16 ಜನವರಿ 2022

ಮಹಾಬಯಲು. ವಿಮರ್ಶೆ



ಮಹಾಬಯಲು .ಕೃತಿ ವಿಮರ್ಶೆ.


  ವೃತ್ತಿಯಲ್ಲಿ ವೈದ್ಯರಾದ ಡಾ. ಎಸ್ ಪರಮೇಶ್ ರವರು ನಡೆದಾಡುವ ದೇವರಾದ ಶ್ರೀ ಶಿವಕುಮಾರ ಸ್ವಾಮೀಜಿರವರ ಕುರಿತಾದ ಪುಸ್ತಕ "ಮಹಾಬಯಲು" ಓದುತ್ತಿದ್ದರೆ ಸ್ವಾಮೀಜಿಯವರು ನಮ್ಮ ಪಕ್ಕ ಕುಳಿತು ಮಾತನಾಡುವ ಅನುಭವವಾಗುತ್ತದೆ.


ಲೇಖಕರು ಹತ್ತು ವರ್ಷದ ಬಾಲಕನಿದ್ದಾಗಿನಿಂದ ಅವರು ಶಿವೈಕ್ಯವಾಗುವವರೆಗೆ ಅವರೊಂದಿಗೆ ಒಡನಾಡಿದ ಪ್ರಸಂಗಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.



ಶ್ರೀಗಳ    ದಿನಚರಿಯೇ ಅಚ್ಚರಿ! ಸೂರ್ಯನ ಹಾಗೆ ಬದಲಾವಣೆ ಆಗದ ಹಾಗಿರುತ್ತಿತ್ತು. ಬೆಳಗಿನ ಜಾವ 2.30 ಎಚ್ಚರವಾಗಿ ರಾತ್ರಿ 11 ಗಂಟೆಯವರೆಗೂ ನಿರಂತರವಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರು. ಎದ್ದ ತಕ್ಷಣ ಲಘು ವ್ಯಾಯಾಮ, ಧ್ಯಾನ ಮಾಡಿ ಸ್ನಾನಪೂಜಾದಿ ಶಿವಯೋಗ ಮಾಡಿ ನಂತರ ಕಛೇರಿಗೆ ಬಂದು ದಾಸೋಹ, ಶಿಕ್ಷಣ ಸಂಸ್ಥೆಗಳ ಬಗ್ಗೆ ವಿಚಾರ ಮಾಡಿ ಭಕ್ತರ ಭೇಟಿ ಮಾಡಿ ನಂತರ ಹೊರಗಿನ ಪೂಜಾ ಕಾರ್ಯಕ್ರಮಗಳಿಗೆ ಹೋಗಿ ಬರುತ್ತಿದ್ದರು. ಸಂಜೆಗೆ ಎಲ್ಲಾ ಜಮೀನುಗಳಿಗೆ ಹೋಗುವಂತಹದ್ದು. ಶ್ರಮದಾನ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು. ನ೦ತರ ಸಂಜೆಯ ಸಾಮೂಹಿಕ ಪ್ರಾರ್ಥನೆಗೆ ಎಂತಹ ಬಿಡುವಿಲ್ಲದ ವೇಳೆಯಲ್ಲೂ ಹಾಜರಾಗಿ ಮಕ್ಕಳಿಗೆ ಪ್ರಾರ್ಥನೆಯ ಮಹತ್ವ ತಿಳಿಸುತ್ತಿದ್ದರು. ನಂತರ ಭದ್ರಾಸನದಲ್ಲಿ ಕುಳಿತು ಬಂದ ಭಕ್ತಾದಿಗಳಿಗೆ ದರ್ಶನ ನೀಡುತ್ತಿದ್ದರು. ಬಂದಂಥವರಿಗೆ ಅವರ ಕಷ್ಟ ಸುಖಗಳನ್ನ ಕೇಳಿ ಆಶೀರ್ವದಿಸುತ್ತಿದ್ದರು. ರಾತ್ರಿ 9 ರ ನಂತರ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ನಂತರ ಶಿವಪೂಜೆ ಪ್ರಸಾದ ಸ್ವೀಕರಿಸಿ ವಿಶ್ರಾಂತಿ ಪಡೆಯುತ್ತಿದ್ದರು. ಎಂದು  ಶ್ರೀಗಳ ಬಗ್ಗೆ ಪ್ರಸ್ತುತ ಮಠದ ಸ್ವಾಮೀಜಿ ಗಳಾದ ಸಿದ್ದಲಿಂಗ ಮಹಾಸ್ವಾಮಿಗಳು  ನೀಡಿರುವ ವಿವರಣೆ ಇಂದಿನ ಸರ್ವರಿಗೂ ಮಾದರಿ .


ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದ ಡಾ.ಗೋ .ರು .ಚ ರವರು 

ಸಿದ್ಧಗಂಗಾ ಕ್ಷೇತ್ರವನ್ನು ಲೋಕಸೇವೆಯ ಮಹಾಮಣಿಹದ ಸೋಜಿಗದ ಕೇಂದ್ರವನ್ನಾಗಿಸಿದ ಈ ಕಾಯಕಯೋಗಿಯನ್ನು, ದಾಸೋಹದ ದಿವ್ಯವನ್ನು, ಅನುಭಾವದ ಅನಂತವನ್ನು, ಪಾವಿತ್ರ್ಯತೆಯ ಪಾದುಕೆಯನ್ನು, ಸಂಕಲ್ಪಸಿದ್ಧಿಯ ವಾಕ್ಕನ್ನು, ನೇಗಿಲಯೋಗದ ಋಷಿಯನ್ನು, ಜ್ಞಾನಯೋಗದ ಜ್ಯೋತಿಯನ್ನು, ಸಕಲ ಜೀವರಾಶಿಯ ಲೇಸನ್ನು, ನಿಸರ್ಗಪ್ರೀತಿಯ ಸಾಗರವನ್ನು, ಜೀವಾನುಕಂಪದ ಆಗರವನ್ನು, ಜನಪ್ರೇಮದ ಜಂಗಮವನ್ನು, ಗಂಭೀರ ಚಿಂತನೆಯ ಘನವನ್ನು, ಮಕ್ಕಳ ಪಾಲಿನ ಕಕ್ಕುಲತೆಯನ್ನು, ಅನಾಥರ ಬಗೆಗಿನ ಕಾರುಣ್ಯವನ್ನು, ಶಿಕ್ಷಣಸೇವೆಯ ಶೈಲವನ್ನು, ಸರ್ವಸಮಾನತೆಯ ಸಮದರ್ಶಿಯನ್ನು ಶರಣ ಸಂಸ್ಕೃತಿಯ ಸಾಕಾರವನ್ನು ಕುರಿತು ಯಾರು ಎಷ್ಟು ಬರೆದರೂ ಸಾಲದು, ಪೂಜ್ಯರ ಬದುಕು ಅಳೆಯಲಾಗದ ಆಕಾಶ, ಎಣಿಸಲಾಗದ ನಕ್ಷತ್ರ; ಆದರೂ ಅವರ ಬಗೆಗೆ ಶ್ರದ್ಧಾಭಕ್ತಿಯಿದ್ದವರು ತಮ್ಮ ತಮ್ಮ ಶಕ್ತಿಗೆ ಸಾಮರ್ಥವಿದ್ದಷ್ಟು ಬರೆದಿದ್ದಾರೆ ಹಾಗೂ ಪ್ರಕಟಿಸಿದ್ದಾರೆ. ಆ ಎಲ್ಲ ಸಾಹಿತ್ಯದಲ್ಲಿ ಪೂಜ್ಯರ ಬದುಕಿನ ಬಹುತೇಕ ಸಂಗತಿಗಳು ದಾಖಲೀಕರಣವಾಗಿವೆ.ಎಂದಿರುವರು


ನೂರಾ ಅರವತ್ತು ಪುಟಗಳ ಈ ಕೃತಿಯಲ್ಲಿ ಮೂವತ್ತೇಳು ಅಧ್ಯಾಯಗಳಿದ್ದು ,ಲೇಖಕರು ತಾವು ಕಂಡ  ಶ್ರೀಗಳ ಬಗ್ಗೆ  ಮಾಹಿತಿಯನ್ನು ಹಂಚಿಕೊಂಡಿರುವರು.


