25 ಸೆಪ್ಟೆಂಬರ್ 2022

ವಂದೇ ಭಾರತಂ

 


ವಿಮರ್ಶೆ ೫೨
ವಂದೇ  ಭಾರತಂ 

ನನ್ನ ಪುಸ್ತಕಗಳನ್ನು ಪೋಸ್ಟ್ ಮಾಡಲು ಕ್ಯಾತ್ಸಂದ್ರ ಪೋಸ್ಟ್ ಆಫೀಸ್ ಗೆ ತೆರಳಿದಾಗ ಅಲ್ಲಿಯ ಪೋಸ್ಟ್ ಮಾಸ್ಟರ್ ರವರು " ಸರ್ ನಿಮ್ಮಂಗೆ ಒಬ್ರು ಪುಸ್ತಕ ಬರೀತಾರೆ ಅವರ ಹೆಸರು ರೇಣುಕಾರಾಧ್ಯ ಅಂತ ನಂಬರ್ ತಗೊಳಿ"  ಎಂದು ಕೊಟ್ಟರು .ಒಂದು ದಿನ  ಮಗಳನ್ನು ಶಾಲೆಗೆ ಬಿಡಲು ಬಸ್ ನಿಲ್ದಾಣದ ಬಳಿ ನಿಂತಿದ್ದಾಗ   ರೇಣುಕಾರಾಧ್ಯ ರವರು " ವಂದೇ ಭಾರತಂ " ಪುಸ್ತಕ ನೀಡಿ ಓದಲು ಹೇಳಿದರು.
ಮುನ್ನೂರಾ ನಲವತ್ತನಾಲ್ಕು  ಪುಟಗಳ ಪುಸ್ತಕವನ್ನು ಎರಡು ದಿನಗಳಲ್ಲಿ ಓದಿದೆ. ಪ್ರತಿಯೊಬ್ಬ ಭಾರತೀಯನು ಓದಲೇ ಬೇಕಾದ ಪುಸ್ತಕ ಇದು.ಇದರಲ್ಲಿ ದೇಶಭಕ್ತಿ ಉಕ್ಕಿಸುವ ಲೇಖನಗಳಿವೆ.ಮಕ್ಕಳಿಗೆ ಕಿವಿಮಾತುಗಳಿವೆ, ಹಿರಿಯರ ಆದರ್ಶಗಳ ನಿದರ್ಶನಗಳಿವೆ.ಭಾರತೀಯ ಸಂಸ್ಕೃತಿಯ ದರ್ಶನವಿದೆ. ಜವಾಬ್ದಾರಿಯುತ ನಾಗರಿಕನಾಗಲು ಮಾಡಬೇಕಾದ ಕರ್ತವ್ಯಗಳೇನು ಎಂದು ಎಚ್ಚರಿಸುವ ಅಂಶಗಳಿವೆ .

ಕರ್ನಾಟಕರತ್ನ, ಪದ್ಮಭೂಷಣ, ಮಹಾದಾಸೋಹಿ, ನಿರಂಜನಪ್ರಣವಸ್ವರೂಪಿ ಪರಮಪೂಜ್ಯ ಡಾ॥ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರಿಗೆ ಈ ಕೃತಿಯನ್ನು ಭಕ್ತಿ ಪೂರ್ವಕವಾಗಿ ಸಮರ್ಪಿಸಿದ ಲೇಖಕರು ಶ್ರೀಗಳೊಂದಿಗಿನ ಒಡನಾಟದ ಚಿತ್ರಣವನ್ನು ಓದುಗರೊಂದಿಗೆ ಇಲ್ಲಿಯ ಕೆಲ ಅಧ್ಯಾಯಗಳಲ್ಲಿ  ಹಂಚಿಕೊಂಡಿದ್ದಾರೆ.

ಶ್ರೀ ಎಸ್. ರೇಣುಕಾರಾಧ್ಯ ಅವರು ಈಗ ಎಪ್ಪತ್ತೈದರ ಹರೆಯದಲ್ಲಿದ್ದಾರೆ. ಇವರು ಪ್ರೌಢಶಾಲಾ ಶಿಕ್ಷಕರಾಗಿ ಸಹಸ್ರಾರು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದ್ದಾರೆ. ನಲವತ್ತು ವರ್ಷಗಳ ಕಾಲ ಶಿಕ್ಷಕರಾಗಿ ಮಕ್ಕಳಿಗೆ ಜ್ಞಾನವನ್ನು ಉಣಬಡಿಸಿದ್ದಾರೆ . ಬಡಕುಟುಂಬವೊಂದರಲ್ಲಿ ಜನಿಸಿ, ತಮ್ಮ ಇಚ್ಚಾಶಕ್ತಿಯಿಂದಲೂ ಸ್ವಸಾಮರ್ಥ್ಯದಿಂದಲೂ, ಪರಮಪೂಜ್ಯ ಸಿದ್ಧಗಂಗಾಶ್ರೀಗಳ ಆಶೀರ್ವಾದದಿಂದಲೂ ಹಂತಹಂತವಾಗಿ ಮೇಲೇರಿದ್ದಾರೆ! ಅವರು ಶಿಕ್ಷಕರಾಗಿ ಕೇವಲ ಬೋಧನೆಯಲ್ಲೇ ವಿರಮಿಸದೆ, ಸಹಸ್ರಾರು ಮಸ್ತಕಗಳನ್ನು ಓದಿ, ತಮ್ಮ ಅನುಭವವನ್ನು ವಿದ್ಯಾರ್ಥಿಗಳೊಡನೆ ಹಂಚಿಕೊಂಡಿದ್ದಾರೆ. ಸಾಹಿತ್ಯ, ತತ್ತ್ವಜ್ಞಾನ, ಸಮಾಜವಿಜ್ಞಾನ, ರಾಜಕೀಯಶಾಸ್ತ್ರ, ಮನಃಶಾಸ್ತ್ರ ಇವೇನು ಒಂದೇ ಎರಡೇ? ಹಲವು ಜ್ಞಾನಕ್ಷೇತ್ರಗಳ ಜ್ಞಾನಭಂಡಾರವನ್ನು ಶ್ರೀ ಎಸ್.ರೇಣುಕಾರಾಧ್ಯ ಅವರು ತಮ್ಮದನ್ನಾಗಿಸಿಕೊಂಡಿದ್ದಾರೆ. 'ವಂದೇಭಾರತಂ' ಎಂಬ ಈ ಕೃತಿಯನ್ನು ಓದಿದರೆ ನಿಮಗೆ ಅವರ ಬಗ್ಗೆ ಅಪಾರ ಗೌರವ ಉಂಟಾಗುವುದರಲ್ಲಿ ಸಂದೇಹವಿಲ್ಲ.

