಮತ್ತು ಚಾರಣ ಪ್ರಿಯರನ್ನು ಕೈ ಬೀಸಿ ಕರೆವ ತಾಣವಾದ ಸಾವನದುರ್ಗಕ್ಕೆ ಸಹೋದ್ಯೋಗಿಗಳ ಜೊತೆಗೂಡಿ ಕಳೆದ ತಿಂಗಳು ಭೇಟಿ ನೀಡಿದ್ದೆವು. ಮಾಗಡಿ ದಾಟಿದ ಕೂಡಲೇ ಕಾಡಿನ ಮರಗಳು ನಮ್ಮನ್ನು ಸ್ವಾಗತಿಸಿ ತಂಪಾದ ಗಾಳಿಯನ್ನು ಸೂಸುತ್ತವೆ. ಮರಗಿಡಗಳ ಸೌಂದರ್ಯವನ್ನು  ಸವಿಯುತ್ತಾ ದಾರಿ ಸಾಗಿದ್ದೇ ಗೊತ್ತಾಗುವುದಿಲ್ಲ. "ಅಗೋ ನೋಡಿ ಅದೇ ಸಾವನ ದುರ್ಗ" ಎಂಬ ಸಹೋದ್ಯೋಗಿಗಳ ಉದ್ಘಾರ ಕೇಳಿದಾಗ ಕಾರ್ ಸ್ಲೋ ಮಾಡುತ್ತಾ ಎಡಕ್ಕೆ ನೋಡಿದಾಗ ಕಂಡ ಅದ್ಭುತ ದೃಶ್ಯ ಕಾವ್ಯ! ಬೃಹತ್ ಬಂಡೆಯ ದುರ್ಗ ಅದೇ ಸಾವನ ದುರ್ಗ.
ಏಷ್ಯಾ ಖಂಡದಲ್ಲೇ ಸಾವನ ದುರ್ಗದ ಬೆಟ್ಟ ಅತೀ ದೊಡ್ಡ ನೈಸರ್ಗಿಕ ಏಕಶಿಲಾ ರಚನೆಯಾಗಿದ್ದರೆ, ಮಧುಗಿರಿಯ ಬೆಟ್ಟ ಏಷ್ಯಾದ ಎರಡನೇ ಅತೀ ದೊಡ್ಡ ಏಕಶಿಲಾ ಬೆಟ್ಟವೆಂದು ಖ್ಯಾತವಾಗಿದೆ. ಸಾವನ ದುರ್ಗ ಬೆಟ್ಟ 1226 ಮೀಟರ್ ಎತ್ತರವಿದೆ. ಇಷ್ಟೇ ಅಲ್ಲದೆ ವೈಜ್ಞಾನಿಕವಾಗಿ ದಖನ್ ಪ್ರಸ್ಥ ಭೂಮಿಯಲ್ಲಿ ಮುಖ್ಯ ಭಾಗವಾಗಿದೆ. ಬೆಟ್ಟದ ಮೇಲೆ ಸುರಿದ ಮಳೆಯೆಲ್ಲ ಅರ್ಕಾವತಿ ನದಿಗೆ ಸೇರಲಿದ್ದು ಅರ್ಕಾವತಿಗೆ ಕಟ್ಟಲಾಗಿರುವ ಮಂಚನಬೆಲೆ ಜಲಾಶಯ ಕೂಡ ಸಾವನದುರ್ಗಕ್ಕೆ ಸನಿಹದಲ್ಲಿದ್ದು ಬೆಟ್ಟ ಹತ್ತಿದರೆ ಕಾಣುತ್ತದೆ. ಸಾವನದುರ್ಗದ ಬೆಟ್ಟ ಸಾಹಸಿ ಚಾರಣಿಗರಿಗೆ ಹೇಳಿ ಮಾಡಿಸಿದಂತಿದ್ದು ಕೊಂಚ ಅಪಾಯಕಾರಿ ಸ್ಥಳವೂ ಕೂಡ. ಸಾವನ ದುರ್ಗದ ಬೆಟ್ಟದ ಪಾತ್ರದಲ್ಲಿ ಎರಡು ದೊಡ್ಡ ಬೆಟ್ಟಗಳಿದ್ದು ಒಂದನ್ನು ಕರಿ ಗುಡ್ಡ ಹಾಗು ಮತ್ತೊಂದನ್ನು ಬಿಳಿಗುಡ್ಡ ಎಂದು ಕರೆಯಲಾಗುತ್ತದೆ. ಕ್ರಿ.ಶ 1340ರ 3 ನೇ ಹೊಯ್ಸಳ ಬಲ್ಲಾಳನ ಮಾಡಬಾಳ್ ನಲ್ಲಿ ದೊರಕಿರುವ ದಾಖಲೆಯ ಪ್ರಕಾರ ಈ ಬೆಟ್ಟವನ್ನು ಸಾವಂದಿ ಎಂದು ಕರೆಯಲಾಗಿದೆ.  ಸಾವನ ದುರ್ಗಾ ಎಂಬ ಹೆಸರು ಬರಲು ಇದನ್ನು ಮುಖ್ಯ ಕಾರಣವಾಗಿ ಪರಿಗಣಿಸಿದರೂ ಮತ್ತೊಂದು ವಾದವಾಗಿ ಸಮಂತರಾಯ ಎಂಬ ಹೆಸರಿನಿಂದ ಸಾವನದುರ್ಗ ಹೆಸರು ಬಂದಿದೆ ಎನ್ನಲಾಗುತ್ತಿದೆ. ಸಾಮಂತರಾಯನು ವಿಜಯನಗರ ಸಾಮ್ರಾಜ್ಯದ ಅಚ್ಯುತರಾಯನಲ್ಲಿ ಸಾಮಂತ ರಾಜನಾಗಿದ್ದವನು. ಆತನಿದ್ದ ಸ್ಥಳ ಮಾಗಡಿ ಪ್ರದೇಶವೇ ಆಗಿದ್ದ ಕಾರಣ ಅವನ ಹೆಸರೇ ಬಂದಿದೆ ಎನ್ನುವ ಊಹೆಗಳಿವೆ.  