18 ನವೆಂಬರ್ 2022

ಕಾಂತಾರ ಮತ್ತು ಕಾಡೊಂದಿತ್ತಲ್ಲ...

 

ಕಾಂತಾರ ಮತ್ತು ಕಾಡೊಂದಿತ್ತಲ್ಲ...

ಪ್ರಾದೇಶಿಕ ಸಿನಿಮಾ ಎಂದುಕೊಂಡದ್ದು ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಾ ತನ್ನ ನಾಗಾಲೋಟ ಮುಂದುವರೆಸಿರುವ ಚಿತ್ರ ಕಾಂತಾರ... ಚಿತ್ರದಲ್ಲಿ ಅಂತಾದ್ದೇನಿದೆ? ಎಂದು ಅಚ್ಚರಿ ಪಟ್ಟ ಜನಕ್ಕೆ ಚಿತ್ರ  ನೋಡಿದಾಗ ಇದು ನಮ್ಮ ಜೀವನಕ್ಕೆ ಸಂಬಂಧಿಸಿದ ಚಿತ್ರ. ಕಾಡಿನ ಜೊತೆಗಿನ ಸಹ ಜೀವನಕ್ಕೆ ಸಂಬಂಧಿಸಿದ ಚಿತ್ರ ಎಂಬುದು ಅರ್ಥವಾಗಿತ್ತು. ಅದಕ್ಕೆ ಜನ ಮತ್ತೆ ಮತ್ತೆ ಆ ಸಿನಿಮಾ ನೋಡುತ್ತಿದ್ದಾರೆ. ಸಾಹಿತ್ಯ ಮತ್ತು ಸಿನಿಮಾಗಳು ನಮ್ಮ ಜೀವನದ ಪ್ರತಿಬಿಂಬಗಳು.ಸಾಹಿತ್ಯ ಓದುವಾಗ ಮತ್ತು ಸಿನಿಮಾ ನೋಡುವಾಗ ನಮ್ಮ ಜೀವನದಲ್ಲೂ ಅಂತಹ ಘಟನೆಗಳು ಸಂಭವಿಸಿದ್ದರೆ ಅಥವಾ ಅನುಭವಕ್ಕೆ ಬಂದಿದ್ದರೆ ನಮಗೆ ಆ ಕೃತಿ ಹೆಚ್ಚು ಆಪ್ತವಾಗುತ್ತದೆ...
ಮೊನ್ನೆ ಲೇಖಕರಾದ  ಶಶಿಧರ ವಿಶ್ವಾಮಿತ್ರ ರವರ "ಕಾಡೊಂದಿತ್ತಲ್ಲ" ಎಂಬ ಕೃತಿಯನ್ನು ಓದಿದೆ. ಕಾಂತಾರ ಸಿನಿಮಾ ನೋಡಿದ ಕೆಲವೇ ದಿನಗಳಲ್ಲಿ ಓದಿದ್ದರಿಂದ ಈ ಕೃತಿಯು ಹೆಚ್ಚು ಇಷ್ಟವಾಯಿತು.ಈ ಪುಸ್ತಕದಲ್ಲಿ ಉಲ್ಲೇಖಿಸಿರುವ  ಕಾಡಿನ ಮರಗಳು ,ಪ್ರಾಣಿಗಳು, ಸಸ್ಯ ಸಂಕುಲ ಮುಂತಾದ ಹೆಸರುಗಳನ್ನು ಬಹುತೇಕ ನಗರದಲ್ಲಿ ಹುಟ್ಟಿ ಬೆಳೆದ ಮಕ್ಕಳು ಕೇಳೆ ಇಲ್ಲವೇನೋ ಎಂಬುದು ನನ್ನ ಅನಿಸಿಕೆ. ಕಾಡು ಮತ್ತು ನಾಡಿನ ಸಂಬಂಧ, ಕಾಡು ಮತ್ತು ವನ್ಯಜೀವಿಗಳ ಸಹಜೀವನ ಹಿಂದಿಗಿಂತ ಇಂದು ಹೆಚ್ಚು ಪ್ರಸ್ತುತ.

ಲಾರೆನ್ಸ್ ಫಾರೆಸ್ಟ್ ಎಂಬ ಶಾರ್ಪ್ ಶೂಟರ್ ಆಫ್ರಿಕಾದ ಮಳೆ ಕಾಡಿನಲ್ಲಿ  ಸಾವಿರಾರು ಆನೆಗಳನ್ನು ತನ್ನ ಕೋವಿಯಿಂದ ಕೊಂದ ಕಟುಕ . ಭಾರತದಲ್ಲಿ ಬ್ರಿಟಿಷರ ಪರವಾಗಿ ಅರಣ್ಯ ಪ್ರದೇಶದಲ್ಲಿ ಅಧ್ಯಯನ ಮಾಡುವಾಗ ಕರಡಿಯಿಂದ ದಾಳಿಗೊಳಗಾಗಿ ಸಾವು ಬದುಕಿನ ಮಧ್ಯ ಹೋರಾಟ ಮಾಡುವಾಗ ಸಿದ್ದನ ರೂಪದ ದೈವಮಾನವ ಬಂದು ಅವನ ರಕ್ತಸ್ರಾವ ನಿಲ್ಲಿಸಿ ಜೀವದಾನ ಮಾಡಿದ .ಅಂದಿನಿಂದ ಲಾರೆನ್ಸ್ ಎಂದೂ ಬೇಟೆಯಾಡುವುದಿರಲಿ ಒಂದು ಇರುವೆಯನ್ನು ಸಹ ನೋಯಿಸದ ಮನಸ್ಸಿನ ವ್ಯಕ್ತಿಯಾಗಿ ಬದಲಾಗಿ ತನ್ನ ಜೀವನವನ್ನು ವನ್ಯ ಪ್ರಾಣಿಗಳ ಸಂರಕ್ಷಣೆಗೆ ಮುಡಿಪಿಟ್ಟರು.
ಈ ಪುಸ್ತಕದ ಈ ಎರಡೂ ಪಾತ್ರಗಳು ನಮಗೆ ಕಾಂತಾರವನ್ನು ನೆನಪು ಮಾಡುತ್ತವೆ. ಕಟುಕ ಲಾರೆನ್ಸ್ ಬದಲಾದ ರೀತಿಯನ್ನು ನೋಡಿ ಕಾಂತರಾದ ಶಿವ ನೆನಪಾಗುತ್ತಾನೆ. ಕಾಡನ್ನು ಮತ್ತು ಜೀವಿಗಳನ್ನು  ಕಾಯುವ ಶಕ್ತಿಯೊಂದಿದೆ ಎಂಬುದನ್ನು ಪಂಜುರ್ಲಿ ಕಾಂತಾರದಲ್ಲಿ ಪ್ರತಿನಿಧಿಸಿದರೆ ಪ್ರಸ್ತುತ ಕಾಡೊಂದಿತ್ತಲ್ಲ ಕೃತಿಯಲ್ಲಿ ಆ ಪಾತ್ರವನ್ನು ಸಿದ್ದ ಮತ್ತು ಅವನ ಐದು ಜನ ಸಿದ್ದಪುರುಷರನ್ನು ಕಾಣಬಹುದು.

ಸಾಮಾನ್ಯ ಅರಣ್ಯ ದ ಗಾರ್ಡ್ ಆಗಿದ್ದ ಕೃಷ್ಣಪ್ಪ ಲಾರೆನ್ಸ್ ಮತ್ತು ಬರ್ಕ್ ರವರಿಂದ ಪ್ರಭಾವಿತರಾಗಿ ರಾಜ್ಯದ ಅರಣ್ಯ ಇಲಾಖೆಯ ಉನ್ನತವಾದ ಹುದ್ದೆಯಾದ ಮಹಾ ಅರಣ್ಯ ಪಾಲಕ ಹುದ್ದೆಗೆ ಏರಿ ಕಾಡ ರಕ್ಷಣೆಗೆ ಪಣ ತೊಟ್ಟ ರೀತಿಯನ್ನು ನೋಡಿದಾಗ ಕಾಂತಾರದ ಕಿಶೋರ್ ಪಾತ್ರ ನೆನಪಾಗುತ್ತದೆ.