 ತಾಯಿಗೆ ಮಗು ಕಾದಂತೆ ಕಾಯುತ್ತಾ ನಿಂತಿತ್ತು ನಮ್ಮೂರು ಎಂಬ ಅಧ್ಯಾಯದಲ್ಲಿ ಅವರು ಮೊದಲು ಶ್ರೀಗಳ ಭೇಟಿ ಮಾಡಿದ ಚಿತ್ರಣ ನೀಡಿರುವರು.   ಜಾತ್ರೆ ಗೆ ಬಂದಾಗ ಜಾಗವಿರದೆ   ಶ್ರೀಗಳ ದರ್ಶನದ ಮಂಚದ ಕೆಳಗೆ ಮಲಗಿದ್ದೆವು ಎಂಬ ಅಧ್ಯಾಯದಲ್ಲಿ ತಮ್ಮ ಅದೃಷ್ಟದ ಬಗ್ಗೆ ಉಲ್ಲೇಖ ಮಾಡಿರುವರು.

ಮಠದ ಆಶ್ರಯ ಅರಸಿ ಬರುವ  ಪ್ರತಿಯೊಂದು ಮಗುವಿನ ಅಡ್ಡಿಷನ್ ಫಾರಂಗೆ ಸಹಿ ಹಾಕುತ್ತಿದ್ದ ಶ್ರೀಗಳು  ಮಕ್ಕಳಿಗೆ ಹೇಳುವ ಬುದ್ದಿ ಮಾತು ಇಂದಿಗೂ ಪ್ರಸ್ತುತ.


ಇನ್ನೂ ಈ ಕೃತಿಯಲ್ಲಿ ನನಗೆ ಬಹಳ ಇಷ್ಟವಾದ ಅಧ್ಯಾಯಗಳೆಂದರೆ 

 'ಬುದ್ದೀ' ಅನ್ನೋದ್ರಲ್ಲಿ 'ಅಮ್ಮ' ಎನ್ನುವ ಕೂಗಿತ್ತು,

ಭಕ್ತಿಯಿಂದ ನೀಡಿದ ಪೊರಕೆ ದೇವರ ಗುಡಿ ಮುಟ್ಟಿತ್ತು, ಕಾಳುಗಳ ಸಾಂಬಾರ್' ಎಂದರೆ ಶ್ರೀಗಳಿಗೆ ಇಷ್ಟ,

ಮಿತಿಯಾದ ಆಹಾರವೇ ಕಾಯಕದ ಶಕ್ತಿ,  ಆರ್ಬಿಐ ಅಧಿಕಾರಿಗಳೇ ತಬ್ಬಿಬ್ಬಾಗಿದ್ದರು!

 ಒಂದರಿಂದ ಇನ್ನೊಂದು ಕೆಲಸಕ್ಕೆ ತೊಡಗುವುದೇ ವಿಶ್ರಾಂತಿ, ಇಷ್ಟೊಂದು ಕಾಣಿಕೆ ನೀಡಿ ನಿನಗೇನು ಮಾಡುತ್ತೀಯಾ?

 ಹಳೆಯ ಮಠದಲ್ಲಿ ಆಗುವ ಸಣ್ಣ ಬದಲಾವಣೆಯನ್ನೂ ಸಹಿಸುತ್ತಿರಲಿಲ್ಲ! ಶ್ರೀಗಳಿಗೆ ಎಂಡೋಸ್ಕೋಪಿ ಮಾಡಲು ನಡೆದ ವ್ಯಾಪಕ ಚರ್ಚೆ,  ಹಳೆಯ ಮಠ ಮಿನಿ ಐಸಿಯುವಿನಂತೆ ಬದಲಾಗಿತ್ತು! 


ಇದರ ಜೊತೆಗೆ ಶ್ರೀಗಳ ಕಡೆಯ ದಿನಗಳಲ್ಲಿ ಆಸ್ಪತ್ರೆಯಲ್ಲಿ ಕಳೆದ ವಿವರಗಳನ್ನು ಓದುವಾಗ ಮನಸ್ಸಿಗೆ  ಬಹಳ ನೋವಾಗುತ್ತದೆ.ಆದರೂ ಅವರು ಮಾನವ ಕುಲಕ್ಕೆ ನೀಡಿರುವ ಸೇವೆಯನ್ನು ನೆನೆದು ಸಂತಸವಾಗುತ್ತದೆ .ನಮ್ಮ ನಾಡಿನಲ್ಲಿ ಅಂತಹ ಮಹಾಪುರುಷರು ಪುನಃ ಹುಟ್ಟಿ ಬರಲಿ ಎಂಬ ಬಯಕೆಯಾಗುತ್ತದೆ.


