29 ಮೇ 2022

ಹೊರಳು .


 


ಹೊರಳು ಮತ್ತು ಇತರೆ ಕಥೆಗಳು.ವಿಮರ್ಶೆ ೩೯ 




ಆತ್ಮೀಯರು  ಲೇಖಕರು ಮತ್ತು ಪ್ರೊಫೆಸರ್ ಆದ ವಿ ಎಲ್ ಪ್ರಕಾಶ್ ರವರು ನೀವು ಓದಲೇಬೇಕು ಎಂದು  ನನಗೆ ನೀಡಿದ ಪುಸ್ತಕ ಕೆ ಎಸ್ ಪ್ರಭಾ ರವರ ಹೊರಳು ಮತ್ತು ಇತರೆ ಕಥೆಗಳು  .ಈ ಪುಸ್ತಕ ನನಗೆ ನಿಜಕ್ಕೂ ಹಿಡಿಸಿತು.

ದೊಡ್ಡಬಳ್ಳಾಪುರದಂತಹ ಊರಿನಲ್ಲಿ ತಮ್ಮ ಬದುಕಿನ ದಾರಿ ಮತ್ತು ಗುರಿಯನ್ನು ತಾವೇ ಗೊತ್ತುಪಡಿಸಿಕೊಂಡ ವ್ಯಕ್ತಿಗಳಲ್ಲಿ ಪ್ರಭಾ ಮೇಡಂ ಮುಖ್ಯರಾಗಿ ಕಾಣುತ್ತಾರೆ. ಸಾಂಪ್ರದಾಯಿಕ ಎರಕಗಳಲ್ಲಿ ಸಿದ್ಧ ಆಕೃತಿಗಳು ಮಾತ್ರ ದೊರಕುತ್ತವೆ. ಇವು ಸಾದಸೀದ ಹಾಗೂ ಸುರಕ್ಷವಾಗಿರುತ್ತವೆ. ನಮ್ಮ ಚಹರೆ ಪಟ್ಟಿಯನ್ನು ನಾವೇ ರೂಪಿಸಿಕೊಂಡಾಗ, ನಮ್ಮ ವಿಧಿಯನ್ನು ನಾವೇ  ನಿರ್ದೇಶಿಸಿಕೊಂಡಾಗ ಅನೇಕ ಅಗ್ನಿ ದಿವ್ಯಗಳನ್ನು ಹಾದು ಬರಬೇಕಾಗುತ್ತದೆ. ಸ್ಥಾಪಿತ ವ್ಯವಸ್ಥೆಗಳ ವಿರುದ್ಧ ದಂಗೆ ಏಳಬೇಕಾಗುತ್ತದೆ.ಇಂಥ ಸಂದರ್ಭಗಳಲ್ಲಿ ಗೆಲುವಲ್ಲ, ಸೋಲು ಕೂಡ ಘನವಾಗಿಯೇ ಕಾಣುತ್ತದೆ. ಅವು ದೊಡ್ಡ ಪಾಠಗಳಂತೆ ಇರುತ್ತವೆ. ಅದರಲ್ಲೂ ಹೆಣ್ಣಾಗಿದ್ದರಂತೂ ಇದು ಇನ್ನಷ್ಟು ಕಠಿಣ ದಾರಿ.ಪ್ರಭಾ ಅವರು ಇಂಥ ದಾರಿಯಲ್ಲಿ ಬಹುದೂರ ಸಾಗಿ ಬಂದಿದ್ದಾರೆ. ಬಲವಾದ ಹೆಗ್ಗುರುತುಗಳನ್ನು ಮೂಡಿಸಿದ್ದಾರೆ.


70ರ ದಶಕದಲ್ಲಿ ಕನ್ನಡ ನೆಲದಲ್ಲಿ ಮೂಡಿದ ಕ್ರಾಂತಿಕಾರತನ, ಮತ್ತು 'ಸ್ವ'ದ ಹುಡುಕಾಟದ ಮೂಲಕವೇ ಬಹಿರಂಗದಲ್ಲಿ ತಮ್ಮ ಇರುವನ್ನು ಕಂಡುಕೊಳ್ಳುವ ಚಳವಳಿಯ ಪಾಲುದಾರರಾದ ಮೇಡಂ, ಸೃಜನಶೀಲ ಪ್ರಭೆಯನ್ನು ಕಾಪಿಟ್ಟುಕೊಂಡವರು, ಅದು ಕತೆ, ಪ್ರಬಂಧ, ಕವಿತೆಗಳಲ್ಲಿ ಚಲ್ಲುವರೆದಿದೆ. ಹೊರಳು ಮತ್ತು ಇತರ ಕತೆಗಳು ಸಂಕಲನದಲ್ಲಿ ಬರುವ ಮೊದಲ ಕಥೆಯಲ್ಲಿ ಇಲ್ಲಿಯ ನಾಯಕಿಗೆ ಮದುವೆಯಾಗಿ ಏಳುವರ್ಷಗಳಾಗಿವೆ. ಈಸ್ಟ್ ಹಾಕಿದ ಬ್ರೆಡ್ಡಿನ ಹಾಗೆ ಉಬ್ಬಿಕೊಳ್ಳುತ್ತಿರುವ ಬೊಜ್ಜಿನ ಬೆಳವಣಿಗೆಗೆ ಅವಳು ಸಿಕ್ಕಿದ್ದಾಳೆ. ಆದರೂ ಯೌವನ ಇನ್ನೂ ಅವಳಿಂದ ಕಾಲ್ತೆಗೆಯುವ ಸನ್ನಾಹದಲ್ಲಿಲ್ಲ. ಮುಖದ ಮೇಲೆ ಮೊಡವೆ ಅಂದವನ್ನು ಹೆಚ್ಚಿಸುವಂತೆ ತೋರಿದರೂ,ಕೀವುಗಟ್ಟಿದ ಅದೊಂದು ಅಸಹ್ಯ. ಹೊರಗಿನ ಬದುಕೂ ಹೀಗೆಯೇ ಸಹ್ಯ ಮತ್ತು ಅಸಹ್ಯಗಳ ಜೊತೆಗಿನ ಪ್ರೀತಿ ಕಳೆದುಕೊಂಡಿದೆ. ತನ್ನ ಆಫೀಸಿನಲ್ಲಿರುವ ರಮೇಶನ ಚೆಲುವಿಗೆ ಒಲಿಯಲು ಮನಸ್ಸು ಹಾತೊರೆಯುತ್ತಿದೆ. ಅವನ ಸಖ್ಯವನ್ನು ಬಯಸುತ್ತಿದೆ. ಎಂದೆನಿಸಿದರೂ, ಆ ನೋಟವನ್ನೇ ಇವಳು ಬಯಸುತ್ತಿದ್ದಾಳೆ. ತಾನು ಮದುವೆಯಾದ ಹೆಣ್ಣು ರಮೇಶ? ಪ್ರಶ್ನೆಯನ್ನು ಕೇಳಿಕೊಂಡರೂ, ರಮೇಶನ ನೋಟವೇ ಬೇಕೆಂದು  ಒಳಗೇ ಕುಟುಕುತ್ತಿದೆ. ರಮೇಶನಿಗೆ, ಅವನ ರೂಪಕ್ಕೆ  ತಾನು ಮರುಳಾದೆನೇ ಎಂದು ತನ್ನೊಳಗನ್ನು ಅವನು ತನ್ನ ಬಳಿಯೇ ಇರಲಿ ಎಂಬ ಸೆಳೆತ, ಕೀವು ತುಂಬಿದ ಮೊಡವೆಯಂತೆ ಈ ಅನಿಸಿಕೆಗಳು ಅಸಹ್ಯ ಎನಿಸಿದರೂ, ಅದನ್ನು ಬಿಟ್ಟುಕೊಡಲು ಸಿದ್ಧವಿಲ್ಲದ ಆಸೆಗಳು, ಹಂಬಲಗಳು. ಇದು ಇಲ್ಲಿಗೆ ನಿಲ್ಲುವುದಲ್ಲ. ಪಕ್ಕದ ಮನೆಯ ಆನಂದನ ದುಂಡು ಮುಖ, ದಪ್ಪ ಮೀಸೆ, ತುಟಿಗಳನ್ನು ನೋಡುವಾಗಲೂ ರಮೇಶನೇ ಕಣ್ಮುಂದೆ ಬಂದಂತಾಗುತ್ತದೆ. ತನ್ನ ಗಂಡ ಮನೆಗೆ ಬಂದು ಸೊಂಟ ಬಳಸಿದಾಗಲೂ ಈ ಹೆಣ್ಣಿನ ಮನದೊಳಗೆ ಸುಳಿಯುವವನು ರಮೇಶನೇ, ಇಂಥ ತಾಕಲಾಟ, ನೋವು, ನೈತಿಕ ಪ್ರಶ್ನೆಗಳನ್ನು ಮೀರಿ ಅಪೇಕ್ಷೆಗಳು, ಈ ತೊಳಲಾಟದಲ್ಲಿಯೇ ಈಕೆ ತನ್ನ ವಾಸ್ತವವನ್ನು ಕಂಡುಕೊಳ್ಳಬೇಕಾಗಿದೆ.ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ.ಬದುಕಿಗೆ ಅರ್ಥ ಮತ್ತು ಸಾರ್ಥಕ್ಯವನ್ನು ತಂದುಕೊಳ್ಳಬೇಕಾಗಿದೆ. ಇದೊಂದು ಸವಾಲು.ನಿತ್ಯ ಸೆಣಸಾಟಕ್ಕೆ ಸಿದ್ಧಪಡಿಸುವ ಸವಾಲು.