“ಉತ್ತರ ಪ್ರದೇಶದ ಜಿಮ್ ಕಾರ್ಬೆಟ್ಟಿನ ಹುಲಿಗಳ ಗತಿ ಅಧೋಗತಿಯಾಗಿದೆ. ಇದಕ್ಕೆ ಕಾರಣಗಳಲ್ಲಿ ಮುಖ್ಯವಾದವು ಯಾವುವು ಎಂದರೆ, ಉತ್ತರ ಪ್ರದೇಶದ ಆಡಳಿತ ಸರಿಯಿಲ್ಲ. ಸರ್ಕಾರವೂ ಗಟ್ಟಿಯಿಲ್ಲ. ಜನರ ದುರಾಗ್ರಹ ಹೆಚ್ಚು ಎಂದೆಲ್ಲ ಎಲ್ಲರಿಗೂ ಗೊತ್ತಿರುವುದನ್ನೇ ಪಟ್ಟಿಮಾಡಿ ಹೇಳಬಹುದು. ಆದರೆ ಈ ಮಹನೀಯರ ಕರ್ನಾಟಕ ರಾಜ್ಯದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿದೆ. ಸ್ವಲ್ಪ ವರ್ಷಗಳ ಕೆಳಗೆ ಅಲ್ಲಿಯ ಬಂಡೀಪುರ ನಾಗರಹೊಳೆ ಮುತ್ತತ್ತಿ ಮುಂತಾದ ರಕ್ಷಿತಾರಣ್ಯಗಳ ಸುತ್ತ ಇರುವ ಗಿಡಜನ ಬಂಡೆದ್ದು ಕಾಡಿಗೇ ಕಿಚ್ಚು ಕೊಟ್ಟ ಮೇಲೆ 33 ಸಾವಿರ ಎಕರೆ ಕಾಡು ದಹಿಸಿಹೋಯಿತಂತಲ್ಲ, ಯಾಕೆ? ಈ ವಿಷಯಕ್ಕೆ ವಿಸ್ತಾರ ತನಿಖೆ ನಡೆದಿದೆಯೆ? ಇಲ್ಲಿ ಪ್ರಸ್ತಾಪಕ್ಕೆ ಬರುತ್ತದೆಯೇ? ಉಹು. ನೀವದನ್ನು ಇಂಥಲ್ಲಿಗೆ ಮಂಡಿಸುವ ವಿಷಯವೆಂದು ಸೇರಿಸಿರೋಲ್ಲ, ತನಿಖೆ ನಡೆಸಿದ ಮೇಲೆ ಫೈಲುಗಳನ್ನು ಗೋಪ್ಯವಾಗಿ ಮುಚ್ಚಿಟ್ಟಿರುತ್ತೀರ. ಯಾಕೆ ಗೊತ್ತೆ? ನಾನು ಹೇಳುತೀನಿ ಕೇಳಿ, ಅಭಯಾರಣ್ಯವೆಂಬೋ ಹೆಸರಲ್ಲಿ ಸ್ವಜನ ವಿರೋಧಿ, ಧನವಂತಪರ  ನಿಮ್ಮ ಧೋರಣೆ ಜನರನ್ನ ರೊಚ್ಚಿಗೇಳಿಸುತ್ತ,  ಪಂಚತಾರ ಹೋಟೆಲು? ವಿಹಾರ ಮಂದಿರ? ಇಂಥವಕ್ಕೆ ಪರವಾನಗಿ ಕೊಡುವ ಧೈರ್ಯವನ್ನ ಯಾಕೆ ಮಾಡಿದಿರಿ?... ಇದು ಅರಣ್ಯಪಾಲಕರಾದ ನಿಮಗೆ ಶೋಭೆ ತರುತ್ತಾ" ಎನ್ನುವ ಮಾತುಗಳು ಈ ಕೃತಿಯಲ್ಲಿ ಪರಿಸರ ಹೋರಾಟಗಾರ್ತಿ ನರ್ಮದಾ ವಿಪುಲೆ ರವರ  ಬಾಯಲ್ಲಿ ಲೇಖಕರು ವ್ಯಕ್ತ ಪಡಿಸಿದ  ಅಭಿಪ್ರಾಯಗಳು.. ಪರಿಸರ ಕಾಳಜಿಯ ಈ   ಮಾತುಗಳಲ್ಲಿ ರಾಜಕಾರಣಿಗಳು, ಉದ್ಯಮಿಗಳನ್ನು  ಅಪಹಾಸ್ಯ ಮಾಡುವ ರೀತಿಯನ್ನು ನೋಡಿದಾಗ ಸಮಾಜದಲ್ಲಿ ವನ,ಮತ್ತು ವನ್ಯಜೀವಿಗಳ ಉಳಿವಿಗೆ ಮಾಡುವ ಹೋರಾಟಗಳು ಸಂಪೂರ್ಣವಾಗಿ ಯಶಸ್ವಿಯಾಗದಿರಲು ಯಾರು ಕಾರಣ ಎಂಬ ಅರಿವಾಗುತ್ತದೆ.

ಈ ಕೃತಿಯಲ್ಲಿ ನನ್ನ ಗಮನ ಸೆಳೆದ ಮತ್ತೊಂದು ಅಂಶ
ಮೆಡೋಸ್ ಎಂಬ  ರಾಜ್ಯದ ಒಂದು ಸಣ್ಣ ಹಳ್ಳಿಯ ಒಬ್ಬ ಮಹಿಳೆ ಒಂದು ಸಾವಿರ ಎಕರೆಯಲ್ಲಿ ಸ್ವಯಿಚ್ಛೆಯಿಂದ ಅರಣ್ಯ ಬೆಳೆಸಿ, ತಾನು ಸಾಯುವ ತನಕ ಕಾಪಿಟ್ಟು ತಾನಿದ್ದ ಮನೆಯ ಸಹಿತ ಪುರಸಭೆಗೆ ದಾನ ಮಾಡಿದ ಪ್ರಸಂಗ .ಇದನ್ನು ಓದುವಾಗ ನಮ್ಮ ಸಾಲು ಮರದ ತಿಮ್ಮಕ್ಕ ಕಣ್ಣ ಮುಂದೆ ಬಂದರು. ಇಂತಹ ನಿಸ್ವಾರ್ಥ ಜೀವಿಗಳು ನಮ್ಮ ನಡುವೆ ಇರುವುದೇ ನಮಗೆ ಹೆಮ್ಮೆ.

