04 ಜೂನ್ 2021

ಬಾಲಜಣ್ಣ .ಕಥೆ


 



*ಬಾಲಾಜಣ್ಣ*


ಕುಂಟ , ಶ್ಯವ್ಟಾ, ಲಂಗ್ಡಾ, ಎಳವ , ಹೀಗೆ ದಿನಕ್ಕೊಂದು ಹೆಸರಿನಿಂದ ಕರೆದು ಅವಮಾನವನ್ನು ಬಾಲಾಜಿಯು ಮೊದ ಮೊದಲು ಅಳುತ್ತಲೇ ಸ್ವೀಕರಿಸಿ, ಬರು ಬರುತ್ತಾ, ಅದು ಮಾಮೂಲಿಯಾಗಿ ತನ್ನ ಹೆಸರೇ ಅವನಿಗೆ ಮರೆತುಹೋಗಿತ್ತು, ತಂದೆಯಿಲ್ಲದ ಮಗನನ್ನು ಅಮ್ಮ ಕೂಲಿ ನಾಲಿ‌ಮಾಡಿ ಸಾಕುತ್ತಿದ್ದರು, 


ಒಂದು ದಿನ‌ ರಾತ್ರಿ ಮನನೊಂದ ಮಗ ಅಮ್ಮನ ಕೇಳಿಯೇ ಬಿಟ್ಟ " ಅಮ್ಮ ನನ್ನ ಒಂದು  ಕಾಲೇಕೆ ಹೀಗಾಗಿದೆ? ನನ್ನ ಗೆಳೆಯರು ಮತ್ತು ಊರವರು ನಾನು ನಡೆಯುವುದನ್ನು ಹಂಗಿಸುವರು, ಮತ್ತು ನನ್ನ ಹೆಸರು ಹಿಡಿದು ಕರೆಯದೇ ಕೆಟ್ಟ ಪದಗಳಿಂದ ಬೈಯುವರು. ಅದನ್ನು ಕೇಳಿ ನನಗೆ ಅಳು ಬರುವುದು " ಎಂದು ಕಣ್ಣಲ್ಲಿ ನೀರು ಹಾಕುತ್ತಲೇ ಕೇಳಿದ.


ಮಗನ ಕಣ್ಣೀರ ವರೆಸಿ ತಾನೂ ತನ್ನ ಕಣ್ಣಲ್ಲಿ ಬಂದ ನೀರನ್ನು ಸೆರಗಿನಿಂದ ವರೆಸಿಕೊಂಡು ಮಗನ ಸಮಾಧಾನ ಮಾಡುತ್ತಾ 

"ಅಳಬ್ಯಾಡ ಕಣೋ ನನ್ ಮಗನೆ, ಇದ್ರಲ್ಲಿ ನಿಂದೇನೂ ತಪ್ಪಿಲ್ಲ ಕಣಪ್ಪ,ನೀನು ಹುಟ್ಟಿದಾಗಿಂದ ಒಂದು ಕಾಲು ಐಬು ಕಣಪ್ಪ, ತಾಲೂಕ್ ಆಸ್ಪತ್ರೆ, ದೊಡ್ ಆಸ್ಪತ್ರೆ ಎಲ್ಲಾ ತೋರ್ಸಿದೆ ಕಣಪ್ಪ , ಆ ಡಾಕ್ಟ್ರು ಅದೆಂತದೋ, ಪೋಲಿಯಾ ಅಂದ್ರು, ಅದು ವಾಸಿ ಆಗಲ್ಲಂತೆ ಕಣಪ್ಪ, ...

ಯಾರಪ್ಪ ನಿನ್ನ ಬೈದೋರು? ನಾಳೆ ಅವರ್ನ ನನಿಗೆ ತೋರ್ಸು ,ಅವ್ರ ಗಾಚಾರ ಬಿಡಿಸ್ತಿನಿ, ನೀನೇನು ಅದ್ನ ತಲೆಗೆ ಹಚ್ಕಬ್ಯಾಡ ಇವತ್ತಿಂದ ಇನ್ನೂ ಸೆನಾಗಿ ಓದು, ನಿನ್ ಬೈಯ್ಯೋ ಜನ , ಹಂಗ್ಸೋ ಜನ ಬಾಯ್ ಮುಚ್ಕೆಂಪ್ತಾರೆ, ಎಂದು ಮಗನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಸಮಾಧಾನ ಮತ್ತು ಧೈರ್ಯ ಹೇಳಿದರು ತಾಯಿ ದೇವಕ್ಕ  . ಅಮ್ಮನ ಧೈರ್ಯದ ಮಾತು ಕೇಳಿ ಮಗ ಹಾಗೆಯೇ ಅಮ್ಮನ ತೊಡೆಯ ಮೇಲೆ ನಿದ್ರೆಗೆ ಜಾರಿದ ಬಾಲಾಜಿ.