'ಹೊರಳು' ಕತೆಯನ್ನು ಬಿಟ್ಟರೆ ಇಲ್ಲಿರುವ ಉಳಿದೆಲ್ಲ ಕತೆಗಳೂ 'ಮೊಡವೆ'ಯಂತೆಯೇ ಇಂಥ ತೊಳಲಾಟವನ್ನು ಹಿಡಿದುಕೊಡುವ ಪ್ರಯತ್ನಗಳೇ. ಹೆಣ್ಣಿನ ಮನದಾಳದಲ್ಲಿ ಹೊಮ್ಮುವ ಇಂಥ ಭಾವಗಳನ್ನು ಹಿಡಿದು ಪರೀಕ್ಷಿಸಲು ನೋಡುತ್ತವೆ. ಮನಸ್ಸಿನ ಚಲನೆಯನ್ನು ಅದು ಚಲಿಸುವ ದಿಕ್ಕನ್ನು ಪ್ರಾಮಾಣಿಕ ನೋಟದಿಂದ ಹಿಡಿಯುವುದೇ ಈ ಕತೆಗಳ ಹೆಗ್ಗಳಿಕೆಯಾದಂತೆಯೂ ತೋರುತ್ತದೆ. ಜೊತೆಗೆ ಗಂಡು ಹೆಣ್ಣಿನ ಸಂಬಂಧಗಳ ನಿಜರೂಪವನ್ನು ದಿಟ್ಟತನದಿಂದ ಬಿಡಿಸಿ ನೋಡುವುದು, ಪ್ರೀತಿಯ ಹೆಸರಿನಲ್ಲಿ ತೊಡುವ ಮುಖವಾಡಗಳನ್ನು ಕಳಚಿ ಹಾಕಲೆತ್ನಿಸುವುದು, ಗಂಡು ಮತ್ತು ಹೆಣ್ಣಿನ ನಡುವಿರುವ ನಿರಂತರ ಆಕರ್ಷಣೆಯ ಸ್ವರೂಪ ಎಂಥದ್ದು ಎಂಬುದನ್ನು ಕಂಡುಕೊಳ್ಳಲು ಹೆಣಗುವುದು ಇವೆಲ್ಲ ಪ್ರಭಾ ಅವರ ಕಥನ ಕಲೆಯ ಹಿಂದಿರುವ ಕಾಳಜಿಗಳು. ಇಂಥ ಹುಡುಕಾಟ ನಿಧಾನಕ್ಕೆ ಮಾಗುವುದು, ಬೇರೊಂದು ಮಜಲನ್ನು ಮುಟ್ಟುವುದು, ತನ್ನ ಪ್ರತಿಸ್ಪರ್ಧಿಯಾದ ಇನ್ನೊಬ್ಬ ಹೆಣ್ಣನ್ನು ದ್ವೇಷದಿಂದ ನೋಡುವ ನೋಟದಲ್ಲಿಯೇ ಬದಲಾವಣೆಯಾಗಿ, ಅದು ಸಹಾನುಭೂತಿಗೆ, ಅನುಕಂಪಕ್ಕೆ ದಾರಿಮಾಡಿಕೊಡುವುದನ್ನು (ಕಳೆದುಹೋದವರು-ಕತೆ) ಇಲ್ಲಿ ಗಮನಿಸಬಹುದು. ಹೊರಗಿನ ಮತ್ತು ಒಳಗಿನ ಒತ್ತಡಗಳಿಗೆ ಬಲಿಯಾದ ಹೆಣ್ಣು ತನ್ನ ಏಕಾಂಗಿತನದಲ್ಲಿ, ಅಸಹಾಯಕತೆಯ ಸನ್ನಿವೇಶದಲ್ಲಿ ತನ್ನ ಸಂಗಕ್ಕೆ ಪುರುಷನೊಬ್ಬನನ್ನು ಬಯಸಿದರೆ, ಅದು ಮಹಾ ಅಪರಾಧವಾಗಿ ತನಗೇಕೆ ಕಾಣಬೇಕು ಎಂಬ ಅರಿವು ಕಥಾನಾಯಕಿಯ ಮನದಲ್ಲಿ ಮೂಡುವುದು ಇನ್ನೊಂದು ಬೆಳವಣಿಗೆ. ಈ ಸಹಾನುಭೂತಿಯೇ ಇನ್ನೊಂದು ಜೀವದ ಬಗೆಗಿನ ಪ್ರೀತಿಯೂ ಆಗಿ ಬದಲಾಗುವುದು ಪ್ರಭಾ ಅವರ ಕತೆಗಳಿಗೆ ಹೊಸದೊಂದು ಅಯಾಮವನ್ನೇ ತಂದುಕೊಡುತ್ತದೆ. ಅರಿವಿನ ಬಾಗಿಲು ಎಂದರೆ ಇದೇ. ಅದು ಬೆಳಕಿನ ಬಾಗಿಲು.


'ಹೊರಳು' ಈ ಸಂಕಲನದಲ್ಲಿ ಭಿನ್ನವಾದ ಕತೆ, ದೊಡ್ಡವರ ಪ್ರಪಂಚದ ನಡವಳಿಕೆಗಳು ಪುಟ್ಟ ಮಕ್ಕಳ ಮುಗ್ಧ ಮನಸ್ಸುಗಳ ಮೇಲೆ ಎಂಥ ಕೆಟ್ಟ ಪರಿಣಾಮವನ್ನು ಬೀರುತ್ತವೆ, ಅರಳಬೇಕಾದ ಮನಸ್ಸುಗಳನ್ನು ಹೇಗೆ ಕಮರಿಸುತ್ತವೆ ಎಂಬುದನ್ನು ಬಹಳ ಸೂಕ್ಷ್ಮವಾಗಿ, ನಯಗಾರಿಕೆಯಿಂದ ಹೇಳುವ ಕತೆ. ಕತೆ ಕಟ್ಟುವಲ್ಲಿ ಲೇಖಕಿ ತೋರುವ

ಸಂಯಮ, ಬರವಣಿಗೆಯ ಮೇಲಿನ ಹಿಡಿತ ಇವೆಲ್ಲವನ್ನೂ ಈ ಕತೆ ತೋರಿಸಿಕೊಡುತ್ತದೆ.