1638 ರಿಂದ 1728 ರ ವರೆವಿಗೂ ಕೆಂಪೇಗೌಡರ ಎರಡನೇ ರಾಜಧಾನಿಯಾಗಿತ್ತು ಸಾವನದುರ್ಗ. ವಿಜಯನಗರ ಸಾಮ್ರಾಜ್ಯ ಪತನಾನಂತರ ಕೆಲ ಕಾಲದಲ್ಲೇ ಕೆಂಪೇಗೌಡರು ಮಡಿದಾಗ ಮೈಸೂರಿನ ದಳವಾಯಿ ಮಾಗಡಿ ಪ್ರದೇಶವನ್ನು ಆಕ್ರಮಿಸಿಕೊಂಡರು. ಅಲ್ಲಿಂದ ಮುಂದೆ ಮೈಸೂರಿನ ಟಿಪ್ಪುಸುಲ್ತಾನ್ ಆಡಳಿತಕ್ಕೆ ಒಳಪಟ್ಟ ಸಾವನ ದುರ್ಗವನ್ನು ಟಿಪ್ಪು ಸುಲ್ತಾನ್ ಶಿಕ್ಷಿಸುವ ತಾಣವಾಗಿಸಿಕೊಳ್ಳುತ್ತಾನೆ. ತನ್ನ ಸಾಮ್ರಾಜ್ಯದಲ್ಲಿ ಯಾರಾದರೂ ಘೋರ ಅಪರಾಧ ಮಾಡಿದರೆ ಅವರನ್ನು ಬೆಟ್ಟದ ಮೇಲಿನಿಂದ ತಳ್ಳುವ ಶಿಕ್ಷೆಗೆ ಗುರಿಪಡಿಸುತ್ತಿದ್ದನಂತೆ. ಈ ಕಾರಣದಿಂದ ಈ ಸ್ಥಳಕ್ಕೆ ಸಾವಿನ ದುರ್ಗ ಎಂಬ ಹೆಸರು ಬಂದಿದ್ದು, ಮುಂದೆ ಸಾವನ ದುರ್ಗ ಎಂದಾಗಿದೆ ಎಂದು ಕೆಲವರು ತಮ್ಮ ಅಭಿಪ್ರಾಯ ಮಂಡಿಸುತ್ತಾರೆ.ಮುಂದೆ ಟಿಪ್ಪು ಸುಲ್ತಾನನಿಂದ ಮೂರನೇ ಆಂಗ್ಲೋಮೈಸೂರು ಯುದ್ಧದಲ್ಲಿ ಮಾಗಡಿ ಪ್ರದೇಶವನ್ನು ಲಾರ್ಡ್ ಕಾರ್ನ್ ವಾಲಿಸ್ ವಶಪಡಿಸಿಕೊಂಡನು. ಬೆಟ್ಟದ ಬುಡದಲ್ಲಿ ಸಾವಂದಿ ವೀರಭದ್ರ ದೇವರ ಗುಡಿ ಹಾಗು ಲಕ್ಷ್ಮಿ ನರಸಿಂಹ ದೇವರ ಗುಡಿಗಳಿವೆ. ಕರ್ನಾಟಕ ಸರ್ಕಾರ ನಿಭಾಯಿಸುತ್ತಿರುವ ಸಣ್ಣ ಅರಣ್ಯ ಪ್ರದೇಶವು ಇಲ್ಲಿದೆ. 'ಎ ಪ್ಯಾಸೇಜ್ ಟು ಇಂಡಿಯಾ' ಎನ್ನುವ ಹಾಲಿವುಡ್ ಚಿತ್ರವೂ ಸೇರಿದಂತೆ ಬಹಳಷ್ಟು ಚಲನಚಿತ್ರ ಮತ್ತು ಧಾರಾವಾಹಿಗಳ ಚಿತ್ರೀಕರಣ ಸಾವನದುರ್ಗದ ಬೆಟ್ಟ ಪ್ರದೇಶಗಳ ಸುತ್ತ ಮುತ್ತ ಚಿತ್ರೀಕರಿಸಲಾಗಿದೆ.
ವೀಕೆಂಡ್ ನಲ್ಲಿ ಟೆಕ್ಕಿಗಳು ಮತ್ತು ಪ್ರೇಮಿಗಳನ್ನು ಸಾವನ ದುರ್ಗ ಕೈ ಬೀಸಿ ಕರೆಯುತ್ತದೆ.
ಆಸ್ತಿಕರು ಮತ್ತು ಭಕ್ತಾದಿಗಳು
ಸಾವಂದಿ ವೀರಭದ್ರ ದೇವಾಲಯ ಹಾಗು ಲಕ್ಷ್ಮಿ ನರಸಿಂಹ ದೇವರ ದೇವಾಲಯ ಸಂದರ್ಶಿಸಿ ಪುನೀತರಾಗಲು ಸಾವನ ದುರ್ಗದ ಕಡೆ ಪಯಣ ಬೆಳೆಸುತ್ತಾರೆ. ನೀವು ಇದುವರೆಗೂ ಸಾವನದುರ್ಗ ನೋಡಿಲ್ಲವಾದರೆ ಈ ವಾರವೇ ಸಾವನದುರ್ಗಕ್ಕೆ ಹೊರಡಲು ಪ್ಲಾನ್ ಮಾಡಿ...

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529

ಸಾವಿರ ನೆನಪುಗಳು...

 



ಸಾವಿರ ನೆನಪುಗಳು...


ಕೆಲವು ನೆನಪುಗಳೇ ಹಾಗೆ ಪದೇ ಪದೇ ನಮ್ಮನ್ನು ಕಾಡುತ್ತವೆ. ಪುಳಕಗೊಳಿಸುತ್ತವೆ. ಪುನಃ ಪುನಃ ಬಂದು ಮನಕಾನಂದ ನೀಡುತ್ತವೆ. ಮೊನ್ನೆ ಯಾರೋ ಗೆಳೆಯರು ಅವರ ಬಾಲ್ಯ ಮತ್ತು ಯೌವನದ ಹೈಲೈಟ್ ಇರುವ ಮುನ್ನಾಯಿಸಿದ ಸಂದೇಶ ಕಳಿಸಿದ್ದರು. ಅದೇ ಸಮಯಕ್ಕೆ ಮಾರ್ನಾಮಿ ಹಬ್ಬಕ್ಕೆ ನಮ್ಮ ಊರಿಗೆ ಹೋಗಿದ್ದೆ. ಆಗ ನನ್ನ ಬಾಲ್ಯದ ನೆನಪುಗಳು ಒತ್ತರಿಸಿ ಬಂದವು.ಈ ಲೇಖನ ಓದಿ ನಿಮ್ಮ ಬಾಲ್ಯ ನೆನಪಾಗಬಹುದು.


