This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
03 ಜೂನ್ 2021
02 ಜೂನ್ 2021
ಮಹಿಮೆ ,ಕಥೆ
ಮಹಿಮೆ
ಕಥೆ
ಮಗಳು ಮಲಗಿದ್ದಳು
ಬೆಳಿಗ್ಗೆ ಎಂಟು ಗಂಟೆಯಾದರೂ ಎದ್ದಿರಲಿಲ್ಲ, ಸಾಮಾನ್ಯ ದಿನಗಳಲ್ಲಿ ಆರು,ಆರೂವರೆಗೆ ಎದ್ದು ಅಮ್ಮನ ಮಾತು ದಿಕ್ಕರಿಸಿ, ಅಮ್ಮನಿಗೆ ಮನೆ ಅಂಗಳ ಗುಡಿಸಲು, ಮನೆ ಮುಂದೆ ನೀರು ಹಾಕಲು ಸಹಾಯ ಮಾಡುತ್ತಿದ್ದಳು ಗೌರಿ .
"ಈ ವರ್ಷ ಏಳನೇ ಕ್ಲಾಸ್ ಪಾಸಾಗಿದಿಯಾ, ಇನ್ನು ಎಂಟನೇ ಕ್ಲಾಸ್, ಸ್ಕೂಲ್ ಇನ್ನೂ ಓಪನ್ ಆಗಿಲ್ಲ, ಪಕ್ಕದ್ ಮನೆ ರಾಧಾ ಕೊಟ್ಟ ಹಳೇ ಬುಕ್ ತೊಗೊಂಡ್ ಓದು ಹೋಗು" ಎಂದು ಗದರಿದರೂ ,
" ಓದ್ತಿನಿ ಇರಮ್ಮ ಹಗಲೊತ್ತು ಪೂರ್ತಿ ಟೈಮ್ ಇರುತ್ತೆ, ನೀನು ಪಾಪ ದಿನ ಪೂರ್ತಿ ಕೆಲಸ ಮಾಡಿ ಸುಸ್ತು ಆಗ್ತೀಯಾ ಅದಕ್ಕೆ ನಿನಗೆ ಸ್ವಲ್ಪ ಹೆಲ್ಪ್ ಮಾಡಿದೆ ಅಷ್ಟೇ " ಎಂದ ಮಗಳ ಮಾತ ಕೇಳಿ ತಾಯಿ ಒಳಗೊಳಗೆ ಖುಷಿ ಪಡುತ್ತಿದ್ದಳು.
ಅಂದೇಕೋ ಎಂಟಾದರೂ ಏಳದ ಮಗಳ ನೋಡಿ , ರಾತ್ರಿಯೆಲ್ಲಾ ತೋಟಕ್ಕೆ ನೀರು ಹಾಯಿಸಲು ಹೋದ ತಂದೆ , ಬೆಡ್ ಶೀಟ್ ತೆಗೆದು ಏಳಮ್ಮ ಚಿನ್ನು. ಎಂದು ಹಣೆ ಮೇಲೆ ಕೈಇಟ್ಟ, ಕಾದ ಕಾವಲಿಯಂತಾಗಿತ್ತು ಹಣೆ, ಗಾಬರಿಯಿಂದ ,ಏ ಇವಳೆ ಬಾರೆ ಇಲ್ಲಿ, ಚಿನ್ನುಗೇನೆ ಇಂಗೆ ಜ್ವರ ಬಂದಿದೆ? ನೋಡೋದಲ್ವ? ಬರೀ ನಿನಗೆ ಕಸ ಹೊಡೆಯೋದು, ನೆಲ ಗುಡಿಸೋದೆ ಕೆಲಸ"ಎಂದು ಸಿಟ್ಟಿನಿಂದ ಆತಂಕದಿಂದ ನುಡಿದ ಜಗನ್ನಾಥ.
ಪೊರಕೆ ಬಿಸಾಕಿ ಓಡಿ ಬಂದ ತಾಯಿ ಮಗಳ ತಬ್ಬಿ ಅಯ್ಯೋ ಏನಮ್ಮ ಇದು ಮೈಯಿ ಕಾದ ಅಂಚಿನಂಗೈತೆ , ನಾನು ನೊಡ್ಲೇ ಇಲ್ಲ" ಎಂದು ಅಳುತ್ತಾ ಮಗಳ ತಬ್ಬಿಕುಳಿತಳು.
