11 ಆಗಸ್ಟ್ 2022

ಅರುಣೋದಯ


 ಅರುಣೋದಯ


ಅರುಣೋದಯ



ಕತ್ತಲಲಿ ಬಳಲಿ

ತೊಳಲಾಡುತ್ತಿದ್ದೆ

ಒಬ್ಬಂಟಿಯಾದ ನನ್ನ

ಕಾಡುತ್ತಿತ್ತು ಭಯ |

ನೀ ಬಂದೆ ನನ್ನ

ಬಾಳಲ್ಲಿ ಅಂದಿನಿಂದ 

ಅರುಣೋದಯ ||


#ಸಿಹಿಜೀವಿ

09 ಆಗಸ್ಟ್ 2022

ಬಂದು ಬಿಡು ಅಮ್ಮ.....

 ನಾನು  ಚಿಕ್ಕವನಿದ್ದಾಗ ಹೆದರಿಸುತ್ತಿದ್ದೆ

ಅಗೋ ಬಂತು ನೋಡು ಗುಮ್ಮ |

ದೊಡ್ಡವನಾಗಿರುವೆ.... ಈಗಲೂ 

ಭಯವಾಗುತ್ತಿದೆ ನನ್ನೇಕೆ ಬಿಟ್ಟುಹೋದೆ

ಬೇಗ ಬಂದು ಬಿಡು ಅಮ್ಮಾ ||


ಸಿಹಿಜೀವಿ 

ನಮ್ಮ ಧ್ವಜ ...


 #ನಮ್ಮ_ರಾಷ್ಟ್ರಧ್ವಜ 


ಧ್ವಜವೆಂದರೆ ಬಟ್ಟೆಯಲ್ಲ

ಮಹಾನ್ ಅಸ್ಮಿತೆ ,ಅದು

ಹೊಂದಿದೆ ಕೇಸರಿ ಬಿಳಿ ಹಸಿರು |

ಮನೆ ಮನೆಯಲೂ ಹಾರಾಡಿಸಿ

ತೋರಿಸುವೆವು  ಧ್ವಜವು ಭಾರತೀಯರ ಉಸಿರು ||


#ಸಿಹಿಜೀವಿ 


07 ಆಗಸ್ಟ್ 2022

ಅಂದನಾ ತಿಂಮ..