344 ಪುಟಗಳ ಈ ಪುಸ್ತಕದಲ್ಲಿ ಪುರಾಣ-ಸಂಸ್ಕೃತಿ-ಪರಂಪರೆ ಎಂಬ ಭಾಗದಲ್ಲಿ 11ಲೇಖನಗಳಿವೆ. ಇತಿಹಾಸ-ವ್ಯಕ್ತಿಚಿತ್ರ ಎಂಬ ಭಾಗದಲ್ಲಿ 7 ಲೇಖನಗಳಿವೆ. ವಚನಕಾರರು -ಸಿದ್ಧಗಂಗಾಶ್ರೀಗಳು ಎಂಬ ಭಾಗದಲ್ಲಿ 15 ಲೇಖನಗಳಿವೆ. ಶಿಕ್ಷಣ-ಸಂಸ್ಕೃತಿ ಎಂಬ ಭಾಗದಲ್ಲಿ 5 ಲೇಖನಗಳು, ರಾಷ್ಟ್ರಪ್ರೇಮ-ಅಸ್ಮಿತೆ ಎಂಬ ಭಾಗದಲ್ಲಿ 7 ಲೇಖನಗಳು ವ್ಯಕ್ತಿಚಿತ್ರದಲ್ಲಿ 6 ಲೇಖನಗಳು, ಆಶಯ-ಚಿಂತನೆ ಭಾಗದಲ್ಲಿ 14 ಲೇಖನಗಳು, ಲಘುಬರಹ  -ಚಿಂತನೆಯಲ್ಲಿ 8 ಲೇಖನಗಳಿದ್ದು ಒಟ್ಟು 75 ಲೇಖನಗಳಿರುವ ಈ ಪುಸ್ತಕ ಸರ್ವಜನ ಪ್ರಿಯ ಆಗುವುದಕ್ಕೆ ಎಲ್ಲ ಬಗೆಯ ಅರ್ಹತೆಯನ್ನೂ ಪಡೆದಿದೆ.

ನಾಡಿನ ವಿವಿಧ ಮಠ ಮಾನ್ಯಗಳ ಸ್ವಾಮೀಜಿಗಳು ಗುರು ಹಿರಿಯರು, ಲೇಖಕರ ಹಿತೈಷಿಗಳು ಪುಸ್ತಕದ ಬಗ್ಗೆ ತಮ್ಮ ಸದಭಿಪ್ರಾಯಗಳನ್ನು ದಾಖಲಿಸಿದ್ದಾರೆ.
ಪ್ರೊ . ಮಲ್ಲೇಪುರಂ ಜಿ ವೆಂಕಟೇಶ ರವರು ಈ ಪುಸ್ತಕಕ್ಕೆ ತಮ್ಮ ಮುನ್ನುಡಿ ಬರೆದು ಹಾರೈಸಿದ್ದಾರೆ. ಅವರ ಮಾತುಗಳನ್ನು ಉಲ್ಲೇಖಿಸಿ ಹೇಳುವುದಾದರೆ......

ಶ್ರೀ ಎಸ್. ರೇಣುಕಾರಾಧ್ಯರ ಚೊಚ್ಚಲಕೃತಿಯಲ್ಲಿ ಕನ್ನಡ ಗದ್ಯವು ಮಾತು ಮತ್ತು ಬರೆಹ ಎರಡರ ಸೂಕ್ಷ್ಮನೇಯ್ಗೆಯನ್ನು ಹೊಂದಿದೆ. ಈ ನೇಯ್ಗೆಯಲ್ಲಿ ಆರ್ದತೆ, ಸರಳತೆ, ಹಾಸ್ಯ ಮತ್ತು ಗಾಂಭೀರ್ಯತೆ ಮನೆಮಾಡಿಕೊಂಡಿವೆ. ಇವೆಲ್ಲವನ್ನು ಇಲ್ಲಿರುವ ಎಪ್ಪತ್ತೈದು ಲೇಖನಗಳಲ್ಲಿ ಸಹೃದಯ ಓದುಗರು ದಿಟಕ್ಕೂ ಕಾಣಬಹುದು. ಒಬ್ಬ ಪ್ರಬುದ್ಧ ಸಾಹಿತಿಯ ಬರೆಹಕ್ಕೆ ಸಮಾನಾಂತರವಾದ ಬರೆಹವನ್ನು ಶ್ರೀ ಎಸ್.ರೇಣುಕಾರಾಧ್ಯ ಅವರು ಹೊಂದಿದ್ದಾ ರೆಂಬುದೇ ನಾವು ಗಮನಿಸತಕ್ಕ ಸಂಗತಿ, ಇಲ್ಲಿಯ ಎಲ್ಲಾ ಲೇಖನಗಳು ಮುಖ್ಯವಾಗಿ ರಾಷ್ಟ್ರಚಿಂತನೆ, ರಾಷ್ಟ್ರಭಕ್ತಿ, ರಾಷ್ಟೋನ್ನತಿಯನ್ನೇ ಕೇಂದ್ರ ಮಾಡಿಕೊಂಡಿವೆ. ರೇಣುಕಾರಾಧ್ಯರು ವ್ಯಕ್ತಿಗಳನ್ನು ಕುರಿತು ಬರೆಯಲಿ, ಸನ್ನಿವೇಶವನ್ನು ಕುರಿತು ಬರೆಯಲಿ, ಯಾವುದೇ ವಸ್ತುಸಂಚಯವನ್ನು ಕುರಿತು ಬರೆಯಲಿ ಅವರು 'ರಾಷ್ಟ್ರ' ಚಿಂತನೆಯ ಮೂಲಕವೇ ತಮ್ಮ ಆಶಯವನ್ನು ವ್ಯಕ್ತಪಡಿಸುತ್ತಾರೆ. ನಾವು ಜಾತಿ, ಮತ, ವರ್ಗ ಮುಂತಾದ ಸಣ್ಣಸಣ್ಣ ಕಮರಿಯಲ್ಲಿ ಬಿದ್ದು ಹೊರಳಾಡುತ್ತಿದ್ದೇವೆ. ನಮಗೆ ದೇಶ ಮುಖ್ಯವಾಗುತ್ತಿಲ್ಲ. ಇಲ್ಲೆಲ್ಲಾ ಸ್ವಾರ್ಥಮಯತೆ ತುಂಬಿ ತುಳುಕಾಡುತ್ತಿದೆ. ಇಲ್ಲಿ ಸಮಷ್ಟಿ ಪ್ರಜ್ಞೆ ದೂರವಾಗಿ ವೃಷ್ಟಿ ನಿಲುವನ್ನು ನಾವು ಅಪ್ಪಿಕೊಂಡು ಬಿಟ್ಟಿದ್ದೇವೆ. ಇದು ಇಂದಿನ ದುಃಸ್ಥಿತಿ, ನಾವು ಸ್ವಾತಂತ್ರ್ಯ ಪಡೆದ ಮೇಲೆ, ನಮ್ಮ ಸಮಾಜ ಸಾಗಬೇಕಾಗಿದ್ದ ದಿಕ್ಕುದೆಸೆಗಳು ವಿಮುಖಗೊಂಡಿರುವುದಕ್ಕಾಗಿ ಸಾತ್ವಿಕ ಕ್ರೋಧವನ್ನು ಶ್ರೀಮಾನ್ ರೇಣುಕಾರಾಧ್ಯ ಅವರು ತಮ್ಮ ಲೇಖನಗಳಲ್ಲಿ ವ್ಯಕ್ತಪಡಿಸಿದ್ದಾರೆ.

