14 ಜುಲೈ 2023

ಟೊಮ್ಯಾಟೋ ಪುರಾಣ...


 

ಟೊಮ್ಯಾಟೊ ಪುರಾಣ...

ಟೊಮ್ಯಾಟೊ...ಟೊಮ್ಯಾಟೊ... ದೇಶದಾದ್ಯಂತ ಜನರ ನಿದ್ದೆಗೆಡಿಸಿದ ಪದ! ಅದರ ದರ ಕೇಳಿ ಜನರು ಕನಸಲ್ಲೂ ಬೆಚ್ಚಿಬೀಳುತ್ತಿದ್ದಾರೆ.

ಹೆಂಡತಿ ಬಲವಂತ ಮಾಡಿದಾಗ
ಅವನಂದ ಬೇಡ ಟೊಮ್ಯಾಟೊ
ಜಾಸ್ತಿಯಾಗಿದೆ  ಅದರ ದರ |
ಆಯ್ತು ತರಬೇಡಿ ಬಿಡಿ
ನಿಮಗೆ ಸಿಗುವುದು ಡೌಟು
ನನ್ನ ಅಧರ ||

ಕೆಲವೆಡೆ ಟೊಮ್ಯಾಟೊ ಅಂಗಡಿಗಳಲ್ಲಿ ಸಿಸಿ ಟಿ ವಿ ಅಳವಡಿಸಿದ್ದರೆ ಇನ್ನೂ ಕೆಲವೆಡೆ ಟೊಮ್ಯಾಟೊ ಬೆಳೆದ ರೈತರು ಕಳ್ಳರ ಕಾಟದಿಂದ  ಹೈರಾಣಗಿದ್ದಾರೆ . ರಾತ್ರಿಯಿಡಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ತಮ್ಮ ಬೆಳೆ ಕಾಯುವ ದೃಶ್ಯಗಳು ಸಾಮಾನ್ಯವಾಗಿವೆ.
ಈ ಟೊಮ್ಯಾಟೊ ಪ್ರವರ ಇಲ್ಲಿಗೇ ನಿಂತಿಲ್ಲ ಇದು ಕೆಲ ಸಂಸಾರಗಳನ್ನು ಒಡೆದ ಅಪಖ್ಯಾತಿಗೆ ಒಳಗಾಗಿದೆ.ಗಂಡ ಎರಡು ಟೊಮ್ಯಾಟೊ ಹಣ್ಣು ಹಾಕಿ ಅಡುಗೆ ಮಾಡಿದ ಎಂದು ಮುನಿದ ಹೆಂಡತಿ ಜಗಳವಾಡಿಕೊಂಡು ಮನೆ ಬಿಟ್ಟು ತವರು ಮನೆಗೆ ಹೋದ ಬಗ್ಗೆ ಹೊರ ರಾಜ್ಯದಿಂದ ವರದಿಯಾಗಿದೆ.

ರುಚಿಯಿರಲಿ ಎಂದು
ಎರಡು ಟೊಮ್ಯಾಟೊ ಹೆಚ್ಚು
ಹಾಕಿ ಅಡುಗೆ ಮಾಡಿದೆ |
ಬೇಸರಗೊಂಡು ತವರು
ಮನೆಗೆ ಹೊರಟೇ ಬಿಟ್ಟಳು
ನನ್ನ ಮುದ್ದಿನ ಮಡದಿ ||

ಎಂದು ವರ ಪರಿತಪಿಸುತ್ತಿದ್ದಾನೆ.
ಇದಕ್ಕೆ ವಿರುದ್ಧವಾಗಿ ನೆರೆಮನೆಯವನು ಟೊಮ್ಯಾಟೊ ತರದೇ ತನ್ನ ಹೆಂಡತಿಗೆ ಗೋಳಾಡಿಸಿ ಯಾಮಾರಿಸಿದ್ದಾನೆ.