ಹೆಸರು ಹೇಳುವಂತೆ 'ಕಾಡೊಂದಿತ್ತಲ್ಲ' ಎನ್ನುವುದು ನೆಲ, ನಾಡು, ಭೂಮಿ ಎಂಬ ಮೂಲ ಪರಿಕಲ್ಪನೆಗಳ ಸುತ್ತ  ಇರುವ  ಗುಡ್ಡ, ಬೆಟ್ಟ, ಗುಟ್ಟೆ, ಕೊರಕಲು ಎಂಬುದರ ಮೇಲೆ ಬೀಳುವ ಬಿಸಿಲು, ಆಡುವ ಗಾಳಿ, ಹನಿಯುವ ಮಳೆಯ, ನೆಲದಡಿಯ ಸಾರವನ್ನುಂಡು, ಕಂಗೊಳಿಸುವ ಗೊಂಡಾರಣ್ಯ, ದಟ್ಟಾರಣ್ಯ, ಮಲೆನಾಡು, ಮರಕಾಡು, ಗಿಡಕಾಡು, ಕುರುಚಲು ಕಾಡು, ಹುಲ್ಲುಗಾವಲು, ಗೋಮಾಳ ಎಂಬಲ್ಲಿ ಬಗೆಬಗೆಯ ರೂಪ ಆಕಾರ ಬಣ್ಣಗಳಿಂದ ಮೈ ತಳೆದು ಬಂದು ಎಂದಿನದೋ ಚರಿತಾನುಕಥನವನ್ನು ಹಾಡಿನಲ್ಲಿ ಕುಣಿತದಲ್ಲಿ ಗಾಥೆಯಾಗಿಸಿದ ಪರಿ ಬಹಳ ಸುಂದರ .ಇದರ ಜೊತೆಗೆ
ಅಂದಿನ ಪರಿಸರದಲ್ಲಿ ಇದ್ದೂ ಇಲ್ಲದಂತಿರುವ ಕಾಡಾಡಿ ಸಿದ್ಧರು ಅಲೆದಾಡಿ ಬೈರಾಗಿಗಳು, ಕಾಡಾಡಿ ಗಿಡಜನರು, ನಾಡಾಡಿ ಹಳ್ಳಿಯ ಮುಗ್ಧರು, ಊರಾಡಿಗಳು ಇದ್ದರು.

ಹೆಚ್ಚುತ್ತಿರುವ ಜನಸಂಖ್ಯೆ,ಮಿತಿಮೀರಿದ  ಯಂತ್ರಗಳ ಸದ್ದಿನಲ್ಲಿ   ಏನಾಗುತ್ತಿದೆ. ಎಂತಾಗುತ್ತಿದೆ ಎಂಬುದೇ ತಿಳಿಯದಾಗಿದೆ.  ಈ ಕೃತಿಯಲ್ಲಿ ಕಾಡಿನ ತೋಳ, ಊರಾಡಿ ನಾಯಿ, ಅಲೆದಾಡಿ ಬೈರಾಗಿ ಮೈತಳೆದು ನೆರೆದು ಹಾಡುತ್ತವೆ. ಆಕಾಶಕ್ಕೆ ಮೂತಿ, ಮುಖವೆತ್ತಿ ಹತಾಶೆಯಿಂದ ರೋದಿಸುತ್ತವೆ.
ಈ ಅಳಲು ಆಳುವವರ   ದಿಕ್ಕೆಡಿಸುತ್ತ ಇರುವುದಿಷ್ಟೇ, ಇಷ್ಟೊರಳಗೆ ಹದವಾಗಿ ಪಾಕಗೊಂಡು ಬೆರೆತು ಬಾಳಿದರೆ ಉಳಿವುಂಟು ಎನ್ನುವ ಎಚ್ಚರ ಹೇಳುತ್ತವೆ.
ಓದುಗರನ್ನು ತಟ್ಟಿ ಎಬ್ಬಿಸುವ ಶಕ್ತಿ 'ಕಾಡೊಂದಿತ್ತಲ್ಲ' ಹಾಡ್ಕಥನಕ್ಕಿದೆ. ಇನ್ನೇಕೆ ತಡ ಕಾಂತಾರ ನೋಡಿದಂತೆ ಕಾಡೊಂದಿತ್ತಲ್ಲ ಕೃತಿ ಓದಿಬಿಡಿ ಅದು ಕಾಡದಿದ್ದರೆ ಕೇಳಿ....

ಪುಸ್ತಕ : ಕಾಡೊಂದಿತ್ತಲ್ಲ
ಲೇಖಕರು: ಶಶಿಧರ ವಿಶ್ವಾಮಿತ್ರ.
ಬೆಲೆ:130
ಪ್ರಕಾಶನ:  ಕಮಲಾ ಎಂಟರ್ ಪ್ರೈಸಸ್ ಬೆಂಗಳೂರು

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.

08 ನವೆಂಬರ್ 2022

ಪಕ್ಷಿಲೋಕ


 

ಪಕ್ಷಿಲೋಕ ...
*ಇಂದಿನ ಸಿಂಹ ಧ್ವನಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*

ಶನಿವಾರದ ಶಾಲಾ ಕರ್ತವ್ಯ ಮುಗಿಸಿಕೊಂಡು ಮನೆಗೆ ಹೊರಡುವಾಗ ಆತ್ಮೀಯರು ಮತ್ತು ಕಲಾವಿದರಾದ ಕೋಟೆ ಕುಮಾರ್ ರವರು ಸಿಹಿಜೀವಿ ನಿಮಗೊಂದು ಹೊಸ ಲೋಕ ತೋರಿಸುವೆ ಬನ್ನಿ ಎಂದರು. ಕುತೂಹಲದಿಂದ ಅವರನ್ನು ಹಿಂಬಾಲಿಸಿದೆ .ಬೈಕ್ ತುಮಕೂರಿನ ರವೀಂದ್ರ ಕಲಾನಿಕೇತನ ದ ಮುಂದೆ ನಿಂತಿತು.ಯಾವುದೋ ಕಲಾಕೃತಿಗಳನ್ನು ತೋರಿಸುವರು ಎಂಬ ನನ್ನ ಊಹೆ ಸುಳ್ಳಾಯಿತು. ಒಳಗೆ ಕಾಲಿಟ್ಟಾಗ ಅನಾವರಣಗೊಂಡಿದ್ದು "ಪಕ್ಷಿ ಲೋಕ "




ಚಿತ್ಕಲಾ ಫೌಂಡೇಷನ್  ಹಾಗೂ ರವೀಂದ್ರ ಕಲಾನಿಕೇತನ ಚಿತ್ರಕಲಾ
ಮಹಾವಿದ್ಯಾಲಯ, ಆರ್.ಟಿ.ನಗರ, ತುಮಕೂರು. ಇವರ ಸಹಯೋಗದಲ್ಲಿ
ಆಯೋಜಿಸಿರುವ ಛಾಯಾಚಿತ್ರ ಪ್ರದರ್ಶನ ನಮ್ಮ ಮನಸೆಳೆಯಿತು.
'ಪರಿಸರದ ಉಳಿವಿಗಾಗಿ ಪಕ್ಷಿಗಳ ಸಂರಕ್ಷಣೆ ಅತ್ಯಗತ್ಯ "ಎಂಬ ಮಹೋನ್ನತ ಗುರಿಯನ್ನು ಹೊಂದಿರುವ ಈ ಪ್ರದರ್ಶನ ಪರಿಸರದ ಕಾಳಜಿ ಮತ್ತು ಪಕ್ಷಿಗಳ ಸೌಂದರ್ಯ ಮತ್ತು ಅವುಗಳ ‌ಜೀವನಕ್ರಮದ ಬಗ್ಗೆ ನಮಗೆ ಉತ್ತಮ ಮಾಹಿತಿ ನೀಡುತ್ತದೆ.





ಹೆಮ್ಮಿಗೆ ಮೋಹನ್ ಹಾಗೂ ವಿ .ಎಸ್. ದೇಸಾಯಿ ರವರು ಜಂಟಿಯಾಗಿ ಈ  ಪಕ್ಷಿ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಿದ್ದಾರೆ.