" ಅಳಬ್ಯಾಡ ಸುಮ್ನಿರು, ಆಸ್ಪತ್ರೆಗೆ ಕರ್ಕೊಂಡು ಹೋಗ್ತೀನಿ ಎಲ್ಲಾ ಸರಿಹೋಗುತ್ತೆ" ಸಮಾಧಾನ ಹೇಳಿದ ಜಗನ್ನಾಥ .
ಎಂಟು ಮೈಲಿ ದೂರದಲ್ಲಿರುವ ಆಸ್ಪತ್ರೆಗೆ ಹೋಗಲು ಬಸ್ ಇರಲಿಲ್ಲ, ಪಕ್ಕದ ಬೀದಿಯ ದಾದು ಮನೆಗೆ ಹೋಗಿ , ಮಗಳ ಅನಾರೋಗ್ಯದ ಕಾರಣ ತಿಳಿಸಿ ಆಸ್ಪತ್ರೆಗೆ ಬರಲು ಕೇಳಿದ ಜಗನ್ನಾಥ,
" ಅಣ್ಣ ಈಗ ಟೈಟ್ ಲಾಕ್ಡೌನ್ ಐತೆ, ನಿನ್ನೆ ಇಂಗೆ ಹೋಗಿ ಪೋಲೀಸ್ ನವರ ಲಾಟಿ ಏಟು ತಿಂದು ,ಹಿಂಭಾಗದಲ್ಲಿ ನೀಲಿ ಬರೆ ಬಂದಿದೆ ನೋಡು "ಎಂದು ಬರ್ಮುಡ ಸರಿಸಿ ತೋರಿಸಿದ,
ಬೇಸರದಿಂದ ಎದ್ದ ಜಗನ್ನಾಥ ದಾದು ಮನೆಯಿಂದ ಹೊರ ನಡೆದ , ಅಕ್ಕ ಪಕ್ಕದ ಮನೆಯವರ ಬೈಕ್ ನಲ್ಲಿ ತನ್ನ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪ್ರಯತ್ನ ಪಟ್ಟ ಯಾರೂ ಒಪ್ಪದಿದ್ದಾಗ ಮಗಳ ತಲೆಯ ಮೇಲೆ ಒಂದು ಟವಲ್ ಹಾಕಿ , ತನ್ನ ಹೆಗಲ ಮೇಲೆ ಕೂರಿಸಿಕೊಂಡು ಎಂಟು ಮೈಲಿ ದೂರದಲ್ಲಿರುವ ಆಸ್ಪತ್ರೆಗೆ ನಡೆಯಲು ಶುರುಮಾಡಿದ , ಬಾಯಾರಿಕೆ ಯಾದಾಗ ಅಲ್ಲೇ ರಸ್ತೆಯ ಪಕ್ಕದಲ್ಲಿ ಇರುವ ಬೋರ್ ವೆಲ್ ನೀರು ಕುಡಿದು ಮತ್ತೆ ನಡೆಯಲು ಶುರುಮಾಡಿದ , ಅಂತೂ ಆಸ್ಪತ್ರೆ ತಲುಪಿದ ಅಲ್ಲಿ ಜನಜಾತ್ರೆ ,ಮಗಳು ಸುಸ್ತಾದಂತೆ ಕಂಡಳು , ಬೆಳಿಗ್ಗೆಯಿಂದ ಇಬ್ಬರೂ ಏನೂ ತಿಂದಿಲ್ಲದಿರುವುದು ನೆನಪಾಯಿತು, ಅಲ್ಲೇ ಹತ್ತಿರವಿರುವ ಅಂಗಡಿಯಲ್ಲಿ ಒಂದು ಬಿಸ್ಕತ್ತಿನ ಪೊಟ್ಟಣ ತಂದು ತಿನ್ನಿಸಿದನು,
" ರಾತ್ರಿಯಿಂದ ಜ್ವರ ಸ್ವಾಮಿ, ನೋಡಿ ಮೈ ಸುಟ್ ಹೋಗ್ತೈತೆ, ಒಂದ್ ಬಾಟ್ಲಿ ಹಾಕಿ ,ಎರಡು ಇಂಜೆಕ್ಷನ್ ಹಾಕಿ ಸ್ವಾಮಿ " ಒಂದೇ ಸಮನೆ ಹೇಳಿದ ಭಯಗೊಂಡ ತಂದೆ
" ಇಲ್ಲಿ ಡಾಕ್ಟರ್ ನಾನೋ ,ನೀನೋ"
"ನೀವೇನೆ ಸಾ, ಹೋದ್ ಸಲ ನನಗಿ ಜ್ವರ ಬಂದಾಗ ನೀವು ಬಾಟ್ಲಿ ಹಾಕಿದ್ರಿ ಅದಕ್ಕೆ ಅಂಗಂದೆ ಸ್ವಾಮಿ"
" ಈಗ ಕೋವಿಡ್ ಇದೆ ,ಯಾರಿಗೂ ಬಾಟ್ಲಿ ಹಾಕಲ್ಲ, ಇಂಜೆಕ್ಷನ್ ಮಾಡಿ ,ಮಾತ್ರೆ ಕೊಡ್ತೀನಿ ಮೂರ್ ದಿನ ಬಿಟ್ ಬನ್ನಿ" ಎಂದರು ಡಾಕ್ಟರ್.