ಮಾರುಕಟ್ಟೆಗೆ ಹೋಗಿ
ಟೊಮ್ಯಾಟೊ ತನ್ನಿ ಎಂದು
ಗಂಡನಿಗೆ ಹೇಳುತ್ತಿದ್ದಾಳೆ ತಟ್ಟಿ ತಟ್ಟಿ|
ಹುಣಸೆ ಹಣ್ಣು ಹಾಕಿ
ಅಡುಗೆ ಮಾಡಿ ಬಿಡೆ
ಟೊಮ್ಯಾಟೊ ಆಗಿದೆ ತುಟ್ಟಿ ತುಟ್ಟಿ||

ಇತ್ತೀಚಿನ ದಿನಗಳಲ್ಲಿ ಟೊಮ್ಯಾಟೊ ಹಾರ ಹಾಕಿಕೊಂಡು ಓಡಾಡುವ ಜನರು ಅಲ್ಲಲ್ಲಿ ಕಾಣಬಹುದು

ಮೊದಲು ನನ್ನವಳು ವರಾತ
ತೆಗೆಯುತ್ತಿದ್ದಳು ಎಂದು
ಕೊಡಿಸುವಿರಿ ಬಂಗಾರದ
ಕಾಸಿನ ಸರ, ಅವಲಕ್ಕಿ ಸರ|
ಈಗ ವರಸೆ ಬದಲಿಸಿದ್ದಾಳೆ
ಕೊಡಿಸಿ ಸಾಕು ಒಂದು
ಟೊಮ್ಯಾಟೊ ಸರ ಅವಳಿಗೂ
ತಿಳಿದುಹೋಗಿದೆ ಏರಿದ ಟೊಮ್ಯಾಟೊ ದರ ||

ಟೊಮ್ಯಾಟೊ ಬಗ್ಗೆ ಮಾತನಾಡುವಾಗ
ಮತ್ತಷ್ಟು ಸ್ವಾರಸ್ಯಕರ ಸಂಗತಿಗಳು ನಮ್ಮ ಗಮನ ಸೆಳೆಯುತ್ತವೆ.
ಕೆಂಪು ಬಣ್ಣದಲ್ಲಿ ಇರುವುದು ಮಾತ್ರ ಟೊಮೆಟೊ ಅಲ್ಲ. ಬದಲಿಗೆ ಹಳದಿ, ಗುಲಾಬಿ, ನೇರಳೆ, ಕಪ್ಪು ಹಾಗೂ ಬಿಳಿ ಬಣ್ಣಗಳ ಟೊಮೆಟೊಗಳು ಇವೆ.
ಯುರೋಪ್ನಲ್ಲಿ ಮೊದಲ ಬಾರಿಗೆ ಬೆಳೆದ ಟೊಮೆಟೊ ಹಳದಿ ಬಣ್ಣದ್ದಾಗಿತ್ತು. ಹೀಗಾಗಿ ಅಲ್ಲಿ ಇದನ್ನು ಆರಂಭದಲ್ಲಿ 'ಪೊಮೊ ಡಿ'ಒರೊ' (ಚಿನ್ನದ ಸೇಬು) ಎಂದು ಕರೆಯಲಾಗಿತ್ತು,
ಜಗತ್ತಿನಾದ್ಯಂತ ಟೊಮೆಟೊದ ಸುಮಾರು 10 ಸಾವಿರ ತಳಿಗಳಿವೆ ಎಂದು ಸಸ್ಯ ವಿಜ್ಞಾನಿಗಳು ಹೇಳುತ್ತಾರೆ.
ಅಮೆರಿಕಾದ ಫ್ಲೋರಿಡಾದಲ್ಲಿರುವ ವಾಲ್ಟನ್ ಡಿಸ್ನಿ ರೆಸಾರ್ಟ್ನಲ್ಲಿ ಈವರೆಗೂ ಪತ್ತೆಯಾದ ಟೊಮೆಟೊ ಗಿಡಗಳಲ್ಲಿ ಅತ್ಯಂತ ದೊಡ್ಡದು.
ಈ ಗಿಡ 56.73 ಚದರ ಮೀಟರ್ನಷ್ಟು ವ್ಯಾಪ್ತಿ ಹೊಂದಿದೆ. ಹಾಗೆಯೇ ಜಗತ್ತಿನ ಅತಿ ದೊಡ್ಡ ಟೊಮೆಟೊ 1986ರಲ್ಲಿ ಅಮೆರಿಕಾದ ಒಕ್ಲಹೊಮಾದಲ್ಲಿ ಪತ್ತೆಯಾಗಿತ್ತು. ಒಂದು ಟೊಮೆಟೊ3.5 ಕೆ.ಜಿ. ತೂಗುತ್ತಿತ್ತು. ಸ್ಪೇನ್ನಲ್ಲಿ ನಡೆಯುವ ಲಾ ಟೊಮಾಟಿನಾ ಎಂಬ ವಾರ್ಷಿಕ ಹಬ್ಬದಲ್ಲಿ ಸುಮಾರು 1.5ಲಕ್ಷ ಟೊಮೆಟೊವನ್ನು ಹೋಳಿ ಹಬ್ಬದ ಬಣ್ಣದ ರೀತಿಯಲ್ಲಿ ಜನರು ಪರಸ್ಪರ ಎರಚಿಕೊಂಡು ಸಂಭ್ರಮಿಸುತ್ತಾರೆ. ಈ ವರ್ಷ ಆಗಸ್ಟ್ 30ರಂದು ಈ ಹಬ್ಬಕ್ಕೆ ದಿನಾಂಕ ನಿಗದಿಯಾಗಿದೆ.
ಹೀಗೆ ಟೊಮ್ಯಾಟೊ ಪುರಾಣ ಹೇಳುತ್ತಾ ಹೊರಟರೆ ಮುಗಿಯುವುದಿಲ್ಲ. ಏರಿರುವ ಕೆಂಪಣ್ಣಿನ ದರ ಇಳಿಯಲಿ ರೈತರು ಮತ್ತು ಗ್ರಾಹಕರ ಮೊಗದಲ್ಲಿ  ಆದರ್ಶ ದರದಿಂದ ಮಂದಹಾಸ ಮೂಡಲಿ ಕೆಂಪಾದ ಹಣ್ಣಿನ ಪರಿಣಾಮವಾಗಿ ಮನಸ್ತಾಪವಾದ ಮನಗಳು ಒಂದುಗೂಡಲಿ ಎಂಬುದೇ ನಮ್ಮ ಆಶಯ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529