ಹೆಮ್ಮಿಗೆ ಮೋಹನ್ ರವರು
ಹಾಸನ ಜಿಲ್ಲೆಯ ಮಲೆನಾಡಿನ ಊರು ಹೆಮ್ಮಿಗೆಯವರು.ಪಶ್ಚಿಮ ಘಟ್ಟದ ಸೆರಗಿನಂತಿರುವ ಹಮ್ಮಿಗೆಯ ಪರಿಸರ ಪಕೃತಿ ಸೌಂದರ್ಯ, ವೈವಿಧ್ಯತೆಯ  ಮರಗಳು , ಪ್ರಾಣಿ, ಪಕ್ಷಿ, ಕೀಟಗಳನ್ನು ಕ್ಯಾಮರಾದಲ್ಲಿ ಮೋಹನ್‌ ಅವರು ಹಿಡಿದಿಟ್ಟಿರುವುದೇ ವಿಶೇಷ. ಹಾಸನ ಜಿಲ್ಲಾ ಸಹಕಾರ ಬ್ಯಾಂಕ್, ಮಲೆನಾಡು ಅಭಿವೃದ್ಧಿ ಪಾಲಕರಾಗಿ  ಹಾಗೂ ರೆಡ್‌ ಕ್ರಾಸ್ ಸಂಸ್ಥೆಯ ಅದ್ಯಕ್ಷರಾಗಿ ಗೌರವ ವನ್ಯಜೀವಿ ಪರಿಪಾಲಕರಾಗಿ ಅತ್ಯುತ್ತಮ ಕೆಲಸ ನಿರ್ವಹಿಸುತ್ತಾ ಬಂದಿದ್ದಾರೆ.
ಅವರೊಂದಿಗೆ ಛಾಯಾಚಿತ್ರ ಪ್ರದರ್ಶನದಲ್ಲಿ ಗಮನ ಸೆಳೆಯುವ ಚಿತ್ರಗಳ ಕ್ಲಿಕ್ಕಿಸಿದವರು  ಬಿ ಎಸ್ ದೇಸಾಯಿ ರವರು.
ವಿಜಯಪುರ ಜಿಲ್ಲೆಯ ತಾಳಿಕೋಟೆ ಮೂಲದವರಾದ ಇವರು ಹಾಸನ ಜಿಲ್ಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ  ಚಿತ್ರಕಲಾವಿದರಾಗಿ, ಕಲೆ ಮತ್ತು ಸಾಂಸ್ಕೃತಿಕ ಸಂಘಟನಾಕಾರರಾಗಿ  ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಗುರುವಾಗಿ  ಸಮಾಜದಲ್ಲಿ ಸುಮಧುರ ಬಾಂಧವ್ಯದ ಬೆಸುಗೆಯಾಗಿ ಕ್ಯಾಮರಾದ ಮುಖಾಂತರ ಲಕ್ಷಾಂತರ ಪಕ್ಷಿಗಳ ಛಾಯಾಚಿತ್ರಗಳನ್ನು ತೆಗೆದಿದ್ದಾರೆ. ಮತ್ತು ಪ್ರದರ್ಶಿಸಿದ್ದಾರೆ.
ಈ ಇಬ್ಬರೂ ಕಲಾಕಾರರ ಕಲಾಕೃತಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬ.




ತುಮಕೂರು ಡಯಟ್ ನ ವೃತ್ತಿ ಶಿಕ್ಷಣ
ಉಪನ್ಯಾಸಕರಾದ ಟಿ ಶ್ರೀನಿವಾಸ ಮೂರ್ತಿ ರವರು  ನಮ್ಮ ಜೊತೆಯಲ್ಲಿ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿ ಹೀಗೆ ಅಭಿಪ್ರಾಯಪಟ್ಟಿದ್ದಾರೆ
"ಶ್ರೀಯುತ ದೇಸಾಯಿ ರವರ ಈ ವಿಶೇಷ ಛಾಯಾಗ್ರಾಹಕ ಹವ್ಯಾಸ ನಿಜವಾಗಲೂ ಎಲ್ಲರನ್ನು ಬೆರೆಗು ಮಾಡುವಂತದ್ದು.
ನಿಜವಾದ ಛಾಯಾಗ್ರಾಹಕ ವೃತ್ತಿಯವರು, ಛಾಯಾಗ್ರಹಣದ ಬಗ್ಗೆ ಆಸಕ್ತಿ ಇರುವಂತಹವರು, ಕಲಾವಿದರು ಮತ್ತು ನೋಡುವಂತ ಕಲಾ ಆಸಕ್ತಿಯುಳ್ಳವರು ಎಲ್ಲರಿಗೂ  ಬೆರಗಾಗುವಂತಹ ಹಾಗೂ ವಿವಿಧ ಆಯಾಮಗಳಲ್ಲಿ ಅದರಲ್ಲೂ ವಿಶೇಷವಾಗಿ ಪಕ್ಷಿಗಳ ಛಾಯಾಚಿತ್ರಗಳನ್ನು ಅವರ ಕ್ಯಾಮರಾದಲ್ಲಿ ಸೆರೆ ಹಿಡಿದಿರುವುದು ಅವರ ವಿಶೇಷ ಪ್ರಕೃತಿಯ ಆಸಕ್ತಿ ಎಂದರೆ ತಪ್ಪಾಗಲಾರದು ಸ್ನೇಹಿತರೆ. ಶ್ರೀಯುತ ಸಿ ಜಿ ವೆಂಕಟೇಶ್ವರ  ಅವರ ಅಭಿಪ್ರಾಯದಂತೆ ಎಲ್ಲರನ್ನು ಪ್ರಕೃತಿಯಲ್ಲಿ ತೇಲಾಡುವಂತೆ ಮಾಡಿರುವುದು ಅವರ ಕ್ಯಾಮೆರಾ  ಕೈಚಳಕನ            ಘಮ್ಮತ್ತು. ನಾವೆಲ್ಲರೂ ಹಾಗೂ  ನಮ್ಮ ಸ್ನೇಹಿತರು ಹಾಗೂ ಕುಟುಂಬದವರೆಲ್ಲರೂ ಬಂದು ನೋಡಬಹುದಾದ ಸುಂದರ ಛಾಯಾಚಿತ್ರಗಳ ಪ್ರದರ್ಶನ ಇದಾಗಿದೆ... ಶ್ರೀಯುತ ದೇಸಾಯಿ ರವರಿಗೆ  ಶುಭವಾಗಲಿ  ಎಲ್ಲರಿಗೂ ಪ್ರದರ್ಶನದ ಬಗ್ಗೆ ಮಾಹಿತಿಯನ್ನು ನೀಡಿ ನೋಡಲು ವೀಡಿಯೋ ಮೂಲಕ ಆಹ್ವಾನ ನೀಡುವ  ಕಲಾವಿದರಾದ  ಶ್ರೀ ಕೋಟೆ ಕುಮಾರ್ ರವರ ಪ್ರಯತ್ನ ಶ್ಲಾಘನೀಯ " ಎಂದರು..

ಆತ್ಮೀಯರೆ  ನೀವು ಸಹ  ಪಕ್ಷಿ ಲೋಕದಲ್ಲಿ ವಿಹರಿಸುವ ಮನಸ್ಸಾದರೆ
2022ರ ನವೆಂಬರ್ 02ರಿಂದ ನವೆಂಬರ್ 10ರವರೆಗೆ
ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 05 ರವರೆಗೆ ಹೋಗಿ ವೀಕ್ಷಿಸಲು ಅವಕಾಶವಿದೆ. ಇ‌ನ್ನೇಕೆ ತಡ ಹೊರಡಿ ಪಕ್ಷಿ ಲೋಕದಲ್ಲಿ ಒಂದು ಸುತ್ತು ಹಾಕಿ ಬನ್ನಿ...

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.

07 ನವೆಂಬರ್ 2022

ನುಡಿತೋರಣ ನುಡಿ ಜಾತ್ರೆ....


 


ನುಡಿತೋರಣದ ನುಡಿ ಜಾತ್ರೆ. 