ಅಮ್ಮನಿಗೆ ನಿದ್ರೆ ಬರಲಿಲ್ಲ ಬದಲಿಗೆ ಪ್ರಶ್ನೆಗಳ ಸರಮಾಲೆ ಅವಳ ಮುಂದೆ ಬಂದು ನಿಂತಿತು, " ಸಿಕ್ ವಯಸ್ಸಲ್ಲೆ ಗಂಡನ್ ಕಳ್ಕೊಂಡು ಈ ಮಗನ್ ಸಾಕಕೆ ಕೂಲಿ ಮಾಡ್ಕಂಡು ಜೀವ್ನ ಮಾಡೋದು ನನ್ ತಪ್ಪೇ?

ನನ್ ಮಗಂಗೆ ಕಾಲ್ ಸೆನಾಗ್ ಇಲ್ದೇ ಇರೊಂಗಾಗಿದ್ ನಮ್ ತಪ್ಪೆ? 

ನಮ್ ಪಾಡಿಗೆ ನಾವ್ ಮರ್ವಾದೆಯಿಂದ ಜೀವ್ನ ಮಾಡ್ತಾ ಇದ್ರು ಈ ಜನ ಯಾಕ್ ನನ್ ಮಗನ್ನ ಇಂಗೆ ಮಾತಾಡ್ತಾರೆ? ಎಂದು ಮತ್ತೆ ಎರಡು  ಹನಿಗಳನ್ನು ಉದುರಿಸಿದರು,  ಆ ಹನಿಗಳು ಮಗನ ಕೈ ಮೇಲೆ ಬಿದ್ದು ನಿದ್ರೆಯಲ್ಲಿದ್ದ ಮಗ ಕೈ ಅಲುಗಾಡಿಸಿದ, ಮಗನನ್ನು ಎತ್ತಿ ಚಾಪೆಯ ಮೇಲೆ ಮಲಗಿಸಿ, ಉತ್ತರ ದಿಕ್ಕಿಗೆ ನಿಂತು " ತಾಯಿ ದೇವಸತ್ತಿ ಚೌಡವ್ವ ನನ್ ಮಗುಂಗೆ ,ನಂಗೆ ಯಾವ ತೊಂದ್ರೆ ಇಲ್ದೆ ಕಾಪಾಡವ್ವ ಎಂದು  ಕೈಮುಗಿದು ತನ್ನ ಬಲಗೈಯನ್ನು ಮಡಿಚಿ ತಲೆದಿಂಬಿನಂತೆ ತಲೆ ಕೆಳಗೆ ಇಟ್ಟುಕೊಂಡು ಮಗನ ಪಕ್ಕದಲ್ಲೇ ಮಲಗಿದರು ದೇವಕ್ಕ.


ಅಮ್ಮನ ಧೈರ್ಯದ ಮಾತುಗಳು, ಮಗನಿಗೆ ಮಾರ್ಗದರ್ಶನದಂತೆ ನಿಂತವು, ಆಗಾಗಾ ಜನರಾಡುವ ಕುಹಕದ ಮಾತುಗಳಿಗೆ ಬಾಲಜಿ ಕಿವುಡಾದ ಓದಿನ ಕಡೆ ಗಮನಹರಿಸಿದ.


" ನಾಲ್ಕನೇ ತರಗತಿಯಲ್ಲಿ ಈ ವರ್ಷ ಬಾಲಾಜಿ ಎಲ್ಲರಿಗಿಂತ ಹೆಚ್ಚು ಅಂಕ ಪಡೆದಿರುವನು ಎಲ್ಲರೂ ಚಪ್ಪಾಳೆ ಹೊಡಿಯಿರಿ " ಎಂದು ಶಿಕ್ಷಕರಾದ ತಿಪ್ಪೇಸ್ವಾಮಿ ಹೇಳಿದಾಗ ಮಕ್ಕಳು ಜೋರಾಗಿ ಚಪ್ಪಾಳೆ ತಟ್ಟಿದರು ,ಬಾಲಾಜಿ ಗೆ ತನಗರಿವಿಲ್ಲದೇ ಕಣ್ಣಲ್ಲಿ ನೀರು ಜಿನುಗಿದವು ಆದರೆ ಈ ಬಾರಿ ಆನಂದದಿಂದ.


ರಿಸಲ್ಟ್ ಕಾರ್ಡ್ ಹಿಡಿದು ಅಮ್ಮನ ಬಳಿ ಬಂದು ಅದನ್ನು ತೋರಿಸಿ "ಅಮ್ಮ ನೋಡು ನಾನು ಇಡೀ ಸ್ಕೂಲ್ ಗೆ ಪಸ್ಟ್ ಬಂದಿದಿನಿ" ಎಂದು ಮೊಗದಲ್ಲಿ ನಗುತುಂಬಿಕೊಂಡು ತೋರಿಸಿದ.


ಅಮ್ಮ ಹಿರಿಹಿರಿ ಹಿಗ್ಗುತ್ತಾ" ಬಾಳ ಸಂತೋಸ ಕಣಪ್ಪ, ನನಗೆಲ್ಲಿ ಇದುನ್ನ ಓದಾಕೆ ಬರುತ್ತೆ ,ಆದ್ರೂ ನೀನಿಗೆ ಸೆನಾಗಿ ನಂಬ್ರು ಬಂದಿರೋದು ಬಾಳ ಸಂತೋಸ ಕಣಪ್ಪ ,ಆ ನಮ್ ಸತ್ತಿ ಚೌಡವ್ವ   ಕಣ್ ಬಿಟ್ಲು ಕಣಪ್ಪ  ನಾಳಿಕೆ ಸುಕ್ರುವಾರ ಅವ್ವನ್ ಗುಡಿಗೆ ಹೋಗಿ ಹಣ್ಣು ಕಾಯಿ ಮಾಡಿಸ್ಕೆಂಡು ಬಾ, ಇಂಗೆ ಸೆನಾಗಿ ಓದಿ ,ಗೌರ್ಮೆಂಟ್ ಕೆಲ್ಸ ತಗಾಳಪ್ಪ " ಎನ್ನತ್ತಾ ತನ್ನ ಎರಡೂ ಕೈಗಳಿಂದ ಮಗನ ಮುಖವ ನೇವರಿಸಿ ತಲೆಗೆ ಒತ್ತಿಕೊಂಡು ನೆಟಿಕೆ ಮುರಿದರು ದೇವಕ್ಕ.


ಬಾಲಾಜಿಯ ಶೈಕ್ಷಣಿಕ ಪ್ರಗತಿಯನ್ನು ಕಂಡ ಅವನ ಸ್ನೇಹಿತರು ಐದನೆಯ ತರಗತಿಯಲ್ಲಿ ಅವನಿಗೆ ಗೌರವ ಕೊಡಲಾರಂಭಿಸಿದರು, ಕುಂಟ ಬಾಲ, ಬಾಲ, ಎಂದು ಹಂಗಿಸುವವರು ಕ್ರಮೇಣ ,ಬಾಲಾಜಿ, ಎನ್ನಲು ಆರಂಭ ಮಾಡಿದರು, ಇದಕ್ಕೆ ಪೂರಕವಾಗಿ ತರಗತಿಯ ಶಿಕ್ಷಕರಾದ ತಿಪ್ಪೇಸ್ವಾಮಿ ಮಾಸ್ಟರ್ " ಮಕ್ಕಳೇ ಅಂಗವಿಕಲತೆ ಶಾಪವಲ್ಲ, ಅವರೂ ನಮ್ಮಂತೆ ಮನುಷ್ಯರು ಅವರಿಗೂ ಜೀವಿಸುವ ಹಕ್ಕಿದೆ" ಎಂಬ ಮಾತುಗಳು ಸಹ ಮಕ್ಕಳ ಮನ ಪರಿವರ್ತನೆ ಗೆ ಸಾಕ್ಷಿಯಾಗಿದ್ದವು.


ಬಾಲಾಜಿಯು ಓದಿನಲ್ಲಿ ಹಿಂತಿರುಗಿ ನೋಡಲೇ ಇಲ್ಲ, ಅದಕ್ಕೆ ತಕ್ಕಂತೆ ಅಮ್ಮ ಕೂಲಿನಾಲಿ ಮಾಡಿ ಮಗನ ಓದಿಸಿದರು, ಹತ್ತನೇ ತರಗತಿಯಲ್ಲಿ ಮಗ ಇಡೀ ತಾಲೂಕಿಗೆ ಹೆಚ್ಚು ಅಂಕ ಪಡೆದು ಪಾಸಾಗಿದ್ದ, ಪತ್ರಿಕೆಯಲ್ಲಿ ಅವನ ಪೋಟೋ ಬಂದಿದ್ದನ್ನು ಕಂಡ ಅಕ್ಕ ಪಕ್ಕದ ಜನ ದೇವಕ್ಕನ ಮನೆಗೆ ಬಂದು ಮಗನ ಸಾಧನೆ ಹೊಗಳಿದಾಗ ಅಮ್ಮನಿಗೆ ಒಳಗೊಳಗೆ ಮಗನ ಸಾಧನೆ ಕಂಡು ಹೆಮ್ಮೆ ಉಂಟಾಯಿತು.


ಪಿಯುಸಿ, ಡಿಗ್ರಿಯಲ್ಲಿ ,ಅಂಗವಿಕಲ ವಿದ್ಯಾರ್ಥಿ ವೇತನ ಮತ್ತು ಅಮ್ಮನ ‌ನೆರವಿನಿಂದ ಚೆನ್ನಾಗಿ ಓದಿದ ಬಾಲಾಜಿ ಡಿಗ್ರಿಯಲ್ಲಿ ಬಂಗಾರದ ಪದಕ ಪಡೆದು , ಬಿ ಎಡ್ ಮಾಡಿದ ಒಂದೇ ವರ್ಷಕ್ಕೆ ಸರ್ಕಾರಿ ಶಾಲೆಯ ಶಿಕ್ಷಕನಾದ ,


ಊರವರ ಬಾಯಲ್ಲಿ ಬಾಲಾಜಿ ಕ್ರಮೇಣ "ಬಾಲಾಜಣ್ಣ " ಆಗಿದ್ದ ಇಡೀ ಊರಿಗೆ ಮೊದಲ ಸರ್ಕಾರಿ ಉದ್ಯೋಗ ಪಡೆದ ಬಾಲಜಣ್ಣ ಊರಿನ ಓದುವ ಹುಡುಗರ ಮಾದರಿಯಾಗಿ ನಿಂತಿದ್ದ, 


ಕೋಲಾರಕ್ಕೆ ಶಿಕ್ಷಕನಾಗಿ ನಿಯೋಜಿತವಾದ ನೇಮಕ ಪತ್ರ ಪಡೆದ ಬಾಲಾಜಿ ಅಮ್ಮನ ಪಾದದ ಬಳಿ ಆ ಪತ್ರ ಇಟ್ಟು ಕಾಲಿಗೆರಗಿ ಆಶೀರ್ವಾದ ಪಡೆದ


"ಬಾಲಾಜಿ, ಇದಕ್ಕೆಲ್ಲ ಕಾರಣ ಆ ಮಾ ಸತ್ತಿ  ಚೌಡಮ್ಮ ಆಯಮ್ಮನ ಗುಡಿಗೋಗಿ ಇದಕ್ಕೆ ಪೂಜೆ ಮಾಡಿಸ್ಕೆಂಡು ನೀನು ದೂಟಿ ಗೆ ಹೋಗಪ್ಪ" ಎಂದರು ದೇವಕ್ಕ.


"ಅಮ್ಮಾ... ನಾನ್ ಒಬ್ಬನೇ ಹೋಗಲ್ಲ ನೀನು ನನ್ ಜೊತೆಗೆ ಬಾ, ಇಬ್ರು ಅಲ್ಲೇ ಇರಾನಾ, " ಎಂದು ಮಗ ಹೇಳುತ್ತಲೇ ಆಗಲಿ ಎಂದು ತಲೆಯಾಡಿಸಿದರು ಅಮ್ಮ.


ಒಂದು ತಿಂಗಳು ಶಿಕ್ಷಕನಾಗಿ ಸಂಬಳ ಪಡೆದ ಬಾಲಾಜಿ  ಅಮ್ಮನಿಗೆ ರೇಷ್ಮೆ ಸೀರೆ ತಂದು ಕೊಟ್ಟನು.

 ಅಮ್ಮನ ಬಹುದಿನದ ಬಯಕೆಯಂತೆ ತಿರುಪತಿ ಗೆ ಕರೆದುಕೊಂಡು ಹೋದನು. ವೆಂಕಟರಮಣಸ್ವಾಮಿಯ ದರ್ಶನದಿಂದ ಭಾವಪರವಶರಾದ ದೇವಕ್ಕ ತಮಗರಿವಿಲ್ಲದೇ ಜೋರು ಧ್ವನಿಯಲ್ಲಿ ಗೋವಿಂದಾ...... ಗೋವಿಂದಾ..... ಎಂದು ಕೂಗಲಾರಂಬಿಸಿದರು, ಅಮ್ಮನ ಧ್ವನಿಗೆ ಬಾಲಜಿಯೂ ಧ್ವನಿಸೇರಿಸಿದ ಅಕ್ಕಪಕ್ಕದವರೂ ಗೋವಿಂದಾ.... ಎಂದು  ದೇವರ ಕೃಪೆಗೆ ಪಾತ್ರರಾಗಲು ಪ್ರಯತ್ನಿಸುತ್ತಿದ್ದರು....


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

ನೇತಾಜಿ .ಹನಿ


 


*ನೇತಾ"ಜಿ"*


ಬಹಳ ಸಂತಸದ ವಿಷಯ

ಕನ್ನಡದಲ್ಲಿ ಧಾರಾವಾಹಿ 

ರೂಪದಲ್ಲಿ ‌ಬರಲಿದ್ದಾರೆ 

ನಮ್ಮ ನೇತಾಜಿ|

ದೇಶಭಕ್ತರ ಜೀವನವನ್ನು

ಪ್ರಸಾರ ಮಾಡುವ ನಿಮಗೆ

ನಮನ "ಜೀ "(Zee)||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

02 ಜೂನ್ 2021

ಮಹಿಮೆ ,ಕಥೆ


 


ಮಹಿಮೆ 


 ಕಥೆ 



ಮಗಳು ಮಲಗಿದ್ದಳು 

ಬೆಳಿಗ್ಗೆ ಎಂಟು ಗಂಟೆಯಾದರೂ ಎದ್ದಿರಲಿಲ್ಲ, ಸಾಮಾನ್ಯ ದಿನಗಳಲ್ಲಿ ಆರು,ಆರೂವರೆಗೆ ಎದ್ದು  ಅಮ್ಮನ ಮಾತು ದಿಕ್ಕರಿಸಿ, ಅಮ್ಮನಿಗೆ ಮನೆ ಅಂಗಳ ಗುಡಿಸಲು, ಮನೆ ಮುಂದೆ ನೀರು ಹಾಕಲು ಸಹಾಯ ಮಾಡುತ್ತಿದ್ದಳು ಗೌರಿ .


"ಈ ವರ್ಷ ಏಳನೇ ಕ್ಲಾಸ್ ಪಾಸಾಗಿದಿಯಾ, ಇನ್ನು ಎಂಟನೇ ಕ್ಲಾಸ್, ಸ್ಕೂಲ್ ಇನ್ನೂ ಓಪನ್ ಆಗಿಲ್ಲ, ಪಕ್ಕದ್ ಮನೆ ರಾಧಾ ಕೊಟ್ಟ ಹಳೇ  ಬುಕ್ ತೊಗೊಂಡ್  ಓದು ಹೋಗು" ಎಂದು ಗದರಿದರೂ ,

" ಓದ್ತಿನಿ ಇರಮ್ಮ ಹಗಲೊತ್ತು ಪೂರ್ತಿ ಟೈಮ್ ಇರುತ್ತೆ, ನೀ‌ನು ಪಾಪ ದಿನ ಪೂರ್ತಿ ಕೆಲಸ ಮಾಡಿ ಸುಸ್ತು ಆಗ್ತೀಯಾ ಅದಕ್ಕೆ ನಿನಗೆ ಸ್ವಲ್ಪ ಹೆಲ್ಪ್ ಮಾಡಿದೆ ಅಷ್ಟೇ " ಎಂದ ಮಗಳ ಮಾತ ಕೇಳಿ ತಾಯಿ ಒಳಗೊಳಗೆ ಖುಷಿ ಪಡುತ್ತಿದ್ದಳು.


ಅಂದೇಕೋ ಎಂಟಾದರೂ ಏಳದ ಮಗಳ ನೋಡಿ , ರಾತ್ರಿಯೆಲ್ಲಾ ತೋಟಕ್ಕೆ ನೀರು ಹಾಯಿಸಲು ಹೋದ ತಂದೆ , ಬೆಡ್ ಶೀಟ್ ತೆಗೆದು ಏಳಮ್ಮ ಚಿನ್ನು. ಎಂದು ಹಣೆ ಮೇಲೆ ಕೈಇಟ್ಟ, ಕಾದ ಕಾವಲಿಯಂತಾಗಿತ್ತು ಹಣೆ, ಗಾಬರಿಯಿಂದ ,ಏ ಇವಳೆ ಬಾರೆ ಇಲ್ಲಿ, ಚಿನ್ನುಗೇನೆ ಇಂಗೆ ಜ್ವರ ಬಂದಿದೆ? ನೋಡೋದಲ್ವ? ಬರೀ ನಿನಗೆ ಕಸ ಹೊಡೆಯೋದು, ನೆಲ ಗುಡಿಸೋದೆ ಕೆಲಸ"ಎಂದು  ಸಿಟ್ಟಿನಿಂದ ಆತಂಕದಿಂದ ನುಡಿದ ಜಗನ್ನಾಥ.


ಪೊರಕೆ ಬಿಸಾಕಿ ಓಡಿ ಬಂದ ತಾಯಿ ಮಗಳ ತಬ್ಬಿ ಅಯ್ಯೋ ಏನಮ್ಮ ಇದು ಮೈಯಿ ಕಾದ ಅಂಚಿನಂಗೈತೆ , ನಾನು ನೊಡ್ಲೇ ಇಲ್ಲ" ಎಂದು ಅಳುತ್ತಾ ಮಗಳ ತಬ್ಬಿಕುಳಿತಳು.


" ಅಳಬ್ಯಾಡ ಸುಮ್ನಿರು, ಆಸ್ಪತ್ರೆಗೆ ಕರ್ಕೊಂಡು ಹೋಗ್ತೀನಿ ಎಲ್ಲಾ ಸರಿಹೋಗುತ್ತೆ"  ಸಮಾಧಾನ ಹೇಳಿದ ಜಗನ್ನಾಥ .


ಎಂಟು ಮೈಲಿ ದೂರದಲ್ಲಿರುವ ಆಸ್ಪತ್ರೆಗೆ ಹೋಗಲು ಬಸ್ ಇರಲಿಲ್ಲ, ಪಕ್ಕದ ಬೀದಿಯ ದಾದು ಮನೆಗೆ ಹೋಗಿ , ಮಗಳ ಅನಾರೋಗ್ಯದ ಕಾರಣ ತಿಳಿಸಿ ಆಸ್ಪತ್ರೆಗೆ ಬರಲು ಕೇಳಿದ ಜಗನ್ನಾಥ,

"  ಅಣ್ಣ ಈಗ ಟೈಟ್ ಲಾಕ್ಡೌನ್ ಐತೆ,   ನಿ‌ನ್ನೆ ಇಂಗೆ ಹೋಗಿ ಪೋಲೀಸ್ ನವರ ಲಾಟಿ ಏಟು ತಿಂದು ,ಹಿಂಭಾಗದಲ್ಲಿ ನೀಲಿ ಬರೆ ಬಂದಿದೆ ನೋಡು "ಎಂದು ಬರ್ಮುಡ ಸರಿಸಿ ತೋರಿಸಿದ, 


ಬೇಸರದಿಂದ ಎದ್ದ ಜಗನ್ನಾಥ ದಾದು ಮನೆಯಿಂದ ಹೊರ ನಡೆದ , ಅಕ್ಕ ಪಕ್ಕದ ಮನೆಯವರ ಬೈಕ್ ನಲ್ಲಿ ತನ್ನ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪ್ರಯತ್ನ ಪಟ್ಟ  ಯಾರೂ ಒಪ್ಪದಿದ್ದಾಗ ಮಗಳ ತಲೆಯ ಮೇಲೆ ಒಂದು ಟವಲ್ ಹಾಕಿ , ತನ್ನ ಹೆಗಲ ಮೇಲೆ  ಕೂರಿಸಿಕೊಂಡು ಎಂಟು ಮೈಲಿ ದೂರದಲ್ಲಿರುವ ಆಸ್ಪತ್ರೆಗೆ ನಡೆಯಲು ಶುರುಮಾಡಿದ , ಬಾಯಾರಿಕೆ ಯಾದಾಗ ಅಲ್ಲೇ ರಸ್ತೆಯ ಪಕ್ಕದಲ್ಲಿ ಇರುವ ಬೋರ್ ವೆಲ್ ನೀರು ಕುಡಿದು ಮತ್ತೆ ನಡೆಯಲು ಶುರುಮಾಡಿದ , ಅಂತೂ ಆಸ್ಪತ್ರೆ ತಲುಪಿದ ಅಲ್ಲಿ ಜನಜಾತ್ರೆ ,ಮಗಳು ಸುಸ್ತಾದಂತೆ ಕಂಡಳು , ಬೆಳಿಗ್ಗೆಯಿಂದ ಇಬ್ಬರೂ ಏನೂ ತಿಂದಿಲ್ಲದಿರುವುದು ನೆನಪಾಯಿತು, ಅಲ್ಲೇ ಹತ್ತಿರವಿರುವ ಅಂಗಡಿಯಲ್ಲಿ ಒಂದು ಬಿಸ್ಕತ್ತಿನ ಪೊಟ್ಟಣ ತಂದು ತಿನ್ನಿಸಿದನು, 


" ರಾತ್ರಿಯಿಂದ ಜ್ವರ ಸ್ವಾಮಿ, ನೋಡಿ ಮೈ ಸುಟ್ ಹೋಗ್ತೈತೆ, ಒಂದ್ ಬಾಟ್ಲಿ ಹಾಕಿ ,ಎರಡು ಇಂಜೆಕ್ಷನ್ ಹಾಕಿ ಸ್ವಾಮಿ " ಒಂದೇ ಸಮನೆ ಹೇಳಿದ ಭಯಗೊಂಡ ತಂದೆ


" ಇಲ್ಲಿ ಡಾಕ್ಟರ್ ನಾನೋ ,ನೀನೋ"


"ನೀವೇನೆ ಸಾ, ಹೋದ್ ಸಲ ನನಗಿ ಜ್ವರ ಬಂದಾಗ ನೀವು ಬಾಟ್ಲಿ ಹಾಕಿದ್ರಿ ಅದಕ್ಕೆ ಅಂಗಂದೆ ಸ್ವಾಮಿ"


" ಈಗ ಕೋವಿಡ್ ಇದೆ ,ಯಾರಿಗೂ ಬಾಟ್ಲಿ ಹಾಕಲ್ಲ, ಇಂಜೆಕ್ಷನ್ ಮಾಡಿ ,ಮಾತ್ರೆ ಕೊಡ್ತೀನಿ ಮೂರ್ ದಿನ ಬಿಟ್ ಬನ್ನಿ"  ಎಂದರು  ಡಾಕ್ಟರ್.


ಮಗಳನ್ನು ಹೆಗಲಮೇಲೆ ಹೊತ್ತು ಮನೆಗೆ ಹಿಂತಿರುಗುವಾಗ ದಾರಿಯುದ್ದಕ್ಕೂ ಮಗಳ ಮೈ ಮುಟ್ಟಿ ನೋಡಿ ಜ್ವರ ಕಡಿಮೆಯಾಗದಿದ್ದನ್ನು ಅರಿತು ,ಡಾಕ್ಟರ್ ನನ್ನ ಬೈಯಲು ಶುರುಮಾಡಿದರು. ಊರು ಹತ್ತಿರವಾದಂತೆ ಸೂರ್ಯದೇವ ಗುಡ್ಡಗಳ ಮರೆಯಲ್ಲಿ ಅವಿತುಕೊಳ್ಳಲು ಹವಣಿಸುತ್ತಿದ್ದ, ದೂರದ ದಾರಿ ನಡೆದಿದ್ದರೂ ಮಗಳು ಕತ್ತಲಾದರೆ ಹೆದರಬಹುದೆಂದು ದೊಡ್ಡ ಹೆಜ್ಜೆ ಹಾಕಿ ನಡೆದ ಅಂತೂ ಕತ್ತಲಾಗುವುದರೊಳಗೆ ಮನೆ ಮುಂದೆ ಬಂದು ನಿಂತ.


ತಲೆಬಾಗಿಲಿನಲ್ಲೆ ಕಾಯುತ್ತಿದ್ದ ತಾಯಿಹೃದಯ ಮಗಳ ತಬ್ಬಿಕೊಂಡು ಇನ್ನೂ ಮೈ ಬಿಸಿಇರುವುದನ್ನು ಕಂಡು ಅಳುತ್ತಾ, ಇದೇನಿದು ಇವಳಿಗೆ ಜ್ವರ ಸ್ವಲ್ಪನೂ ಕಮ್ಮಿ ಆಗಿಲ್ಲ ಎಂಗೆ ತೋರಿಸಿದಿರಿ ನೀವು" ಎಂದು ಕೇಳಿದಳು ಪುಟ್ಟಮ್ಮ.


ಮನೆಯ ಪಡಸಾಲೆಯಲ್ಲಿ ಚಾಪೆಯ ಮೇಲೆ ಮಗಳ ಮಲಗಿಸಿ ಆಗ ತಾನೆ ಕಾಸಿದ್ದ ಗಂಜಿ ತಂದು ಕುಡಿಸಿದಳು ,ತಕ್ಷಣ ಏನೋ ಹೊಳೆದವಳಂತೆ ಕೈಕಾಲು ಮುಖ ತೊಳೆದುಕೊಂಡು, ನೀವು ಇಲ್ಲೆ ಮಗುನ ನೋಡ್ಕೊಂಡ್ ಇರ್ರಿ ನಾನು ಬರ್ತಿನಿ ಎಂದು ಹೊರಟೇ ಬಿಟ್ಟಳು, ಜಗನ್ನಾಥ ಎಲ್ಲಿಗೆ ಎಂದು ಕೇಳಲಿಲ್ಲ.


" ನೀನ್ ಇಂಗ್ ಮಾಡಿದರೆ ಎಂಗವ್ವ? ನಾನ್ ಏನ್ ಕಮ್ಮಿ ಮಾಡಿದಿನಿ ನಿನಿಗೆ, ವಾರ ವಾರ. ಮಂಗಳವಾರ, ಶುಕ್ರವಾರ ,ಪೂಜೆ ಮಾಡ್ತಾ ಇದಿನಿ, ವರ್ಷಕೊಂದ್ ಕೋಳಿ  ಕೊಯ್ದು ಜಾತ್ರೆ ಮಾಡಿದಿವಿ ,ಇನ್ನೇನು ಬೇಕು ನಿನಿಗೆ, ನನ್ ಮಗ ಚೆನ್ನಾಗಿ ಆಗ್ಬೇಕು ಅಷ್ಟೇ, ಅವಳು ಬೇಗ ಗುಣ ಆಗ್ತಾಳೆ ಅಂದ್ರೆ ಬಲಕ್ಕೆ ಪ್ರಸಾದ ಕೊಡು , ಲೇಟ್ ಆಗುತ್ತೆ ಕಷ್ಟ ಆಗುತ್ತೆ ಅನ್ನಂಗಿದ್ರೆ ಎಡಕ್ಕೆ ಕೊಡು" ಎಂದು ಮೂರು ಬಾರಿ ಅಡ್ಡ ಬಿದ್ದು ಗ್ರಾಮದೇವತೆ ಚೌಡೇಶ್ವರಿ ಯನ್ನು ಕೇಳಿದಳು ಪುಟ್ಟಮ್ಮ.


  ಅಮ್ಮನ ನೆತ್ತಿಯ ಮೇಲಿನಿಂದ ಬಲಬಾಗಲ್ಲಿ ಹೂ ಕೆಳಗೆ ಬಿದ್ದಿತು,

ನನ್ ತಾಯಿ ನೀನ್ ನಮ್  ಕೈ ಬಿಡಲ್ಲ ಅಂತ ಗೊತ್ತು ಕಣವ್ವ ಎಂದು ಮತ್ತೆ ಅಡ್ಡ ಬಿದ್ದು, ಪೂಜಾರಪ್ಪನಿಂದ ಭಂಡಾರ ಪಡೆದು ಸೀರೆ ಸೆರಗಿನ ತುದಿಗೆ ಗಂಟುಹಾಕಿಕೊಂಡು ಮನೆಗೆ ಬಂದು ಭಂಡಾರ ಮಗಳ ಹಣೆಗೆ ಇಟ್ಟಾಗ ಜಗನ್ನಾಥನಿಗೆ ಇವಳು ದೇವಾಲಯಕ್ಕೆ ‌ಹೋಗಿದ್ದು ತಿಳಿಯಿತು.


" ಇನ್ನೇನು ತೊಂದ್ರೆ ಇಲ್ಲ ಅಮ್ಮ ,ಎಲ್ಲಾ ಒಪ್ಕೊಂಡೈತೆ ಬೇಗ ವಾಸಿಯಾಗುತ್ತೆ" ಎಂದು ಗಂಡ ಮತ್ತು ಮಗಳಿಗೆ ಧೈರ್ಯ ಹೇಳಿ ಅಡುಗೆ ಮನೆಗೆ ತೆರಳಿದಳು.


ಮಗಳನ್ನು ಹೆಗಲ ಮೇಲೆ ಹೊತ್ತು

ಹದಿನಾರು ‌ಮೈಲಿ ದೂರ ನಡೆದು ಸುಸ್ತಾದ ಜಗನ್ನಾಥ ಊಟದ ನಂತರ ನೆಲಕ್ಕೆ ತಲೆ ಇಟ್ಟ ತಕ್ಷಣ ಗೊರಕೆ ಹೊಡೆಯಲು ಶುರು ಮಾಡಿದ, ಪುಟ್ಟಮ್ಮ ಅರ್ಧ ಗಂಟೆಗೊಮ್ಮೆ ಮಗಳ ಹಣೆ ಮೇಲೆ ಕೈ ಇಟ್ಟು ನೋಡಿದರು ಜ್ವರ ಕಡಿಮೆಯಾದ ಲಕ್ಷಣಗಳು ಕಾಣಲಿಲ್ಲ, ಮತ್ತೆ ರಾತ್ರಿ ಹನ್ನೆರಡರ ಸಮಯದಲ್ಲಿ ,ಮನೆಯ ಹೊರಬಂದು ಚೌಡೇಶ್ವರಿ ದೇವಿ ಗುಡಿಯ ಕಡೆ ನಿಂತು ಮನದಲ್ಲಿ ಬೇಡಿಕೊಂಡು ಮಗಳ ಪಕ್ಕದಲ್ಲೇ ಮಲಗಿದಳು, ನಿದ್ದೆ ಯಾವಾಗ ಬಂತೋ ಗೊತ್ತಾಗಲಿಲ್ಲ.


ಬೆಳಿಗ್ಗೆ ಆರು ಗಂಟೆಗೆ "ಅಮ್ಮ.. ಅಪ್ಪ... ಬೆಳಗಾಯ್ತು ಎದ್ದೇಳಿ" ಎಂದು ಮಗಳು ಕೂಗಿದಾಗ ಎದ್ದ ಪುಟ್ಟಮ್ಮ ಮೊದಲು ಮಗಳ ಹಣೆ ಮೇಲೆ ಕೈ ಇಟ್ಟು ನೋಡಿದಳು ಜ್ವರ ಇರಲಿಲ್ಲ... ಮಗಳ ಮುಖ ಗೆಲುವಾಗಿತ್ತು....



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು








ಸಿಂಹ ಧ್ವನಿ ಕಥೆ ೨/೬/೨೧