07 ಜುಲೈ 2023

ಕೆಂಬಳಲಿನಲ್ಲಿ ಅರಳಿದ ಸುಮ


 


ಕೆಂಬಳಲಿನಲ್ಲಿ ಅರಳಿದ ಸುಮ...


ಭಾನುವಾರ ಹಿಂದೂ ಪತ್ರಿಕೆ ಓದುವಾಗ ಒಬ್ಬ ವಿದ್ಯಾರ್ಥಿ ಹತ್ತತರ ನಾಲ್ಕು ಕೋಟಿ ಫೆಲೋಶಿಪ್ ಪಡೆದು ಅಮೆರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಮಾಡಲು ಆಯ್ಕೆಯಾಗಿರುವುದು ಕೇಳಿ ಬಹಳ ಸಂತಸವಾಗಿ ಲೇಖನ ಓದಿದಾಗ ಆ ಹುಡುಗ ಕೆಂಬಳಲು ಗ್ರಾಮದವನು ಎಂದು ಗೊತ್ತಾಗಿ ನನ್ನ ಸಹೋದ್ಯೋಗಿಗಳಾದ ಕೋಟೆ ಕುಮಾರ್ ರವರು  ಅದೇ ಗ್ರಾಮದವರೆಂದು ನೆನಪಾಗಿ ಅವರಿಗೆ ಕರೆ ಮಾಡಿ ವಿಚಾರಿಸಿದಾಗ ಯಶವಂತ್ ಮಹೇಶ್ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದರು.ಜೊತೆಗೆ ನಮ್ಮ ಊರು ಮತ್ತು ನಾಡಿಗೆ ಕೀರ್ತಿ ತಂದ ಯುವಕನ ಸಾಧನೆಗೆ ಅವರು  ಹೆಮ್ಮೆ ಪಟ್ಟರು.