ಸಾಮಾಜಿಕ ಮಾಧ್ಯಮಗಳು ನಮ್ಮ ಯುವಪೀಳಿಗೆಯನ್ನು ಹಾಳು ಮಾಡಿವೆ .ನಮ್ಮ ಸಂಸ್ಕೃತಿ ಪರಂಪರೆಯ ನಾಶಕ್ಕೆ ಅವುಗಳೂ ಕಾರಣ ಎಂದು ಆಗಾಗ್ಗೆ ನಾವೆಲ್ಲರೂ ಮಾತನಾಡುತ್ತಾ ಸಮಾಜ  ಮತ್ತು ನಮ್ಮ ಪರಂಪರೆಯ ಬಗ್ಗೆ ಕಾಳಜಿ ವ್ಯಕ್ತಪಡಿಸುವ ಮಾತನಾಡುತ್ತೇವೆ ಈ ವಿಷಯದಲ್ಲಿ ಸತ್ಯ ಇದ್ದರೂ ಪೂರ್ಣವಾಗಿ ಸಾಮಾಜಿಕ ಮಾಧ್ಯಮಗಳಿಂದಲೇ  ಜನ ಹಾಳಾಗುತ್ತಿದ್ದಾರೆ ಸಂಸ್ಕೃತಿಯ ನಾಶವಾಗುತ್ತಿದೆ ಎಂದು ಒಪ್ಪಲಾಗದು. ಒಂದು ಚಾಕುವನ್ನು ಹಣ್ಣು ಕತ್ತರಿಸಲೂ ಬಳಸಬಹುದು ಕ್ರೂರ ಚಟುವಟಿಕೆಗಳಿಗೂ ಬಳಸಬಹುದು ಅದು ನಮ್ಮ ವಿವೇಚನೆ ಅವಲಂಬಿಸಿದೆ. 

ಸಾಮಾಜಿಕ ಮಾಧ್ಯಮ ಮನಸ್ಸು ಮಾಡಿದರೆ ನಮ್ಮ ನಾಡು ನುಡಿ ಸಂಪ್ರದಾಯ, ಸಂಗೀತ, ಸಾಹಿತ್ಯ, ಕಲೆ  ,ಅಧ್ಯಾತ್ಮ ಮುಂತಾದ ವಿಷಯಗಳನ್ನು ಚರ್ಚಿಸಿ ತನ್ಮೂಲಕ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಬಹುದು ಎಂದು ಹಲವಾರು ಸಾಮಾಜಿಕ ಮಾಧ್ಯಮಗಳು ಕಾರ್ಯಕ್ರಮ ರೂಪಿಸಿ ಕಾರ್ಯ ಪ್ರವೃತ್ತವಾಗಿ  ತಮ್ಮ ಬದ್ಧತೆಯನ್ನು ತೋರುತ್ತಾ ಬಂದಿವೆ.


ಇದಕ್ಕೆ ಉದಾಹರಣೆ ನಾನು ಸದಸ್ಯನಾಗಿರುವ "ನುಡಿ ತೋರಣ" ವಾಟ್ಸಪ್ ಬಳಗ. ಈ ಬಳಗದಲ್ಲಿ ನಮ್ಮ ನಾಡು ನುಡಿಯ ಬಗ್ಗೆ ಅಂಕಣಗಳಿವೆ ,ನಮ್ಮ ತಿಂಡಿ ತಿನಿಸು, ಆಚಾರ ವಿಚಾರ ,ಸಂಗೀತ, ಹಾಸ್ಯ, ಮುಂತಾದ ವಿಷಯಗಳ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯುತ್ತದೆ ಆಗಾಗ್ಗೆ ಗೂಗಲ್ ಮೀಟ್ ಬಳಸಿ ಒಂದೆಡೆ ಸೇರಿ ವಿಚಾರ ವಿನಿಮಯ ನಡೆಯುತ್ತದೆ. 


ನಿನ್ನೆ ಭಾನುವಾರ ನನ್ನ ತುರ್ತು ಕಾರ್ಯ ಮುಗಿಸಿ  ಸಂಜೆ  ಮನೆಗೆ ಬಂದು ನುಡಿತೋರಣ ಬಳಗದ ಗೂಗಲ್ ಮೀಟ್ ಲಿಂಕ್ ಒತ್ತಿ ಒಳಪ್ರವೇಶಿಸಿದರೆ ಅಲ್ಲಿ ಜಾನಪದ ಜಾತ್ರೆಯ ಸಡಗರ ರಂಗೇರಿತ್ತು. 

ಮುಂಬೈನಲ್ಲಿ ನೆಲೆಸಿರುವ ಕನ್ನಡತಿ ಮಧು ವಸ್ತ್ರದ್ ರವರು ತಿಂಗಳಿನಿಂದ ತಯಾರಿ ಮಾಡಿಕೊಂಡು ಅಚ್ಚುಕಟ್ಟಾಗಿ  ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಏನುಂಟು ಏನಿಲ್ಲ? ಜನಪದ ಹಾಡುಗಳ ಕಲರವ ,ನಮ್ಮ ಜನಪದ ಉಡುಪುಗಳ ಹಬ್ಬ, ಒಡಪುಗಳ ಸದ್ದು, ಜನಪದ ಹಾಡುಗಳ ಸಂಗೀತ, ಗೀಗಿಪದಗಳ ಸದ್ದು, ಇನ್ನೂ ಎನೇನೋ ...ಒಟ್ಟಾರೆ ಅದೊಂದು ಜನಪದ ಲೋಕ...


ನುಡಿ ತೋರಣ ಬಳಗದ ವತಿಯಿಂದ ಅಂದು  ಜರುಗಿದ ಜಾನಪದ ಜಾತ್ರೆಯು ಮೂರು ಗಂಟೆಗಳಿಗೂ ಅಧಿಕ ಸಮಯವನ್ನು ನಮಗರಿವಿಲ್ಲದೆಯೇ ಪಡೆದು ಯಶಸ್ವಿಯಾಯಿತು ಎನ್ನಬಹುದು.

ಎಷ್ಟು ಜನ ಸೇರಿದ್ದರು ಎಂಬುದು ಮುಖ್ಯವಲ್ಲ ಅದರ ಪರಿಣಾಮ ಮತ್ತು ಪ್ರಯತ್ನ ಪ್ರಶಂಸನೀಯ 

ಮೂವತ್ತಕ್ಕೂ ಅಧಿಕ ಸದಸ್ಯರು ಅತಿ ಸಂಭ್ರಮದಿಂದ ದೇಸೀ ದಿರಿಸುಗಳಲ್ಲಿ ಭಾಗಿಯಾಗಿದ್ದು ಕಾರ್ಯಕ್ರಮದ ಯಶಸ್ಸನ್ನು ರುಜುವಾತು ಮಾಡಿದಂತೆನಿಸಿತು. ಎಲ್ಲರೂ ಬಣ್ಣ ಬಣ್ಣದ ವೇಷಭೂಷಣಗಳಿಂದ, ಮುಖದ ತುಂಬ ಸಂತಸದ ನಗೆಯಿಂದ ಕಂಗೊಳಿಸುತ್ತಿದ್ದರು. ಇದು ಕಾರ್ಯಕ್ರಮವು ತನ್ನ ಗಮ್ಯವನ್ನು ಸೇರಿತೆಂಬ ಸಾರ್ಥಕ ಭಾವನೆಯನ್ನು ತಂದಿತು.

ಬಳಗದ ಹೆಮ್ಮೆಯ ಸದಸ್ಯರಾದ 

ಶೈಲಾ ಜಯಕುಮಾರರ ಪ್ರಾಸ್ತಾವಿಕ ನುಡಿಗಳು ನೆನಪಿಟ್ಟುಕೊಳ್ಳುವಷ್ಟು ಸತ್ವಯುತವಾಗಿದ್ದವು. ಅತಿಥಿಗಳಾಗಿ ಬಂದ ಗೌರಮ್ಮನವರು ಮತ್ತು ಆಶಾ ಯಮಕನಮರಡಿಯವರ ಜಾನಪದ ಗಾಯನ ಮೆರುಗು ತಂದಿತು.


ಸುಮನಾ ಹೇರ್ಳೆಯವರ ತಾಳಮದ್ದಳೆಯ ಕುರಿತಾದ ಮಂಡನೆ, ಮಾಧುರಿ ದೇಶಪಾಂಡೆಯವರ ಮಾತುಗಳು, ಈಶ್ವರ ಸಂಪಗಾವಿಯವರ ಒಡಪುಗಳ ಬಗ್ಗೆ ವ್ಯಾಖ್ಯಾನ ಇಷ್ಟವಾದವು. ಕವಿಕುಟುಂಬ, ಶ್ಯಾಮಸುಂದರ್ಜಿ,  ಗಿರಿಜಾ ಇಟಗಿ, ಬನಾಸು, ಸುಮಾ ಸೂರ್ಯ, ಸ್ವರ್ಣ ರಂಗನಾಥ್, ಸಿಹಿಜೀವಿ, ಡಾ. ರುಕ್ಮಿಣಿ, ಜಯಶ್ರೀ ರಾಜು,  ರತ್ನ ಬಡವನಹಳ್ಳಿ, ಕ್ಷಮಾ ರಘುರಾಮ್, ಮಾನಸಾ ಮುಂತಾದವರ ಪ್ರಸ್ತುತಿಗಳು ಗಮನಸೆಳೆದವು. ಚಿನ್ನುಪ್ರಿಯ, ಜಯಶ್ರೀ ರಾಜು ಮುಂತಾದವರ ಉಪಸ್ಥಿತಿ ಜಾತ್ರೆಯ ಮೆರಗು ಹೆಚ್ಚಿಸಿತು.


ಕಿರಣ್ ಹಿರಿಸಾವೆ, ರವರು ಮತ್ತು ಶ್ರೀಕಾಂತ್ ಪತ್ರೆಮರ ರವರ ನೇತೃತ್ವದ ಸಂಚಾಲನ ಸಮಿತಿಯ ಮಾರ್ಗದರ್ಶನದಲ್ಲಿ ಸಾಗುವ ನುಡಿತೋರಣ ಬಳಗದಲ್ಲಿ ನಾನೂ ಒಬ್ಬ ಹೆಮ್ಮೆಯ ಸದಸ್ಯ ಎಂದು ಹೇಳಿಕೊಳ್ಳಲು ಸಂತಸವಾಗುತ್ತದೆ.

ಮೇಲ್ನೋಟಕ್ಕೆ ಇದು ವಾಟ್ಸಪ್ ಬಳಗದ ಕಾರ್ಯಕ್ರಮ ಆದರೂ ಅದರ ಪರಿಣಾಮ ವಿಸ್ತಾರವಾದುದು. ಈ ಕಾರ್ಯಕ್ರಮಕ್ಕೆ ವಾರದಿಂದ ತಯಾರಿ ಮಾಡಿಕೊಳ್ಳುವಾಗ ಸ್ಪರ್ಧಿಗಳ ಅಭ್ಯಾಸ .ಮಾಡುವಾಗ ಜನಪದ ಗೀತೆಗಳು, ಕಂಜರ,ಡೋಲಕ್, ಚಕ್ಕೆ ಮುಂತಾದ ವಾದ್ಯಗಳ ಪರಿಚಯ ಮನೆಯ ಮಕ್ಕಳಿಗೆ ಆಗಿರುತ್ತದೆ, ಬರೀ ಸಿನಿಮಾ ಹಾಡುಗಳನ್ನೇ ಸಂಗೀತ ಎಂಬ ನಮ್ಮ ಮಕ್ಕಳ ಮನೋಭಾವ ಬದಲಾಗಲು ಇಂತಹ ಕಾರ್ಯಕ್ರಮ ಸಹಾಯಕ .ಇನ್ನೂ ಜನಪದ ಉಡುಪುಗಳು ನಮ್ಮ ಪರಂಪರೆಯ ಪ್ರತೀಕ ನಮ್ಮ ಮುಂದಿನ ಪೀಳಿಗೆಗೆ ಇದರ ಪರಿಚಯ ಮಾಡಿಸಿದ್ದು ಬಳಗದ ಮತ್ತೊಂದು ಪರೋಕ್ಷವಾದ ಯಶಸ್ಸು  ದೂರಗಾಮಿ   ಸಕಾರಾತ್ಮಕ ಹಾಗೂ ಉತ್ತಮ ಪರಿಣಾಮ ಬೀರುತ್ತವೆ  ಎಂಬುದೇ ನನ್ನ ಭಾವನೆ.

 

ಸದಸ್ಯರು, ಅಧ್ಯಕ್ಷರು ಮುಂತಾದ ಪದವಿಗಳನ್ನು ಹೊತ್ತು ನೂರಾರು ಕೋಟಿ ಹಣ ವ್ಯಯ ಮಾಡುವ ಅಕಾಡೆಮಿಗಳು  ಪರಿಷತ್ತುಗಳು  ಮಾಡುವ ಕನ್ನಡ ಕಟ್ಟುವ ಮತ್ತು ಸಂಸ್ಕೃತಿ ಉಳಿಸುವ ಕೆಲಸವನ್ನು ಒಂದು ವಾಟ್ಸಪ್ ಬಳಗ ಸದ್ದಿಲ್ಲದೇ  ಮಾಡುತ್ತಿರುವುದು ಪ್ರಶಂಸನೀಯ. ಬಳಗ ಇಂತಹ ಚಟುವಟಿಕೆಗಳನ್ನು ಇನ್ನೂ ಹೆಚ್ಚು ಸಂಘಟಿಸಲಿ . ನಾಡು ನುಡಿ ಸಂಸ್ಕೃತಿ ಉಳಿಸಲು ಯಾವಾಗಲೂ  ಇನ್ನೊಬ್ಬರು ಮಾಡಲಿ   ಎಂಬ ಭಾವನೆಗಳನ್ನು ಬಿಟ್ಟು ನಮ್ಮ ಕೈಲಾದ ಕೆಲಸ ಮಾಡೋಣ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗಗೆ ವರ್ಗಾಯಿಸೋಣ..


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು.


  

04 ನವೆಂಬರ್ 2022

ರಂಗಜ್ಜಿ ಮತ್ತು ಕೆಂಚಜ್ಜಿ....ಆತ್ಮಕಥೆ ೪೩

 



ರಂಗಜ್ಜಿ ಮತ್ತು ಕೆಂಚಜ್ಜಿ 


ಆಗ ನಮ್ಮೂರಿಂದ ತಾಲ್ಲೂಕು ಮತ್ತು ಜಿಲ್ಲಾ  ಕೇಂದ್ರ ಸಂಪರ್ಕ ಮಾಡಲು ಇದ್ದ ಬಸ್ ಎರಡೇ ಒಂದು ವಾಣಿ ಬಸ್ ಇನ್ನೊಂದು ಶಾಯಿನ್ ಬಸ್ . ಒಂದು ಬೆಳಿಗ್ಗೆ ಒಂದು ಸಂಜೆ...  ನಮ್ಮೂರ ಗೇಟ್ ನಿಂದ ಇತ್ತ ಚಿತ್ರಳ್ಳಿ ವರೆಗೂ ಅತ್ತ ಐಮಂಗಲ ವರೆಗೂ  ಮಣ್ಣಿನ ರಸ್ತೆ  .ಒಮ್ಮೆ ಬಸ್ಸಿನಲ್ಲಿ ಹತ್ತಿ ಕೂತರೆ ಅದೇ ನಮಗೆಲ್ಲ ಉಚಿತವಾಗಿ ಪೌಡರ್ ಹಾಕುತ್ತಿತ್ತು. ರಸ್ತೆಯ ಗುಂಡಿಗಳ ನಡುವೆ ಧೂಳಿನ ರಸ್ತೆಯಲ್ಲಿ ಡ್ರೈವರ್ ಹರಸಾಹಸ ಪಟ್ಟು ಬಸ್ ಓಡಿಸುವುದನ್ನು ನೋಡಲು ನಾನು ಸೀದಾ ಡ್ರೈವರ್ ಬಳಿ ಹೋಗಿ ನಿಂತುಬಿಡುತ್ತಿದ್ದೆ. ಅದರಲ್ಲೂ ಆಗಿನ ಕಾಲದಲ್ಲಿ ರಿವರ್ಸ್ ಹೊಡೆಯುವ ಮತ್ತು ತಿರುವಿನಲ್ಲಿ ಅವನು ಸ್ಟೇರಿಂಗ್ ತಿರುಗಿಸುವ ರೀತಿ ನೋಡುತ್ತಾ ನಾನು ಮುಂದೆ ಡ್ರೈವರ್ ಆಗಿಬಿಡಬೇಕು ಎಂದು ಕೊಂಡಿದ್ದೆ.


ನಮ್ಮೂರು ಕೊಟಗೇಣಿಯಿಂದ ನಮ್ಮ ಮಾವನವರ ಊರು ಯರಬಳ್ಳಿಗೆ ಹೋಗಲು ನಮಗೆ  ಇದೇ ಬಸ್ ಗಳು ಆಧಾರ. ಸಾಮಾನ್ಯವಾಗಿ ಸಾಯಂಕಾಲದ ನಾಲ್ಕು ವರೆಗೆ ನಮ್ಮ ಗೇಟ್ ಗೆ ಬರುತ್ತಿದ್ದ ವಾಣಿ ಬಸ್ ನಲವತ್ತು ಕಿಲೋಮೀಟರ್ ದೂರದ ಯರಬಳ್ಳಿ ಸೇರುತ್ತಿದ್ದದ್ದು  ರಾತ್ರಿಯ ಏಳುಗಂಟೆಗೆ ಕೆಲವೊಮ್ಮೆ ಇನ್ನೂ ಲೇಟಾಗಿ ತಲುಪಿದ ಉದಾಹರಣೆ ಇದೆ.


ಒಮ್ಮೆ  ಎಂಭತ್ತು ವರ್ಷಕ್ಕೂ ಹೆಚ್ಚು ವಯಸ್ಸಾದ  ನಮ್ಮ ರಂಗಜ್ಜಿಯ ಜೊತೆಯಲ್ಲಿ ಯರಬಳ್ಳಿಗೆ ಹೋಗಲು ನಮ್ಮೂರ ಗೇಟ್ ಗೆ ಒಂದು ಕಿಲೋ ಮೀಟರ್ ನಡೆದುಕೊಂಡು ಬಂದು   ಬಸ್ ಹತ್ತಿದೆವು . ಬಸ್ ಹತ್ತಿದ ತಕ್ಷಣ ಯಾರೋ ಅಜ್ಜಿಗೆ ಸೀಟ್ ಬಿಟ್ಟು ಕೊಟ್ಟರು. ನಾನು ಎಂದಿನಂತೆ ಡ್ರೈವರ್ ಪಕ್ಕದಲ್ಲಿ ನಿಂತೆ.  

ಬಸ್ ಕೆರೆಯಾಗಳ ಹಳ್ಳಿ ಬಿಟ್ಟು, ತೇಕಲವಟ್ಟಿ ಗೊಲ್ಲರಹಟ್ಟಿ ದಾಟಿ ತೇಕಲವಟ್ಟಿಯಲ್ಲಿ ಎಲೆಪೆಂಡಿ ಮತ್ತು ಜನರ ಹತ್ತಿಸಿಕೊಂಡು ಕೊಳಾಳು ಕಡೆ ಧೂಳೆಬ್ಬಿಸುತ್ತಾ ಸಾಗಿತ್ತು.  ಯಲಕೂರನಹಳ್ಳಿಯ ಬಳಿ ಬಂದಾಗ ಸೂರ್ಯ ನನ್ನ ಡ್ಯೂಟಿ ಮುಗೀತು ಎಂದು ಹೊರಟೇಬಿಟ್ಟ. ನಮ್ಮ ಬಸ್ ಕಣಿಮೆಕೆರೆಯ ಪಕ್ಕ ಚಲಿಸುವಾಗ ಕೆರೆಯ ನೀರು ಮಬ್ಬಾಗಿ ಕಪ್ಪಾಗಿ ಕಾಣುತ್ತಿತ್ತು. ಕೆರೆಯ ಏರಿಯ ಬಳಿ ಬಂದಾಗ ಡ್ರೈವರ್ ಬಸ್ ಇಂಜಿನ್ ಆಪ್ ಮಾಡಿ ಎಡಕ್ಕೆ ಬಾಗಿ ಕೈಮುಗಿದ ದೂರದಲ್ಲಿ ಕುಳಿತಿದ್ದ ಅಜ್ಜಿ ಭೂತಪ್ಪಗೆ ಕೈ ಮುಗಿಯೋ ಎಂದು ಸನ್ನೆ ಮಾಡಿ ಅವರು ಕೈಮುಗಿದರು.ಪಯಣದ ತೊಂದರೆಗಳನ್ನು ನಿವಾರಿಸಲು ಎಲ್ಲರೂ ಭೂತಪ್ಪನ ಕೈಮುಗಿದು ಆಶೀರ್ವಾದ ಪಡೆಯುವುದು ನಮ್ಮ ಸಂಪ್ರದಾಯವಾಗಿತ್ತು.ಅಂದು ಭೂತಪ್ಪನ ಆಶೀರ್ವಾದ ಪಡೆದರೂ ಅನಾಹುತ ಸಂಭವಿಸಿಯೇ ಬಿಟ್ಟಿತು. ಕೋವೇರಹಟ್ಟಿ ಗೇಟ್ ದಾಟಿ , ದಾಸಣ್ಣನ ಮಾಳಿಗೆ ಮೂಲಕ ಐಮಂಗಲ ತಲುಪಿದಾಗ ರಾತ್ರಿ ಏಳುಗಂಟೆಯಾಗಿತ್ತು. ಇಂಜಿನ್ ಪ್ರಾಬ್ಲಮ್ ಇದೆ ಬಸ್ ಮುಂದೆ ಹೋಗಲ್ಲ ಎಲ್ಲಾ ಇಳಿರಿ ಅಂದ ಡ್ರೈವರ್. ರಂಗಜ್ಜಿ ಮತ್ತು ನನಗೂ ಭಯ ಆತಂಕ ಶುರುವಾಯಿತು. ನಾವು ತಲುಪಬೇಕಾದ ಯರಬಳ್ಳಿ ಇನ್ನೂ ಹತ್ತು ಕಿಲೋಮೀಟರ್ "  ಕತ್ಲಲ್ಲಿ ಕಾಮದೂರಾಗ್ ನಾವ್ ಎಲ್ಲಿಗ್ ಹೋಗಾನ ಸಾಮಿ, ನೀವೇನೋ ಬಸ್ ಹೋಗಲ್ಲ ಅಮ್ತಾ ಒಂದೆ ಸಲ ಅಂದ್ ಬಿಟ್ರಿ , ಈಗ ನಾವ್ ಏನ್ ಮಾಡಾನಾ " ಎಂದು ಕಂಡಕ್ಟರ್ ಮತ್ತು ಡ್ರೈವರ್ ನನ್ನ ಸ್ವಲ್ಪ ಜೋರಾಗಿಯೇ ತರಾಟೆಗೆ ತೆಗೆದುಕೊಂಡರು ನಮ್ಮ ರಂಗಜ್ಜಿ.  ಅಜ್ಜಿಯ ಬಾಯಿ ಕೇಳಿ ಅಲ್ಲಿಗೆ   ಬಂದ ಓರ್ವ ವ್ಯಕ್ತಿಯು ತನ್ನನ್ನು ಪೊಲೀಸ್ ಎಂದು ಪರಿಚಯ ಮಾಡಿಕೊಂಡು ನಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು  ಇಂದು ರಾತ್ರಿ ನಮ್ಮ ಮನೆಯಲ್ಲಿ ಊಟ ಮಾಡಿ, ಮಲಗಿಕೊಂಡು ನಾಳೆ ಬೆಳಿಗ್ಗೆ ನಿಮ್ಮ ಊರಿಗೆ ಹೋಗಬಹುದು ಅಂದರು. ನಾವು ಅಂದು ರಾತ್ರಿ ಅವರ ಮನೆಯಲ್ಲಿ ಊಟ ಮಾಡಿ ಮಲಗಿಕೊಂಡು ಬೆಳಿಗ್ಗೆ ಎದ್ದು ಅವರಿಗೆ ಧನ್ಯವಾದಗಳನ್ನು ಹೇಳಿ ಹೊರಟೆವು. ದೇವರ ಆಗಿ ನಮ್ಮ ಕಷ್ಟ ಕಾಲದಲ್ಲಿ ಬಂದು ಸಹಾಯ ಮಾಡಿದ ಆ ಪೋಲಿಸಪ್ಪ ಎಲ್ಲಿರುವರೋ ತಿಳಿಯದು   ಅವರು  ಮತ್ತು ಅವರ ಕುಟುಂಬ ಎಲ್ಲೇ ಇರಲಿ    ಸುಖಕರವಾಗಿರಲಿ .   