ಪ್ರಭಾ ಅವರ ಕತೆಗಳು ಎಲ್ಲಿಯೂ ಜಾಳುಜಾಳಾಗುವುದಿಲ್ಲ. ಕಲೆಗಾರಿಕೆಯನ್ನು ಧಿಕ್ಕರಿಸುವುದಿಲ್ಲ. ಕಲೆಗಾರಿಕೆಯ ಸೂಕ್ಷ್ಮ ಅಂಶಗಳಿಗೆ ಮುಖ ತಿರುಗಿಸುವುದಿಲ್ಲ. ಈ ದೃಷ್ಟಿಯಿಂದ ನೋಡಿದಾಗ ಪ್ರಭಾರವರು  ಅಭಿನಂದನೆಗೆ ಅರ್ಹರಾಗುತ್ತಾರೆ. ಆದರೆ ಇನ್ನಷ್ಟು ಆಳಕ್ಕೆ ಹೋಗುವ, ಮನುಷ್ಯ ಸಂಬಂಧಗಳನ್ನು ತೀವ್ರವಾಗಿ ಶೋಧಿಸುವ ಪ್ರಯತ್ನವನ್ನು ಇವರು ಮಾಡುವುದಿಲ್ಲ. ಇಂಥ ಅವಕಾಶವು ಇದ್ದ ಕಡೆಗಳಲ್ಲೂ ಅದನ್ನು ಬಿಟ್ಟುಕೊಟ್ಟು ಅಲ್ಪತೃಪ್ತಿಯಿಂದಲೇ ಕತೆಗಳನ್ನು ಮುಗಿಸಿಬಿಡುತ್ತಾರೆ.


ಕತೆಯಾಗಲಿ, ಕಾದಂಬರಿಯಾಲಿ, ಕವಿತೆಯಾಗಲಿ ಅಥವಾ ಇನ್ನಾವುದೇ ಸೃಜನಶೀಲ ಬರಹವಾಗಲಿ ಅದೊಂದು ಬದುಕಿನ ಶೋಧ. ನಿರಂತರವಾಗಿ ಈ ಕ್ರಿಯೆಯಲ್ಲಿ ತೊಡಗುವುದರ ಮೂಲಕವೇ ನಾವು ಬದುಕಿನ ಅರ್ಥವನ್ನು ಕಂಡುಕೊಳ್ಳಬಹುದು. ಪ್ರಭಾ  ಮೇಡಂ ರವರು ಇನ್ನಷ್ಟು ಈ ಶೋಧದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿ ಹಾಗೂ ಅವರ ಲೇಖನಿಯಿಂದ ಇನ್ನೂ ಹತ್ತಾರು ಪುಸ್ತಕಗಳು ಹೊರಹೊಮ್ಮಲಿ ಎಂದು ಆಶಿಸುವೆ.


ಪುಸ್ತಕದ ಹೆಸರು: ಹೊರಳು ಮತ್ತು ಇತರೆ ಕಥೆಗಳು

ಲೇಖಕರು: ಕೆ ಎಸ್ ಪ್ರಭಾ

ಪ್ರಕಾಶನ: ಅನಿಕೇತನ ಟ್ರಸ್ಟ್

ಬೆಲೆ:60₹


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

ಶಿಕಾರಿ ಕತೆಗಳು .


 



ಸ್ವಾತಂತ್ರ್ಯಪೂರ್ವ

ಶಿಕಾರಿ ಕತೆಗಳು .ವಿಮರ್ಶೆ೩೮


ಗಿರೀಶ್ ತಾಳಿಕಟ್ಟೆ ರವರು ಸಂಗ್ರಹ ಮತ್ತು ಅನುವಾದ ಮಾಡಿರುವ ಸ್ವಾತಂತ್ರ್ಯಪೂರ್ವ

ಶಿಕಾರಿ ಕತೆಗಳು ಎಂಬ ಪುಸ್ತಕ ಹೆಸರೇ ಹೇಳುವಂತೆ ಶಿಕಾರಿಗೆ ಸಂಬಂಧಿಸಿದ ಕಥನಗಳ ಸಂಕಲನ. ಕೆನೆತ್ ಅಂಡರ್ಸನ್ ರವರ ಪುಸ್ತಕ ಓದಿದ್ದ ನನಗೆ ಈ ಪುಸ್ತಕ ಆಕರ್ಷಿಸಿತು. ಪುಸ್ತಕ ಓದಿ ಮುಗಿಸಿದಾಗ ಸ್ವತಂತ್ರ ಪೂರ್ವ ಶಿಕಾರಿ ಕಥೆಗಳ ನೆಪದಲ್ಲಿ ಕಾಡು ಮತ್ತು ಮಾನವನ ಸಂಬಂಧದ ಬಗ್ಗೆ ಉತ್ತಮ ಮಾಹಿತಿ ಸಿಕ್ಕಿತು.

ಇಲ್ಲಿರುವ ಕತೆಗಳು ಬರೀ ಕತೆಗಳಲ್ಲ, ನಿಜವಾಗಿಯೂ ಜರುಗಿದ ಘಟನೆಗಳು ನಮಗಿಂತ ಮೂರು ತಲೆಮಾರುಗಳ ಹಿಂದಿನವು, ವಿನಾಶದ ಅಂಚನ್ನು ತಲುಪಿರುವ ಕಾಡು, ಮಿಗ ಸಂತಾನ, ಪರಿಸರ ಇತ್ಯಾದಿಗಳಲ್ಲಿ ಬದುಕುತ್ತಿರುವ ಇಂದಿನ ನಮಗೆ ಕಲ್ಪಿಸಿಕೊಳ್ಳಲೂ ಆಗದಂತಹ ಗತಲೋಕದ ಕತೆಗಳು, ಅಂದಿನ ದುರ್ಗಮ ಜಗತ್ತಿನ ಕಾಠಿಣ್ಯದ ಬದುಕಿನ ಸಾಮಾಜಿಕ ವಿವರಗಳನ್ನು ಬಿಚ್ಚಿಡುತ್ತಲೇ ಓದುಗರಲ್ಲಿ ಕಾಡಿನ ಕುರಿತು ರಮ್ಯ ಕುತೂಹಲ, ಅರಿವು ಮೂಡಿಸುತ್ತಾ ಸಾಹಸಪ್ರಿಯತೆಯನ್ನು ಸ್ಫುರಿಸುವಂತೆ ಮಾಡುವುವು ಈ ಕಥೆಗಳು.