ಮಗಳನ್ನು ಹೆಗಲಮೇಲೆ ಹೊತ್ತು ಮನೆಗೆ ಹಿಂತಿರುಗುವಾಗ ದಾರಿಯುದ್ದಕ್ಕೂ ಮಗಳ ಮೈ ಮುಟ್ಟಿ ನೋಡಿ ಜ್ವರ ಕಡಿಮೆಯಾಗದಿದ್ದನ್ನು ಅರಿತು ,ಡಾಕ್ಟರ್ ನನ್ನ ಬೈಯಲು ಶುರುಮಾಡಿದರು. ಊರು ಹತ್ತಿರವಾದಂತೆ ಸೂರ್ಯದೇವ ಗುಡ್ಡಗಳ ಮರೆಯಲ್ಲಿ ಅವಿತುಕೊಳ್ಳಲು ಹವಣಿಸುತ್ತಿದ್ದ, ದೂರದ ದಾರಿ ನಡೆದಿದ್ದರೂ ಮಗಳು ಕತ್ತಲಾದರೆ ಹೆದರಬಹುದೆಂದು ದೊಡ್ಡ ಹೆಜ್ಜೆ ಹಾಕಿ ನಡೆದ ಅಂತೂ ಕತ್ತಲಾಗುವುದರೊಳಗೆ ಮನೆ ಮುಂದೆ ಬಂದು ನಿಂತ.
ತಲೆಬಾಗಿಲಿನಲ್ಲೆ ಕಾಯುತ್ತಿದ್ದ ತಾಯಿಹೃದಯ ಮಗಳ ತಬ್ಬಿಕೊಂಡು ಇನ್ನೂ ಮೈ ಬಿಸಿಇರುವುದನ್ನು ಕಂಡು ಅಳುತ್ತಾ, ಇದೇನಿದು ಇವಳಿಗೆ ಜ್ವರ ಸ್ವಲ್ಪನೂ ಕಮ್ಮಿ ಆಗಿಲ್ಲ ಎಂಗೆ ತೋರಿಸಿದಿರಿ ನೀವು" ಎಂದು ಕೇಳಿದಳು ಪುಟ್ಟಮ್ಮ.
ಮನೆಯ ಪಡಸಾಲೆಯಲ್ಲಿ ಚಾಪೆಯ ಮೇಲೆ ಮಗಳ ಮಲಗಿಸಿ ಆಗ ತಾನೆ ಕಾಸಿದ್ದ ಗಂಜಿ ತಂದು ಕುಡಿಸಿದಳು ,ತಕ್ಷಣ ಏನೋ ಹೊಳೆದವಳಂತೆ ಕೈಕಾಲು ಮುಖ ತೊಳೆದುಕೊಂಡು, ನೀವು ಇಲ್ಲೆ ಮಗುನ ನೋಡ್ಕೊಂಡ್ ಇರ್ರಿ ನಾನು ಬರ್ತಿನಿ ಎಂದು ಹೊರಟೇ ಬಿಟ್ಟಳು, ಜಗನ್ನಾಥ ಎಲ್ಲಿಗೆ ಎಂದು ಕೇಳಲಿಲ್ಲ.