ವಿಮರ್ಶೆ ೫೦

ಅಂದನಾ ತಿಂಮ

ಬೀಚಿ ಪ್ರಕಾಶನದಿಂದ ಹೊರಬಂದಿರುವ ಅಂದನಾ ತಿಂಮ ಪುಸ್ತಕ ಬೀಚಿಯರೇ ಹೇಳುವಂತೆ ಇದು ಅವರ ಐವತ್ತೊಂದನೇ ಅಪರಾಧ .ಈ ಪುಸ್ತಕ ಓದಿದ ಅಪರಾಧಕ್ಕೆ ನನಗೆ ನಿಜವಾಗಿಯೂ ಬಹಳ ಸಂತಸದ ಶಿಕ್ಷೆ ಲಭಿಸಿತು ಎಂದು ಹೇಳಲು ಸಂತಸವಾಗುತ್ತದೆ .
ಪುಸ್ತಕ ವಿಮರ್ಶಾ ಕಾರ್ಯದಲ್ಲಿ ಇದು ನನಗೆ ಸುವರ್ಣ ಸಂಭ್ರಮ ನಾನು ಓದಿ ನನ್ನ ಅನಿಸಿಕೆ ಬರೆವ ಕಾರ್ಯದಲ್ಲಿ ಇದು ಐವತ್ತನೇ ಪುಸ್ತಕ! ನೂರಾರು ಪುಸ್ತಕ ಓದಿದ್ದರೂ ಕೆಲವೇ ಪುಸ್ತಕಗಳ ಬಗ್ಗೆ ಅನಿಸಿಕೆ ಬರೆಯುವ ಮನಸಾಗಿ ಅದು ಐವತ್ತು ತಲುಪಿದೆ. ಬೀಚಿಯವರ ಪುಸ್ತಕಕ್ಕೆ ವಿಮರ್ಶೆ ಬರೆಯಲು ಎಂಟೆದೆ ಬೇಕು .ನಾನು ಕೇವಲ ಅವರ ಪುಸ್ತಕದ ಬಗ್ಗೆ ನಾಲ್ಕು ಅಭಿಪ್ರಾಯ ಹೇಳಬಹುದು.
ಅಂದನಾ ತಿಂಮ  ಮುಕ್ತಕ, ಹನಿಗವನ, ಕವನ ಮುಂತಾದ ಪ್ರಕಾರಗಳ ಪುಸ್ತಕ .ಎಂದಿನಂತೆ ತಮ್ಮ ಮೊನಚು ವಿಡಂಬನಾತ್ಮಕ ಬರಹ ನಮ್ಮನ್ನು ಸೆಳೆಯುತ್ತದೆ.
ಬೀಚಿಯವರೇ ಹೇಳಿರುವಂತೆ ಕೃತಿ ರಚನೆ ಬರೆಯುವವರು  ತಮ್ಮ ಆತ್ಮ ತೃಪ್ತಿಗಾಗಿ ಮಾಡುವ ಕಾಯಕ ಓದುಗರ ಪ್ರಶಂಸೆ ಮತ್ತು ವಿಮರ್ಶೆ ನಂತರದ ಪ್ರಕ್ರಿಯೆ.
ಸಮಾಜದ ಹಲವಾರು ಮುಖಗಳನ್ನು, ಅರ್ಥಾತ್ ನನ್ನ ಮನದ ಏರಿಳಿತಗಳನ್ನು ಈ ಕೃತಿಯಲ್ಲಿ ಪ್ರತಿಬಿಂಬಿಸಲು ಪ್ರಯತ್ನ ಮಾಡಿದ್ದೇನೆ. ಆದರೆ, ಸಾಧಿಸಿದ್ದೆಷ್ಟು ? ಇದಕ್ಕೆ ಉತ್ತರ, ಕನ್ನಡ ರಸಿಕ ಓದುಗರಲ್ಲಿದೆ. ಈ ಎಲ್ಲವೂ ಮೇರು ಪರ್ವತದಂತಹ ಮಹಾಕೃತಿಗಳೊ ? ಆಚಂದ್ರಾರ್ಕವಾಗಿ ಸದಾ ಇವು ಉಳಿಯುತ್ತವೆಯೇ ? ಅಥವಾ ಇವೆಲ್ಲವೂ ಒಂದು ದೊಡ್ಡ ಕಸದ ಬುಟ್ಟಿಗೆ ಅನ್ನವಾಗುತ್ತವೆಯೇ ? ಈ ಪ್ರಶ್ನೆಗಳಿಗೆ ಉತ್ತರವನ್ನು ಹೇಳುವ ಅಧಿಕಾರ ಯಾರಾದರೊಬ್ಬ ವ್ಯಕ್ತಿಗೆ ಇಲ್ಲ ಎಂಬುದಾದರೆ ಆ ವ್ಯಕ್ತಿ ನಾನು. ನನ್ನ ಕೃತಿಯ ಬೆಲೆಯನ್ನು ನಾನೇ ಕಟ್ಟಲೇ ? ಕಾಲರಾಯ ತನ್ನ ಜರಡಿಯನ್ನು ಸದಾ ಆಡಿಸುತ್ತಲೇ ಇರುತ್ತಾನೆ, ಹುಟ್ಟಿದುದೆಲ್ಲವೂ ಅದರಲ್ಲಿ ಬೀಳಲೇಬೇಕು ಇದು ಪ್ರಕೃತಿಯ ನಿಯಮ.  ಹಾರಿಹೋದುದು ಜೊಳ್ಳು, ಉಳಿದುದು ಕಾಳು. ಇಂದು ಜೊಳ್ಳಾಗಿ ಕಂಡುದುದು ನಾಳೆ ಕಾಳಾದೀತು, ಇಂದು ಕಾಳಾಗಿ ಕಂಡುದುದು ನಾಳೆ ಜೊಳ್ಳಾದೀತು. ಮೌಲ್ಯವನ್ನು ಮುಂದಿನ ಪೀಳಿಗೆ ನಿರ್ಧರಿಸುತ್ತದೆ. ಆ ತಲೆನೋವು ನನಗೇಕೆ ?
“ನಿಮ್ಮ ಇಷ್ಟು ಕೃತಿಗಳಲ್ಲಿ ಅತ್ಯುತ್ತಮ ಕೃತಿ  ಯಾವುದು ?” ಎಂದೊಬ್ಬ ನನ್ನ ಕಿರಿಯ ಮಿತ್ರರು ಹೇಳಿದರು. ಇದುವರೆಗೂ ಆಗಿರುವ ಕೃತಿಗಳಲ್ಲಿ ಒಂದೂ ಅಲ್ಲ, ಆ ಅತ್ಯುತ್ತಮ ಕೃತಿ ಇನ್ನು ಮೇಲಾಗಬೇಕು ಎಂಬುದಷ್ಟೇ ನನ್ನ ಉತ್ತರ. ಈ ಜೀವಮಾನದಲ್ಲಿ ಅದು ಆಗಬಹುದು. ಆಗದೆಯೂ ಇರಬಹುದು. ಆಗದಿದ್ದಲ್ಲಿ ನನಗೆ ದುಃಖವೂ ಇಲ್ಲ. ಬೇರಿನ್ನಾರಾದರೂ ಮಾಡಿ ಯಾರು ಎಂಬ ಆಶೆ ಇದೆ, ನಾನಿದುವರೆಗೂ ಮಾಡಿರುವ ಕೆಲಸದಿಂದ ನನಗೆ ಸಂಪೂರ್ಣ ತೃಪ್ತಿ ಆಗಿದೆ, ಇನ್ನು ನಾನು ಮಾಡುವುದೇನೂ ಉಳಿದಿಲ್ಲ ಎಂದು ಕಾಲು ಚಾಚಿ ಕುಳಿತವನು ಇನ್ನು ಬದುಕಿರುವ ಅವಶ್ಯಕತೆಯಾದರೂ ಏನಿದೆ ? ಆಗಬೇಕಾದ ಕೆಲಸ ಇದೆ ಎಂಬುದಕ್ಕೆ ನಾನಿನ್ನೂ ಬದುಕಿರುವುದೇ ಸಾಕ್ಷಿ. ಕೈಲಿರುವ ಪೇನಾ ಕೆಳಕ್ಕೆ ಬಿದ್ದ ನಂತರ ಸಾಹಿತಿ ಸಾಯಬಾರದು, ಅವನು ಸತ್ತ ನಂತರ ಅವನ ಕೈಲಿರುವ ಪೇನಾ ಕೆಳಕ್ಕೆ ಬೀಳಬೇಕು." ಎಂಬ ಮಾತುಗಳು ಯುವ ಬರಹಗಾರರಿಗೆ ಪಾಠದಂತಿವೆ.