 ಗಿರೀಶ್, ತಾಳಿಕಟ್ಟೆಯವರು ಅನುವಾದಿಸಿದ ಶಿಕಾರಿ ಕಥೆಗಳನ್ನ ಓದುತ್ತ ಓದುತ್ತ ಕಾಡಿನ ನಿಗೂಢ ಜಗತ್ತೊಂದನ್ನ ಕುಳಿತಲ್ಲೇ ಕಂಡ ಅನುಭವ, ಮನಸ್ಸು ನೆನಪುಗಳ ಹಾಯಿದೋಣಿ ಏರಿ ಹಿಮ್ಮುಖವಾಗಿ ಚಲಿಸಿದಂತೆ, 

ಕಾಲದ ಒತ್ತಡದಲ್ಲಿ ಕಾಡುಗಳೆಲ್ಲ ನಿಧಾನಕ್ಕೆ ಕರಗಿ ಬಯಲಾಗುತ್ತಿರುವ ವರ್ತಮಾನದಲ್ಲಿ ಈ ಶಿಕಾರಿ ಕತೆಗಳು ಓದುಗರಿಗೆ ಆ ಕಾಲದ ಕಾಡು, ಅಲ್ಲಿನ ಅನೂಹ್ಯ ಜಗತ್ತನ್ನ ಕಲ್ಪಿಸಿಕೊಳ್ಳಲು ಒಂದು ಅವಕಾಶ ನೀಡುತ್ತವೆ. ಈಗಿನ ಕಾಡುಗಳನ್ನು ಸುತ್ತಾಡಿದವರಿಗೆ ಆ ಕಾಲದ ಕಾಡುಗಳೊಂದಿಗೆ ತುಲನೆಯೂ ಸಾಧ್ಯ, ಶಿಕಾರಿ ಕುರಿತು ಸಾಕಷ್ಟು ಅನುವಾದಿತ ಪುಸ್ತಕಗಳಿದ್ದರೂ ಗಿರೀಶ್ ಅವರ ಬರವಣಿಗೆ, ಆಯ್ದುಕೊಂಡಿರವ ಕಥೆಗಳು ಮತ್ತು ವಿಭಿನ್ನ ಶೈಲಿಯ ಅನುವಾದ ಇದನ್ನೊಂದು ಬೇರೆ ಕೃತಿಯನ್ನಾಗಿ ನಿಲ್ಲಿಸುತ್ತವೆ. ಓದುವಾಗ ಕೆಲವೊಮ್ಮೆ ಪೂರ್ಣಚಂದ್ರ ತೇಜಸ್ವಿಯವರ ಕಾಡಿನ ಕಥೆಗಳು ನೆನಪಾಗದೇ ಇರಲಾರದು.


ಗಿರೀಶ್ ಅವರ ಅನುವಾದ ಮೂಲ ಕಥೆಯಷ್ಟೆರೋಮಾಂಚನವನ್ನುಂಟು ಮಾಡುತ್ತವೆ. ಇದು ಕೇವಲ ಒಂದು ಕೃತಿಯ ಅನುವಾದವಷ್ಟೇ ಅಲ್ಲ. ಅವರಿಗೆ ಕಾಡಿನ ಕುರಿತು ಇರುವ ಕೌತುಕ, ಹುಚ್ಚು ಮತ್ತು ಉತ್ಸಾಹವನ್ನ ಇಲ್ಲಿನ .ಕತೆಗಳ ಮರುಸೃಷ್ಟಿಯಲ್ಲಿ ಕಾಣಬಹುದು. ಜೇನುನೊಣ  ಹೂಗಳಿಂದ ಮಕರಂದ ಸಂಗ್ರಹಿಸಿ ಸವಿಜೇನಾಗಿಸುವಂತೆ ಗಿರೀಶರವರು ಕನ್ನಡಕ್ಕೆ ಅನುವಾದಿಸಿರುವ ಈ ಕೃತಿ ಒಂದು ಸೃಜನಶೀಲ ಕ್ರಿಯೆ. ಮೈನವಿರೇಳುವಂತೆ ಓದಿಸಿಕೊಂಡ "ಹುಣಸೂರಿನ ಆನೆ ಪೀರ್‌ಭಕ್ಷ್" ಮತ್ತು "ಆಯ್ಯನಮಠದ ನರಭಕ್ಷಕಿ" ಶಿಕಾರಿ ಕಥೆಗಳು ಬಹುಕಾಲ ಕಾಡುವಂತಹವು. ಅನುವಾದವಾದರೂ ಅನುಭವಗಳನ್ನು ವಿಸ್ತರಿಸುವಂತಹ, ಸೃಜನಶೀಲ ಪ್ರಯತ್ನಕ್ಕಾಗಿ ಗಿರೀಶ್‌ರವರಿಗೆ ಅಭಿನಂದಿಸುತ್ತೇನೆ. ಜೊತೆಗೆ ಇವತ್ತಿನ ಪರಿಸ್ಥಿತಿಯಲ್ಲಿ ಕಾಡಿನ ಮೇಲೆ ನಾವು ಹೊರಿಸಿರುವ ಒತ್ತಡ, ಅದರಿಂದಾಗಿ ಅಲ್ಲಿಯ ಪ್ರಾಣಿ, ಪಕ್ಷಿಪ್ರಭೇದಗಳು ನಶಿಸುವ ಹಂತ ತಲುಪಿರುವುದು, ವನ್ಯ ಪ್ರಾಣಿ-ಮಾನವ ಸಂಘರ್ಷ ಇವೆಲ್ಲದರೆಡೆಗ ಇನ್ನಾದರೂ ಒಂಚೂರು ಯೋಚಿಸುವ ಪ್ರೇರಣೆ ನಮ್ಮಲ್ಲಿ ಮೂಡಲಿ. ಆಹಾರ ಸರಪಳಿಯ ತುತ್ತ ತುದಿಯಲ್ಲಿರುವ ಹುಲಿಗಳನ್ನು ಸಂರಕ್ಷಿಸಿದಾಗ ಮಾತ್ರ ನಾವು ಕಾವೇರಿಯಂತಹ ನದಿಯನ್ನ ಸಂರಕ್ಷಿಸಬಹುದು ಎಂಬ ಪ್ರಜ್ಞೆ ನಮ್ಮೆಲ್ಲರಿಗೂ ಬರುವಂತಾಗಲಿ.

ಈ ಪುಸ್ತಕದ ಮುದ್ರಣ ಮತ್ತು ವಿನ್ಯಾಸದ ಬಗ್ಗೆ ಒಂದು ಮಾತು ಹೇಳಲೇಬೇಕು . ಗಿರೀಶ್ ರವರೆ ಸ್ವತಃ ಈ ಪುಸ್ತಕದ ಒಳವಿನ್ಯಾಸ ಮಾಡಿರುವುದು ನನಗೆ ಬಹಳ ಹಿಡಿಸಿತು ಅದರಲ್ಲೂ ಪ್ರತಿ ಅಧ್ಯಾಯಕ್ಕೆ ಸಂಬಂಧಿಸಿದ ಚಿತ್ರಗಳು ಬಹಳ ಸೂಕ್ತವಾಗಿವೆ . 


ಪುಸ್ತಕದ ಹೆಸರು:ಸ್ವಾತಂತ್ರ್ಯಪೂರ್ವ

ಶಿಕಾರಿ ಕತೆಗಳು 

ಲೇಖಕರು: ಗಿರೀಶ್ ತಾಳಿಕಟ್ಟೆ

ಪ್ರಕಾಶನ: ಕಾವ್ಯ ಕಲಾ ಪ್ರಕಾಶನ ಬೆಂಗಳೂರು.

ಬೆಲೆ: 200₹

ಸೌಂದರ್ಯವರ್ಧಕ


 #ಸೌಂದರ್ಯವರ್ಧಕ


#ಸಿಹಿಜೀವಿಯ_ಹನಿ 


ಮೈಕಪ್ಪೆಂದು ಮೇಕಪ್ಪು

ಹಾಕಿಕೊಂಡರೆ ಅಂತಹ 

ಸೌಂದರ್ಯ ಕ್ಷಣಿಕ|

ಆತ್ಮವಿಶ್ವಾಸದಿಂದ ಮೊಗದಲಿ

ಮೂಡುವ ಮಂದಹಾಸ

ನಿಜವಾದ ಸೌಂದರ್ಯವರ್ಧಕ ||


#ಸಿಹಿಜೀವಿ

27 ಮೇ 2022

ಹೊನ್ನಾವರಿಕೆ. ಪುಸ್ತಕ ವಿಮರ್ಶೆ.