" ನೀನ್ ಇಂಗ್ ಮಾಡಿದರೆ ಎಂಗವ್ವ? ನಾನ್ ಏನ್ ಕಮ್ಮಿ ಮಾಡಿದಿನಿ ನಿನಿಗೆ, ವಾರ ವಾರ. ಮಂಗಳವಾರ, ಶುಕ್ರವಾರ ,ಪೂಜೆ ಮಾಡ್ತಾ ಇದಿನಿ, ವರ್ಷಕೊಂದ್ ಕೋಳಿ ಕೊಯ್ದು ಜಾತ್ರೆ ಮಾಡಿದಿವಿ ,ಇನ್ನೇನು ಬೇಕು ನಿನಿಗೆ, ನನ್ ಮಗ ಚೆನ್ನಾಗಿ ಆಗ್ಬೇಕು ಅಷ್ಟೇ, ಅವಳು ಬೇಗ ಗುಣ ಆಗ್ತಾಳೆ ಅಂದ್ರೆ ಬಲಕ್ಕೆ ಪ್ರಸಾದ ಕೊಡು , ಲೇಟ್ ಆಗುತ್ತೆ ಕಷ್ಟ ಆಗುತ್ತೆ ಅನ್ನಂಗಿದ್ರೆ ಎಡಕ್ಕೆ ಕೊಡು" ಎಂದು ಮೂರು ಬಾರಿ ಅಡ್ಡ ಬಿದ್ದು ಗ್ರಾಮದೇವತೆ ಚೌಡೇಶ್ವರಿ ಯನ್ನು ಕೇಳಿದಳು ಪುಟ್ಟಮ್ಮ.
ಅಮ್ಮನ ನೆತ್ತಿಯ ಮೇಲಿನಿಂದ ಬಲಬಾಗಲ್ಲಿ ಹೂ ಕೆಳಗೆ ಬಿದ್ದಿತು,
ನನ್ ತಾಯಿ ನೀನ್ ನಮ್ ಕೈ ಬಿಡಲ್ಲ ಅಂತ ಗೊತ್ತು ಕಣವ್ವ ಎಂದು ಮತ್ತೆ ಅಡ್ಡ ಬಿದ್ದು, ಪೂಜಾರಪ್ಪನಿಂದ ಭಂಡಾರ ಪಡೆದು ಸೀರೆ ಸೆರಗಿನ ತುದಿಗೆ ಗಂಟುಹಾಕಿಕೊಂಡು ಮನೆಗೆ ಬಂದು ಭಂಡಾರ ಮಗಳ ಹಣೆಗೆ ಇಟ್ಟಾಗ ಜಗನ್ನಾಥನಿಗೆ ಇವಳು ದೇವಾಲಯಕ್ಕೆ ಹೋಗಿದ್ದು ತಿಳಿಯಿತು.
" ಇನ್ನೇನು ತೊಂದ್ರೆ ಇಲ್ಲ ಅಮ್ಮ ,ಎಲ್ಲಾ ಒಪ್ಕೊಂಡೈತೆ ಬೇಗ ವಾಸಿಯಾಗುತ್ತೆ" ಎಂದು ಗಂಡ ಮತ್ತು ಮಗಳಿಗೆ ಧೈರ್ಯ ಹೇಳಿ ಅಡುಗೆ ಮನೆಗೆ ತೆರಳಿದಳು.
ಮಗಳನ್ನು ಹೆಗಲ ಮೇಲೆ ಹೊತ್ತು
ಹದಿನಾರು ಮೈಲಿ ದೂರ ನಡೆದು ಸುಸ್ತಾದ ಜಗನ್ನಾಥ ಊಟದ ನಂತರ ನೆಲಕ್ಕೆ ತಲೆ ಇಟ್ಟ ತಕ್ಷಣ ಗೊರಕೆ ಹೊಡೆಯಲು ಶುರು ಮಾಡಿದ, ಪುಟ್ಟಮ್ಮ ಅರ್ಧ ಗಂಟೆಗೊಮ್ಮೆ ಮಗಳ ಹಣೆ ಮೇಲೆ ಕೈ ಇಟ್ಟು ನೋಡಿದರು ಜ್ವರ ಕಡಿಮೆಯಾದ ಲಕ್ಷಣಗಳು ಕಾಣಲಿಲ್ಲ, ಮತ್ತೆ ರಾತ್ರಿ ಹನ್ನೆರಡರ ಸಮಯದಲ್ಲಿ ,ಮನೆಯ ಹೊರಬಂದು ಚೌಡೇಶ್ವರಿ ದೇವಿ ಗುಡಿಯ ಕಡೆ ನಿಂತು ಮನದಲ್ಲಿ ಬೇಡಿಕೊಂಡು ಮಗಳ ಪಕ್ಕದಲ್ಲೇ ಮಲಗಿದಳು, ನಿದ್ದೆ ಯಾವಾಗ ಬಂತೋ ಗೊತ್ತಾಗಲಿಲ್ಲ.