ಈ ಪುಸ್ತಕದಲ್ಲಿ ಮುದ್ರಿತವಾಗಿರುವ ನನ್ನ ಕಾಡಿದ  ಕೆಲ ಸಾಲುಗಳ ಬಗ್ಗೆ ಗಮನಹರಿಸುವುದಾದರೆ
“ಬದುಕಲಿಕೆ ತಿನಬೇಕು, ತಿನ್ನಲು ಬದುಕಲ್ಲ”
"ಗುರಿ ಬೇಕು ಬಾಳಿಂಗೆ, ಗುರಿ ಹಿರಿದು ಬೇಕು”
ಎಂಬುದಾಗಿ ಎಚ್ಚರಿಕೆ ಕೊಡುತ್ತಾ, ಆತ್ಮಮೆಚ್ಚುವಂತೆ ಜೀವನ
ನಡೆಸಬೇಕೆನ್ನುತ್ತಾರೆ ಬೀಚಿಯವರು .

“ದೊಡ್ಡ ಜೇಬಿದೆ ಇವಗೆ, ಹೃದಯ ಬಹು ಚಿಕ್ಕದು; ದೊಡ್ಡ ಹೃದಯದವಗೆ ಚಿಕ್ಕ ಜೇಬು"
ಎಷ್ಟು ಅರ್ಥಗರ್ಭಿತವಾಗಿದೆ ಅಲ್ಲವೆ?
“ಎಲೆ, ಎಲೆ ಹೋಗಲಿ, ಬೇರು ಒಣಗಿಸಬೇಡ
ಬಾಳವೃಕ್ಷದ ಬೇರು ನಂಬಿಕೆಯೊ ತಿಂಮ”
ದೇವರಲ್ಲಿ ನಂಬಿಕೆ, ತಂದೆ-ತಾಯಿಗಳಲ್ಲಿ ನಂಬಿಕೆ, ಮಡದಿ ಮಕ್ಕಳಲ್ಲಿ
ನಂಬಿಕೆ, ತನ್ನಲ್ಲೇ ತನಗೆ ನಂಬಿಕೆ-ಜೀವನದ ಭಾಗ್ಯವೆಲ್ಲ ನಂಬಿಕೆಯ ಆಧಾರದ ಮೇಲಿದೆ. 'ನಂಬಿ ಕೆಟ್ಟವರಿಲ್ಲವೊ' ಎಂಬುದು ದಾಸರು ಕೊಟ್ಟ ಅಭಯ!
ಕಾಲಪ್ರವಾಹದಲ್ಲಿ ರಾಜ್ಯ-ಸಾಮ್ರಾಜ್ಯಗಳೂ, ಮತ ಮಠಗಳೂ, ಭಾಷಾ ಸಾಹಿತ್ಯಗಳೂ, ಕಲಾ-ವೃತ್ತಿಗಳೂ ಕೊಚ್ಚಿಕೊಂಡು ಹೋದವು, ನಾಗರಿಕತೆ ಗಳೆಷ್ಟೋ ಮಣ್ಣುಗೂಡಿದವು. “ಮಾನವತೆ ನಿಂತಿಹದು” ಅಂದನಲ್ಲದೆ
'ಮಂಕುತಿಮ್ಮ' ! ತಿಂಮನೂ ಸಹ “ದೈವಕಿಂತಲು ದೊಡ್ಡದಿನ್ನೊಂದು ಇದೆ ಎನಗೆ ಮಾನವತೆಯೇ ದಾರಿ, ನಡೆಯೋ”
ಎಂದು ಬೆನ್ನು ತಟ್ಟುತ್ತಾನೆ.
ಅನ್ನುವಾಗ ಬೀchiಯವರು ನಮ್ಮ ದೃಷ್ಟಿಗೊಂದು ಹೊಸ ತಿರುವನ್ನೇ
ಕೊಡುತ್ತಾರೆ.
“ಮಕ್ಕಳೊಂದಿಗೆ ಆಟ ಅದು ಸ್ವರ್ಗ ತಿಂದು ಮಕ್ಕಳೇ ದೇವರು | ಹೌದೇನೋ ತಿಂಮ?”
ಬಾಳ ಸಾರ್ಥಕತೆಗೆ ಹೊಸ ದಾರಿ ತೋರಿಸುತ್ತಾರೆ. ಜೀವನ ನಮಗೆ ಸಹ್ಯವಾಗಬೇಕಾದರೆ ಏನು ಮಾಡಬೇಕೆಂಬುದನ್ನು ಬೀchi ಯವರು
“ಎಲ್ಲರೂ ನಗಬೇಕು, ನಗು ಜೀವದುಸಿರು,
ಬಲ್ಲವರ ಹಾಸ್ಯ ರಸಕವಳದೂಟ” ಎಂದು ಹೇಳಿ ನಗು ನಗುತಾ ಬಾಳಬೇಕು ಎಂದು ಕರೆನೀಡಿದ್ದಾರೆ.