ಈ ಪುಸ್ತಕ ಓದುವಾಗ ವಿಷಯಕ್ಕೆ ಪೂರಕವಾದ ರೇಖಾಚಿತ್ರಗಳು ಮತ್ತು ಮುಖಪುಟ ವಿನ್ಯಾಸ ಮತ್ತು ಒಳಪುಟ ವಿನ್ಯಾಸ ನಮ್ಮ ಗಮನ ಸೆಳೆಯುತ್ತವೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದರಾದ ಕೋಟೆ ಕುಮಾರ್ ಮತ್ತು ಅವರ ಗೆಳೆಯರಾದ ಗುರುದತ್ ರವರ ಕಲಾಕುಸುರಿ ಪುಸ್ತಕಕ್ಕೆ ಹೊಸ ಮೆರಗು ನೀಡಿದೆ.

ನೀವೂ ಒಮ್ಮೆ ಈ ಮಹಾಬಯಲು ಪುಸ್ತಕ ಓದಿ ಶ್ರೀಗಳ ನೆನಪುಗಳು ನಿಮ್ಮನ್ನು ಹರಸಲಿ.


ಪುಸ್ತಕದ ಹೆಸರು: ಮಹಾಬಯಲು

ಪ್ರಕಾಶನ: ಪರಂಜ್ಯೋತಿ ಪ್ರಕಾಶನ

ಬೆಲೆ: 150 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529


 

ಗತ ನೆನಪುಗಳ ಸ್ಮರಿಸೋಣ.


 



ಇಂದು ಬೆಳಿಗ್ಗೆ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಒಂದು ಅಂಕಣ ಓದುವಾಗ   ಅಮೇರಿಕಾದ ಲೇಖಕರಾದ ರಿಕ್ ವಾರೆನ್ ಅವರು ಹೇಳಿದ ಮಾತು ನನ್ನನ್ನು ಸೆಳೆಯಿತು.ಅದು " ನಾವು ಭೂತಕಾಲದಿ ಉದಯಿಸಿದವರು ಆದರೆ ಅದೇ ಭೂತದಲ್ಲಿ ಬಂಧಿಯಾಗಬಾರದು" ಹೌದಲ್ಲವೇ ನಾವು ಇಂದು ಏನಾಗಿದ್ದೇವೋ ಅದಕ್ಕೆ ಗತಕಾಲದೊಂದಿಗೆ ಖಂಡಿತವಾಗಿಯೂ ಸಂಬಂಧವಿದೆ. ಆದರೆ ಅದನ್ನೇ ನೆನೆಪು ಮಾಡಿಕೊಂಡು ಪ್ರತಿದಿನ ಪ್ರತಿಕ್ಷಣ ಕುಳಿತರೆ ವರ್ತಮಾನದಲ್ಲಿ ಜೀವನ ಸಾದ್ಯವೇ?  ಭೂತವೂ ಬೇಕು , ವರ್ತಮಾನದಿ ಬದುಕಬೇಕು ಮತ್ತು ತನ್ಮೂಲಕ ಭವಿಷ್ಯವನ್ನು ಕಟ್ಟಿಕೊಳ್ಳಬೇಕು.


ಸವಿನೆನಪುಗಳು ಬೇಕು ಸವಿಯಲೀ ಬದುಕು ಎಂಬ ಕವಿವಾಣಿಯಂತೆ ಸವಿ ನೆನಪುಗಳು ನಮ್ಮನ್ನು ಸಂತಸವಾಗಿಡಲು ನಮ್ಮ ಆನಂದವನ್ನು ಇಮ್ಮಡಿಗೊಳಿಸಲು ಖಂಡಿತವಾಗಿಯೂ ಬೇಕು. ಆದರೆ ಬಹುತೇಕ ಬಾರಿ ಬೇಡವೆಂದರೂ ನಮಗಾದ ನೋವು, ಅವಮಾನ, ತೊಂದರೆಗಳೇ ದುತ್ತೆಂದು ಬಂದು ನಮ್ಮ ಮೇಲೆಯೇ ಎರಗಿ ನಮ್ಮ ಮನೋಬಲವನ್ನು ಕುಗ್ಗಿಸಿ ನಮ್ಮ ಕಡೆ ಕುಹಕದ ನಗೆ ಬೀರಿ ಹಂಗಿಸುತ್ತವೆ.