ಬೆಳಿಗ್ಗೆ ಆರು ಗಂಟೆಗೆ "ಅಮ್ಮ.. ಅಪ್ಪ... ಬೆಳಗಾಯ್ತು ಎದ್ದೇಳಿ" ಎಂದು ಮಗಳು ಕೂಗಿದಾಗ ಎದ್ದ ಪುಟ್ಟಮ್ಮ ಮೊದಲು ಮಗಳ ಹಣೆ ಮೇಲೆ ಕೈ ಇಟ್ಟು ನೋಡಿದಳು ಜ್ವರ ಇರಲಿಲ್ಲ... ಮಗಳ ಮುಖ ಗೆಲುವಾಗಿತ್ತು....
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
ಪತ್ಯಾಹಾರ .ಕಾದಂಬರಿ ವಿಮರ್ಶೆ
ಪ್ರತ್ಯಾಹಾರ
ಕಾದಂಬರಿಯ ವಿಮರ್ಶೆ
ಈಗಾಗಲೇ ಭಾರತದ ಸಾರಸ್ವತ ಲೋಕಕ್ಕೆ ಎಂಟು ಕಾದಂಬರಿ ಮತ್ತು ಕವನ ಸಂಕಲನಗಳನ್ನು ನೀಡಿರುವ , ಕವಿ, ಕಾದಂಬರಿಕಾರರಾದ ಶ್ರೀ ವಿದ್ಯಾಧರ ದುರ್ಗೇಕರ್ ರವರು, ನನಗೆ ತಿಳಿದ ಮಟ್ಟಿಗೆ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಕಾದಂಬರಿ ಬರೆವ ಏಕೈಕ ಕಾದಂಬರಿ ಕಾರರು ಎನಿಸುತ್ತದೆ.
ಶ್ರೀಯುತರ ಮೊದಲ ಕಾದಂಬರಿ "ಜೀವಾತ್ಮಗಳ ವಿಕ್ರಯ" ಓದಿದ್ದ ನನಗೆ ಅವರ ಮುಂದಿನ ಕಾದಂಬರಿಯ ಪ್ರಕಟಣೆಯನ್ನು ಉತ್ಸುಕತೆಯಿಂದ ನಿರೀಕ್ಷೆ ಮಾಡಿದ್ದೆ ನನ್ನ ನಿರೀಕ್ಷೆ ಸುಳ್ಳಾಗಲಿಲ್ಲ, ಅವರ "ಪ್ರತ್ಯಾಹಾರ" ಕಾದಂಬರಿ ಪ್ರಕಟವಾದ ಸುದ್ದಿ ತಿಳಿದು ಅಮೆಜಾನ್ ನಲ್ಲಿ ಖರೀದಿ ಮಾಡಿ ಓದಿದೆ.
ಮೊದಲ ಕಾದಂಬರಿಯಲ್ಲಿ ಸಾಮಾಜಿಕ ಸಂದೇಶದ ಜೊತೆ ಒಂದು ಪ್ರೇಮ ಕಥೆ ಹೇಳಿದ್ದ ಕಾದಂಬರಿಕಾರರು ಈ ಬಾರಿ ಔಟ್ ಅಂಡ್ ಔಟ್ ಪ್ರೇಮ ಕಥೆ ನೀಡಿ ಓದುಗರ ಮನ ಗೆದ್ದಿದ್ದಾರೆ ,ಅದರಲ್ಲೂ ಯುವಜನಾಂಗ ಈ ಪುಸ್ತಕವನ್ನು ಬಹಳ ಇಷ್ಟ ಪಡುವರು.
ಕೆರೆಯಲ್ಲಿ ಮುಳುಗುತ್ತಿರುವ ಸಾಂಡಿ, ಅಲಿಯಾಸ್ ಸಂದೇಶ್ ಮತ್ತು ಕಾವ್ಯ ರನ್ನು ರಕ್ಷಣಾ ಪಡೆಗಳು ರಕ್ಷಣೆ ಮಾಡುವ ಮನೋಹರ ವರ್ಣನೆಯಿಂದ ಆರಂಭವಾಗುವ ಕಾದಂಬರಿಯ ಮೊದಲ ಪುಟವು ಓದುಗರ ಸೆಳೆದು ಒಂದೇ ಗುಕ್ಕಿನಲ್ಲಿ ಓದುವಂತೆ ಮಾಡುತ್ತದೆ.
ಅಲ್ಲಲ್ಲಿ ಬರುವ ಅನಿರೀಕ್ಷಿತ ತಿರುವುಗಳು ನಾಯಕ ನಾಯಕಿಯರ ಮನದ ತುಮುಲಗಳನ್ನು ಬಹಳ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ ಕಾದಂಬರಿಕಾರರು,
ಇಂಜಿನಿಯರಿಂಗ್ ಓದುವ ಸ್ಯಾಂಡಿಗೆ ಕಾವ್ಯ ಳ ಮೇಲೆ ಪ್ರೀತಿ, ಡಾಕ್ಟರ್ ಓದುವ ರಶ್ಮಿ ಗೆ ಬಾಲ್ಯದಿಂದಲೂ ಸ್ಯಾಂಡಿ ಮೇಲೆ ಪ್ರೀತಿ, ಈ
ಏಳು ಬೀಳಿನ ಪ್ರೇಮ ಕಥೆಯಲ್ಲಿ ಸಾಂಡಿಗೆ ಕಾವ್ಯ ಸಿಗುವಳೆ ? ಅಥವಾ ರಶ್ಮಿಗೆ ಸ್ಯಾಂಡಿ ಸಿಗುವನೆ ಎಂಬುದನ್ನು ಕಾದಂಬರಿಯ ಓದಿಯೇ ಸವಿಯಬೇಕು .
ಕಾದಂಬರಿಯಲ್ಲಿ ಅಲ್ಲಲ್ಲಿ ಬರುವ ಕೆಲ ಸಾಲುಗಳು ನಮ್ಮನ್ನು ಚಿಂತನೆಗೆ ಹಚ್ಚುವ ಗುಣ ಹೊಂದಿವೆ ,ಅದು ಒತ್ತಡ ನಿವಾರಿಸಲು, ಯೋಗ ಧ್ಯಾನ, ಪ್ರಾಣಾಯಾಮ ಮಾಡಬೇಕು ಎಂಬ ಸಾಲುಗಳಿರಬಹುದು,
ಶಿಕ್ಷಕರು ಮಕ್ಕಳಿಗೆ ಬೋಧಿಸುವಾಗ ಮೊದಲು ಅವರು ವಿದ್ಯಾರ್ಥಿಗಳಂತೆ ಸದಾ ಕಲಿಯುತ್ತಿರಬೇಕು, ಎಂಬ ಮಾತುಗಳಿರಬಹು.
ಕಾದಂಬರಿಯಲ್ಲಿ ನಮ್ಮನ್ನು ಇಟಲಿಗೆ ಕರೆದುಕೊಂಡು ಹೋಗುವ ಕಾದಂಬರಿಕಾರರು ಅಲ್ಲಿನ ನಗರಗಳ ಸೌಂದರ್ಯ, ಕಲೆ ವಾಸ್ತುಶಿಲ್ಪ, ಮ್ಯೂಸಿಯಂ ಗಳು, ವಿಶ್ವ ವಿದ್ಯಾಲಯ ಗಳ ಬಗ್ಗೆ ಕಣ್ಣಿಗೆ ಕಟ್ಟುವಂತೆ ಚಿತ್ರಣ ನೀಡಿರುವರು.
ಕಾದಂಬರಿಯು ಮೊದಲು ಆಂಗ್ಲದಲ್ಲಿ ನಂತರ ಕನ್ನಡದಲ್ಲಿ ಬರೆದಿರುವುದರಿಂದ ಕೆಲವೆಡೆ ಕನ್ನಡ ಸಾಲುಗಳ ನಿರಂತರತೆಯ ಕೊರತೆಯಾದಂತೆ ಕಂಡು ಬಂತು ,ಉಳಿದಂತೆ ಕಾದಂಬರಿಯು ಓದಿಸಿಕೊಂಡು ಹೋಗುತ್ತದೆ , ಕಾದಂಬರಿಯ ಕೊನೆಯ ಪ್ಯಾರಾವನ್ನು ಓದುವಾಗ ಅನಿರೀಕ್ಷಿತವಾದ ಮುಕ್ತಾಯದೊಂದಿಗೆ ಒಂದು ಉತ್ಕೃಷ್ಟ ಕನ್ನಡ ಕಾದಂಬರಿ ಓದಿದ ತೃಪ್ತಿ ನಮ್ಮದಾಗಲಿದೆ ನೀವೂ ಒಮ್ಮೆ ಓದಿ ...
ಕಾದಂಬರಿ: ಪ್ರತ್ಯಾಹಾರ
ಕಾದಂಬರಿ ಕಾರರು: ವಿದ್ಯಾಧರ ದುರ್ಗೇಕರ್
ಪ್ರಕಾಶನ : H S R A ಪ್ರಕಾಶನ ಬೆಂಗಳೂರು
ಬೆಲೆ: 200₹
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
01 ಜೂನ್ 2021
ಸೈಕಲ್ ಪುರಾಣ ಕಥೆ
ಅದೂ ದೊಡ್ಡದೂ ಅಲ್ಲದ ಅತೀ ಚಿಕ್ಕದೂ ಅಲ್ಲದ ಸೈಕಲ್ , ಸತೀಶ ಸೈಕಲ್ ತುಳಿಯುವುದನ್ನು ಕಲಿಯಲು ಆರಂಭ ಮಾಡಿ ಒಂದು ವಾರವಾಗಿತ್ತು , ಅಮ್ಮನ ಕಾಡಿ ಬೇಡಿ ದಿನಕ್ಕೆ ಐವತ್ತು ಪೈಸೆ ಪಡೆದು ಹುಸೇನ್ ಸಾಬ್ ಬಾಡಿಗೆ ಸೈಕಲ್ ಶಾಪ್ ಬಳಿ ದಿನವೂ ಒಂದು ಗಂಟೆ ಸೈಕಲ್ ತುಳಿಯುವ ಅಭ್ಯಾಸ ಮಾಡುತ್ತಿದ್ದ, ಮೊದಲು ಊರ ಹೊರಗೆ ಯಾರೂ ಇಲ್ಲದ ರಸ್ತೆಯಲ್ಲಿ ಅಭ್ಯಾಸ ಮಾಡಲು ಹೊರಟ, ಕ್ರಮೇಣವಾಗಿ ಆತ್ಮವಿಶ್ವಾಸ ಬಂದು ಜನ ಕಡಿಮೆ ಇರುವ ಬೀದಿಗಳಲ್ಲಿ ಸೈಕಲ್ ತುಳಿಯುವ ಧೈರ್ಯ ಬಂದಿತ್ತು . ಜೊತೆಗೆ ಯಾವುದೋ ಹಳೆಯ ಹಾಡನ್ನು ಗುನುಗುತ್ತಾ ಸೈಕಲ್ ತುಳಿಯುವಾಗಲೇ ಸೋಮ
" ನಾನು ಬರುವೆ ಕಣೋ ಸೈಕಲ್ ಹತ್ತುವೆ"
ಎಂದಾಗ ಧೈರ್ಯ ಮಾಡಿ ಸೈಕಲ್ ನ ಕ್ಯಾರಿಯರ್ ಮೇಲೆ ಕೂರಿಸಿಕೊಂಡು ,ಇನ್ನೂ ಆತ್ಮವಿಶ್ವಾಸದೊಂದಿಗೆ ಮತ್ತೂ ಜೋರಾಗಿ ಹಾಡು ಹಾಡುತ್ತಾ ವೇಗವಾಗಿ ಸೈಕಲ್ ತುಳಿದ.
ಸತೀಶನಿಗಿಂತ ನಾಲ್ಕು ವರ್ಷ ಕಿರಿಯ ಸೋಮ ಸತೀಶನಿಗಿಂತ ಖುಷಿಯಾಗಿ ತಾನೆ ಸೈಕಲ್ ತುಳಿದವನಂತೆ ಸಂಭ್ರಮಿಸಿ ಕೇಕೇ ಹಾಕಿದ್ದ,
"ಅಣ್ಣ... ಇನ್ನೂ.. ಜೋರು ... ತುಳಿ....ತುಳಿ.... ಜೋರು ಹೋಗಲಿ..." ಎಂದದ್ದು ಸತೀಶನಿಗೆ ಸ್ಪೂರ್ತಿಯಾಗಿ ಅತೀ ವೇಗವಾಗಿ ಬೀದಿಗಳಲ್ಲಿ ಸೈಕಲ್ ಓಡಿಸಿದ ,
ಆಗಲೇ ಆಗಬಾರದ್ದು ಆಗಿದ್ದು,
ನ್ಯಾಯಬೆಲೆ ಅಂಗಡಿಯ ಮರಿದಾಸಪ್ಪನ ಮೂರು ವರ್ಷದ ಮಗಳು ಆಡುತ್ತಾ ರಸ್ತೆಯ ಮಧ್ಯ ಭಾಗಕ್ಕೆ ಬಂದುಬಿಟ್ಟಿದ್ದಳು, ಸತೀಶನಿಗೆ ಗಾಬರಿಯಾಗಿ ಬ್ರೇಕ್ ಹಾಕುವುದನ್ನು ಮರೆತಿದ್ದ, ಜೋರಾಗಿ ಬಂದು ಸೈಕಲ್ ಆ ಹುಡುಗಿಗೆ ಗುದ್ದಿ ,ಅವಳ ತಲೆಯಲ್ಲಿ ರಕ್ತ ಸುರಿಯಲಾರಂಭಿಸಿತು , ಸೈಕಲ್ ಅಲ್ಲೇ ಬಿಟ್ಟ ಸತೀಶ ಮತ್ತು ಸೋಮ ಪೇರಿ ಕಿತ್ತರು . ಸತೀಶ
ಸೈಕಲ್ ಬಾಡಿಗೆ ಹಣವನ್ನು ನೀಡದೇ ಮನೆಗೆ ಓಡಿದ.
ಎರಡು ಗಂಟೆಯಾದರೂ ಬಾಡಿಗೆ ಸೈಕಲ್ ತೆಗೆದುಕೊಂಡು ಹೋದ ಹುಡುಗ ಬಾರದಿದ್ದು ಕಂಡ ಸೈಕಲ್ ಶಾಪ್ ಮಾಲಿಕ ಹೊರಗೆ ಬಂದಾಗ " ನಿಮ್ ಸೈಕಲ್ ನಲ್ಲಿ ಯಾರೋ ಹುಡುಗ ಆಕ್ಸಿಡೆಂಟ್ ಮಾಡಿದಾನಂತೆ" ಎಂದಾಗ ಸ್ಥಳಕ್ಕೆ ಓಡಿಹೋದವನಿಗೆ ಮರಿದಾಸಪ್ಪನ ಉಗ್ರಾವತಾರ ದರ್ಶನಾವಾಯಿತು " ಏ ಸಾಬಿ ಸೈಕಲ್ ಬರದಿರೋ ಹುಡುಗ್ರಿಗೆಲ್ಲ ಸೈಕಲ್ ಕೊಡ್ತಿಯಾ? ನೋಡು ಇಲ್ಲಿ ನಮ್ಮ ಮಗು ತಲೇಲಿ ತೂತು ಆಗಿ ರಕ್ತ ಬರ್ತಾ ಇದೆ, ಏ ಆ ಸೈಕಲ್ ಒಳಗಾಕು, ಆಸ್ಪತ್ರೆಗೆ ಹೋಗಿ ಬತ್ತೀನಿ ,ಬರ್ತಾ ಅಂಗೇ ಹೊರಕೇದೇಪುರದ್ ಸ್ಟೇಶನ್ ನಲ್ಲಿ ಕಂಪ್ಲೇಂಟ್ ಕೊಟ್ ಬತ್ತೀನಿ" ರೇಗಾಡಿದರು.
" ಇಲ್ಲ ಅಣ್ಣ... ಆ ಹುಡ್ಗುಂಗೆ ಊರ್ ಒಳ್ಗೆ ಬರ್ಬ್ಯಾಡ , ನಿಂಮ್ದೂಕಿ ಸರಿಯಾಗಿ ಇನ್ನೂ ಸೈಕಲ್ ತುಳಿಯಾಕ್ ಬರಲ್ಲ ಅಂತ , ಅದು ನಿಮ್ದು ಮನೆ ಹತ್ರ ಬಂದು ಇಂಗ್ ಮಾಡಿದೆ ,ಇದ್ರಲ್ಲಿ ನಂದು ತಪ್ಪು ಇಲ್ಲ ಮಾಪ್ ಕರೋ ಅಣ್ಣ " ಎಂದನು ಹುಸೇನ್ ಸಾಬ್
" ನೀನು ಇಲ್ಲೇ ಇದ್ದರೆ ಏಟು ನಿನಗೆ ಬೀಳ್ತಾವೆ " ಗದರಿದರು ಮರಿದಾಸಪ್ಪ.
ಅವರ ಕೋಪ ಕಂಡ ಸಾಹೇಬರು ಸತೀಶನ ಮನೆ ಕಡೆ ಹೊರಟರು.