ಒಟ್ಟಾರೆ ಬೀಚಿಯವರ ಈ ಪುಸ್ತಕ ಓದುತ್ತಿದ್ದಾಗ ಕಾವ್ಯ ಓದುತ್ತಲೇ ಜೀವನದ ಸತ್ಯಗಳ ಬಗ್ಗೆ ಪ್ರವಚನ ಕೇಳಿದ ಅನುಭವವನ್ನು ಪಡೆದೆ .ನೀವು ಇಂತಹ ಅನುಭವ ಪಡೆಯಬೇಕಾದರೆ  ಒಮ್ಮೆ ತಿಂಮ ಏನಂದ ಎಂದು ಓದಲೇಬೇಕು.

ಪುಸ್ತಕದ ಹೆಸರು: ಅಂದನಾ ತಿಂಮ
ಲೇಖಕರು: ಬೀಚಿ
ಪ್ರಕಾಶನ: ಬೀಚಿ ಪ್ರಕಾಶನ
ಬೆಲೆ: 125₹

ಸಿಹಿಜೀವಿ
ಸಿ ಜಿ ವೆಂಕಟೇಶ್ವರ

 

06 ಆಗಸ್ಟ್ 2022

ಹಂಪಿ ವಿಜಯನಗರ ...


 


ವಿಮರ್ಶೆ ೪೯


ಹಂಪಿ ವಿಜಯನಗರ  


ಹಂಪಿ ವಿಜಯನಗರ ಒಂದು ಸಂಗ್ರಹಯೋಗ್ಯ ಕೃತಿಯಾಗಿದೆ. ಇದರಲ್ಲಿ ಬರುವ  ಹತ್ತೊಂಬತ್ತು ಬರಹಗಳಲ್ಲಿ  ಒಂದೊಂದು ಬರಹವೂ ವಿಜಯನಗರ ಇತಿಹಾಸ ಸಂಶೋಧನೆಯ ಒಂದೊಂದು ಸವಾಲುಗಳನ್ನು ಪ್ರತಿನಿಧಿಸುವಂತಹದು. ಪ್ರೊ. ಲಕ್ಷಣ್ ತೆಲಗಾವಿ ಯವರು ಪ್ರತಿಯೊಂದು ಬರಹಕ್ಕೂ ಆಯ್ಕೆಮಾಡಿಕೊಂಡಿರುವ ವಿಷಯ, ಸಂಗ್ರಹಿಸಿರುವ ವಿಪುಲ ಅಕರಸಾಮಗ್ರಿ   ವಿಷಯದ ಒಳಹೊಕ್ಕು ನೋಡಿರುವ ಪರಿ ಇವೆಲ್ಲವೂ ನಮಗೆ  ಬೆರಗನ್ನುಂಟುಮಾಡುತ್ತವೆ . ಈ ಸಂಕಲನದಲ್ಲಿರುವ ಬಹುತೇಕ ಬರಹಗಳು ಸಂಶೋಧನಾತ್ಮಕ ವಾಗಿದ್ದು, ಪ್ರಥಮಬಾರಿಗೆ ಹಲವಾರು ಹೊಸ ವಿಷಯಗಳನ್ನು ಪ್ರಕಟಪಡಿಸುವಲ್ಲಿ ಯಶಸ್ವಿಯಾಗಿವೆ. ವಿದ್ಯಾರ್ಥಿಗಳಿಗೆ, ಅಧ್ಯಯನಶೀಲರಿಗೆ ಮಾತ್ರವಲ್ಲ, ವಿದ್ವಾಂಸರಿಗೂ ಸಂಶೋಧಕ ರಿಗೂ ಈ ಬರಹ ಸಂಗ್ರಹ ಹೆಚ್ಚಿನ ಪ್ರಯೋಜನವುಳ್ಳ ಪುಸ್ತಕ. ಹಲವಾರು ವರ್ಷಗಳಿಂದ  ಪರಿಶ್ರಮವಹಿಸಿ ಸಿದ್ಧಪಡಿಸಲಾಗಿರುವ ಇಲ್ಲಿಯ ಬರಹಗಳು  ಹಿರಿಯ ಸಂಶೋಧಕ ಪ್ರೊ. ಲಕ್ಷ್ಮಣ್ ತೆಲಗಾವಿಯವರ ವಿದ್ವತ್ತಿಗೆ  ಹಿಡಿದಿರುವ ಕನ್ನಡಿಯಂತಿವೆ. ಹಂಪಿ ಸ್ಮಾರಕಗಳು ಪ್ರೇರಣೆಯ ಪ್ರತೀಕಗಳಾಗಿದ್ದರೆ, ತೆಲಗಾವಿಯವರ ಇಂತಹ ಬರಹಗಳು ಸ್ಫೂರ್ತಿಯ ಸೆಲೆಗಳಾಗಿವೆ. 