ಇಲ್ಲಿಯ ಬರೆಹಗಳು ಪ್ರಾಚೀನ, ಮಧ್ಯಕಾಲೀನ, ಅರ್ವಾಚೀನ ಕಾಲಗಳಲ್ಲಿ ನಡೆದ ಸಂಗತಿಗಳನ್ನು ಮರು ರೂಪಿಸುತ್ತಿವೆ. ಇಲ್ಲಿ ವ್ಯಕ್ತಿ, ಕುಟುಂಬ, ಸಮುದಾಯ, ರಾಷ್ಟ್ರ,
ವಿಶ್ವದವರೆಗಿನ ವಿಚಾರಗಳು ಪರಿಕಲ್ಪಿತಗೊಂಡಿವೆ. ಪೂರ್ವ-ಪಶ್ಚಿಮದ ವ್ಯಕ್ತಿ, ವಸ್ತು ವಿಚಾರಗಳು ಬಂದು ಕೂಡಿಕೊಂಡಿವೆ. ಆದರೆ, ಭಾರತದ ಸಮಗ್ರ ಅಭಿವೃದ್ಧಿಯ ಬಗೆಗೆ ಅಪಾರವಾದ ತುಡಿತ-ಮಿಡಿತಗಳು ಪ್ರಧಾನ ಆಶಯಗಳಾಗಿರುವುದಂತೂ ನಿತ್ಯಸತ್ಯ ಶ್ರೀ ರೇಣುಕಾರಾಧ್ಯರು 'ಶ್ರೀಸಾಮಾನ್ಯನೆ ಭಗವನ್ ಮಾನ್ಯಂ' ಎಂಬ ತತ್ವೋಪಾಸನೆಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಈ ಮಾತು ಅವರ ಬರೆಹಗಳಿಗೂ ಅವುಗಳ ಹಿಂದಿರುವ ಆಶಯಗಳಿಗೂ ಅನ್ವಯವಾಗುತ್ತವೆ. ರೇಣುಕಾರಾಧ್ಯರು ವಿಫುಲವಾದ ಸಂಗತಿಗಳನ್ನು ನಮ್ಮ ಮುಂದೆ ಹರಡುತ್ತಾರೆ. ನಾವು ಎಷ್ಟು ಬೇಕಾದರೂ ಹೆಕ್ಕಿಕೊಳ್ಳಬಹುದು. ಅವುಗಳ ಮೂಲಕ 'ವಿಚಾರಕಲ್ಪ'ದ ಬೀಜ ಅಲ್ಲಿರುವುದನ್ನು ಕಾಣಬಹುದು. ಆರಾಧ್ಯರು ಶ್ರೀಕೃಷ್ಣ-ಸುಧಾಮರ ಬಗೆಗೆ ಬರೆದ ಲೇಖನದಲ್ಲಿ 'ಸ್ನೇಹ'ದ ಸಾಮಾಜಿಕ ತಂತುವನ್ನು ತಂದು ಲೇಖನದಲ್ಲಿ ಜೋಡಿಸುತ್ತಾರೆ. ನಮ್ಮ 'ರಾಷ್ಟ್ರಗೀತೆ” ಯಾರಿಗೆ ಗೊತ್ತಿಲ್ಲ! ಆ ಗೀತೆಯ ಇತಿಹಾಸವನ್ನು ಸರಳವಾಗಿ  ತಿಳಿಸುತ್ತಾರೆ. 'ಸಂವಿಧಾನ ರಚನೆಗೊಂಡ ಹಂತಹಂತದ ವಿವರಗಳು ಇಲ್ಲಿ ಸೊಗಸಾಗಿ ಮೂಡಿಬಂದಿವೆ. ಭಾರತದ ಸಂವಿಧಾನದ ಆಶಯ-ದೂರದೃಷ್ಟಿ-ಸಂಕಲ್ಪಗಳನ್ನು ವಿವರಗಳ ಸಮೇತ ಓದುಗರಿಗೆ ಆರಾಧ್ಯರು ಮನವರಿಕೆ ಮಾಡಿಕೊಡುತ್ತಾರೆ. ಈ ಅಂಶಗಳನ್ನು ಶಿಕ್ಷಕನಾಗಿ ನಾನೂ ತರಗತಿ ಕೋಣೆಗಳಲ್ಲಿ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಪರಮಪೂಜ್ಯ ಶ್ರೀಶಿವಕುಮಾರಸ್ವಾಮಿಗಳ ವ್ಯಕ್ತಿತ್ವ, ಅವರ ದೃಷ್ಟಿ, ಸ್ವಭಾವ, ದಿನಚರಿ ಇವುಗಳನ್ನು ಒಳಗೊಂಡ ಏಳೆಂಟು ಲೇಖನಗಳು ಇಲ್ಲಿವೆ. ಒಂದೊಂದು ಲೇಖನಗಳಲ್ಲೂ ನಾವು ಅರಿತುಕೊಂಡು ಅನುಸರಿಸಬೇಕಾದ 'ಮಾರ್ಗದರ್ಶಿ' ಸೂತ್ರಗಳು ಇಲ್ಲಿವೆ. ಗಾಂಧೀಜಿ, ವಿವೇಕಾನಂದ, ರಮಣಮಹರ್ಷಿ, ಅರವಿಂದರು, ಮುಂತಾದ ಆಧುನಿಕ ವಿಭೂತಿಪುರುಷರ ಸಂಕಥನಗಳು ನಮ್ಮನ್ನು ಎಚ್ಚರಿಸುತ್ತವೆ. ಪ್ರಾಚೀನ ಸಂಸ್ಕೃತ ಸಾಹಿತ್ಯದ ವಾಲ್ಮೀಕಿ, ವ್ಯಾಸ, ಕಾಳಿದಾಸ ಮುಂತಾದ ಕವಿಗಳನ್ನ ಕುರಿತಾದ ಲೇಖನಗಳಲ್ಲಿ ನಮ್ಮ ಸಂಸ್ಕಾರ-ಸಂಸ್ಕೃತಿಯನ್ನು ಪುನಃ ರೂಪಿಸಿಕೊಳ್ಳಬೇಕಾದ ಕಡೆ ಲೇಖಕರು ಬೊಟ್ಟುಮಾಡಿ ತೋರಿಸುತ್ತಾರೆ. ಅಲ್ಲಿಂದಾಚೆಗೆ ಉಪನಿಷತ್ ಕಾಲಕ್ಕೆ ಹೋಗಿ ಯಾಜ್ಞವಲ್ಕ ಮುಂತಾದ ಋಷಿಗಳ ತತ್ತ್ವಮಸಿ, ಅಹಂಬ್ರಹ್ಮಾಸ್ಮಿ ಎಂಬ ಋಷಿಚಿಂತನೆಗಳನ್ನು ಇಂದಿನ ಕಾಲಕ್ಕೆ ಅನ್ವಯಿಸಿ ಮಾತನಾಡುತ್ತಾರೆ. ಮೆಕಾಲೆ ಮಹಾಶಯ ಇಂಗ್ಲಿಷ್ ಭಾಷೆಯನ್ನು ನಮ್ಮ ದೇಶದಲ್ಲಿ ಬಿತ್ತುವ ಮೂಲಕ, ಸಹಸ್ರಾರು ಪಾರಂಪರಿಕ ಗುರುಕುಲಗಳು ನಾಶವಾಗಿ, ತನ್ಮೂಲಕ ಸಂಸ್ಕೃತ ಶಿಕ್ಷಣ ನಾಶವಾಗಿದ್ದಕ್ಕೆ ಲೇಖಕರು ಅಪಾರವಾಗಿ ನೊಂದುಕೊಳ್ಳುತ್ತಾರೆ. 