ನಲವತ್ತು ವರ್ಷಗಳ ಕಾಲ ಉರುಳಿದಂತೆ...

ಮೊನ್ನೆ ಆತ್ಮೀಯರಾದ ಶಂಕರಾನಂದ ರವರ ಜೊತೆಯಲ್ಲಿ ನನ್ನ ಕಾರಿನಲ್ಲಿ ನಮ್ಮ ಊರಿಗೆ ಹೋಗಿದ್ದೆ .ಎಂದಿನಂತೆ ಊರಿಗೆ ಹೋದಾಗ ನಮ್ಮ ಅಣ್ಣ ತೆಂಗಿನ ಕಾಯಿ, ಬಾಳೆ ಗೊನೆ ಎಳನೀರು ಅದೂ ಇದೂ ಎಂದು ಡಿಕ್ಕಿ ತುಂಬಿದ ಮೇಲೆ ಹಿಂದಿನ ಎರಡು ಸೀಟಿನ ಮೇಲೂ ವಸ್ತುಗಳ ಹಾಕಿದ್ದರು. ಮುಂದೆ ಡ್ರೈವರ್ ಸೀಟಲ್ಲಿ ನಾನು ಪಕ್ಕದಲ್ಲಿ ಶಂಕರಾನಂದರ ರವರು ಇದ್ರು.  ಊರಿಂದ ತುಮಕೂರಿನ ಕಡೆ ನಮ್ಮ ಕಾರು ಸಾಗುವಾಗ  ತೇಕಲವಟ್ಟಿ  ದಾಟಿದ ಬಳಿಕ ದಾರಿಯಲ್ಲಿ  ಒಂದು  ಅಜ್ಜಿ ಕೈಯಲ್ಲಿ  ಚೀಲ ಹಿಡಿದುಕೊಂಡು ಕಾರಿಗೆ ಕೈ ಅಡ್ಡ ಹಾಕಿತು ಕಾರ್ ಸ್ಲೋ ಮಾಡಿ ನಿಲ್ಲಿಸಿ ಏನಜ್ಜಿ ಅಂದೆ . "ಕೊಳಾಳ್ ಗೆ ಹೋಗ್ ಬೇಕು ಬಸ್ ಇಲ್ಲ ತೇಕಲವಟ್ಟಿಯಿಂದ ನೆಡೆಕಂಡು ಬಂದೆ ಕಣಪ್ಪ ,ಕತ್ಲಾಕ್ತಾ ಐತೆ .ನನ್ನ ಕೊಳಾಳಿಗೆ ಬಿಡ್ರಪ್ಪ" ಅಂತು ಆ ಪರಿಸ್ಥಿತಿಯಲ್ಲಿ ಅಜ್ಜಿಯನ್ನು ಬಿಟ್ಟು ಬರಲು ಮನಸ್ಸಾಗಲಿಲ್ಲ. ಹಿಂದಿನ ಸೀಟಲ್ಲಿ ಜಾಗ ಇರಲಿಲ್ಲ ಮುಂದೆ ಒಬ್ಬರು ಕೂರುವ ಜಾಗದಲ್ಲಿ ಅಜ್ಜಿಯ ಲಗೇಜ್ ಸಮೇತ ಇಬ್ಬರು ಕುಳಿತರು .ಐದಾರು ಕಿಲೋಮೀಟರ್ ಸಾಗಿದ ಮೇಲೆ ಕೊಳಾಳು ಬಂತು.ನಿಧಾನವಾಗಿ ಅಜ್ಜಿ  ಕಾರಿಂದ  ಇಳಿಯಿತು .ನಿಮಗೆ ಒಳ್ಳೆಯದಾಗ್ಲಿ ಕಣಪ್ಪ ಎಂದು ಹರಸಿತು . ಕುತೂಹಲಕ್ಕೆ ಅಜ್ಜಿ ನಿನ್ನ ಹೆಸರೇನು? ಕೇಳಿದೆ ಕೆಂಚವ್ವ ಕಣಪ್ಪ ಅಂತು ಯಾಕೆ ಕೊಳಾಳು ಗೆ ಹೊರಟಿರೋದೆಂದು ಕೇಳಿದೆ ಕೆಂಚಪ್ಪನ್ ಗುಡಿಗೆ ಕಣಪ್ಪ ಅಂತು ತಗ ಅಜ್ಜಿ ಹುಂಡಿಗೆ ಐವತ್ತು ರುಪಾಯಿ ಹಾಕು ಎಂದೆ ಆಗ್ಲಪ್ಪ ನಂದು ಹತ್ತು ಸೇರಿಸಿ ಹಾಕ್ತೀನಿ ಎಂದು ಗಂಟನ್ನು ಹಿಡಿದು ಕತ್ತಲಲ್ಲಿ ಗುಡಿಯ ಕಡೆ ಹೊರಟಿತು...  ನನ್ನ ಕಾರ್ ಮುಂದೆ ಸಾಗಿದಂತೆ  ಯಾಕೋ ನಮ್ಮ  ರಂಗಜ್ಜಿ  ಮತ್ತು ಆ ಪೋಲಿಸಪ್ಪ  ಪದೇ ಪದೇ ನೆನಪಾದರು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


02 ನವೆಂಬರ್ 2022

ಅರ್ಥ


 *ಅರ್ಥ*


ಒಂದೇ ದಿನ ಮಾಡಬಹುದು

ಮದುವೆ ಮತ್ತು ನಿಶ್ಚಿತಾರ್ಥ |

ಇದರಿಂದ ಹೆಣ್ಣು ಮತ್ತು

ಗಂಡಿನ ಕಡೆಯವರಿಗೂ 

ಉಳಿಯುವುದು "ಅರ್ಥ" ||


ಸಿಹಿಜೀವಿ 

ಸಿ ಜಿ ವೆಂಕಟೇಶ್ವರ