 



ಹೊನ್ನಾವರಿಕೆ. ವಿಮರ್ಶೆ ೩೭ 

ಎಂ ಆರ್ ಕಮಲ ರವರು ರಚಿಸಿರುವ ಹೊನ್ನಾವರಿಕೆ ಪ್ರಬಂಧಗಳ ಸಂಕಲನ ಹೆಸರಿನಿಂದಲೇ ನನ್ನ ಕುತೂಹಲ ಕೆರಳಿಸಿ ಓದುವಂತೆ ಪ್ರೇರೇಪಿಸಿತು.

ಎಂ.ಆರ್. ಕಮಲ, ಹಾಸನ ಜಿಲ್ಲೆಯ ಅರಸೀಕರೆ ತಾಲ್ಲೂಕಿನ ಮೇಟಿಕುರ್ಕೆ ಯವರು, ಹುಟ್ಟಿದ್ದು: ೧೯೫೯ರಲ್ಲಿ, ತಂದೆ ಎಂ. ಎಚ್. ರಾಮಸ್ವಾಮಿ, ತಾಯಿ ವಿಶಾಲಾಕ್ಷಿ. ಬೆಂಗಳೂರು ವಿಶ್ವವಿದ್ಯಾಲಯದ ಎಂ.ಎ., ಎಲ್.ಎಲ್.ಬಿ. ಪದವೀಧರೆಯಾದ ಇವರು ಸ್ನಾತಕೋತ್ತರ ಪರೀಕ್ಷೆಯಲ್ಲಿ ಪಾಶ್ಚಿಮಾತ್ಯ ಸಾಹಿತ್ಯ ಅಧ್ಯಯನಕ್ಕಾಗಿ ಬಿ.ಎಂ.ಶ್ರೀ' ಸ್ವರ್ಣಪದಕ ಪಡೆದಿದ್ದಾರೆ. ಫ್ರೆಂಚ್ ಭಾಷೆಯನ್ನು ಆರು ವರ್ಷಗಳ ಕಾಲ ಅಧ್ಯಯನ ಮಾಡಿರುವ ಕಮಲ ಫ್ರೆಂಚ್ ಭಾಷೆಯಲ್ಲಿ ಪದವೀಧರರು.


ಕನ್ನಡ ಸಾಹಿತ್ಯ ಮತ್ತು ನಾಟ್ಯಕ್ಷೇತ್ರದಲ್ಲಿ ಕಮಲ ಅವರ ಹೆಸರು ಮತ್ತು ಸಾಧನೆಗಳು ಚಿರಪರಿಚಿತ. ಪ್ರಕಟಿತ ಕಾವ್ಯ ಸಂಗ್ರಹಗಳು: ಶಕುಂತಲೋಪಾಖ್ಯಾನ (೧೯೮೮), ಪಾಣೆ ಮತ್ತು ಇತರ ಕವಿತೆಗಳು (೧೯೯೨),  ಮಾತೋಶ್ರೀ ರತ್ನಮ್ಮ ಹೆಗ್ಗಡೆ ಸ್ಮಾರಕ ಪುರಸ್ಕಾರ ಹಾಗೂ ಮುದ್ದಣ ಕಾವ್ಯ ಪ್ರಶಸ್ತಿ ಪಡೆದಿವೆ, ಹೂವ ಚೆಲ್ಲಿದ ಹಾದಿ (೨೦೦೭), ಮಾಡಿದಡಿ (೨೦೧೭), ಗದ್ಯಗಂಧಿ (೨೦೨೦), ಮಾರಿಬಿಡಿ ಸಂಕಲನ ಅಮ್ಮ ಪ್ರಶಸ್ತಿ ಪಡೆದಿದೆ. ಕಾವ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ೨೦೧೮ನೇ ಸಾಲಿನ ಮಾಸ್ತಿ ಪ್ರಶಸ್ತಿಯನ್ನು ಕಮಲ ಪಡೆದಿದ್ದಾರೆ. ನೆಲದಾಸೆಯ ನಕ್ಷತ್ರಗಳು (೨೦೨೧) ಅವರ ಆರನೆಯ ಕಾವ್ಯಸಂಗ್ರಹ,


ಕಾಳನಾಮ ಚರಿತೆ ೨೦೧೮ರಲ್ಲಿ ಪ್ರಕಟವಾದ ಹಗುರ ಹರಟೆಯ ಹಂದರ, ಕಸೂತಿಯಾದ ನೆನಪು, ಕೊಳದ ಮೇಲಿನ ಗಾಳಿ ೨೦೧೯ರಲ್ಲಿ, ಊರ ಬೀದಿಯ ಸುತ್ತು ಕ್ವಾರಂಟೈನ್ ೨೦೨೦ರಲ್ಲಿ ಪ್ರಕಟವಾದ ಪ್ರಬಂಧ ಸಂಕಲನ. ಇವು ಇವರ ಪ್ರಮುಖ ಸಾಹಿತ್ಯದ ಕೃತಿಗಳು


ಅನುವಾದ ಸಾಹಿತ್ಯದಲ್ಲಿ ಮಹತ್ವದ ಕೊಡುಗೆ ನೀಡಿರುವ ಕಮಲ ಆಫ್ರಿಕನ್-ಅಮೆರಿಕನ್, ಮಹಿಳಾ ಕಾವ್ಯದಲ್ಲಿ ವಿಶೇಷ ಪರಿಶ್ರಮವನ್ನು ಹೊಂದಿದ್ದಾರೆ. ಕತ್ತಲ ಹೂವಿನ ಹಾಡು (೧೯೮೯), ಇವರು ಸಂಪಾದಿಸಿ, ಕನ್ನಡಿಸಿರುವ ಕಪ್ಪು ಲೇಖಕಿಯರ ಕಾವ್ಯ ಸಂಗ್ರಹ. ಕನ್ನಡದಲ್ಲಿ ಮೊದಲ ಬಾರಿಗೆ ಕಪ್ಪು ಕವಿಗಳನ್ನು ಪರಿಚಯಿಸುವ ಪ್ರಯತ್ನ ಓದುಗರ ಗಮನ ಮತ್ತು ವಿಮರ್ಶಕ ಮಾನ್ಯತೆ ಎರಡನ್ನೂ ಪಡೆಯಿತು. ಈ ಪ್ರಯತ್ನದ ವಿಸ್ತರಣೆಯಾಗಿ ಆಫ್ರಿಕನ್ ಅಮೆರಿಕನ್ ಸಮಾಜ ವಿಕಾಸಗೊಂಡ ಬಗೆ, ಗುಲಾಮಗಿರಿ ಪದ್ಧತಿಯ ವಿರುದ್ಧ ಅವರ ಹೋರಾಟ, ಮಹಿಳೆಯರು ಸಾಹಿತ್ಯದ ಮೂಲಕ ತಮ್ಮ ಅಭಿವ್ಯಕ್ತಿಯನ್ನು ಪಡೆದುಕೊಳ್ಳಲು ಮಾಡಿದ ಹೋರಾಟಗಳ ಕಥೆಯನ್ನು ಕಪ್ಪು ಪಟ್ಟಿ ಬೆಳಕಿನ ಹಾಡು' ಕೃತಿ ಸರಣಿಯ ನಾಲ್ಕು ಪುಸ್ತಕಗಳು ತೆರೆದಿಡುತ್ತವೆ. ಆರು ವರ್ಷಗಳ ಅವಧಿಯಲ್ಲಿ ಆಯ್ಕೆ, ಸಂಪಾದನೆ ಮತ್ತು ಅನುವಾದಗೊಂಡ ಈ ಕೃತಿಗಳು: ಕಪ್ಪು ಪಟ್ಟಿಯ ಬೆಳಕಿನ ಹಾಡು, ಉತ್ತರ ನಕ್ಷತ್ರ, ರೂಸಾಪಾರ್ಕ್ಸ್ಳ ನನ್ನ ಕಥೆ ಮತ್ತು ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ. ಈ ಪುಸ್ತಕಗಳು ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ, ಶಿವಮೊಗ್ಗ ಕರ್ನಾಟಕ ಸಂಘದ ಎಸ್.ವಿ.ಪರಮೇಶ್ವರ ಭಟ್ಟ ಪ್ರಶಸ್ತಿಗೆ ಪಾತ್ರವಾಗಿವೆ. ಅನುವಾದ ಕ್ಷೇತ್ರದಲ್ಲಿನ ಸಾಧನೆಗಾಗಿ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿಯನ್ನು ಕೂಡ ಕಮಲ ಪಡೆದಿದ್ದಾರೆ. 