ಈ ಪುಸ್ತಕದ ಪ್ರತಿ ಪುಟವೂ ಮೌಲ್ಯಯುತ ಪ್ರತಿ ಅಧ್ಯಾಯದ ಕೊನೆಯಲ್ಲಿ ಉಳಿವ ಜಾಗದಲ್ಲಿ ಜಗದ ಉದಾತ್ತ ಚಿಂತಕರ ನುಡಿ ಮತ್ತುಗಳನ್ನು ಮುದ್ರಿಸಿದ್ದಾರೆ .ಓದುಗರಿಗೆ ಅವು ಬೋನಸ್!  ಇಂತಹ ಅಮೂಲ್ಯ ಕೃತಿ ಮೌಲ್ಯಗಳ ಅಧಃಪತನದ  ಇಂದಿನ ಸಮಾಜಕ್ಕೆ ಪಂಜು ಇದ್ದಂತೆ ಆ ಪಂಜನಿಡಿದು ಸಾಧ್ಯವಾದಷ್ಟು ನಮ್ಮ ದಾರಿಯಲ್ಲಿ ಬೆಳಕು ಪಡೆದು ಇತರರಿಗೂ ಬೆಳಕು ನೀಡಲು ಈ ಪುಸ್ತಕವನ್ನು ಎಲ್ಲರೂ ಕೊಂಡು ಓದೋಣ.ನಮ್ಮ ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯೋಣ .ಉತ್ತಮ ನಾಗರೀಕರಾಗೋಣ.

ಪುಸ್ತಕದ ಹೆಸರು: ವಂದೇ ಭಾರತಂ
ಲೇಖಕರು: ಎಸ್ ರೇಣುಕಾರಾಧ್ಯ.
ಪ್ರಕಾಶನ : ದಾಸೇನ ಹಳ್ಳಿ ಎಸ್ ರೇಣುಕಾರಾಧ್ಯ. ತುಮಕೂರು
ಬೆಲೆ: 330.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529


ವಿ ವಿ ಸಾಗರದ ಕೋಡಿ


 


ಪ್ರವಾಸ ೨ 

ವಿ ವಿ ಸಾಗರದ  ಕೋಡಿ.


ನನ್ನಣ್ಣ ಪದೇ ಪದೇ ಫೋನ್ ಮಾಡಿ ಮಾರಿಕಣಿವೆ ನೋಡಲು ಯಾವಾಗ ಬರ್ತಿರಾ? ಎನ್ನುತ್ತಿದ್ದ  ನನಗೆ ಹೋಗಲು ಆಸೆಯಿದ್ದರೂ ಮಕ್ಕಳ ಶಾಲೆ, ಪರೀಕ್ಷೆ, ಲ್ಯಾಬ್ ಹೀಗೆ ಪದೇ ಪದೇ ಮುಂದೂಡಿ ಕೊನೆಗೆ ನಾನೊಬ್ಬನೇ ಶನಿವಾರದ ಶಾಲೆಯ ಅವಧಿಯ ನಂತರ ಕಾರಿನ ಸ್ಟೇರಿಂಗ್ ಹಿಡಿದು ತುಮಕೂರಿನಿಂದ  ಹೈವೆಯಲ್ಲಿ ದುರ್ಗದ ಕಡೆ ಪಯಣ ಆರಂಭಿಸಿಯೇಬಿಟ್ಟೆ .ಮಾರ್ಗ ಮಧ್ಯ ಅಣ್ಣ ಕರೆ ಮಾಡಿ ತಾನು ಮಾರಿಕಣಿವೆಯ ಬಳಿ ಬಂದಿರುವುದಾಗಿ ತಿಳಿಸಿದ. ಹಿರಿಯೂರಿನಲ್ಲಿ ಕಾರ್ ನಿಲ್ಲಿಸಿ ವಿಶ್ರಾಂತಿ ಪಡೆದು ಟೀ ಕುಡಿದು ನಾನು ಮೊದಲು ಶಿಕ್ಷಕನಾಗಿ ಕೆಲಸ ಮಾಡಿದ ಹುಚ್ಚವ್ಬನ ಹಳ್ಳಿಯ ಶಾಲೆಯ ನೋಡಿ.ಹಳೆಯ ನೆನಪುಗಳ ಮೆಲುಕು ಹಾಕುತ್ತಾ  ಮಾಯಸಂದ್ರ ,ಬೀರೇನಹಳ್ಳಿ ,ಭರಂಗಿರಿ ದಾಟಿ ಮಾರಿಕಣಿವೆಗೆ ಸೇರಿದಾಗ ಬಾಲ್ಯದಲ್ಲಿ ನೋಡಿದ ಜಾತ್ರೆಯ ಜನದ ನೆನಪಾಯಿತು. ವಾಹನಗಳ ಸ್ಲೋ ಮೂವಿಂಗ್ ಟ್ರಾಪಿಕ್ ನಲ್ಲಿ ಕಣಿವೆ ಮಾರಮ್ಮನ ದೇವಾಲಯ ಸೇರಿದ್ದು ಹರಸಾಹಸ ಮಾಡಿದಂತಾಗಿತ್ತು. 