 ಈ ಪುಸ್ತಕದಲ್ಲಿ ನನ್ನ ಗಮನವನ್ನು ಗಾಢವಾಗಿ ಸೆಳೆದ ಬರಹವೆಂದರೆ 'ಒಂದನೇ ಬುಕ್ಕನ ನಾಣ್ಯದ ಮರುಪರಿಶೀಲನೆಯ ನೆಲೆಯಲ್ಲಿ ಆತನ ಶಿಲ್ಪದ ಶೋಧ' ಎಂಬುದು. ಸಂಶೋಧನ ಬರವಣಿಗೆಗೆ ಇದೊಂದು ಅತ್ಯುತ್ತಮ ಉದಾಹರಣೆ. ಪ್ರೊ. ತೆಲಗಾವಿಯವರ ಆಳವಾದ ಅಧ್ಯಯನವನ್ನು ಸಮರ್ಥಿಸುವ ಬರಹವಿದು. ವಿಷಯವನ್ನು ಬೆಳೆಸುವುದು, ವಿವಿಧ ಆಯಾಮಗಳ ಮೂಲಕ ಅದನ್ನು ವಿಶ್ಲೇಷಿಸುವುದು, ತಾರ್ಕಿಕವಾಗಿ ಅಂತ್ಯಗೊಳಿಸುವುದು ಈ ಸಾಧ್ಯತೆಗಳನ್ನು ಅವರು ಇಲ್ಲಿ ಬಹು ಸಮರ್ಪಕವಾಗಿ ತೋರಿಸಿಕೊಟ್ಟಿದ್ದಾರೆ. ಕೆಲವು ನಾಣ್ಯಶಾಸ್ತ್ರಜ್ಞರು ಕೈಗೊಂಡ ಅವಸರದ ಅಥವಾ ಉದ್ದೇಶಪೂರ್ವಕ ಅಧ್ಯಯನದ ಕಾರಣವಾಗಿ ಒಂದನೇ ಬುಕ್ಕನ ನಾಣ್ಯವನ್ನು ತಪ್ಪಾಗಿ ಗುರುತಿಸಿ ಪ್ರಚಾರಕ್ಕೆ ತಂದುದನ್ನು ಪ್ರೊ. ತೆಲಗಾವಿಯವರು ಸಾಧಾರವಾಗಿ ಖಂಡಿಸಿದ್ದಾರೆ.ಅವರ ನಿಲುವು ನಿರ್ಣಯಗಳನ್ನು ಪ್ರಶ್ನಿಸಿದ್ದಾರೆ. ಅವರ ಸಂಶೋಧನೆಯ ಫಲವಾಗಿ ಚಿತ್ರದುರ್ಗ ಬೆಟ್ಟದಲ್ಲಿ ಒಂದನೇ ಬುಕ್ಕನ ಸಮಪ್ರಮಾಣದ ಕುಳಿತಿರುವ ಭಂಗಿಯ ಶಿಲ್ಪ ಬೆಳಕಿಗೆ ಬಂದುದನ್ನು ಕರ್ನಾಟಕದ ವಿದ್ವಾಂಸರು ಗಮನಿಸಬೇಕು.