ಪ್ರಸ್ತುತ ಹೊನ್ನಾವರಿಕೆ ಪ್ರಬಂಧಗಳು

 ಅವರ ಈ ಹಿಂದಿನ ಗದ್ಯ ಬರಹಗಳಂತೆಯೇ ಸರಳ ಮತ್ತು ನೇರ ನಿರೂಪಣೆ ಈ ಪ್ರಬಂಧಗಳಲ್ಲಿಯೂ ವಿಸ್ತಾರಗೊಂಡಿದೆ. ಈ ಅಂಶಗಳೇ ಅವರಿಗೆ ತಮ್ಮದೇ ಓದುಗ ವರ್ಗವನ್ನು ಸೃಷ್ಟಿ ಕೊಟ್ಟಿವೆ.


ಮನುಷ್ಯನ ಖಾಸಗಿ ಬದುಕಿನ ಅನುಭವಗಳು ಲೋಕಾನುಭವವಾಗಿ ಬದಲಾದಾಗ ಅರಿವೇ ಆಗದೆ ಓದುಗನ ಮನಸ್ಸನ್ನು ವ್ಯಾಪಿಸಬಲ್ಲವು  ಇಲ್ಲಿ ಹೇಳುತ್ತಿರುವ ಸಂಗತಿ, ಪ್ರಸಂಗ, ಅನುಭವಗಳು ನಮಗೂ ಆ ಗಿವೆಯಲ್ಲ ಎಂಬ ಅಚ್ಚರಿಯಲ್ಲಿ ಓದುಗ ಅದರಲ್ಲಿ ತಲ್ಲೀನವಾಗಬಲ್ಲ ಗುಣವನ್ನು ಈ ಪ್ರಬಂಧಗಳು ಪಡೆದಿವೆ. ಅದರಲ್ಲೂ ನನ್ನಂತಹ ಶಿಕ್ಷಕರಿಗೆ ಅನಿಸದೆ ಇರದು. ಬದುಕಿನ ಸಾಮಾನ್ಯ ಸಂಗತಿಗಳಿಗೂ ಅದರದೇ ಆದ ಚೆಲುವು ಇರುತ್ತದೆ  ಎಂಬ  ಅರಿವನ್ನು ಈ ಬರಹಗಳು ಮೂಡಿಸತ್ತವೆ.


ಚೋಟುದ್ದದ ಹುಡುಗರು ,

ಕಳೆದುದು ಸಿಗದಿರಲಿ,ಇಡೀ ಮನೆಯನ್ನೇ ಯಾರೋ ಮಡಿಚಿಡುತ್ತಿದ್ದಾರೆ,ಕನಸೊಂದನ್ನು ಸುರುಳಿ ಸುತ್ತಿ,ಬಾಗಿಲು ತೆಗೆಯ,

ವರ್ತಮಾನ ಕಾಲದ ಹುಡುಕಾಟದಲ್ಲಿ , ಎಲ್ಲ ಹೆಣ್ಣುಗಳ ದನಿಯಾಗಲಿ,ಒಂದು ಲಹರಿ,

ಬಚ್ಚಿಟ್ಟಿದ್ದು ಪರರಿಗೂ ಅಲ್ಲ,

'ಡಿಲೀಟ್' ಮಾಡುತ್ತಾ ಬದುಕುವುದು,

ಗಂಟಲಲ್ಲಿ ಮುರಿದ ಮುಳ್ಳು ,

ಬೀದಿಯಲ್ಲಿ ಸಿಕ್ಕ ಕತೆಗಳು,

ಒಂದು ರಫ್ ನೋಟ್ಬುಕ್,ವಾಸ್ತವದ ಬೆಂಕಿಯಲ್ಲಿ ಸುಡದ ನೆನಪುಗಳು, ಗಾಡಿಯ ಮೋಹ,

ನೆನಪುಗಳ ಬುತ್ತಿ ಚಿಗುರು, ಮುಂತಾದ ವಿಭಿನ್ನ ವಿಷಯಗಳ ಪ್ರಬಂಧಗಳು ನನಗೆ ಇಷ್ಟ ಆದವು.

ಅದರಲ್ಲೂ ಕೊನೆಯ ಪ್ರಬಂಧವಾದ 

ಎಲ್ಲಾ "ಪ್ರೀತಿಯ ಶಿಕ್ಷಕರಿಗೆ " ಎಂಬ ಪ್ರಬಂಧವು ನನ್ನಂತವನ ಕುರಿತೇ ಬರದಂತಹ ಸಲಹಾ ರೂಪದ ಪ್ರಬಂಧ ಎನಿಸಿತು.


ಒಟ್ಟಾರೆ ನೀವು ಒಮ್ಮೆ ಹೊನ್ನಾವರಿಕೆ ಓದಿದರೆ ವಿಭಿನ್ನ ವಿಷಯಗಳ ಪ್ರಬಂಧಗಳ ಪ್ರಪಂಚ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ.


ಪುಸ್ತಕದ ಹೆಸರು: ಹೊನ್ನಾವರಿಕೆ

ಲೇಖಕರು : ಎಂ ಆರ್ ಕಮಲ 

ಪ್ರಕಾಶನ: ಕಥನ ಪ್ರಕಾಶನ ಬೆಂಗಳೂರು

ಬೆಲೆ: 175.00 ₹



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

ಗುಣಾತ್ಮಕ ಶಿಕ್ಷಣ ನಮ್ಮ ಅದ್ಯತೆಯಾಗಬೇಕಿದೆ.


 


ಗುಣಾತ್ಮಕ ಶಿಕ್ಷಣಕ್ಕೆ ಮಹತ್ವ ನೀಡೋಣ .

ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಾಖಲೆಯ ಫಲಿತಾಂಶ ಪಡೆದ ನಾವು ಪಿ ಯು ಸಿ ಯಲ್ಲಿ ಅಂತಹದೇ ಫಲಿತಾಂಶ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೇವೆ. ಸಂತಸದ ಈ ಹೊತ್ತಿನಲ್ಲಿ ರಾಷ್ಟ್ರೀಯ ಸಾಧನೆ ಸಮೀಕ್ಷೆ (NAS) ವರದಿ ನಮ್ಮ ಕೈ ಸೇರಿದೆ. ಆ ವರದಿಯ ಪ್ರಮುಖವಾದ ಅಂಶಗಳು ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ಕಲಿಕೆ ಅಷ್ಟೊಂದು ಅಭಿವೃದ್ಧಿಯಾಗಿಲ್ಲ ಎಂಬುದನ್ನು ಬೊಟ್ಟು ಮಾಡಿ ತೋರಿಸುತ್ತದೆ.ಇದು ದೇಶದಾದ್ಯಂತ ನಡೆದ ಸಮೀಕ್ಷೆಯ  ವರದಿಯಾಗಿದ್ದು ಈ ಸಮೀಕ್ಷೆಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಸಹ ಪಾಲ್ಗೊಂಡಿದ್ದರು.

3,5,8 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಸಾಧನೆ ಯಾವಮಟ್ಟದಲ್ಲಿದೆ ಎಂಬುದನ್ನು ತಿಳಿಯುವುದಕ್ಕಾಗಿ ರಾಷ್ಟ್ರಮಟ್ಟದಲ್ಲಿ 'ರಾಷ್ಟ್ರೀಯ ಸಾಧನೆ ಸಮೀಕ್ಷೆ ನಡೆಸಲಾಗಿದೆ. ಸರ್ಕಾರಿ ಶಾಲೆ, ಅನುದಾನಿತ ಶಾಲೆ ಖಾಸಗಿ ಶಾಲೆ ಮತ್ತು ಕೇಂದ್ರೀಯ ಶಾಲೆಯ ವಿದ್ಯಾರ್ಥಿಗಳ ಕಲಿಕಾ ಮಟ್ಟದ ಸಮೀಕ್ಷೆ ನಡೆದಿದೆ. ಇದು ದೊಡ್ಡ ಮಟ್ಟದ ಸಮೀಕ್ಷೆಯಾಗಿದೆ. 2021ರ ಸಮೀಕ್ಷೆಯ ವರದಿಯು ಈಗ ಪ್ರಕಟವಾಗಿದೆ. ಭಾಷೆ, ವಿಜ್ಞಾನ, ಸಮಾಜ ವಿಜ್ಞಾನ, ಇಂಗ್ಲಿಷ್ ಮುಂತಾದ ವಿಷಯಗಳಲ್ಲಿನ ಕಲಿಕಾ ಮಟ್ಟವನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. 2017ರ ಸಮೀಕ್ಷೆಗೆ ಹೋಲಿಸಿದರೆ 2021ರಲ್ಲಿ ಕಲಿಕಾಮಟ್ಟವು ಕುಸಿತ ಕಂಡಿದೆ.ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳ ವಿವಿಧ ವಿಷಯಗಳ ಕಲಿಕಾ ಮಟ್ಟವು ಕಳವಳಕಾರಿಯಾಗಿದೆ ಎಂಬುದರತ್ತ ಸಮೀಕ್ಷಾ ವರದಿಯು ಬೆಳಕು ಚೆಲ್ಲಿದೆ.
ಭಾಷೆ, ಗಣಿತ, ವಿಜ್ಞಾನ, ಪರಿಸರ ಅಧ್ಯಯನ, ಇಂಗ್ಲಿಷ್ ಹಾಗೂ ಆಧುನಿಕ ಭಾರತೀಯ ಭಾಷೆಗಳ ಅಧ್ಯಯನದಲ್ಲಿ 3, 5, 8 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಸಾಧನೆಯ ಅಂಕಗಳನ್ನು ವರದಿ ಬಹಿರಂಗಪಡಿಸಿದೆ. ಗರಿಷ್ಠ 500  ಅಂಕಗಳನ್ನು ನಿಗದಿಪಡಿಸಲಾಗಿದ್ದು,  ಬಹುತೇಕ ಈ ಎಲ್ಲ ಹಂತಗಳಲ್ಲೂ ಅಂಕಗಳು ಕಡಿಮೆಯಾಗಿರುವುದು ಸಮೀಕ್ಷೆಯಿಂದ ಸಾಬೀತಾಗಿದೆ.

10ನೇ ತರಗತಿಯ ಇಂಗ್ಲಿಷ್ನಲ್ಲಿ ಮಾತ್ರ 2017ಕ್ಕೆ ಹೋಲಿಸಿದರೆ 269ಅಂಕ ಪಡೆದಿದ್ದ ಮಕ್ಕಳು, 2011ರಲ್ಲಿ 383 ಅಂಕ ಪಡೆದಿರುವುದು ತುಸು ಸಮಾಧಾನ ತಂದಿದೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ಮತ್ತೊಂದು ಮಾಹಿತಿಯ ಅತಂಕಕಾರಿಯಾಗಿದೆ .ಅದೇನೆಂದರೆ ಪ್ರೌಢಶಾಲಾ ಹಂತದಲ್ಲಿ, ಆಧುನಿಕ ಭಾರತೀಯ ಭಾಷಾ ವಿಷಯದಲ್ಲಿ ಉಲ್ಲೇಖವಾಗಿರುವ ಕಥೆ, ನಾಟಕ, ವಸ್ತುವಿಷಯವನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ವಿಭಾಗದಲ್ಲಿ ವಿದ್ಯಾರ್ಥಿಗಳು 2017ರಲ್ಲಿ 500ಕ್ಕೆ 252 ಅಂಕ ಪಡೆದಿದ್ದರು, ಆದರೆ 2011ರಲ್ಲಿ ಈ ಸಾಮರ್ಥ್ಯವು 242 ಅಂಕಗಳಿಗೆ  ಕುಸಿದಿದೆ.
ಈ ಮೇಲಿನ ಅಂಶಗಳನ್ನು ಗಮನಿಸಿದರೆ ನಮಗೆ ಸಾಮಾನ್ಯವಾಗಿ ಗ್ರಹಿಕೆಯಾಗುವುದು ನಮ್ಮ ಮಕ್ಕಳ ಓದುವ ಮತ್ತು ಬರೆಯುವ ಕೌಶಲ್ಯ ಕಡಿಮೆಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕೆ ಪೂರಕವಾಗಿ ಈ ಸಮೀಕ್ಷೆಯು ಮತ್ತೊಂದು ವರದಿಯನ್ನು ಗಮನಿಸುವುದಾದರೆ

ದೇಶದ ಪ್ರೌಢಶಿಕ್ಷಣ ವ್ಯವಸ್ಥೆಯಲ್ಲಿ 10ನೇ ತರಗತಿ ಮಕ್ಕಳಿಗೆ ಆಧುನಿಕ ಭಾರತೀಯ ಭಾಷೆಯೊಂದನ್ನು (ಎಂಐಎಲ್) ಬೋಧಿಸಲಾಗುತ್ತದೆ. ಸಂಸ್ಕೃತ, ಹಿಂದಿ, ಬಂಗಾಳಿ, ಕನ್ನಡ, ತಮಿಳು ಸೇರಿ ಒಟ್ಟು 21 ಭಾಷೆಗಳನ್ನ ಆಧುನಿಕ ಭಾರತೀಯ ಭಾಷೆ ಎಂದು ವರ್ಗೀಕರಿಸಲಾಗಿದೆ. ಆದರೆ ದೇಶದಾದ್ಯಂತ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳಲ್ಲಿ ಅರ್ಧಕ್ಕೂ ಹೆಚ್ಚಿನವರು,  ಈ  ಪಠ್ಯವನ್ನು ಓದಲು, ಬರೆಯಲು ಮತ್ತು ಅರ್ಥಮಾಡಿಕೊಳ್ಳಲು ಬರುವುದಿಲ್ಲ ಎಂದು ಹೇಳಿದ್ದಾರೆ.

ಹಿಂದಿ ಭಾಷಿಕ ರಾಜ್ಯಗಳಲ್ಲಿ ಹಿಂದಿಯೇತರ ಭಾಷೆಯನ್ನು ಎಂಐಎಲ್ ಆಗಿ ಬೋಧಿಸಲಾಗುತ್ತದೆ. ಹಿಂದಿಯೇತರ ಭಾಷಿಕ ರಾಜ್ಯಗಳಲ್ಲಿ ಅಲ್ಲಿನ ಪ್ರಾದೇಶಿಕ ಭಾಷೆಯನ್ನು ಹೊರತುಪಡಿಸಿದ ಭಾಷೆಗಳನ್ನು ಎಂಐಎಲ್ ಆಗಿ ಬೋಧಿಸಲಾಗುತ್ತದೆ. ಈ ಸಮೀಕ್ಷೆಯಲ್ಲಿ ಭಾಗಿಯಾದ ಎಲ್ಲಾ ರಾಜ್ಯಗಳ ವಿದ್ಯಾರ್ಥಿಗಳಲ್ಲಿ, ಶೇ 59ರಷ್ಟು ಜನರು ಎಂಐಎಲ್ನಲ್ಲಿ ಇರುವ ಕವನ, ಗದ್ಯ ಮತ್ತು ನಾಟಕಗಳನ್ನು ಓದಲು ಬರೆಯಲು ಮತ್ತು ಅರ್ಥಮಾಡಿಕೊಳ್ಳಲು ಬರುವುದಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲೂ ಶೇ 65ರಷ್ಟು ವಿದ್ಯಾರ್ಥಿಗಳು ಎಂಐಎಲ್ನಲ್ಲಿ ಇರುವ ಕವನ, ಗದ್ಯ ಮತ್ತು ನಾಟಕಗಳನ್ನು ಓದಲು-ಬರೆಯಲು ಮತ್ತು ಅರ್ಥಮಾಡಿಕೊಳ್ಳಲು ಬರುವುದಿಲ್ಲ ಎಂದು ಹೇಳಿದ್ದಾರೆ. ಇದೂ ಮತ್ತೂ ಆಘಾತಕಾರಿಯಾದ ಅಂಶ.

ಈ ರೀತಿಯ ಕಲಿಕಾ ಸಾಧನೆಯ ಕುಸಿತಕ್ಕೆ ಕಾರಣ ಹುಡುಕಲು ಹೊರಟರೆ ಹಲವಾರು ಅಂಶಗಳು  ಇದೇ ಸಮೀಕ್ಷೆಯಲ್ಲಿ ನಮಗೆ ಸಿಗುತ್ತವೆ. ಅಂತಹ ಅಂಶಗಳಲ್ಲಿ ಬೋಧನೆಯ ಜೊತೆಗೆ ಶಿಕ್ಷಕರಿಗೆ ಇತರೆ ಕಾರ್ಯಭಾರ ಹಾಕಿರುವುದು ಎಂದು ದೇಶದ 43% ಶಿಕ್ಷಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ತರಗತಿ ಬೋಧನೆಯಲ್ಲಿ ವಿದ್ಯಾರ್ಥಿಗಳನ್ನು ಸೆಳೆಯಲು ಅತಿಮುಖ್ಯ ಎಂದು ಪರಿಗಣಿತವಾಗಿರುವ ಬೋಧನೋಪಕರಣಗಳು ಹಾಗೂ ಪೂರಕ ಸಲಕರಣೆಗಳ ಪೂರೈಕೆಯಲ್ಲಿ ಕೊರತೆಯಿದೆ ಎಂಬುದರತ್ತ ವರದಿ ಬೊಟ್ಟು ಮಾಡಿದೆ. 3 ಹಾಗೂ 8ನೇ ತರಗತಿಯಲ್ಲಿ ಶೇ.63ರಷ್ಟು ಕೊರತೆಯಿದ್ದರೆ, 5 ಹಾಗೂ 10ನೇ ತರಗತಿಯಲ್ಲಿ ಶೇ. 62ರಷ್ಟು ಕೊರತೆ ಇದೆ ಎಂಬುದು ಸಮೀಕ್ಷೆಯಲ್ಲಿ ಬಿಂಬಿತವಾಗಿದೆ. ಇದೂ ಸಹ ಕಲಿಕೆಯ ಕುಸಿತಕ್ಕೆ ಒಂದು ಕಾರಣ ಎಂದರೆ ತಪ್ಪಾಗಲಾರದು.
ದೇಶದ  ಕೆಲ ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಕೊರತೆಯಿದೆ ಎಂಬುದನ್ನು ಈ ಸಮೀಕ್ಷೆಯು ಬಹಿರಂಗಪಡಿಸಿದೆ.
ಶಾಲಾ ಕಟ್ಟಡಗಳ ಗುಣಮಟ್ಟವೂ ಶೈಕ್ಷಣಿಕ ಚಟುವಟಿಕೆಯಲ್ಲಿ ಅತಿಮುಖ್ಯ. ಆದರೆ ರಾಜ್ಯದ 3ನೇ ತರಗತಿ ಹಂತದ ಶಾಲಾ ಕಟ್ಟಡಗಳನ್ನು ಸಂಪೂರ್ಣವಾಗಿ ದುರಸ್ತಿ ಮಾಡಬೇಕಿದೆ ಎಂದು ಶೇ 23ರಷ್ಟು ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಪ್ರೌಢಶಾಲಾ ಹಂತದಲ್ಲಿ ಕಟ್ಟಡಗಳ ದುರಸ್ತಿ ಬೇಡಿಕೆ ಸ್ವಲ್ಪ ಕಡಿಮೆಯಿದೆ ಎಂಬುದು ಸಮಾಧಾನಕರ ಸಂಗತಿ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದ ಈ ಹಂತದಲ್ಲಿ ಮಕ್ಕಳ ಕಲಿಕೆಯ ಕುಸಿತ ಎಲ್ಲರೂ ಯೋಚಿಸಬೇಕಾದ ಸಂಗತಿ. ಈ ಸಂಧರ್ಭದಲ್ಲಿ  ಪಠ್ಯಕ್ರಮ ಪಠ್ಯ ಪುಸ್ತಕ ಕುರಿತಾಗಿ ಅನಗತ್ಯ ಗೊಂದಲ ಮಾಡಿಕೊಂಡು ರಾಡಿ ಎಬ್ಬಿಸುತ್ತಿರುವುದು ದುರದೃಷ್ಟಕರ .ಇಂತಹ ಸಂಧರ್ಭದಲ್ಲಿ ಒಬ್ಬರ  ಮೇಲೋಬ್ಬರು ಅನಗತ್ಯವಾಗಿ ದೂರದೆ ಆಳುವವರು,ಅಧಿಕಾರಿಗಳು,ಶಿಕ್ಷಕರು, ಪೋಷಕರು ಮತ್ತು ಮಕ್ಕಳು ಎಲ್ಲರೂ ಸೇರಿ ನಮ್ಮ ದೇಶದ ಮಕ್ಕಳ ಕಲಿಕೆ ಉತ್ತಮವಾಗಲು ಹಾಗೂ ಗುಣಾತ್ಮಕ ಆಗಿರುವಂತೆ ಕ್ರಮ ವಹಿಸಬೇಕಿದೆ. ದೇಶದ ಜವಾಬ್ದಾರಿಯುತ ಪ್ರಜೆಗಳನ್ನಾಗಿ ಮಾಡುವ ಶಿಕ್ಷಣ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕಿದೆ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529