ಅಣ್ಣ ಅತ್ತಿಗೆಯ ಜೊತೆಗೂಡಿ ಕಣಿವೆ ಮಾರಮ್ಮನ ದರ್ಶನ ಪಡೆದು ಬೆಟ್ಟದ ಮೇಲೇರಿದಾಗ ಹೊಟ್ಟೆ ತಾಳ ಹಾಕುತ್ತಿತ್ತು . ಅಮ್ಮ ಕಟ್ಟಿಕೊಟ್ಟಿದ್ದ  ನನ್ನ ಫೇವರಿಟ್ ಅನ್ನ ಮೊಸರ ಬುತ್ತಿಯ ಜೊತೆಯಲ್ಲಿ ಅಣ್ಣ ಆಗ ತಾನೆ ತಂದ ಬಿಸಿ ಬೋಂಡಾದ ಜೊತೆಯಲ್ಲಿ 89 ವರ್ಷಗಳ ನಂತರ ಸಂಪೂರ್ಣವಾಗಿ ತುಂಬಿದ ವಿ ವಿ ಸಾಗರದ ನೀರು ನೋಡುತ್ತಾ  ತಿನ್ನಲು ಶುರು ಮಾಡಿದೆವು .ಸ್ವರ್ಗ ಮೂರೇ ಗೇಣು! 


 1933ರ ಬಳಿಕ  ಮಾರಿ ಕಣಿವೆ ಡ್ಯಾಂ ಕೋಡಿ ಬಿದ್ದಿದ್ದು, ಅಂದು ಶನಿವಾರ ರಜೆ ದಿನವಾಗಿದ್ದರಿಂದ ಡ್ಯಾಂ ನೋಡಲು ಜನಸಾಗರವೇ ಹರಿದು ಬಂದಿತ್ತು.

ಬೆಳಗ್ಗೆಯಿಂದಲೇ ಪ್ರವಾಸಿಗರು ಜಲಾಶಯದ ಕಡೆ ಮುಖ ಮಾಡಿದ್ದು, ಜಲಾಶಯ, ಮಾರಿ ಕಣಿವೆ ಮಾರಮ್ಮ ದೇವಸ್ಥಾನ, ಪಾರ್ಕ್, ಪ್ರವಾಸಿ ಮಂದಿರ, ಕೋಡಿ ಬಿದ್ದಿರುವ ಜಾಗ ಹಾಗೂ ಹಾರನ ಕಣಿವೆ ರಂಗನಾಥ ಸ್ವಾಮಿ ದೇವಸ್ಥಾನ ಸೇರಿದಂತೆ ಡ್ಯಾಂ ಸುತ್ತ ಮುತ್ತಲಿನ ಪ್ರದೇಶದಲ್ಲಿ ಪ್ರವಾಸಿಗರೇ ತುಂಬಿ ತುಳುಕುತ್ತಿದ್ದರು.


ಪ್ರವಾಸಿಗರು ದೂರದ ಊರುಗಳಿಂದ ಜಲಾಶಯ ನೋಡಲು ಬಂದಿದ್ದರು. ಕುಟುಂಬದ ಸದಸ್ಯರು ಮತ್ತು ಮಕ್ಕಳು, ಸ್ನೇಹಿತರು, ಪ್ರೇಮಿಗಳು ಸೇರಿದಂತೆ ಮತ್ತಿತರರು ಜಲಾಶಯಕ್ಕೆ ಆಗಮಿಸಿದ್ದರು. ಅಂದಾಜು 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಜಲಾಶಯ ನೋಡಲು ಬಂದಿದ್ದರು. ಆಟೋ, ಕಾರು, ಬೈಕ್, ಬಸ್, ಇನ್ನಿತರ ವಾಹನಗಳಲ್ಲಿ  ಚಿತ್ರದುರ್ಗ, ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಚಿಕ್ಕಮಗಳೂರು, ತುಮಕೂರು ಸೇರಿದಂತೆ ಮತ್ತಿತರರ ಜಿಲ್ಲೆಗಳಿಂದ ಪ್ರವಾಸಿಗರು ಆಗಮಿಸಿದ್ದರು.

ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರಿಂದ ಜಲಾಶಯದ ಸರ್ಕಲ್‌ನಿಂದ, ಮಾರಿಕಣಿವೆ ಗ್ರಾಮ, ಕೋಡಿ ಬೀಳುವ ಜಾಗ ಹಾಗೂ ಹೊಸದುರ್ಗ ರಸ್ತೆ ಸೇರಿದಂತೆ ಸುಮಾರು 3 ಕಿಲೋ ಮೀಟರ್ ದೂರದವರೆಗೂ ಟ್ರಾಫಿಕ್ ಜಾಮ್ ಜಾಮ್ ಉಂಟಾಗಿತ್ತು.   ಸಿಂಗಲ್ ರಸ್ತೆ ಹಾಗೂ ಚಿಕ್ಕ ರಸ್ತೆ ಇರುವುದರಿಂದ ಗಂಟೆ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಜಲಾಶಯದ ನೀರು ಕೋಡಿ ಹೋಗುವ ಜಾಗದ ನೀರಿನಲ್ಲಿ ಪ್ರವಾಸಿಗರು ನೆನೆದು ಮಿಂದೆದ್ದರು. ಕೆಲವರು ಕೈಕಾಲು ಮುಖ ತೊಳೆದರೆ, ಇನ್ನು ಕೆಲವರು ಸ್ನಾನವನ್ನೇ ಮಾಡಿದರು. ಇನ್ನು ಕೆಲವರು ಸೆಲ್ಫೀ, ಫೋಟೋ, ವೀಡಿಯೋ ತೆಗೆಯುವುದರಲ್ಲಿ ನಿರತರಾಗಿದ್ದರು. ಸಾಮಾನ್ಯವಾಗಿ ಮೊದಲು ಯಾವುದಾದರೂ ಪ್ರವಾಸಿ ಸ್ಥಳಗಳನ್ನು ನೋಡುವಾಗ ನಾನು ಪೋಟೊ ತೆಗೆಯಲು ಹೋದರೆ " ಅದೇನ್ ಪೋಟೋ ಹುಚ್ ನಿನಿಗೆ ,ಬಾರಪ್ಪ ಸಾಕು" ಎನ್ನುತ್ತಿದ್ದ ನನ್ನಣ್ಣ " ಇಗ ಇಲ್ಲೊಂದು ಪೋಟಾ ಹೊಡ್ಕ, ಇಗ ಇಲ್ಲಿ ತೆಗಿ, ಬಾರೆ ಮಂಗಳ " ಎಂದು ಅತ್ತಿಗೆಯ ಜೊತೆಗೆ ಪೋಸ್ ಕೊಟ್ಟು ನಗುತ್ತಾ ನಿಂತು ಬಿಡುತ್ತಿದ್ದ ಸಾಲದ್ದಕ್ಕೆ " ಎಲ್ಲಿ ತೋರ್ಸು  ಎಂಗ್ ಬಂದೈತೆ ಪೋಟಾ? " ಎಂದು ಚೆಕ್ ಮಾಡುತ್ತಿದ್ದ. 