ವರ್ತಮಾನದಲದಲಿ ಜೀವಿಸಿ ಎಂದು ಸಾಧು ಸಂತರು, ಹಿರಿಯರು, ತಿಳಿದವರು ,ಹಿತೈಷಿಗಳು, ವ್ಯಕ್ತಿತ್ವ ವಿಕಸನದ ಗುರುಗಳು ದಿನಗಟ್ಟಲೆ ಉಪನ್ಯಾಸ ನೀಡಿದರೂ ಅವರೇಳಿದಷ್ಟು ಸಲೀಸಾಗಿ ವರ್ತಮಾನದಲ್ಲಿ ಜೀವಿಸಲು ಸಾದ್ಯವೇ? ಕಷ್ಟ ಸಾಧ್ಯ. ಅವರ ಮಾತುಗಳಲ್ಲಿ ಸತ್ಯವಿದೆ  ಆದರೂ ಆಚರಣೆಯಲ್ಲಿ ಅಷ್ಟು ಸುಲಭವಲ್ಲ . ವರ್ತಮಾನದಲ್ಲಿ ಜೀವಿಸುವ  ಪ್ರಯತ್ನ ಜಾರಿಯಲ್ಲಿರಲಿ.


ಕೆಲವೊಮ್ಮೆ ನಮ್ಮ ಹಳೆಯ ನೆನಪುಗಳು ಮಧುರವೂ ಹೌದು .ಇತ್ತೀಚಿನ ದಿನಗಳಲ್ಲಿ"  ಪಾಸ್ಟ್ ಲೈಪ್ ರಿಗ್ರೆಷನ್ ಟೆಕ್ನಿಕ್"  ಎಂಬ ಚಿಕಿತ್ಸಾ ಪದ್ದತಿಯು ಬಹಳ ಜನಪ್ರಿಯವಾಗುತ್ತಿದೆ. ನಮ್ಮ ಕೆಲ ಅನಾರೋಗ್ಯದ ಸಮಸ್ಯೆಗಳಿಗೆ ಅಲೋಪತಿ, ಹೋಮಿಯೋಪತಿ ಮುಂತಾದ ಚಿಕಿತ್ಸಾ ಪದ್ಧತಿಯಲ್ಲಿ ಗುಣವಾಗದ ಖಾಯಿಲೆಗಳು ನಮ್ಮ ಗತಕಾಲದ ನೆನಪುಗಳು ಮರುಕಳಿಸುವ ಚಿಕಿತ್ಸೆಯ ಮೂಲಕ ಗುಣಪಡಿಸುವುದನ್ನು ಕಂಡಿದ್ದೇವೆ. ಈ ಕೇಂದ್ರಗಳು ‌ಮೊದಲು ವಿದೇಶಗಳಲ್ಲಿ ಜನಪ್ರಿಯವಾಗಿ ಈಗ ಬೆಂಗಳೂರಿನಂತಹ ನಗರಗಳಲ್ಲೂ ತಲೆಎತ್ತಿವೆ. 

ಇಂದಿನ ಆಧುನಿಕತೆಯ ಭರಾಟೆ, ಮಾಲಿನ್ಯ, ದಿನಕ್ಕೊಂದು ರೋಗದ ಜನನ, ಸಂಬಂಧಗಳಲ್ಲಿ ಬಿರುಕು, ಅತಿಯಾದ ಯಾಂತ್ರೀಕರಣ, ಎಲ್ಲದರಲ್ಲೂ ಕೃತಕತೆ, ಹಣವೇ ಶ್ರೇಷ್ಠ ಎಂಬ ಭಾವನೆಗಳನ್ನು ನೋಡಿದಾಗ ನಮ್ಮ ಸುಮಧುರ ಬಾಲ್ಯ, ನಮ್ಮ ಕಾಲೇಜು ದಿನಗಳು, ಮೊದಲ ಕ್ರಷ್, ಗೆಳೆಯರೊಡನೆ ಮಾಡಿದ ಪ್ರವಾಸ ನೆನದಾಗ ಏನೋ ಒಂದು ರೀತಿಯ ಆನಂದ ನಮ್ಮನ್ನು ಆವರಿಸಿಕೊಳ್ಳುವುದು ಸುಳ್ಳಲ್ಲ. ಆದ್ದರಿಂದ ಗೆಳೆಯರೇ ದುಡ್ಡು ಕೊಟ್ಟು ಗತಕಾಲಕ್ಕೆ ಹಿಂದಿರುಗುವ ಥೆರಪಿಗೆ ಒಳಗಾಗದೆ ಪ್ರತಿದಿನ ಅಥವಾ ವಾರಕ್ಕೊಮ್ಮೆ ಕೆಲ ಕಾಲವಾದರೂ ನಮ್ಮ ಬಾಲ್ಯದ ಗತವೈಭವಕ್ಕೆ ಮರಳೋಣ ಸುಂದರ ಗತ ನೆನಪುಗಳ ನೆನೆಯೋಣ ಸಂತಸದ ಮಳೆಯಲಿ ನೆನೆಯೋಣ .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.


ಕಾಗದ.ಹನಿ

 




ನಿನ್ನ ಸೌಂದರ್ಯವನು ಹೊಗಳಿ

ಕವಿತೆ ಬರೆಯಲು ಸಿಗುತ್ತಿಲ್ಲ ಪದ

ನನ್ನ ಹೃದಯಕೆ ನೀ ಬಂದು

ಖಾಲಿಯಾದ ನನ್ನದೆಯ ಹಾಳೆಯಲಿ

ಬರೆದುಕೋ ನಿನಗೇ ಒಂದು ಕಾಗದ ||


ಸಿಹಿಜೀವಿ.

ಕಾವೇರಿಯ ಹನಿಗಳು


 




ಕಾವೇರಿ ಹನಿಗಳು 



ಮಾತು ಕಥೆ 


ಜಲವಿವಾದಗಳು ಎಂದಿಗೂ

ಇದ್ದದ್ದೆ ಅದೊಂದು ಹಳೇ ಕಥೆ||

ಖಂಡಿತವಾಗಿಯೂ ಬಗೆಹರಿವುದು

ನಡೆದರೆ ಎಲ್ಲರ ನಡುವೆ ಮುಕ್ತ ಮಾತುಕತೆ||


ರಾಜಕಾರಣ



ರಾಜಕೀಯಪ್ರತಿಷ್ಠೆ ಮತ್ತು ಅತಿಯಾಸೆ 

ಜಲವಿವಾದಗಳಿಗೆ ಮೂಲಕಾರಣ||

ರಾಜ್ಯಗಳ ಮಧ್ಯ ಸೌಹಾರ್ದ ಮಾತುಕತೆಯಾಗಲಿ

ನಿಲ್ಲಿಸಿ ಬಿಡಲಿ ಸ್ವಾರ್ಥ ರಾಜಕಾರಣ||



೩ 

ನೀವೇರಿ 


ಬೈಯುತಿಹಳು ನಮ್ಮನೆಲ್ಲ 

ಪಾಪ ತೊಳೆಯುವ ತಾಯಿ ಕಾವೇರಿ||

ನೀವು  ಜಗಳವಾಡಲು  ನನ್ನ ಹೆಸರೇಕೆ?

ನಿಮ್ಮ ಜಗಳಕೆ ಕಾರಣ ನಾನಲ್ಲ ನೀವೇರಿ||



ಸಿಹಿಜೀವಿ

ಸಿ ಜಿ ವೆಂಕಟೇಶ್ವರ




15 ಜನವರಿ 2022

ಸಿಹಿಜೀವಿಯ ದಿನಚರಿ


 

