06 ಸೆಪ್ಟೆಂಬರ್ 2021

ಪಾಪ ಪುಣ್ಯ .ಲೇಖನ


 ಹೌದು ..

ಧರ್ಮ ,ಅದ್ಯಾತ್ಮ, ಒಳಿತು ಕೆಡುಕಿನ ಬಗ್ಗೆ ನಂಬಿಕೆ ಇರುವ ನಾನು ಪಾಪ ಪುಣ್ಯ ಗಳನ್ನು ನಂಬುತ್ತೇನೆ .

ಒಳಿತು ಮಾಡಿದರೆ ಪುಣ್ಯ ಸಂಪಾದನೆ ಕೆಡುಕುಗಳು ಪಾಪಕ್ಕೆ ಕಾರಣ ಎಂದು ನಂಬಿರುವ ಸನಾತನ ಪರಂಪರೆಯನ್ನು ನಾವು ಗೌರವಿಸಲೇಬೇಕು. ಅರಿಷಡ್ವರ್ಗಗಳ ನಿಯಂತ್ರಣ ದಲ್ಲಿ ಇಟ್ಟು ಕೊಂಡು ,ಧರ್ಮ ಅರ್ಥ ಕಾಮ ಮೋಕ್ಷ ಮಾರ್ಗ ಅನುಸರಿಸಿದರೆ ಪುಣ್ಯ ಸಂಪಾದನೆ ಸಾದ್ಯ.   ಇದಕ್ಕೆ ಪರೋಪಕಾರ   ದಾನ ಧರ್ಮ, ಸತ್ಸಂಗ ಮುಂತಾದವು ಸಹ ಸಹಕಾರಿ .


ಅನೈತಿಕ ಚಟುವಟಿಕೆಗಳಲ್ಲಿ ತೊಡಗುವುದು, ಹಿಂಸೆ ,  ಪರಪೀಡನೆ, ಪರನಿಂದೆ ಮುಂತಾದವು ಪಾಪದ ಕೊಡ ತುಂಬಲು ಕಾರಣವಾಗುತ್ತವೆ.


ನಾನು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ನಮ್ಮ ಶಿಕ್ಷಕರು ನಾವು ಒಳ್ಳೆಯ ಕೆಲಸ ಮಾಡಿದರೆ ನಮ್ಮ ಬಲ ಭುಜ ದಲ್ಲಿ ಇರುವ ದೂತರು ‌ಲೆಕ್ಕ ಇಟ್ಟುಕೊಳ್ಳುವರು ಪಾಪಕಾರ್ಯ ಮಾಡಿದರೆ ಎಡಭುಜದ ದೂತರು ಲೆಕ್ಕ ಇಟ್ಟುಕೊಂಡು ಯಮನಿಗೆ ವರದಿ ನೀಡುವರು. ಪಾಪ ಜಾಸ್ತಿಯದರೆ ಕುದಿಯುವ ಎಣ್ಣೆ ಬಾಣಲೆಯಲ್ಲಿ ನಮ್ಮನ್ನು ತೇಲಿಸುವರು ಎಂದು ಹೇಳುತ್ತಿದ್ದುದು ನೆನಪಾಗುತ್ತದೆ.


ಜನರು ಅನೈತಿಕ ಚಟುವಟಿಕೆಗಳಲ್ಲಿ ಅಧರ್ಮದ ಕಾರ್ಯದಲ್ಲಿ ತೊಡುಗುವುದನ್ನು ತಡೆಯಲು ಇಂತಹ ಕಥೆಗಳು ಸ್ವಲ್ಪ ಮಟ್ಟಿಗಾದರೂ ಸಹಾಯಕ ಎಂಬುದರಲ್ಲಿ ಸಂದೇಹ ವಿಲ್ಲ. ಇತ್ತೀಚೆಗೆ ಅಧರ್ಮಿಗಳ ಸಂಖ್ಯೆ ಕ್ರಮೇಣವಾಗಿ ಹೆಚ್ಚಾಗಿ, ಪಾಪಕಾರ್ಯಗಳು ಹೆಚ್ಚಾಗುತ್ತಿವೆ ಎನಿಸುತ್ತದೆ. ಇದಕ್ಕೆ ಪೂರಕವಾಗಿ ನಾಸ್ತಿಕರ ವಾದ ಮುಗಿಲು ಮುಟ್ಟುತ್ತದೆ. ಅನ್ಯಾಯ ಅಕ್ರಮ ಮಾಡಿದವರು ಬಹಳ ಸುಖವಾಗಿರುವರು ಎಂಬ ಒಣ ಸಮರ್ಥನೆ ನೀಡುವರು. ಅದಕ್ಕೆ ಪ್ರತಿವಾದವಾಗಿ ಅವರು ಯಾವಾಗಲೋ ಮಾಡಿದ ಪುಣ್ಯ ಕಾರ್ಯಗಳು ಅವರ ಕಾಪಾಡುವವು ಎಂಬ  ಪ್ರತಿವಾದವೂ ಚಿಂತನಾರ್ಹ