ಕನ್ನಡದ ಬಖೈರುಸಾಹಿತ್ಯ ಕುರಿತು ಆಳವಾಗಿ ಅಧ್ಯಯನ ಮಾಡಿದವರಲ್ಲಿ ಪ್ರೊ. ತೆಲಗಾವಿಯವರೂ ಒಬ್ಬರು. ಈ ಸಂಕಲನದಲ್ಲಿ ಸೇರಿರುವ 'ರಾಮರಾಜನ ಬಖೈರು: ಪುನರಾವಲೋಕನ' ಎಂಬ ಬರಹವು ಅವರ ಆಳವಾದ ಚಿಂತನೆಯನ್ನು ದೃಢಪಡಿಸುತ್ತದೆ. ಈ ಬಖೈರ್ನ ಅಧ್ಯಯನಮಾರ್ಗವನ್ನು ಪರಿಶೀಲಿಸುವುದರೊಡನೆ, ಈ ಬಖೈರ್ನ ಹುಟ್ಟಿನ ಜತೆಯಲ್ಲಿ ಕಾಣಿಸಿಕೊಂಡ ಇತರ ಪರ್ಶಿಯನ್ಗ್ರಂಥಗಳ ತುಲನೆಯನ್ನೂ ಅವರು ಇಲ್ಲಿ ಮಾಡಿದ್ದಾರೆ. ಈ ಎರಡೂ ಸಂಪ್ರದಾಯಗಳ ಪಠ್ಯಗಳಲ್ಲಿಯ ವ್ಯತ್ಯಾಸಗಳನ್ನು ಸ್ಥೂಲವಾಗಿ ಯಾದರೂ ಪ್ರಸ್ತಾಪಿಸಿದ್ದಾರೆ. ಇದರೊಡನೆ, ಈ ಬಖೈರ್ನ ಉಪಯುಕ್ತತೆ, ವಿಶೇಷಗಳು ಹಾಗೂ ಇತಿಮಿತಿಗಳನ್ನು ಕುರಿತು ಸೂಕ್ಷ್ಮವಾಗಿ ವಿವರಿಸಿದ್ದಾರೆ.


ಪ್ರೊ. ತೆಲಗಾವಿಯವರು ಶ್ರೀಕೃಷ್ಣದೇವರಾಯನ ಆಡಳಿತಾವಧಿಯಲ್ಲಿದ್ದ ವಿಜಯನಗರ ಸೇನೆಯ ವಿವರವಂತೂ ತೀರಾ ರೋಚಕವಾದುದು, ವಿವಿಧ ಮೂಲಗಳಿಂದ ಸಂಗ್ರಹಿಸಲಾದ ಸೇನಾಸಂಖ್ಯೆ ಇತ್ಯಾದಿ ಮಾಹಿತಿ ಕುತೂಹಲ ಕಾರಿಯಾಗಿದೆ. ಈಗಾಗಲೇ ಈ ಸಂಬಂಧದಲ್ಲಿ ವಿದೇಶಿ ಪ್ರವಾಸಿಗರ ಬರಹಗಳನ್ನಾಧರಿಸಿ ಸ್ವಲ್ಪಮಟ್ಟಿಗೆ ಇತರ ಇತಿಹಾಸಕಾರರು ಬರೆದಿದ್ದರೂ ಅವುಗಳ ಪುನರಾವಲೋಕನ ದೊಡನೆ ಪ್ರೊ. ತೆಲಗಾವಿಯವರು ಕೆಲವು ನೂತನಾಂಶಗಳನ್ನು ಪ್ರಸ್ತಾಪಿಸಿದ್ದಾರೆ.