ಆಗ ನಮ್ಮ ಊರ ಕೇರಿಯಲ್ಲಿ ಜುಂಜಪ್ಪಯ್ಯನವರ  ಮನೆಯಲ್ಲಿ ಮಾತ್ರ ರೇಡಿಯೋ ಇತ್ತು ಮಧ್ಯಾಹ್ನ ಒಂದೂವರೆಗೆ "ನಿಮ್ಮ ಮೆಚ್ಚಿನ ಚಿತ್ರಗೀತೆ "ಕೇಳಲು ನಾವು ಹಾಜರಾಗುತ್ತಿದ್ದೆವು.

 ಒಂದು  ಸಲ  ರೇಡಿಯೋನಲ್ಲಿ ಕೇಳಿದರೆ ಸಾಕು ಸಿನಿಮಾ ಹಾಡು  ಬಾಯಿಪಾಠ ಆಗ್ತಿತ್ತು. ಗೌರಿ ಮೊಗವು ಚಂದಿರನಂತೆ.... ನನ್ನ ನಿನ್ನ ಆಸೆ ನನ್ನ ಪ್ರೇಮು ಭಾಷೆ... ಹಸಿರು ಗಾಜಿನ ಬಳೆಗಳೆ... ಮುಂತಾದ ಹಾಡುಗಳು ಈಗಲೂ ನೆನಪಾಗುತ್ತವೆ.

ಪರ ಊರುಗಳಿಗೆ ಪಯಣಿಸಲು ಬಸ್ ಗಳಲ್ಲಿ ಕುಳಿತಿದ್ದರೆ ನಿಂಬಿ‌ಹುಳಿ ಪೇಪರ್ ಮೆಂಟ್ , ಬಿಸ್ಕೆಟ್ ಮಾರಲು ಬಂದು ನಮಗೆ ಮಾರಿ ಹೋಗುತ್ತಿದ್ದರು.

ಸೈಕಲ್ ಎಲ್ಲರ ಮನೆಯಲ್ಲಿ ಇರಲಿಲ್ಲ .ನಮ್ಮ ಬೀದಿಯ ಬಸವರಾಜನ ಮನೆಯಲ್ಲಿ ಮಾತ್ರ ಸೈಕಲ್ ಇತ್ತು ಅವನನ್ನು ಕಾಡಿ ಬೇಡಿ ಒಂದು ರೌಂಡ್ ಸೈಕಲ್ ಪಡೆದು ಓಡಿಸುತ್ತಿದ್ದೆ.


ಆಗ ‌ನಮ್ಮೂರಲಿ ಯಾರ ಮನೆಯಲ್ಲಿ ಮದುವೆಯಾದರೂ ನಮ್ಮ ಮದುವೆಯಂತೆ ಸಂಭ್ರಮಿಸುತ್ತಿದ್ದೆವು.ಮದುವೆ ಅಡುಗೆಗೆ ಕಾಡಿ‌ನಿಂದ ಎತ್ತಿನಗಾಡಿಯಲ್ಲಿ ಸೌದೆ ತರುವುದು, ಅಕ್ಕಿ, ದವಸ ಹಸನು ಮಾಡುವುದು, ಹಪ್ಪಳ ಸಂಡಿಗೆ ಮಾಡುವುದು ಚಪ್ಪರ ಹಾಕುವುದು ಊಟ ಬಡಿಸುವುದು ಮುಂತಾದ ಕೆಲಸಗಳನ್ನು ಹಂಚಿಕೊಂಡು ಮಾಡಿ ಸಂತಸ ಪಡುತ್ತಿದ್ದೆವು.