ನಾಸ್ತಿಕರಿಗೆ ದೇವರು ಧರ್ಮ ಪಾಪ ಪುಣ್ಯ ದ  ಬಗ್ಗೆ  ನಂಬಿಕೆ ಇರದಿದ್ದರೆ 

ಸ್ವಾಮಿ ವಿವೇಕಾನಂದರ ವಾಣಿಯಂತೆ ಪರೋಪಕಾರವೇ ಪುಣ್ಯ ಪರಪೀಡನೆಯೇ ಪಾಪ  ಎಂಬ ಭಾವನೆ ಹೊಂದಿದರೆ ಸಮಾಜದ ಅಕ್ರಮಗಳು ಅನೈತಿಕ ಚಟುವಟಿಕೆಗಳು ಕಡಿಮೆಯಾಗಿ ಸರ್ವರೂ  ನೆಮ್ಮದಿಯ ಜೀವನ ನಡೆಸಬಹುದು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

05 ಸೆಪ್ಟೆಂಬರ್ 2021

ಶಿಕ್ಷಕನಾಗಿ ಮಕ್ಕಳಿಗೆ ಹತ್ತು ಸಲಹೆಗಳು


 



ಶಿಕ್ಷಕರ ದಿನದ ಶುಭಾಶಯಗಳು



ಶಿಕ್ಷಕನಾಗಿ ಮಧ್ಯಮ ವಯಸ್ಸಿನ ಹಿರಿಯನಾಗಿ 

ಮಕ್ಕಳಿಗೆ ನೀಡುವ ೧೦  ಸಲಹೆಗಳು 


೧ ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇರಲಿ

೨ ಗುರು ಹಿರಿಯರ ಗೌರವಿಸಿ

೩ ಸುಲಭವಾಗಿ ಸೋಲು ಒಪ್ಪಬೇಡಿ

೪ ಯಶಸ್ವಿಯಾಗಿ ಮುಂದಡಿ ಇಡಿ

೫ ಯಶಸ್ಸಿಗೆ ಅಡ್ಡ ದಾರಿ ಇಲ್ಲ ಪರಿಶ್ರಮ ಮರೆಯದಿರಿ

೬ ನಿಮ್ಮಿಷ್ಟದ ಗುರಿ ಆರಿಸಿಕೊಂಡು ಅದನ್ನು ತಲುಪಲು ಪ್ರಾಮಾಣಿಕ ಪ್ರಯತ್ನ ಮಾಡಿ

೭ ಇತರರಿಂದ ಸ್ಪೂರ್ತಿ ಪಡೆಯಿರಿ ಆದರೆ ಹೋಲಿಕೆ ಮಾಡಿಕೊಳ್ಳಬೇಡಿ

೮ ನಾಡು ನುಡಿಯ ಬಗ್ಗೆ ಗೌರವವಿರಲಿ

೯ ನಮ್ಮ ಸಂಸ್ಕೃತಿ ಮತ್ತು ಪ್ರಕೃತಿ ಸಂರಕ್ಷಣೆ ಗೆ ಮುಂದಾಗಿ

೧೦ ಜವಾಬ್ದಾರಿಯುತ ನಾಗರಿಕರಾಗಿ


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಮಹಾರಾಜ ಕಿರುಕಥೆ

 

ಮಹಾರಾಜ .


ಮಲ್ಲಪ್ಪ ಗಾಯತ್ರಮ್ಮ ದಂಪತಿಗಳು ಅನಕ್ಷರಸ್ಥ ರಾದರೂ ಹಳ್ಳಿಯಲ್ಲಿ ‌ಕೂಲಿ ಮಾಡುತ್ತಾ ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. 

ಬಹಳ ದಿನಗಳ ನಂತರ ದಂಪತಿಗೆ ಗಂಡು ಮಗುವಾಯಿತು . 