ಡ್ಯಾಂ ಮೇಲೆ ಪೋಲಿಸ್ ಕಾವಲಿತ್ತು ಯಾರನ್ನೂ ಬಿಡುತ್ತಿರಲಿಲ್ಲ ದೂರದಿಂದಲೇ ಫೋಟೋ ತೆಗೆದುಕೊಂಡು ಬರುವಾಗ ಯಾರೋ ಡ್ಯಾಂ ಬಗ್ಗೆ  ಮಾತನಾಡು‌ವುದು ಕಿವಿಯ ಮೇಲೆ ಬಿತ್ತು ಆಗ ನಾನು ಓದಿದ ವಿಷಯ ನೆನಪಾಯಿತು.


ಚಿಕ್ಕಮಗಳೂರು ಜಿಲ್ಲೆಯ ಬಾಬು ಬುಡನ್ ಗಿರಿ ಕಂದಕಗಳಲ್ಲಿ ಜನಿಸುವ ವೇದಾ ಎಂಬ ನದಿ ಕಡೂರಿನ ಬಳಿ ಅವತಿ ನದಿಯನ್ನು ಸೇರುತ್ತದೆ. ಅವು ಮುಂದೆ 'ವೇದಾವತಿ' ನದಿಯಾಗಿ ಹರಿಯುತ್ತದೆ. ಚಿತ್ರದುರ್ಗದ ಹಿರಿಯೂರು ತಾಲೂಕಿನ ವಾಣಿ ವಿಲಾಸಪುರದ ಬಳಿ ಎರಡು ಗುಡ್ಡಗಳ ಮಧ್ಯೆ ನಿರ್ಮಿಸಿರುವ ಜಲಾಶಯವೇ ಮಾರಿಕಣಿವೆ ಡ್ಯಾಂ.

ಇನ್ನೂ ವಾಣಿ ವಿಲಾಸ ಸಾಗರವನ್ನು ಆರ್ಕಿಟೆಕ್ಚರಲ್ ಮಾಸ್ಟರ್ ಪೀಸ್ ಎಂದು ಗುರುತಿಸಲಾಗಿದೆ. ಈ ಅಣೆಕಟ್ಟನ್ನು 1897ರಲ್ಲಿ ಮೈಸೂರು ಮಹಾ ರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಕೆಂಪರಾಜಮ್ಮಣಿ ಆದೇಶದ ಮೇರೆಗೆ 'ತಾರಾ ಚಾಂದ್ ದಲಾಲ್' ಎಂಬ ಇಂಜಿನಿಯರ್ ನೇತೃತ್ವದ ತಂಡವು ನಿರ್ಮಿಸಿತ್ತು. ಆಗಿನ ಮೈಸೂರು ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಅವರ ಮುಂದಾಳತ್ವದಲ್ಲಿ ನಿರ್ಮಿಸಿ 1907ರಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿದ್ದರು. ಅಲ್ಲದೇ ಕೆಆರ್‌ಎಸ್ ಅಣೆಕಟ್ಟು ನಿರ್ಮಾಣಕ್ಕೆ ವಾಣಿ ವಿಲಾಸ ಸಾಗರದ ನೀಲಿನಕ್ಷೆಯೇ ಮೂಲ ಎಂದು ಹೇಳಲಾಗುತ್ತದೆ.

89 ವರ್ಷಗಳ ಬಳಿಕ ಬಹುತೇಕ ಭರ್ತಿಯಾದ ವಾಣಿ ವಿಲಾಸ ಸಾಗರ ಜಲಾಶಯ ಕೋಡಿ ಬಿದ್ದಿರುವುದು ಜನತೆಯಲ್ಲಿ ಅತೀವ ಸಂತಸ ಉಂಟುಮಾಡಿದೆ.


ನೀವು ಈ ಕೌತುಕ ಕಣ್ತುಂಬಿಕೊಳ್ಳಲು 

ಜಲಾಶಯ ದೃಶ್ಯ ಸವಿಯಲು ಒಮ್ಮೆ ಭೇಟಿ ನೀಡಿ.

ಹೊಸಬರಿಗೆ  ಈ ಜಲಾಶಯ ತಲುಪಲು ಮಾರ್ಗ ಹೀಗಿದೆ 

 ಹಿರಿಯೂರು ನಗರದಿಂದ ಹೊಸದುರ್ಗ ರಸ್ತೆ ಮಾರ್ಗವಾಗಿ, 21 ಕಿಲೋ ಮೀಟರ್ ದೂರದ ಎಡಭಾಗಕ್ಕೆ ಬಂದರೆ ಜಲಾಶಯವನ್ನು ತಲುಪಬಹುದು. ಬೆಂಗಳೂರು, ತುಮಕೂರಿನಿಂದ ಹಿರಿಯೂರು ನಗರದ ಮೂಲಕ ಜಲಾಶಯವನ್ನು ಪ್ರವೇಶಿಸಬಹುದು. ಹುಬ್ಬಳ್ಳಿ, ದಾವಣಗೆರೆಯಿಂದ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬಲಭಾಗದ ವಾಣಿ ವಿಲಾಸಪುರ ಕ್ರಾಸ್ ಮೂಲಕ ಬಂದು ಡ್ಯಾಂ ವೀಕ್ಷಿಸಬಹುದಾಗಿದೆ. 