ಕರ್ನಾಟಕದ ಈ  ವಿದ್ಯಾರ್ಥಿಯ ಸಾಧನೆಯನ್ನು ದೇಶವೇ ಕೊಂಡಾಡುತ್ತಿದೆ. ತುಮಕೂರಿನ ಯಶವಂತ್ ಮಹೇಶ್ ಇದೀಗ ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಜೈವಿಕ ಇಂಜಿನಿಯರಿಂಗ್‌ನಲ್ಲಿ ಡಾಕ್ಟರೇಟ್ ಅಧ್ಯಯನಕ್ಕಾಗಿ 3.8 ಕೋಟಿ ರೂಪಾಯಿ ಫೆಲೋಶಿಪ್ ಪಡೆದಿದ್ದಾರೆ.  ಸದ್ಯ ಬೆಂಗಳೂರಿನಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಸಂಶೋಧನಾ ಸಹಾಯಕರಾಗಿರುವ ಮಹೇಶ್ ಯಶವಂತ್, ತುಮಕೂರಿನ ಸಿದ್ದಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (SIT) ಜೈವಿಕ ತಂತ್ರಜ್ಞಾನದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ 

ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಅಮೆರಿತ ಪ್ರತಿಷ್ಠಿತ ಯುನಿವರ್ಸಿಟಿಗಳಲ್ಲಿ ಒಂದು. ಇದು ಅಮೆರಿಕದ ಅತ್ಯಂತ ಹಳೆಯ ಸಂಸ್ಥೆಯಾಗಿದೆ.  ಇದೇ ವಿಶ್ವವಿದ್ಯಾಲಯದಲ್ಲಿ ಕೋವಿಡ್ ವೈರಸ್ ವಿರುದ್ದ ಸಮರ್ಥವಾಗಿ ಹೋರಾಡಬಲ್ಲ MRNA ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿತ್ತು. ಇದೀಗ ಇದೇ ವಿಶ್ವವಿದ್ಯಾಲದಲ್ಲಿ ಡಾಕ್ಟರೇಟ್ ಅಧ್ಯಯನಕ್ಕೆ ಯಶವಂತ್ ಮಹೇಶ್ 3.8 ಕೋಟಿ ರೂಪಾಯಿ ಫೆಲೋಶಿಪ್ ಪಡೆದಿದ್ದಾರೆ. ಕ್ಯಾನ್ಸರ್ ಸಿಸ್ಟಮ್ಸ್ ಬಯಾಲಜಿ ಲ್ಯಾಬೊರೇಟರಿನಲ್ಲಿ ಸಂಶೋಧನೆ ಮಾಡುತ್ತಿರುವ ಯಶವಂತ್ ಮಹೇಶ್, ಇದೀಗ ಈ ಅವಕಾಶಕ್ಕೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. "ಜೈವಿಕ ಎಂಜಿನಿಯರಿಂಗ್‌ನಲ್ಲಿ ಪಿಹೆಚ್‌ಡಿ ಮಾಡುತ್ತಿದ್ದೇನೆ. ಈ ಕೋರ್ಸ್ 5 ವರ್ಷವಿದೆ. ಇದೀಗ ನೇರವಾಗಿ ನಾನು ಪಿಹೆಚ್‌ಡಿಗೆ ಆಯ್ಕೆಯಾಗಿದ್ದೇನೆ. ಅದರಲ್ಲೂ ಸಂಪೂರ್ಣ ಫೆಲೋಶಿಪ್ ಲಭ್ಯವಾಗಿದೆ "ಎಂದಿದ್ದಾರೆ. 