ಈಗಾಗಲೇ ಕೆಲವಾರು ವಿಜಯನಗರ ಶಾಸನಗಳ   ಪತ್ತೆಹಚ್ಚಿ ಬೆಳಕಿಗೆ ತರುವುದರೊಡನೆ, ಅವುಗಳ ಅಳವಾದ ಅಧ್ಯಯನ ಕೈಗೊಂಡ ಪ್ರೊ, ತೆಲಗಾವಿಯವರು, ಒಂದನೆಯ ಬುಕ್ಕ ಹಾಗೂ ಅವನ ಅಧೀನದ ರಾಜಪ್ರತಿನಿಧಿಗಳ ಶಾಸನಗಳನ್ನು ಮರು ಅಧ್ಯಯನಕ್ಕೊಳಪಡಿಸಿದ್ದಾರೆ. ಈ ಸಂಕಲನದಲ್ಲಿ ಸೇರಿರುವ 'ದೊಡ್ಡೇರಿ ,ಹರ್ತಿಕೋಟೆ ಶ್ರೀರೇವಣ ಸಿದ್ಧೇಶ್ವರಮಠದ ಸಂಗ್ರಹದಲ್ಲಿರುವ ಒಂದನೇ ಬುಕ್ಕ ಮತ್ತು ರಾಮರಾಯರಿಗೆ ಸಂಬಂಧಿಸಿದ ತಾಮ್ರಪಟಗಳ ನಕಲು ಪ್ರತಿಗಳು ಬರಹವು ಅವರ ಪಾಲಿಗೆ ಸವಾಲಿನದಾಗಿದ್ದು, ಈಗ ಕಾಗದದ ಮೇಲೆ ಉಳಿದುಕೊಂಡಿರುವ ಮೂಲಶಾಸನಪಾಠಗಳನ್ನು ಸಂಶೋಧನಾತ್ಮಕವಾಗಿ ಅಧಿಕೃತಗೊಳಿಸುವ ಕಾರ್ಯದಲ್ಲಿ ಅವರು ಹೆಜ್ಜೆಯಿರಿಸಿದ್ದಾರೆ. ಈ ದಾಖಲೆಗಳನ್ನು ಪರಿಶೀಲನೆ ಗೊಳಪಡಿಸಿ ಅವುಗಳಿಂದ ಕೆಲವು ವಾಸ್ತವಾಂಶಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ.


ವಿಜಯನಗರ ಇತಿಹಾಸದ ಸಮಗ್ರತೆ ಕುರಿತು ಎಷ್ಟು ಹೇಳಿದರೂ ಕಡಿಮೆಯೇ, ಕರ್ನಾಟಕದಲ್ಲಿ ಈ ಇತಿಹಾಸದ ಬಗೆಗೆ ನಡೆದಿರುವ ಸಂಶೋಧನೆಗಳಿಗೆ ಹೊರಬಿದ್ದಿರುವ ಪ್ರಕಟಣೆಗಳಿಗೆ ಲೆಕ್ಕವೇ ಇಲ್ಲ. ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಈ ಇತಿಹಾಸ ಅಧ್ಯಯನದಲ್ಲಿ ತೊಡಗಿಸಿ ಕೊಂಡಿರುವ ವಿದ್ವಾಂಸರ ಸಂಖ್ಯೆಯೂ ಬಹು ದೊಡ್ಡದು ಆದರೂ ಹಂಪಿ ಸ್ಮಾರಕಗಳು ಹಾಗೂ ವಿಜಯನಗರ ಸಾಮ್ರಾಟರ ಇತಿಹಾಸ- ಇವುಗಳ ಅಧ್ಯಯನ  ಪೂರ್ಣಗೊಂಡಿಲ್ಲ. ತೋಡಿದಷ್ಟೂ ದೂರೆಯುವ  ಆಕರಸಂಪತ್ತಾಗಲಿ, ಬರೆದು ಮತ್ತೆ ಮತ್ತೆ ಎದುರಾಗುವ  ಚರ್ಚಾಸ್ಪದ ಸಂಗತಿಗಳಾಗಿ ನಮ್ಮ ಮುಂದೆ ನಿಲ್ಲುತ್ತವೆ .ಆ ಚರ್ಚೆಗಳಿಗೆ ತೆಲಗಾವಿರವರ ಈ ಪುಸ್ತಕ ಸಮರ್ಪಕವಾದ ಉತ್ತರ ಎಂಬುದು ನನ್ನ ಅಭಿಪ್ರಾಯ.



ಪುಸ್ತಕದ ಹೆಸರು: ಹಂಪಿ ವಿಜಯನಗರ

ಲೇಖಕರು: ಪ್ರೊ ಲಕ್ಷಣ್ ತೆಲಗಾವಿ.

ಪ್ರಕಾಶನ: ವಾಲ್ಮೀಕಿ ಸಾಹಿತ್ಯ ಸಂಪದ.ಹರ್ತಿಕೋಟೆ.

ಬೆಲೆ: 200₹


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು