16 ಜನವರಿ 2022

ಗತ ನೆನಪುಗಳ ಸ್ಮರಿಸೋಣ.


 



ಇಂದು ಬೆಳಿಗ್ಗೆ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಒಂದು ಅಂಕಣ ಓದುವಾಗ   ಅಮೇರಿಕಾದ ಲೇಖಕರಾದ ರಿಕ್ ವಾರೆನ್ ಅವರು ಹೇಳಿದ ಮಾತು ನನ್ನನ್ನು ಸೆಳೆಯಿತು.ಅದು " ನಾವು ಭೂತಕಾಲದಿ ಉದಯಿಸಿದವರು ಆದರೆ ಅದೇ ಭೂತದಲ್ಲಿ ಬಂಧಿಯಾಗಬಾರದು" ಹೌದಲ್ಲವೇ ನಾವು ಇಂದು ಏನಾಗಿದ್ದೇವೋ ಅದಕ್ಕೆ ಗತಕಾಲದೊಂದಿಗೆ ಖಂಡಿತವಾಗಿಯೂ ಸಂಬಂಧವಿದೆ. ಆದರೆ ಅದನ್ನೇ ನೆನೆಪು ಮಾಡಿಕೊಂಡು ಪ್ರತಿದಿನ ಪ್ರತಿಕ್ಷಣ ಕುಳಿತರೆ ವರ್ತಮಾನದಲ್ಲಿ ಜೀವನ ಸಾದ್ಯವೇ?  ಭೂತವೂ ಬೇಕು , ವರ್ತಮಾನದಿ ಬದುಕಬೇಕು ಮತ್ತು ತನ್ಮೂಲಕ ಭವಿಷ್ಯವನ್ನು ಕಟ್ಟಿಕೊಳ್ಳಬೇಕು.


ಸವಿನೆನಪುಗಳು ಬೇಕು ಸವಿಯಲೀ ಬದುಕು ಎಂಬ ಕವಿವಾಣಿಯಂತೆ ಸವಿ ನೆನಪುಗಳು ನಮ್ಮನ್ನು ಸಂತಸವಾಗಿಡಲು ನಮ್ಮ ಆನಂದವನ್ನು ಇಮ್ಮಡಿಗೊಳಿಸಲು ಖಂಡಿತವಾಗಿಯೂ ಬೇಕು. ಆದರೆ ಬಹುತೇಕ ಬಾರಿ ಬೇಡವೆಂದರೂ ನಮಗಾದ ನೋವು, ಅವಮಾನ, ತೊಂದರೆಗಳೇ ದುತ್ತೆಂದು ಬಂದು ನಮ್ಮ ಮೇಲೆಯೇ ಎರಗಿ ನಮ್ಮ ಮನೋಬಲವನ್ನು ಕುಗ್ಗಿಸಿ ನಮ್ಮ ಕಡೆ ಕುಹಕದ ನಗೆ ಬೀರಿ ಹಂಗಿಸುತ್ತವೆ.


ವರ್ತಮಾನದಲದಲಿ ಜೀವಿಸಿ ಎಂದು ಸಾಧು ಸಂತರು, ಹಿರಿಯರು, ತಿಳಿದವರು ,ಹಿತೈಷಿಗಳು, ವ್ಯಕ್ತಿತ್ವ ವಿಕಸನದ ಗುರುಗಳು ದಿನಗಟ್ಟಲೆ ಉಪನ್ಯಾಸ ನೀಡಿದರೂ ಅವರೇಳಿದಷ್ಟು ಸಲೀಸಾಗಿ ವರ್ತಮಾನದಲ್ಲಿ ಜೀವಿಸಲು ಸಾದ್ಯವೇ? ಕಷ್ಟ ಸಾಧ್ಯ. ಅವರ ಮಾತುಗಳಲ್ಲಿ ಸತ್ಯವಿದೆ  ಆದರೂ ಆಚರಣೆಯಲ್ಲಿ ಅಷ್ಟು ಸುಲಭವಲ್ಲ . ವರ್ತಮಾನದಲ್ಲಿ ಜೀವಿಸುವ  ಪ್ರಯತ್ನ ಜಾರಿಯಲ್ಲಿರಲಿ.


ಕೆಲವೊಮ್ಮೆ ನಮ್ಮ ಹಳೆಯ ನೆನಪುಗಳು ಮಧುರವೂ ಹೌದು .ಇತ್ತೀಚಿನ ದಿನಗಳಲ್ಲಿ"  ಪಾಸ್ಟ್ ಲೈಪ್ ರಿಗ್ರೆಷನ್ ಟೆಕ್ನಿಕ್"  ಎಂಬ ಚಿಕಿತ್ಸಾ ಪದ್ದತಿಯು ಬಹಳ ಜನಪ್ರಿಯವಾಗುತ್ತಿದೆ. ನಮ್ಮ ಕೆಲ ಅನಾರೋಗ್ಯದ ಸಮಸ್ಯೆಗಳಿಗೆ ಅಲೋಪತಿ, ಹೋಮಿಯೋಪತಿ ಮುಂತಾದ ಚಿಕಿತ್ಸಾ ಪದ್ಧತಿಯಲ್ಲಿ ಗುಣವಾಗದ ಖಾಯಿಲೆಗಳು ನಮ್ಮ ಗತಕಾಲದ ನೆನಪುಗಳು ಮರುಕಳಿಸುವ ಚಿಕಿತ್ಸೆಯ ಮೂಲಕ ಗುಣಪಡಿಸುವುದನ್ನು ಕಂಡಿದ್ದೇವೆ. ಈ ಕೇಂದ್ರಗಳು ‌ಮೊದಲು ವಿದೇಶಗಳಲ್ಲಿ ಜನಪ್ರಿಯವಾಗಿ ಈಗ ಬೆಂಗಳೂರಿನಂತಹ ನಗರಗಳಲ್ಲೂ ತಲೆಎತ್ತಿವೆ. 

ಇಂದಿನ ಆಧುನಿಕತೆಯ ಭರಾಟೆ, ಮಾಲಿನ್ಯ, ದಿನಕ್ಕೊಂದು ರೋಗದ ಜನನ, ಸಂಬಂಧಗಳಲ್ಲಿ ಬಿರುಕು, ಅತಿಯಾದ ಯಾಂತ್ರೀಕರಣ, ಎಲ್ಲದರಲ್ಲೂ ಕೃತಕತೆ, ಹಣವೇ ಶ್ರೇಷ್ಠ ಎಂಬ ಭಾವನೆಗಳನ್ನು ನೋಡಿದಾಗ ನಮ್ಮ ಸುಮಧುರ ಬಾಲ್ಯ, ನಮ್ಮ ಕಾಲೇಜು ದಿನಗಳು, ಮೊದಲ ಕ್ರಷ್, ಗೆಳೆಯರೊಡನೆ ಮಾಡಿದ ಪ್ರವಾಸ ನೆನದಾಗ ಏನೋ ಒಂದು ರೀತಿಯ ಆನಂದ ನಮ್ಮನ್ನು ಆವರಿಸಿಕೊಳ್ಳುವುದು ಸುಳ್ಳಲ್ಲ. ಆದ್ದರಿಂದ ಗೆಳೆಯರೇ ದುಡ್ಡು ಕೊಟ್ಟು ಗತಕಾಲಕ್ಕೆ ಹಿಂದಿರುಗುವ ಥೆರಪಿಗೆ ಒಳಗಾಗದೆ ಪ್ರತಿದಿನ ಅಥವಾ ವಾರಕ್ಕೊಮ್ಮೆ ಕೆಲ ಕಾಲವಾದರೂ ನಮ್ಮ ಬಾಲ್ಯದ ಗತವೈಭವಕ್ಕೆ ಮರಳೋಣ ಸುಂದರ ಗತ ನೆನಪುಗಳ ನೆನೆಯೋಣ ಸಂತಸದ ಮಳೆಯಲಿ ನೆನೆಯೋಣ .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.


ಕಾಗದ.ಹನಿ

 




ನಿನ್ನ ಸೌಂದರ್ಯವನು ಹೊಗಳಿ

ಕವಿತೆ ಬರೆಯಲು ಸಿಗುತ್ತಿಲ್ಲ ಪದ

ನನ್ನ ಹೃದಯಕೆ ನೀ ಬಂದು

ಖಾಲಿಯಾದ ನನ್ನದೆಯ ಹಾಳೆಯಲಿ

ಬರೆದುಕೋ ನಿನಗೇ ಒಂದು ಕಾಗದ ||


ಸಿಹಿಜೀವಿ.

ಕಾವೇರಿಯ ಹನಿಗಳು


 




ಕಾವೇರಿ ಹನಿಗಳು 



ಮಾತು ಕಥೆ 


ಜಲವಿವಾದಗಳು ಎಂದಿಗೂ

ಇದ್ದದ್ದೆ ಅದೊಂದು ಹಳೇ ಕಥೆ||

ಖಂಡಿತವಾಗಿಯೂ ಬಗೆಹರಿವುದು

ನಡೆದರೆ ಎಲ್ಲರ ನಡುವೆ ಮುಕ್ತ ಮಾತುಕತೆ||


ರಾಜಕಾರಣ



ರಾಜಕೀಯಪ್ರತಿಷ್ಠೆ ಮತ್ತು ಅತಿಯಾಸೆ 

ಜಲವಿವಾದಗಳಿಗೆ ಮೂಲಕಾರಣ||

ರಾಜ್ಯಗಳ ಮಧ್ಯ ಸೌಹಾರ್ದ ಮಾತುಕತೆಯಾಗಲಿ

ನಿಲ್ಲಿಸಿ ಬಿಡಲಿ ಸ್ವಾರ್ಥ ರಾಜಕಾರಣ||



೩ 

ನೀವೇರಿ 


ಬೈಯುತಿಹಳು ನಮ್ಮನೆಲ್ಲ 

ಪಾಪ ತೊಳೆಯುವ ತಾಯಿ ಕಾವೇರಿ||

ನೀವು  ಜಗಳವಾಡಲು  ನನ್ನ ಹೆಸರೇಕೆ?

ನಿಮ್ಮ ಜಗಳಕೆ ಕಾರಣ ನಾನಲ್ಲ ನೀವೇರಿ||



ಸಿಹಿಜೀವಿ

ಸಿ ಜಿ ವೆಂಕಟೇಶ್ವರ




15 ಜನವರಿ 2022

ಸಿಹಿಜೀವಿಯ ದಿನಚರಿ


 

ಸಿಹಿಜೀವಿಯ ದಿನಚರಿ
 ಸಂಕ್ರಾಂತಿ ಹಬ್ಬದ ದಿನ

ಬೆಳಿಗ್ಗೆ ಬೇಗ ಎದ್ದು ನಿತ್ಯಕರ್ಮ ಮುಗಿಸಿ ದಿನಪತ್ರಿಕೆ ಓದಿದೆನು. ಮನೆಯವರೆಲ್ಲರೂ ಸ್ನಾನ ಮಾಡಿ ಪೂಜೆ ಮಾಡಲು ಸಿದ್ದರಾದರು .ವಾರದಿಂದ ಕಷ್ಟ ಪಟ್ಟು ಇಷ್ಟ ಪಟ್ಟು  ತಯಾರಿಸಿದ ಎಳ್ಳು ಬೆಲ್ಲ ದೇವರಿಗೆ ನೈವೇದ್ಯ ಮಾಡಿ ಮನೆಯವರಿಗೆಲ್ಲ ಹಂಚಿ ತಿಂದು ನಲಿದೆವು.
ನಿನ್ನೆ ದಿನ ಶಾಪಿಂಗ್ ಮಾಡಿ ತಂದ ಅವರೇಕಾಯಿ, ಕಬ್ಬು ದೇವರಿಗೆ ನೈವೇದ್ಯ ಮಾಡುವುದನ್ನು ಮರೆಯಲಿಲ್ಲ.
ನಂತರ ಸಿಹಿ ಮತ್ತು ಖಾರ ಪೊಂಗಲ್ ಸವಿದೆವು. ಬಹುದಿನಗಳ ಹಿಂದೆ ಓದಿದ್ದ ಆವಿಷ್ಕಾರದ ಹರಿಕಾರ ಎಂಬ ಪುಸ್ತಕಕ್ಕೆ ವಿಮರ್ಶೆ ಬರೆದು ನನ್ನ ಬ್ಲಾಗ್ ನಲ್ಲಿ ಪ್ರಕಟ ಮಾಡಿದೆ. ವಾಸು ಸಮುದ್ರವಳ್ಳಿ ಅವರು ಬರೆದ ಮಕ್ಕಳ ಕವಿತೆಗಳ ಪುಸ್ತಕ "ಉಂಡಾಡಿ ಗುಂಡ" ಓದಿ ವಿಮರ್ಶೆ ಬರೆದು ನನ್ನ ಬ್ಲಾಗ್ ಮತ್ತು ಪ್ರತಿಲಿಪಿಯಲ್ಲಿ ಪ್ರಕಟಮಾಡಿದೆನು. ಡಾ.ಪರಮೇಶ್ ರವರು ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಕುರಿತಾದ "ಮಹಾಬಯಲು" ಎಂಬ ಪುಸ್ತಕ ಓದಲು ಶುರುಮಾಡಿದೆ.

ನನ್ನ ವಿದ್ಯಾರ್ಥಿ ವಿಶ್ವನಾಥ್ ಬರೆದ ಕವನ ಸಂಕಲನದ ಕರಡು ಪ್ರತಿಯನ್ನು ಓದಿ ಮುನ್ನುಡಿ ಬರೆಯಲು ಆರಂಭಿಸಿದೆ.
ಮಧ್ಯಾಹ್ನ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದೆನು.
ಸಂಜೆ ನನ್ನ ಮಕ್ಕಳು ಮನೆಗೆ ಬರುವವರಿಗೆ ಎಳ್ಳು ಬೆಲ್ಲ ವಿತರಣೆ ಮಾಡಲು ಸಿದ್ದವಾದ ಬಗೆ ಸಂತಸವಾಯಿತು .
ಮನೆಯವರೆಲ್ಲರೂ ಕುಳಿತು
ಅಪರೂಪಕ್ಕೆ ಟೀವಿಯಲ್ಲಿ ಯುವರತ್ನ ಚಿತ್ರ ನೋಡಿದೆವು . ಆದರೂ ಸಂಜೆಯ ಹೊತ್ತಿಗೆ ನಮ್ಮ ಮಾವನವರಾದ ಕೃಷ್ಣಮೂರ್ತಿ ರವರ ಹಾರ ಹಾಕಿದ ಭಾವಚಿತ್ರ ನೋಡಿ ಬೇಡವೆಂದರೂ ಯಾಕೊ ಮನಸ್ಸು ಭಾರವಾಯಿತು. ಕಳೆದವರ್ಷ ನಮ್ಮೊಂದಿಗೆ ಹುಡುಗರಂತೆ ಚಟುವಟಿಕೆಯಿಂದ ಇದ್ದು ನಮ್ಮನೆ ಹಬ್ಬದಲ್ಲಿ ಪಾಲ್ಗೊಂಡ ಮಾವ ಈಗ ನಮ್ಮೊಂದಿಗೆ ಇಲ್ಲ ಅಂದರೆ ನಮ್ಮ ಕೈಯಲ್ಲಿ ಏನೂ ಇಲ್ಲ ಅವನಾಟ ಎಂದು ಯೋಚಿಸುತ್ತಾ ಹಾಸಿಗೆಗೆ ಹೋದರೆ ನಿದ್ರೆ ಹತ್ತಲು ಯಾಕೋ ಬಹಳ ಹೊತ್ತು ಹಿಡಿಯಿತು....

ಸಿಹಿಜೀವಿ
ಸಿ ಜಿ ವೆಂಕಟೇಶ್ವರ.

ಉಂಡಾಡಿ ಗುಂಡ .ವಿಮರ್ಶೆ.


 


ಉಂಡಾಡಿ ಗುಂಡ. ಕೃತಿ ವಿಮರ್ಶೆ


ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಲ್ಲಿ ಪರಿಚಿತರಾದ ವಾಸು ಎಂದೇ ಪರಿಚಿತವಾಗಿರುವ ಸಮುದ್ರವಳ್ಳಿ ವಾಸು ರವರ ಮಕ್ಕಳ ಕವನಗಳ ಸಂಕಲನ  ಉಂಡಾಡಿ ಗುಂಡ ಪುಸ್ತಕ ಓದಿದೆ.ಇದರಲ್ಲಿ ಮಕ್ಕಳಿಗೆ ಬಹಳ ಇಷ್ಟವಾಗುವ ಮೂವತ್ತೈದು ಕವನಗಳಿವೆ.ನೀವು ಕೂಡಾ ಓದಿ    ಇವು ದೊಡ್ಡವರಿಗೂ ಇಷ್ಟವಾಗುತ್ತವೆ. 


 ಸಮುದ್ರವಳ್ಳಿ  ವಾಸುರವರು ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಸಮುದ್ರವಳ್ಳಿ ಎಂಬ ಗ್ರಾಮದಲ್ಲಿ ಜನಿಸಿದವರು ರೈತ ಕುಟುಂಬದಲ್ಲ ಜನಿಸಿದ ಇವರು ಬಾಲ್ಯದಲ್ಲಿಯೇ ಸಾಹಿತ್ಯಾಸಕ್ತಿಯ ಗೀಳನ್ನು ಹೊಂದಿದ್ದು ನಾಡಿನ ವಿವಿಧ ಪತ್ರಿಕೆಗಳಲ್ಲಿ ಲೇಖನಗಳು , ಕವಿತೆಗಳು, ಕಥೆಗಳು ಪ್ರಕಟಗೊಂಡಿವೆ. ಈಗಾಗಲೇ ಸಿಹಿಮುತ್ತು ಎಂಬ ಚುಟುಕು ಸಂಕಲನ, ಯಡವಟ್ಟು ವಾಸು ಎಂಬ  ಹಾಸ್ಯ ಲೇಖನ  ಮಕ್ಕಳ ಕಿರುನಾಟಕಗಳು, ಹುಚ್ಚುತ್ತಿ ಎಂಬ ಕಥಾ ಸಂಕಲನ, ಮಲೆನಾಡಿನ ಮಾರ್ಗದಾಳುಗಳು ಎಂಬ  ಕಾದಂಬರಿ,ಧಣ ಢಣ ಘಂಟೆ ಬಾರಿಸಿತು ಎಂಬ ಮಕ್ಕಳ ಕವನಗಳ ಸಂಕಲನ ಸಿಂಗಾರಿ ಎಂಬ  ಕಥಾಕವನ ಸಂಕಲನ , ನನ್ನಾಕೆ ಹೇಳಿದ್ದು ಎಂಬ  ಹನಿಗವನ ಸಂಕಲನ, ಅಂತರಂಗದ ಅಳಲು ಎಂಬ ಕವನ ಸಂಕಲನ ಪ್ರಕಟಮಾಡಿದ್ದಾರೆ ಪ್ರಸ್ತುತ ಉಂಡಾಡಿ ಗುಂಡ ಎಂಬ ಮಕ್ಕಳ ಕವನಗಳು ಮಕ್ಕಳ ಮನಗೆಲ್ಲುವುದರಲ್ಲಿ ಸಂದೇಹವಿಲ್ಲ.   ಇವರ ಮಲೆನಾಡಿನ ಮಾರ್ಗದಾಳುಗಳು ಕಾದಂಬರಿ ಎರಡನೇ ಮುದ್ರಣಗೊಂಡು ಓದುಗರ ಮನಗೆದ್ದ ರೀತಿಯಲ್ಲಿ  ಈ ಪುಸ್ತಕವೂ ಓದುಗರ ತಲುಪಲಿ ಎಂದು ಹಾರೈಸುವೆ .


ಪ್ರಸ್ತುತ ಉಂಡಾಡಿ ಗುಂಡ ಪುಸ್ತಕದ ಬಗ್ಗೆ ಹೇಳುವುದಾದರೆ

ವಾಸು ಅವರು ನಮ್ಮ ನಾಡಿನ  ಹಿರಿಯ ಕವಿಗಳ ಬಗ್ಗೆ ಬರೆಯುವಾಗ ಹಲವಾರು ವಿಚಾರಗಳನ್ನು ಸಂಗ್ರಹಿಸಿದ್ದಾರೆ. ಹಲವು ದಿನ ಕೂತು ಪದ್ಯ ರೂಪ ಕೊಟ್ಟಿದ್ದಾರೆ.


ಮಗ್ಗಿಯ ಮೇಲಿನ ಕವನಗಳು ಮತ್ತಷ್ಟು ಸುಂದರವಾಗಿವೆ. 


'ಹಣ್ಣು' ಕವಿತೆಯಲ್ಲಿ

 "ಬಾಳೆಹಣ್ಣು ತಿಂದು

ಸಹಬಾಳ್ವೆ ಮಾಡಿ ...

ಕಿತ್ತಲೆಹಣ್ಣು ತಿಂದು 

ಕಿತ್ತಾಡದೆ ಒಟ್ಟಾಗಿರಿ "

ಎಂಬ ಒಗ್ಗಟ್ಟಿನ ತತ್ವ ಹೇಳಿದೆ.


'ಪಾಪು' ಕವಿತೆಯಲ್ಲಿ ಬರುವ

"ನಗುವಿನಲೆಯ ಇರುಳ ದೀಪ

 ಬಿದಿಗೆ ಚಂದ್ರನಂತೆ ರೂಪ !"

ಎಂಬ ಪದಗಳು ನಮ್ಮನ್ನು ಸೆಳೆಯುವವು.


ಪೊಲೀಸ್ ಗೆಳೆಯರ ಬಗ್ಗೆ ಬರೆದಿರುವ ಕವನ  ಅಭಿಮಾನದ ನುಡಿಗಳಿಂತಿವೆ.

"ಸಮವಸ್ತ್ರ ಧರಿಸಿ, ತಮೋಗುಣ ಅಳಿಸುವಿರಿ

ಸಹಬಾಳ್ವೆ, ಸಮಾನತೆ ಉಳಿಸುವಿರಿ."


'ಪರೀಕ್ಷೆ' ಕವಿತೆಯಲ್ಲಿ ಮಕ್ಕಳಿಗೆ ಪರೀಕ್ಷೆಗಳ ಬಗ್ಗೆ ಭಯ ಬೇಡ ಎಂಬ ಸಲಹೆ ನೀಡಿರುವರು.

"ಇಷ್ಟದಿ ಕಲಿತರೆ ರಸಗುಲ್ಲ

ಕಷ್ಟದಿ ಕಲಿತರೆ ಕಸ ಎಲ್ಲಾ"


ಪುಟ್ಟನ ಪರಿಸರ ಪ್ರಜ್ಞೆ ನಿಮಗೂ  ಖಂಡಿತಾ ಖುಷಿಕೊಡುತ್ತದೆ.

"ಕೆರೆಗಳ ಹೂಳನು ಎತ್ತೋಣ ಗಿಡಮರಬಳ್ಳಿ ಬೆಳೆಸೋಣ."


ವ್ಯಾಕರಣದ ಬಗೆಗಿನ ಕವಿತೆ ಲಘುಹಾಸ್ಯದ ಮೂಲಕ ಜ್ಞಾನವನ್ನು ನೀಡುತ್ತದೆ. ಉದಾಹರಣೆಗೆ 

"ಸ್ವರಗಳು ಎಂದರೆ ಸರಗಳು ಅಲ್ಲ ವ್ಯಂಜನವೆಂದರೆ ಅಂಜನವಲ್ಲ

ಗಾದೆ ಮಾತಿನಲಿ ಬಾಧೆಯು ಇಲ್ಲ."


 ಹೀಗೆ 35 ಮಕ್ಕಳ ಕವನಗಳು ಭಿನ್ನವಿಭಿನ್ನ ವಸ್ತುವನ್ನು ಒಳಗೊಂಡಿವೆ. ಕೆಲವು ಪದ್ಯ ಗಳಿಗೆ ಛಂದಸ್ಸನ್ನೂ ಬಳಸಲಾಗಿದೆ.ಕೆಲವು ಉತ್ತಮ ಪ್ರಾಸಗಳಿಂದ ಕೂಡಿವೆ .

ಮಕ್ಕಳ ಸಾಹಿತ್ಯ ಕೃತಿಗಳು ಕಡಿಮೆಯಾಗುತ್ತಿರುವ ಈ ಕಾಲದಲ್ಲಿ ಸಮುದ್ರವಳ್ಳಿ ವಾಸು ರಂತವರು ಇನ್ನೂ ಹೆಚ್ಚಿನ ಮಕ್ಕಳ ಪುಸ್ತಕಗಳನ್ನು ಬರೆಯಲಿ ಎಂದು ಹಾರೈಸುವೆ.



ಪುಸ್ತಕ: ಉಂಡಾಡಿ ಗುಂಡ.

ಕವಿ: ಸಮುದ್ರವಳ್ಳಿ ವಾಸು.

ಪ್ರಕಾಶನ: ಯದುನಂದನ ಪ್ರಕಾಶನ

ಬೆಲೆ: 80


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

ತುಮಕೂರು

9900925529