ಮಗನಿಗೆ ಮಹಾರಾಜ ಎಂದು ನಾಮಕರಣ ಮಾಡಿದರು.

ಮಗ ನಮ್ಮಂತೆ ಅನಕ್ಷರಸ್ಥರಾಗುವುದು ಬೇಡ ಅಕ್ಷರ ಕಲಿಯಲಿ ಎಂದು ಒಳ್ಳೆಯ ಶಾಲೆಗೆ ಸೇರಿಸಿದರು.

ಮಹಾರಾಜನಿಗೆ ವಿದ್ಯೆ ಹತ್ತಲಿಲ್ಲ ಎಸ್ಸೆಲ್ಸಿ ಪೇಲಾಗಿ ಊರಲ್ಲಿ ಅಲೆಯಲು ಶುರುಮಾಡಿದ .

ಸಹವಾಸ ದೋಷ, ಟೀನೇಜ್ ನ ವಯೋಸಹಜ ಕಾಮನೆಗಳ ಫಲವಾಗಿ ಲವ್ ನಲ್ಲಿ ಬಿದ್ದ ಮಗ ಅನ್ಯಜಾತಿಯ ಹುಡುಗಿಯನ್ನು ಕರೆದುಕೊಂಡು ಹೋಗಿ ಮದುವೆಯಾಗಿ ಬಂದ.

ಒಲ್ಲದ ಮನಸ್ಸಿನಿಂದ ಒಪ್ಪಿ ಸೊಸೆ ಯನ್ನು ಮನೆತುಂಬಿಸಿಕೊಂಡ ಅತ್ತೆಗೆ ಒಂದು ತಿಂಗಳಲ್ಲೇ ಆಘಾತ ಕಾದಿತ್ತು.ಮಗನಿರದ ವೇಳೆ ಜಗಳ ತೆಗೆದ ಸೊಸೆ ಅತ್ತೆಯ ಮೇಲೆ ಕುಡುಗೋಲು ಹಿಡಿದು ಹೊಡೆಯಲು ಹೋದಳು .

ಮಗ ಅಸಹಾಯಕತೆ ವ್ಯಕ್ತ ಪಡಿಸಿ ಅಪ್ಪ ಅಮ್ಮನ ತೊರೆದು ನಗರಕ್ಕೆ ವಲಸೆ ಹೋಗಲು ತೀರ್ಮಾನಿಸಿದ.

ಹೆಂಡತಿಯಿಂದ ಅಪ್ಪ ಅಮ್ಮನ ತೊರೆದ ಬಗ್ಗೆ ಚಿಂತಿಸಿ ಮಹಾರಾಜ ಕುಡಿತದ ದಾಸನಾದ.

ಇತ್ತ ವೃದ್ದ ದಂಪತಿಗಳು ಮಗ ಬರುವನು ಎಂದು ಈಗಲೂ ಆಸೆಗಣ್ಣಿನಿಂದ ದಾರಿ ನೋಡುತ್ತಿರುವರು.....


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


04 ಸೆಪ್ಟೆಂಬರ್ 2021

ಹೊಳಲ್ಕೆರೆ ನರಭಕ್ಷಕ. ಕಥೆಗಳು. ಪುಸ್ತಕ ವಿಮರ್ಷೆ


 



ಹೊಳಲ್ಕೆರೆ ನರಭಕ್ಷಕ ಮತ್ತು ಇತರ  ಕಥೆಗಳು 

ವಿಮರ್ಶೆ 


ಕನ್ನಡದ ಓದುಗರಿಗೆ ಕೆನೆತ್  ಅಂಡರ್ಸನ್ ನ ಅತ್ಯುತ್ತಮ ಕಥೆಗಳಲ್ಲಿ  ಕೆಲವನ್ನು  ಲೇಖಕಿಯಾದ ಸಾಕ್ಷಿ ರವರು  ಕನ್ನಡಕ್ಕೆ ತಂದಿರುವರು. 

   ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ `ಕಾಡಿನ ಕಥೆಗಳು' ಸರಣಿಯನ್ನು ಓದಿದವರಿಗೆ ಈ ಪುಸ್ತಕ ಖಂಡಿತವಾಗಿ ಇಷ್ಟ ಆಗುವುದು. ಆಂಡರ್ಸನ್ ನಮ್ಮ ಕಾಲದ ಅದ್ಭುತ ಕಥೆಗಾರ ಮತ್ತು ಪರಿಸರ ಬರಹಗಾರ. ಅವನ ಬೇಟೆಯ ಕಥೆಗಳು ನಮ್ಮ ಪರಿಸರವನ್ನು ಸಮಗ್ರವಾಗಿ ಅರ್ಥೈಸಿಕೊಳ್ಳಲು ಅನುವುಮಾಡಿಕೊಡುತ್ತವೆ, ಚುರುಕಿನ ಬೇಟೆಗಾರ ಮತ್ತು ಬರಹಗಾರನಾಗಿದ್ದ ಆಂಡರ್ಸನ್ ಪರಿಚಯ ಇಲ್ಲದವರಿಗೆ, ದಕ್ಷಿಣ ಭಾರತದ ಕಾಡುಗಳಲ್ಲಿನ  ಅವನ ಬದುಕು ಮತ್ತು ಸಾಹಸಗಳನ್ನು ಅರಿಯಲು ಇದೊಂದು ಒಳ್ಳೆಯ ಅವಕಾಶ, ಸದಾ ಹಾಸ್ಯ ಮತ್ತು ಜೀವಂತಿಕೆ ತುಂಬಿರುವ ಇವನ ಬರವಣಿಗೆ ನಮ್ಮನ್ನು ಪ್ರಕೃತಿಯಲ್ಲಿ ಇನ್ನಷ್ಟು ಮುಳುಗೇಳಲು ಈ ಪುಸ್ತಕ ನಮ್ಮನ್ನು ಹುರಿದುಂಬಿಸುತ್ತದೆ.


ಕೆನೆತ್ ಅಂಡರ್ಸನ್ ಒಬ್ಬ ಮಾನವೀಯ ಅಂತಃಕರಣ ಉಳ್ಳ ಬೇಟೆಗಾರ . ಅವನು ಭಾರತದಲ್ಲಿ ಅದರಲ್ಲೂ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಕೆಲ ಅರೆಮಾಲೆನಾಡಿನ ಕಾಡುಗಳಲ್ಲಿ ಜನರಿಗೆ ತೊಂದರೆ ಕೊಡುವ ನರಭಕ್ಷಕ ಚಿರತೆ ಮತ್ತು ಹುಲಿಗಳ ಬೇಟೆಯ ಬಗ್ಗೆ ಈ ಪುಸ್ತಕದಲ್ಲಿ ಬಹಳ ಸೊಗಸಾಗಿ ಚಿತ್ರಿಸಿರುವರು.


ಮೊದಲ ಕಥೆಯಾದ"ನರಭಕ್ಷಕನ ಕಥೆ"ಇದರಲ್ಲಿ ಕೆನೆತ್ ರವರು ಗುಂಜೂರು ,ಜೋಳದಾಳು  ಸುತ್ತ ಮುತ್ತಲಿನ ಪರಿಸರದ ಬಗ್ಗೆ ವಿವರಣೆ ನೀಡುತ್ತಾ ಪರಿವೀಕ್ಷಣಾ ಬಂಗಲೆಯ ಮೇಟಿಯಾದ 

 ಅನಂತ ಸ್ವಾಮಿ ರವರ ಮಗಳು ನೀರು ತರಲು ಹೋದಾಗ ಹುಲಿ ಅವಳನ್ನು ಕೊಂದ ದಾರುಣ ಘಟನೆಯಿಂದ ಅನಂತಸ್ವಾಮಿಯು ಬಹಳ ಬೇಸರ ದಲ್ಲಿ ಇರುವನು . ಮಗಳ ಸಾವಿಗೆ ನ್ಯಾಯ ಒದಗಿಸಲು ಹುಲಿ ಸಾಯಲೇ ಬೇಕು ಎಂಬ ಹಠದಿಂದ ಅಂಡರ್ಸನ್ ಗೆ  ಮನವಿ ಮಾಡಿದ .

ಬಹಳ ತಯಾರಿಯಿಂದ ಮತ್ತು ಮುನ್ನೆಚ್ಚರಿಕೆಯಿಂದ ಪ್ಲಾನ್ ಮಾಡಿ ಆ ನರಭಕ್ಷಕ ಹುಲಿ ಬೇಟೆಯಾಡುವ ಪ್ರಯತ್ನ ಮೊದಲ ಬಾರಿ ಮಿಸ್ ಆಗಿದ್ದನ್ನು ನೀವು ಪುಸ್ತಕ ಓದಿಯೇ ಎಂಜಾಯ್ ಮಾಡಬೇಕು .