ನಾವು ಡ್ಯಾಂ ನೋಡಿದ ಬಳಿಕ ಕೋಡಿ ಬಿದ್ದ ಸ್ಥಳಕ್ಕೆ ಹೊರಟೆವು ಅಲ್ಲಿಯೂ ಜನಜಂಗುಳಿ ,ಆಗ ತಾನೆ ಶುರುವಾದ ತುಂತುರು ಮಳೆ ,ಹಸಿರೊದ್ದ ಗುಡ್ಡ ಇವು ಮಲೆನಾಡ ದೃಶ್ಯಗಳನ್ನು ನೆನಪು ಮಾಡಿದವು. ನಂತರ ಹಾರನ ಕಣಿವೆ ರಂಗನಾಥಸ್ವಾಮಿಯ  ದರ್ಶನ ಪಡೆದು ದೇವಾಲಯದ ಹಿಂಭಾಗಕ್ಕೆ ಬಂದು ನೋಡಿದಾಗ ವಾಣಿ ವಿಲಾಸ "ಸಾಗರ " ನಿಜವಾಗಿಯೂ ಅನ್ವರ್ಥವಾಗಿ ಬಯಲು ಸೀಮೆಯಲ್ಲಿ ಸಾಗರ ನೋಡಿದ ಅನುಭವವಾಯಿತು.  ನಿಧಾನವಾಗಿ ಸೂರ್ಯ ದೇವ ಸಾಗರದಲ್ಲಿ ಲೀನವಾದ .ಮಳೆಯ ಮಧ್ಯದಲ್ಲೇ ಬೇವಿನಹಳ್ಳಿಯ ಕಡೆ ಹೊರಟೆವು . ಬೇವಿನಹಳ್ಳಿಗೆ ಸಂಪರ್ಕ ರಸ್ತೆ  ನೀರಿನಿಂದ  ಮುಳುಗಡೆಯಾದ ಪರಿಣಾಮವಾಗಿ ಕಾಡಿನ ದಾರಿಯಲ್ಲಿ ಕಾರ್ ಚಲಾಯಿಸುವ ಸಾಹಸ ಮಾಡುತ್ತಾ ಹೊರಟೆ. ಕಾರ್ ನ ಕೆಳ ಭಾಗಕ್ಕೆ ಕಡ್ಡಿಗಳು ಪಟ ಪಟ ಬಡಿಯುವಾಗ ಕೆಲವೊಮ್ಮೆ ಆತಂಕವಾಗುತ್ತಿತ್ತು.  ಏಳು ಕಿಲೋಮೀಟರ್ ಕ್ರಮಿಸಲು ಅರ್ಧ ಗಂಟೆಯಾಗಿತ್ತು. ಅಂತೂ ಬೇವಿನಳ್ಳಮ್ಮನ ಗುಡ್ಡ ಏರಿ ತಾಯಿಯ ದರ್ಶನ ಪಡೆದಾಗ ರಾತ್ರಿ ಏಳು ಗಂಟೆ ! ಅಲ್ಲಿಂದ ವಿ ವಿ ಸಾಗರದ ಅದ್ಭುತವಾದ ದೃಶ್ಯಗಳನ್ನು ನೋಡುವ ನಮ್ಮ ಆಸೆ ಈಡೇರಲಿಲ್ಲ. ಅದೇ ದುರ್ಗಮ ದಾರಿಯಲ್ಲಿ ಹಿಂತಿರುಗಿ ಮಾಡದಕೆರೆಯ ಮಾರ್ಗವಾಗಿ ಚೌಡಗೊಂಡನಹಳ್ಳಿಯ ನಮ್ಮ   ಮನೆ ತಲುಪಿದಾಗ ರಾತ್ರಿ  ಎಂಟೂವರೆ.ಅಮ್ಮ ಬಿಸಿ ಬಿಸಿ ಮುದ್ದೆ ಮಾಡಿಕೊಟ್ಟರು ಹೊಟ್ಟೆ ತುಂಬಾ ಮುದ್ದೆ ಉಂಡು ನಾನು ಮಲಗಲು ಸಿದ್ದನಾದೆ ನನ್ನಣ್ಣ ಮೊಬೈಲ್ ನಲ್ಲಿ ಇದ್ದ ಮಾರಿಕಣಿವೆಯ ಫೋಟೋಗಳನ್ನು ಮತ್ತೊಮ್ಮೆ ನೋಡಿ ಖುಷಿಪಡುತ್ತಿದ್ದ.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

24 ಸೆಪ್ಟೆಂಬರ್ 2022

ಜಿ ಎಸ್ ಬಸವರಾಜು

 



ನಾನು ಕಂಡ ಸಂಸದ ಜಿ ಎಸ್ ಬಸವರಾಜ್.


ಸರಳ ಸಜ್ಜನ ರಾಜಕಾರಣಿಗಳು ಇತ್ತೀಚಿನ ದಿನಗಳಲ್ಲಿ ಕಾಣಸಿಗುವುದೇ ಅಪರೂಪ. ನಮ್ಮ ಮಧ್ಯ ಇರುವ ಜಿ ಎಸ್ ಬಸವರಾಜು ರವರು ಇದಕ್ಕೆ ಅಪವಾದ .  ಪಂಚಗೆಲುವುಗಳನ್ನು ಪಡೆದು ಲೋಕಸಭೆಗೆ ಆಯ್ಕೆಯಾದ ಬಸವರಾಜು ರವರು ಪ್ರಸ್ತುತ ಲೋಕಸಭಾ ಸದಸ್ಯರೂ ಕೂಡಾ ಹೌದು. ಅವರ ನೇರ ಮತ್ತು ದಿಟ್ಟ ಮಾತುಗಳು ನನಗೆ ಬಹಳ ಇಷ್ಟ . ಸಮಾರಂಭಗಳಲ್ಲಿ ಆಡಂಬರದ ಪದಗಳ ಬಳಕೆ ಮಾಡದೆ ಸಾಮಾನ್ಯ ಜನರಿಗೆ ಅರ್ಥವಾಗುವ ಅವರ ಮಾತುಗಳು  ಹಳ್ಳಿಯ ಜನರಿಗೆ ಅಚ್ಚುಮೆಚ್ಚು ಎಂದೇ ಹೇಳಬೇಕು. ಅವರ ಮನೆಯ ಮುಂದೆ ಪ್ರತಿದಿನ ಮುಂಜಾನೆ ಕಂಡು ಬರುವ ಜನರ ಗುಂಪು,ಹಾಗೂ ಆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ರೀತಿಯು ಜನರ ಮನ ಗೆದ್ದಿದೆ. 