ಆಗ ತಾನೆ ಬಂದ ಟೇಪ್ ರೆಕಾರ್ಡರ್ ನ್ನು ನಮ್ಮ ದೊಡ್ಡಮ್ಮನ ಮಗ ಹೊರಕೇರಣ್ಣ ತಂದಿದ್ದರು. ಕರೆಂಟ್ ಇಲ್ಲದಿದ್ದರೂ ಸೆಲ್ ಹಾಕಿಕೊಂಡು ಒಂದಾಗಿ ಬಾಳು ಚಿತ್ರದ ಬಳೆಗಳು ಹಾಡುತಿವೆ...ಘಲ್ ಘಲ್ ಎನ್ನುತಿವೆ...ಎಂಬ ಹಾಡನ್ನು ತಿರುಗಿ ತಿರುಗಿಸಿ ಕೇಳಿ ಪುಳಕಗೊಂಡಿದ್ದೆ.


ಸಿನಿಮಾ ನೋಡಲು ಹೊರಕೇದೇಪುರ ಟೆಂಟ್ ಗೆ ನಮ್ಮೂರಿಂದ ಏಳು ಕಿಲೋಮೀಟರ್  ನಮ್ಮ ಗೆಳೆಯರ ಜೊತೆಯಲ್ಲಿ ನಡೆದುಕೊಂಡೇ ಹೋಗುತ್ತಿದ್ದೆವು. ಟೆಂಟ್ ನಲ್ಲಿ ಬೆಂಚ್ ಮತ್ತು ನೆಲದ ಮೇಲೆ ಕುಳಿತು ಸಿನಿಮಾ ನೋಡುವ ಅವಕಾಶದಲ್ಲಿ ನಾವು ನೆಲವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೆವು. ಪಸ್ಟ್ ಶೋ    ಸಿನಿಮಾ ಬಿಟ್ಟ ಮೇಲೆ 50 ಪೈಸೆ ಕೊಟ್ಟು ಕಾರ ಮಂಡಕ್ಕಿ ಮೆಣಸಿನ ಕಾಯಿ ಬೊಂಡ ತಿಂದು ಕತ್ತಲಲ್ಲಿ ಮತ್ತೆ ಏಳು ಕಿಲೋಮೀಟರ್ ನಡೆದೇ ಮನೆ ಸೇರುತ್ತಿದ್ದೆವು.

ಇನ್ನೂ ಇಂತಹ ಸಾವಿರ ನೆನಪುಗಳಿವೆ ಮುಂದೆ ಹಂಚಿಕೊಂಡು ಸಂತಸಪಡುವೆ.ನಿಮಗೂ ಇಂತಹ ನೆನಪುಗಳು ಮರುಕಳಿಸುತ್ತಿರಬಹುದಲ್ಲವೆ?


ಸಿಹಿಜೀವಿ ವೆಂಕಟೇಶ್ವರ

ಚೌಡಗೊಂಡನಹಳ್ಳಿ 

9900925529 

23 ಅಕ್ಟೋಬರ್ 2023

ಕ್ರಿಕೆಟ್ ಹನಿಗಳು...

 




ಕ್ರಿಕೆಟ್ ಹನಿಗಳು ...



ಕರಾರುವಾಕ್ ಚೆಂಡೆಸತದಿಂದ

ನ್ಯೂಜಿಲೆಂಡ್ ದಾಂಡಿಗರ 

ಬೆವರಿಳಿಸಿದರು ನಮ್ಮ ಶಮಿ|

ಒಂದು ದಿನ ಮೊದಲೇ ಭಾರತೀಯರು ಹೆಮ್ಮೆಯಿಂದ

ಅಚರಿಸಿದೆವು ವಿಜಯದಶಮಿ ||



ಐದು ಓಟಗಳ ಕೊರತೆಯಿಂದ 

ವಿರಾಟ್ ಗೆ   ದೇವರ ದಾಖಲೆ

ಮುರಿಯುವ ಅವಕಾಶ ಮಿಸ್ಸಾಯ್ತು|

ಬೇಸರವಿಲ್ಲ.ದಾಖಲೆಯಾಗಲಿದೆ.

ಈಗ ಭಾರತವು ಅಂಕ ಪಟ್ಟಿಯಲ್ಲಿ

ಮೊದಲ ಸ್ಥಾನ ಪಡೆದಾಯ್ತು|| 


*ಸಿಹಿಜೀವಿ ವೆಂಕಟೇಶ್ವರ*

ತುಮಕೂರು