 ಕತ್ತಲಲ್ಲಿ ಟಾರ್ಚ್ ಬಿಡುವ ರೀತಿ  ,ಬಟ್ಟೆ ಆಕೃತಿ  ಮಾಡಿ ಮಾನವರ ರೀತಿ ನೀರ ಬಳಿ ನಿಲ್ಲಿಸಿ ಬೇಟೆಗೆ ಸಿದ್ದರಾದ ರೀತಿ ನಮಗೆ ಹೊಸತು ಎನಿಸದಿರದು.ನರಿಯ ,ಮತ್ತು ಇತರೆ ಪ್ರಾಣಿಗಳ ಕೂಗು. "

ಬ ಊ...ಅ"

"ವೀವ್ ವೀವ್ ...ಕೊಕ್ ಕೊಕ್ಕಾ"  ಮುಂತಾದ ವಿವರಣೆಯನ್ನು ಓದುವಾಗ ,ಯಾವುದೋ ಪ್ರಾಣಿಗಳ ಟಿ .ವಿ ಚಾನೆಲ್ ನೋಡುವಂತೆ ಭಾಸವಾಗುತ್ತದೆ.

ಮೂರನೆಯ ಕಥೆಯಲ್ಲಿ ತಲೈನೊವ್ವಿನ ನರದ್ವೇಷಿ. ಬಗ್ಗೆ ಚಿತ್ರಣ ಇದೆ .

ಚಿರತೆಯೊಂದು ತನ್ನ ಪಾಡಿಗೆ ಕಾಡಲ್ಲಿ ತನ್ನ ಮರಿಗಳೊಂದಿಗೆ  ಇತ್ತು ತನ್ನ 

ನಾಲ್ಕು ಮರಿಗಳನ್ನು ಸಾಯಿಸಿದ ಮಾನವರ ಹುಡುಕಿ ಹುಡುಕಿ ಕೊಲ್ಲಲು ಆರಂಭ ಮಾಡಿದಾಗ ಬೆದರಿದ ಊರ ಜನ ಆಂಡರ್ಸನ್ ಮೊರೆ ಹೋದಾಗ ಆ ಚಿರತೆ ಅಂತ್ಯ ಹೇಗಾಯಿತು ಎಂಬುದನ್ನು ಮಾನವ ಪ್ರಾಣಿಗಳ ಸಂಘರ್ಷ ದ ಹಿನ್ನೆಲೆಯಲ್ಲಿ ಬಹಳ ಸುಂದರವಾಗಿ ಬರೆದಿದ್ದಾರೆ ಆಂಡರ್ಸನ್ .ಅಷ್ಟೇ ಉತ್ತಮವಾಗಿ ಕನ್ನಡಕ್ಕೆ ತಂದಿದ್ದಾರೆ ಲೇಖಕಿ ಸಾಕ್ಷಿ ರವರು. 

 

ಆಂಡರ್ಸನ್ ಕೇವಲ ಕೋವಿ ಹಿಡಿದು ಪ್ರಾಣಿಗಳ ಬೇಟೆಯಾಡುವ ಕಟುಕನಾಗದೇ ಸೂಕ್ಷ್ಮ ಮನಸಿನ ಸಂಶೋದಕರು ಎಂಬುದನ್ನು  ಇದೇ ಪುಸ್ತಕದಲ್ಲಿ ಬರುವ ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು .

"ನರಭಕ್ಷಕ ಹುಲಿ ಅಥವಾ ಚಿರತೆ ಬರೀ ಮನುಷ್ಯ ಮಾಂಸವನ್ನು ನಂಬಿ ಕುಂತಿರುತ್ತದೆ ಎನ್ನುವುದು ಸುಳ್ಳಾದೀತು. ಹಾಗೇನಾದರೂ ಆದಲ್ಲಿ ಹುಲಿ ವಾರಕ್ಕೆರಡು ಬಾರಿ ಬೇಟೆಯಾಡಲೇಬೇಕಾಗಿರುವುದರಿಂದ,  ಸಾಯುವ ಜನರ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತದೆ.ಇದರಿಂದ ಜಾಗರೂಕವಾಗುವ ಜನರು ಹುಲಿಯ ಬಾಯಿಗೆ ಸಿಗದಂತೆ ಎಚ್ಚರವಹಿಸಿ, ನಂತರ ಹುಲಿಯೇ ಹೊಟ್ಟೆಗಿಲ್ಲದೆ ಸಾಯಬೇಕಾಗುತ್ತದೆ. ದೊಡ್ಡ ಪ್ರಾಣಿಗಳನ್ನು ಹಿಡಿಯಲು ಅಶಕ್ತವಾದ ಹುಲಿಗಳು ಮಾತ್ರ ನರಭಕ್ಷಕನಾಗುವುದು, ಯಾಕೆಂದರೆ ಮನುಷ್ಯನನ್ನು ಅಸಹಾಯಕ ಪ್ರಾಣಿ ಇನ್ನೊಂದಿಲ್ಲ! ಒಮ್ಮೆ ಹುಲಿಗೆ ರುಚಿ ಹತ್ತಿದಮೇಲೆ ಬೇರೆ ಪ್ರಾಣಿಯನ್ನು ಕಷ್ಟಪಟ್ಟು ಬೇಟೆಯಾಡಲ್ಲವಷ್ಟೆ! ಮಾನವ ಪ್ರಾಣಿಯೇನಾದರೂ ಸಿಗದೇ ಹೋದರೆ, ಅದು ತನ್ನ ಸಹಜ ಆಹಾರಗಳ ಕಡೆ ತಿರುಗುತ್ತದೆ, ಅವಕಾಶ ಸಿಕ್ಕಿದಾಗ ಮಾತ್ರ ನರಬೇಟೆಯಲ್ಲಿ ತೊಡಗುತ್ತದೆ. ಆದರೆ ಒಂದು ನರಭಕ್ಷಕ ಎಷ್ಟೇ ಪ್ರಾಣಿಗಳನ್ನು ಮನುಷ್ಯರನ್ನು ಹಿಡಿದು ತಿಂದರೂ, ಮನುಷ್ಯರ ಬಗೆಗಿನ ಮೂಲಭೂತವಾದ ಭಯ ಅದನ್ನು ಬಿಟ್ಟುಹೋಗುವುದೇ ಇಲ್ಲ. ಎಂಥ ಭೀಕರವಾದ ನರಭಕ್ಷಕನೇ ಆಗಲಿ, ಮಾನವರು ತಿರುಗಿಬಿದ್ದಾಗ ಬಾಲ ಮುದುರಿ ಓಡಿಹೋಗಿರುವ ಘಟನೆಗಳೇ ಹೆಚ್ಚು. ಆದರೆಂದೂ  ಆನೆಯನ್ನು ಹೊರತುಪಡಿಸಿ ದನಗಳಾಗಲಿ  ಬೇರೆ ಸಾಕು ಪ್ರಾಣಿಗಳಾಗಲಿ ಇವ್ಯಾವುದಕ್ಕೂ ನರಭಕ್ಷಕಗಳು ಹೆದರುವುದೇ ಇಲ್ಲ"


ಕೆನೆತ್ ಆಂಡರ್ಸನ್ ಕಥೆಗಳು ನಮಗೆ ಕಾಡಿನ ಚಿತ್ರಣ, ಮತ್ತು ಪ್ರಾಣಿ ಮಾನವ ಸಂಘರ್ಷದ ಹಿನ್ನೆಲೆಯಲ್ಲಿ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ . ಎಲ್ಲಾ ಹನ್ನೊಂದು ಕಥೆಗಳು ಬಹಳ ಸುಂದರವಾಗಿವೆ . ಇಂತಹ ಕಥೆಗಳನ್ನು ಕನ್ನಡಕ್ಕೆ ತಂದ ಸಾಕ್ಷಿ ರವರಿಗೆ ಅಭಿನಂದನೆಗಳು ಮತ್ತು ಧನ್ಯವಾದಗಳು ಅವರಿಂದ ಇನ್ನೂ ಉತ್ತಮವಾದ ಕೃತಿಗಳು ಹೊರಹೊಮ್ಮಲಿ .


 ಪುಸ್ತಕದ ಹೆಸರು: ಕೆನೆತ್ ಆಂಡರ್ಸನ್ ಕಥೆಗಳು 

 ಅನುವಾದ:  ಸಾಕ್ಷಿ.

  ಪ್ರಕಾಶನ: ಆಕೃತಿ ಪುಸ್ತಕ ಬೆಂಗಳೂರು.

ಬೆಲೆ : ೨೭೫.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