"ನನ್ನ ಮಗಳಿಗೆ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರವೇಶ ಬೇಕಾಗಿತ್ತು. ಬಸವರಾಜಣ್ಣ ಅವರ ಬಳಿ ಹೋಗಿ ಎಂ .ಪಿ ಕೋಟಾ ಅಡಿಯಲ್ಲಿ ಸೀಟು ಕೊಡಿಸಲು ಕೇಳಿದಾಗ ತಕ್ಷಣವೇ ಪತ್ರ ಕೊಟ್ಟರು.ನನ್ನ ಮಗಳೀಗ  ಕೆ ವಿ ನಲ್ಲಿ ಮೂರನ ತರಗತಿಯಲ್ಲಿ ಓದುತ್ತಿದ್ದಾಳೆ. ನಾನು ಯಾವಾಗಲೂ ಬಸವರಾಜಣ್ಣ ನವರಿಗೆ ಚಿರ ಋಣಿಯಾಗಿರುವೆ "  ಎಂದು ತಮಗೆ ಒಳಿತು ಮಾಡಿದ ಜಿ ಎಸ್ ಬಿ ರವರ ಬಗ್ಗೆ  ತುಮಕೂರು ನಗರದ ಗೋಕುಲ ಬಡಾವಣೆಯ ನಿವಾಸಿಗಳಾದ ಮುನಿ ಬಸವರಾಜು ರವರ ಮಾತುಗಳನ್ನು ಕೇಳಿದಾಗ  ಜಿ ಎಸ್ ಬಿ ರವರ ಬಗ್ಗೆ ಗೌರವ ಬರದೇ ಇರದು. 

ಗಂಗಸಂದ್ರ ಸಿದ್ದಪ್ಪ ಬಸವರಾಜ್ ರವರು ಜಿ ಎಸ್ ಬಿ ಆಗಿ ಬೆಳೆದದ್ದೇ ಒಂದು ರೋಚಕ ಕಥೆ.ಸ್ವಾತಂತ್ರ್ಯಕ್ಕೆ ಪೂರ್ವದಲ್ಲಿ ಅಂದರೆ  1941ರಲ್ಲಿ ಜನಿಸಿದ ಅವರು 1960 ರಲ್ಲಿ  ಪಿ ಎಲ್ ಡಿ ಬ್ಯಾಂಕ್ ಸದಸ್ಯರಾಗಿ   ರಾಜಕೀಯ ಪಾದಾರ್ಪಣೆ ಮಾಡಿದರು .ಎ.ಪಿ ಎಂ ಸಿ ಅಧ್ಯಕ್ಷರಾದಾಗ ರಾಜಕೀಯ ಪಕ್ಷಗಳು ಅವರ ಸೇವೆಯನ್ನು ಗಮನಿಸಿದವು. ಜನರ ಮನಗೆಲ್ಲುತ್ತಾ ಲೋಕ ಸಭಾ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವುದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಿಡಿದ ಕನ್ನಡಿ ಎಂದೇ ಹೇಳಬಹುದು. 

  2019 ರಲ್ಲಿ ತುಮಕೂರು ಲೋಕಸಭಾ  ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ. ಅವರು ತಮ್ಮ ರಾಜಕೀಯ ಜೀವನವನ್ನು ಕಾಂಗ್ರೆಸ್ನೊಂದಿಗೆ ಪ್ರಾರಂಭಿಸಿದರು ಮತ್ತು ಈಗ ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದಾರೆ . ಅವರು 2019 ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸುಮಾರು 15,000 ಮತಗಳ ಅಂತರದಿಂದ ಮಾಜಿ ಪ್ರಧಾನಿ ಶ್ರೀ ಎಚ್ ಡಿ  ದೇವೇಗೌಡರನ್ನು ಸೋಲಿಸಿದರು . ಅವರು ತುಮಕೂರಿನಿಂದ ಐದು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ, 1984, 1989 ಮತ್ತು 1999 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿ, ಮತ್ತು 2009 ಮತ್ತು 2019 ರಲ್ಲಿ ಬಿಜೆಪಿ ಸದಸ್ಯರಾಗಿ. ಆಯ್ಕೆಯಾಗಿ ಈಗಲೂ ಜನಸೇವೆಯಲ್ಲಿ ತೊಡಗಿದ್ದಾರೆ.   


ಸಿದ್ದರಬೆಟ್ಟದ ಶ್ರೀರಂಭಾಪುರಿ ಶಾಖಾಮಠದ ಶ್ರೀವೀರಭದ್ರ ಶಿವಾಚಾರ್ಯಸ್ವಾಮೀಜಿಗಳು ಜಿ ಎಸ್ ಬಿ  ರವರ ಸಾಧನೆಗಳ ಬಗ್ಗೆ ಮುಕ್ತ ಕಂಟದಿಂದ ಹೀಗೆ ಶ್ಲಾಘಿಸುತ್ತಾರೆ. "ತುಮಕೂರು ಜಿಲ್ಲೆಯಲ್ಲಿ ಯಾವುದೇ ನದಿಗಳು ಇಲ್ಲದಿದ್ದರೂ ನೀರಾವರಿ ಯೋಜನೆಗಳು ಚಾಲ್ತಿಯಲ್ಲಿದ್ದರೆ ಅದಕ್ಕೆ ಜಿ.ಎಸ್.ಬಸವರಾಜು ಕಾರಣ.ಇಂದಿನ ಎತ್ತಿನಹೊಳೆ ಯೋಜನೆಯ ಹಿಂದೆ ಜಿ.ಎಸ್.ಬಸವರಾಜು ಅವರ ಪಾತ್ರ ಮಹತ್ವದ್ದಾಗಿದೆ.ಧಾರ್ಮಿಕವಾಗಿ,ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಲವಾರು ಮಹತ್ವದ ಕಾರ್ಯಗಳನ್ನು ಜಿ.ಎಸ್.ಬಸವರಾಜು ಮಾಡಿದ್ದು, ಇವರ ಈ ಸೇವೆಯನ್ನು ಪರಿಗಣಿಸಿಯೇ ಶ್ರೀರಂಭಾಪುರಿ ಕ್ಷೇತ್ರ ಮಾನ್ಯರಿಗೆ ಶ್ರೀರೇಣುಕಾ ಚಾರ್ಯ ಪ್ರಶಸ್ತಿ ನೀಡಿ ಗೌರವಿಸಿದೆ".


ಜನಪರ ಕಾಳಜಿಯ ಜಿ ಎಸ್ ಬಿ  ರವರು ಇನ್ನೂ ಹೆಚ್ಚಿನ ಜನಸೇವೆ ಮಾಡಲು ದೇವರು ಅವರಿಗೆ ಆಯುರಾರೋಗ್ಯ ಭಾಗ್ಯ ಕರುಣಿಸಲಿ ಎಂದು ಮನದುಂಬಿ ಹಾರೈಸುವೆ.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529.