ಯಶವಂತ್ ಮಹೇಶ್ ರೈತ ಕುಟುಂಬದಿಂದ ಬಂದ ಪ್ರತಿಭಾನ್ವಿತ ವಿದ್ಯಾರ್ಥಿ. ತುಮಕೂರಿನ ಸಿದ್ದಗಂಗಾದಲ್ಲಿ ವಿಧ್ಯಾಭ್ಯಾಸ ಮುಗಿಸಿದ ಯಶವಂತ್ ಮಹೇಶ್ ಹಲವು ಪ್ರತಿಷ್ಠಿತ ವಿಶ್ವವಿದ್ಯಾಲಯದ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.  ತುಮಕೂರು ಜಿಲ್ಲೆಯ ಹೆಬ್ಬೂರು ಹೋಬಳಿಯ ಕೆಂಬಾಳು ಗ್ರಾಮದ ನಿವಾಸಿಯಾಗಿರುವ ಯಶವಂತ್ ಮಹೇಶ್ ಅಧ್ಯಯನದಲ್ಲಿ ಹಲವು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇನಿಶಿಯೇಟಿವ್ ಫಾರ್ ರಿಸರ್ಚ್ ಅಂಡ್ ಇನ್ನೋವೇಶನ್ ಇನ್ ಸೈನ್ಸ್ (IRIS), ನ್ಯಾಷನಲ್ ಸೈನ್ಸ್ ಫೇರ್ 2012ರ ಯೋಜನೆಯಲಲ್ಲಿ ಯಶವಂತ್ ಮಹೇಶ್ ಚಿನ್ನದ ಪದಕ ಪಡೆದಿದ್ದಾರೆ. ಅಮೆರಿಕದ  ಫೀನಿಕ್ಸ್‌ನಲ್ಲಿ ವಾರ್ಷಿಕ ಇಂಟೆಲ್ ಇಂಟರ್‌ನ್ಯಾಶನಲ್ ಸೈನ್ಸ್ ಆಫ್ ಎಂಜಿನಿಯರಿಂಗ್ ಫೇರ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಕಿರಿಯ ವಿದ್ಯಾರ್ಥಿ ಅನ್ನೋ ಹೆಗ್ಗಳಿಕೆಗೂ ಯಶವಂತ್ ಮಹೇಶ್ ಪಾತ್ರರಾಗಿದ್ದರು. ಕರ್ನಾಟಕದ ಸರ್ಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ನೀಡುವ ಜ್ಯೂನಿಯರ್ ವಿಜ್ಞಾನಿ ಪ್ರಶಸ್ತಿಯನ್ನು ಯಶವಂತ್ ಮಹೇಶ್ ಪಡೆದುಕೊಂಡಿದ್ದಾರೆ. ಇದೀಗ ಮಹೇಶ್ ಸಾಧನೆಯನ್ನು ಪೋಷಕರು, ಕುಟುಂಬಸ್ಥರು ಕೊಂಡಿದ್ದಾರೆ. ಅಮೆರಿಕದಲ್ಲಿ ಡಾಕ್ಟರೇಟ್ ಅಧ್ಯಯನದ ಖರ್ಚು ವೆಚ್ಚ ಸಂಪೂರ್ಣವಾಗಿ ಇದೇ ಫೆಲೋಶಿಪ್‌ನಿಂದ ಸುಲಭವಾಗಲಿದೆ.


ಛಲಬಿಡದೆ ತಮ್ಮ ಗುರಿಯೆಡೆಗೆ ಸಾಗಿದರೆ ಸಾಧನೆ ಅಸಾಧ್ಯವಲ್ಲ ಎಂಬುದನ್ನು ಯಶವಂತ್ ಮಹೇಶ್ ತೋರಿಸಿಕೊಟ್ಟಿದ್ದಾರೆ.ಇಂದಿನ ಯುವಕರಿಗೆ ಮತ್ತು ಶಾಲಾ ಮಕ್ಕಳಿಗೆ ಯಶವಂತ್ ಮಾದರಿಯಾಗಲಿ ಎಂಬುದೇ ನಮ್ಮ ಆಶಯ..


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು.


25 ಜೂನ್ 2023

ಹಾತೊರೆದೆ ಸಾಂಗತ್ಯಕೆ...

 




ಹಾತೊರೆದೆನು ಅವಳ ಸಾಂಗತ್ಯಕೆ
ಬಳಿಸಾರುವಳೇ ನನ್ನ ಅಭಿಸಾರಿಕೆ 
ರೂಪರಾಶಿಯಲಿ ಇವಳೇ  ಮೇನಕೆ 
ದಿನವೂ ಅವಳದೇ ಕನವರಿಕೆ 


24 ಜೂನ್ 2023

ಚಿಂತೆ...ಹಾಯ್ಕುಗಳು..

 



ಹಾಯ್ಕುಗಳು 



ಚಿಂತೆಯೇತಕೆ 

ಚಿನ್ಮಯನಿರುವನು

ಅವನ ನಂಬು..



ಬೇರೇನೂ ಇಲ್ಲ 

ಒಂದೇ ಸೊನ್ನೆ ವ್ಯತ್ಯಾಸ 

ಚಿಂತೆಯೇ ಚಿತೆ



ಚಿಂತೆಯ ಬಿಡು

ಚಿಂತನೆಯ ಮಾಡು

ಚಿರ ಸಂತಸ 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ 

ತುಮಕೂರು