ಸಿಹಿಜೀವಿಯ ದಿನಚರಿ
 ಸಂಕ್ರಾಂತಿ ಹಬ್ಬದ ದಿನ

ಬೆಳಿಗ್ಗೆ ಬೇಗ ಎದ್ದು ನಿತ್ಯಕರ್ಮ ಮುಗಿಸಿ ದಿನಪತ್ರಿಕೆ ಓದಿದೆನು. ಮನೆಯವರೆಲ್ಲರೂ ಸ್ನಾನ ಮಾಡಿ ಪೂಜೆ ಮಾಡಲು ಸಿದ್ದರಾದರು .ವಾರದಿಂದ ಕಷ್ಟ ಪಟ್ಟು ಇಷ್ಟ ಪಟ್ಟು  ತಯಾರಿಸಿದ ಎಳ್ಳು ಬೆಲ್ಲ ದೇವರಿಗೆ ನೈವೇದ್ಯ ಮಾಡಿ ಮನೆಯವರಿಗೆಲ್ಲ ಹಂಚಿ ತಿಂದು ನಲಿದೆವು.
ನಿನ್ನೆ ದಿನ ಶಾಪಿಂಗ್ ಮಾಡಿ ತಂದ ಅವರೇಕಾಯಿ, ಕಬ್ಬು ದೇವರಿಗೆ ನೈವೇದ್ಯ ಮಾಡುವುದನ್ನು ಮರೆಯಲಿಲ್ಲ.
ನಂತರ ಸಿಹಿ ಮತ್ತು ಖಾರ ಪೊಂಗಲ್ ಸವಿದೆವು. ಬಹುದಿನಗಳ ಹಿಂದೆ ಓದಿದ್ದ ಆವಿಷ್ಕಾರದ ಹರಿಕಾರ ಎಂಬ ಪುಸ್ತಕಕ್ಕೆ ವಿಮರ್ಶೆ ಬರೆದು ನನ್ನ ಬ್ಲಾಗ್ ನಲ್ಲಿ ಪ್ರಕಟ ಮಾಡಿದೆ. ವಾಸು ಸಮುದ್ರವಳ್ಳಿ ಅವರು ಬರೆದ ಮಕ್ಕಳ ಕವಿತೆಗಳ ಪುಸ್ತಕ "ಉಂಡಾಡಿ ಗುಂಡ" ಓದಿ ವಿಮರ್ಶೆ ಬರೆದು ನನ್ನ ಬ್ಲಾಗ್ ಮತ್ತು ಪ್ರತಿಲಿಪಿಯಲ್ಲಿ ಪ್ರಕಟಮಾಡಿದೆನು. ಡಾ.ಪರಮೇಶ್ ರವರು ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಕುರಿತಾದ "ಮಹಾಬಯಲು" ಎಂಬ ಪುಸ್ತಕ ಓದಲು ಶುರುಮಾಡಿದೆ.

ನನ್ನ ವಿದ್ಯಾರ್ಥಿ ವಿಶ್ವನಾಥ್ ಬರೆದ ಕವನ ಸಂಕಲನದ ಕರಡು ಪ್ರತಿಯನ್ನು ಓದಿ ಮುನ್ನುಡಿ ಬರೆಯಲು ಆರಂಭಿಸಿದೆ.
ಮಧ್ಯಾಹ್ನ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದೆನು.
ಸಂಜೆ ನನ್ನ ಮಕ್ಕಳು ಮನೆಗೆ ಬರುವವರಿಗೆ ಎಳ್ಳು ಬೆಲ್ಲ ವಿತರಣೆ ಮಾಡಲು ಸಿದ್ದವಾದ ಬಗೆ ಸಂತಸವಾಯಿತು .
ಮನೆಯವರೆಲ್ಲರೂ ಕುಳಿತು
ಅಪರೂಪಕ್ಕೆ ಟೀವಿಯಲ್ಲಿ ಯುವರತ್ನ ಚಿತ್ರ ನೋಡಿದೆವು . ಆದರೂ ಸಂಜೆಯ ಹೊತ್ತಿಗೆ ನಮ್ಮ ಮಾವನವರಾದ ಕೃಷ್ಣಮೂರ್ತಿ ರವರ ಹಾರ ಹಾಕಿದ ಭಾವಚಿತ್ರ ನೋಡಿ ಬೇಡವೆಂದರೂ ಯಾಕೊ ಮನಸ್ಸು ಭಾರವಾಯಿತು. ಕಳೆದವರ್ಷ ನಮ್ಮೊಂದಿಗೆ ಹುಡುಗರಂತೆ ಚಟುವಟಿಕೆಯಿಂದ ಇದ್ದು ನಮ್ಮನೆ ಹಬ್ಬದಲ್ಲಿ ಪಾಲ್ಗೊಂಡ ಮಾವ ಈಗ ನಮ್ಮೊಂದಿಗೆ ಇಲ್ಲ ಅಂದರೆ ನಮ್ಮ ಕೈಯಲ್ಲಿ ಏನೂ ಇಲ್ಲ ಅವನಾಟ ಎಂದು ಯೋಚಿಸುತ್ತಾ ಹಾಸಿಗೆಗೆ ಹೋದರೆ ನಿದ್ರೆ ಹತ್ತಲು ಯಾಕೋ ಬಹಳ ಹೊತ್ತು ಹಿಡಿಯಿತು....

ಸಿಹಿಜೀವಿ
ಸಿ ಜಿ ವೆಂಕಟೇಶ್ವರ.